ಶುಕ್ರವಾರ ೫ ಫೆಬ್ರವರೀ ೨೦೧೦

ಅಭಾವದಿಂದ ಅನುವಾದಗಳವರೆಗೆ....

ಒಂದು ಭಾಷೆಯಲ್ಲಿ, ಒಂದು ನಿರ್ದಿಷ್ಟ ಅವಧಿಯಲ್ಲಿ ಪ್ರಕಟವಾಗುವ ಕೃತಿಗಳ ಅವಲೋಕನವು ಆ ಭಾಷೆಯ ಬರಹಗಾರರು ಆ ಅವಧಿಯಲ್ಲಿ ಕಂಡುಂಡ ಆ ಭಾಷೆಯ ಸಾಮಾಜಿಕ ಸಾಂಸ್ಕೃತಿಕ ಸಂಗತಿಗಳ ಅನಾವರಣವೂ ಆಗಿರುವುದರಿಂದ ಸಾಹಿತ್ಯ ಚರಿತ್ರೆಯ ದಾಖಲೆಯೆಂದೇ ಭಾವಿಸಬೇಕಾಗುತ್ತದೆ. ಆದರೂ ಕಾವೇರಿಯಿಂದ ಕೃಷ್ಣೆಯವರೆಗೂ ವ್ಯಾಪಿಸಿರುವ ಕನ್ನಡದ ಎಲ್ಲ ಕೃತಿಗಳೂ ಒಂದು ಅವಲೋಕನಕ್ಕೆ ಸಿಕ್ಕುವ ಸಾಧ್ಯತೆಗಳೂ ಕಡಿಮೆಯೇ. ಅದರಲ್ಲೂ ಪ್ರತಿವರ್ಷ ಪ್ರಕಟವಾಗುವ ಪುಸ್ತಕಗಳಲ್ಲಿ ಕಾವ್ಯಸಂಕಲನಗಳ ಸಂಖ್ಯೆಯೇ ಅಧಿಕವಿರುವುದು ಎಲ್ಲರೂ ಬಲ್ಲ ಸಂಗತಿ. ಈಗಾಗಲೇ ತಮ್ಮ ಕೃತಿಗಳಿಂದ ಪ್ರಸಿದ್ಧರಾಗಿರುವ ಲೇಖಕರಿಂದ ಹಿಡಿದು ಇನ್ನೂ ಈಗಷ್ಟೇ ಬರೆಯುವ ತುಡಿತಕ್ಕೆ ಸಿಕ್ಕ ಎಳೆಯರವರೆಗೂ ಕವನ ಸಂಕಲನಗಳ ಹರಹು ಇರುವುದರಿಂದ ಈ ಸಮೀಕ್ಷೆ ಪರಿಪೂರ್ಣವಾಗಿರುತ್ತದೆ ಎಂದೇನೂ ಭಾವಿಸಬೇಕಿಲ್ಲ. ಈ ಬರಹಗಾರ ತನ್ನಲ್ಲಿ ಲಭ್ಯವಿದ್ದ ಸಂಕಲನಗಳ ಆಧಾರದ ಮೇಲೆ ಈ ಸಮೀಕ್ಷೆ ನಡೆಸಿದ್ದಾನೆ.
೨೦೦೯ರಲ್ಲಿ ಇಬ್ಬರು ಹಿರಿಯರು ಕಂಬಾರ ಮತ್ತು ಅನಂತಮೂರ್ತಿಗಳ ಸಂಕಲನಗಳ ಜೊತೆಗೆ ಈಗಾಗಲೇ ಕಾವ್ಯ ಕೃಷಿಯಲ್ಲಿ ಹೆಸರು ಮಾಡಿರುವ ಕೆ.ಬಿ.ಸಿದ್ದಯ್ಯ, ಎಸ್.ಮಂಜುನಾಥ್, ಸವಿತಾ ನಾಗಭೂಷಣ ಮತ್ತು ಎಚ್.ಎಲ್.ಪುಷ್ಪ ಅವರ ಸಂಕಲನಗಳೊಟ್ಟಿಗೆ ಜ್ಯೋತಿ ಗುರುಪ್ರಸಾದ, ಸಂತೋಷ ಚೊಕ್ಕಾಡಿ, ಸ್ವಾಮಿನಾಥ, ಚಂ.ಸು.ಪಾಟೀಲ, ಆಲೂರು ದೊಡ್ಡನಿಂಗಪ್ಪ ಮತ್ತು ಎಚ್.ಆರ್.ರಮೇಶರ ಸಂಕಲನಗಳೂ ಸ್ಪರ್ಧೆಗಿಳಿದಿವೆ. ಇವಲ್ಲದೇ ಇದೇ ಪ್ರಥಮ ಬಾರಿಗೆ ಸಂಕಲನ ಪ್ರಕಟಿಸಿರುವ ಕತೆಗಾರ್ತಿ ಸುನಂದಾ ಪ್ರಕಾಶ ಕಡಮೆ, ಸಂತೆಬೆನ್ನೂರು ಫೈಜ್ನಟ್ರಾಜ್, ಆರಿಫ್ ರಾಜ, ಕೆ.ಎಸ್.ಶ್ರೀನಿವಾಸ ಮೂರ್ತಿ, ಎಂ.ಎಸ್.ರುದ್ರೇಶ್ವರ ಸ್ವಾಮಿ, ಶ್ರೀದೇವಿ ಕೆರೆಮನೆ, ಛಾಯಾ ಭಗವತಿ, ಸಿದ್ದು ದೇವರಮನಿ, ಡಾ.ಸಿ.ರವೀಂದ್ರನಾಥ, ರಶ್ಮಿ ಹೆಗಡೆ ಕನ್ನಡ ಕಾವ್ಯ ಶ್ರೀಮಂತಿಕೆಗೆ ತಮ್ಮ ಛಾಪು ಸೇರಿಸಿದ್ದಾರೆ. ಇಷ್ಟಲ್ಲದೇ ರಿಲ್ಕೆ (ಅನಂತಮೂರ್ತಿ), ಪಾಬ್ಲೊ ನೆರೂದ (ಜ.ನಾ.ತೇಜಶ್ರೀ),ಕೈಫಿ ಆಜ್ಮಿ (ವಿಭಾ) ಮಿರ್ಜಾ ಗಾಲಿಬ್ (ಡಾ.ಎನ್.ಜಗದೀಶ್ ಕೊಪ್ಪ) ಕೂಡ ಕನ್ನಡಕ್ಕೆ ಬಂದಿದ್ದಾರೆ.
ಯು.ಆರ್.ಅನಂತಮೂರ್ತಿಗಳ ‘ಅಭಾವ’ ಕಾವ್ಯಾಸಕ್ತರನ್ನು ಖುಷಿಗೊಳಿಸುತ್ತದೆ. ವರ್ಷದ ಕಡೆಯಲ್ಲಿ ಚಂದ್ರಶೇಖರ ಕಂಬಾರರ ‘ಎಲ್ಲಿದೆ ಶಿವಾಪುರ’ ಪ್ರಕಟವಾಗಿದೆ. (೨೦೧೦ರ ಜನವರಿ ೨ರಂದು ವಿದ್ಯುಕ್ತ ಬಿಡುಗಡೆಯಾಗಿದೆ), ೨೦೦೨ರ ‘ಇಲ್ಲಿಯವರೆಗಿನ ಕವಿತೆಗಳು’ ನಂತರ ಇದೀಗ ಕೇವಲ ೧೮ ಕವಿತೆಗಳ ಸಂಕಲನ ‘ಅಭಾವ’ವನ್ನು ಪ್ರಕಟಿಸಿರುವ ಅನಂತಮೂರ್ತಿಗಳು ಅವರ ಗದ್ಯದಷ್ಟು ಸರಾಗವಾಗಿ ಓದುಗರನ್ನು ತೃಪ್ತಿಪಡಿಸಲಾರರಾದರೂ ಅವರು ಸೃಷ್ಟಿಸುವ ರೂಪಕಗಳಿಂದ ಪ್ರಿಯರಾಗುತ್ತಾರೆ. ‘ಉತ್ತುವ ಮನಸ್ಸಿಗೆ ಫಲವಾತ್ತಾಗುತ್ತ.’ ಎನ್ನುವ ಸಾಲುಗಳ ಮೂಲಕ ಬದುಕಿನ ಮಾಗುವಿಕೆಯ ಮತ್ತು ವಿನಯ ಹಾಗೂ ಮಾರ್ದವತೆಯ ಪ್ರತಿನಿಧಿಯಂತೆ ಕಾಣಿಸುತ್ತಾರೆ. ‘ಕಾವ್ಯದ ಆತ್ಮಾನುಸಂಧಾನ’ ಅನ್ನುವ ಪದ್ಯವಂತೂ ಅದರ ಶೀರ್ಷಿಕೆ ಸೂಚಿಸುವ ಹಾಗೇ ಅನುಭವವೊಂದು ಪದ್ಯವಾಗಿ ಬೆಳೆಯುವ ಮತ್ತು ಚಿರಕಾಲ ಮನಸ್ಸೊಳಗೆ ನಿಲ್ಲುವ ಸಂಗತಿಯಾಗಿ ‘ಕಷ್ಟ; ಸಂಕಲ್ಪ ಸಾಲದು; ಅದೃಷ್ಟ ಬೇಕು’ ಅನ್ನುವ ಕವಿಯ ಮಾತಿಗೆ ಓದುಗ ಸಂಭ್ರಮ ಪಡುತ್ತಲೇ ತನ್ನೊಳಗಿನ ಅನುಭವಗಳನ್ನು ನೆನೆಯುವಂತೆ ಮಾಡುತ್ತದೆ. ‘ಈ ನಮ್ಮ ಕಾಲದಲ್ಲಿ ಏನೇನು ಚಂದ?’ ತುಂಟತನವನ್ನೂ ಕವಿತೆಯಾಗಿಸಬಹುದೆನ್ನುವುದರ ಸೂಚನೆಯಾದರೆ, ‘ಸಾವಿನ ಸನ್ನೆ’ ಸಂಕಲನದ ಯಶಸ್ವಿ ಪದ್ಯಗಳಲ್ಲೊಂದು. ‘ಓದುತ್ತ ಹೋದುದನ್ನು ಓದುತ್ತಲೇ ಮರೆಯುತ್ತ/ ಮೈಮುರಿಯುತ್ತ ಎದ್ದು ನಿಲ್ಲುವಾಗ/ ಏನದು ಮತ್ತೆ ಹೊಳೆದಂತಾಗುತ್ತದೆ?’ ಎಂದು ನಿರಂತರ ಕಾಡುವ ಸಾವಿನ ಸನ್ನೆಯನ್ನು ಅನಾವರಣಗೊಳಿಸುತ್ತಾರೆ. ಕಂಬಾರರ ‘ಎಲ್ಲಿದೆ ಶಿವಾಪುರ?’ ಎಂದಿನಂತೆ ಅವರಿಗೆ ಪ್ರಿಯವಾದ ಶಿವಾಪುರದಲ್ಲಿ ಕವಿಯ ಹುಡುಕಾಟವನ್ನೇ ವಸ್ತುವಾಗುಳ್ಳದ್ದು. ದೇಶಗಳಳಿದರೂ ಶಿವಾಪುರ ಉಳಿದೇ ಉಳಿಯುತ್ತದೆ ಎಂಬ ಕವಿಯ ಗಾಢ ನಂಬಿಕೆ ಇಲ್ಲಿನ ಎಲ್ಲ ಪದ್ಯಗಳಲ್ಲೂ ತುಂಬಿ ತುಳುಕಿದೆ. ಕಂಬಾರರಿಗಷ್ಟೇ ಒಲಿದಿರುವ ಜಡೆಮುನಿ,ವಿಶಾಲ ಮರ, ಹರಿಯುವ ನೀರು, ಚಂದ್ರಾಮ ಚುಕ್ಕಿಗಳು ಇಲ್ಲಿನ ಪದ್ಯಗಳಲ್ಲಿ ಕಂಬಾರ ಮುದ್ರೆಗೆ ಸಾಥ್ ನೀಡಿವೆ. ನಾವು ಆಡಿದ್ದು ಮಾಡಿದ್ದು/ಹರಿದು ಹೋಗಿದೆ ನದಿಯ ತೆರೆಗಳೊಡನೆ/ನಿನ್ನೆಯ ಸತ್ಯ ಇಂದಿನ ಚೇಷ್ಟೆಯಾಗಿ/ಕೂಸು ಜೋಗುಳ ಹಾಡಿ ನಮ್ಮನ್ನು ಮಲಗಿಸುತ್ತಿದೆ!-ಎನ್ನುವಷ್ಟೇ ಸಲೀಸಾಗಿ ಕಾಲನಿಗಿಂತ ತರುಣವಾದ ಕಾವ್ಯವಿದೆಯೆಂದು/ನನ್ನಂಥವರ ಮುನ್ನಡೆಸಿ ಹೊಸ ಕ್ಷಿತಿಜ ತೋರಿದವರು (ಅಡಿಗರಿಗೆ) ಎಂದೂ ನೆನೆಯುತ್ತಾರೆ. ಒಂದು ಓದಿಗೆ ದಕ್ಕಲಾರದ, ಪ್ರಬಂಧವೇನೋ ಎನ್ನುವಷ್ಟು ಸವಿವರಗಳ, ಸಾರಾಂಶ ಇಷ್ಟೇ ಎಂದು ಹೇಳಲಾಗದ ಸಂವೇದನಾಶೀಲತೆ ಮತ್ತು ಅನುಭವದೆರಕದ ಈ ಸಂಕಲನ ಬಹಳ ಕಾಲ ಕಾಡುತ್ತದೆ.
‘ಗಲ್ಲೆಬಾನಿ’ ಅಧ್ಯಾತ್ಮವನ್ನು ವಿವಿಧ ನೆಲೆಗಳಲ್ಲಿ ಶೋಧಿಸುತ್ತಿರುವ ಹಾಗೆಯೇ ಸಿದ್ಧಮಾದರಿಗಳನ್ನು ನಿರಾಕರಿಸಿ ಸ್ವಾನುಭವ ಮತ್ತು ಚಳವಳಿಗಳ ಮೂಲಕ ಕಂಡುಕೊಂಡ ತಾತ್ವಿಕತೆಯನ್ನೇ ಬಸಿದು ಕಾವ್ಯ ಕಟ್ಟುತ್ತಿರುವ ಸಿದ್ದಯ್ಯನವರ ನಾಲ್ಕನೇ ಖಂಡಕಾವ್ಯ. ‘ಇಡೀ ದೇಹ ಭವದ ಸಾಲ’ ಎನ್ನುವ ಕವಿ ‘ಕಟ್ಟಕಡೆಗೆ ಸುಲಿದು ಸುಲಿದು ಸುಲಿದು ಚರ್ಮ ಸುಲಿದು ಮೆಟ್ಟು ಹೊಲೆದು ಮೆಟ್ಟೀ ಮೆಟ್ಟೀ ಮೆಟ್ಟೀ ಬಿಟ್ಟುಬಿಟ್ಟೆ ಮೆಟ್ಟು ಬಿಡುವ ಜಾಗದಲ್ಲಿ’ ಎನ್ನುತ್ತಾರೆ. ಕಾಜಗದ ದೋಣಿ ಈಜುವ ಸೋಜಿಗವನ್ನು ಕಾಣಿಸುವ ಸಿದ್ದಯ್ಯನವರ ಈ ಕಾವ್ಯಾಭಿವ್ಯಕ್ತಿ ಒಂದು ರೀತಿಯಲ್ಲಿ ಆತ್ಮಚರಿತ್ರೆಯೇ ಆಗಿದೆ. ಚಮ್ಮಾರನ ನಿತ್ಯ ಕಾಯಕಕ್ಕೆ ಸಹಕಾರಿಯಾಗಿ ತನ್ನೊಡಲ ತುಂಬ ನೀರು ತುಂಬಿಕೊಂಡಿರುವ ಕಲ್ಲಬಾನಿ ಈ ಗಲ್ಲೆಬಾನಿ. ಸಾಮಾಜಿಕ ನಡೆಯನ್ನು ‘ಸಮಾಜೋ ಅಧ್ಯಾತ್ಮ ಪ್ರಯಾಣ’ವೆಂದು ನಂಬಿರುವ ಸಿದ್ದಯ್ಯನವರ ಈ ಕಾವ್ಯ ದಮನಿತ ವರ್ಗದ ಸಾಂಸ್ಕೃತಿಕ ಸಂಗತಿಯನ್ನು ಅನಾವರಣಗೊಳಿಸುತ್ತಲೇ ಕವಿಯೊಳಗಿರುವ ಜೀವಸೆಲೆಯಾಗಿ ಬಹುಕಾಲ ಓದುಗನನ್ನು ಕಾಡುತ್ತದೆ. ಕಳೆದ ವರ್ಷವಷ್ಟೇ ‘ಮಗಳು ಸೃಜಿಸಿದ ಸಮುದ್ರ’ ಹೆಸರಿನ ಸಂಕಲನ ಪ್ರಕಟಿಸಿ ಹೆಸರು ಖ್ಯಾತಿ ಗಳಿಸಿದ್ದ ಎಸ್.ಮಂಜುನಾಥ್ ಮತ್ತೊಂದು ಸಂಕಲನ ‘ಜೀವಯಾನ’ ಪ್ರಕಟಿಸಿದ್ದಾರೆ. ಹೀಗೆ ವರ್ಷಕ್ಕೊಂದು ಸಂಕಲನ ತರುವ ಯಾರೇ ಇರಲಿ, ಈಗಾಗಲೇ ಅವರು ಗಳಿಸಿದ ಖ್ಯಾತಿ ಮತ್ತು ಅವರಿಗಂಟಿದ ಪ್ರ್ರಭಾವಳಿಯ ಮೂಲಕವೇ ಸಾರಸ್ವತ ಲೋಕದ ಬಾಗಿಲು ತಟ್ಟುವುದರಿಂದ ಇಂಥವರು ಸೃಷ್ಟಿಸಿದ ಮಾಯೆಯ ಬಲೆಯನ್ನೇ ವಿಸ್ಮಿತರಾಗಿ ಸಲಹುವ ನಮ್ಮ ಮಾಧ್ಯಮಗಳು ಮತ್ತು ವಿದ್ವಾಂಸರೆಂಬ ವಿಮರ್ಶಕರು ಹಳಬರ ಈ ಆಟಗಳಿಗೆ ಚಪ್ಪಾಳೆ ತಟ್ಟುವ ಭರದಲ್ಲಿ ಇವರೊಟ್ಟಿಗೇ ನಿಂತಿರುವ ಇತರರ ಪ್ರಯತ್ನಗಳನ್ನು ಗಮನಿಸುವ ಗೋಜಿಗೂ ಹೋಗದೇ ಸುಮ್ಮನಿರುವ ಸುಮ್ಮಾನಕ್ಕೆ ಶರಣಾಗಿಬಿಡುತ್ತಾರೇನೋ ಎಂಬ ಅನುಮಾನಗಳೂ ಕಾಡುತ್ತವೆ. ‘ಜೀವಯಾನ’ ಆತ್ಮ ಚರಿತ್ರೆಯ ಪುಟಗಳಂತೆ ನಮ್ಮ ಮುಂದೆ ಬಿಚ್ಚಿಕೊಳ್ಳುತ್ತ ಹೋಗುವುದಾದರೂ ಇದುವರೆಗೆ ರೂಪಕಗಳಲ್ಲೇ ಮಾತನಾಡುತ್ತಿದ್ದ ಮಂಜುನಾಥ್, ಹೊಸ ಪ್ರಮೇಯವೊಂದನ್ನು ಸೃಷ್ಟಿಸಿದ್ದಾರೆಂದೇನೂ ಅನ್ನಿಸುವುದಿಲ್ಲ. ಅವರು ಪುಸ್ತಕದ ಕಡೆಯಲ್ಲಿ ಪ್ರಕಟಿಸಿರುವ ಟಿಪ್ಪಣಿಯಂತೂ-ಅದರಲ್ಲೂ ‘ಒಡಲಾಳ’ಕ್ಕೆ ತಮ್ಮ ಕೃತಿಯನ್ನು ತಾವೇ ಸ್ವತಃ ಹೋಲಿಸಿಕೊಳ್ಳುತ್ತಿರುವುದು ಅಷ್ಟೇನೂ ಆರೋಗ್ಯಕರವಾದುದಲ್ಲ. ಪ್ರಾಯಶಃ ಬೇರೊಬ್ಬರು ಮುನ್ನುಡಿಯ ಮೂಲಕ ಇದೇ ಮಾತುಗಳನ್ನು ಬರೆದಿದ್ದರೆ ಆಗ ಅದು ಬೇರೆಯ ಮಾತು.(ಅನಂತಮೂರ್ತಿ, ಸಿದ್ದಯ್ಯ, ತಮ್ಮ ಸಂಕಲನಗಳಿಗೆ ಬರೆದುಕೊಂಡಿರುವ ಸಾಲುಗಳನ್ನು ಗಮನಿಸಿ). ಆದರೂ ಮಂಜುನಾಥ್ ಇವತ್ತು ಬರೆಯುತ್ತಿರುವ ಕವಿಗಳಲ್ಲೇ ಭಿನ್ನವಾಗಿ ನಿಲ್ಲುತ್ತಾರೆ ಮತ್ತು ನಿರಂತರ ಕಾವ್ಯ ಪ್ರಯೋಗಕ್ಕೆ ತಮ್ಮನ್ನು ಒಪ್ಪಿಸಿಕೊಂಡಿದ್ದಾರೆ ಅನ್ನುವುದರಲ್ಲಿ ಯಾವ ಅನುಮಾನಗಳೂ ಇಲ್ಲ.ಒಂದು ಬಗೆಯ ವಿಷಾದ ಇಲ್ಲಿನ ಪದ್ಯಗಳಿಗೆ ಶೃತಿಯಾಗಿದೆ. ಮರಾಠಿಯಲ್ಲಿ ಕಳೆದ ದಶಕದಲ್ಲಿ ಆತ್ಮ ಚರಿತ್ರೆಗಳು ಸುದ್ದಿ ಮಾಡಿದ ಹಾಗೇ ಈ ಬಗೆಯ ಪದ್ಯಗಳು (ಎಚ್.ಎಸ್.ವಿ ಯವರ ಉತ್ತರಾಯಣ ನಾ.ಮೊಗಸಾಲೆಯವರ ಇಹಪರದ ಕೊಳ) ಪ್ರ್ರಾಯಶಃ ಇನ್ನು ಮುಂದೆ ಹೆಚ್ಚುಹೆಚ್ಚಾಗಿ ಪ್ರಕಟವಾಗಲಿವೆಯಾ ಎಂಬ ಅನುಮಾನವೂ ಕಾಡುತ್ತಿದೆ. ಮನದ ಬನದಲ್ಲಿ ಹೆಜ್ಜೆಯಿಕ್ಕಿದ ನವಿಲೆ (ಮಗಳಿಗೆ) ಅಂಜಿ ನಡುಗಿರಬೇಕು ಪಟದ ದೇವರುಗಳೆಲ್ಲ (ಅಣ್ಣನ ರೋಷಾವೇಷ) ಅಂಗಾಲ ಮುದ್ದಿಸಿದ ಮಳೆ ಬಿದ್ದ ಹೂಮಣ್ಣು (ಊರಿದ ಬೇರಿನ ಗುಂಟ) ಅಂಗೈಯ ಆಕಾಶದಲಿ ಹೊಳೆವ ನಕ್ಷತ್ರ (ಆ ಮುದ್ದು ಕವಚ)ದಂಥ ಸಾಲುಗಳು ಹಾಗೂ ೩೩ ಮತ್ತು ೩೪ನೆ ಪದ್ಯಗಳು ಕವಿ-ಪತ್ನಿ ಮತ್ತು ಮಗಳ ಕುರಿತು ಬರೆದದ್ದು ಖುಷಿಗೊಳಿಸುತ್ತವೆ. ಮಂಜುನಾಥರ ಪ್ರತಿಭೆಗೆ ತಲೆದೂಗಿಸುತ್ತವೆ.
‘ಜಾತ್ರೆಯಲ್ಲಿ ಶಿವ’ ಸಂಕಲನದಲ್ಲಿ ತಮ್ಮ ಕಾವ್ಯ ಮಾರ್ಗವನ್ನು ತಾವೇ ಮೀರಿದ ಸವಿತಾ ನಾಗಭೂಷಣ ಇದೀಗ ‘ದರುಶನ’ ಪ್ರಕಟಿಸಿದ್ದಾರೆ. ಉದ್ದುದ್ದದ ಭಾಷಣಕ್ಕೋ, ಕಂಡರಿಯದ ಆಧ್ಯಾತ್ಮಕ್ಕೋ ತೆಕ್ಕೆಬೀಳದೇ ಸಹಜ ಲಯ ಮತ್ತು ವಾಸ್ತವದ ಸಣ್ಣ ಪುಟ್ಟ ಪ್ರತಿಮೆಗಳಲ್ಲೇ ತಮ್ಮ ಕಾವ್ಯವನ್ನು ಕಟ್ಟುತ್ತಾರೆ. ಬಾಲ್ಯ, ಅಮ್ಮನ ನೆನಪು, ಪ್ರೀತಿ ಇವುಗಳ ನಡುವೆಯೇ ಬುದ್ಧ, ಗಾಂಧಿ ಕೂಡ ನಸುನಗುವುದು ಈ ಸಂಕಲನದ ವಿಶೇಷ. ಕೆಲವು ಪದ್ಯಗಳು ನೀತಿಪಾಠವಾಗಿ ಬದಲಾಗುವುದು ಏಕೋ ಕವಿಯೇ ಉತ್ತರಿಸಬೇಕು. ‘ಗುಜರಾತ್‌ಗೆ ಕವಿ ಸ್ಪಂದನ’ ಈ ಸಂಕಲನದ ಹೈಲೈಟ್. ಸಂಕಲನಕ್ಕಾಗುವಷ್ಟು ಪದ್ಯಗಳಾದೊಡನೆಯೇ ಪ್ರಕಟಿಸಿಬಿಟ್ಟರೆ ಜೊಳ್ಳು-ಕಾಳು ಎರಡರ ಮಿಶ್ರಣವೂ ಆಗುತ್ತೆ ಅನ್ನುವುದಕ್ಕೆ ಕೂಡ ಈ ಸಂಕಲನ ಸಹಜ ಉದಾಹರಣೆ.
ಅಮೃತಮತಿಯ ಸ್ವಗತವನ್ನು ಗಾಜುಗೋಳದ ಮೂಲಕ ಹಾಯಿಸಿದ್ದ ಎಚ್.ಎಲ್.ಪುಷ್ಪ ‘ಲೋಹದ ಕಣ್ಣು’ ತೆರೆದು ಹೊಸ ಕವಿತೆಗಳನ್ನು ಬರೆದಿದ್ದಾರೆ. ಅಲ್ಲಮನ ಪ್ರಭಾವಲಯದ ರೂಪಕಗಳಲ್ಲೇ ಬದುಕನ್ನು ಚಿತ್ರಿಸುವ ಪರಿ ಬೆರಗಾಗಿಸುತ್ತದೆ. ಈಗಾಗಲೇ ತಮಗೆ ಸಿದ್ಧಿಸಿದ ಮಾರ್ಗಗಳಲ್ಲೇ ಅನ್ಯ ಕವಯತ್ರಿಯರು ದಾಪುಗಾಲಿಡುತ್ತಿರುವಾಗ ಈಗಲೂ ಪುಷ್ಪ ಆತಂಕದಲ್ಲಿ ಆಧ್ಯಾತ್ಮವನ್ನರಸುತ್ತಿರುವುದು ವಿಶೇಷವೆನ್ನಿಸುತ್ತದೆ. ಸಂಕಲನದ ತುಂಬ ಸಾರ್ಥಕ ಕವಿತೆಗಳಿರುವುದು, ಒಂದು ಪಾತಳಿಗೆ ಸಿಲುಕದೇ ಆ ಎಲ್ಲ ಕವಿತೆಗಳೂ ತಮಗಿರದ ನೆಲೆಯನ್ನು ಕುರಿತೇ ಶೋಧಿಸುತ್ತಿರುವುದೂ ಹೆಚ್ಚುಗಾರಿಕೆ. ‘ಮಳೆಯ ಜಾಡಿನಲ್ಲಿ ಡಾಂಟೆ ಇತ್ಯಾದಿ’ ನಿಜದ ಪ್ರಯೋಗ. ಜಂಭದ ಗಾಳಿಕುದುರೆಗೆ ತಿಳಿದಿರಲಿ/ಬಯಲಿಗೆ ಬಯಲು ಎಂದೂ ಜೊತೆಯಲ್ಲವೆಂದು ಎನ್ನುವ ಅರಿವಿರುವ ಕವಿ ಕರುಣೆಯ ಕಣ್ಣು ತೆರೆದಲ್ಲದೆ/ಈ ತನು, ತನುವಿನ ಭವ ಹಿಂಗದು ಎನ್ನುತ್ತಾರೆ. ಅಪ್ಪಳಿಸುವ ಅಲೆಯೆದುರು/ವಿಳಾಸವಿಲ್ಲದ ನಾನು ತಬ್ಬಿಬ್ಬಾಗಿದ್ದೇನೆ/.. ../ಮಾರ್ದನಿಯಿಲ್ಲದ ಪುಟ್ಟ ಹಕ್ಕಿ ಎಂದೂ ಸಂತೈಸಿಕೊಳ್ಳುತ್ತಾರೆ. ಕನ್ನಡ ಕಾವ್ಯದಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿರುವ ಆಧ್ಯಾತ್ಮದ ಹುಡುಕುವಿಕೆ ಇಲ್ಲಿನ ಪದ್ಯಗಳ ಮೂಲಕೇಂದ್ರ. ಆತ್ಮ ಸಂಗಾತಕ್ಕೆ ನೀನುಂಟು, ಏಕಲವ್ಯನೆಂಬ ಗುರುವಿಗೆ, ದಾರಿ ಕಳಕೊಂಡಿದೆ ಕವಿತೆ, ನದೀಮುಖ, ಕುಣಿವ ನವಿಲುಗಳು ಮುಂತಾದ ಪದ್ಯಗಳು ಪುಷ್ಪ ಅವರು ಶೋಧಿಸುತ್ತಿರುವ ಲೋಕದ ದಾರಿಗೆ ಇಡುತ್ತಿರುವ ಹೆಜ್ಜೆಗಳ ಕುರುಹಾಗಿ ತೋರುತ್ತವೆ.
‘ಚಂದ್ರಮತಿಯ ಮಾಂಗಲ್ಯ’ ಎನ್ನುವ ಅದ್ಭುತ ರೂಪಕವನ್ನೇ ಹೆಸರಾಗಿಸಿರುವ ಸ್ವಾಮಿನಾಥರ ನಾಲ್ಕನೇ ಸಂಕಲನದಲ್ಲಿರುವ ೪೮ ಪದ್ಯಗಳಲ್ಲಿ ನವೋದಯ, ನವ್ಯ ಮತ್ತು ಬಂಡಾಯದ ಮಿಶ್ರಣವಿದೆ. ‘ಪಂಚಭೂತ’ದಂಥ ಸರಳ ಲಯದೊಟ್ಟಿಗೇ ‘ರಕ್ಕಸ ಮತ್ತು ರಾಜಕುಮಾರಿ’ಯಂಥ ಕಥನ ಕವನಗಳನ್ನೂ ಅವರು ಬರೆಯಬಲ್ಲರು. ಬಿ.ಸಿ.ರಾಮಚಂದ್ರ ಶರ್ಮ ಹಾಗೂ ಜಿ.ಎಸ್.ಶಿವರುದ್ರಪ್ಪನವರ ಕವಿತೆಗಳ ಓದು ಈ ಕವಿಯ ಹಲವು ರಚನೆಗಳಿಗೆ ಸ್ಪೂರ್ತಿ ನೀಡಿವೆ. ತಕ್ಷಣಕ್ಕೇ ಕತ್ತಲಲ್ಲಿ ಫಳಫಳ ಹೊಳೆಯುವ ತಾಳಿ/ಕೊಳೆತಿತ್ತು ಕಾಲನ ಕಾಲು/ನಕ್ಕಿತ್ತು ಕಾಮನ ಬಿಲ್ಲು/ನುಡಿದಿತ್ತು ಕೊರಳು ಕಾಲದಷ್ಟೇ ಸತ್ಯ-ಕಾವ್ಯ ಸತ್ಯವನ್ನು ನವ್ಯದ ಪ್ರತಿಮೆಗಳಲ್ಲಿ ಹಿಡಿದಿಡುವ ಕವಿಗೆ ಭೇಷ್ ಅನ್ನಲೇಬೇಕಾಗುತ್ತದೆ.
‘ಎಡವಟ್ಟು ಬದುಕಿನ ಲಯಗಳು’ ಎನ್ನುವ ಕ್ಯಾಚೀ ಹೆಸರಿನ ಸಂಕಲನದ ಮೂಲಕ ಕಾವ್ಯಲೋಕ ಪ್ರವೇಶಿಸಿದ್ದ ಎಚ್.ಆರ್.ರಮೇಶ ‘ಸಾಸುವೆ ಹೂವ ಚರಿತ’ ಎನ್ನುವ ಸಾಮಾನ್ಯ ಹೆಸರಿಗೇಕೆ ಸೋತರೋ ಗೊತ್ತಾಗುತ್ತಿಲ್ಲ. ಸಾಸುವೆ ಅಂದ ಕೂಡಲೇ ನೆನಪಾಗುವ ಬುದ್ಧ ಈ ಸಂಕಲನದ ತುಂಬೆಲ್ಲ ಓಡಾಡಿದ್ದಾನೆ. ಎಲ್ಲ ಹೊಸತು ಎನ್ನುವ ಹಾಗೆ ಬರೆಯುತ್ತಿರುವವರಲ್ಲಿ ಎಚ್.ಆರ್.ರಮೇಶ ಒಬ್ಬರು. ಕವಿತೆ ಅರ್ಥಪೂರ್ಣವಾಗಿದ್ದರೆ ಮಾತ್ರ ಕಾಲದೇಶವನ್ನು ಮೀರಿ ನಿಲ್ಲುತ್ತೆ ಎನ್ನುವ ಅರಿವಿರುವ ಕವಿ ಹಳೆಯ ರೂಪಕಗಳನ್ನು ಫ್ರಿಜ್ಜಲ್ಲಿಟ್ಟು/ಫ್ರೆಶ್ ಆಗಿ ಅರ್ಪಿಸಲಾರೆ/ಇದೋ ಇಲ್ಲಿ ಬಿದ್ದಿರುವ ಕಲ್ಲನ್ನೇ ಎತ್ತಿ/ಕೊಡುವೆ ಅಂತ ಮೊದಲ ಪದ್ಯದಲ್ಲೇ ಕುತೂಹಲ ಹುಟ್ಟಿಸುತ್ತಾರೆ. ಸಂಕಲನದ ತುಂಬ ಒಟ್ಟಂದಕ್ಕಂಟದೇ ಅಲ್ಲಿಲ್ಲಿ ಚದುರಿ ಹೋಗಿರುವ ಪದ್ಯದ ವಸ್ತುಗಳು ವಿಕ್ಷಿಪ್ತಮನಸ್ಸನ್ನೇ ಎತ್ತಿ ತೋರುತ್ತವೆ. ಜೈವಿಕ ವಿವರಗಳನ್ನು ಒದಗಿಸುತ್ತಲೇ ಕಾವ್ಯವನ್ನು ಧೇನಿಸುವುದು ಈ ಕವಿಗೆ ಒಗ್ಗಿರುವ ಸಂಗತಿ.ಕವಿಯೊಬ್ಬ ತನಗೆ ತಾನೇ ಆಡಿಕೊಂಡ ಮಾತುಗಳು ಓದುಗನ ಮಾತುಗಳೂ ಆದಾಗ ಕಾವ್ಯ ಯಶಸ್ವಿಯಾಗುತ್ತೆ. ಅಂಥ ಯಶಸ್ಸಿನಲ್ಲೀಗ ರಮೇಶ ಇದ್ದಾರೆ. ಅನಂತಮೂರ್ತಿಯವರ ಮುನ್ನುಡಿ ಕೂಡ ರಮೇಶರ ಕಾವ್ಯಕಸುಬನ್ನು ಉದ್ದೀಪಿಸಿದೆ.
ಸಂತೋಷ ಚೊಕ್ಕಾಡಿಯವರ ‘ನಿನ್ನ ರಾಗವ ಹುಡುಕು’ ಅವರ ಕಾವ್ಯ ಯಾತ್ರೆಯ ಮೂರನೆಯ ಕುಸುಮ. ಹೊಸ ಪ್ರಯೋಗಗಳಿಗೆ ಹೋಗದೇ ಸಹಜ ಸರಳ ಲಯಗಳಲ್ಲೇ ತಮ್ಮ ಕವಿತೆಗಳನ್ನು ಆಗಿಸುವ ಚೊಕ್ಕಾಡಿಯವರ ಹಲವು ರಚನೆಗಳು ಸುನೀತದ ರೂಪದಲ್ಲಿವೆ. ಮಗಳಿಗೆ ಅನ್ನುವ ಪದ್ಯ ಜಗದ ಎಲ್ಲ ಅಪ್ಪಂದಿರ ಬಯಾಗ್ರಫಿಯಂತಿದೆ ಎನ್ನುವುದು ಉತ್ಪ್ರೇಕ್ಷೆಯಲ್ಲ. ಕಾಯಬೇಕು ಕವಿತೆಗೆ, ಕವಿತೆಯ ಹಾದಿ, ಕವಿತೆ, ನಿನ್ನ ರಾಗವ ಹುಡುಕು, ದಿನದ ಯಾತ್ರೆ ಈ ಕವಿ ಕಾವ್ಯಕ್ಕೆ ಬರೆದ ಭಾಷ್ಯದಂತಿವೆ. ಸ್ವರ್ಗ ಕಾಮ, ಗಾಢ ಮೌನದ ಇರುಳು ಬಹಳ ಕಾಲ ಮನಸ್ಸಲ್ಲುಳಿಯುವ ರಚನೆಗಳು. ಸಂಕಲನದ ಪರಿವಿಡಿಯಲ್ಲಿ ಪುಟ ಸಂಖ್ಯೆ ಇರದಿರುವುದು, ಸಗಟು ಖರೀದಿಗಾಗಿ ಪ್ರಕಟಣೆಯ ವರ್ಷವನ್ನೇ ಹಿಂದಕ್ಕೋ-ಮುಂದಕ್ಕೋ ಬದಲಾಯಿಸಿರುವುದೂ, ಕವನಸಂಕಲನಗಳಿಗೆ ಇರುವ ಪ್ರಕಾಶಕರ ಬರವನ್ನು ಸಾಬೀತು ಪಡಿಸುತ್ತದೆ.
‘ಚುಕ್ಕಿ’ ಸಂಕಲನದ ಮೂಲಕ ಹೆಸರು ಮತ್ತು ಖ್ಯಾತಿಗಳನ್ನು ಕಂಡುಕೊಂಡ ಜ್ಯೋತಿ ಗುರುಪ್ರಸಾದ್ ತಮ್ಮ ಎರಡನೆಯ ಸಂಕಲನ ‘ಮಾಯಾ ಪೆಟ್ಟಿಗೆ’ ತೆರೆದಿಟ್ಟಿದ್ದಾರೆ. ೯೦ ಪದ್ಯಗಳನ್ನು ಈ ಸಂಕಲನದಲ್ಲಿ ಅಡಕಿರಿದಿದ್ದರೂ ಬಹು ಕಾಲ ಮನಸ್ಸಲ್ಲಿ ನಿಲ್ಲುವ ರಚನೆಗಳು ಬಹಳ ಕಡಿಮೆ. ಹೆಸರಿಗಷ್ಟೇ ಮಾಯಾಪೆಟ್ಟಿಗೆ ತೆರೆದರೆ ಅವೇ ಅವೇ ಹಳೆಯ ಹಲುಬಿಕೆಗಳ ಆಗರ. ಜೊತೆಗೆ ಕವನ ರಚನೆ ಇಷ್ಟು ಸಲೀಸಾದ ಕೆಲಸವಾಗಿಬಿಟ್ಟರೆ, ಕೂತಲ್ಲಿ ನಿಂತಲ್ಲಿ ಅಧ್ಯಾತ್ಮದ ಹೊಳಹು ಮಿಂಚಿದರೆ, ಕಾವ್ಯ ಕ್ರಿಯೆಯ ಮೇಲೇ ಸಂಶಯಗಳು ಹುಟ್ಟುತ್ತವೆ. ಜೊತೆಗೆ ಸರಳವಾಗಿರುತ್ತವೆ ಎಂಬ ಕಾರಣಕ್ಕೆ ಎಲ್ಲ ಪತ್ರಿಕೆಗಳಲ್ಲೂ ಇಂಥ ರಚನೆಗಳೇ ವಿಜೃಂಭಿಸುತ್ತಿರುವುದನ್ನೂ ವಿಷಾದದಿಂದಲೇ ನೋಡಬೇಕಾಗಿದೆ. ಈಗಂತೂ ಪತ್ರಿಕೆಗಳ ಸಾಪ್ತಾಹಿಕಗಳಲ್ಲಿ, ಮಾಸಿಕ, ವಾರಪತ್ರಿಕೆಗಳಲ್ಲಿ ಮೇಲಿಂದ ಮೇಲೆ ಕಾಣಿಸಿಕೊಳ್ಳುವ ಕೆಲವು ಹೆಸರುಗಳು ಬೇಕೆಂತಲೇ ಆಧ್ಯಾತ್ಮಿಕ ತುಡಿತ, ಬುದ್ಧ ಅಲ್ಲಮ ಜೋಗಿ ಫಕೀರ ಜಂಗಮ ಸೂಫಿ ಮೊದಲಾದವರ ಜೊತೆಗಿನ ಅನುಸಂಧಾನವೆಂಬಂತೆ ತಮ್ಮ ಕವಿತೆಗಳನ್ನು ನೇಯುತ್ತಿದ್ದರೂ, ಮೇಲ್ನೋಟಕ್ಕೆ ಅವು ಸಾಧುವೆಂದೆನಿಸಿದರೂ, ಇವರೆಲ್ಲ ವರ್ತಮಾನದಲ್ಲಿ ಕಾಡುತ್ತಿರುವ ಸಮಸ್ಯೆಗಳಿಂದ ಪಲಾಯನ ಮಾಡಿರುವುದರ ಕುರುಹಾಗಿ ತೋರುತ್ತದೆ. ನಗರ ಕೇಂದ್ರಿತ ಸಮಸ್ಯೆಗಳು, ನಿಲ್ಲದ ವರ್ಗ ವರ್ಣಗಳ ಮೇಲಾಟಗಳು, ಹಿಂಸೆಯ ಬದಲಾಗುತ್ತಿರುವ ಮುಖಗಳು ನಮ್ಮ ಕವಿಗಳನ್ನು ಕಾಡದೇ ಇದೆಯೇ ಅಥವ ಅವರೆಲ್ಲ ಲೌಕಿಕದಿಂದ ದಿವಂಗತರಾಗಿದ್ದಾರೆಯೇ ಎನ್ನುವುದೂ ಇಲ್ಲಿ ಮುಖ್ಯ ಪ್ರಶ್ನೆಯಾಗಿದೆ.
ಆದರೂ ಮುನ್ನುಡಿಯ ಮೂಲಕ ಹೊಸಬರ ಬಗ್ಗೆ ತುಂಬು ಭರವಸೆಯ ಮಾತುಗಳನ್ನಾಡುವವರಂತೆ ಅನಂತಮೂರ್ತಿ ಕಂಡರೂ ಇಂಥ ಬರಹಗಳಲ್ಲೂ ಅವರೇ ಮುಂಚೂಣಿಗೆ ನಿಂತು ಹೊಸಬರ ಬಗ್ಗೆಯ ಮಾತೂ ಅವರಿಗೆ- ಅವರೊಪ್ಪಿದ ಸಿದ್ಧಾಂತ ಮತ್ತು ಮೌಲ್ಯಗಳ ಪ್ರತಿಪಾದನೆಯ ಸ್ವತ್ತಾಗುತ್ತದೇ ವಿನಾ ಮುನ್ನುಡಿ ಬಯಸಿದವರ ಕಾವ್ಯ ಪ್ರಖರತೆಯನ್ನಳೆಯುವ ಸಾಧನವಾಗುವುದಿಲ್ಲವೆಂಬುದನ್ನೂ ಗಮನಿಸಬೇಕು. ಜೊತೆಗೇ ಅನಂತಮೂರ್ತಿಯವರಂಥ ಹಿರಿಯರು ಕಿರಿಯರನ್ನು ಪ್ರೋತ್ಸಾಹಿಸಬೇಕೆನ್ನುವ ಏಕೈಕ ಉದ್ದೇಶದಿಂದ ತೀರ ಧಾರಾಳವಾಗಿಬಿಟ್ಟರೂ ಸೂಕ್ಷ್ಮವನ್ನಿರಿಯದ ಈ ಕಿರಿಯರು ತಾವೇ ‘ಕವಿಶ್ರೇಷ್ಠ’ರೆಂದು ಭಾವಿಸುವ ಅಪಾಯವೂ ಇರುತ್ತದೆ. ವ್ಯಕ್ತಿಗತ ಪರಿಚಯಗಳನ್ನೇ ಮುನ್ನುಡಿಯ ಮಾನದಂಡಗಳನ್ನಾಗಿಸಿಕೊಳ್ಳಬೇಡಿ ಅಂತ ಹಿರಿಯರಿಗೆ ಹೇಳುವುದೂ ಅಸಾಧ್ಯದ ಮಾತು! ಸಂಧ್ಯಾದೇವಿಯವರ ಅದ್ಭುತ ಸಂಕಲನ ಪ್ರಕಟಿಸಿದ್ದ ‘ಕಾವ್ಯಮಂಡಲ’ ಮಾಯಾಪೆಟ್ಟಿಗೆಯಲ್ಲಿ ಏನು ವಿಶೇಷ ಕಂಡುಕೊಡಿತೋ ಆ ಸಂಸ್ಥೆಯೇ ಹೇಳಬೇಕು.
‘ಕವಿತೆಗೆ ಬೆಂಕಿ ಬಿತ್ತು’ ವಿಲಕ್ಷಣ ಹೆಸರಿನ ಸಂಕಲನ ಪ್ರಕಟಿಸಿದ್ದ ಚಂ.ಸು.ಪಾಟೀಲ ‘ಅದಕ್ಕೇ ಇರಬೇಕು’ ಅನ್ನುವ ಸಾಮಾನ್ಯ ಹೆಸರನ್ನು ತಮ್ಮ ಹೊಸಸಂಕಲನಕ್ಕಿಟ್ಟಿದ್ದಾರೆ. ಪುಸ್ತಕವನ್ನು ಬೇಕಾಬಿಟ್ಟಿ ಪ್ರಕಟಿಸುವ ಪ್ರಕಾಶಕರಿಗೆ ಉದಾಹರಣೆ ಈ ಪುಸ್ತಕ. ಪದ್ಯಗಳಿಗೆ ಪರಿವಿಡಿಯೇ ಇಲ್ಲದಂತೆ ಪ್ರಕಟಿಸಿರುವುದು ಅಕ್ಷಮ್ಯ. ಮುನ್ನುಡಿ ಇಲ್ಲದೇ ಪುಸ್ತಕಗಳನ್ನು ಪ್ರಕಟಿಸುವುದು ಕೆಲವರ ಶೈಲಿಯಾದರೆ ತಮ್ಮ ಸಮಕಾಲೀನರಿಂದ ಒಳ್ಳೆಯ ಮಾತು ಬರೆಸುವ ಸುಲಭೋಪಾಯ ಕೆಲವರದು. ಇಲ್ಲೂ ಹಾಗೇ ಹೆಚ್ಚು ನಿಕಷಕ್ಕೊಡ್ಡದೇ ಪಿ.ಚಂದ್ರಿಕಾ ತಮ್ಮ ಕೆಲಸವನ್ನು ನಿಭಾಯಿಸಿದ್ದಾರೆ. ಹಲವು ಹೇಳಿಕೆಗಳಲ್ಲೇ ಕವಿತೆಗಳನ್ನು ಆಗಿಸುವ ಪಾಟೀಲರು ಪ್ರಾಸಕ್ಕೇ ಗಂಟುಬೀಳುತ್ತಾರೆ. ‘ಅದಕ್ಕೇ ಇರಬೇಕು’ ಅನ್ನುವ ಪದ್ಯ ಹೊಸ ವಿಸ್ತರಣಕ್ಕೆ ಕೈ ಇಟ್ಟಿರುವುದರ ಭರವಸೆಯ ಸಂಕೇತ.
‘ನೇಕಾರ’ ಎನ್ನುವ ಕಾಯಕದ ದೀಕ್ಷೆ ಹಿಡಿದು ಕವನ ಸಂಕಲನವಾಗಿಸಿದ್ದ ಆಲೂರು ದೊಡ್ಡನಿಂಗಪ್ಪ ಹೊಸ ಸಂಕಲನ ‘ಮುಟ್ಟು’ ತಂದಿದ್ದಾರೆ. ಅಲ್ಲಮನ ಬೆಡಗಿನ ವಚನಗಳನ್ನು ತಮ್ಮ ಕಾವ್ಯಾಭಿವ್ಯಕ್ತಿಯ ಅನುಕೂಲಕ್ಕೆ ಬಳಸಿಕೊಳ್ಳುವ ಆಲೂರು ರಂಗಭೂಮಿಯೊಂದಿಗಿನ ತಮ್ಮ ಸಂಬಂಧವನ್ನೂ ಕವಿತೆಯಾಗಿಸುತ್ತಾರೆ. ತತ್ವಪದಕಾರರೂ ಆಗೀಗ ಇವರ ಕವಿತೆಗಳೊಳಕ್ಕೆ ಇಳಿಯುವುದು ಹಾಗೇ ಕವಿ ಓದುಗನನ್ನು ತನ್ನೊಳಗನ್ನು ಮುಟ್ಟು ಎಂದು ಪ್ರಾರ್ಥಿಸುತ್ತಿರುವುದೂ ಮೊದಲ ಓದಿಗೇ ಶೃತವಾಗುತ್ತದೆ. ಮೊದಲ ಓದಿಗೆ ಥಟ್ಟನೆ ಅರ್ಥವಾಗದ ಆದರೆ ಆಕರ್ಷಣೆ ಕಳೆದುಕೊಳ್ಳದ ರಚನೆಗಳ ಬಗ್ಗೆ ಕವಿ ಯೋಚಿಸುವುದು ಒಳಿತು. ಸಮುದ್ರವೇ ಉರಿಯುತಿಹುದು/ಮೀನು ಮೊಸಳೆ ಮರ ಏರಿಹುದ ಕಂಡೆ/ಉರಿವ ಬೆಂಕಿ ನಂದಿಸಲು/ನೆಲ್ಲುಲ್ಲು ಭಾದೆ ಖಾಲಿ ಖಾಲಿ ಸಾಲುಗಳಲ್ಲಿ ಅಲ್ಲಮನನ್ನು ಮೈಮೇಲೇರಿಸಿಕೊಂಡಂತೆ ಕವಿ ಕಾಣುತ್ತಾರೆ.
ಈ ವರ್ಷ ಮೊದಲ ಸಂಕಲನ ಪ್ರಕಟಿಸಿದವರಲ್ಲಿ ಹಿರಿಯರು ಕಿರಿಯರೂ ಇದ್ದಾರೆ. ಕತೆಗಾರ್ತಿಯಾಗಿ ಈಗಾಗಲೇ ಪ್ರಸಿದ್ಧರಾಗಿರುವ ಸುನಂದಾ ಪ್ರಕಾಶ ಕಡಮೆಯವರ ‘ಸೀಳುದಾರಿ’, ಅವರ ಕತೆಗಳಂತೆಯೇ ನವಿರುತನ ಮತ್ತು ಖಾಸಗಿ ಅನುಭವಗಳ ಅನಾವರಣದ ಕಾರಣದಿಂದಾಗಿ ಮನಸೆಳೆಯುತ್ತದೆ. ಬೆಂಗಳೂರು ಬಿಟ್ಟು ಉಳಿದ ಕಡೆ ಮುದ್ರಣಗೊಂಡ ಪುಸ್ತಕಗಳಲ್ಲಿ ಕಣ್ಣಿಗೆ ಹಿತವಾದ ಫೋಂಟ್‌ಗಳನ್ನು ಬಳಸದ ಮತ್ತು ವಿನ್ಯಾಸದಲ್ಲಿ ಹೊಸತನ ಕಾಣಿಸದ ಕಾರಣ ಆ ಪುಸ್ತಕಗಳ ಓದಿಗೆ ಸ್ವಲ್ಪ ಕಷ್ಟಪಡಲೇಬೇಕಾಗುತ್ತದೆ. ಈ ಸಂಕಲನಕ್ಕೂ ಈ ತೊಂದರೆ ಬಾಧಿಸಿದೆ. ‘ಏಣಿ ಗೀಣಿ ಮುಟ್ಟದೇನೇ/ನಿಲುಕಬೇಕು ನಕ್ಷತ್ರ ಇಲ್ಲೇ’ ಎನ್ನುವ ಕವಿಗೆ ಪುಟ್ಟರೆಕ್ಕೆಗಿರುವ ಭಾರ ಜೀವದ ಅರಿವು ಇರುವದರಿಂದಲೇ ಸಂಕಲನದ ಕವಿತೆಗಳು ಅಪ್ಪಟ ವೈಯುಕ್ತಿಕ ಅನ್ನಿಸಿಕೆಗಳಾಗಿದ್ದೂ ಕವಿತೆಗಳಾಗುವಲ್ಲಿ ಯಶಸ್ವಿಯಾಗಿವೆ. ಎಂ.ಎಸ್.ರುದ್ರೇಶ್ವರ ಸ್ವಾಮಿ ‘ಪ್ರೀತಿ ಮತ್ತು ನೀರು’ ಅವರ ಮೊದಲ ಸಂಕಲನ ಹೌದೋ ಅಲ್ಲವೋ ಅನ್ನುವ ಅನುಮಾನ ಹುಟ್ಟಿಸುತ್ತಾರೆ. ಬೆಳಕಿನಲ್ಲಿ ಕಂಡದ್ದೆಲ್ಲ ಅರ್ಥವಾಗುವುದಿಲ್ಲ ಅನ್ನುವ ಮಾರ್ಮಿಕ ಹೇಳಿಕೆಯಲ್ಲಿ ಕವಿತೆಯನ್ನರಳಿಸಿ ಸೋಜಿಗ ಹುಟ್ಟಿಸುವ ಈ ಸಂಕಲನದಲ್ಲಿ ಕಲಾವಿದ ಮನೋಹರ್‌ರ ಚಿತ್ರಗಳನ್ನು ಹಿತವಾಗಿ ಬಳಸಿಕೊಂಡಿರುವುದು ಖುಷಿ ತರುತ್ತದೆ. ಮೊದಲನೆಯ ಓದಿಗೆ ಹಿತವೆನ್ನಿಸಿದರೂ ಮರು ಓದಿನಲ್ಲಿ ಸಂಕಲನದ ಕವಿತೆಗಳು ಶೋಕೇಸಿನ ಬೊಂಬೆಗಳಂತೆ ಕಾಣತೊಡಗುತ್ತವೆ.
ಬಹಳ ತಡವಾಗಿ ಸಂಕಲನ ತಂದಿರುವ ಕೆ.ಎಸ್.ಶ್ರೀನಿವಾಸಮೂರ್ತಿ ತಮ್ಮ ‘ಸೈಟಾದರೂ ಬೇಡವೇ ಸ್ವಾಮಿ ನಮಗೆ’ಎನ್ನುವ ಹೆಸರಿನ ಸಂಕಲನದ ತುಂಬ ಅಯೋವಾವನ್ನು, ಅಲ್ಲಿನ ಬದುಕನ್ನೂ ಚಿತ್ರಿಸಿದ್ದಾರೆ. ರಾಮಾನುಜನ್ ಅವರ ಕೆಲವು ಕವಿತೆಗಳನ್ನು ನೆನಪಿಸುವ ಶಕ್ತಿ ಇಲ್ಲಿನ ಪದ್ಯಗಳಿಗಿದ್ದರೂ, ಹೊಸ ಪರಿಭಾಷೆಯಲ್ಲಿ ಕನ್ನಡ ಕಾವ್ಯವನ್ನು ಕಟ್ಟುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಪ್ರಾಯಶಃ ಶ್ರೀನಿವಾಸಮೂರ್ತಿಯಂಥವರ ಪ್ರಯೋಗಗಳು ಗಮನಿಸುವವರಿಲ್ಲದಂತಾಗುವ ಅವಸ್ಥೆ ಇಂದಿನದು.
ಪತ್ರಿಕೆಗಳಲ್ಲಿ ಪ್ರಕಟವಾಗುವ ತಮ್ಮ ಕವಿತೆಗಳ ಮೂಲಕ ಈಗಾಗಲೇ ಪರಿಚಿತರಾಗಿರುವ ಆರಿಫ್ ರಾಜರ ‘ಜಂಗಮ ಫಕೀರನ ಜೋಳಿಗೆ’ ಸಂಕಲನದ ಮುನ್ನುಡಿಯಲ್ಲಿ ಎಚ್.ಎಸ್.ಶಿವಪ್ರಕಾಶ್ ಇವತ್ತಿನ ಕವಿಗಳ ಮಿತಿಗಳನ್ನು ವಿಶ್ಲೇಷಿಸುತ್ತಲೇ ಆರಿಫ್ ಮುಸ್ಲಿಂತನವನ್ನು ಕವಿತೆಯಾಗಿಸುತ್ತಿದ್ದಾರೇ ಹೊರತು ಕಾವ್ಯವನ್ನು ಇಸ್ಲಾಂ ಧರ್ಮಕ್ಕೆ ಸೇರಿಸುತ್ತಿಲ್ಲ ಎನ್ನುವ ಎಚ್ಚರಿಕೆಯ ಮಾತುಗಳನ್ನಾಡಿದ್ದಾರೆ. ಕಾವ್ಯ ಬರೆಯುವವರಿಗೆ ಅತ್ಯಗತ್ಯ ಬೇಕಿರುವ ಇರುವುದರ ಮೋಹ ಮತ್ತು ಇರದುದುರ ದಾಹ ಕುರಿತ ಅವರ ಮಾತುಗಳು ಕೇವಲ ಆರಿಫ್‌ಗೆ ಮಾತ್ರವಲ್ಲದೆ ಪದ್ಯ ಬರೆಯ ಹೊರಟ ಹೊಸ ತಲೆಮಾರಿನ ಎಲ್ಲ ಕವಿಗಳಿಗೂ ಹೇಳಿದಂತಿದೆ. ದೇವರು ದೊಡ್ಡವನು/ನಿತ್ಯದ ನೀರಸದಲ್ಲೂ ನಮಗೆ ಗೊತ್ತಿಲ್ಲದಂತೆ ಆಗಾಗ/ಬಹುಮಾನಗಳನ್ನಿಟ್ಟಿರುತ್ತಾನೆ/ಆ ಅಳು ಆಲಿಸಲು ಕೆಲವೊಬ್ಬರಿಗಾದರೂ/ಕಿವಿಗಳನ್ನು ಕೊಟ್ಟಿರುತ್ತಾನೆ (ಆ ಅಳು ಈಗಲೂ ಅಲ್ಲಿ) ಸಾಲುಗಳಲ್ಲಿ ತಮ್ಮ ಮೇಲೆ ಭರವಸೆ ಇಟ್ಟುಕೊಳ್ಳಬಹುದೆಂಬ ವಿಶ್ವಾಸವನ್ನು ಆರಿಫ್ ರಾಜ ಮೂಡಿಸುತ್ತಾರೆ. ಕವಿತೆಗಳ ಶೀರ್ಷಿಕೆಗೂ ಕವಿತೆಗಳಿಗೂ ಬಳಸಿರುವ ಫಾಂಟ್‌ಗಳ ಅಳತೆಗಳಲ್ಲಿ ಹೆಚ್ಚು ವ್ಯತ್ಯಾಸವಿಲ್ಲದಿರುವುದು ಓದಿಗೆ ತೊಡಕಾಗಿದೆ. ಬದುಕಿನ ದುರಂತದ ಮುಖಗಳ ಜೊತೆಜೊತೆಗೇ ಪುಳಕದ ಕ್ಷಣಗಳನ್ನೂ ಕವಿ ದಾಖಲಿಸಿದ್ದಾರೆ.
ತುಂಬ ಅಚ್ಚುಕಟ್ಟಾದ ಮುದ್ರಣ, ಹಿತವಾದ ಮುಖಚಿತ್ರವಿರುವ ‘ಪುಟಾಣಿ ಕೆಂಪು ಶೂ’ ಛಾಯಾ ಭಗವತಿಯವರ ಮೊದಲ ಸಂಕಲನ. ವ್ಯಕ್ತಿ ಸಂಬಂಧಗಳು ಮತ್ತು ಲಯ ಪ್ರಾಸಗಳಲ್ಲೇ ಕವಿತೆಗಳನ್ನು ನೇಯುವ ಕವಿಗೆ ಆ ಪ್ರಾಸಗಳೇ ಮಿತಿಯೊದಗಿಸಿವೆ. ಬಹುತೇಕ ಕವಿತೆಗಳ ವಸ್ತುವಾಗಿ ಕವಿಯನ್ನು ಕಾಡಿರುವ ಹೆಣ್ಣು ಮತ್ತು ಕೂಸು ಇಲ್ಲಿನ ಪದ್ಯಗಳಿಗೆ ಸುಲಭ ದಾರಿಯೊದಗಿಸಿವೆ ಅಷ್ಟೆ. ಸಂಕಲನದ ಯಶಸ್ವೀ ಪದ್ಯ ಶೀರ್ಷಿಕೆಯ ಪದ್ಯವೇ ಆಗಿದೆ, ಮತ್ತು ಬಹುಕಾಲ ಕಾಡುತ್ತದೆ ಕೂಡ.
‘ನನಗೀಗ ಬೆಳಕಿನದೇ ಧ್ಯಾನ’ ಎಂದು ಪರಿತಪಿಸುವ ಸಿದ್ದು ದೇವರಮನಿ ‘ಬರುವ ನಾಳೆಗಳಿಗೆ ರಾತ್ರಿಗಳೇ ಇರುವುದಿಲ್ಲ’ ಎಂಬ ದೀರ್ಘ ಶೀರ್ಷಿಕೆಯ ಸಂಕಲನ ಪ್ರಕಟಿಸಿ ಪ್ರಖರ ಓಪನಿಂಗ್ ಪಡೆದುಕೊಂಡಿದ್ದಾರೆ. ಆರ್ತಗೊಂಡ ಮನಸ್ಸಿನ ಸಹಜ ಲಯದಲ್ಲಿ ಇಲ್ಲಿನ ಪದ್ಯಗಳು ಬೆಳೆದಿವೆ. ಷರೀಫಜ್ಜನನ್ನು ಗೋರಿಯಿಂದೇಳಿಸಿ ಯುದ್ಧಕ್ಕೆ ಸಿದ್ಧಗೊಂಡ ದೇಶಕ್ಕೆ ಕರೆದೊಯ್ಯುವ ಬಯಕೆಯ ಈ ಕವಿ ಅನ್ನಿಸಿದ್ದನ್ನೆಲ್ಲ ಕಾಗದಕ್ಕಿಳಿಸದೇ ಅವು ಸಾಂಧ್ರವಾಗುವವರೆಗೂ ಕಾದು ಬರೆದರೆ ಭವಿಷ್ಯದಲ್ಲಿ ಉತ್ತಮ ಕವಿತೆಗಳನ್ನು ಕೊಡಬಲ್ಲ ತಾಕತ್ತಿರುವವನು.
ಈಗಾಗಲೇ ಸಾರಸ್ವತ ಲೋಕಕ್ಕೆ ಚಿರಪರಿಚಿತರಾಗಿರುವ ಸಂತೆಬೆನ್ನೂರು ಫೈಜ್ನಟ್ರಾಜ್ ‘ಎದೆಯೊಳಗಿನ ತಲ್ಲಣ’ಗಳನ್ನೇ ಸಂಕಲಿಸಿ ಮೊದಲ ಕೃತಿ ಹೊರತಂದಿದ್ದಾರೆ. ಹುಡುಗೀ ನಿನ್ನ ಕಣ್ಣು ಕೊಳ/ಈಜುವಾಸೆ... ಮುಳುಗುವ ಭಯ ಎಂದು ಬರೆಯುವ ಕವಿ ಕವಿತೆಯಾಗು ಎಂದಿಗೂ ಕಥೆಯಾಗಬೇಡ ಎಂಬ ಎಚ್ಚರವನ್ನು ಇಟ್ಟುಕೊಂಡವರೂ ಆಗಿರುವದರಿಂದ ಮೊದಲ ಸಂಕಲನದ ಎಲ್ಲ ಪರಿಮಿತಿಗಳ ಜೊತೆಗೇ ಸಹ್ಯವೆನ್ನಿಸುತ್ತಾರೆ. ತೋಚಿದ್ದನ್ನೆಲ್ಲ ಗೀಚದೇ ಧ್ಯಾನಿಸಿದರೆ ತಲ್ಲಣಗಳಿಗೆ ತಹಬಂದಿ ನೀಡುವ ಉತ್ತರ ಈ ಕವಿಗೆ ಸಿಕ್ಕಾವು. ಆಗ ಅವರ ಪದ್ಯಗಳ ರೀತಿಯೂ ಬದಲಿಸೀತು.
‘ನಿಜಕ್ಕೂ ನಿನ್ನ ಕಾಡಿದ್ದು, ನೀ ಬೇಡಿದ್ದು ಅವನೊಬ್ಬನೇನೆ?/ನಿಜ ಹೇಳು ಮುಟ್ಟು ಮೈಲಿಗೆ ಬಸಿರು ಬಾಣಂತನ ಕಾಡಲಿಲ್ಲವೇ ನಿನ್ನ?/ನಿಜದ ಅರ್ಜುನರ ರಗಳೆ ದಾಟಲಿಕ್ಕೆ ಈ ‘ಚೆನ್ನ’ನೆಂಬೋ ಅರ್ಜುನ ನೀ ತಬ್ಬಿದ ದೋಣಿ ಮಾತ್ರವೇ?’ ಎಂದು ಕೇಳುವ ಧೈರ್ಯವಿರುವ ರಶ್ಮಿ ಹೆಗಡೆ ‘ಲೆಕ್ಕಕ್ಕೆ ಸಿಗದವರು’ ಸಂಕಲನದಲ್ಲಿ ‘ಒಳಗಿನ ಸದ್ದುಗಳು ಕಾಲನೆದುರು ಶೀಲ ಕಳೆದುಕೊಳ್ಳದಿರಲಿ’ ಎಂದೂ ಪ್ರಾರ್ಥಿಸುತ್ತಾರೆ. ‘ಎಷ್ಟು ಬೇಗ ಬಣ್ಣ ಬದಲಾಯಿಸುತ್ತವೆ-ಇಲ್ಲಿ ನಂಬುಗೆಗಳು/ಜಾತ್ರೆಯಿಂದ ಆಶೆಪಟ್ಟು ತಂದ-ಬಣ್ಣದ ಗೊಂಬೆಗಳು’ ಎಂಬ ವಾಸ್ತವ ಅರಿತಿರುವವರೂ ಆಗಿರುವುದರಿಂದ ಇವರ ಮುಂದಿನ ಕವಿತೆಗಳ ಬಗ್ಗೆ ಸಹಜ ಕುತೂಹಲ ಮತ್ತು ವಿಶ್ವಾಸವಿಟ್ಟುಕೊಳ್ಳಬಹುದೆಂದು ಅವರೇ ವಿಶ್ವಾಸ ಮೂಡಿಸುತ್ತಾರೆ.
‘ನಾನು ಗೆಲ್ಲುತ್ತೇನೆ’ ಎನ್ನುವ ಹೆಸರಿನ ಸಂಕಲನ ತಂದಿರುವ ಶ್ರೀದೇವಿ ಕೆರೆಮನೆ ಸಾಮಾನ್ಯ ಲಯ ಮತ್ತು ಪ್ರಾಸಗಳಲ್ಲೇ ಕವಿತೆಗಳನ್ನರಸುವವರು. ಹಾಗಾಗಿ ಅವರ ಪದ್ಯಗಳೆಲ್ಲ ಪ್ರಾಸದ ತ್ರಾಸದಲ್ಲಿ ಮೇಲುಸಿರು ಬಿಡುತ್ತವೆ. ದ್ರೌಪದಿ, ಮಂಥರೆ, ಗಾಂಧಾರಿ,ಊರ್ಮಿಳೆ, ಮಾಧವಿ .. . ಇವರ ಪದ್ಯಗಳಲ್ಲಿ ಬರುತ್ತಾರಾದರೂ, ಹಿರಿಯ ಕವಿಗಳ ಓದು ಮತ್ತು ಸುಲಭದಲ್ಲಿ ಪದ್ಯ ಬರೆಯಬಹುದೆನ್ನುವ ಭಾವ ಬದಲಾದರೆ ಇವರು ನಿಜದಕವಿತೆಗಳನ್ನೂ ಬರೆದಾರು.
ಮೂರೇ ಮೂರು ಸಾಲುಗಳಲ್ಲಿ ಅನುಭವವನ್ನು ಓದುಗನಿಗೆ ಹೇಗೆ ಯಶಸ್ವಿಯಾಗಿ ದಾಟಿಸಬಹುದೆಂಬುದಕ್ಕೆ ಹಾಯ್ಕುಗಳು ಪ್ರಕಾರ ಒಂದು ಉದಾಹರಣೆ. ಆದರೆ ಈಗಾಗಲೇ ಮಿನಿ-ಮಿಡಿಗಳ ಭರಾಟೆಯಲ್ಲಿ ಕನ್ನಡ ಕಾವ್ಯ ದೊರಕಿಸಿಕೊಂಡದ್ದಕ್ಕಿಂತ ಕಳೆದುಕೊಂಡದ್ದೇ ಹೆಚ್ಚು. ಟ್ಯಾಬ್ಲಾಯಿಡ್ ಹಾಗು ಗಂಭೀರ ಸಾಹಿತ್ಯ ಪ್ರೊಮೋಟ್ ಮಾಡಲು ಇಷ್ಟವಿಲ್ಲದ ಪತ್ರಿಕೆಗಳು ಮಿನಿ-ಮಿಡಿಗಳನ್ನು ಹಾಗೇ ಹಾಯ್ಕು ಎನ್ನುವ ಮೂರು ಸಾಲಿನ ಭಗವದ್ಗೀತೆಯನ್ನು ಪ್ರಕಟಿಸಿ ಅದನ್ನೊಂದು ಸಾಹಿತ್ಯ ಪ್ರಕಾರವಾಗಿ ಪೋಷಿಸುತ್ತಿವೆ. ಉಳಿದ ಜಾಗೆ ಭರ್ತಿಮಾಡಲಷ್ಟೇ ಬಳಸಬಹುದಾದ ಆ ಕ್ಷಣಕ್ಕೆ ಹಾಯ್ ಎನ್ನಿಸುವ ಇವು ಗಂಭೀರ ಓದಿಗೆ ರುಚಿಸುವುದಿಲ್ಲ. ‘ಮೂರು ಸಾಲು ಮರ’ ಎನ್ನುವ ಹಾಯ್ಕು ಸಂಕಲನ ಪ್ರಕಟಿಸಿರುವ ಡಾ.ಸಿ.ರವೀಂದ್ರನಾಥ್ ಒಟ್ಟುಗೂಡಿಸಿದ್ದರ ಅರ್ಧದಷ್ಟು ರಚನೆಗಳನ್ನು ಕೈ ಬಿಟ್ಟಿದ್ದಿದ್ದರೂ ಸಂಕಲನದ ಮೌಲ್ಯವೇನೂ ಕಡಿಮೆಯಾಗುತ್ತಿರಲಿಲ್ಲ.
ಇನ್ನು ಈ ವರ್ಷ ಪ್ರಕಟವಾದ ಅನುವಾದಗಳನ್ನು ಕುರಿತಂತೆ ಎರಡು ಮಾತು: ಮಿರ್ಜಾಗಾಲಿಬನನ್ನು ಕನ್ನಡಕ್ಕೆ ಬಗ್ಗಿಸಿ ಕೊಟ್ಟಿರುವ ಡಾ.ಎನ್.ಜಗದೀಶ್, ಕೊಪ್ಪ ಪುಸ್ತಕದ ಆಕೃತಿಗೆ ಕೊಟ್ಟ ಗಮನವನ್ನು ತರ್ಜುಮೆಗೆ ಕೊಡದ ಕಾರಣ (ಅವರು ಇಂಗ್ಲಿಷ್ ಮೂಲಕ ಅನುವಾದಿಸಿದ್ದಾರೆ) ಈಗಾಗಲೇ ಪರಿಚಿತನಾಗಿರುವ ಗಾಲೀಬ್ ಹೊಸದೇನನ್ನೂ ಇಲ್ಲಿ ಹೇಳುತ್ತಿಲ್ಲ. ಆದರೂ ಗಾಲೀಬ ಮತ್ತು ಅಂದಿನ ಸಾಮಾಜಿಕ ಸ್ಥಿತಿಗತಿಗಳ ಕುರಿತಂತೆ ಅವರು ಕೊಟ್ಟಿರುವ ಟಿಪ್ಪಣಿ ಗಾಲೀಬನ ಗಜಲುಗಳ ಕನ್ನಡ ಅವತರಿಣಿಕೆಗೆ ಮೂಲ ಉರ್ದುವನ್ನೇ ಆಶ್ರಯಿಸಿದರೆ ಒಳ್ಳೆಯದೊಂದು ಕೆಲಸ ಮಾಡಬಹುದೆಂಬುದರ ಸೂಚನೆಯಾಗಿದೆ.
ಸ್ಪ್ಯಾನಿಷ್ ಭಾಷೆಯಲ್ಲಿ ತನ್ನ ಪದ್ಯಗಳನ್ನು ಪ್ರಕಟಿಸಿದ್ದ ಪಾಬ್ಲೊ ನೆರೂದ ಜಗತ್ತಿನ ಬಹುತೇಕ ಎಲ್ಲ ಭಾಷೆಗಳಿಗೂ ಅನುವಾದಗೊಂಡಿದ್ದಾನೆ. ಸ್ಪ್ಯಾನಿಶ್‌ನಿಂದ ಇಂಗ್ಲಿಷ್‌ಗೆ ಆಮೇಲೆ ಇತರೆ ಭಾಷೆಗಳಿಗೆ ಇವು ಬರುವುದರಿಂದಾಗಿ ಮೂಲ ಸಾಂಸ್ಕೃತಿಕ ಒತ್ತಡಗಳು ಅನುವಾದಕನ ಅಭೀಪ್ಸೆಗೆ ತಕ್ಕಂತೆ ಬದಲಾಗುತ್ತಲೇ ಹೋಗುತ್ತದೆ. ಇದು ಎಲ್ಲ ಅನುವಾದಕರನ್ನೂ ಕಾಡಿದ ಕಷ್ಟ ಮತ್ತು ಸವಾಲು. ಜ.ನಾ.ತೇಜಶ್ರೀ ‘ಕಡಲ ತಡಿಯ ಗುಡಾರ’ಅನುವಾದಿಸಿದ್ದಾರೆ ಅನ್ನುವುದಕ್ಕಿಂತ ರೂಪಾಂತರಕ್ಕೆ ಪ್ರಯತ್ನಿಸಿದ್ದಾರೆ ಎನ್ನುವುದು ಸೂಕ್ತ. ನೆರೂದನ ರಾಜಕೀಯ ಮತ್ತು ಕ್ರಾಂತಿ ಕುರಿತ ಪದ್ಯಗಳನ್ನು ಬಿಟ್ಟು ಅವನ ಸಾನೆಟ್ಟುಗಳನ್ನು ಮತ್ತು ಪ್ರೇಮ ಕವಿತೆಗಳನ್ನು ಅನುವಾದಕಿ ಆಯ್ಕೆಮಾಡಿಕೊಂಡ ರೀತಿ ಸೊಗಸೆನ್ನಿಸುತ್ತದೆ. ಪುಸ್ತಕ ವಿನ್ಯಾಸವೂ ಹಿತವಾಗಿದೆ. ಕನ್ನಡದಲ್ಲಿ ಬೆರಳೆಣಿಕೆಗೆ ಸಿಗುತ್ತಿದ್ದ ಪ್ರಕಾಶಕರ ಸಂಖ್ಯೆ ಗಣನೀಯವಾಗಿ ಏರಿರುವುದನ್ನು ಗಮನಿಸಲೇಬೇಕು.
ಹಿಂದಿ ಸಿನಿಮಾದ ಹಾಡುಗಳನ್ನೂ ಸೇರಿದಂತೆ ಕೈಫಿ ಆಜ್ಮಿಯವರ ಗಜಲುಗಳು ಮತ್ತು ಕವಿತೆಗಳನ್ನು ‘ಬೆತ್ತಲೆ ರಸ್ತೆಯ ಕನಸಿನ ದೀಪ’ ಎನ್ನುವ ಹೆಸರಲ್ಲಿ ದಿ.ವಿಭಾ ತಿರಕಪಡಿ ಅನುವಾದಿಸಿದ್ದನ್ನು ಇದೀಗ ಲಡಾಯಿ ಪ್ರಕಾಶನ ಪ್ರಕಟಿಸಿ ಅನುವಾದಕಿಗೆ ಹಾಗೇ ಮೂಲಕ್ಕೆ ಗೌರವ ತಂದಿದೆ. ಅಪ್ಪಟ ಕನ್ನಡದವೇ ಅನ್ನಿಸುವ ಇಲ್ಲಿನ ಪದ್ಯಗಳು ಗತಿಸಿದ ಅನುವಾದಕಿಯ ನೆನಪನ್ನು ಹಾಗೂ ಆಕೆಯ ಆಯ್ಕೆಯ ರುಚಿಯನ್ನೂ ತೆರೆದಿಡುತ್ತವೆ.
ಅನಂತಮೂರ್ತಿ ಏನು ಮಾಡಿದರೂ ಸುದ್ದಿಯಾಗುವುದಷ್ಟೇ ಅಲ್ಲ ಅಲ್ಲೊಂದು ಹೊಸತನ ಇರುತ್ತದೆ. ಅವರ ‘ಶತಮಾನದ ಕವಿ ರಿಲ್ಕೆ’ ಪುಸ್ತಕ ಕೂಡ ಈ ಮಾತಿಗೆ ನಿದರ್ಶನ. ಈಗಾಗಲೇ ಬ್ರೆಕ್ಟ್, ಯೇಟ್ಸ್ ಮುಂತಾದವರನ್ನು ಕನ್ನಡಕ್ಕೆ ಸಮರ್ಥವಾಗಿ ಪರಿಚಯಿಸಿರುವ ಅವರು ಈ ಸಂಕಲನದಲ್ಲಿ ಬರಿಯ ರಿಲ್ಕೆ ಕವಿತೆಗಳನ್ನಲ್ಲದೇ ರಿಲ್ಕೆಯ ತಂತುಗಳನ್ನು ತಮ್ಮ ಸ್ವಂತದ ಕವಿತೆಗಳಲ್ಲೂ ಕಾಣಿಸಿದ್ದಾರೆ. ಜೊತೆಗೆ ಅನುವಾದವೆನ್ನುವ ಮಹಾಯಜ್ಞದಲ್ಲಿ ಅವರು ಅನುಸರಿಸಿದ ವಿಧಾನವನ್ನು ಟಿಪ್ಪಣಿಸಿ (ಓ.ಎಲ್.ಎನ್ ಅವರ ಟಿಪ್ಪಣಿಯೂ ಸೇರಿದಂತೆ ಪ್ರಕಟಿಸಿ) ಇತರ ಅನುವಾದಕರಿಗೆ ಮಾದರಿಯೂ ಆಗಿದ್ದಾರೆ.
ಹೃದಯ ಬುದ್ಧಿಗಳನ್ನು ಏಕಕಾಲದಲ್ಲಿ ಆವರಿಸಿಕೊಳ್ಳುವ ‘ಕವಿ ಸಮಯ’ ಈ ಹೊತ್ತಿನ ದಂದುಗಗಳಲ್ಲಿ ಸಿಕ್ಕದಿರುವಂಥದು. ಹಳಬರೆಲ್ಲ ತಮಗೆ ಸಿದ್ಧಿಸಿದ ಹಾದಿಯಲ್ಲಿ ಅಲ್ಲೇ ಗಿರಕಿ ಹೊಡೆಯುತ್ತ, ಮತ್ತೆ ಮತ್ತೆ ಅವವೇ ಪ್ರತಿಮೆ ರೂಪಕಗಳಲ್ಲಿ ಅವರದೇ ಮಾದರಿಗಳಲ್ಲಿ ಮುಂದುವರೆಯುತ್ತಿರುವಾಗ ಹೊಸಬರಂತೂ ನಿಶ್ಯಕ್ತ ಸಾಲುಗಳಲ್ಲಿ ನಿಲ್ಲಲೂ ಆಗದಂಥ ಸ್ಥಿತಿಯಲ್ಲಿದ್ದಾರೆ. ತತ್ವ ಸಿದ್ಧಾಂತಗಳ ಚಾಣಾಕ್ಷ ಹೆಣಿಗೆಯನ್ನೇ ಕಾವ್ಯವೆಂದು ನಂಬಿರುವ ಕವಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಈ ವರ್ಷ ಪ್ರಕಟವಾದ ಕವನ ಸಂಕಲನಗಳ ಜೊತೆಗೇ ಪ್ರಕಟವಾದ ಅನುವಾದಗಳು ಹೇಗೆ ನಮ್ಮನ್ನು ಶ್ರೀಮಂತಗೊಳಿಸಿವೆ ಎನ್ನುವ ಬೆರಗನ್ನಷ್ಟೇ ನಿಮ್ಮೊಂದಿಗೆ ಹಂಚಿಕೊಳ್ಳುತ್ತ (ಈ ವರ್ಷ ಪ್ರಕಟವಾದ ಸಂಕಲನಗಳ ಪ್ರಾತಿನಿಧಿಕ ಅಂಶಗಳನ್ನಿಟ್ಟುಕೊಂಡು ಆಲೋಚಿಸಹೋದರೆ ಅದೇ ಒಂದು ಪ್ರೌಢ ಪ್ರಬಂಧಕ್ಕಾಗುವ ವಸ್ತು ಎನ್ನಿಸಿದ್ದರಿಂದ ಪುಟಮಿತಿಯ ಕಾರಣದಿಂದಾಗಿ ಇದಕ್ಕಿಂತ ಹೆಚ್ಚು ಹೇಳುವುದು ಸಾಧ್ಯವಾಗುತ್ತಿಲ್ಲ) ಈ ಲೇಖನವನ್ನು ಪರಿಸಮಾಪ್ತಿಗೊಳಿಸುತ್ತಿದ್ದೇನೆ.
(ಋಣ: ಸಂಚಯ ಸಾಂಸ್ಕೃತಿಕ ಪತ್ರಿಕೆ ಸಂಚಿಕೆ ೮೪)

ಗುರುವಾರ ೧೯ ನವೆಂಬರ್ ೨೦೦೯

ಮಣ್ಣಿನ ವಾಸನೆ ಉಳಿಸಿಕೊಂಡ ಗೋಡೆಗೆ ಬರೆದ ನವಿಲು

ಅತ್ಯಂತ ಜನಪ್ರಿಯ ಸಾಹಿತ್ಯ ಪ್ರಕಾರವಾದ ಸಣ್ಣಕತೆ ಕಾಲದಿಂದ ಕಾಲಕ್ಕೆ ತನ್ನೊಳಗಿನ ಆಂತರಿಕ ಶಿಸ್ತನ್ನು ಬದಲಿಸಿಕೊಳ್ಳದೆಯೂ ಮೇಲ್ನೋಟದ ಬದಲಾವಣೆಗಳಿಗೆ ಪಕ್ಕಾಗುತ್ತಲೇ ಬಂದಿದೆ. ಆಧುನಿಕ ಕನ್ನಡ ಕಥಾಜಗತ್ತಂತೂ ವರ್ತಮಾನದ ಬದುಕಿನ ಎಲ್ಲ ಮುಖಗಳನ್ನು ಒಳಗೊಳ್ಳುತ್ತಲೇ ಸ್ಥಿತ್ಯಂತರದ ಸಾಕ್ಷಿಯಾಗಿ ದಾಖಲಾಗುತ್ತಲೇ ಇದೆ. ಒಂದು ಸಿದ್ಧ ಚೌಕಟ್ಟನ್ನು, ‘ಕತೆ’ ಇರಲೇಬೇಕೆಂಬ ನಿಯಮವನ್ನೂ ಮೀರಿ ಈ ಹೊತ್ತಿನ ಕಥೆಗಾರರು ಬರೆಯತೊಡಗಿದ್ದಾರೆ. ಬಂಡಾಯ ಮತ್ತು ಹೋರಾಟದ ಹಾದಿಗಳನ್ನು ಮೇಲ್ನೋಟಕ್ಕೆ ಬಿಟ್ಟುಕೊಟ್ಟಂತಿದ್ದರೂ, ಬದುಕಿನ ಒಂದು ಸಣ್ಣ ಘಟನೆಯನ್ನೂ ವಿಸ್ತರಿಸಿ ಅದನ್ನು ಮಾನವೀಯ ನೆಲೆಯ ಮೂಲಕ ಕತೆಕಟ್ಟಿಕೊಡುವ ಪ್ರಯತ್ನ ಢಾಳಾಗಿ ಕಾಣಸಿಗುತ್ತಿದೆ.
ಇದಕ್ಕೆ ಇತ್ತಿಚಿನ ಉದಾಹರಣೆಯೆಂದರೆ ಸಂದೀಪ ನಾಯಕರ ‘ಗೋಡೆಗೆ ಬರೆದ ನವಿಲು’. 2009ನೇ ಸಾಲಿನ ಛಂದ ಪುಸ್ತಕ ಬಹುಮಾನ ಪಡೆದ ಈ ಕಥಾಸಂಕಲನದಲ್ಲಿ ಇರುವ ಒಂದು ಡಜನ್ ಕತೆಗಳೆಲ್ಲವೂ ಇದುವರೆಗೂ ನಾವು ಕತೆ ಎಂದು ನಂಬಿರುವ ರೀತಿಯಿಂದ ಭಿನ್ನವಾಗಿ, ಆದರೆ ಬದುಕಿನ ಸಣ್ಣ ಸಣ್ಣ ಘಟನೆಗಳನ್ನೇ ಮೂಲವಾಗಿಟ್ಟುಕೊಂಡು ಹೆಣೆದಿರುವ ಬದುಕಿನ ಮೌಲ್ಯ ಮಾಪನದಂತಿವೆ. ಇಲ್ಲಿನ ಎಲ್ಲ ಕಥೆಗಳ ಮೂಲ ಉತ್ತರಕನ್ನಡದ ನೆಲ ಮತ್ತು ಅಲ್ಲಿನ ಸಂಸ್ಕೃತಿಗಳನ್ನು ಆಧರಿಸಿದುವೇ ಆಗಿರುವುದೂ ವಿಶೇಷವಾಗಿದೆ. ಸಂಕಲನದ ಕತೆಗಳ ಕೆಲಪಾತ್ರಗಳು ಹಲವು ಕತೆಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುವುದೂ ಒಂದು ಬಗೆಯಲ್ಲಿ ಕತೆಗಾರ ಆ ಮೂಲಕ ಹಳೆಯ ಕತೆಗಳ ಕೊಂಡಿಯನ್ನು ಬೇರೆ ಬೇರೆ ಕತೆಗಳ ಕೇಂದ್ರ ಪಾತ್ರಗಳನ್ನು ವಿಮರ್ಶಿಸಲು, ಉದ್ದೀಪಿಸಲು ಬಳಸಿಕೊಂಡ ತಂತ್ರವೆಂದೇ ನನಗನಿಸುತ್ತಿದೆ. ನಗರ ಕೇಂದ್ರಿತ ಸಮಸ್ಯೆಗಳಿಲ್ಲದಿದ್ದರೂ ಇಲ್ಲಿನ ಬಹುತೇಕ ಕತೆಗಳ ಪಾತ್ರಗಳು ನಗರದಲ್ಲಿದ್ದೂ ಊರಿನ ಧ್ಯಾನದಲ್ಲಿ ನಿರತವಾಗಿರುವುದು ಮತ್ತು ಒಂದಲ್ಲ ಒಂದು ವಿಧದಿಂದ ಮತ್ತೆ ಊರಿನ ತೆಕ್ಕೆಗೆ ಬೀಳುವುದೂ ನಡೆದಿದೆ. ಜಾತಿಯ ಸಮಸ್ಯೆ, ಪರಿಸರ ಹಾನಿಯ ಎಚ್ಚರ, ಶೋಷಣೆಯೇ ಮುಂತಾದ ಸಾಮಾಜಿಕ ಅನಿಷ್ಟಗಳೂ ಇಲ್ಲಿನ ಕತೆಗಳಲ್ಲಿ ಇದ್ದರೂ ಅವನ್ನು ದೊಡ್ಡ ಭೂತವಾಗಿಸಿ ಅಥವ ಅವುಗಳ ವಿರುದ್ಧದ ಬಂಡಾಯದ ಕೂಗಾಗಲೀ ಇಲ್ಲದಿರುವುದೂ ಗಮನಿಸಬೇಕಾದ ವಿಷಯವೇ ಆಗಿದೆ. ಸಂಯಮ ಮೀರದ ಹದವಾದ ಭಾಷೆ ಇಲ್ಲಿನ ಕತೆಗಳ ಮುಖ್ಯ ಬಂಡವಾಳ. ಕೆಲವೇ ಕೆಲವು ಪಾತ್ರಗಳಲ್ಲೇ ಕತೆಯನ್ನು ಬೆಳೆಸಿ ಮುಗಿಸುವ ರೀತಿ ಕೂಡ ಗಮನಿಸಬೇಕಾದ ಸಂಗತಿಯಾಗಿದೆ. ಏಕೆಂದರೆ ಸಣ್ಣಕತೆಯೊಂದರಲ್ಲೇ ಕಾದಂಬರಿಗಾಗುವಷ್ಟು ಪಾತ್ರಗಳನ್ನು ಸೃಷ್ಟಿಸಿ ಅವುಗಳ ಪೋಷಣೆಗೆ ಗಮನ ಕೊಡದೇ ಬರೀ ಉದ್ದೋಉದ್ದುದದ ಕತೆಗಳನ್ನು ಬರೆಯುತ್ತಿರುವವರ ನಡುವೆ ಸಂದೀಪ ನಾಯಕರ ಕತೆಗಳೆಲ್ಲವೂ ಹೆಚ್ಚೆಂದರೆ ಹತ್ತುಪುಟಗಳ ಮಿತಿಯಲ್ಲೇ ಮುಗಿದುಬಿಡುವುದೂ ಮತ್ತೊಂದು ಅಂಶ. ಪ್ರಾಯಶಃ ಸಂದೀಪರು ಸಾಪ್ತಾಹಿಕವೊಂದರ ಉಸ್ತುವಾರಿ ನೋಡುತ್ತಿರುವ ಕಾರಣ ಉಳಿದ ಬರಹಗಾರರ ಬರಹಗಳನ್ನು ಪುಟಮಿತಿ, ಪದಮಿತಿಗಳ ಲೆಕ್ಕಾಚಾರದಲ್ಲಿ ‘ಕತ್ತರಿಸುತ್ತಿರುವ’ ಅನುಭವ ಇಲ್ಲಿನ ಕತೆಗಳು ಉದ್ದವಾಗದಂತೆ ನಿಯಂತ್ರಣ ಹೇರಿದೆಯೋ ಎಂಬ ಅನುಮಾನವೂ ಹುಟ್ಟುತ್ತದೆ. ಉದಾಹರಣೆಗೆ ‘ಬಾಗಿಲ ಮುಂದೆ’ ಎನ್ನುವ ಕತೆಯಂತೂ ಸುರುವಾಗುವ ಮೊದಲೇ ಮುಗಿದುಬಿಡುತ್ತದೆ. ಓದುಗನನ್ನು ಥಟ್ಟನೆ, ಹಟಾತ್ತನೆ ಸರಳ ಸಂಗತಿಯ ಅನಾವರಣದ ಮೂಲಕ ಖುಷಿಗೊಳಿಸಬಹುದೆಂಬ ಲೆಕ್ಕಾಚಾರ ಇಲ್ಲೆಲ್ಲ ಕೆಲಸ ಮಾಡಿದಂತಿದೆ.
ಸ್ವಗತದ ನಿರೂಪಣೆ ಮತ್ತು ಉತ್ತಮಪುರುಷದ ಗೊಂದಲಗಳಿಲ್ಲದೇ ಕತೆಗಳನ್ನು ಕಟ್ಟುವುದರಲ್ಲಿ ಕತೆಗಾರರು ಗೆದ್ದಿದ್ದಾರಾದರೂ ಒಂದು ಓದಿನ ನಂತರ ಮರು ಓದು ಬಯಸುವ ವಸ್ತುಗಳು ಇಲ್ಲಿನ ಕತೆಗಳಲ್ಲಿದ್ದರೂ ತೀರ ಸರಳೀಕೃತ ಕಥನ ವಿಧಾನದಿಂದಾಗಿ ಆ ಅವಕಾಶವನ್ನು ಕತೆಗಾರರೇ ಕಳೆದುಕೊಂಡಿದ್ದಾರೆ. ಬಾಗಿಲ ಮುಂದೆ, ಕಂಡಷ್ಟೇ ಆಕಾಶ ಮತ್ತು ಸಹಿ ಕತೆಗಳು ಇನ್ನೂ ವಿಸ್ತರಿಸಬಹುದಾದ ಅವಕಾಶವನ್ನು ಕಳೆದುಕೊಂಡ ಕಾರಣಕ್ಕೆ ಬರಿಯ ತುಟಿತುದಿಯ ಅನುಕಂಪವನ್ನಷ್ಟೇ ಹುಟ್ಟಿಸುತ್ತವೆ. ಪ್ರಾಯಶಃ ಕತೆಗಾರರು ಉದ್ದನೆಯ ಕತೆಗಳನ್ನು ಓದುಗರು ಇಷ್ಟಪಡಲಾರರೆಂಬ ತಮ್ಮದೇ ನಿರ್ಧಾರದಲ್ಲಿ ಎಡವಿದರೇನೋ ಅನ್ನಿಸುತ್ತದೆ. ಈ ಮೂರೂ ಕತೆಗಳೂ ಸ್ವಲ್ಪ ಪರಿಶ್ರಮ ಪಟ್ಟಿದ್ದರೆ ಬಹಳ ಕಾಲ ಕಾಡುವ ವಸ್ತುವನ್ನಿಟ್ಟುಕೊಂಡಿದ್ದೂ ಅವಸರದಲ್ಲಿ ಮುಗಿಸಿಬಿಟ್ಟ ಕಾರಣ ಬರಿಯ ಹಳಹಳಿಕೆಗಳಾಗೇ ಉಳಿದುಬಿಡುತ್ತವೆ. ‘ಆನೆ ಸಾಕಿದ ಮನೆಗೆ ಎರಡು ಹೂ ದಂಡೆ’ ಇಂಥ ಮಿತಿಗಳನ್ನು ಮೀರಿದ ಕಾರಣ ಸಂಕಲನದ ಯಶಸ್ವೀ ಕತೆಗಳಲ್ಲೊಂದಾಗಿದೆ. ‘ಕರೆ’ಯ ಮೋನಪ್ಪ ಮತ್ತು ‘ಮರೆತು ಹೋದ ಒಂದು ಸಂಬಂಧ’ದ ವೆಂಕಟಣ್ಣ ವರ್ತಮಾನದಲ್ಲಿ ಚಲಾವಣೆ ಕಳಕೊಂಡ ನಾಣ್ಯಗಳಾಗಿ ಕಾಡುತ್ತಾರೆ. ಹಾಗೆಯೇ ಹಿರಿಯರು ಆಧುನಿಕ ಜೀವನದಲ್ಲಿ ಹೇಗೆ ಮೂಲೆಗುಂಪಾಗುತ್ತಿದ್ದಾರೆ ಮತ್ತವರ ಪ್ರಸ್ತುತತೆಯನ್ನೇ ಕಳಕೊಳ್ಳುತ್ತಿದ್ದಾರೆ ಅನ್ನುವುದನ್ನೂ ದಟ್ಟವಾಗಿ ದಾಖಲಿಸಿವೆ. ‘ಉರುಳಿತೊಂದು ಮರ’ ಕತೆಗಾರರು ತಮಗೂ ಪರಿಸರ ಪ್ರಜ್ಞೆ ಕಾಡುತ್ತಿದೆ ಎನ್ನುವ ಕಾರಣಕ್ಕೆ ಬರೆದಂತೆ ಕಾಣುತ್ತದೆ. ಉಳಿದ ಕತೆಗಳಲ್ಲಿರುವ ‘ಓಟ’ ಮತ್ತು ಹಿಡಿತ ಸಿಗದ ಕಾರಣ ಹಾಗೂ ನಾಯಕನನ್ನು ಉದ್ಧಾಮನನ್ನಾಗಿ ಚಿತ್ರಿಸಲೇಬೇಕೆಂಬ ಹಟ ಇಲ್ಲಿ ಕೆಲಸ ಮಾಡಿರುವ ಕಾರಣ ‘ಉರುಳಿತೊಂದು ಕತೆ’ಯಾಗಿಬಿಟ್ಟಿದೆ. ‘ಇಲ್ಲಿ ಬಂದೆವು ಸುಮ್ಮನೆ’ ಮನುಷ್ಯನ ಆಸೆಗಳ ಮತ್ತು ಲಂಪಟತನದ ಅನಾವರಣವಾಗಿರುವುದರಿಂದ ಹಾಗೂ ಒಂದಲ್ಲ ಒಂದು ಕಾರಣಕ್ಕೆ ಬೇಸ್ತು ಬೀಳಲೇಬೇಕಾದ ಅನಿವಾರ್ಯತೆಗಳು ಎಲ್ಲರ ಬದುಕಿನಲ್ಲೂ ಘಟಿಸುವುದರಿಂದ ಓದುವಾಗ ಹಾಯೆನ್ನಿಸುತ್ತದೆ. ಅವರಿವರ ನಡುವಿನ ಆಟದ ದಾಳವಾದ ಮೋಹನನಂಥ ಪಾತ್ರಗಳನ್ನು ಕತೆಗಾರರು ಏಕೋ ಪೋಷಿಸಲು ಮನಸ್ಸು ಮಾಡದ್ದರಿಂದ ಪಾಪ ಈ ಕತೆಯ ಮೋಹನ ಮತ್ತು ‘ಒಂಭತ್ತು, ಎಂಟು, ಎಂಟು’ ಕತೆಯ ಮಂಕಾಳಜ್ಜಿ ಬಡವಾಗಿದ್ದಾರೆ. ಹಾಗೆ ನೋಡಿದರೆ ಹೇಳಹೊರಟದ್ದು ಒಂದಾದರೆ ಆಗುವುದು ಮತ್ತೊಂದಾಗುವ ಕಾರಣದಿಂದಾಗಿ ‘ಒಂಭತ್ತು, ಎಂಟು, ಎಂಟು’ ಮತ್ತು‘ಬೊಂಬೆಗೊಂದು ಸೀರೆ’ ಗಮನ ಸೆಳೆಯುತ್ತವೆ. ದಾರಿ ತಪ್ಪಿದ ಅಕ್ಕನ ಹುಡುಕಾಟದಲ್ಲಿನ ದೇವಿ ಮತ್ತು ಮನೆ ಬಿಟ್ಟು ಓಡಿ ಬಂದ ಶರಣ್ ಕಡೆಗೂ ವ್ಯವಸ್ಥೆಯ ಕೈಯಲ್ಲಿನ ಗೊಂಬೆಗಳಾಗುತ್ತಾರೆ. ಮೂಲತಃ ಅಲ್ಪತೃಪ್ತಿಯ ಈ ಎರಡೂ ಪಾತ್ರಗಳನ್ನೂ ಅವರ ಯತ್ನದಲ್ಲಿ ಉತ್ತೀರ್ಣರನ್ನಾಗಿಸದ ಕತೆಗಾರರು ಆ ಕಾರಣಕ್ಕೇ ಮೆಚ್ಚುಗೆ ಗಳಿಸುತ್ತಾರೆ. ಇದಕ್ಕೆ ತದ್ವಿರುದ್ಧವಾಗಿ ‘ಇನ್ನೊಂದೇ ಕಥೆ’ಯ ಶಶಕ್ಕ ಮತ್ತು ‘ನಿನ್ನಲ್ಲೇ ಇರಲಿ’ಯ ಮುಕುಂದರನ್ನು ದಡ ಸೇರಿಸುವ ಕತೆಗಾರರು ಆಶ್ಚರ್ಯ ಹುಟ್ಟಿಸುತ್ತಾರೆ.
ವ್ಯಕ್ತಿಯ ಒಳತುಮುಲಗಳನ್ನು, ಆ ವ್ಯಕ್ತಿ ಲೌಕಿಕದ ವ್ಯವಹಾರಗಳಲ್ಲಿ ಕಾಯ್ದುಕೊಳ್ಳಬೇಕಾದ ಎಚ್ಚರವನ್ನೂ ಜೊತೆಜೊತೆಯಾಗಿ ನಿರ್ವಹಿಸುವುದು ಕತೆಗಾರರಿಂದ ಸಾಧ್ಯವಾಗಿರುವುದು ಒಟ್ಟೂ ಸಂಕಲನದ ಧನಾತ್ಮಕ ಯತ್ನವಾಗಿದೆ. ಆದರೆ ದುರಂತಗಳಲ್ಲೇ ಅಂತ್ಯವಾಗುವ ಇಲ್ಲಿನ ಬಹುತೇಕ ಕತೆಗಳು ನಿರಾಶವಾದವನ್ನು ಪುಷ್ಟೀಕರಿಸುವುದು ಅಷ್ಟೇ ಋಣಾತ್ನಕವಾಗಿದೆ. ನಿರಾಶೆ, ವಿಷಾದ, ಸೋಲುಗಳಲ್ಲೇ ಉಳಿಯುವ ಇಲ್ಲಿನ ಬಹುತೇಕ ಪಾತ್ರಗಳು ಇರುವುದೇ ಸೀಮಿತ ಚೌಕಟ್ಟಿನ ಸರಳ ಸಮಸ್ಯೆಗಳಲ್ಲಿ. ಈ ಪಾತ್ರಗಳು ಸೀಮಿತ ಪ್ರದೇಶದ ಸರಳ ಸಮಸ್ಯೆಗಳಲ್ಲಿ ಒದ್ದಾಡುತ್ತಿದ್ದರೂ ಅವನ್ನು ಉತ್ಪ್ರೇಕ್ಷಿಸದ ಕಥನ ಕ್ರಮ ಮತ್ತು ಅಂಥ ಸನ್ನಿವೇಶ ನಿರ್ಮಾಣದ ಕಾರಣ ಸಣ್ಣ ಚೌಕಟ್ಟಿನಲ್ಲಿ ಬಿಡಿಸಿಟ್ಟ ಚಿತ್ರಗಳಾಗಿವೆ. ಇಲ್ಲಿನ ಎಲ್ಲ ಕತೆಗಳ ಪಾತ್ರಗಳೂ ಅರೆಶಿಕ್ಷಿತರಾಗಿರುವುದು ಮತ್ತು ಕೆಳಸ್ತರದ ಸಮಾಜದಿಂದ ಬಂದವರಾಗಿರುವುದೂ ಸಂಕಲನದ ವಿಶೇಷಗಳಲ್ಲೊಂದಾಗಿದೆ. ಜೊತೆಗೇ ಬರಿಯ ಮುಜುಗರದ ಕಾರಣದಿಂದಾಗಿ ವಿನಮ್ರರಂತಿರಬೇಕಾದ ಪಾತ್ರಗಳ ಅನಿವಾರ್ಯತೆಯನ್ನೂ ಚಿತ್ರಿಸಿದೆ.
‘ಗೋಡೆಗೆ ಬರೆದ ನವಿಲು’ ಹೆಸರಿನ ಕತೆ ಸಂಕಲನದಲ್ಲಿಲ್ಲದೇ ಹೋದರೂ ಒಟ್ಟು ಸಂಕಲನ ಮನೆಯ ಮುಂದಿನ ಗೋಡೆಯ ಅಲಂಕಾರಕ್ಕೆ ಬರೆದ ನವಿಲಿನ ಚಿತ್ರದ ಹಾಗೆ ಕತೆಗಾರರು ಅವರ ಕುಶಲ ಕತೆಗಾರಿಕೆಗೆ ತಾವೇ ಕೊಟ್ಟುಕೊಂಡ ಹೆಸರಾಗಿದೆ. ‘ಅಗಣಿತ ಚಹರೆ’ ಸಂದೀಪ ನಾಯಕರ ಮೊದಲ ಪ್ರಕಟಿತ ಕವನ ಸಂಕಲನ. ಕವಿಯಾಗಿ ಅವರಿಗಿದ್ದ ಭರವಸೆಗಳು ಕತೆಗಾರರಾದ ಕೂಡಲೇ ಏಕೆ ಹೊರಟುಹೋದವೋ ತಿಳಿಯದಾಗಿದೆ. ಆದರೆ ಕವಿತೆಗಳ ಜೊತೆಯಲ್ಲಿದ್ದ ಯಕ್ಷಗಾನ, ತಾಜಾ ಮೀನು, ಬಸ್ ಸ್ಟಾಂಡು, ಬಂಡಿಹಬ್ಬ ಇಲ್ಲಿನ ಕತೆಗಳಿಗೂ ವಿಸ್ತರಿಸಿರುವ ಕಾರಣಕ್ಕೆ ‘ಮಣ್ಣಿನ ವಾಸನೆ’ಉಳಿಸಿಕೊಂಡ ಕತೆಗಾರರಾಗಿಯೂ ಉಳಿಯುತ್ತಾರೆ.
ಪುಸ್ತಕ: ಗೋಡೆಗೆ ಬರೆದ ನವಿಲು. (ಕಥಾ ಸಂಕಲನ)
ಕತೆಗಾರ: ಸಂದೀಪ ನಾಯಕ
ಪ್ರಕಾಶಕರು: ಛಂದ ಪುಸ್ತಕ, ಬೆಂಗಳೂರು ಬೆಲೆ:ರೂ ೬೦/-

ನುಡಿಸಿರಿ- ಸಾಹಿತ್ಯ ಮತ್ತು ಸಂಸ್ಕೃತಿಗಳ ಭವ್ಯ ಮಿಲನ

ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ‘ನುಡಿಸಿರಿ-೨೦೦೯’ರಲ್ಲಿ ಭಾಗವಹಿಸಿದ ಸಂಭ್ರಮ, ಖುಷಿ ಮತ್ತು ಸಮ್ಮೇಳನವನ್ನು ಆಯೋಜಕರು ರೂಪಿಸಿದ್ದ ರೀತಿಗಳನ್ನು ಹಂಚಿಕೊಳ್ಳುವ ಯತ್ನ ಈ ಲೇಖನದ್ದು.
ನಮ್ಮಲ್ಲಿ ಬಹಳ ಜನ ಸಾಹಿತ್ಯ ಸಮ್ಮೇಳನಗಳನ್ನು ‘ಸಂತೆ’ ಎಂದು ಕರೆದಿದ್ದೇವೆ/ಭಾವಿಸಿದ್ದೇವೆ. ಆಯೋಜಕರ ಮರ್ಜಿಗನುಗುಣವಾಗಿ, ಆಳುವ ಸರ್ಕಾರದ ನೀತಿಗನುಗುಣವಾಗಿ ಸಮ್ಮೇಳನಗಳ ಕಾರ್ಯಕ್ರಮಗಳು ರೂಪುಗೊಳ್ಳುವುದರಿಂದಾಗಿ ಇಂಥ ಅಪವಾದಗಳು ತಪ್ಪಿದ್ದಲ್ಲ. ಅದರಲ್ಲೂ ಕನ್ನಡ ಸಾಹಿತ್ಯ ಸಮ್ಮೇಳನಗಳಂತೂ ‘ಸಾಹಿತ್ಯ’ವೊಂದನ್ನು ಬಿಟ್ಟು ಉಳಿದೆಲ್ಲ ಚಟುವಟಿಕೆಗಳನ್ನೂ ನಡೆಸಿರುತ್ತವೆ. ಹಲವು ಕಾರಣಗಳಿಂದಾಗಿ ಪದೇ ಪದೇ ಮುಂದೂಡಲ್ಪಡುವ ಈ ಸಮ್ಮೇಳನಗಳು ಸ್ವಾಗತ ಸಮಿತಿಯ ಅಧ್ಯಕ್ಷರ ಮತ್ತು ಎಲ್ಲಿ ಸಮ್ಮೇಳನ ನಡೆಯಲು ಆಯೋಜಿಸಲಾಗಿದೆಯೋ ಆ ಸ್ಥಳದ ಸಚಿವ/ಶಾಸಕ/ಸಂಸದರ ಕೃಪಾಶೀರ್ವಾದದಿಂದ ನಡೆಯಬೇಕಿರುವ ಕಾರಣ ರಾಜಕೀಯ ಬದಲಾವಣೆಗಳೂ ಇಂಥ ಸಮ್ಮೇಳನಗಳ ಹಣೆಯ ಬರಹವನ್ನೇ ಬದಲಾಯಿಸಿಬಿಡುತ್ತವೆ. ಊಟ-ತಿಂಡಿಗಳ ವಿತರಣೆ, ಪ್ರದೇಶವಾರು ಭೋಜನ ವಿಶೇಷತೆಯನ್ನು ಪ್ರದರ್ಶಿಸುವ ಸಲುವಾಗಿ ಮಠ, ಮಾನ್ಯಗಳನ್ನೂ ಓಲೈಸಿಲಾಗಿರುತ್ತದೆ. ಹೀಗೆ ಸಾಹಿತ್ಯ ಸಂಗತಿಗಳಿಗಿಂತಲೂ ಸಾಹಿತ್ಯೇತರ ಸಂಗತಿಗಳೇ ಮುಖ್ಯವಾಗಿ ಸಮ್ಮೇಳನಾಧ್ಯಕ್ಷರ ಆಯ್ಕೆಯಿಂದಲೂ ಕಸರತ್ತುಗಳ ಮೇಲೆ ಕಸರತ್ತುಗಳು ನಡೆದು ಅದು ಇಡೀ ಸಮ್ಮೇಳನದ ಸ್ವರೂಪವನ್ನೇ ಬದಲಿಸಿಬಿಡುವುದೂ ಸರ್ವೇ ಸಾಮಾನ್ಯವಾದ ವಿಷಯವಾಗಿದೆ. ಸಮ್ಮೇಳನಗಳಲ್ಲಿ ಮಂಡಿಸಲಾಗುವ ನಿರ್ಣಯಗಳಂತೂ ಹನುಮಂತನ ಬಾಲದಂತೆ ಬೆಳೆದೂ, ಬೆಳೆದೂ ಬೆಳೆಯುತ್ತವೇ ವಿನಾ ಅವುಗಳ ಅನುಷ್ಠಾನ ಎಂಬುದಂತೂ ಯಾವ ಸರ್ಕಾರಗಳಿಂದಲೂ ಸಾಧ್ಯವಾಗದಿರುವುದೂ ಇಂಥ ನಿರ್ಣಯಗಳ ಮೇಲಿನ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತಿದೆ. ಸಮ್ಮೇಳನದ ವೆಚ್ಚಕ್ಕಾಗಿ ಸರ್ಕಾರ ಕೊಡಮಾಡುವ ಅನುದಾನ, ಈಗಂತೂ ಅದು ಒಂದು ಕೋಟಿ ರೂಪಾಯಿ, ಅದರ ಮೇಲೆ ಸರ್ಕಾರೀ ನೌಕರರ ಒಂದು ದಿನದ ವೇತನ, ಸ್ಥಳೀಯ ಸಂಸ್ಥೆಗಳ ಹಣಕಾಸಿನ ಬೆಂಬಲ, ಮಠ ಮಾನ್ಯಗಳ ಸಹಾಯ ಹೀಗೆ ಒಟ್ಟೂ ಸೇರುವ ಹತ್ತಿರ ಹತ್ತಿರ ನಾಲ್ಕು ಕೋಟಿ ರೂಪಾಯಿ ಒಂದು ಸಮ್ಮೇಳನಕ್ಕೆ ಬಳಸಲಾಗುತ್ತದೆ.
ಮೂರು ದಿನಗಳ ನುಡಿಜಾತ್ರೆಗೆ ಅದ್ದೂರಿ ಖರ್ಚು ಅನಿವಾರ್ಯವೆಂದು ಒಪ್ಪಿಕೊಳ್ಳಬಹುದಾದರೂ ಇಂಥ ಸಮ್ಮೇಳನಗಳ ಫಲಶೃತಿ ಎಷ್ಟರ ಮಟ್ಟಿಗೆ ನಾಡು-ನುಡಿಗಳ ಬೆಳವಣಿಗೆಗೆ ಪೂರಕವಾಗಿದೆ ಮತ್ತು ಸಫಲವಾಗಿದೆ ಎಂಬ ಪ್ರಶ್ನೆ ನಿರುತ್ತರವಾಗಿಯೇ ಉಳಿಯುತ್ತದೆ. ಒಂದು ನಿರ್ದಿಷ್ಟ ವಿಚಾರದ ಮೇಲೆಂದೂ ಚರ್ಚೆ ನಡೆಸದ ಈ ಸಮ್ಮೇಳನಗಳಲ್ಲಿ ಪಾಲ್ಗೊಳ್ಳುವ ವಿಷಯ ತಜ್ಞರ ಉಪನ್ಯಾಸಗಳಿಗಿಂತಲೂ ಮುಖ್ಯಮಂತ್ರಿಗಳ/ರಾಜಕಾರಣಿಗಳ ರಾಜಕೀಯ ಭಾಷಣಗಳೇ ನಮ್ಮ ಮಾಧ್ಯಮಗಳಲ್ಲಿ ಸಿಂಹ ಪಾಲು ಪಡೆಯುತ್ತವೆ. ಇದುವರೆಗೂ ನಾಲ್ಕೈದು ಸಮ್ಮೇಳನಗಳಲ್ಲಿ ಪ್ರತಿನಿಧಿಯಾಗಿ/ಆಹ್ವಾನಿತನಾಗಿ ಭಾಗವಹಿಸಿರುವ ನಾನು ಯಾವ ಕಾರ್ಯಕ್ರಮವೂ ನಿಗದಿತ ಸಮಯಕ್ಕೆ ಪ್ರಾರಂಭವಾಗಿ ನಿಗದಿತ ಸಮಯಕ್ಕೆ ಮುಕ್ತಾಯವಾದುದನ್ನು ಕಂಡೇ ಇಲ್ಲ. ವಿಷಯವನ್ನು ಪ್ರವೇಶಿಸದೆಯೇ ‘ವಿಚಾರ ಪೂರ್ಣ’ ಭಾಷಣವನ್ನು ನೀಡಿದ ಅಪ್ರತಿಮರನ್ನೂ ಇಂಥ ಸಮ್ಮೇಳನಗಳಲ್ಲಿ ಕಂಡಿದ್ದೇನೆ. ತಮ್ಮ ಹೆಸರು ಒಂದಲ್ಲ ಒಂದು ಗೋಷ್ಠಿಯಲ್ಲಿ ಕನಿಷ್ಠ ಪ್ರತಿಕ್ರಿಯೆಯಲ್ಲಾದರೂ ಇರದಿದ್ದಲ್ಲಿ ಅಂಥ ಸಮ್ಮೇಳನಗಳಿಂದ ದೂರ ಉಳಿಯುವ ‘ಗಣ್ಯ ಸಾಹಿತಿ’ಗಳನ್ನೂ ಕಂಡಿದ್ದೇನೆ. ಇಷ್ಟೆಲ್ಲ ಪೀಠಿಕೆ ಇಲ್ಲದೇ ಮೂಡುಬಿದರೆಯ ‘ನುಡಿಸಿರಿ’ಯನ್ನು, ಅಲ್ಲಿ ನಡೆದ ನಿಜ ಸಾಹಿತ್ಯ ಸಮಾರಾಧನೆಯನ್ನೂ ವರ್ಣಿಸಲಾಗುವುದಿಲ್ಲವಲ್ಲ!
ನುಡಿಸಿರಿ- ಡಾ.ಮೋಹನ ಆಳ್ವ ತಾವು ಕಂಡ ಕನಸನ್ನು ನನಸು ಮಾಡಿದ ಬಗೆ. ೨೦೦೩ರ ಸಾಹಿತ್ಯ ಸಮ್ಮೇಳನವನ್ನು ಮೂಡುಬಿದರೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ನಡೆಸಿ ಬಂದ ಅನುಭವ ಕೂಡ ಅವರ ಈ ಕನಸಿನ ಹಿಂದೆ ಕೆಲಸ ಮಾಡಿದೆ. ಸರ್ಕಾರದ ಅನುದಾನ ಪಡೆದ ಮೇಲೆ ಅದರ ಋಣಕ್ಕೆ ಬಿದ್ದ ಕಾರಣದಿಂದಾಗಿ ಪಾಲಿಸಲೇ ಬೇಕಾದ ಶಿಷ್ಟಾಚಾರವೆಂಬ ಸೋಗು ಕೂಡ ಅವರ ಮನಸ್ಸಿನ ಮೇಲೆ ಇನ್ನಿಲ್ಲದ ಪ್ರಭಾವ ಬೀರಿರಬೇಕು. ಹಾಗೆಂತಲೇ ೨೦೦೪ರಿಂದ ಈವರೆಗೆ ನಡೆಸಿರುವ ಆರು ನುಡಿಸಿರಿ ಸಮ್ಮೇಳನಗಳನ್ನು ಸರ್ಕಾರದ ಅಥವಾ ಸಾರ್ವಜನಿಕರ ವಂತಿಗೆ ಪಡೆಯದೇ ಅವರು ಯಶಸ್ವಿಯಾಗಿ ನಡೆಸಿದ್ದಾರೆ. ಸಾಹಿತ್ಯ ಸಮ್ಮೇಳನಗಳಿಗೆ ಹೋಲಿಸಿದರೆ- ಹೋಲಿಸಬಾರದು ಬಿಡಿ. ಏಕೆಂದರೆ ಸರ್ಕಾರದ/ ಆಳುವವರ ಹಂಗಿನಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳೂ ಗೊತ್ತಿದ್ದೋ/ಗೊತ್ತಿಲ್ಲದೆಯೋ ಕಾಣದ ಕೈಗಳ ಸೂತ್ರಕ್ಕೆ ಕುಣಿದಿರುತ್ತವೆ. ಆದರೆ ನುಡಿಸಿರಿ ಸಂಪೂರ್ಣವಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪ್ರಾಯೋಜಕತ್ವದಲ್ಲಿ ಮತ್ತು ಅದರ ಎಲ್ಲ ನೌಕರ ವರ್ಗದವರ ಸಹಕಾರದಲ್ಲಿ ನಡೆಯುತ್ತಿರುವುದರಿಂದ ಎಲ್ಲ ವಿಚಾರಗಳಲ್ಲೂ ಅತ್ಯಂತ ಕರಾರುವಾಕ್ಕಾಗಿ, ಗೌಜು ಗೋಜಲುಗಳಿಲ್ಲದ ನಿರ್ದಿಷ್ಠ ಪ್ರಯತ್ನವಾಗಿ ರೂಪುಗೊಳ್ಳುತ್ತಿದೆ. ಕಳೆದ ಆರು ಸಮ್ಮೇಳನಗಳಲ್ಲಿ ನುಡಿಸಿರಿ ಚರ್ಚಿಸಿದ ವಿಷಯಗಳನ್ನೇ ಗಮನಿಸಿ: ಪ್ರೊ.ಬರಗೂರು ರಾಮಚಂದ್ರಪ್ಪನವರ ಅಧ್ಯಕ್ಷತೆಯಲ್ಲಿ ೨೦೦೪ರಲ್ಲಿ ‘ಕನ್ನಡ ಮನಸ್ಸು:ಸಾಹಿತ್ಯಕ-ಸಾಂಸ್ಕೃತಿಕ ಜವಾಬ್ದಾರಿಗಳು’ ೨೦೦೫ರಲ್ಲಿ ಎಸ್.ಎಲ್.ಭೈರಪ್ಪನವರ ಅಧ್ಯಕ್ಷತೆಯಲ್ಲಿ ‘ಕನ್ನಡ ಮನಸ್ಸು: ಬೌದ್ಧಿಕ ಸ್ವಾತಂತ್ರ್ಯ’ ೨೦೦೬ರಲ್ಲಿ ಡಾ.ಚಂದ್ರಶೇಖರ ಕಂಬಾರರ ಅಧ್ಯಕ್ಷತೆಯಲ್ಲಿ ‘ಕನ್ನಡ ಮನಸ್ಸು:ಪ್ರಚಲಿತ ಪ್ರಶ್ನೆಗಳು’, ೨೦೦೭ರಲ್ಲಿ ಪ್ರೊ.ಜಿ.ವೆಂಕಟಸುಬ್ಬಯ್ಯನವರ ಗುರುತ್ವದಲ್ಲಿ ‘ಕನ್ನಡ ಮನಸ್ಸು: ಸಾಹಿತಿಯ ಜವಾಬ್ದಾರಿಗಳು’, ೨೦೦೮ರಲ್ಲಿ ಡಾ.ಚನ್ನವೀರ ಕಣವಿಯವರ ಅಧ್ಯಕ್ಷತೆಯಲ್ಲಿ ‘ಕನ್ನಡ ಮನಸ್ಸು:ಶಕ್ತಿ ಮತ್ತು ವ್ಯಾಪ್ತಿ’ ಹಾಗೂ ಮೊನ್ನೆ ಸಂಪನ್ನಗೊಂಡ ೨೦೦೯ರ ಪ್ರೊ.ಹಂ.ಪ.ನಾ ಅವರ ಅಧ್ಯಕ್ಷತೆಯಲ್ಲಿ ನಡೆದ ‘ಕನ್ನಡ ಮನಸ್ಸು:ಸಮನ್ವಯದೆಡೆಗೆ’. ಈ ಎಲ್ಲ ನುಡಿಹಬ್ಬಗಳೂ ಒಂದು ವಿಷಯವನ್ನು ಕೇಂದ್ರವನ್ನಾಗಿಟ್ಟುಕೊಂಡು ಅದರ ಸುತ್ತ ನಾಡಿನ ಹಲವು ಚಿಂತಕರ/ವಾಗ್ಮಿಗಳ/ವಿದ್ವಾಂಸರ ಅಭಿಪ್ರಾಯಗಳನ್ನು ಕ್ರೋಢೀಕರಿಸಿಕೊಂಡು ನಮ್ಮೆಲ್ಲರ ಚಿಂತನಶೀಲತೆಗೆ ಹೊಸ ಪರಿಕಲ್ಪನೆ ಮತ್ತು ಸಾಧ್ಯತೆಗಳನ್ನು ವಿಸ್ತರಿಸಿರುವುದನ್ನು ಹೇಗೆ ತಾನೆ ಅಲ್ಲಗಳೆಯಲು ಸಾಧ್ಯ? ಇದರ ಜೊತೆಗೇ ೨೦೦೪ರ ಸಮ್ಮೇಳನವೊಂದನ್ನು ಬಿಟ್ಟು ಉಳಿದೆಲ್ಲ ಸಮ್ಮೇಳನಗಳಲ್ಲಿ ಆಹ್ವಾನಿತ ಗಣ್ಯರೆಲ್ಲರ ಉಪನ್ಯಾಸಗಳನ್ನು ದ್ವನಿಸುರುಳಿಗಳಿಂದ ಸಂಗ್ರಹಿಸಿ ಅಕ್ಷರರೂಪಕ್ಕಿಳಿಸಿ ಪುಸ್ತಕವನ್ನಾಗಿಸಿ ಪ್ರಕಟಿಸಿರುವುದಂತೂ ಅಕ್ಷರಮೋಹ ಇರುವವರೆಲ್ಲ ಮೋಹನ ಆಳ್ವರನ್ನು ಭೇಷ್ ಅನ್ನುವಂತೆ ಮಾಡುತ್ತವೆ.
ಸಮ್ಮೇಳನದ ಉದ್ಘಾಟನೆಯಿಂದ ಅದು ಸಮರೋಪ ಕಾಣುವವರೆಗೂ ಎಲ್ಲ ಕಡೆಯೂ ಸಮಯವನ್ನು ಅತ್ಯಂತ ಕಟ್ಟುನಿಟ್ಟಾಗಿ ಪರಿಪಾಲಿಸುವುದಲ್ಲದೇ ಉದ್ದೇಶಿತ ವಿಷಯದಡಿಯಲ್ಲೇ ಎಲ್ಲ ಚರ್ಚೆಗಳನ್ನು ಕೇಂದ್ರೀಕರಿಸುವುದು ಗೋಷ್ಠಿಗಳ ನಡುವಿನ ಕೆಲವೇ ನಿಮಿಷಗಳನ್ನೂ ಸ್ಥಳೀಯ ಶಾಲೆಗಳ ಮಕ್ಕಳ ಮೂಲಕ ಗಾದೆ ಮಾತುಗಳನ್ನೂ, ಕೃಷಿ ಸಂಬಂಧೀ ಮಾತುಗಳನ್ನೂ, ಕನ್ನಡ ಸಾಹಿತ್ಯದ ಮರೆಯಬಾರದ ಮಾತುಗಳನ್ನೂ ಹೇಳಿಸುವ ಮೂಲಕ ಆ ಮಕ್ಕಳಿಗೂ ಅವಕಾಶಕೊಡುವುದೂ, ಅವರಿಗೆ ಸಾಹಿತ್ಯ ಸಾಂಸ್ಕೃತಿಕ ಲೋಕವನ್ನು ಪರಿಚಯಿಸಿಕೊಡುವುದೂ ಕೇವಲ ದೂರದೃಷ್ಟಿಯುಳ್ಳ ಮಹನೀಯರು ಮಾತ್ರ ಮಾಡಬಹುದಾದ ಅಪರೂಪದ ಹಾಗೂ ಅತಿ ಜರೂರಾಗಿ ಎಲ್ಲರೂ ಅನುಕರಿಸಲೇ ಬೇಕಾದುದೂ ಆಗಿದೆ.
ಬರಿಯ ಸಾಹಿತ್ಯವನ್ನಷ್ಟೇ ಅಲ್ಲದೇ ಸಾಂಸ್ಕೃತಿಕ ಚಟುವಟಿಕೆಗಳಿಗೂ ನುಡಿಸಿರಿ ಅಪಾರ ಅವಕಾಶವನ್ನು ಒದಗಿಸಿಕೊಡುತ್ತದೆ. ಸಂಜೆ ಒಟ್ಟೊಟ್ಟಿಗೇ ನಾಲ್ಕು ಬೇರೆ ಬೇರೆ ವೇದಿಕೆಗಳಲ್ಲಿ ವಿವಿಧ ಕಾರ್ಯಕ್ರಮಗಳು ಜರುಗುತ್ತವೆ. ಯಾರಿಗೆ ಏನು ಇಷ್ಟವೋ ಅವರು ಅದನ್ನು ಸವಿಯಲು/ಆಸ್ವಾದಿಸಲು ಇದಕ್ಕಿಂತ ಹೆಚ್ಚಿನ ಅವಕಾಶ ಬೇಕೆ? ಬೆಳಿಗ್ಗೆ ಆರಕ್ಕೇ ಶಾಸ್ತ್ರೀಯ ಸಂಗೀತ ಮುಖ್ಯ ವೇದಿಕೆಯಲ್ಲಿ. ಗೋಷ್ಠಿಗಳ ನಡುನಡುವೆಯೇ ಮಾತಿನ ಮಂಟಪ-ನಗೆ ಚಟಾಕಿಗಳನ್ನು ಸಿಡಿಸಿದರೆ, ಕವಿ ಸಮಯ-ಕವಿನಮನ, ಕವಿಯ ಮಾತಿನ ಜೊತೆಗೇ ಕವಿತೆಗೆ ರಾಗ ಸಂಯೋಜಿಸಿ ಅದನ್ನು ಕೇಳಿಸುವ ಉತ್ಸಾಹ. ಕಥಾಸಮಯದಲ್ಲಿ ಕತೆಗಾರರು ತಮ್ಮ ಅನನ್ಯ ಅನುಭವಗಳನ್ನು ಹಂಚಿಕೊಳ್ಳುತ್ತಲೇ ತಮ್ಮ ಕತೆಯೊಂದನ್ನು ಓದುವ ಅವಕಾಶ. ಇದರ ಜೊತೆಗೇ ನಾಡು-ನುಡಿಗೆ ಸಂದುಹೋದವರ ನೆನಪಿಗೆ ಮಾತಿನ ಶ್ರದ್ಧಾಂಜಲಿ.
ಬರಿಯ ಬೌದ್ಧಿಕ ಹಸಿವಲ್ಲ ಹೊಟ್ಟೆಯ ಹಸಿವಿಗೂ ಏಕಕಾಲದಲ್ಲಿ ದಾಸೋಹ. ಮುಖ್ಯರಿಗೆ ಬಡಿಸಿದ ಭಕ್ಷ್ಯ ಭೋಜ್ಯಗಳೇ ಪ್ರತಿನಿಧಿಗಳಿಗೂ. ಯಾರಿಗೂ ಯಾವುದರಲ್ಲೂ ವ್ಯತ್ಯಾಸದ ಭಾವವಿಲ್ಲ. ಎಲ್ಲರನ್ನೂ ಏಕತ್ರಗೊಳಿಸಿ ಧನ್ಯರನ್ನಾಗಿಸಿದ ಅಪೂರ್ವ ಕ್ಷಣಗಳು.
ಕನ್ನಡದ ಕೆಲಸಗಳನ್ನು ಬರಿಯ ಸರ್ಕಾರೀ ಸಂಸ್ಥೆಗಳು, ಅಕಾಡೆಮಿ, ಪರಿಷತ್ತಿನಂಥ ಪರತಂತ್ರ ಸಂಸ್ಥೆಗಳು ಮಾತ್ರ ಮಾಡಬೇಕೆನ್ನುವ ಸಾಮಾನ್ಯ ಅಭಿಪ್ರಾಯವನ್ನು ಹುಸಿಗೊಳಿಸಿ ಅದನ್ನು ಈ ನಾಡಿನ ಸಾಹಿತ್ಯ ಸಂಸ್ಕೃತಿಗಳನ್ನು ಗೌರವಿಸುವ ಯಾರೂ ಮಾಡಬಹುದೆನ್ನುವ ಸತ್ಯವನ್ನೂ ಡಾ.ಮೋಹನ ಆಳ್ವ ಮಾಡಿತೋರಿಸುತ್ತಿದ್ದಾರೆ. ಭಾಷೆ ಮತ್ತು ಸಂಸ್ಕೃತಿಗಳನ್ನು ರೂಪಿಸುವ, ನಿರ್ವಚಿಸುವ, ನಿರ್ಧರಿಸುವ ಮತ್ತು ನಿರ್ವಹಿಸುವ ಅವಕಾಶ ಮತ್ತು ಜವಾಬ್ದಾರಿಗಳನ್ನು ಪ್ರಭುತ್ವಗಳ ಮೂಲಕ ಮಾಡಿಸದೇ ಅದನ್ನು ಸಮುದಾಯದ ಮೂಲಕ ಸಾಧಿಸುವ ಪ್ರಯತ್ನ ನುಡಿಸಿರಿಯದ್ದಾಗಿದೆ. ಅದು ಈ ನೆಲದ ಬಹುರೂಪೀ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುತ್ತಿರುವ ಪುರಾವೆಯಾಗಿಯೂ ಕಾಣುತ್ತಿದೆ. ರಾಜಕೀಯ ಒತ್ತಡಗಳಿಗೆ ಮಣಿಯದೇ, ಧಾರ್ಮಿಕ ಬಣ್ಣಗಳಿಗೂ ಅವಕಾಶ ನೀಡದೇ ಕೇವಲ ಋಜುಮಾರ್ಗದಲ್ಲಿ ನಡೆಸಲೇಬೇಕೆಂಬುದು ಇಡೀ ವ್ಯವಸ್ಥಾಪನಾ ಸಮಿತಿಯ ಕನಸು ನನಸಾದ ಬಗೆ ಇದು. ಅನ್ಯರ ಹಣಕಾಸು ಮುಟ್ಟದೇ ಇರುವ ಕಾರಣಕ್ಕೇ ಇಂಥ ಶಕ್ತಿ ಮತ್ತು ವ್ಯಾಪ್ತಿ ನುಡಿಸಿರಿಗೆ ಸಾಧಿಸಿದೆ.
ನಮ್ಮ ಸರ್ಕಾರ ವಿಶ್ವ ಕನ್ನಡ ಸಮ್ಮೇಳನ ನಡೆಸುತ್ತೇನೆಂದು ಹೇಳುತ್ತಲೇ ಇದೆ. ಹಲವು ಕಾರಣಗಳಿಂದ ಹಲವು ರಾಜಕೀಯ/ಸಾಮಾಜಿಕ ಒತ್ತಡಗಳನ್ನು ಮುಂದುಮಾಡಿ ಅದರ ನೆವದಿಂದ ವಿಶ್ವ ಕನ್ನಡ ಸಮ್ಮೇಳನ ಮುಂದು ಮುಂದಕ್ಕೆ ಹೋಗುತ್ತಲೇ ಇದೆ. ಪಕ್ಕದ ಮಹಾರಾಷ್ಟ್ರದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಕ್ಕೆ ಅಲ್ಲಿನ ಸರ್ಕಾರ ಹಣ ನೀಡಿದರೂ ಅದರಲ್ಲಿ ಭಾಗವಹಿಸಲು ಅದಕ್ಕೆ ಅವಕಾಶ ಇಲ್ಲವಂತೆ. ಆ ನಾಡಿನ ಚಿಂತಕರೂ, ಬುದ್ಧಿಜೀವಿಗಳೂ, ಸಾಹಿತಿಗಳೂ ಹಾಗೂ ಸಾಹಿತ್ಯಾಸಕ್ತರು ಮಾತ್ರ ಭಾಗವಹಿಸುವ ಸಮ್ಮೇಳನ ಅದಂತೆ. ನಮಗೂ ಅಂಥ ಸದವಕಾಶ ಬಂದೀತೆ? ಮುಖ್ಯ ಮಂತ್ರಿಗಳು ಬಂದೇ ಸಮ್ಮೇಳನವನ್ನು ಉದ್ಘಾಟಿಸಬೇಕೆನ್ನುವ ಮನೋಭಾವನೆ ದೂರವಾಗಬೇಕಾದರೆ ಅತ್ಯಗತ್ಯವಾಗಿ ನುಡಿಸಿರಿಯಲ್ಲಿ ಭಾಗವಹಿಸಿ ಅಲ್ಲಿನ ಚರ್ಚೆಗಳಲ್ಲಿ ಭಾಗವಹಿಸಿ ಕಲಿಯಬೇಕು.
ಮೂರೂ ದಿನ ಅಲ್ಲಿನ ಸಂಭ್ರಮ, ಸಂತೋಷಗಳಲ್ಲಿ ಭಾಗವಹಿಸಿ ಬರುವಾಗ ಕೇವಲ ಕುತೂಹಲಕ್ಕೆ ವ್ಯವಸ್ಥಾಪನಾ ಸಮಿತಿಯಲ್ಲಿರುವ ಒಬ್ಬರನ್ನು ಖರ್ಚು ವೆಚ್ಚಗಳ ಬಗ್ಗೆ ಕೇಳಿದೆ. ನುಡಿಸಿರಿಗೆ ನಲವತ್ತು ಲಕ್ಷ, ವಿರಾಸತ್ ಉತ್ಸವಕ್ಕೆ (ಶಾಸ್ತ್ರೀಯ ಸಂಗೀತ ನೃತ್ಯಗಳ ಹಬ್ಬ) ಅರವತ್ತು ಲಕ್ಷ ನಮ್ಮ ಅಂದಾಜು ವೆಚ್ಚ. ಸ್ವಲ್ಪ ಏರಿಳಿತ ಆಗಬಹುದು ಎಂದರವರು. ಕೇವಲ ನಲವತ್ತು ಐವತ್ತು ಲಕ್ಷಗಳಲ್ಲಿ ಇಷ್ಟು ಅಚ್ಚುಕಟ್ಟಾಗಿ ಸಂಭ್ರಮವಾಗಿ ನುಡಿಹಬ್ಬವನ್ನು ನಡೆಸಬಹುದಾದಲ್ಲಿ ನಮ್ಮ ಸಾಹಿತ್ಯ ಸಮ್ಮೇಳನಗಳಿಗೇಕೆ ನಾಲ್ಕೈದು ಕೋಟಿ ಸುರಿಯುತ್ತಿದ್ದೇವೆ/ಸಾರ್ವಜನಿಕರ ದುಡ್ಡನ್ನು ದುಂದು ಮಾಡುತ್ತಿದ್ದೇವೆ ಅನ್ನುವ ಪ್ರಶ್ನೆಗಳನ್ನು ನಿಮ್ಮಲ್ಲಿಯೂ ಹುಟ್ಟಿಸಿ ಈ ಲೇಖನವನ್ನು ಪರಿಸಮಾಪ್ತಿಗೊಳಿಸುತ್ತಿದ್ದೇನೆ.

ಶುಕ್ರವಾರ ೩೦ ಅಕ್ಟೋಬರ್ ೨೦೦೯

ರಾಜ್ಯೋತ್ಸವ ವಿಶೇಷ

ವಿಜಯನಗರ ಸಾಮ್ರಾಜ್ಯ ೧೫೨೬ಕ್ಕೆ ಪತನಗೊಂಡ ನಂತರ ಕನ್ನಡಿಗರಿಗೆ ಒಂದು ಅಖಂಡ ರಾಜ್ಯ ಇಲ್ಲವಾಯಿತು. ಕಾವೇರಿಯಿಂದ ಕೃಷ್ಣಾನದಿ ಮತ್ತು ಪಶ್ಚಿಮ ಘಟ್ಟದ-ಕರಾವಳಿಯಿಂದ ಆಂಧ್ರದ ತೆಲಂಗಾಣದವರೆಗೂ ಕನ್ನಡಿಗರ ನಾಡು ಅಖಂಡವಾಗಿ ಉಳಿದಿತ್ತು. ಚಾಲುಕ್ಯರು ರಾಷ್ಟ್ರಕೂಟರುಕಟ್ಟಿದ ಕರ್ನಾಟಕ ಸಾಮ್ರಾಜ್ಯ ಕನ್ನಡ ಭಾಷೆ, ಸಾಹಿತ್ಯ, ಕಲೆ, ತತ್ವಜ್ಞಾನ ಜನಪದಗಳ ಸುಂದರ ನೆಲೆಯಾಗಿತ್ತು. ಕನ್ನಡಿಗರಿಗೆ ಹೆಮ್ಮೆ ತರುವ ವಾತಾವರಣ ಇತ್ತು. ಮುಂದೆ ನಾನಾ ಅನ್ಯ ಅರಸರ ಆಳಿಕೆ ಸುರುವಾಗಿ ಕನ್ನಡನಾಡು ಅಖಂಡವಾಗಿ ಬೆಳೆಯುವ ಅವಕಾಶ ಕಳಚಿಕೊಂಡು, ಕೆಲವು ಭಾಗಗಳು ಅನಾಥವಾದುವು;ಹಿಂದುಳಿದುವು;ಸ್ವಂತಿಕೆಯ ಲಕ್ಷಣಗಲು ಮಾಯವಾದುವು.
ಈ ಪರಿಸ್ಥಿತಿ ೧೯೫೬ರವರೆಗೂ ಇತ್ತು. ಅಂದರೆ ಮೈಸೂರು ರಾಜ್ಯ ಎಂದು ಪುನರ್ನಿಮಾಣವಾಗುವವರೆಗೆ ಕನ್ನಡಿಗರು ಚದುರಿಹೋಗಿದ್ದರು. ೧೯೨೦ರಲ್ಲಿ ಭಾರತದಲ್ಲಿ ಸ್ವಾತಂತ್ರ್ಯ ಚಳವಳಿ ವೇಗದಿಂದ ಮುನ್ನಡೆಯತೊಡಗಿತೋ ಆಗ, ಹೊಸ ಶಿಕ್ಷಣದ ಅರಿವಿನಿಂದ ಗತ ವೈಭವದ ನೆನಪಿನಿಂದ ಕನ್ನಡಿಗರು ಎಚ್ಚೆತ್ತರು. ಬೇರೆ ಬೇರೆ ಭಾಗಗಳಲ್ಲಿ ಒಡೆದು ಹೋಗಿದ್ದ ನಾಡನ್ನು ಒಂದುಗೂಡಿಸುವ ಸಂಕಲ್ಪ ಹುಟ್ಟಿತು. ಇದಕ್ಕೆ ನಾಂದಿ ಹಾಡಿದವರು ಆಲೂರು ವೆಂಕಟರಾಯರು. ಏಕೀಕರಣದ ಮಂತ್ರ ಹೇಳಿ, ನಾಡಿಗರನ್ನು ಎಚ್ಚರಿಸಿದ ಆಲೂರರು ‘ಕರ್ನಾಟಕ ಕುಲ ಪುರೋಹಿತ’ರೆನಿಸಿದ್ದಾರೆ.
೧೯೦೭ರಿಂದ ಏಕೀಕರಣ ಚಳವಳಿ ಆರಂಭವಾಯಿತು. ರಾಷ್ಟ್ರೀಯ ಚಳವಳಿ ನಡೆದದ್ದು ಬ್ರಿಟಿಷರ ವಿರುದ್ಧ. ಅದರ ಜತೆಗೇ ನಡೆದ ಏಕೀಕರಣ ಚಳವಳಿ ಯಾರ ವಿರುದ್ಧವೂ ಆಗಿರದೆ ಕನ್ನಡದ ‘ನವೋದಯ’ದಪರವಾಗಿ. ಕನ್ನಡಿಗರಲ್ಲಿ ಸ್ವಂತಿಕೆಯನ್ನು ರೂಢಿಸಿಕೊಳ್ಳುವ ಅಗತ್ಯವಿತ್ತು. ಹಳೆಯದನ್ನು ಹೊಸಬೆಳಕಿನೊಂದಿಗೆ ಮುಂದುವರೆಸಿಕೊಂಡು, ಕನ್ನಡದ ದಾರಿ ನಿರ್ಮಿಸಿಕೊಳ್ಳುವ ಅಗತ್ಯವಿತ್ತು.
ಕನ್ನಡದ ದಾರಿ ಎಂದರೆ, ನಮ್ಮತನವನ್ನು ಉಳಿಸಿಕೊಂಡು ಬೆಳೆಸಿಕೊಂಡು ಜ್ಞಾನ-ವಿಜ್ಞಾನದ ಸಹಕಾರದಿಂದ ಹೊಸತನವನ್ನು ಸಾಧಿಸುವುದು. ಕನ್ನಡಗಳು ಕರ್ನಾಟಕದಲ್ಲಿವೆ. ಅವುಗಳ ನಡುವೆ ಇರುವ ವ್ಯತ್ಯಾಸಗಳು ಉಚ್ಚಾರಣಾಕ್ರಮದ್ದು. ಆದರೆ ಶಿಷ್ಟ ಕನ್ನಡ ಎಂಬುದು ಒಂದಿದೆ. ಅದರಲ್ಲಿ ಈ ನಾಡಿನ ಭಾವೈಕ್ಯದ ಬೀಜಗಳಿವೆ. ಭಾವೈಕ್ಯವೇ ಸಹಕಾರದ ಮೂಲ. ಕನ್ನಡ ಜ್ಞಾನದಿಂದ ರಾಜ್ಯವನ್ನು ಕಟ್ಟಿದಾಗ ಪರಂಪರೆಯ ಸೊಗಸು ಬರುತ್ತದೆ. ಭಾವ ಪರಂಪರೆಗೆ ಕಾರಣವಾದ ಹಳೆಯ ಅಂಶಗಳೆಂದರೆ ಸಾಹಿತ್ಯದಲ್ಲಿ ದಾಖಲಾಗಿರುವ ಕನ್ನಡಿಗರ ಚರಿತ್ರೆ. ಕವಿರಾಜ ಮಾರ್ಗಕಾರನು ೧,೧೫೦ ವರ್ಷಗಳ ಹಿಂದೆ ಇದನ್ನೇ ಹೇಳಿದ್ದ: ನಾಡವರ್ಗಗಳು ವಿವಿಧ. ಬಣ್ಣಗಳು ಹಲವು. ಆದರೆ ವಿವೇಕ ಒಂದೇ. ರಾಜಕೀಯ ದೌರ್ಬಲ್ಯಗಳಿಂದಾಗಿ ವಿವೇಕ ಮರೆತಿತ್ತು. ಕನ್ನಡದ ವಿವೇಕ ಸಾಹಿತ್ಯದಲ್ಲಿ, ಸಂಗೀತದಲ್ಲಿ ರಕ್ತಗತವಾಗಿದೆ. ಅದನ್ನು ಎಲ್ಲರೂ ಸಾಮೂಹಿಕವಾಗಿ ಗಮನಕ್ಕೆ ತಂದುಕೊಂಡು, ಭಾಷಿಕ ಏಕಾತ್ಮ ಭಾವ ಅನುಭವಿಸಬೇಕು. ಆದರೆ ಪರಕೀಯ ಆಡಲಿತದಲ್ಲಿ ಅದು ಸಾಧ್ಯವಾಗಲಿಲ್ಲ. ೩೦ ವರ್ಷಗಳ ಚಳುವಳಿಯ ನಂತರ ಗಾಂಧೀಜಿಯ ಭಾಷಾವಾರು ಪ್ರಾಂತ ರಚನೆ ತತ್ವದ ಮೇರೆಗೆ ಕನ್ನಡಿಗರಿಗೆ ಅಖಂಡ-ಸಂಯುಕ್ತ ರಾಜ್ಯ ಆಡಲಿತಕ್ಕೆ ಸಿಕ್ಕಿತು-ಅದೇ ರಾಜ್ಯೋದಯ.
ಕನ್ನಡದ ಶಕ್ತಿಯುಕ್ತಿಗೆ ಐತಿಹಾಸಿಕ ಪರಂಪರೆ ಇದೆ. ಅದನ್ನು ಮರೆಯದಂತೆ, ಹೊರಗಿನ ಕೆಟ್ಟ ಪ್ರಭಾವಗಳಿಗೆ ಸಿಗದಂತೆ ಕನ್ನಡವನ್ನು ಮಾತಿನಲ್ಲಿ, ಆಡಳಿತದಲ್ಲಿ, ಬರಹದಲ್ಲಿ ಬಳಸಿ ಉಳಿಸಿಕೊಳ್ಳಬೇಕಾಗಿದೆ. ‘ಕನ್ನಡ’ ಭಾರತದಲ್ಲಿ ಶಾಸ್ತ್ರೀಯ ಸ್ಥಾನ ಪಡೆದ ಮೂರನೇಯ ಭಾಷೆ. ಇದರ ಹೆಮ್ಮೆ, ಅಭಿಮಾನ ಸಾಮೂಹಿಕವಾಗಿ ಇದ್ದಾಗ-ಕನ್ನಡ-ಕನ್ನಡಿಗ-ಕರ್ನಾಟಕ-ಮೂರಕ್ಕೂ ನೆಲೆ,ಬೆಲೆ.
-ಸರ್ವಜಿತ, ಹುಬ್ಬಳ್ಳಿ

ಶುಕ್ರವಾರ ೪ ಸಪ್ಟೆಂಬರ್ ೨೦೦೯

ವಿಘ್ನ ವಿನಾಶಕ ವಿನಾಯಕ

ಆಷಾಡದ ಗಾಳಿಮಳೆಗಳು ಶ್ರಾವಣದ ಕುಂಭದ್ರೋಣ ಕಡಿಮೆಯಾಗಿ ಭಾದ್ರಪದ ಕಾಲಿಟ್ಟಿದೆ. ಚರಾಚರ ಪ್ರಕೃತಿಯಲ್ಲಿ ಮೇಳೈಸಿದ್ದ ಜಡತನ ಹಿಂದೆ ಸರಿದು ಜೀವನೋತ್ಸಾಹ ಪುಟಿದೇಳುವ ಕಾಲವಿದು ಎಂದು ಆಯುರ್ವೇದ ಹೇಳುತ್ತದೆ. ಮಳೆ ಕಡಿಮೆಯಾದ ಕಾರಣ ರೈತಾಪಿ ಜನರೂ ಬರುವ ದಿನಗಳ ನಿರೀಕ್ಷೆಯಲ್ಲಿ ಇರುತ್ತಾರೆ. ಭಾದ್ರಪದ ಶುಕ್ಲದ ಚೌತಿ ವಿನಾಯಕನ ಹಬ್ಬ. ಗೌರಿ ಮತ್ತು ಗಣೇಶರ ಹಬ್ಬ ಜನಸಮುದಾಯದಲ್ಲಿ ಹರ್ಷ-ಸಂಭ್ರಮಗಳನ್ನು ಅರಳಿಸುತ್ತದೆ.
ಭಾರತೀಯ ದೇವತೆಗಳಲ್ಲಿ ಅತ್ಯಂತ ಲೋಕ ಖ್ಯಾತನಾದವನು ಗಣೇಶನೇ. ಅವನು ಕೇವಲ ವಿಘ್ನ ನಾಶಕನಷ್ಟೇ ಅಲ್ಲ, ಸಿದ್ಧಿ ಪ್ರದಾಯಕನೆಂದೂ ಪೂಜಿಸಲ್ಪಡುತ್ತಾನೆ. ಎಲ್ಲ ಕೆಲಸಗಳ ಆರಂಭದಲ್ಲೂ ಗಣೇಶನನ್ನು ಪ್ರಾರ್ಥಿಸುವುದು ಪಾರಂಪರಿಕವಾಗಿ ನಡೆದು ಬಂದ ಆಚರಣೆ. ಹೀಗೆ ಅಗ್ರಪೂಜೆಗೂ ಮೊದಲ ನಮಸ್ಕಾರದ ಮನ್ನಣೆಗೂ ಪಾತ್ರನಾಗುವ ವಿನಾಯಕ ಭಕ್ತರ ಸಂಕಲ್ಪ ಶಕ್ತಿಗೆ ಬಲದುಂಬಿ ಕಾರ್ಯಸಿದ್ಧಿಯಾಗುವಂತೆ ಹರಸುತ್ತಾನೆಂಬ ನಂಬಿಕೆ ಇದೆ. ಮಹರ್ಷಿ ವೇದವ್ಯಾಸರು ರಚಿಸಿದ ಮಹಾಭಾರತ ಕೃತಿಗೆ ಗಣಪತಿಯೇ ಲಿಪಿಕಾರನೆಂಬ ಹೇಳಿಕೆಯೂ ಪ್ರಸಿದ್ಧವಾದುದೇ ಆಗಿದೆ. ನಮ್ಮ ಪ್ರಾಚೀನ ಕಾವ್ಯಗಳ ಆರಂಭವಂತೂ ಗಣಪತಿಯನ್ನು ನಮಿಸದೇ ಮುಂದೆ ಹೋಗುವುದೇ ಇಲ್ಲ. ಕವಿ, ಕಲಾವಿದ, ಪಂಡಿತ, ಪಾಮರರೆಲ್ಲರಿಗೂ ಗಣೇಶ ಪರಮಪ್ರಿಯ ದೇವರು.
ಮುಂಜಾನೆ ಮೂಡಣದ ಅಂಚಿನಲ್ಲಿ ನಿಧಾನವಾಗಿ ಸಣ್ಣವನಾಗಿ ಕಾಣಿಸಿಕೊಂಡು ನಂತರ ಭೂಮ್ಯಾಕಾಶಗಳನ್ನೆಲ್ಲ ಆವರಿಸಿಕೊಳ್ಳುವ ಸೂರ್ಯನಂತೆ ಸಿದ್ಧಿಪ್ರದ ವಿನಾಯಕನು ಭೂಮ್ಯಾಕಾಶಗಳನ್ನೆಲ್ಲ ವ್ಯಾಪಿಸಿರುವನೆಂದು ಲಕ್ಷೀಶ ಕವಿ ತನ್ನ ಜೈಮಿನಿ ಭಾರತದಲ್ಲಿ ವರ್ಣಿಸಿದ್ದಾನೆ. ಭಾವಜಗತ್ತನ್ನೂ, ಬೌಧ್ಧಿಕ ಜಗತ್ತನ್ನೂ, ವಿಜ್ಞಾನ ಜಗತ್ತನ್ನೂ ಸರಿಸಮನಾಗಿ ವ್ಯಾಪಿಸಿರುವ ಗಣೇಶನನ್ನು ಕುರಿತ ದಂತ ಕತೆಗಳೂ ಲೆಕ್ಕಕ್ಕೇ ಸಿಕ್ಕದಷ್ಟು ಹೇರಳವಾಗಿವೆ. ಶಿವ ಪುರಾಣದಲ್ಲಿ ವರ್ಣಿತನಾಗಿರುವಂತೆ -ಮತ್ತ ಮಾತಂಗ ವದನೋ, ಗಂಗೋಮಾ ಶಂಕರಾತ್ಮಜಃ, ಆಕಾಶದೇಹೋ, ದಿಗ್ಬಾಹುಃ, ಸೋಮಃ ಸೂರ್ಯಾಗ್ನಿಲೋಚನಃ- ಮದಿಸಿರುವ ಆನೆಯ ವದನವಿರುವ ವಿನಾಯಕ ಗಂಗೆ,ಉಮೆ ಮತ್ತು ಶಂಕರರ ಮುದ್ದಿನ ಮಗ. ಆಕಾಶವೇ ಅವನ ಶರೀರವಾದರೆ, ದಿಕ್ಕುಗಳವನ ತೋಳುಗಳು. ಸೂರ್ಯ ಚಂದ್ರರೇ ಅವನ ಕಣ್ಣುಗಳು.- ಈ ವಿಭೂತಿ ರೂಪವನ್ನು ಕಲ್ಪಿಸಿಕೊಂಡ ಮನಸ್ಸಿನ ಹಿಂದೆ ಇರುವ ಭೂಮ ಕಲ್ಪನೆ ಅದ್ಭುತವಾದುದು.
ಪೌರಾಣಿಕ ಮತ್ತು ಜಾನಪದ ಕಥೆಗಳಂತೂ ಗಣೇಶನ ಹುಟ್ಟು ಅವನ ಲೀಲೆ ಮತ್ತು ಮಹಿಮೆಗಳನ್ನು ಹಾಡಿಹೊಗಳಿವೆ. ಆ ಕಥೆಗಳ ಹಿಂದಿರುವ ರೋಚಕ ಕಲ್ಪನೆಯಂತೂ ರಮ್ಯಲೋಕವನ್ನು ಕೇಳುಗನಲ್ಲಿ ಮೂಡಿಸುತ್ತವೆ. ಈ ಕಲ್ಪಿತ ಆವರಣಗಳಿಂದ ಅವನನ್ನು ಬೇರ್ಪಡಿಸಿ ಸಾಕ್ಷಾತ್ ಪರಬ್ರಹ್ಮ ಸ್ವರೂಪನೆಂಬ ಎತ್ತರದ ನೆಲೆಯಲ್ಲಿ ಪರಿಭಾವಿಸಿದ ದಾರ್ಶನಿಕ ಚಿಂತನೆಯೂ ನಮಗೆ ಗೊತ್ತಿದೆ. ಇಡೀ ಬ್ರಹ್ಮಾಂಡದ ಆದಿ, ಮಧ್ಯ, ಅಂತ್ಯಗಳಲ್ಲಷ್ಟೇ ಅಲ್ಲದೆ ಸೃಷ್ಟಿಯ ಎಲ್ಲ ವ್ಯಾಪಾರಗಳಲ್ಲೂ ಗಣಪತಿಯ ಪಾರಮ್ಯವನ್ನೇ ಕಂಡ ಚಿಂತನೆಯೂ ನಮ್ಮ ಪ್ರಾಚೀನ ಚಿಂತನಗಳಲ್ಲಿವೆ. ಅಥರ್ವಶೀರ್ಷದಲ್ಲಿ ಅವನನ್ನು ಹೀಗೆ ವರ್ಣಿಸಲಾಗಿದೆ. - ಸರ್ವಂ ಜಗದಿದಂ ತ್ವತ್ತಸ್ತಿಷ್ಟತಿ, ಸರ್ವಂ ಜಗದಿದಂ ತ್ವಯಿಲಯಮೇಷ್ಯತಿ. ಸರ್ವಂ ಜಗದಿದಂ ತ್ವಯಿಪ್ರತ್ಯೇತಿ, ತ್ವಂ ಭೂಮಿರಾಪೋನಲೋನಿಲೋ ನಭಃ -ಈ ಜಗತ್ತು ನಿನ್ನ ಕಾರಣದಿಂದಲೇ ಉಂಟಾಗಿದೆ. ನಿನ್ನಾಧಾರದ ಮೇಲೇ ನಿಂತಿದೆ. ಕಡೆಗೂ ನಿನ್ನಲ್ಲಿಯೇ ಲೀನವಾಗುವುದು ಈ ಜಗತ್ತು. ಭೂಮಿ, ನೀರು, ಗಾಳಿ, ಬೆಂಕಿ, ಆಕಾಶ ಪಂಚಭೂತಗಳಲ್ಲೂ ನೀನೇ ತುಂಬಿದ್ದೀ-
ಇಂಥ ಉನ್ನತ ನೆಲೆಯಲ್ಲಿ ನಮ್ಮ ಹಿರಿಯರು ಕಂಡಿದ್ದ ಗಣೇಶ ಇವತ್ತು ಬೀದಿಬೀದಿಗಳ ಪೆಂಡಾಲುಗಳಲ್ಲಿ, ಶಾಲೆ ಕಾಲೇಜುಗಳ ಅಂಗಳದಲ್ಲಿ ಅಷ್ಟೇ ಏಕೆ ಸಂತೆ ಮಾಳಗಳ ಜನಸಾಗರದ ಮಧ್ಯದಲ್ಲೂ ವಿಜೃಂಭಿಸುತ್ತಿದ್ದಾನೆ. ಭಕ್ತಿಗೋ ಭಾವಕ್ಕೋ ಅಥವ ವಸೂಲಿ ದಂಧೆಯ ವ್ಯಾಪರಕ್ಕೋ ಪಕ್ಕಾಗುತ್ತಿದ್ದಾನೆ. ಸಿನಿಮಾ ಸಂಗೀತಗಳ ಭರಾಟೆಯಲ್ಲಿ, ಡಿಸ್ಕೋ ಹಾಡುಗಳ ದರಬಾರಿನಲ್ಲಿ ಕೂಡ ಗಣೇಶನ ಮೂರ್ತಿ ಇರುವುದು ಪರಿಸ್ಥಿತಿಯ ವ್ಯಂಗ್ಯವಾಗಿದೆ.
ಉನ್ನತ ನೆಲೆಯಲ್ಲಿ ವಿದ್ಯಾಧಿದೇವತೆಯೆಂದೂ ಪರಿಗಣಿಸಿರುವ ಗಣೇಶ ನಮ್ಮೆಲ್ಲರಲ್ಲೂ ನಾಳಿನ ಒಳ್ಳೆಯದಕ್ಕಾಗಿ ಇಂದು ನಾವು ಕೈಗೆತ್ತಿಕೊಳ್ಳಬೇಕಾದ ಕೆಲಸಕಾರ್ಯಗಳನ್ನು ನಿರ್ವಿಘ್ನವಾಗಿ ನಡೆಸಿಕೊಡಲಿ ಎಂಬುದು ಗಣೇಶ ಚೌತಿಯ ಪ್ರಾರ್ಥನೆಯಾಗಿದೆ. ಇನ್ನು ಗಣೇಶನ ತಾಯಿ ಗೌರಿಯಂತೂ ಸಾಕ್ಷಾತ್ ಪರಶಿವನ ಮಡದಿಯಾಗಿಯೂ ಲೌಕಿಕದ ಎಲ್ಲ ಹೆಣ್ಣುಮಕ್ಕಳ ಹಾಗೆ ಕಷ್ಟ-ಸುಖಗಳನ್ನು ಕಂಡವಳು. ದಾಕ್ಷಾಯಣಿಯಾಗಿ ಅವತರಿಸಿ ಶಿವನನ್ನೇ ವರಿಸಿದ ಛಲವಂತೆ ಅವಳು. ಹೀಗೆ ಗೌರಿ-ಗಣೇಶರ ಹಬ್ಬ ತಾಯಿ-ಮಗುವಿನ ಬಾಂಧವ್ಯದ ಸಂಕೇತವಾಗಿ ನಮಗೆಲ್ಲ ಪಾಠ ಹೇಳುತ್ತಲೇ ಇರುವುದನ್ನೂ ನಾವು ಗಮನಿಸಲೇಬೇಕು.

ಬುಧವಾರ ೨ ಸಪ್ಟೆಂಬರ್ ೨೦೦೯

ಕೃಷ್ಣನೆಂಬ ಮನೋಚಿಕಿತ್ಸಕ

ಗೀತಾಚಾರ್ಯನಾದ ಶ್ರೀ ಕೃಷ್ಣ ಭಾರತೀಯ ಚಿಂತನೆ ಮತ್ತು ಜೀವನ ತತ್ವಗಳ ಮೇಲೆ ಅದ್ಭುತ ಪ್ರಭಾವ ಬೀರಿದವನು. ಅತ್ಯಂತ ಆಳವಾಗಿ ಮತ್ತು ವಿಸ್ತಾರವಾಗಿ ಅವನ ಪ್ರಭಾವಳಿ ಇದೆ. ನಮ್ಮ ಮತಧರ್ಮ- ತತ್ವ ದೃಷ್ಟಿ, ಅಧ್ಯಾತ್ಮ- ಯೋಗ, ಕಾವ್ಯ- ಶಿಲ್ಪ, ಸಂಗೀತ-ನರ್ತನ, ಸಂಸ್ಕೃತಿ-ನಾಗರೀಕತೆ ಹೀಗೆ ಜೀವನದ ವೈವಿಧ್ಯತೆಗೆ ಸಂಬಂಧಿಸಿದ ಎಲ್ಲ ಕ್ಷೇತ್ರಗಳಲ್ಲಿಯೂ ಅವನು ಇದ್ದಾನೆ. ಅಂದರೆ ಈ ಎಲ್ಲ ಕ್ಷೇತ್ರಗಳ ಪರಿಣಿತರಿಗೂ ಕೃಷ್ಣನ ಪ್ರಭಾವಲಯ ತಟ್ಟಿದೆ. ಅವನು ನಮ್ಮೆಲ್ಲರ ಹೃದಯ-ಬುದ್ಧಿಗಳನ್ನು ಆಕರ್ಷಿಸಿದ ಸರ್ವಕಾಲಿಕ ಕಿಂದರಜೋಗಿಯೆಂದೇ ಖ್ಯಾತನಾಗಿದ್ದಾನೆ. ಯುವಕ-ಯುವತಿಯರು, ಋಷಿ-ಮುನಿಗಳು, ಪಂಡಿತ-ಪಾಮರರು, ವ್ಯವಹಾರ ಚತುರರು-ರಾಜಕೀಯ ನಿಪುಣರೂ ಅವನ ಮಾಂತ್ರಿಕ ಶಕ್ತಿಗೆ ತಲೆದೂಗಿದ್ದಾರೆ.

ಭಾಗವತ ಮತ್ತು ಭಾರತದ ಕತೆಗಳಂತೆಯೇ ನಮ್ಮ ಜಾನಪದರೂ ಕೃಷ್ಣನನ್ನು ಪೋಷಿಸಿ ಬೆಳಸಿದ್ದಾರೆ. ಅವನ ಜೀವನದ ಘಟನೆಗಳಿಗೆ ಲೌಕಿಕದ ಆಸೆ-ಆಮಿಷಗಳನ್ನೂ ತಳುಕು ಹಾಕಿ ಸಂಭ್ರಮಿಸಿದ್ದಾರೆ. ಶೈಶವದಿಂದಲೂ ಗಾರುಡಿಗನೆಂದೇ ಬಿಂಬಿಸಲ್ಪಟ್ಟ ಅವನು ಬಾಲ್ಯದಲ್ಲಿ ಬೆಣ್ಣೆ ಕದ್ದ ಬಾಲಕೃಷ್ಣ, ಯೌವನದಲ್ಲಿ ಗೋಪಿಯರ ಮನಸ್ಸು ಕದ್ದ ಗೋಪೀ ಕೃಷ್ಣ, ದ್ವಾರಕೆಯನ್ನು ಕಟ್ಟಿದ ನಿರ್ಮಾತೃ ಶ್ರೀ ಕೃಷ್ಣ, ಪಾಂಡವರ ಪರವಾಗಿ ನಿಂತ ಧರ್ಮೋದ್ಧಾರಕ, ಯುದ್ಧದ ಗೊಂದಲದ ನಡುವೆಯೇ ಗೀತೆಯನ್ನು ಬೋಧಿಸಿದ ಗೀತಾಚಾರ್ಯ.

ಹೀಗೆ ಸಲಹೆಗಾರನಾಗಿ, ರಾಯಭಾರಿಯಾಗಿ, ಸದಾ ಧರ್ಮದ ಪರವಾಗಿ, ಸದ್ಗುಣಿಗಳ ಪರವಾಗಿ, ದಿಕ್ಕಿಲ್ಲದವರ ಪರವಾಗಿ ಅವನು ನಿಂತಿದ್ದಾನೆ. ರಾಜಕೀಯವಾಗಿ ಪ್ರಮುಖ ಸ್ಥಾನವನ್ನು ಪಡೆಯದೆಯೂ ರಾಜನಿರ್ಮಾತೃವಾಗಿಯೇ ಅವನು ಉಳಿದಿದ್ದಾನೆ. ತನ್ನ ತಂತ್ರ, ಪ್ರತಿತಂತ್ರಗಳಿಂದ ರಾಜಕಾರಣವನ್ನು ನಿಯಂತ್ರಿಸಿದ ಕೃಷ್ಣ ಸದಾ ಸುಚೇತನ ಸ್ವರೂಪಿ. ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಶಸ್ತ್ರ ಸನ್ಯಾಸ ಮಾಡಿದ್ದ ಅರ್ಜುನನಿಗೆ ಸಾರಥಿಯಾಗಿ, ವಿಷಾದ ಭರಿತನಾಗಿದ್ದ ಪಾರ್ಥನಿಗೆ ಬುದ್ಧಿ-ಮನಸ್ಸುಗಳ ಸ್ಥಿಮಿತತೆಯನ್ನು ಬೋಧಿಸಿದವನು. ಗೀತೆಯ ಒಂದೊಂದು ಸಾಲೂ ಸೋಲಿನ ಭಯದಲ್ಲಿರುವವರಿಗೆ ಗೆಲುವಿನ ಸಂಜೀವಿನಿ ಕೊಡುವಂಥದು.

ಭಗವದ್ಗೀತೆಯಲ್ಲಿ ಪ್ರತಿಪಾದಿತವಾಗಿರುವ ಜೀವನ ತತ್ವವು ಸ್ವತಃ ಆ ತತ್ವಗಳಿಗೆ ಬದ್ಧನಾಗಿದ್ದ ಗುರುವಿನ ನಿಶ್ಚಿತ ಅಭಿಪ್ರಾಯಗಳನ್ನು ತಿಳಿಸುತ್ತದೆ. ಜೀವನೋತ್ಸಾಹವನ್ನು ತಗ್ಗಿಸದ, ಜ್ಞಾನದ ನಿಧಿಯೇ ಆಗಿರುವ ತತ್ವವಾಗಿದೆ. ಮನುಷ್ಯ ಹೇಗೆ ತನ್ನ ಜೀವಿತವನ್ನು ಶ್ರೇಷ್ಠವಾಗಿಸಿಕೊಳ್ಳಬಹುದೆಂಬುದರ ದಾರಿದೀವಿಗೆಯೂ ಆಗಿದೆ.

ಸಾಮಾನ್ಯ ಜೀವನದಲ್ಲಿ ನಾವು ತೋರುವ ಉತ್ಸಾಹ ಸ್ವಾರ್ಥಕ್ಕೆ ನೇರವಾಗಿ ಸಂಬಂಧಿಸಿರುತ್ತದೆ. ನಮ್ಮೆಲ್ಲರ ಕಾರ್ಯಕಲಾಪಗಳನ್ನು ಕಳವಳಗಳಿಂದ, ಭಾವೋದ್ರೇಕಗಳಿಂದ, ಅನುಕಂಪ-ದುಃಖಗಳಿಂದ ಇವೇ ಮೊದಲಾದ ಉಪಕರಣಗಳಿಂದ ನಮ್ಮ ಸ್ವಾರ್ಥಕ್ಕೆ ಲಾಭ ತರುವಂತೆ ಹೆಣೆದು ಕೊಂಡಿರುತ್ತೇವೆ. ಹಾಗೆ ಲಾಭ ಬಾರದಾದಾಗ ಜೀವನೋತ್ಸಾಹವೇ ಉಡುಗಿಹೋಗುತ್ತದೆ. ನಮ್ಮ ನೀತಿ ನಡವಳಿಕೆಗಳ ಹಿಂದಿನ ಚಾಲಕ ಶಕ್ತಿಯನ್ನೇ ಕಳೆದುಕೊಂಡು ಅಂತರಂಗದಲ್ಲಿ ಕಳವಳವೂ, ಬಹಿರಂಗದಲ್ಲಿ ಜಡತನವೂ ಸೇರಿದ ಉದಾಸೀನದೆಡೆಗೆ ನಾವು ಸಾಗುತ್ತೇವೆ. ಇಂತಹುದೇ ಸ್ಥಿತಿಯಲ್ಲಿದ್ದ ಅರ್ಜುನನಿಗೆ- ಅನಾಸಕ್ತನಾಗಿದ್ದಾಗಲೂ ಉತ್ಸಾಹ ಕಳೆದುಕೊಳ್ಳದ, ಕಳವಳಗೊಳ್ಳದೆಯೂ ಕಾರ್ಯಮಗ್ನನಾಗುವ ಸಾಧ್ಯತೆಯನ್ನು ಶ್ರೀಕೃಷ್ಣ ತನ್ನ ತತ್ವಬೋಧೆಯ ಮೂಲಕ ತಿಳಿಸಿ ಹೇಳಿದ. ಸ್ವಾರ್ಥ ಮೂಲವಾದ ಆಸೆ ಮತ್ತು ಭಾವೋದ್ರೇಕಗಳಿಂದ ಮುಕ್ತರಾದಾಗ ಮಾತ್ರ ಸರ್ವೋತ್ಕೃಷ್ಟತೆ ಸಾಧ್ಯವೆಂದು ಮನಗಾಣಿಸಿದ.

ಅವನು ನಮಗೆ ಬರಿಯ ಪುರಾಣದ ಪಾತ್ರವಲ್ಲ. ಕೇವಕ ಇತಿಹಾಸದ ನೆನಪೂ ಅಲ್ಲ. ಅವನೆಂದರೆ ಸದಾ ನಮ್ಮೊಂದಿಗಿರುವ ಸತ್ಯದ ಸಂಗತಿ. ಎಂದಿಗೂ ಬರೆದು ಮುಗಿಸಲಾಗದ ಕವಿತೆಯ ಪ್ರತಿಮೆ. ಜೊತೆಗಾತಿಯ ಕಾಲಂದುಗೆಗಳ ಝಲುರು. ಕಾಲ ಕಳೆದಂತೆಲ್ಲ ಅವನ ಧ್ವನಿ ಮತ್ತು ಆಕಾರಗಳಿಗೆ ಹೊಸ ರೂಪ ಮತ್ತು ಮಹತ್ವಗಳು ಜೊತೆಯಾಗುತ್ತಲೇ ನಡೆದಿವೆ. ಪ್ರಾಚೀನ ಆದರ್ಶದೊಡನೆ ಸಮಕಾಲೀನ ವ್ಯಸನಗಳನ್ನು ಸಮೀಕರಿಸಿಕೊಳ್ಳುವುದಕ್ಕೆ,ತತ್ವ ಜ್ಞಾನದೊಂದಿಗೆ ಆಧುನಿಕ ಪಡಿಪಾಟಲುಗಳನ್ನು ಅರ್ಥೈಸಿಕೊಳ್ಳುವುದಕ್ಕೆ ಕೃಷ್ಣ ತೋರಿಸಿರುವ ದಾರಿ ಸಮನ್ವಯದ ಕೊರತೆಯಿಂದ ನಲುಗುತ್ತಿರುವ ನಮಗೆ ಸಿದ್ಧೌಷಧವಾಗಿದೆ.

ಶ್ರೀಕೃಷ್ಣನ ಕತೆ ನಮ್ಮೆಲ್ಲರನ್ನೂ ಬೃಂದಾವನದ ಚಕ್ಕಂದಕ್ಕೆ, ದ್ವಾರಕೆಯ ಸೌಂದರ್ಯಕ್ಕೆ, ವ್ರಜದ ಕಷ್ಟ-ನಿಷ್ಟುರಗಳಿಗಷ್ಟೇ ಕರೆದೊಯ್ಯುವುದಿಲ್ಲ. ಬದಲಿಗೆ ಅವನ ಕತೆ ನಮ್ಮ ನಮ್ಮ ಪಯಣದ ಜೊತೆ ಜೊತೆಗೇ ಸಾಥಿಯಾಗುವ ಗೆಲುವಿನ ದಾರಿಗಿರುವ ಕಂಟಕಗಳನ್ನು ನಿವಾರಿಸುವ ಸುಲಭಕ್ಕೆ ದಕ್ಕುವ ಸಾಧನವೂ ಆಗಿದೆ.

ಇಷ್ಟೆಲ್ಲ ಪ್ರಭಾವ, ಪರಿಣಾಮಗಳು ನಮ್ಮ ಮೇಲಿದ್ದರೂ, ವಾಸುದೇವ ಕೃಷ್ಣನ ಅಸೀಮ ವ್ಯಕ್ತಿತ್ವದ ಎಲ್ಲ ಮಜಲುಗಳನ್ನೂ ವಿಮರ್ಶಿಸಿ, ಇದಮಿತ್ಥಂ ಎನ್ನುವ ವಿಶ್ಲೇಷಣೆ ಯಾರಿಂದಲೂ ಇದುವರೆಗೂ ಸಾಧ್ಯವಾಗಿಲ್ಲ. ವೇದವ್ಯಾಸರಿಂದಲೇ ಈ ಕೆಲಸ ಆಗದಿರುವಾಗ, ಅದಕ್ಕೆ ಕೈ ಹಾಕುವುದೆಂದರೆ ತಿಳಿಗೇಡಿತನದ್ದೇ ಆಗಿಬಿಡುತ್ತದೆ.

ಅವನ ರಾಜನೀತಿ ಮತ್ತು ಧರ್ಮ ಸೂಕ್ಷ್ಮಗಳು ಆಧುನಿಕ ಕಾಲದಲ್ಲೂ ಅನುಸರಿಸಲು ಯೋಗ್ಯವಾದುದೇ ಆಗಿದೆ. ತಾತ್ವಿಕತೆ, ಸ್ಥಿತಪ್ರಜ್ಞತೆ, ಸೌಂದರ್ಯ ಪ್ರಜ್ಞೆ, ಸಂಗೀತ, ನೃತ್ಯಗಳ ಮೇಲಣ ಅಪೂರ್ವ ಹಿಡಿತ, ವೀರೋಚಿತ ಸಹೃದಯತೆ ಕೃಷ್ಣನ ಆಸ್ತಿಗಳು. ನಮ್ಮೆಲ್ಲರಿಗೆ ಹಂಚಿಯೂ ಇನ್ನೂ ಉಳಿಯಬಹುದಾದ ಅಪ್ರತಿಮ ಖಣಿಯವನು.

ಆದರ್ಶವ್ಯಕ್ತಿಯೊಬ್ಬನಿಗಿರಬೇಕಾದ ಸಕಲ ಗುಣಗಳನ್ನು ಸ್ವತಃ ಹೊಂದಿದ್ದರೂ, ಅನ್ಯರ ಆದರ್ಶಗಳನ್ನೆಂದಿಗೂ ಲಘುವಾಗಿ ಕಾಣದ ಕೃಷ್ಣ ಈ ಕಾರಣದಿಂದಲೇ ಎಲ್ಲರಲ್ಲೂ ವಿಶ್ವಾಸ ಗಳಿಸುತ್ತಾನೆ. ಅತ್ಯಾಧುನಿಕ ಮನಶಾಸ್ತ್ರಜ್ಞನಿಗಿರಬೇಕಿರುವ ಸಕಲ ಸಂಯಮಗಳನ್ನು ಆವಿರ್ಭವಿಸಿಕೊಂಡಿದ್ದ ಅವನು ಸರ್ವಕಾಲದ ನಾಯಕ. ಮನುಕುಲದ ಮುಖ್ಯ ಪ್ರಾಣ. ದುರ್ಬಲರ, ದೀನರ ಪರಮಾಪ್ತ ಸಖ. ಅವನಿಗಿದ್ದ ಮನೋವಿಶ್ಲೇಷಣಾ ಸಾಮರ್ಥ್ಯ, ಚಿಕಿತ್ಸಕ ಗುಣ, ಅಪ್ಪಟ ದೇಶೀಯವಾದದ ಪ್ರಜ್ಞೆ, ಆಧುನಿಕ ಮನೋಭೂಮಿಕೆಯಲ್ಲಿ ಅರ್ಥೈಸಿಕೊಂಡರೆ ಕಾಣುವುದು ಬರೀ ಗೋಪಾಲಕನದಲ್ಲ, ಬದಲಿಗೆ ಅದು ಒಬ್ಬ ದೊಡ್ಡ ಮನೋಚಿಕಿತ್ಸಕನದು.

ಖಿನ್ನತೆಯಲ್ಲಿ ಬಳಲುತ್ತಲೇ ಇರುವ ಈ ದಿನಮಾನದ ನಮಗೆ ಅವನ ತತ್ವಬೋಧೆಗಳು ಕೊಡಬಹುದಾದ ಔಷಧ ಬಹು ಮೌಲ್ಯದ್ದು. ಬದುಕಿನ ಯುದ್ಧ ಭೂಮಿಯ ಮುಂದೆ ಪೈಪೋಟಿಯ ಅಕ್ಷೋಹಿಣೀ ಸೈನ್ಯಗಳು ಜಮಾಯಿಸಿರುವ ವರ್ತಮಾನದ ಸಂಕಟಗಳಲ್ಲಿ ವ್ಯಕ್ತಿತ್ವಗಳು ನಾಶವಾಗಿ, ಉಳಿಯಬಹುದಾದ ವ್ಯಕ್ತಿಗಳೂ ಮತ್ತಾರಿಂದಲೋ ಆಳಿಸಿಕೊಳ್ಳಬಹುದಾದ ಸೀಮಾತೀತ ದುರ್ವಿಧಿಗಳೇ ಕಾಡುತ್ತಿರುವ ಪ್ರಸ್ತುತದಲ್ಲಿ ಕೃಷ್ಣ ಕೊಡಬಹುದಾದ ನೆರವು, ಅವನ ಗೀತಾಬೋಧೆಯ ನೇರವೂ, ಸರಳವೂ ಮತ್ತು ಸುಲಭದಲ್ಲಿ ಅಳವಡಿಸಿಕೊಳ್ಳಲೂಬಹುದಾದ ನಿರ್ಮಮಕಾರತ್ವದ ಗುಣ.

ಆಧುನಿಕ ಮನಶಾಸ್ತ್ರಜ್ಞನೊಬ್ಬ ಚಿಕಿತ್ಸೆಗೆಂದು ತನ್ನಲ್ಲಿಗೆ ಬರುವ ಖಿನ್ನತೆಯಿಂದ ಬಳಲುತ್ತಿರುವ ರೋಗಿಯನ್ನು ಹೇಗೆ ಸಂತೈಸುತ್ತಾನೆಯೋ ಅಂಥದೇ ಭಾವಗುಣ ಶ್ರೀಕೃಷ್ಣನಲ್ಲಿದೆ. ದೂತನಾಗಿ ಬಂದಾಗ ವಿದುರನಮನೆಯಲ್ಲಿಯೇ ಉಳಿಯುವ ಕೃಷ್ಣ, ಬಾಲ್ಯಸಖ ಮಕರಂದ ಮತ್ತು ಕುಚೇಲರ ಪ್ರಸಂಗಗಳಲ್ಲಿ ವರ್ತಿಸುವ ರೀತಿಯೇ ಸದಾ ಸ್ಮರಣೆಯಲ್ಲಿ ಉಳಿಯುವಂಥದು. ಖಿನ್ನತೆಗಿರುವ ಏಕೈಕ ದಿವ್ಯೌಷಧವಾದ ಆಪ್ತಸಂಭಾಷಣೆಯನ್ನು ಕೈಗೊಳ್ಳುತ್ತಿದ್ದ ಕೃಷ್ಣ ಕರ್ಣನನ್ನೂ, ಕುಂತಿಯನ್ನೂ ಒಂದೇ ರೀತಿಯ ಮಾತಿನ ಅಸ್ತ್ರದಿಂದ ಬಂಧಿಸುತ್ತಾನೆ. ಸ್ವಂತ ತಂಗಿ ಸುಭದ್ರೆಗಿಂತಲೂ ನಂಬಿದ ದ್ರೌಪದಿಯನ್ನೇ ಸದಾ ಕಾಯುತ್ತಾನೆ. ಯಾರು ತಮಗೆ ಬೇರಾರೂ ಇಲ್ಲವೆಂದು ಭಾವಿಸಿ ಕೃಷ್ಣನಲ್ಲಿ ಮೊರೆಹೋಗುತ್ತಾರೋ ಅವರೆಲ್ಲರಿಗೆ ಕೃಷ್ಣ ಸಹಾಯ ಹಸ್ತ ಚಾಚುತ್ತಾನೆ, ಮುಕ್ತಿಯ ಹಾದಿಯನ್ನೂ ದಯಪಾಲಿಸುತ್ತಾನೆ. ಮನುಷ್ಯನ ಮೂಲ ವಾಂಛೆಯನ್ನೇ ಉದ್ದೀಪಿಸಿ ಅದನ್ನೇ ಚಿಕಿತ್ಸೆಯ ಸೌಲಭ್ಯವನ್ನಾಗಿಸಿಕೊಳ್ಳುವ ಕೃಷ್ಣ ಪೌರಾಣಿಕ ಪಾತ್ರವಾಗುವುದಕ್ಕಿಂತಲೂ ಮನೋಚಿಕಿತ್ಸಕ ವೈದ್ಯ ನಾರಾಯಣನಂತೆಯೇ ಆಪತ್ತಿಗೆ ಒದಗುತ್ತಾನೆ, ನಿಷ್ಕಾಮ ಭಕ್ತಿಗೆ ಒಲಿಯುತ್ತಾನೆ.

ಎಲ್ಲ ಸಮಸ್ಯೆಗಳ ಮೂಲ ಸ್ವತಃ ಆ ವ್ಯಕ್ತಿಯೇ ಆಗಿರುತ್ತಾನೆಂಬ ಸತ್ಯವನ್ನು ಮರೆಮಾಚದೇ ಶೃತಪಡಿಸುವ ಅವನು ಯಾರು ಯಾವುದರಲ್ಲಿ ನಂಬಿಕೆ ಇಟ್ಟಲ್ಲಿ ಹೆಚ್ಚು ಲಾಭ ಬರಬಹುದೆಂದು ಊಹಿಸುತ್ತಾನೆ. ಮನುಷ್ಯ ವ್ಯಾಪಾರಗಳನ್ನೇ ವಿಶ್ಲೇಷಿಸುವ ಅಪಾರ ಅನುಭವ ಅವನ ಜೊತೆಗಿರುವುದರಿಂದ ಅವನ ಊಹೆಗಳೇ ಸತ್ಯವಾಗಿ ಹೊರಹೊಮ್ಮಿ ಅವನೇ ಸತ್ಯವಾಗಿ ಉಳಿದುದೆಲ್ಲ ಮಿಥ್ಯವಾಗಿರುವ ಹಲವು ನಿದರ್ಶನಗಳನ್ನು ಕಾಣಬಹುದು.

ಬದುಕಲು ರಾಜಿ ಮುಖ್ಯವಾದರೂ ಎಲ್ಲರನ್ನೂ, ಎಲ್ಲವನ್ನೂ ಎಲ್ಲ ಕಾಲದಲ್ಲಿಯೂ ತೃಪ್ತಿಗೊಳಿಸಿಕೊಂಡಿರಲು ಅಸಾಧ್ಯವಾಗಿರುವುದರಿಂದಲೇ, ಕೆಲವು ಸಂದರ್ಭಗಳಲ್ಲಿ ಕೆಲವರೊಂದಿಗೆ ದ್ವೇಷ, ಮನಸ್ತಾಪಗಳು ಅನಿವಾರ್ಯ ಆಗಿಯೇ ಆಗುತ್ತದೆಂಬುದನ್ನೂ ಅವನು ವಿವರಿಸಿ ಹೇಳಬಲ್ಲ. ಆತ್ಮ ಸಂಭಾಷಣೆಯ ಪರಮಸ್ಥಿಯಲ್ಲಿ ಖಿನ್ನತೆಯೆಂಬುದೂ ಬದುಕನ್ನೆದುರಿಸಲು ಆ ವ್ಯಕ್ತಿ ಬಳಸಿದ ಮತ್ತೊಂದು ಸಾಧನವೆಂದು ಸ್ವತಃ ಆ ವ್ಯಕ್ತಿಗೇ ಮನದಟ್ಟು ಮಾಡಿಕೊಡುವ ಅವನು, ಈ ಸೈಕೋ ಥೆರಪಿಯ ಕಟ್ಟ ಕಡೆಯ ಹಂತದಲ್ಲಿ ಜಾಗೃತಗೊಳ್ಳುವ ಆತ್ಮವಿಶ್ವಾಸವನ್ನು ಉಛ್ರಾಯ ಸ್ಥಿತಿಗೆ ತಂದು ಬಿಟ್ಟುಬಿಡುತ್ತಾನೆ. ಮತ್ತು ಹೀಗೆ ಆತ್ಮ ವಿಶ್ವಾಸವನ್ನು ರೀಛಾರ್ಜ್ ಮಾಡಿಕೊಂಡ ವ್ಯಕ್ತಿ ಸಹಜವಾಗಿ ಸೋಲಿನ ಭಯದಿಂದ ಹೊರ ಬರುತ್ತಾನೆ ಮತ್ತು ತನ್ನ ಹೋರಾಟದಲ್ಲಿ ಮಾಡು ಇಲ್ಲವೇ ಮಡಿ ಎನ್ನುವ ಸೂತ್ರಕ್ಕೆ ಒಳಪಡುತ್ತಾನೆ.

ದುರ್ಯೋಧನನೊಡನೆ ಕೃಷ್ಣ ದೂತನಾಗಿ ವ್ಯವಹರಿಸಿದ್ದನ್ನು, ಕಂಸನನ್ನು ವಧಿಸಿದೊಡನೆ ಉಗ್ರಸೇನನನ್ನೇ ರಾಜನಾಗಿ ಮುಂದುವರೆಸಿದ್ದನ್ನು, ಯಾದವರ ಕುಲ ಕಸುಬು ಹೈನುಗಾರಿಕೆಯನ್ನು ವಿಸ್ತರಿಸಿದ್ದನ್ನು, ದ್ವಾರಕೆಯನ್ನು ನಿರ್ಮಿಸಿ ಶತ್ರುಗಳಿಂದ ದೂರ ಉಳಿದದ್ದನ್ನು, ಈ ಮನೋ ಬಲದ ಹಿಂದಿರುವ ಅನಿವಾರ್ಯ ಸೂತ್ರಗಳನ್ನೂ ನಾವು ಅರಿಯಬೇಕು. ಸೋಲೆಂಬುದು ಖಂಡಿತವಾದಾಗ ಸದ್ಯಕ್ಕೆ ತಪ್ಪಿಸಿಕೊಂಡು ಹೋಗುವುದು ನಂತರ ಸಂದರ್ಭ ಬಂದಾಗ ದಂಡೆತ್ತಿ ಬಂದು ಶತ್ರು ದಮನ ಮಾಡುವುದೂ ಕೃಷ್ಣನ ಕಲೆ. ಅದು ನಮೊಗೊಲಿದರೆ ನಾವೆಲ್ಲ ವಿಪರೀತಮತಿಯ ಚತುರ ರಾಯಭೇರಿಗಳಾದೇವು, ರಾಜ ನಿರ್ಮಾತೃಗಳೂ ಆದೇವು.

ಶಿಷ್ಟ ರಕ್ಷಣೆ, ದುಷ್ಟ ನಿಗ್ರಹಣೆಯೇ ತನ್ನ ಗುರಿಯೆನ್ನುವ, ಧರ್ಮಸಂಸ್ಥಾಪನೆಯೇ ತನ್ನ ಉದ್ದೇಶವೆನ್ನುವ ಕೃಷ್ಣ ಯುಗಯುಗಗಳಲ್ಲೂ ಈ ಅಭಯ ವಾಕ್ಯ ಪರಿಪಾಲನೆಗೆ ಬಳಸುವುದೆಂದರೆ ತನ್ನನ್ನು ನಂಬಿದವರ ಮನಃ ಪ್ರಚೋದನೆ. ಸಾಧು, ಸಜ್ಜನರ ರಕ್ಷಣೆಗೆ ಅವನು ಅವತರಿಸುತ್ತಾನೆಂದರೆ, ಈ ಲೋಕದ ವ್ಯವಹಾರದಲ್ಲಿ ದುರ್ಜನರ ಪಾಲೂ ಮುಂದುವರೆಯುತ್ತಲೇ ಇರಬೇಕು. ಇಲ್ಲವಾದರೆ ಅವನು ಅವತರಿಸುವ ಪ್ರಮೇಯವೇ ಬರುವುದಿಲ್ಲವಲ್ಲ! ಇಂಥ ಸಂದರ್ಭದಲ್ಲಿ ನಮಗುಳಿಯುವ ದಾರಿಯೆಂದರೆ ಒಂದೋ ಸಜ್ಜನರಾಗಿ ಅವನ ನಾಮಸ್ಮರಣೆಯಲ್ಲಿ ಅವನ ಹಾದಿ ಕಾಯುವುದು ಅಥವ ನಮ್ಮ ದುಷ್ಟತನವನ್ನು ಪ್ರದರ್ಶಿಸುತ್ತ ಅವನು ನಮ್ಮ ಸಂಹಾರಕ್ಕೆಂದು ಅವತರಿಸುವ ದಿನಗಳಿಗೆ ಕಾಯುವುದು.

ಈ ಆಪ್ತ ಸಲಹಾ ಕೇಂದ್ರ ಕೇವಲ ಮೊರೆಹೋದವರಿಗಷ್ಟೇ ಅಲ್ಲ, ಮದ ಹರಿಯದೇ ನಿಂತ ದುರ್ಯೋಧನರಿಗೂ ಸದಾ ತನ್ನ ಬಾಗಿಲು ತೆಗೆದಿರಿಸಿದೆ. ಈ ಕೇಂದ್ರದ ಮಹಾಪ್ರಬಂಧಕರ ಅಪ್ಪಣೆ ಚೀಟಿ ಸಿಗುವುದಕ್ಕೆ ಮಾತ್ರ ನಿರಂತರ ಕಾಯುವಿಕೆಯ ಕುಚೇಲ ನಿಷ್ಠೆ ಇರಬೇಕು ಅಥವ ಅವಮಾನದ ಭಯ, ಸಂಶಯದ ಜೊತೆಗೇ ಅಂಟಿಸಿಕೊಂಡ ಲೋಭ, ಬಾಹುಬಲದ ಮೇಲಿನ ಅತೀವ ನಂಬಿಕೆಗಳ ಮೇಲೇ ನಿಂತು, ವಿಜೃಂಭಿಸುತ್ತಲೇ ಎದುರಿನವರು ಕರೆದರೆಂದು ದ್ವಂದ್ವ ಯುದ್ಧಕ್ಕೆ ಧುಮುಕುವ ಜರಾಸಂಧನ, ಕಂಸನ ಮನಃಸ್ಥಿತಿ ನಮಗಿರಬೇಕು. ಇಬ್ಬರನ್ನೂ ಶ್ರೀಕೃಷ್ಣ ಸಲಹುತ್ತಾನೆ, ಸಂಭಾಳಿಸುತ್ತಾನೆ. ಪಾತ್ರವನ್ನು ಒಪ್ಪಿಕೊಳ್ಳುವ ಎದೆಗಾರಿಕೆ ನಮಗೆ ಬೇಕು ಅಷ್ಟೆ!

ಯುದ್ಧ ಭಯ

ಚರಿತ್ರೆಯುದ್ದಕ್ಕೂ ಯುದ್ಧಗಳು ನಡೆಯುತ್ತಲೇ ಬಂದಿವೆ. ಅದರಲ್ಲೂ ಧರ್ಮದ ನೆವದಲ್ಲಿ ನಡೆದ ಯುದ್ಧಗಳಂತೂ ಹೆಚ್ಚು. ಹಾಗೇ ಸಾಮ್ರಾಜ್ಯ ವಿಸ್ತರಣೆ, ಲೂಟಿ-ಕೊಳ್ಳೆಗಳಿಗಾಗಿಯೇ ನಡೆದ ಯುದ್ಧಗಳೂ ಸಾಕಷ್ಟಿವೆ. ಯುದ್ಧಾನಂತರ ಯುದ್ಧಪರಿಣಾಮಗಳಿಂದ ಉಂಟಾದ ರೋಗ-ರುಜಿನಗಳು, ಆರ್ಥಿಕ ಸಂಕಷ್ಟಗಳೂ, ತತ್ತರಿಸಿದ ಜನಸಾಮಾನ್ಯರ ಬದುಕುಗಳೂ ಯುದ್ಧ ಪಿಪಾಸುಗಳ ಬುದ್ಧಿಗೆ ಸಾಣೆ ಹಿಡಿಯದ ಕಾರಣ ಈ ಆಧುನಿಕ ಯುಗದಲ್ಲೂ ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಈಗಲೂ ಯುದ್ಧಗಳು ನಡೆಯುತ್ತಲೇ ಇರುವುದು ಮನುಕುಲಕ್ಕೇ ಹಿಡಿದ ಗ್ರಹಣವಾಗಿದೆ.

ಯುದ್ಧವೆಂದರೆ ನರಮೇಧ. ಸಂಪತ್ತಿನ ವಿನಾಕಾರಣ ನಾಶ. ಅಲೆಕ್ಸಾಂಡರ್, ಅಶೋಕನಂಥ ಯುದ್ಧಪಿಪಾಸುಗಳು ಯುದ್ಧಾನಂತರ ಪಶ್ಚಾತ್ತಾಪ ಪಟ್ಟದ್ದು ಇತಿಹಾಸಕ್ಕೆ ಸೇರಿತೇ ವಿನಾ ಅದು ಪಾಠವಾಗಲೇ ಇಲ್ಲ. ಬರೀ ಸೈನಿಕರ ನಡುವೆ ನಡೆಯುತ್ತಿದ್ದ ಸಾಮ್ರಾಜ್ಯಶಾಹೀ ಯುದ್ಧಗಳಿಗಿಂತ ಆಧುನಿಕ ಯುಗದ ಯುದ್ಧ ಪರಿಣಾಮಗಳು ಅಪಾಯಕಾರಿಯಾಗಿವೆ. ಹಿಂದೆಲ್ಲ ಯುದ್ಧವೆಂದರೆ ಬರಿಯ ಸೈನಿಕರ, ರಾಜ ಸಾಮಂತರುಗಳ ಸೋಲು-ಗೆಲುವಿನಲ್ಲಿ ಮುಗಿಯುತ್ತಿದ್ದವು. ಸಾಮಾನ್ಯ ಜನರಿಗೆ ತೆರಿಗೆಯ ಹೊರೆ ಬಿಟ್ಟರೆ ಉಳಿದಂತೆ ಜನಜೀವನದ ಮೇಲೆ ಪರಿಣಾಮ ಇರುತ್ತಿರಲಿಲ್ಲ. ಆದರೆ ಆಧುನಿಕ ಯುಗದ ಯುದ್ಧಗಳಲ್ಲಿ ಬಳಸಲಾಗುತ್ತಿರುವ ಆಪಾಯಕಾರೀ ಪರಮಾಣು ಶಸ್ತ್ರಾಸ್ತ್ರಗಳು ಜನಸಾಮಾನ್ಯರ ಬದುಕನ್ನು ಮೂರಾಬಟ್ಟೆಯಾಗಿಸುವುದಷ್ಟೇ ಅಲ್ಲದೆ ನೆಮ್ಮದಿಯನ್ನು ನಾಶಮಾಡಿ ಹತಾಶ ಸ್ಥಿತಿಗೆ ಒಯ್ಯುತ್ತವೆ. ಧರ್ಮದ ಹೆಸರಲ್ಲಿ ನಡೆಯುತ್ತಲೇ ಇರುವ ದಾಳಿಗಳಂತೂ ಮನುಷ್ಯನ ಕ್ರೂರ ಮನಸ್ಸಿನ ಪ್ರದರ್ಶನದಂತಿದೆ. ಹಿಂದೆಲ್ಲ ಯುದ್ಧಗಳಲ್ಲೂ ನೀತಿ,ನಿಯಮ, ಕಟ್ಟುಪಾಡುಗಳಿದ್ದುವಂತೆ. ಅವನ್ನು ಮೀರುವ ಅನೈತಿಕ ನಡವಳಿಕೆ ಹಿಂದಿನವರಿಗೆ ಇರಲಿಲ್ಲ. ಆದರೆ ಆಧುನಿಕರಾದಷ್ಟೂ ಮೋಸಕಪಟಗಳಿಗೂ ಆಧುನಿಕತೆಯ ಮೊಹರು ಬೀಳುತ್ತಿದೆ. ಕಟ್ಟುಪಾಡುಗಳನ್ನು ಮೀರಿ ವ್ಯವಸ್ಥೆಗೆ ಸಡ್ಡು ಹೊಡೆಯುವುದೇ ಗೆಲುವಿನ ಮಜಲಾಗುತ್ತಿದೆ.

ಇತ್ತೀಚೆಗಂತೂ ಧರ್ಮಾಂಧತೆ ಹೆಚ್ಚಿ ಮತಮೋಹವನ್ನು ಜಾಗೃತಗೊಳಿಸಿ ಶ್ರೇಷ್ಟತೆಯ ಭ್ರಮೆ ಹುಟ್ಟಿಸಿ ಅನ್ಯರನ್ನು ಕೀಳಾಗಿ ಕಾಣಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ವ್ಯಕ್ತಿಯ ಇಂಥ ದುಷ್ಟತನವನ್ನು ನಿಗ್ರಹಿಸಬೇಕಾದ ವ್ಯವಸ್ಥೆಯನ್ನೇ ಕತ್ತಲಿನಲ್ಲಿಟ್ಟಿರುವ ಧರ್ಮ ಮತ್ತು ಧರ್ಮಾಧಾರಿತ ಸೀಮಿತ ಚೌಕಟ್ಟಿನ ಧೋರಣೆಗಳು ಆ ವ್ಯಕ್ತಿಯನ್ನು ಬೆಂಬಲಿಸುತ್ತವೆ. ಧರ್ಮ ಪ್ರಚಾರ ಮತ್ತು ವಿಸ್ತರಣೆಯ ಹೆಸರಲ್ಲಿ ನಡೆಯುವ ಪುಂಡಾಟಿಕೆಗಳನ್ನು ಸತ್ಕ್ರಿಯೆ ಎಂದು ಬಿಂಬಿಸುವುದರಿಂದಾಗಿ ಜನಸಾಮಾನ್ಯರ ಮೇಲೆ ಅದರ ಪರಿಣಾಮ ಘೋರವಾಗುತ್ತದೆ. ವ್ಯಕ್ತಿಯೊಬ್ಬನ ನಂಬಿಕೆಗಳನ್ನು, ಆಚರಣೆಗಳನ್ನು ಪ್ರಶ್ನಿಸುವ ಮತ್ತು ಅಧಿಕಾರಯುತವಾಗಿ ಹೀಗೇ ಮಾಡಿ ಎಂದು ಆದೇಶಿಸುವ ಮೂಲಕ ಅವನ ಮೂಲಭೂತ ಹಕ್ಕುಗಳನ್ನೇ ಕಸಿದುಕೊಂಡಂತಾಗುತ್ತದೆ. ಧರ್ಮ ನೆಲೆಯಲ್ಲಿ ನಡೆಯುವ ಯುದ್ಧ ಮತ್ತು ದಂಗೆಗಳು ಹಾಗೇ ಪುಂಡಾಟಿಕೆಗಳು ಅತ್ಯಂತ ಅಮಾನವೀಯವೂ ಕ್ರೂರವೂ ಆಗಿರುತ್ತವೆಂದು ವಿವರಿಸಿ ಹೇಳಬೇಕಿಲ್ಲ.

ಧರ್ಮದ ನೆಲೆಗಟ್ಟಿನ ಹಾಗೆಯೇ ಜನಾಂಗೀಯ ನೆಲೆಗಳ ಆದಾರದ ಮೇಲೆ ನಡೆಯುವ ಹಲ್ಲೆ ಮತ್ತು ಗಲಭೆಗಳೂ ಜನಾಂಗೀಯ ವಾದಿಗಳ ಅಹಂಕಾರ ಮತ್ತು ಅವರ ಶ್ರೇಷ್ಠತೆಯ ಪರಿಕಲ್ಪನೆಯನ್ನೂ ಆಧರಿಸಿರುತ್ತವೆ. ಬಿಳಿಯರು ಕರಿಯರ ಮೇಲೆ ನಡೆಸುತ್ತಿರುವ ದುರಾಚಾರ, ಒಂದು ದೇಶದಲ್ಲಿ ತಲೆತಲಾಂತರದಿಂದ ನೆಲೆಸಿರುವವರನ್ನು ಅವರ ಮೂಲ ನೆಲೆಯ ಕಾರಣದಿಂದಾಗಿ ವಿದೇಶಿಯರಂತೆ ಕಾಣುವುದೂ ಹೆಚ್ಚಾಗುತ್ತಿದೆ. ಹಿಟ್ಲರ್ ಮತ್ತು ಮುಸಲೋನಿ ಇನ್ನೂ ಜೀವಂತವಾಗಿರುವುದು ನಮ್ಮೆಲ್ಲರ ದುರದೃಷ್ಟ.

ಮೂಲತಃ ಯುದ್ಧವೆನ್ನುವುದೇ ಮನುಕುಲದ ವಿರೋಧಿ. ಜೀವಪಿಪಾಸುಗಳ ಅಂತಿಮ ಆಯ್ಕೆ. ಅದು ಯಾವತ್ತೂ ಸಹಿಸಲಸಾಧ್ಯವಾದ ಅತ್ಯಂತ ಕ್ರೂರ ಕೆಲಸವೆಂಬುದನ್ನು ಮತ್ತೆ ಮತ್ತೆ ಒತ್ತಿ ಹೇಳಬೇಕಾದ ಅಗತ್ಯತೆ ಇಲ್ಲ. ಪರಸ್ಪರ ವಿದ್ವೇಷ, ಪೂರ್ವಾಗ್ರಹ ಪೀಡಿತ ನಂಬಿಕೆ ಎಂಬ ಭ್ರಾಂತುಗಳು ಈ ಅಮಾನವೀಯ ಕೃತ್ಯದ ಹಿಂದಿರುವ ಶಕ್ತಿಗಳು.
ಬುದ್ಧನ ಬದ್ಧತೆ, ಗಾಂಧೀಜಿಯ ಅಹಿಂಸಾತತ್ವ ಯಾವಕಾಲಕ್ಕೂ ಇಂಥ ಯುದ್ಧಗಳ ಪಾಶಗಳಿಂದ ನಮ್ಮನ್ನು ಬಿಡಿಸಿ ತರಬಲ್ಲ ಅಸ್ತ್ರಗಳು. ಸೋದರತ್ವ ಮತ್ತು ಸ್ನೇಹ ಸಂಬಂಧಗಳು ಮಾತ್ರ ಜಗತ್ತಿನ ಯುದ್ಧಗಳನ್ನು ನಿವಾರಿಸಬಲ್ಲವು. ಬುದ್ಧ ಮತ್ತು ಗಾಂಧಿ ಆ ಕಾರಣಕ್ಕೇ ಸರ್ವಕಾಲಿಕ ನಾಯಕರಾಗುತ್ತಾರೆ. ಶಾಂತಿ ಮಂತ್ರದ ಹರಿಕಾರರಾಗಿ ಗೋಚರಿಸುತ್ತಾರೆ.