ಶುಕ್ರವಾರ ೩೦ ಅಕ್ಟೋಬರ್ ೨೦೦೯

ರಾಜ್ಯೋತ್ಸವ ವಿಶೇಷ

ವಿಜಯನಗರ ಸಾಮ್ರಾಜ್ಯ ೧೫೨೬ಕ್ಕೆ ಪತನಗೊಂಡ ನಂತರ ಕನ್ನಡಿಗರಿಗೆ ಒಂದು ಅಖಂಡ ರಾಜ್ಯ ಇಲ್ಲವಾಯಿತು. ಕಾವೇರಿಯಿಂದ ಕೃಷ್ಣಾನದಿ ಮತ್ತು ಪಶ್ಚಿಮ ಘಟ್ಟದ-ಕರಾವಳಿಯಿಂದ ಆಂಧ್ರದ ತೆಲಂಗಾಣದವರೆಗೂ ಕನ್ನಡಿಗರ ನಾಡು ಅಖಂಡವಾಗಿ ಉಳಿದಿತ್ತು. ಚಾಲುಕ್ಯರು ರಾಷ್ಟ್ರಕೂಟರುಕಟ್ಟಿದ ಕರ್ನಾಟಕ ಸಾಮ್ರಾಜ್ಯ ಕನ್ನಡ ಭಾಷೆ, ಸಾಹಿತ್ಯ, ಕಲೆ, ತತ್ವಜ್ಞಾನ ಜನಪದಗಳ ಸುಂದರ ನೆಲೆಯಾಗಿತ್ತು. ಕನ್ನಡಿಗರಿಗೆ ಹೆಮ್ಮೆ ತರುವ ವಾತಾವರಣ ಇತ್ತು. ಮುಂದೆ ನಾನಾ ಅನ್ಯ ಅರಸರ ಆಳಿಕೆ ಸುರುವಾಗಿ ಕನ್ನಡನಾಡು ಅಖಂಡವಾಗಿ ಬೆಳೆಯುವ ಅವಕಾಶ ಕಳಚಿಕೊಂಡು, ಕೆಲವು ಭಾಗಗಳು ಅನಾಥವಾದುವು;ಹಿಂದುಳಿದುವು;ಸ್ವಂತಿಕೆಯ ಲಕ್ಷಣಗಲು ಮಾಯವಾದುವು.
ಈ ಪರಿಸ್ಥಿತಿ ೧೯೫೬ರವರೆಗೂ ಇತ್ತು. ಅಂದರೆ ಮೈಸೂರು ರಾಜ್ಯ ಎಂದು ಪುನರ್ನಿಮಾಣವಾಗುವವರೆಗೆ ಕನ್ನಡಿಗರು ಚದುರಿಹೋಗಿದ್ದರು. ೧೯೨೦ರಲ್ಲಿ ಭಾರತದಲ್ಲಿ ಸ್ವಾತಂತ್ರ್ಯ ಚಳವಳಿ ವೇಗದಿಂದ ಮುನ್ನಡೆಯತೊಡಗಿತೋ ಆಗ, ಹೊಸ ಶಿಕ್ಷಣದ ಅರಿವಿನಿಂದ ಗತ ವೈಭವದ ನೆನಪಿನಿಂದ ಕನ್ನಡಿಗರು ಎಚ್ಚೆತ್ತರು. ಬೇರೆ ಬೇರೆ ಭಾಗಗಳಲ್ಲಿ ಒಡೆದು ಹೋಗಿದ್ದ ನಾಡನ್ನು ಒಂದುಗೂಡಿಸುವ ಸಂಕಲ್ಪ ಹುಟ್ಟಿತು. ಇದಕ್ಕೆ ನಾಂದಿ ಹಾಡಿದವರು ಆಲೂರು ವೆಂಕಟರಾಯರು. ಏಕೀಕರಣದ ಮಂತ್ರ ಹೇಳಿ, ನಾಡಿಗರನ್ನು ಎಚ್ಚರಿಸಿದ ಆಲೂರರು ‘ಕರ್ನಾಟಕ ಕುಲ ಪುರೋಹಿತ’ರೆನಿಸಿದ್ದಾರೆ.
೧೯೦೭ರಿಂದ ಏಕೀಕರಣ ಚಳವಳಿ ಆರಂಭವಾಯಿತು. ರಾಷ್ಟ್ರೀಯ ಚಳವಳಿ ನಡೆದದ್ದು ಬ್ರಿಟಿಷರ ವಿರುದ್ಧ. ಅದರ ಜತೆಗೇ ನಡೆದ ಏಕೀಕರಣ ಚಳವಳಿ ಯಾರ ವಿರುದ್ಧವೂ ಆಗಿರದೆ ಕನ್ನಡದ ‘ನವೋದಯ’ದಪರವಾಗಿ. ಕನ್ನಡಿಗರಲ್ಲಿ ಸ್ವಂತಿಕೆಯನ್ನು ರೂಢಿಸಿಕೊಳ್ಳುವ ಅಗತ್ಯವಿತ್ತು. ಹಳೆಯದನ್ನು ಹೊಸಬೆಳಕಿನೊಂದಿಗೆ ಮುಂದುವರೆಸಿಕೊಂಡು, ಕನ್ನಡದ ದಾರಿ ನಿರ್ಮಿಸಿಕೊಳ್ಳುವ ಅಗತ್ಯವಿತ್ತು.
ಕನ್ನಡದ ದಾರಿ ಎಂದರೆ, ನಮ್ಮತನವನ್ನು ಉಳಿಸಿಕೊಂಡು ಬೆಳೆಸಿಕೊಂಡು ಜ್ಞಾನ-ವಿಜ್ಞಾನದ ಸಹಕಾರದಿಂದ ಹೊಸತನವನ್ನು ಸಾಧಿಸುವುದು. ಕನ್ನಡಗಳು ಕರ್ನಾಟಕದಲ್ಲಿವೆ. ಅವುಗಳ ನಡುವೆ ಇರುವ ವ್ಯತ್ಯಾಸಗಳು ಉಚ್ಚಾರಣಾಕ್ರಮದ್ದು. ಆದರೆ ಶಿಷ್ಟ ಕನ್ನಡ ಎಂಬುದು ಒಂದಿದೆ. ಅದರಲ್ಲಿ ಈ ನಾಡಿನ ಭಾವೈಕ್ಯದ ಬೀಜಗಳಿವೆ. ಭಾವೈಕ್ಯವೇ ಸಹಕಾರದ ಮೂಲ. ಕನ್ನಡ ಜ್ಞಾನದಿಂದ ರಾಜ್ಯವನ್ನು ಕಟ್ಟಿದಾಗ ಪರಂಪರೆಯ ಸೊಗಸು ಬರುತ್ತದೆ. ಭಾವ ಪರಂಪರೆಗೆ ಕಾರಣವಾದ ಹಳೆಯ ಅಂಶಗಳೆಂದರೆ ಸಾಹಿತ್ಯದಲ್ಲಿ ದಾಖಲಾಗಿರುವ ಕನ್ನಡಿಗರ ಚರಿತ್ರೆ. ಕವಿರಾಜ ಮಾರ್ಗಕಾರನು ೧,೧೫೦ ವರ್ಷಗಳ ಹಿಂದೆ ಇದನ್ನೇ ಹೇಳಿದ್ದ: ನಾಡವರ್ಗಗಳು ವಿವಿಧ. ಬಣ್ಣಗಳು ಹಲವು. ಆದರೆ ವಿವೇಕ ಒಂದೇ. ರಾಜಕೀಯ ದೌರ್ಬಲ್ಯಗಳಿಂದಾಗಿ ವಿವೇಕ ಮರೆತಿತ್ತು. ಕನ್ನಡದ ವಿವೇಕ ಸಾಹಿತ್ಯದಲ್ಲಿ, ಸಂಗೀತದಲ್ಲಿ ರಕ್ತಗತವಾಗಿದೆ. ಅದನ್ನು ಎಲ್ಲರೂ ಸಾಮೂಹಿಕವಾಗಿ ಗಮನಕ್ಕೆ ತಂದುಕೊಂಡು, ಭಾಷಿಕ ಏಕಾತ್ಮ ಭಾವ ಅನುಭವಿಸಬೇಕು. ಆದರೆ ಪರಕೀಯ ಆಡಲಿತದಲ್ಲಿ ಅದು ಸಾಧ್ಯವಾಗಲಿಲ್ಲ. ೩೦ ವರ್ಷಗಳ ಚಳುವಳಿಯ ನಂತರ ಗಾಂಧೀಜಿಯ ಭಾಷಾವಾರು ಪ್ರಾಂತ ರಚನೆ ತತ್ವದ ಮೇರೆಗೆ ಕನ್ನಡಿಗರಿಗೆ ಅಖಂಡ-ಸಂಯುಕ್ತ ರಾಜ್ಯ ಆಡಲಿತಕ್ಕೆ ಸಿಕ್ಕಿತು-ಅದೇ ರಾಜ್ಯೋದಯ.
ಕನ್ನಡದ ಶಕ್ತಿಯುಕ್ತಿಗೆ ಐತಿಹಾಸಿಕ ಪರಂಪರೆ ಇದೆ. ಅದನ್ನು ಮರೆಯದಂತೆ, ಹೊರಗಿನ ಕೆಟ್ಟ ಪ್ರಭಾವಗಳಿಗೆ ಸಿಗದಂತೆ ಕನ್ನಡವನ್ನು ಮಾತಿನಲ್ಲಿ, ಆಡಳಿತದಲ್ಲಿ, ಬರಹದಲ್ಲಿ ಬಳಸಿ ಉಳಿಸಿಕೊಳ್ಳಬೇಕಾಗಿದೆ. ‘ಕನ್ನಡ’ ಭಾರತದಲ್ಲಿ ಶಾಸ್ತ್ರೀಯ ಸ್ಥಾನ ಪಡೆದ ಮೂರನೇಯ ಭಾಷೆ. ಇದರ ಹೆಮ್ಮೆ, ಅಭಿಮಾನ ಸಾಮೂಹಿಕವಾಗಿ ಇದ್ದಾಗ-ಕನ್ನಡ-ಕನ್ನಡಿಗ-ಕರ್ನಾಟಕ-ಮೂರಕ್ಕೂ ನೆಲೆ,ಬೆಲೆ.
-ಸರ್ವಜಿತ, ಹುಬ್ಬಳ್ಳಿ

ಶುಕ್ರವಾರ ೪ ಸಪ್ಟೆಂಬರ್ ೨೦೦೯

ವಿಘ್ನ ವಿನಾಶಕ ವಿನಾಯಕ

ಆಷಾಡದ ಗಾಳಿಮಳೆಗಳು ಶ್ರಾವಣದ ಕುಂಭದ್ರೋಣ ಕಡಿಮೆಯಾಗಿ ಭಾದ್ರಪದ ಕಾಲಿಟ್ಟಿದೆ. ಚರಾಚರ ಪ್ರಕೃತಿಯಲ್ಲಿ ಮೇಳೈಸಿದ್ದ ಜಡತನ ಹಿಂದೆ ಸರಿದು ಜೀವನೋತ್ಸಾಹ ಪುಟಿದೇಳುವ ಕಾಲವಿದು ಎಂದು ಆಯುರ್ವೇದ ಹೇಳುತ್ತದೆ. ಮಳೆ ಕಡಿಮೆಯಾದ ಕಾರಣ ರೈತಾಪಿ ಜನರೂ ಬರುವ ದಿನಗಳ ನಿರೀಕ್ಷೆಯಲ್ಲಿ ಇರುತ್ತಾರೆ. ಭಾದ್ರಪದ ಶುಕ್ಲದ ಚೌತಿ ವಿನಾಯಕನ ಹಬ್ಬ. ಗೌರಿ ಮತ್ತು ಗಣೇಶರ ಹಬ್ಬ ಜನಸಮುದಾಯದಲ್ಲಿ ಹರ್ಷ-ಸಂಭ್ರಮಗಳನ್ನು ಅರಳಿಸುತ್ತದೆ.
ಭಾರತೀಯ ದೇವತೆಗಳಲ್ಲಿ ಅತ್ಯಂತ ಲೋಕ ಖ್ಯಾತನಾದವನು ಗಣೇಶನೇ. ಅವನು ಕೇವಲ ವಿಘ್ನ ನಾಶಕನಷ್ಟೇ ಅಲ್ಲ, ಸಿದ್ಧಿ ಪ್ರದಾಯಕನೆಂದೂ ಪೂಜಿಸಲ್ಪಡುತ್ತಾನೆ. ಎಲ್ಲ ಕೆಲಸಗಳ ಆರಂಭದಲ್ಲೂ ಗಣೇಶನನ್ನು ಪ್ರಾರ್ಥಿಸುವುದು ಪಾರಂಪರಿಕವಾಗಿ ನಡೆದು ಬಂದ ಆಚರಣೆ. ಹೀಗೆ ಅಗ್ರಪೂಜೆಗೂ ಮೊದಲ ನಮಸ್ಕಾರದ ಮನ್ನಣೆಗೂ ಪಾತ್ರನಾಗುವ ವಿನಾಯಕ ಭಕ್ತರ ಸಂಕಲ್ಪ ಶಕ್ತಿಗೆ ಬಲದುಂಬಿ ಕಾರ್ಯಸಿದ್ಧಿಯಾಗುವಂತೆ ಹರಸುತ್ತಾನೆಂಬ ನಂಬಿಕೆ ಇದೆ. ಮಹರ್ಷಿ ವೇದವ್ಯಾಸರು ರಚಿಸಿದ ಮಹಾಭಾರತ ಕೃತಿಗೆ ಗಣಪತಿಯೇ ಲಿಪಿಕಾರನೆಂಬ ಹೇಳಿಕೆಯೂ ಪ್ರಸಿದ್ಧವಾದುದೇ ಆಗಿದೆ. ನಮ್ಮ ಪ್ರಾಚೀನ ಕಾವ್ಯಗಳ ಆರಂಭವಂತೂ ಗಣಪತಿಯನ್ನು ನಮಿಸದೇ ಮುಂದೆ ಹೋಗುವುದೇ ಇಲ್ಲ. ಕವಿ, ಕಲಾವಿದ, ಪಂಡಿತ, ಪಾಮರರೆಲ್ಲರಿಗೂ ಗಣೇಶ ಪರಮಪ್ರಿಯ ದೇವರು.
ಮುಂಜಾನೆ ಮೂಡಣದ ಅಂಚಿನಲ್ಲಿ ನಿಧಾನವಾಗಿ ಸಣ್ಣವನಾಗಿ ಕಾಣಿಸಿಕೊಂಡು ನಂತರ ಭೂಮ್ಯಾಕಾಶಗಳನ್ನೆಲ್ಲ ಆವರಿಸಿಕೊಳ್ಳುವ ಸೂರ್ಯನಂತೆ ಸಿದ್ಧಿಪ್ರದ ವಿನಾಯಕನು ಭೂಮ್ಯಾಕಾಶಗಳನ್ನೆಲ್ಲ ವ್ಯಾಪಿಸಿರುವನೆಂದು ಲಕ್ಷೀಶ ಕವಿ ತನ್ನ ಜೈಮಿನಿ ಭಾರತದಲ್ಲಿ ವರ್ಣಿಸಿದ್ದಾನೆ. ಭಾವಜಗತ್ತನ್ನೂ, ಬೌಧ್ಧಿಕ ಜಗತ್ತನ್ನೂ, ವಿಜ್ಞಾನ ಜಗತ್ತನ್ನೂ ಸರಿಸಮನಾಗಿ ವ್ಯಾಪಿಸಿರುವ ಗಣೇಶನನ್ನು ಕುರಿತ ದಂತ ಕತೆಗಳೂ ಲೆಕ್ಕಕ್ಕೇ ಸಿಕ್ಕದಷ್ಟು ಹೇರಳವಾಗಿವೆ. ಶಿವ ಪುರಾಣದಲ್ಲಿ ವರ್ಣಿತನಾಗಿರುವಂತೆ -ಮತ್ತ ಮಾತಂಗ ವದನೋ, ಗಂಗೋಮಾ ಶಂಕರಾತ್ಮಜಃ, ಆಕಾಶದೇಹೋ, ದಿಗ್ಬಾಹುಃ, ಸೋಮಃ ಸೂರ್ಯಾಗ್ನಿಲೋಚನಃ- ಮದಿಸಿರುವ ಆನೆಯ ವದನವಿರುವ ವಿನಾಯಕ ಗಂಗೆ,ಉಮೆ ಮತ್ತು ಶಂಕರರ ಮುದ್ದಿನ ಮಗ. ಆಕಾಶವೇ ಅವನ ಶರೀರವಾದರೆ, ದಿಕ್ಕುಗಳವನ ತೋಳುಗಳು. ಸೂರ್ಯ ಚಂದ್ರರೇ ಅವನ ಕಣ್ಣುಗಳು.- ಈ ವಿಭೂತಿ ರೂಪವನ್ನು ಕಲ್ಪಿಸಿಕೊಂಡ ಮನಸ್ಸಿನ ಹಿಂದೆ ಇರುವ ಭೂಮ ಕಲ್ಪನೆ ಅದ್ಭುತವಾದುದು.
ಪೌರಾಣಿಕ ಮತ್ತು ಜಾನಪದ ಕಥೆಗಳಂತೂ ಗಣೇಶನ ಹುಟ್ಟು ಅವನ ಲೀಲೆ ಮತ್ತು ಮಹಿಮೆಗಳನ್ನು ಹಾಡಿಹೊಗಳಿವೆ. ಆ ಕಥೆಗಳ ಹಿಂದಿರುವ ರೋಚಕ ಕಲ್ಪನೆಯಂತೂ ರಮ್ಯಲೋಕವನ್ನು ಕೇಳುಗನಲ್ಲಿ ಮೂಡಿಸುತ್ತವೆ. ಈ ಕಲ್ಪಿತ ಆವರಣಗಳಿಂದ ಅವನನ್ನು ಬೇರ್ಪಡಿಸಿ ಸಾಕ್ಷಾತ್ ಪರಬ್ರಹ್ಮ ಸ್ವರೂಪನೆಂಬ ಎತ್ತರದ ನೆಲೆಯಲ್ಲಿ ಪರಿಭಾವಿಸಿದ ದಾರ್ಶನಿಕ ಚಿಂತನೆಯೂ ನಮಗೆ ಗೊತ್ತಿದೆ. ಇಡೀ ಬ್ರಹ್ಮಾಂಡದ ಆದಿ, ಮಧ್ಯ, ಅಂತ್ಯಗಳಲ್ಲಷ್ಟೇ ಅಲ್ಲದೆ ಸೃಷ್ಟಿಯ ಎಲ್ಲ ವ್ಯಾಪಾರಗಳಲ್ಲೂ ಗಣಪತಿಯ ಪಾರಮ್ಯವನ್ನೇ ಕಂಡ ಚಿಂತನೆಯೂ ನಮ್ಮ ಪ್ರಾಚೀನ ಚಿಂತನಗಳಲ್ಲಿವೆ. ಅಥರ್ವಶೀರ್ಷದಲ್ಲಿ ಅವನನ್ನು ಹೀಗೆ ವರ್ಣಿಸಲಾಗಿದೆ. - ಸರ್ವಂ ಜಗದಿದಂ ತ್ವತ್ತಸ್ತಿಷ್ಟತಿ, ಸರ್ವಂ ಜಗದಿದಂ ತ್ವಯಿಲಯಮೇಷ್ಯತಿ. ಸರ್ವಂ ಜಗದಿದಂ ತ್ವಯಿಪ್ರತ್ಯೇತಿ, ತ್ವಂ ಭೂಮಿರಾಪೋನಲೋನಿಲೋ ನಭಃ -ಈ ಜಗತ್ತು ನಿನ್ನ ಕಾರಣದಿಂದಲೇ ಉಂಟಾಗಿದೆ. ನಿನ್ನಾಧಾರದ ಮೇಲೇ ನಿಂತಿದೆ. ಕಡೆಗೂ ನಿನ್ನಲ್ಲಿಯೇ ಲೀನವಾಗುವುದು ಈ ಜಗತ್ತು. ಭೂಮಿ, ನೀರು, ಗಾಳಿ, ಬೆಂಕಿ, ಆಕಾಶ ಪಂಚಭೂತಗಳಲ್ಲೂ ನೀನೇ ತುಂಬಿದ್ದೀ-
ಇಂಥ ಉನ್ನತ ನೆಲೆಯಲ್ಲಿ ನಮ್ಮ ಹಿರಿಯರು ಕಂಡಿದ್ದ ಗಣೇಶ ಇವತ್ತು ಬೀದಿಬೀದಿಗಳ ಪೆಂಡಾಲುಗಳಲ್ಲಿ, ಶಾಲೆ ಕಾಲೇಜುಗಳ ಅಂಗಳದಲ್ಲಿ ಅಷ್ಟೇ ಏಕೆ ಸಂತೆ ಮಾಳಗಳ ಜನಸಾಗರದ ಮಧ್ಯದಲ್ಲೂ ವಿಜೃಂಭಿಸುತ್ತಿದ್ದಾನೆ. ಭಕ್ತಿಗೋ ಭಾವಕ್ಕೋ ಅಥವ ವಸೂಲಿ ದಂಧೆಯ ವ್ಯಾಪರಕ್ಕೋ ಪಕ್ಕಾಗುತ್ತಿದ್ದಾನೆ. ಸಿನಿಮಾ ಸಂಗೀತಗಳ ಭರಾಟೆಯಲ್ಲಿ, ಡಿಸ್ಕೋ ಹಾಡುಗಳ ದರಬಾರಿನಲ್ಲಿ ಕೂಡ ಗಣೇಶನ ಮೂರ್ತಿ ಇರುವುದು ಪರಿಸ್ಥಿತಿಯ ವ್ಯಂಗ್ಯವಾಗಿದೆ.
ಉನ್ನತ ನೆಲೆಯಲ್ಲಿ ವಿದ್ಯಾಧಿದೇವತೆಯೆಂದೂ ಪರಿಗಣಿಸಿರುವ ಗಣೇಶ ನಮ್ಮೆಲ್ಲರಲ್ಲೂ ನಾಳಿನ ಒಳ್ಳೆಯದಕ್ಕಾಗಿ ಇಂದು ನಾವು ಕೈಗೆತ್ತಿಕೊಳ್ಳಬೇಕಾದ ಕೆಲಸಕಾರ್ಯಗಳನ್ನು ನಿರ್ವಿಘ್ನವಾಗಿ ನಡೆಸಿಕೊಡಲಿ ಎಂಬುದು ಗಣೇಶ ಚೌತಿಯ ಪ್ರಾರ್ಥನೆಯಾಗಿದೆ. ಇನ್ನು ಗಣೇಶನ ತಾಯಿ ಗೌರಿಯಂತೂ ಸಾಕ್ಷಾತ್ ಪರಶಿವನ ಮಡದಿಯಾಗಿಯೂ ಲೌಕಿಕದ ಎಲ್ಲ ಹೆಣ್ಣುಮಕ್ಕಳ ಹಾಗೆ ಕಷ್ಟ-ಸುಖಗಳನ್ನು ಕಂಡವಳು. ದಾಕ್ಷಾಯಣಿಯಾಗಿ ಅವತರಿಸಿ ಶಿವನನ್ನೇ ವರಿಸಿದ ಛಲವಂತೆ ಅವಳು. ಹೀಗೆ ಗೌರಿ-ಗಣೇಶರ ಹಬ್ಬ ತಾಯಿ-ಮಗುವಿನ ಬಾಂಧವ್ಯದ ಸಂಕೇತವಾಗಿ ನಮಗೆಲ್ಲ ಪಾಠ ಹೇಳುತ್ತಲೇ ಇರುವುದನ್ನೂ ನಾವು ಗಮನಿಸಲೇಬೇಕು.

ಬುಧವಾರ ೨ ಸಪ್ಟೆಂಬರ್ ೨೦೦೯

ಕೃಷ್ಣನೆಂಬ ಮನೋಚಿಕಿತ್ಸಕ

ಗೀತಾಚಾರ್ಯನಾದ ಶ್ರೀ ಕೃಷ್ಣ ಭಾರತೀಯ ಚಿಂತನೆ ಮತ್ತು ಜೀವನ ತತ್ವಗಳ ಮೇಲೆ ಅದ್ಭುತ ಪ್ರಭಾವ ಬೀರಿದವನು. ಅತ್ಯಂತ ಆಳವಾಗಿ ಮತ್ತು ವಿಸ್ತಾರವಾಗಿ ಅವನ ಪ್ರಭಾವಳಿ ಇದೆ. ನಮ್ಮ ಮತಧರ್ಮ- ತತ್ವ ದೃಷ್ಟಿ, ಅಧ್ಯಾತ್ಮ- ಯೋಗ, ಕಾವ್ಯ- ಶಿಲ್ಪ, ಸಂಗೀತ-ನರ್ತನ, ಸಂಸ್ಕೃತಿ-ನಾಗರೀಕತೆ ಹೀಗೆ ಜೀವನದ ವೈವಿಧ್ಯತೆಗೆ ಸಂಬಂಧಿಸಿದ ಎಲ್ಲ ಕ್ಷೇತ್ರಗಳಲ್ಲಿಯೂ ಅವನು ಇದ್ದಾನೆ. ಅಂದರೆ ಈ ಎಲ್ಲ ಕ್ಷೇತ್ರಗಳ ಪರಿಣಿತರಿಗೂ ಕೃಷ್ಣನ ಪ್ರಭಾವಲಯ ತಟ್ಟಿದೆ. ಅವನು ನಮ್ಮೆಲ್ಲರ ಹೃದಯ-ಬುದ್ಧಿಗಳನ್ನು ಆಕರ್ಷಿಸಿದ ಸರ್ವಕಾಲಿಕ ಕಿಂದರಜೋಗಿಯೆಂದೇ ಖ್ಯಾತನಾಗಿದ್ದಾನೆ. ಯುವಕ-ಯುವತಿಯರು, ಋಷಿ-ಮುನಿಗಳು, ಪಂಡಿತ-ಪಾಮರರು, ವ್ಯವಹಾರ ಚತುರರು-ರಾಜಕೀಯ ನಿಪುಣರೂ ಅವನ ಮಾಂತ್ರಿಕ ಶಕ್ತಿಗೆ ತಲೆದೂಗಿದ್ದಾರೆ.

ಭಾಗವತ ಮತ್ತು ಭಾರತದ ಕತೆಗಳಂತೆಯೇ ನಮ್ಮ ಜಾನಪದರೂ ಕೃಷ್ಣನನ್ನು ಪೋಷಿಸಿ ಬೆಳಸಿದ್ದಾರೆ. ಅವನ ಜೀವನದ ಘಟನೆಗಳಿಗೆ ಲೌಕಿಕದ ಆಸೆ-ಆಮಿಷಗಳನ್ನೂ ತಳುಕು ಹಾಕಿ ಸಂಭ್ರಮಿಸಿದ್ದಾರೆ. ಶೈಶವದಿಂದಲೂ ಗಾರುಡಿಗನೆಂದೇ ಬಿಂಬಿಸಲ್ಪಟ್ಟ ಅವನು ಬಾಲ್ಯದಲ್ಲಿ ಬೆಣ್ಣೆ ಕದ್ದ ಬಾಲಕೃಷ್ಣ, ಯೌವನದಲ್ಲಿ ಗೋಪಿಯರ ಮನಸ್ಸು ಕದ್ದ ಗೋಪೀ ಕೃಷ್ಣ, ದ್ವಾರಕೆಯನ್ನು ಕಟ್ಟಿದ ನಿರ್ಮಾತೃ ಶ್ರೀ ಕೃಷ್ಣ, ಪಾಂಡವರ ಪರವಾಗಿ ನಿಂತ ಧರ್ಮೋದ್ಧಾರಕ, ಯುದ್ಧದ ಗೊಂದಲದ ನಡುವೆಯೇ ಗೀತೆಯನ್ನು ಬೋಧಿಸಿದ ಗೀತಾಚಾರ್ಯ.

ಹೀಗೆ ಸಲಹೆಗಾರನಾಗಿ, ರಾಯಭಾರಿಯಾಗಿ, ಸದಾ ಧರ್ಮದ ಪರವಾಗಿ, ಸದ್ಗುಣಿಗಳ ಪರವಾಗಿ, ದಿಕ್ಕಿಲ್ಲದವರ ಪರವಾಗಿ ಅವನು ನಿಂತಿದ್ದಾನೆ. ರಾಜಕೀಯವಾಗಿ ಪ್ರಮುಖ ಸ್ಥಾನವನ್ನು ಪಡೆಯದೆಯೂ ರಾಜನಿರ್ಮಾತೃವಾಗಿಯೇ ಅವನು ಉಳಿದಿದ್ದಾನೆ. ತನ್ನ ತಂತ್ರ, ಪ್ರತಿತಂತ್ರಗಳಿಂದ ರಾಜಕಾರಣವನ್ನು ನಿಯಂತ್ರಿಸಿದ ಕೃಷ್ಣ ಸದಾ ಸುಚೇತನ ಸ್ವರೂಪಿ. ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಶಸ್ತ್ರ ಸನ್ಯಾಸ ಮಾಡಿದ್ದ ಅರ್ಜುನನಿಗೆ ಸಾರಥಿಯಾಗಿ, ವಿಷಾದ ಭರಿತನಾಗಿದ್ದ ಪಾರ್ಥನಿಗೆ ಬುದ್ಧಿ-ಮನಸ್ಸುಗಳ ಸ್ಥಿಮಿತತೆಯನ್ನು ಬೋಧಿಸಿದವನು. ಗೀತೆಯ ಒಂದೊಂದು ಸಾಲೂ ಸೋಲಿನ ಭಯದಲ್ಲಿರುವವರಿಗೆ ಗೆಲುವಿನ ಸಂಜೀವಿನಿ ಕೊಡುವಂಥದು.

ಭಗವದ್ಗೀತೆಯಲ್ಲಿ ಪ್ರತಿಪಾದಿತವಾಗಿರುವ ಜೀವನ ತತ್ವವು ಸ್ವತಃ ಆ ತತ್ವಗಳಿಗೆ ಬದ್ಧನಾಗಿದ್ದ ಗುರುವಿನ ನಿಶ್ಚಿತ ಅಭಿಪ್ರಾಯಗಳನ್ನು ತಿಳಿಸುತ್ತದೆ. ಜೀವನೋತ್ಸಾಹವನ್ನು ತಗ್ಗಿಸದ, ಜ್ಞಾನದ ನಿಧಿಯೇ ಆಗಿರುವ ತತ್ವವಾಗಿದೆ. ಮನುಷ್ಯ ಹೇಗೆ ತನ್ನ ಜೀವಿತವನ್ನು ಶ್ರೇಷ್ಠವಾಗಿಸಿಕೊಳ್ಳಬಹುದೆಂಬುದರ ದಾರಿದೀವಿಗೆಯೂ ಆಗಿದೆ.

ಸಾಮಾನ್ಯ ಜೀವನದಲ್ಲಿ ನಾವು ತೋರುವ ಉತ್ಸಾಹ ಸ್ವಾರ್ಥಕ್ಕೆ ನೇರವಾಗಿ ಸಂಬಂಧಿಸಿರುತ್ತದೆ. ನಮ್ಮೆಲ್ಲರ ಕಾರ್ಯಕಲಾಪಗಳನ್ನು ಕಳವಳಗಳಿಂದ, ಭಾವೋದ್ರೇಕಗಳಿಂದ, ಅನುಕಂಪ-ದುಃಖಗಳಿಂದ ಇವೇ ಮೊದಲಾದ ಉಪಕರಣಗಳಿಂದ ನಮ್ಮ ಸ್ವಾರ್ಥಕ್ಕೆ ಲಾಭ ತರುವಂತೆ ಹೆಣೆದು ಕೊಂಡಿರುತ್ತೇವೆ. ಹಾಗೆ ಲಾಭ ಬಾರದಾದಾಗ ಜೀವನೋತ್ಸಾಹವೇ ಉಡುಗಿಹೋಗುತ್ತದೆ. ನಮ್ಮ ನೀತಿ ನಡವಳಿಕೆಗಳ ಹಿಂದಿನ ಚಾಲಕ ಶಕ್ತಿಯನ್ನೇ ಕಳೆದುಕೊಂಡು ಅಂತರಂಗದಲ್ಲಿ ಕಳವಳವೂ, ಬಹಿರಂಗದಲ್ಲಿ ಜಡತನವೂ ಸೇರಿದ ಉದಾಸೀನದೆಡೆಗೆ ನಾವು ಸಾಗುತ್ತೇವೆ. ಇಂತಹುದೇ ಸ್ಥಿತಿಯಲ್ಲಿದ್ದ ಅರ್ಜುನನಿಗೆ- ಅನಾಸಕ್ತನಾಗಿದ್ದಾಗಲೂ ಉತ್ಸಾಹ ಕಳೆದುಕೊಳ್ಳದ, ಕಳವಳಗೊಳ್ಳದೆಯೂ ಕಾರ್ಯಮಗ್ನನಾಗುವ ಸಾಧ್ಯತೆಯನ್ನು ಶ್ರೀಕೃಷ್ಣ ತನ್ನ ತತ್ವಬೋಧೆಯ ಮೂಲಕ ತಿಳಿಸಿ ಹೇಳಿದ. ಸ್ವಾರ್ಥ ಮೂಲವಾದ ಆಸೆ ಮತ್ತು ಭಾವೋದ್ರೇಕಗಳಿಂದ ಮುಕ್ತರಾದಾಗ ಮಾತ್ರ ಸರ್ವೋತ್ಕೃಷ್ಟತೆ ಸಾಧ್ಯವೆಂದು ಮನಗಾಣಿಸಿದ.

ಅವನು ನಮಗೆ ಬರಿಯ ಪುರಾಣದ ಪಾತ್ರವಲ್ಲ. ಕೇವಕ ಇತಿಹಾಸದ ನೆನಪೂ ಅಲ್ಲ. ಅವನೆಂದರೆ ಸದಾ ನಮ್ಮೊಂದಿಗಿರುವ ಸತ್ಯದ ಸಂಗತಿ. ಎಂದಿಗೂ ಬರೆದು ಮುಗಿಸಲಾಗದ ಕವಿತೆಯ ಪ್ರತಿಮೆ. ಜೊತೆಗಾತಿಯ ಕಾಲಂದುಗೆಗಳ ಝಲುರು. ಕಾಲ ಕಳೆದಂತೆಲ್ಲ ಅವನ ಧ್ವನಿ ಮತ್ತು ಆಕಾರಗಳಿಗೆ ಹೊಸ ರೂಪ ಮತ್ತು ಮಹತ್ವಗಳು ಜೊತೆಯಾಗುತ್ತಲೇ ನಡೆದಿವೆ. ಪ್ರಾಚೀನ ಆದರ್ಶದೊಡನೆ ಸಮಕಾಲೀನ ವ್ಯಸನಗಳನ್ನು ಸಮೀಕರಿಸಿಕೊಳ್ಳುವುದಕ್ಕೆ,ತತ್ವ ಜ್ಞಾನದೊಂದಿಗೆ ಆಧುನಿಕ ಪಡಿಪಾಟಲುಗಳನ್ನು ಅರ್ಥೈಸಿಕೊಳ್ಳುವುದಕ್ಕೆ ಕೃಷ್ಣ ತೋರಿಸಿರುವ ದಾರಿ ಸಮನ್ವಯದ ಕೊರತೆಯಿಂದ ನಲುಗುತ್ತಿರುವ ನಮಗೆ ಸಿದ್ಧೌಷಧವಾಗಿದೆ.

ಶ್ರೀಕೃಷ್ಣನ ಕತೆ ನಮ್ಮೆಲ್ಲರನ್ನೂ ಬೃಂದಾವನದ ಚಕ್ಕಂದಕ್ಕೆ, ದ್ವಾರಕೆಯ ಸೌಂದರ್ಯಕ್ಕೆ, ವ್ರಜದ ಕಷ್ಟ-ನಿಷ್ಟುರಗಳಿಗಷ್ಟೇ ಕರೆದೊಯ್ಯುವುದಿಲ್ಲ. ಬದಲಿಗೆ ಅವನ ಕತೆ ನಮ್ಮ ನಮ್ಮ ಪಯಣದ ಜೊತೆ ಜೊತೆಗೇ ಸಾಥಿಯಾಗುವ ಗೆಲುವಿನ ದಾರಿಗಿರುವ ಕಂಟಕಗಳನ್ನು ನಿವಾರಿಸುವ ಸುಲಭಕ್ಕೆ ದಕ್ಕುವ ಸಾಧನವೂ ಆಗಿದೆ.

ಇಷ್ಟೆಲ್ಲ ಪ್ರಭಾವ, ಪರಿಣಾಮಗಳು ನಮ್ಮ ಮೇಲಿದ್ದರೂ, ವಾಸುದೇವ ಕೃಷ್ಣನ ಅಸೀಮ ವ್ಯಕ್ತಿತ್ವದ ಎಲ್ಲ ಮಜಲುಗಳನ್ನೂ ವಿಮರ್ಶಿಸಿ, ಇದಮಿತ್ಥಂ ಎನ್ನುವ ವಿಶ್ಲೇಷಣೆ ಯಾರಿಂದಲೂ ಇದುವರೆಗೂ ಸಾಧ್ಯವಾಗಿಲ್ಲ. ವೇದವ್ಯಾಸರಿಂದಲೇ ಈ ಕೆಲಸ ಆಗದಿರುವಾಗ, ಅದಕ್ಕೆ ಕೈ ಹಾಕುವುದೆಂದರೆ ತಿಳಿಗೇಡಿತನದ್ದೇ ಆಗಿಬಿಡುತ್ತದೆ.

ಅವನ ರಾಜನೀತಿ ಮತ್ತು ಧರ್ಮ ಸೂಕ್ಷ್ಮಗಳು ಆಧುನಿಕ ಕಾಲದಲ್ಲೂ ಅನುಸರಿಸಲು ಯೋಗ್ಯವಾದುದೇ ಆಗಿದೆ. ತಾತ್ವಿಕತೆ, ಸ್ಥಿತಪ್ರಜ್ಞತೆ, ಸೌಂದರ್ಯ ಪ್ರಜ್ಞೆ, ಸಂಗೀತ, ನೃತ್ಯಗಳ ಮೇಲಣ ಅಪೂರ್ವ ಹಿಡಿತ, ವೀರೋಚಿತ ಸಹೃದಯತೆ ಕೃಷ್ಣನ ಆಸ್ತಿಗಳು. ನಮ್ಮೆಲ್ಲರಿಗೆ ಹಂಚಿಯೂ ಇನ್ನೂ ಉಳಿಯಬಹುದಾದ ಅಪ್ರತಿಮ ಖಣಿಯವನು.

ಆದರ್ಶವ್ಯಕ್ತಿಯೊಬ್ಬನಿಗಿರಬೇಕಾದ ಸಕಲ ಗುಣಗಳನ್ನು ಸ್ವತಃ ಹೊಂದಿದ್ದರೂ, ಅನ್ಯರ ಆದರ್ಶಗಳನ್ನೆಂದಿಗೂ ಲಘುವಾಗಿ ಕಾಣದ ಕೃಷ್ಣ ಈ ಕಾರಣದಿಂದಲೇ ಎಲ್ಲರಲ್ಲೂ ವಿಶ್ವಾಸ ಗಳಿಸುತ್ತಾನೆ. ಅತ್ಯಾಧುನಿಕ ಮನಶಾಸ್ತ್ರಜ್ಞನಿಗಿರಬೇಕಿರುವ ಸಕಲ ಸಂಯಮಗಳನ್ನು ಆವಿರ್ಭವಿಸಿಕೊಂಡಿದ್ದ ಅವನು ಸರ್ವಕಾಲದ ನಾಯಕ. ಮನುಕುಲದ ಮುಖ್ಯ ಪ್ರಾಣ. ದುರ್ಬಲರ, ದೀನರ ಪರಮಾಪ್ತ ಸಖ. ಅವನಿಗಿದ್ದ ಮನೋವಿಶ್ಲೇಷಣಾ ಸಾಮರ್ಥ್ಯ, ಚಿಕಿತ್ಸಕ ಗುಣ, ಅಪ್ಪಟ ದೇಶೀಯವಾದದ ಪ್ರಜ್ಞೆ, ಆಧುನಿಕ ಮನೋಭೂಮಿಕೆಯಲ್ಲಿ ಅರ್ಥೈಸಿಕೊಂಡರೆ ಕಾಣುವುದು ಬರೀ ಗೋಪಾಲಕನದಲ್ಲ, ಬದಲಿಗೆ ಅದು ಒಬ್ಬ ದೊಡ್ಡ ಮನೋಚಿಕಿತ್ಸಕನದು.

ಖಿನ್ನತೆಯಲ್ಲಿ ಬಳಲುತ್ತಲೇ ಇರುವ ಈ ದಿನಮಾನದ ನಮಗೆ ಅವನ ತತ್ವಬೋಧೆಗಳು ಕೊಡಬಹುದಾದ ಔಷಧ ಬಹು ಮೌಲ್ಯದ್ದು. ಬದುಕಿನ ಯುದ್ಧ ಭೂಮಿಯ ಮುಂದೆ ಪೈಪೋಟಿಯ ಅಕ್ಷೋಹಿಣೀ ಸೈನ್ಯಗಳು ಜಮಾಯಿಸಿರುವ ವರ್ತಮಾನದ ಸಂಕಟಗಳಲ್ಲಿ ವ್ಯಕ್ತಿತ್ವಗಳು ನಾಶವಾಗಿ, ಉಳಿಯಬಹುದಾದ ವ್ಯಕ್ತಿಗಳೂ ಮತ್ತಾರಿಂದಲೋ ಆಳಿಸಿಕೊಳ್ಳಬಹುದಾದ ಸೀಮಾತೀತ ದುರ್ವಿಧಿಗಳೇ ಕಾಡುತ್ತಿರುವ ಪ್ರಸ್ತುತದಲ್ಲಿ ಕೃಷ್ಣ ಕೊಡಬಹುದಾದ ನೆರವು, ಅವನ ಗೀತಾಬೋಧೆಯ ನೇರವೂ, ಸರಳವೂ ಮತ್ತು ಸುಲಭದಲ್ಲಿ ಅಳವಡಿಸಿಕೊಳ್ಳಲೂಬಹುದಾದ ನಿರ್ಮಮಕಾರತ್ವದ ಗುಣ.

ಆಧುನಿಕ ಮನಶಾಸ್ತ್ರಜ್ಞನೊಬ್ಬ ಚಿಕಿತ್ಸೆಗೆಂದು ತನ್ನಲ್ಲಿಗೆ ಬರುವ ಖಿನ್ನತೆಯಿಂದ ಬಳಲುತ್ತಿರುವ ರೋಗಿಯನ್ನು ಹೇಗೆ ಸಂತೈಸುತ್ತಾನೆಯೋ ಅಂಥದೇ ಭಾವಗುಣ ಶ್ರೀಕೃಷ್ಣನಲ್ಲಿದೆ. ದೂತನಾಗಿ ಬಂದಾಗ ವಿದುರನಮನೆಯಲ್ಲಿಯೇ ಉಳಿಯುವ ಕೃಷ್ಣ, ಬಾಲ್ಯಸಖ ಮಕರಂದ ಮತ್ತು ಕುಚೇಲರ ಪ್ರಸಂಗಗಳಲ್ಲಿ ವರ್ತಿಸುವ ರೀತಿಯೇ ಸದಾ ಸ್ಮರಣೆಯಲ್ಲಿ ಉಳಿಯುವಂಥದು. ಖಿನ್ನತೆಗಿರುವ ಏಕೈಕ ದಿವ್ಯೌಷಧವಾದ ಆಪ್ತಸಂಭಾಷಣೆಯನ್ನು ಕೈಗೊಳ್ಳುತ್ತಿದ್ದ ಕೃಷ್ಣ ಕರ್ಣನನ್ನೂ, ಕುಂತಿಯನ್ನೂ ಒಂದೇ ರೀತಿಯ ಮಾತಿನ ಅಸ್ತ್ರದಿಂದ ಬಂಧಿಸುತ್ತಾನೆ. ಸ್ವಂತ ತಂಗಿ ಸುಭದ್ರೆಗಿಂತಲೂ ನಂಬಿದ ದ್ರೌಪದಿಯನ್ನೇ ಸದಾ ಕಾಯುತ್ತಾನೆ. ಯಾರು ತಮಗೆ ಬೇರಾರೂ ಇಲ್ಲವೆಂದು ಭಾವಿಸಿ ಕೃಷ್ಣನಲ್ಲಿ ಮೊರೆಹೋಗುತ್ತಾರೋ ಅವರೆಲ್ಲರಿಗೆ ಕೃಷ್ಣ ಸಹಾಯ ಹಸ್ತ ಚಾಚುತ್ತಾನೆ, ಮುಕ್ತಿಯ ಹಾದಿಯನ್ನೂ ದಯಪಾಲಿಸುತ್ತಾನೆ. ಮನುಷ್ಯನ ಮೂಲ ವಾಂಛೆಯನ್ನೇ ಉದ್ದೀಪಿಸಿ ಅದನ್ನೇ ಚಿಕಿತ್ಸೆಯ ಸೌಲಭ್ಯವನ್ನಾಗಿಸಿಕೊಳ್ಳುವ ಕೃಷ್ಣ ಪೌರಾಣಿಕ ಪಾತ್ರವಾಗುವುದಕ್ಕಿಂತಲೂ ಮನೋಚಿಕಿತ್ಸಕ ವೈದ್ಯ ನಾರಾಯಣನಂತೆಯೇ ಆಪತ್ತಿಗೆ ಒದಗುತ್ತಾನೆ, ನಿಷ್ಕಾಮ ಭಕ್ತಿಗೆ ಒಲಿಯುತ್ತಾನೆ.

ಎಲ್ಲ ಸಮಸ್ಯೆಗಳ ಮೂಲ ಸ್ವತಃ ಆ ವ್ಯಕ್ತಿಯೇ ಆಗಿರುತ್ತಾನೆಂಬ ಸತ್ಯವನ್ನು ಮರೆಮಾಚದೇ ಶೃತಪಡಿಸುವ ಅವನು ಯಾರು ಯಾವುದರಲ್ಲಿ ನಂಬಿಕೆ ಇಟ್ಟಲ್ಲಿ ಹೆಚ್ಚು ಲಾಭ ಬರಬಹುದೆಂದು ಊಹಿಸುತ್ತಾನೆ. ಮನುಷ್ಯ ವ್ಯಾಪಾರಗಳನ್ನೇ ವಿಶ್ಲೇಷಿಸುವ ಅಪಾರ ಅನುಭವ ಅವನ ಜೊತೆಗಿರುವುದರಿಂದ ಅವನ ಊಹೆಗಳೇ ಸತ್ಯವಾಗಿ ಹೊರಹೊಮ್ಮಿ ಅವನೇ ಸತ್ಯವಾಗಿ ಉಳಿದುದೆಲ್ಲ ಮಿಥ್ಯವಾಗಿರುವ ಹಲವು ನಿದರ್ಶನಗಳನ್ನು ಕಾಣಬಹುದು.

ಬದುಕಲು ರಾಜಿ ಮುಖ್ಯವಾದರೂ ಎಲ್ಲರನ್ನೂ, ಎಲ್ಲವನ್ನೂ ಎಲ್ಲ ಕಾಲದಲ್ಲಿಯೂ ತೃಪ್ತಿಗೊಳಿಸಿಕೊಂಡಿರಲು ಅಸಾಧ್ಯವಾಗಿರುವುದರಿಂದಲೇ, ಕೆಲವು ಸಂದರ್ಭಗಳಲ್ಲಿ ಕೆಲವರೊಂದಿಗೆ ದ್ವೇಷ, ಮನಸ್ತಾಪಗಳು ಅನಿವಾರ್ಯ ಆಗಿಯೇ ಆಗುತ್ತದೆಂಬುದನ್ನೂ ಅವನು ವಿವರಿಸಿ ಹೇಳಬಲ್ಲ. ಆತ್ಮ ಸಂಭಾಷಣೆಯ ಪರಮಸ್ಥಿಯಲ್ಲಿ ಖಿನ್ನತೆಯೆಂಬುದೂ ಬದುಕನ್ನೆದುರಿಸಲು ಆ ವ್ಯಕ್ತಿ ಬಳಸಿದ ಮತ್ತೊಂದು ಸಾಧನವೆಂದು ಸ್ವತಃ ಆ ವ್ಯಕ್ತಿಗೇ ಮನದಟ್ಟು ಮಾಡಿಕೊಡುವ ಅವನು, ಈ ಸೈಕೋ ಥೆರಪಿಯ ಕಟ್ಟ ಕಡೆಯ ಹಂತದಲ್ಲಿ ಜಾಗೃತಗೊಳ್ಳುವ ಆತ್ಮವಿಶ್ವಾಸವನ್ನು ಉಛ್ರಾಯ ಸ್ಥಿತಿಗೆ ತಂದು ಬಿಟ್ಟುಬಿಡುತ್ತಾನೆ. ಮತ್ತು ಹೀಗೆ ಆತ್ಮ ವಿಶ್ವಾಸವನ್ನು ರೀಛಾರ್ಜ್ ಮಾಡಿಕೊಂಡ ವ್ಯಕ್ತಿ ಸಹಜವಾಗಿ ಸೋಲಿನ ಭಯದಿಂದ ಹೊರ ಬರುತ್ತಾನೆ ಮತ್ತು ತನ್ನ ಹೋರಾಟದಲ್ಲಿ ಮಾಡು ಇಲ್ಲವೇ ಮಡಿ ಎನ್ನುವ ಸೂತ್ರಕ್ಕೆ ಒಳಪಡುತ್ತಾನೆ.

ದುರ್ಯೋಧನನೊಡನೆ ಕೃಷ್ಣ ದೂತನಾಗಿ ವ್ಯವಹರಿಸಿದ್ದನ್ನು, ಕಂಸನನ್ನು ವಧಿಸಿದೊಡನೆ ಉಗ್ರಸೇನನನ್ನೇ ರಾಜನಾಗಿ ಮುಂದುವರೆಸಿದ್ದನ್ನು, ಯಾದವರ ಕುಲ ಕಸುಬು ಹೈನುಗಾರಿಕೆಯನ್ನು ವಿಸ್ತರಿಸಿದ್ದನ್ನು, ದ್ವಾರಕೆಯನ್ನು ನಿರ್ಮಿಸಿ ಶತ್ರುಗಳಿಂದ ದೂರ ಉಳಿದದ್ದನ್ನು, ಈ ಮನೋ ಬಲದ ಹಿಂದಿರುವ ಅನಿವಾರ್ಯ ಸೂತ್ರಗಳನ್ನೂ ನಾವು ಅರಿಯಬೇಕು. ಸೋಲೆಂಬುದು ಖಂಡಿತವಾದಾಗ ಸದ್ಯಕ್ಕೆ ತಪ್ಪಿಸಿಕೊಂಡು ಹೋಗುವುದು ನಂತರ ಸಂದರ್ಭ ಬಂದಾಗ ದಂಡೆತ್ತಿ ಬಂದು ಶತ್ರು ದಮನ ಮಾಡುವುದೂ ಕೃಷ್ಣನ ಕಲೆ. ಅದು ನಮೊಗೊಲಿದರೆ ನಾವೆಲ್ಲ ವಿಪರೀತಮತಿಯ ಚತುರ ರಾಯಭೇರಿಗಳಾದೇವು, ರಾಜ ನಿರ್ಮಾತೃಗಳೂ ಆದೇವು.

ಶಿಷ್ಟ ರಕ್ಷಣೆ, ದುಷ್ಟ ನಿಗ್ರಹಣೆಯೇ ತನ್ನ ಗುರಿಯೆನ್ನುವ, ಧರ್ಮಸಂಸ್ಥಾಪನೆಯೇ ತನ್ನ ಉದ್ದೇಶವೆನ್ನುವ ಕೃಷ್ಣ ಯುಗಯುಗಗಳಲ್ಲೂ ಈ ಅಭಯ ವಾಕ್ಯ ಪರಿಪಾಲನೆಗೆ ಬಳಸುವುದೆಂದರೆ ತನ್ನನ್ನು ನಂಬಿದವರ ಮನಃ ಪ್ರಚೋದನೆ. ಸಾಧು, ಸಜ್ಜನರ ರಕ್ಷಣೆಗೆ ಅವನು ಅವತರಿಸುತ್ತಾನೆಂದರೆ, ಈ ಲೋಕದ ವ್ಯವಹಾರದಲ್ಲಿ ದುರ್ಜನರ ಪಾಲೂ ಮುಂದುವರೆಯುತ್ತಲೇ ಇರಬೇಕು. ಇಲ್ಲವಾದರೆ ಅವನು ಅವತರಿಸುವ ಪ್ರಮೇಯವೇ ಬರುವುದಿಲ್ಲವಲ್ಲ! ಇಂಥ ಸಂದರ್ಭದಲ್ಲಿ ನಮಗುಳಿಯುವ ದಾರಿಯೆಂದರೆ ಒಂದೋ ಸಜ್ಜನರಾಗಿ ಅವನ ನಾಮಸ್ಮರಣೆಯಲ್ಲಿ ಅವನ ಹಾದಿ ಕಾಯುವುದು ಅಥವ ನಮ್ಮ ದುಷ್ಟತನವನ್ನು ಪ್ರದರ್ಶಿಸುತ್ತ ಅವನು ನಮ್ಮ ಸಂಹಾರಕ್ಕೆಂದು ಅವತರಿಸುವ ದಿನಗಳಿಗೆ ಕಾಯುವುದು.

ಈ ಆಪ್ತ ಸಲಹಾ ಕೇಂದ್ರ ಕೇವಲ ಮೊರೆಹೋದವರಿಗಷ್ಟೇ ಅಲ್ಲ, ಮದ ಹರಿಯದೇ ನಿಂತ ದುರ್ಯೋಧನರಿಗೂ ಸದಾ ತನ್ನ ಬಾಗಿಲು ತೆಗೆದಿರಿಸಿದೆ. ಈ ಕೇಂದ್ರದ ಮಹಾಪ್ರಬಂಧಕರ ಅಪ್ಪಣೆ ಚೀಟಿ ಸಿಗುವುದಕ್ಕೆ ಮಾತ್ರ ನಿರಂತರ ಕಾಯುವಿಕೆಯ ಕುಚೇಲ ನಿಷ್ಠೆ ಇರಬೇಕು ಅಥವ ಅವಮಾನದ ಭಯ, ಸಂಶಯದ ಜೊತೆಗೇ ಅಂಟಿಸಿಕೊಂಡ ಲೋಭ, ಬಾಹುಬಲದ ಮೇಲಿನ ಅತೀವ ನಂಬಿಕೆಗಳ ಮೇಲೇ ನಿಂತು, ವಿಜೃಂಭಿಸುತ್ತಲೇ ಎದುರಿನವರು ಕರೆದರೆಂದು ದ್ವಂದ್ವ ಯುದ್ಧಕ್ಕೆ ಧುಮುಕುವ ಜರಾಸಂಧನ, ಕಂಸನ ಮನಃಸ್ಥಿತಿ ನಮಗಿರಬೇಕು. ಇಬ್ಬರನ್ನೂ ಶ್ರೀಕೃಷ್ಣ ಸಲಹುತ್ತಾನೆ, ಸಂಭಾಳಿಸುತ್ತಾನೆ. ಪಾತ್ರವನ್ನು ಒಪ್ಪಿಕೊಳ್ಳುವ ಎದೆಗಾರಿಕೆ ನಮಗೆ ಬೇಕು ಅಷ್ಟೆ!

ಯುದ್ಧ ಭಯ

ಚರಿತ್ರೆಯುದ್ದಕ್ಕೂ ಯುದ್ಧಗಳು ನಡೆಯುತ್ತಲೇ ಬಂದಿವೆ. ಅದರಲ್ಲೂ ಧರ್ಮದ ನೆವದಲ್ಲಿ ನಡೆದ ಯುದ್ಧಗಳಂತೂ ಹೆಚ್ಚು. ಹಾಗೇ ಸಾಮ್ರಾಜ್ಯ ವಿಸ್ತರಣೆ, ಲೂಟಿ-ಕೊಳ್ಳೆಗಳಿಗಾಗಿಯೇ ನಡೆದ ಯುದ್ಧಗಳೂ ಸಾಕಷ್ಟಿವೆ. ಯುದ್ಧಾನಂತರ ಯುದ್ಧಪರಿಣಾಮಗಳಿಂದ ಉಂಟಾದ ರೋಗ-ರುಜಿನಗಳು, ಆರ್ಥಿಕ ಸಂಕಷ್ಟಗಳೂ, ತತ್ತರಿಸಿದ ಜನಸಾಮಾನ್ಯರ ಬದುಕುಗಳೂ ಯುದ್ಧ ಪಿಪಾಸುಗಳ ಬುದ್ಧಿಗೆ ಸಾಣೆ ಹಿಡಿಯದ ಕಾರಣ ಈ ಆಧುನಿಕ ಯುಗದಲ್ಲೂ ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಈಗಲೂ ಯುದ್ಧಗಳು ನಡೆಯುತ್ತಲೇ ಇರುವುದು ಮನುಕುಲಕ್ಕೇ ಹಿಡಿದ ಗ್ರಹಣವಾಗಿದೆ.

ಯುದ್ಧವೆಂದರೆ ನರಮೇಧ. ಸಂಪತ್ತಿನ ವಿನಾಕಾರಣ ನಾಶ. ಅಲೆಕ್ಸಾಂಡರ್, ಅಶೋಕನಂಥ ಯುದ್ಧಪಿಪಾಸುಗಳು ಯುದ್ಧಾನಂತರ ಪಶ್ಚಾತ್ತಾಪ ಪಟ್ಟದ್ದು ಇತಿಹಾಸಕ್ಕೆ ಸೇರಿತೇ ವಿನಾ ಅದು ಪಾಠವಾಗಲೇ ಇಲ್ಲ. ಬರೀ ಸೈನಿಕರ ನಡುವೆ ನಡೆಯುತ್ತಿದ್ದ ಸಾಮ್ರಾಜ್ಯಶಾಹೀ ಯುದ್ಧಗಳಿಗಿಂತ ಆಧುನಿಕ ಯುಗದ ಯುದ್ಧ ಪರಿಣಾಮಗಳು ಅಪಾಯಕಾರಿಯಾಗಿವೆ. ಹಿಂದೆಲ್ಲ ಯುದ್ಧವೆಂದರೆ ಬರಿಯ ಸೈನಿಕರ, ರಾಜ ಸಾಮಂತರುಗಳ ಸೋಲು-ಗೆಲುವಿನಲ್ಲಿ ಮುಗಿಯುತ್ತಿದ್ದವು. ಸಾಮಾನ್ಯ ಜನರಿಗೆ ತೆರಿಗೆಯ ಹೊರೆ ಬಿಟ್ಟರೆ ಉಳಿದಂತೆ ಜನಜೀವನದ ಮೇಲೆ ಪರಿಣಾಮ ಇರುತ್ತಿರಲಿಲ್ಲ. ಆದರೆ ಆಧುನಿಕ ಯುಗದ ಯುದ್ಧಗಳಲ್ಲಿ ಬಳಸಲಾಗುತ್ತಿರುವ ಆಪಾಯಕಾರೀ ಪರಮಾಣು ಶಸ್ತ್ರಾಸ್ತ್ರಗಳು ಜನಸಾಮಾನ್ಯರ ಬದುಕನ್ನು ಮೂರಾಬಟ್ಟೆಯಾಗಿಸುವುದಷ್ಟೇ ಅಲ್ಲದೆ ನೆಮ್ಮದಿಯನ್ನು ನಾಶಮಾಡಿ ಹತಾಶ ಸ್ಥಿತಿಗೆ ಒಯ್ಯುತ್ತವೆ. ಧರ್ಮದ ಹೆಸರಲ್ಲಿ ನಡೆಯುತ್ತಲೇ ಇರುವ ದಾಳಿಗಳಂತೂ ಮನುಷ್ಯನ ಕ್ರೂರ ಮನಸ್ಸಿನ ಪ್ರದರ್ಶನದಂತಿದೆ. ಹಿಂದೆಲ್ಲ ಯುದ್ಧಗಳಲ್ಲೂ ನೀತಿ,ನಿಯಮ, ಕಟ್ಟುಪಾಡುಗಳಿದ್ದುವಂತೆ. ಅವನ್ನು ಮೀರುವ ಅನೈತಿಕ ನಡವಳಿಕೆ ಹಿಂದಿನವರಿಗೆ ಇರಲಿಲ್ಲ. ಆದರೆ ಆಧುನಿಕರಾದಷ್ಟೂ ಮೋಸಕಪಟಗಳಿಗೂ ಆಧುನಿಕತೆಯ ಮೊಹರು ಬೀಳುತ್ತಿದೆ. ಕಟ್ಟುಪಾಡುಗಳನ್ನು ಮೀರಿ ವ್ಯವಸ್ಥೆಗೆ ಸಡ್ಡು ಹೊಡೆಯುವುದೇ ಗೆಲುವಿನ ಮಜಲಾಗುತ್ತಿದೆ.

ಇತ್ತೀಚೆಗಂತೂ ಧರ್ಮಾಂಧತೆ ಹೆಚ್ಚಿ ಮತಮೋಹವನ್ನು ಜಾಗೃತಗೊಳಿಸಿ ಶ್ರೇಷ್ಟತೆಯ ಭ್ರಮೆ ಹುಟ್ಟಿಸಿ ಅನ್ಯರನ್ನು ಕೀಳಾಗಿ ಕಾಣಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ವ್ಯಕ್ತಿಯ ಇಂಥ ದುಷ್ಟತನವನ್ನು ನಿಗ್ರಹಿಸಬೇಕಾದ ವ್ಯವಸ್ಥೆಯನ್ನೇ ಕತ್ತಲಿನಲ್ಲಿಟ್ಟಿರುವ ಧರ್ಮ ಮತ್ತು ಧರ್ಮಾಧಾರಿತ ಸೀಮಿತ ಚೌಕಟ್ಟಿನ ಧೋರಣೆಗಳು ಆ ವ್ಯಕ್ತಿಯನ್ನು ಬೆಂಬಲಿಸುತ್ತವೆ. ಧರ್ಮ ಪ್ರಚಾರ ಮತ್ತು ವಿಸ್ತರಣೆಯ ಹೆಸರಲ್ಲಿ ನಡೆಯುವ ಪುಂಡಾಟಿಕೆಗಳನ್ನು ಸತ್ಕ್ರಿಯೆ ಎಂದು ಬಿಂಬಿಸುವುದರಿಂದಾಗಿ ಜನಸಾಮಾನ್ಯರ ಮೇಲೆ ಅದರ ಪರಿಣಾಮ ಘೋರವಾಗುತ್ತದೆ. ವ್ಯಕ್ತಿಯೊಬ್ಬನ ನಂಬಿಕೆಗಳನ್ನು, ಆಚರಣೆಗಳನ್ನು ಪ್ರಶ್ನಿಸುವ ಮತ್ತು ಅಧಿಕಾರಯುತವಾಗಿ ಹೀಗೇ ಮಾಡಿ ಎಂದು ಆದೇಶಿಸುವ ಮೂಲಕ ಅವನ ಮೂಲಭೂತ ಹಕ್ಕುಗಳನ್ನೇ ಕಸಿದುಕೊಂಡಂತಾಗುತ್ತದೆ. ಧರ್ಮ ನೆಲೆಯಲ್ಲಿ ನಡೆಯುವ ಯುದ್ಧ ಮತ್ತು ದಂಗೆಗಳು ಹಾಗೇ ಪುಂಡಾಟಿಕೆಗಳು ಅತ್ಯಂತ ಅಮಾನವೀಯವೂ ಕ್ರೂರವೂ ಆಗಿರುತ್ತವೆಂದು ವಿವರಿಸಿ ಹೇಳಬೇಕಿಲ್ಲ.

ಧರ್ಮದ ನೆಲೆಗಟ್ಟಿನ ಹಾಗೆಯೇ ಜನಾಂಗೀಯ ನೆಲೆಗಳ ಆದಾರದ ಮೇಲೆ ನಡೆಯುವ ಹಲ್ಲೆ ಮತ್ತು ಗಲಭೆಗಳೂ ಜನಾಂಗೀಯ ವಾದಿಗಳ ಅಹಂಕಾರ ಮತ್ತು ಅವರ ಶ್ರೇಷ್ಠತೆಯ ಪರಿಕಲ್ಪನೆಯನ್ನೂ ಆಧರಿಸಿರುತ್ತವೆ. ಬಿಳಿಯರು ಕರಿಯರ ಮೇಲೆ ನಡೆಸುತ್ತಿರುವ ದುರಾಚಾರ, ಒಂದು ದೇಶದಲ್ಲಿ ತಲೆತಲಾಂತರದಿಂದ ನೆಲೆಸಿರುವವರನ್ನು ಅವರ ಮೂಲ ನೆಲೆಯ ಕಾರಣದಿಂದಾಗಿ ವಿದೇಶಿಯರಂತೆ ಕಾಣುವುದೂ ಹೆಚ್ಚಾಗುತ್ತಿದೆ. ಹಿಟ್ಲರ್ ಮತ್ತು ಮುಸಲೋನಿ ಇನ್ನೂ ಜೀವಂತವಾಗಿರುವುದು ನಮ್ಮೆಲ್ಲರ ದುರದೃಷ್ಟ.

ಮೂಲತಃ ಯುದ್ಧವೆನ್ನುವುದೇ ಮನುಕುಲದ ವಿರೋಧಿ. ಜೀವಪಿಪಾಸುಗಳ ಅಂತಿಮ ಆಯ್ಕೆ. ಅದು ಯಾವತ್ತೂ ಸಹಿಸಲಸಾಧ್ಯವಾದ ಅತ್ಯಂತ ಕ್ರೂರ ಕೆಲಸವೆಂಬುದನ್ನು ಮತ್ತೆ ಮತ್ತೆ ಒತ್ತಿ ಹೇಳಬೇಕಾದ ಅಗತ್ಯತೆ ಇಲ್ಲ. ಪರಸ್ಪರ ವಿದ್ವೇಷ, ಪೂರ್ವಾಗ್ರಹ ಪೀಡಿತ ನಂಬಿಕೆ ಎಂಬ ಭ್ರಾಂತುಗಳು ಈ ಅಮಾನವೀಯ ಕೃತ್ಯದ ಹಿಂದಿರುವ ಶಕ್ತಿಗಳು.
ಬುದ್ಧನ ಬದ್ಧತೆ, ಗಾಂಧೀಜಿಯ ಅಹಿಂಸಾತತ್ವ ಯಾವಕಾಲಕ್ಕೂ ಇಂಥ ಯುದ್ಧಗಳ ಪಾಶಗಳಿಂದ ನಮ್ಮನ್ನು ಬಿಡಿಸಿ ತರಬಲ್ಲ ಅಸ್ತ್ರಗಳು. ಸೋದರತ್ವ ಮತ್ತು ಸ್ನೇಹ ಸಂಬಂಧಗಳು ಮಾತ್ರ ಜಗತ್ತಿನ ಯುದ್ಧಗಳನ್ನು ನಿವಾರಿಸಬಲ್ಲವು. ಬುದ್ಧ ಮತ್ತು ಗಾಂಧಿ ಆ ಕಾರಣಕ್ಕೇ ಸರ್ವಕಾಲಿಕ ನಾಯಕರಾಗುತ್ತಾರೆ. ಶಾಂತಿ ಮಂತ್ರದ ಹರಿಕಾರರಾಗಿ ಗೋಚರಿಸುತ್ತಾರೆ.

ಬುಧವಾರ ೧೦ ಜೂನ್ ೨೦೦೯

ದೆಸಿತನದ ಸೊಗಡಿಗೆ ಆಧುನಿಕತೆಯ ಬಡಿವಾರ

ದೇಸೀತನದ ಘಮಲಿಗೆ ಆಧುನಿಕತೆಯ ಬಡಿವಾರ

ಚ. ಹ. ರಘುನಾಥರ ಬಿಡಿ ಬರಹಗಳನ್ನು ಓದಿದಾಗೆಲ್ಲಾ ಅವರೊಬ್ಬ ಸಾಹಿತ್ಯದ ವಿನಮ್ರ ವಿದ್ಯಾರ್ಥಿಯೆಂದು ಮತ್ತೆ ಮತ್ತೆ ಮನದಟ್ಟಾಗುತ್ತದೆ. ಸೂಕ್ಷ್ಮ ಮನಸ್ಸಿನ ಅಂತರ್ಮುಖೀ ವ್ಯಕ್ತಿತ್ವವೊಂದು ಸುತ್ತಣ ವಿವರಗಳನ್ನು, ಘಟನೆಗಳನ್ನು ಗಮನಿಸಿದ, ಗ್ರಹಿಸಿದ ಮತ್ತವುಗಳನ್ನು ಅತಿ ವಿಶಿಷ್ಟತೆಯಿಂದ ಬರಹಗಳನ್ನಾಗಿಸುವ ಕಲೆ ಅವರಿಗೆ ಸಿದ್ಧಿಸಿದೆ. ಈಗಾಗಲೇ ಕವಿಯಾಗಿ, ಕಥೆಗಾರನಾಗಿ ಹೊಸ ಪೀಳಿಗೆಯ ಲೇಖಕರ ನಡುವೆ ತಮ್ಮದೇ ಛಾಪನ್ನಿರಿಸಿಕೊಂಡಿರುವ ರಘುನಾಥರ ಪ್ರಬಂಧ ಸಂಕಲನ “ ರಾಗಿಮುದ್ದೆ” ದೇಸೀತನದ ಘಮಲನ್ನು ನೆನಪಿಸುತ್ತಲೇ ಆಧುನಿಕ ಬಡಿವಾರಗಳನ್ನು ಅಣಕಿಸುತ್ತದೆ, ವಿಮರ್ಶಿಸುತ್ತದೆ.

ಆತ್ಮೀಯತೆಯಿಂದ ನೇರವಾಗಿ ಸಹಜವಾಗಿ ಸಂಕೋಚಗಳಿಲ್ಲದೆ ತಮಗನಿಸಿದ್ದನ್ನು ದಿಟವಾಗಿ ಹೇಳುವುದು ಈ ಎಲ್ಲಾ ಪ್ರಬಂಧಗಳ ಮೂಲ ಗುಣ. ಗ್ರಾಮೀಣ ಬದುಕನ್ನು ಚಿತ್ರಿಸುತ್ತಲೇ ನಗರ ಜೀವನದ ತಲ್ಲಣಗಳನ್ನು ತೆರೆದಿಡುವ ರಘುನಾಥರ ಶೈಲಿ ಪ್ರಿಯವಾಗುತ್ತದೆ. ಸೂಕ್ಷ್ಮ ಮನಸ್ಸೊಂದು ಬದುಕನ್ನು ಅರಿಯುವ ಪ್ರಯತ್ನ ಇಲ್ಲಿನ ಪ್ರಬಂಧಗಳಲ್ಲಿ ಢಾಳಾಗಿದೆ. ಲೇಖಕನ ಸ್ವಂತ ಅನುಭವದ ಸ್ಪರ್ಶ ಈರೀತಿಯ ಬರಹಗಳಲ್ಲಿಲ್ಲದೇ ಹೋದಲ್ಲಿ ಅವು ಹೈಸ್ಕೂಲಿನ ಚರ್ಚಾಸ್ಪರ್ಧೆಯ ಭಾಷಣಗಳಾಗಿಬಿಡುತ್ತವೆ ಎನ್ನುವ ಅರಿವು ಅವರಿಗೆ ಗೊತ್ತಿದೆ. ಹಾಗಾಗಿಯೆ “ಅಧರಂ ಮಧುರಂ” ನಂತಹ ಕಾಮನ್ ಹ್ಯಾಂಗೋವರ್‌ನಲ್ಲಿ ಮಿಡಿಯುತ್ತಲೇ ಅಮೆಝಾನ್ ಕಾಡುಗಳಲ್ಲೂ ಹಲ್ಲು ತೊಳೆಸಿಕೊಳ್ಳಬಲ್ಲರು! ಮುಂಜಾನೆಯ “ಯಾತ್ರೆ” ಯ ಚಿತ್ರಗಳನ್ನು ಕಣ್ಮುಂದೆ ನಿಲ್ಲಿಸಬಲ್ಲಂತೆಯೇ ಚಂದಿರನನ್ನು ಕಂಬ ಕಂಬಗಳಿಗೆ ನೇಣು ಹಾಕಬಲ್ಲರು. ಜಾತ್ರೆಯ ಕಾಮನಬಿಲ್ಲು ಬಿಡಿಸಿಡುತ್ತಲೇ ಗುಬ್ಬಿಗಳಿಗೆ ಮನೆಯನ್ನೂ ಕಟ್ಟಿಕೊಡಬಲ್ಲವರು-ಚ.ಹ.ರಘುನಾಧ.

ಹೊಸ ಪೀಳಿಗೆಯ ಲೇಖಕರಲ್ಲಿ ಕವಿಗಳ ಸಂಖ್ಯೆ ವಿಫುಲವಾಗಿದೆ. ಕಥೆಗಾರರಂತೆ ಕಾದಂಬರಿಕಾರರ ಲೆಕ್ಕವೂ ಸಿಗುತ್ತವೆ. ಆದರೆ ಪ್ರಬಂಧ ನೇಯುವುದು ಸುಲಭದ ಮಾತಲ್ಲ ಎಂದು ಗೊತ್ತಿರುವುದರಿಂದಲೋ ಏನೋ ಈ ಕೆಲಸಕ್ಕೆ ಕೈ ಹಾಕಿದವರ ಸಂಖ್ಯೆ ತೀರ ಕಡಿಮೆ.

ಪ್ರಬಂಧವು ಸುಲಲಿತವಾಗುವುದು ಲಾಲಿತ್ಯದಿಂದ. ಕಾವ್ಯಗುಣದ ಜೊತೆಗೇ ಸ್ವಾರಸ್ಯಕರ ಅನುಭವಗಳನ್ನು ಮತ್ತು ಸೃಜನಶೀಲತೆಗಳನ್ನು ಅವು ಒಳಗೊಂಡಿರಬೇಕು. ಶಬ್ದಾರ್ಥಗಳ ಮೇಲಾಟದ ಜೊತೆಗೆ ಚಿಂತನಶೀಲತೆಯ ಸ್ಪರ್ಶವೂ ಪ್ರಬಂಧಕ್ಕಿರಬೇಕು. ಸೀಮಿತ ಚೌಕಟ್ಟಿನಲ್ಲೇ ವಸ್ತುವೊಂದನ್ನು ಆಕರ್ಷಕವಾಗಿ ಹೇಳುತ್ತಲೇ ಸಾಮಾಜಿಕ, ಸಾಂಸ್ಕೃತಿಕ ಪಲ್ಲಟಗಳನ್ನೂ ಅದು ಬಿಂಬಿಸಬೇಕು. ವಿಡಂಬನೆ ಮೂಲ ಉದ್ದೇಶವಲ್ಲದಿದ್ದರೂ ವಿಮರ್ಶಾತ್ಮಕ ನೆಲೆಯಲ್ಲಿ ವಸ್ತುವನ್ನ ಅನಾವರಣಗೊಳಿಸಿರಬೇಕು!......... ಪ್ರಬಂಧಗಳ ಮಾದರಿಗಳನ್ನು ಕುರಿತು ನೆನಪಿಸಿಕೊಂಡರೆ ಈ ಕಾಲದಲ್ಲಿ ನಮಗೆ ಅನುಭವಗಳ ಕೊರತೆಯಿದೆಯೇನೋ ಅನ್ನಿಸುತ್ತದೆ. ನಗರ ಜೀವನದ ಪಡಿಪಾಟಲುಗಳು ಸಂದರ್ಭವನ್ನ ಸಹಜವಾಗಿ ಗ್ರಹಿಸುವುದನ್ನ ನಿಯಂತ್ರಿಸುತ್ತಿದೆಯೇನೋ ಎಂಬ ಅನುಮಾನಗಳೂ ಕಾಡುತ್ತವೆ.

ಮೂರ್ತಿರಾವ್, ಗೊರೂರು ಮುಂತಾದವರು ಸಹಜವಾಗಿ ಸಮೃದ್ಧವಾಗಿ ಬೆಳೆದ ಪ್ರಬಂಧ ಪ್ರಕಾರವನ್ನು ನೆನಪಿಸಿಕೊಂಡರೆ ಅದು ವಿನಮ್ರತೆಯಿಲ್ಲದವರಿಗೆ ಒಲಿಯದ ಕಬ್ಬಿಣದ ಕಡಲೆ ಎಂದೇ ಭಾಸವಾಗುತ್ತದೆ. ಆದರೆ ರಘುನಾಥ ಸಮರ್ಥವಾಗಿ ಅದನ್ನು ಎದುರಿಸಿ ಗೆದ್ದಿದ್ದಾರೆ. ಸಾಹಿತ್ಯ, ಚಲನಚಿತ್ರ, ಪ್ರಯಾಣ ಮುಂತಾದ ಆಸಕ್ತಿಗಳ ಮೂಲಕ ಮನುಷ್ಯ ಸಂಬಂಧಗಳ ರೀತಿಯನ್ನು ಅವುಗಳ ವಿಭಿನ್ನ ನೆಲೆಗಳನ್ನು ಅನ್ವೇಷಿಸುವ ಶೈಲಿ ಗುಣಗ್ರಾಹಿಯಾದುದೇ ಆಗಿದೆ. ತೀವ್ರತೆಯ ತುರೀಯಕ್ಕೇರದೇ ಅನುಭವದ ಪಾತಳಿಯಲ್ಲಿ ಸಣ್ಣ ಸಂಗತಿಗಳನ್ನು ವಿಶ್ಲೇಷಿಸುವ ರೀತಿ ಮೆಚ್ಚತಕ್ಕದ್ದೇ ಆಗಿದೆ.

ಸಂಕಲನದಲ್ಲಿರುವ ಒಂದು ಡಜನ್ ಪ್ರಬಂಧಗಳನ್ನು ಒಂದೇ ಬೀಸಿನಲ್ಲಿ ಓದಿದರೆ ಅವುಗಳ ಸ್ವಾರಸ್ಯ ಮನಸ್ಸಿಗಿಳಿಯುವುದಿಲ್ಲ. ಕವಿತೆಗಳನ್ನೋ, ಕಥೆಗಳನ್ನೋ ಒಂದು ಸ್ಥಿರವಾದ ಮಾನಸಿಕ ಸ್ಥಿತಿಯಲ್ಲಿ ಮಾತ್ರ ಓದಲು ಸಾಧ್ಯ. ಪೂರ್ವ ತಯಾರಿಯಿರದಿದ್ದರೆ ಪದ್ಯಗಳ ಓದು ಒಂದು ರೀತಿಯಲ್ಲಿ ಶಿಕ್ಷೆಯೇ!. ಈ ಅಪಾಯಗಳನ್ನು ಪ್ರಬಂಧಗಳು ಮೀರಿರುವುದರಿಂದ ಪ್ರಯಾಣದ ನಡುವೆಯೋ, ಊಟದ ವಿರಾಮದಲ್ಲಿಯೋ ಇವನ್ನು ಅಸ್ವಾದಿಸಲು ಸಾಧ್ಯ. ಆದರೆ ಒಂದು ಸಿಟ್ಟಿಂಗ್‌ನಲ್ಲಿ ಒಂದಕ್ಕಿಂತ ಹೆಚ್ಚು ಪ್ರಬಂಧಗಳನ್ನು ಓದಿದರೆ ಅವುಗಳಲ್ಲಿ ಅಡಗಿರುವ ವಿಡಂಬನೆಯ ಶೃತಿ ನಮಗೆ ನಿಲುಕುವುದಿಲ್ಲ. ಹಾಗೆಯೇ ಆ ಪ್ರಬಂಧಗಳ ಒಳ ಹೂರಣದ ರುಚಿಯೂ ಸಿದ್ಧಿಸುವುದಿಲ್ಲ.

ಫ಼ೀಚರು (ಸಾಂದರ್ಭಿಕ ಬರಹ), ಫ಼ಿಲ್ಲರು (ಲಹರಿ) ಮತ್ತು ಲಲಿತ ಪ್ರಬಂಧಗಳೆಂದು ಸಂಕಲನದಲ್ಲಿರುವ ಬರಹಗಳನ್ನು ವಿಭಾಗಿಸಬಹುದಾದರೂ, ಮೂಲತಃ ಈ ಮೂರು ಪ್ರಭೇದಗಳ ಗುಣ ಧರ್ಮ ಒಂದೇ ಆಗಿರುವುದರಿಂದ ಇವನ್ನೆಲ್ಲಾ ಪ್ರಬಂಧಗಳೆಂದು ಕರೆಯಲು ಅಡ್ಡಿಪಡಿಸುವುದಿಲ್ಲ. ರಾಗಿಮುದ್ದೆ, ಹಲ್ಲು ತೊಳಿಸಿಕೊಳ್ಳುತ್ತಾ ಅಮೆಝಾನ್ ಕಾಡುಗಳಲ್ಲಿ, ನಾಯಿ ನೆರಳು, ಗುಬ್ಬಿಗಳಿಗೊಂದು ಮನೆಯಕಟ್ಟಿಕೊಟ್ಟೆವು ಲಲಿತ ಪ್ರಬಂಧಗಳಾದರೆ, ಅಧರಂ ಮಧುರಂ, ಸಂಪೂರ್ಣ ರಾಮಾಯಣ, ಅವಳು ಅಹಲ್ಯೆ-ಇವನು ನಹುಷ ಫ಼ೀಚರುಗಳು. ಉಳಿದೆಲ್ಲಾ ಬರಹಗಳು ಕವಿತೆಗಳಂತೆ ನಿಧಾನಕ್ಕೆ ಆವರಿಸುವ ತಮ್ಮೊಳಗೇ ಬೆಳಕನ್ನಿಟ್ಟುಕೊಂಡಿರುವ ನುಡಿ ಚಿತ್ರಗಳು. ಸುಲಲಿತ ಪ್ರಬಂಧಗಳಲ್ಲಿ ಕನ್ನಡದ ಹಿರಿಯ ಪ್ರಬಂಧಕಾರರ ನೆರಳುಗಳಿದ್ದರೆ ಫ಼ೀಚರುಗಳಲ್ಲಿ ಲೇಖಕರೊಳಗಿನ ಪತ್ರಕರ್ತ ಪ್ರತ್ಯಕ್ಷನಾಗುತ್ತಾನೆ. ಉಳಿದಂತೆ ನುಡಿ ಚಿತ್ರಗಳಲ್ಲಿ ರಘುನಾಥ್ ಗಮನ ಸೆಳೆಯುತ್ತಾರೆ.

“ರಾಗಿಮುದ್ದೆ” ದೇಸೀಧಾನ್ಯದ ಹಲವು ಮಗ್ಗಲುಗಳನ್ನು ಪರಿಚಯಿಸುತ್ತಲೇ ಹಳೆಯ ಮೈಸೂರುಪ್ರಾಂತದ ಆಹಾರ ಪದ್ಧತಿಯನ್ನು ವಿವರಿಸುವ ಸುಲಲಿತ ಪ್ರಬಂಧ. ಉಳ್ಳವರ ಮನೆಯ ಮಕ್ಕಳ ಜೇಬಲ್ಲಿ ವಿವಿಧ ತಿನಿಸಿದ್ದರೆ ಇಲ್ಲದವರ ಮನೆಯ ಮಕ್ಕಳಿಗೆ ಮುದ್ದೆಪಾತ್ರೆಯ ತಳದ “ಸೀಕು” ಚಾಕಲೇಟು! ಅನ್ನುತ್ತಲೇ “ರಾಗಿ ಲಕ್ಷ್ಮಣಯ್ಯ” ನವರನ್ನು ಪ್ರಾಸಂಗಿಕವಾಗಿ ನೆನೆಯುವುದು ಹಿತವೆನ್ನಿಸುತ್ತದೆ.

“ನಾಯಿನೆರಳು” ಲಘುಬರಹದ ಹಾಗೆ ಕಂಡರೂ ಅನುಭವವೊಂದರ ಪರಿಪಾಕ. ವಿಷಾದದ ತೀವ್ರತೆಯಲ್ಲಿ ಮುಕ್ತಾಯವಾಗುವ ಪ್ರಬಂಧ ಓದುಗನನ್ನು ಒಂದು ವಿಷಣ್ಣತೆಗೆ ದೂಡಿಬಿಡುತ್ತದೆ.

ರಾಮಾಯಣದ ಅಹಲ್ಯೆಯನ್ನು ಮಹಾಭಾರತ ನಹುಷನೊಂದಿಗೆ ಥಳಕುಹಾಕಿ ಹೊಸ ಪ್ರಮೇಯವೊಂದನ್ನು ಹಾಗೇ ಆ ಪಾತ್ರಗಳಿಗೆ ಇದುವರೆಗೂ ನಾವು ಒದಗಿಸಿದ “ಬೀಸ” ನ್ನು ಬೆಚ್ಚಿಬೀಳಿಸುವ ಹಾಗೆ ಬಿಕ್ಷೆಯ ಸ್ವರೂಪವನ್ನು ಹಿಡಿದಿಡುವ “ಅವಳು ಅಹಲ್ಯೆ-ಇವನು ನಹುಷ” ಪ್ರಬಂಧ ಸ್ವರೂಪ ಮೀರಿದ ಒಂದು ರೀತಿಯ ಗಪದ್ಯ.

“ಅಧರಂ ಮಧುರಂ” ಚುಂಬನದ ಮಹತ್ತನ್ನು ಕಾಮನ್ ಹ್ಯಾಂಗೋವರಿನಲ್ಲಿ ತೇಲಾಡಿಸುತ್ತಲೇ ಸಾಹಿತ್ಯ ಪರಂಪರೆಯ ಮೂಲಕ ಚಮಕಾಯಿಸುವ ರೀತಿ “ಫ಼ೀಚರ್”ನ ಮಿತಿಗೆ ನಿಂತುಬಿಡುವುದರಿಂದ ಪ್ರಬಂಧದ ಹರಿವು ಕಳಕೊಂಡ ಬರಿಯ ಲಹರಿಯಾಗಿದೆ.

“ಮನಸ್ಸಿನ ಸ್ಥಾವರ ಹಾಗೂ ಜಂಗಮ ಭಾವಗಳ ಬೆಸೆಯಲೊಂದು ಸೇತು ಬೇಕೆನಿಸುತ್ತದೆ” ಎಂದು ಕೊನೆಗೊಳ್ಳುವ “ಫ಼್ಲೈ ಓವರ್” ತನ್ನೊಡಲಲ್ಲಿ ಇಟ್ಟುಕೊಂಡಿರುವುದು ವಿಷಾದ ತೀವ್ರತೆಯನ್ನು. “ಬಡವರಿಗೆ ಎರಡು ನಿಮಿಷದ ಏರೋಪ್ಲೇನ್ ಪ್ರಯಾಣ” ಎನ್ನುವುದು “ಅತಿ” ಅನ್ನಿಸಿದರೂ ಆಧುನಿಕತೆಯ ಭೂತ-ಭವಿಷ್ಯಗಳನ್ನು ತನ್ನದೇ ರೀತಿಯಲ್ಲಿ ಓದುಗನಿಗೆ ದಾಟಿಸುವಲ್ಲಿ ಸಮರ್ಥವಾಗಿದೆ.

“ಮಳೆಯ ಮೂರು ಹನಿ” ಓದುಗನಲ್ಲಿ ಹೊಮ್ಮಿಸುವ ಮಾರ್ದನಿ ಹಲವುದಿನಗಳವರೆಗೂ ಕಾಡುವ ಸಮರ್ಥ ರೂಪಕ. ಕಥೆಯೋ ಕವಿತೆಯೋ ಲಲಿತ ಪ್ರಬಂಧವೋ ಈ ಎಲ್ಲವನ್ನೂ ಮೀರಿ ಓದುಗನಿಗೆ ಬೆರಗನ್ನು, ಬೆಳಗನ್ನು ಮೂರು ಬೇರೆ ಬೇರೆ ಹನಿಗಳಲ್ಲಿ ಎಸ್ಕಲೇಟ್ ಮಾಡಿಸುವ ಎಸ್ಕಲೇಟರ್.

ಸಂಕಲನದ ಸಹಜ ಪ್ರಬಂಧಗಳಲ್ಲೊಂದಾದ “ಹಲ್ಲು ತೊಳೆಸಿಕೊಳ್ಳುತ್ತಾ ಅಮೆಝಾನ್ ಕಾಡುಗಳಲ್ಲಿ” ಲೇಖಕರ ಸ್ವವಿವರಗಳನ್ನು ಹೆಕ್ಕಲು ಸಹಾಯ ಮಾಡುತ್ತದೆ. ಅನುಭವವನ್ನು ಬರಹವನ್ನಾಗಿಸಿದ ಅಭಿವ್ಯಕ್ತಿಯ ಶಕ್ತಿ ಇಲ್ಲಿ ಕೆಲಸ ಮಾಡಿದೆ.

“ಕಂಬ ಕಂಬಗಳಿಗೆ ಚಂದಿರನ ನೇಣು” ಮಳೆಯ ಮೂರುಹನಿ ರೀತಿಯದ್ದು. ಶಾಂತ ಮನಸ್ಥಿತಿಯಲ್ಲಿ ಮಾತ್ರ ಇದರ ಓದಿನ ರುಚಿ ದಕ್ಕೀತು. ಮುಂಜಾನೆಯ “ಯಾತ್ರೆ” ಯ ಚಿತ್ರಗಳು ಪಾಯಖಾನೆಯ ಪ್ರಸಂಗಗಳನ್ನು ಸ್ವಾರಸ್ಯವಾಗಿ ನಿರೂಪಿಸುತ್ತಲೇ ಲೇಖಕರ “ಬಯಲ” ಬಯಕೆಯನ್ನು ಹೊರಹೊಮ್ಮಿಸುತ್ತದೆ.

ಸಂಕಲನದ ಕಡೆಯ ಮೂರು ನಿಬಂಧಗಳು ಲೌಕಿಕ ಸತ್ಯವನ್ನು ಅನುಭವದ ಕಣ್ಣಲ್ಲಿ ಕಂಡ ದಾಖಲೆಗಳು. ಸ್ವಲ್ಪ ಅತಿಯೆನ್ನಿಸಿದರೂ ಉಳಿದವರಿಗಿಂತ “ನನ್ನ ಕಾಣ್ಕೆ” ಬೇರೆಯದು ಎಂದು ಈ ನಿಬಂಧಗಳು ಸೂಕ್ಷ್ಮ ವಾಗಿ ಮಿಡಿಯುತ್ತವೆ.

ಹೀಗೆ ವೈಯುಕ್ತಿಕ ಅನುಭವಗಳ ವಿವರಗಳನ್ನು ಈ ಪ್ರಬಂಧಗಳಲ್ಲಿ ಹಿಡಿದಿಡಲು ರಘುನಾಥ ಪ್ರಯತ್ನಿಸಿದ್ದಾರೆ. ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಅವರ ಅನುಭವಗಳು ಇಲ್ಲಿನ ಎಲ್ಲಾ ಪ್ರಬಂಧಗಳಿಗೆ ಖಚಿತತೆಯನ್ನು ಒದಗಿಸುವುದರ ಜೊತೆಗೆ ಸಾರ್ವತ್ರಿಕಗೊಳಿಸುವ ಗೆರೆಯಿಂದಲೂ ಬೇರ್ಪಡಿಸಿವೆ. ಇದು ಈ ಸಂಕಲನದ ಮಿತಿ ಮತ್ತು ಹೆಚ್ಚುಗಾರಿಗೆಯೂ ಆಗಿದೆ. ಭಾಷೆಯನ್ನು ಬಳಸಿರುವ ಕ್ರಮ, ವಾಕ್ಯ ರಚನಾ ವಿಧಾನ, ಅನೇಕ ಸಂಗತಿಗಳನ್ನು ಕುರಿತು ಹೇಳುತ್ತಲೇ ಅವೆಲ್ಲವನ್ನೂ ಏಕತ್ರಗೊಳಿಸಿ ಒಂದು ಕೇಂದ್ರಕ್ಕೆ ಒಗ್ಗಿಸುವ ರೀತಿ, ಮಧ್ಯೆ ಮಧ್ಯೆ ಆಧುನಿಕ ಕನ್ನಡ ಕಾವ್ಯದ ಅನಾಯಾಸ ಉದ್ಧರಣೆ ಪ್ರಬಂಧಗಳ ಅರ್ಥ ಸಾಧ್ಯತೆಯನು ವಿಸ್ತರಿಸಿದೆ.

ಈ ಲೇಖನ ವಿಮರ್ಶೆಯಲ್ಲ. ವಿಮರ್ಶೆಯಗುರಿ ಮತ್ತು ಅದರ ಆಶಯಗಳು ಕೃತಿಯೊಂದರ ಸೌಷ್ಟವತೆಯನ್ನು ಕರಾರುವಾಕ್ಕಾಗಿ ಅಳೆದು “ಇದಮಿತ್ತಂ” ಎಂದು ಕೊಡುವ ಅರ್ಹತಾಪತ್ರ. ಅಂತಹ ಅರ್ಹತೆಯನ್ನು ಈ ಸಂಕಲನ ಇಟ್ಟುಕೊಂಡಿದೆಯೋ ಇಲ್ಲವೋ ಆದರೆ ನಿತ್ಯ ಜಂಜಡದ ಸದ್ಯೋವರ್ತಮಾನದಲ್ಲಿ ನಮ್ಮೊಳಗಿದ್ದೂ ನಮ್ಮದಲ್ಲವಾಗಿದ್ದ ಅದೆಷ್ಟೋ ಸಂಗತಿಗಳಿಗೆ ಮರು ಹುಟ್ಟು ನೀಡಿ ಕ್ಷಣ ಕಾಲವಾದರೂ ನಮ್ಮೊಳಗಿನೊಂದಿಗೆ ಸಂಭಾಷಿಸಲು ಅವಕಾಶ ಮಾಡಿಕೊಡುತ್ತದೆ. ಅಂಥ ಅವಕಾಶ ನೀಡಿದ ಲೇಖಕನಿಗೆ ಅಭಿನಂದಿಸುವುದಷ್ಟೇ ಈ ಲೇಖನದ ಉದ್ದೇಶ.

ರವಿವಾರ ೧೫ ಮಾರ್ಚ್ ೨೦೦೯

ವಿಷಾದ

ಅಕಾರಣ ಹುಟ್ಟಿ ಬಿಡುವ ಈ ವಿಷಾದ
ಇರುವ ಸುಖ ಸವಲತ್ತುಗಳ ನಿರಾಕರಿಸಿ
ಶಬ್ದಾರ್ಥಗಳ ಮಿತಿಯ ಮೀರುವುದು

ಎದೆಯೊಳಗೆ ನವನೀತ ಕಡೆಯುತ್ತಲೇ
ಉತ್ತುಂಗಕ್ಕೇರಿದ ಕನಸನ್ನೊಡೆಯುವುದು
ಯಾವುದೋ ಮುರಳಿಯ ಕರೆಗೆ ಕಿವಿಗೊಡುವುದು

ಪೊಡಮಡುವೆ, ಹೇ, ವಿಷಾದವೆ
ಸುಡುವಗ್ನಿಗೆ ಉದಕವಾಗುವ ನಿನ್ನ ನೆರಳಿಗೆ
ಒಳಗಿನಿಂದ ನರಳುತ್ತಲೇ ಅರಳುವ ಹೂವಿಗೆ

ಹೊರಗಣ್ಣುಗಳ ದಿಟ್ಟಿಗೆ ನೀನು ಬೀಳದ ಹಾಗೆ
ನಿನ್ನಿರವ ಈ ಅರಿವೆಯೊಳಗೇ ನಿಲಿಸು
ಭಿನ್ನವೆನ್ನುವ ತೆರೆ-ತೆರಗಳನಳಿಸು

ನಮ್ಮ ನಾವೆ ಅನ್ಯರಿಗೆ ತೆತ್ತು ಕೊಳ್ಳದ ರೀತಿ
ಬಾಳಗಡಲಿನ ದಿಕ್ಸೂಚಿ ಕವಿತೆಯನುಳಿಸು.

ಬುಧವಾರ ೧೧ ಮಾರ್ಚ್ ೨೦೦೯

ಚಂದಿರನೇತಕೆ ಓಡುವನಮ್ಮ?

“ಚಂದಿರನೇತಕೆ ಓಡುವನಮ್ಮ ಮೋಡಕೆ ಹೆದರಿಹನೆ?” ಶಿಶು ಗೀತೆಯ ಸಾಲುಗಳು ನೆನಪಾದಾಗಲೆಲ್ಲ ನಮ್ಮೊಂದಿಗೆ ಓಡುತ್ತೋಡುತ್ತಲೇ ತಾನು ಮಾತ್ರ ಇದ್ದಂತೆಯೇ ಇರುವ ಚಂದ್ರನ ಬಗ್ಗೆ ಮತ್ಸರ ಹುಟ್ಟುತ್ತದೆ. ಅಳುವ ಮಕ್ಕಳಿಗೆಲ್ಲ ಚಂದಮಾಮನಾಗಿ ಬಂದು ಸಮಾಧಾನ ಮಾಡುವ ಅವನು, ಹದಿಹರಯದವರಲ್ಲಿ ಕುತೂಹಲ ಹುಟ್ಟಿಸುತ್ತ, ಪ್ರೇಮಿಗಳಿಗೆ ಸಂತಸದ ಸಂಭ್ರಮವನ್ನೇ ಹರಿಸುವ ಚಂದ್ರಮ ಮುಪ್ಪಡರಿದವರ ಜೊತೆ ಜೊತೆಗೇ ಹೆಜ್ಜೆ ಹಾಕುತ್ತ ಅವರ ಒಂಟಿತನ ನೀಗಿಸುತ್ತಾನೆ.

ಚಂದ್ರಿಕೆಯ ಬೆಳಕನ್ನೇ ಉಂಡು ಸುಖಿಸುವ ಚಕೋರ ಪಕ್ಷಿಯ ವಿಚಾರವೂ ಎಲ್ಲರಿಗೆ ತಿಳಿದದ್ದೇ ಆಗಿದೆ. ಗಣಪನಿಂದ ಶಪಿತನಾದ ಚಂದ್ರನ ಕತೆಯೂ ನಮಗೆ ಗೊತ್ತು. ಇನ್ನು ಈ ಚಂದ್ರನ ತಿಂಗಳ ಬೆಳಕಿನ ಬಗ್ಗೆ ಗೊತ್ತಿರದವರು ಯಾರಿದ್ದಾರೆ?

ಹಾಲು ಸುರಿದಂತೆ ಬೆಳದಿಂಗಳೆಂದು ಒಬ್ಬರು ಹೇಳಿದರೆ ಹಿಟ್ಟು ಚೆಲ್ಲಿದಂತೆ ಬೆಳದಿಂಗಳೆಂದು ಮತ್ತೊಬ್ಬರ ವಾದ. ಚೆಲ್ಲಲು ಹಾಲು ಸಿಕ್ಕಬಹುದಾದರೂ ಹಾಗೆ ಚೆಲ್ಲಿದ ಹಾಲು ನೆಲದಲ್ಲಿಂಗದೇ ಉಳಿಯಲು ಸಾಧ್ಯವೆ? ಹಿಟ್ಟನ್ನು ಚೆಲ್ಲಿದ್ದಾರೆನ್ನುವವರಿಗೂ ಅಷ್ಟೊಂದು ಹಿಟ್ಟು ಅದೆಲ್ಲಿ ಸಿಕ್ಕುತ್ತದೋ ಗೊತ್ತಿಲ್ಲ.

ಒಟ್ಟಿನಲ್ಲಿ ಉಪಮೆ ಇಲ್ಲದೆ ಗುಣ ವರ್ಣನೆ ಸಾಧ್ಯವಿಲ್ಲದ ಸಂಗತಿ. ಇವನ್ನೆಲ್ಲ ಕವಿತ್ವವೆಂದು ಕರೆದು, ವಿಜ್ಞಾನದ ಮೂಲಕ ಚಂದ್ರನನ್ನು ಕಾಣಹೋದರೂ ಸುತ್ತಿಕೊಳ್ಳುವುದು ಮತ್ತದೇ ಬೆಳದಿಂಗಳು. ಗುರುತ್ವಾಕರ್ಷಣೆಯ ತತ್ವದ ಮೇಲೆ ನಿಂತಿರುವ ನಮ್ಮ ಸೌರ ಮಂಡಲದ ಗ್ರಹಗಳಿಗೆ ಅವುಗಳ ತಾಕತ್ತಿಗೆ ತಕ್ಕಂತೆ ಚಂದ್ರರು ಅವರವರನ್ನು ಸುತ್ತುತ್ತಿದ್ದಾರೆ. ನಮ್ಮ ಭೂಮಿಗೆ ಪಾಪ ಈ ಚಂದ್ರನೊಬ್ಬನೇ ದಿಕ್ಕು. ಆಕಾಶದ ತುಂಬ ಹರಡಿರುವ ಅದೆಷ್ಟೋ ಅಸಂಖ್ಯ ನಕ್ಷತ್ರಗಳು, ತಿಂಗಳ ಬೆಳಕಲ್ಲಿ ಚಂದ್ರನ ಮನೆಯ ಮಿಣುಕು ದೀಪಗಳಂತೆ ಕಾಣುವುದೂ ಸತ್ಯದ ಮಾತೇ!

ಭೂಮಿಯ ಪ್ರದಕ್ಷಿಣೆಯಲ್ಲೇ ಆಯಸ್ಸು ಕಳೆಯುತ್ತಿರುವ ಚಂದ್ರ, ಸೂರ್ಯನ ಬೆಳಕನ್ನೇ ಎರವಲು ಪಡೆದ ಭೂಪ. ನಾವಾಗಲೇ ಅವನ ಮೇಲೂ ಹತ್ತಿಳಿದು ಬಂದು ಕವಿಕಲ್ಪನೆಗಳನೆಲ್ಲ ಸುಳ್ಳು ಮಾಡಿದ್ದೇವೆ. ಆದರೂ ತಿಂಗಳು, ತಿಂಗಳ ಚಂದ್ರನ ವೈಭವದ ಮುಂದೆ ಯಾವ ರಾಜ ಮಹಾರಾಜರ ದರ್ಬಾರು ಕಳೆಗಟ್ಟೀತು?

ಇನ್ನು ಚಂದ್ರನಿಗೂ, ಅಮೃತಕ್ಕೂ ಅವಿನಾವ ಸಂಬಂಧ. ಅವನೊಳಗಿರುವ ಹದಿನಾರು ಕಲೆಗಳಿಂದೊಡಗೂಡಿದ ಅಮೃತವನ್ನು ದೇವ ದೇವತೆಗಳು ಬೇಡಿ ಪಡೆಯುತ್ತಾರಂತೆ. ಹುಣ್ಣಿಮೆಯಂದು ನಳ ನಳಿಸುವ ಚಂದ್ರ ದಾನಾರ್ಥಿಗಳಿಗೆ ಸ್ವಲ್ಪ ಸ್ವಲ್ಪವೇ ಅಮೃತವನ್ನು ಹಂಚುತ್ತ ಕಡೆಗೆ ತಾನೇ ಇಲ್ಲವಾಗುತ್ತಾನೆ. ಅಮಾವಾಸ್ಯೆಯ ಕಾಳಕತ್ತಲೆಯಲ್ಲಿ ಹೊಸ ಜ್ಞಾನ ಸಂಪಾದಿಸಿ, ದಿನದಿಂದ ದಿನಕ್ಕೆ ಮತ್ತೆ ಅಮೃತ ಸಂಚಯನಕ್ಕೆ ತೊಡಗುವ ಚಂದ್ರ ನಮ್ಮ ಬದುಕಿಗೊಂದು ಅರಿವು ಹುಟ್ಟಿಸುತ್ತಾನೆ. ಕಷ್ಟ ಪಟ್ಟು ಪಡೆಯಬೇಕಿರುವ ಜ್ಞ್ನಾನ ಸಂಚಯನ ಆಸಕ್ತರೆಲ್ಲರಿಗೆ ಹಂಚಬೇಕಿರುವ ಔದಾರ್ಯ ಕಲಿಸುತ್ತಿದ್ದಾನೆ. ಅಂದರೆ ಸಂಪೂರ್ಣ ವಿದ್ಯೆ ನಮಗೆ ದಕ್ಕಿತೆಂದ ಕೂಡಲೇ ಅದನ್ನು ಬೇಡುವವರಿಗೆ ಹಂಚುತ್ತ ಪುನಃ ನಾವು ಖಾಲಿಯಾಗಬೇಕು. ಒಳಗೇ ತುಂಬಿಕೊಂಡಿದ್ದ ಅಹಂಕಾರ, ಮತ್ಸರ, ಕೊಬ್ಬುಗಳೆಲ್ಲ ಕರಗಿ ಉರಿವ ಕರ್ಪೂರದ ರೀತಿ ನಮಗೆ ಸಿದ್ಧಿಸಬೇಕು. ಹಾಗೆ ಮೂಡಿದ ಸ್ಥಿತಿಯಿಂದ ಮತ್ತೆ ಜ್ಞಾನ ಸಂಚಯನದ ಹಾದಿ ತುಳಿಯಬೇಕು.

ಇಂದಿನ ದಿನಗಳಲ್ಲಿ ಹೊಳೆಯುವ ನಿಯಾನ್ ಬೆಳಕಿನಲ್ಲಿ, ಝಗಮಗಿಸುವ ಸೋಡಿಯಂ ದೀಪಗಳಡಿಯಲ್ಲಿ ಚಂದ್ರನ ಚಂದ್ರಿಕೆಯ ತಂಪಿರಲಿ, ಅವನ ಇರುವಿಕೆಯೇ ಮರೆತು ಹೋಗುತ್ತಿದೆ. ಅಮಾವಾಸ್ಯೆ, ಹುಣ್ಣಿಮೆಗಳ ವ್ಯತ್ಯಾಸ ತಿಳಿಯದ ಹಾಗೆ ಬೀದಿ ದೀಪಗಳು ಬೆಳಗುತ್ತಲೇ ಇವೆ. ಹೊಳೆ ಹೊಳೆಯುವ ತಾರೆ, ಸುಡು ಸುಡುವ ಸೂರ್ಯನ ಪ್ರಖರತೆ, ಅಮಾವಾಸ್ಯೆಯ ದಟ್ಟ ತಿಮಿರ, ತಂಪೆರಚುವ ಹುಣ್ಣಿಮೆಯ ಹಾಲ್ಬೆಳಕು ಬರಿಯ ಪುಸ್ತಕಗಳಲ್ಲಿ, ಕವಿತೆಗಳ ಸಾಲುಗಳಲ್ಲಷ್ಟೇ ಕಾಣಬೇಕಾದ ಅನಿವಾರ್ಯತೆಯೊದಗಿದೆ. ಇಂಥ ಭವದ ಬದುಕಿನ ನಡುವೆಯೂ ನೈಸರ್ಗಿಕ ಬೆಳಕು-ಕತ್ತಲೆಗಳ ಬಗ್ಗೆ, ಕವಿಕಲ್ಪನೆಯ ಕನಸು- ನಿಜ ವಾಸ್ತವದ ಬಗ್ಗೆ, ಸುಡು ಬಿಸಿಲು- ಜೀವನ ಕ್ರಮದ ಬಗ್ಗೆ, ಕೊಂಚ ಯೋಚಿಸಿದರೆ ಸಾಕು, ನಮ್ಮೊಳಗೂ ಒಬ್ಬ ಚಂದ್ರ ಹುಟ್ಟುತ್ತಾನೆ. ಹೀಗೆ ಹುಟ್ಟುವ ಚಂದ್ರ ತರುವ ಬೆಳ್ಳಂ ಬೆಳಕಿನ ಹುಣ್ಣಿಮೆಯನ್ನು ಅನ್ಯರಿಗೂ ಸ್ಪರ್ಶಿಸುತ್ತ, ಬದುಕುವ ಕನಸೇ ಅಧ್ಭುತ.

ಈ ದಿಕ್ಕಿನಲ್ಲಿ ಆಲೋಚಿಸಲು, ಅಂದರೆ ನಮ್ಮೊಳಗೊಬ್ಬ ಚಂದ್ರನನ್ನು ಸೃಷ್ಟಿಸಿಕೊಳ್ಳಲು, ನಮ್ಮೊಳಗಿಗೆ ಎರವಲು ಬೆಳಕು ತರಲು ನಮಗೆ ನಾವೇ ಕೊಟ್ಟು ಕೊಂಡಿರುವ ಸವಲತ್ತುಗಳನ್ನು ಅಲಕ್ಷಿಸಬೇಕು. ಲೌಕಿಕದ ಸುಖಕ್ಕಿಂತಲೂ ಮಾನಸಿಕ ಸುಖದ ಬಯಕೆ, ಹರಳು ಕಟ್ಟಬೇಕು. ಆಗ ನಮ್ಮೊಳಗೆ ಹುಟ್ಟುವ ಚಂದ್ರ ತನಗೆ ತಾನೇ ಬೆಳದಿಂಗಳನ್ನು ಸೂಸುತ್ತ ಹೋಗುತ್ತಾನೆ.

ಇರಲಿ, ಒಂದು ಋತುವಿಗೆರಡು ಬಾರಿಯಂತೆ ಸಂಪೂರ್ಣ ಭೇಟಿ ಕೊಡುವ ಚಂದ್ರ ಋತು ವಿಲಾಸದ ಅಧ್ಯಯನಕ್ಕೆ ಸಹಕರಿಸುವ ರೀತಿಯೇ ಅನನ್ಯವಾದುದು. ವರ್ಷಾರಂಭದ- ಇಂಗ್ಲಿಷ್ ವರ್ಷವಲ್ಲ, ಯುಗಾದಿಯಿಂದ ಪ್ರಾರಂಭವಾಗುವ ನಮ್ಮ ವರ್ಷ- ವಸಂತದ ನೆಲದಲ್ಲಿ ಚಿಗಿತೆದ್ದ ಹಸಿರು ರಾಶಿಯ ನಡುವೆ ಚಿಗುರು ತಿನ್ನುತ್ತಲೇ ಹಾಡುವ ಕೋಗಿಲೆಗಳ ಪುಳಕದ ಹಗಲಿಗೆ ಸರಿಸಮವಾಗಿ ಜುಗಲಬಂದಿ ನೀಡುವ ರಾತ್ರಿಯನ್ನು ತಯಾರು ಮಾಡುವವನೇ ನಮ್ಮ ಚಂದ್ರ. ಶಾಂತಿರಸ್ತು, ಪುಷ್ಟಿರಸ್ತು, ತುಷ್ಠಿರಸ್ತು, ಎನ್ನುವ ಮೂರು ಮೂಲ ಉದ್ದೇಶದ ಚಂದ್ರ ಹರಿಸುವ ಶಾಂತಿ, ಸಮೃದ್ಧಿ, ಸಂತಸದ ಹೊನಲುಗಳು ಹಗಲ ಬೆಳಕಿನಲ್ಲೇ ಜೂಗರಿಸುತ್ತ ಕಾಲ ಕಳೆಯುವ ಅರಸಿಕರಿಗೆ ಸುಲಭವಾಗಿ ಅರ್ಥವಾಗುವಂಥದಲ್ಲ.

ಜಾತ್ರೆ, ಉತ್ಸವ, ತೇರುಗಳು ಚಂದ್ರನಿಲ್ಲದ ಹೊತ್ತಲ್ಲಿ ನಡೆಯುವದಪರೂಪ. ಅಮಾವಾಸ್ಯೆಯ ಲಕ್ಷ್ಮಿ ಪೂಜೆ, ತೀರ್ಥಹಳ್ಳಿಯ ಎಳ್ಳಮಾವಾಸ್ಯೆ ಜಾತ್ರೆಯಲ್ಲಿ ಮಾತ್ರ ಚಂದ್ರ ಇರುವುದಿಲ್ಲ. ಚಂದ್ರ ದರ್ಶನವೇ ಬೇಡದ ಭಾದ್ರಪದ ಶುಕ್ಲ ಚೌತಿಯ ಸಂಜೆ ಆಕಾಶದ ತುಂಬ ಸರ್ಚ್ ಲೈಟ್ ಹಚ್ಚಿಟ್ಟಂತೆ ಬೆಳಕ ಹರಡಿ ಕತ್ತೆತ್ತಿದವರೆಲ್ಲರ ಕಣ್ಣಿಗೂ ಬೀಳುವ ಚಂದ್ರ, ಯುಗಾದಿ ಚಂದ್ರ ದರ್ಶನದ ದಿನ ಮಾತ್ರ ಹುದುಕಿದರೂ ಸಿಗದೆ, ಕತ್ತು ಸೋತು ಕೆಳಗಿಳಿಸಿದ ಮೇಲೆ, ದೂರದಲ್ಲೆಲ್ಲೋ ಕಂಡು ಮಾಯವಾಗುತ್ತಾನೆ. ಹಾಗೆ ಅವನು ಕೊಟ್ಟ ದರ್ಶನದಲ್ಲೇ ಅವನು ಎಡಕ್ಕಿದ್ದನೋ, ಬಲಕ್ಕಿದ್ದನೋ ಎಂಬುದರ ಮೇಲೆ ಆ ವರ್ಷದ ಮಳೆ ಬೆಳೆಯ ಲೆಕ್ಕಾಚಾರ ಮಾಡುತ್ತಿದ್ದ ನಮ್ಮ ಹಿರಿಯರ ನೆನಪಿಸಿಕೊಳ್ಳುವುದೇ ಮತ್ತೊಂದು ಹುಣ್ಣಿಮೆಯ ಹಾಗೆ.

ಶ್ರಾವಣದ ಹುಣ್ಣಿಮೆಯ ವಿಶೇಷವೆಂದರೆ, ಅದು ತೊಟ್ಟ ಜನಿವಾರವನ್ನು ರಿವೈವ್ ಮಾಡಿಸುವ ಹಬ್ಬ. ಜನಿವಾರದ ಎಳೆಗಿಂತಲೂ ತೆಳ್ಳಗೆ, ಬೆಳ್ಳಗೆ, ಮೆತ್ತಗಿರುವ ಒತ್ತು ಶ್ಯಾವಿಗೆಯ ಹಬ್ಬ. ಆ ಶ್ಯಾವಿಗೆಗೆ ಎಳ್ಳು ಕಾಯಿರಸ ಬೆರಸಿದರೆ ಸಿಹಿ ಶ್ಯಾವಿಗೆ. ಕಡ್ಲೆ ಬೀಜದ ಒಗ್ಗರಣೆ ಕೊಟ್ಟು ಕೊತ್ತಂಬರಿಯಿಂದ ಅಲಂಕರಿಸಿದರೆ ಖಾರದ ಶ್ಯಾವಿಗೆ. ಒತ್ತು ಶ್ಯಾವಿಗೆಯ ಜೊತೆಗೆ ಒಬ್ಬಟ್ಟಿನ ಬೋನಸ್ಸು! ಶ್ರಾವಣದ ಜಡಿಮಳೆಯಲ್ಲಿ ಹೊರಗೆಲ್ಲೂ ಹೋಗಲಾಗದೇ ಕೂತು ಬೇಸರ ಬಂದವರಿಗೆ ಭೋಜನ ಪಂದ್ಯವೇರ್ಪಡಿಸಲು ಸಕಾಲ.

ಇನ್ನು ಪ್ರತಿ ಹುಣ್ಣಿಮೆಯ ಸಂಜೆ ಸತ್ಯನಾರಾಯಣ ಪೂಜೆ ನಡೆಸಿ, ಜನರ ಪಾಪ ಶೇಷಗಳೆಲ್ಲವನ್ನೂ ತೊಳೆಯುತ್ತಿರುವ ನಮ್ಮ ಅದೆಷ್ಟೋ ದೇವಸ್ಥಾನಗಳ ಸಮಿತಿಗಳಿಗಂತೂ, ಹುಣ್ಣಿಮೆಯೆಂದರೆ ಕಲೆಕ್ಷನ್. ಹುಣ್ಣಿಮೆ, ಅಮಾವಾಸ್ಯೆಗಳಲ್ಲಷ್ಟೇ ಚಿತ್ತ ವಿಭ್ರಮೆಗೊಳಗಾಗುವ ಜನರನ್ನು ಆಧುನಿಕ ವಿಜ್ಞಾನ ಅನುಮಾನದಿಂದ ನೋಡಿ, ಮನಶಾಸ್ತ್ರ ತಜ್ನರನ್ನು ಕಾಣುವಂತೆ ಸೂಚಿಸಿದರೂ, ಅದೇಕೆ ಹುಣ್ಣಿಮೆಯ ರಾತ್ರಿಗಳಲ್ಲಷ್ಟೇ ಸಮುದ್ರ ಉಕ್ಕಿ ಸೊಕ್ಕುತ್ತದೆ ಎನ್ನುವುದೂ ಗಮನಿಸಬೇಕಾದ ಸತ್ಯ. ಏಕೆಂದರೆ ಭೂಮ್ಯಾಕಾಶ, ನಕ್ಷತ್ರ, ನೀಹಾರಿಕೆಗಳ ಚಲನೆಯನ್ನೇ ಅಧ್ಯಯನಿಸುವ ಕಸುಬಿನವರಿಗೆ ಅದು ವಿಜ್ಞಾನ. ಅದನ್ನೇ ಅರೆ ಬರೆ ತಿಳಿದು, ಕುಂಡಲಿ ಹಾಕಿ ರವಿ, ಕುಜ, ಚಂದ್ರ ಎಂದು ಬರೆದು ಕವಡೆ ಹಾಕುವವನಿಗೆ ಶಾಸ್ತ್ರ. ನಮ್ಮ ಜನ ವಿಜ್ಞಾನಕ್ಕಿಂತ ಅಜ್ಞಾನವನ್ನೇ ಮೆಚ್ಚುವವರಾದ್ದರಿಂದ, ಭವಿಷ್ಯ ಹೇಳುವವರ ಭವಿಷ್ಯವಂತೂ ಉಜ್ವಲವಾಗಿಯೇ ಇರುತ್ತದೆ. ಅಮಾವಾಸ್ಯೆಯ ರಾತ್ರಿ ಭೂತ ಪ್ರೇತಗಳಿಗೆ ಇರುವಂತೆಯೇ ಹುಣ್ಣಿಮೆಯ ರಾತ್ರಿಗಳನ್ನು ಮೋಹಿನಿಯರಿಗೆ,ಬಾಣಂತಿ ದೆವ್ವಗಳಿಗೆ ಮೀಸಲಿಟ್ಟಿರುವ ನಮ್ಮ ಜನ ತಮಗೆಂದು ಮಾತ್ರ ಯಾವ ದಿನಗಳನ್ನೂ ನಿಗದಿಯಾಗಿಸಿಲ್ಲದಿರುವುದೇ ನಮ್ಮೆಲ್ಲ ಅಜ್ಞಾನದ ಮೂಲ ಸತ್ಯ.

ಚಂದ್ರನ ಅತಿ ಹತ್ತಿರದ ಸ್ನೇಹಿತನೆಂದರೆ ಮನ್ಮಥ. ಚಂದ್ರಿಕೆಯ ಸವಿಯಲ್ಲಿ ಪ್ರೇಮಿ ತೊಯ್ಯುತ್ತಿದ್ದರೆ, ಮನ್ಮಥನ ಬಾಣಗಳು ಇನ್ನೇನು ತಾಗುವವೆಂದೇ ಅರ್ಥ. ಇನ್ನು ಹೇಗೆ ತಾನೆ ಆ ಪ್ರ್ರೇಮಿ ರಾತ್ರಿಯ ಉದ್ದಗಲಗಳನ್ನಳೆಯದೇ ಬಿಡಲು ಸಾಧ್ಯ? ಶುಕ ಧ್ವಜ ಮನ್ಮಥ ತನ್ನ ಇಕ್ಷು ಚಾಪದಿಂದ ಸುಮ ಬಾಣಗಳನ್ನು ಬಿಡದಿರುತ್ತಿದ್ದರೆ, ಈ ಲೋಕದ ಜನರಿಗೆ ಅದು ಹೇಗೆ ತಾನೆ ಪ್ರೀತಿ- ವಿರಹಗಳ ಉತ್ಕಟತೆಯ ಅರಿವು ಬರುತ್ತಿತ್ತು? ಕಾಮನ ಹುಣ್ಣಿಮೆಯ ನೆನಪೇ ಮತ್ತೊಂದು ಹುಣ್ಣಿಮೆಯ ಅನುಭವವನ್ನು ಕೊಡಬಲ್ಲುದೆಂದರೆ, ಕಾಮನ ಹುಣ್ಣಿಮೆಯ ನೆನೆಯದೇ ಮುಂದಡಿಯಿಡುವುದು ಅಪರಾಧವಾದೀತು!

ಕಾಮನ ಹುಣ್ಣಿಮೆಯ ಸಾಂಪ್ರದಾಯಿಕ ಆಚರಣೆಗಿಂತಲೂ, ಹೊಸ ತಲೆಮಾರು ಅದನ್ನಾಚರಿಸುವಾಗ ಬದಲಾಯಿಸುತ್ತ ಬಂದ ರಿವಾಜುಗಳನ್ನು ಅಧ್ಯಯನ ಮಾಡಿದರೆ ಅದೇ ಒಂದು ವಿದ್ವತ್ ಪ್ರಬಂಧವಾಗಿಯೇ ಆಗುತ್ತದೆ. ಸ್ವಭಾವತಃ ಪುಕ್ಕಲು ಹುಡುಗರೂ, ಕಾಮೋತ್ಸವದ ದಿನ ತಮ್ಮ ಮಿತಿ ಮೀರಿ ವರ್ತಿಸುವ ರೀತಿಯೇ ಈ ಹಬ್ಬಕ್ಕಿರುವ ವಿಶೇಷತೆಯನ್ನು ಎತ್ತಿ ತೋರಿಸುತ್ತದೆ. ಒಂದೆರಡು ಸ್ವಾರಸ್ಯದ ಸಂಗತಿಗಳನ್ನಿಲ್ಲಿ ನೆನೆಯದೇ ಹೋದರೆ, ಈ ಬರಹ ಇಂಗಿನೊಗ್ಗರಣೆ ಇಲ್ಲದ ತಿಳಿಸಾರಿನಂತಾಗಿ ಬಿಡಬಹುದೆಂಬ ಭಯದಿಂದ ಆವನ್ನೀಗ ನೆನೆಯುತ್ತಿದ್ದೇನೆ.

ಕಾಮನ ಹುಣ್ಣಿಮೆಯ ಹಿಂದಿನ ರಾತ್ರಿ ಊರ ದೇವರ ಜಗಲಿಯಲ್ಲಿ ಆ ಒಂದು ರಾತ್ರಿಗೆಂದೇ ಪ್ರತಿಷ್ಠಾಪಿತನಾಗುವ ದೇವನೆಂದರೆ ಅದು ನಮ್ಮ ಮನ್ಮಥ ದೇವ. ಬತ್ತದ ಹುಲ್ಲಿನಲ್ಲಿ ತಯಾರಿಸಿದ ಮನುಷ್ಯ ಶರೀರ ಹೋಲುವ ಬೊಂಬೆಗೆ ಚಿಂದಿ ಪ್ಯಾಂಟು, ಶರಟುಗಳನ್ನು ತೊಡಿಸಿ, ಮನುಷ್ಯರಂತೇ ಕೂರಿಸುವ ಕೆಲಸ ಅನುಭವದ ಕೈಗಳಿಂದ ಮಾತ್ರ ಸಾಧ್ಯವಿರುವ ಸಂಗತಿ. ಹಾಗೆ ತಯಾರಾದ ಬೊಂಬೆಗೆ ಆ ರಾತ್ರಿಯ ಮಟ್ಟಿಗೆ ಕಡ ತಂದ ಸೂಟು ತೊಡಿಸಿ, ಅಟ್ಟೆ ಕಿತ್ತ ಬೂಟು ತೊಡಿಸಿ, ಆ ವರ್ಷದ ಹಿಟ್ ಸಿನಿಮಾದ ಹೀರೊ ಧರಿಸಿದ್ದ ಟೋಪಿ ಅಥವ ಹ್ಯಾಟು ತೊಡಿಸಿ, ಎಂ.ಜಿ.ಆರ್ ಕನ್ನಡಕ ತೊಡಿಸುವುದು ಕಿರಿಯರ ಕೆಲಸ.

ನಂತರ ದೇವಸ್ಥಾನದ ಅಟ್ಟದಲ್ಲಿ ಜೋಪಾನವಾಗಿ ತೆಗೆದಿರಿಸಿದ್ದ ಕಾಮ ದೇವನ ಹಸ್ತ, ಪಾದ, ಶಿರದ ಆಕೃತಿಗಳಿಗೆ ತಿಂಗಳ ಮೊದಲೇ ಧೂಳು ಹೊಡೆಸಿ, ಹೊಸ ಬಣ್ಣ ಹೊಡೆಸಿ, ಸಿಂಗರಿಸಿದ್ದ ಭಟ್ಟರು ಈ ಮೊದಲು ಹೇಳಿದ ಹಾಗೆ ತಯಾರಾದ ಬೊಂಬೆಗೆ ತೊಡಿಸಿ, ಪ್ರತಿಷ್ಠಾಪಿಸಿ, ಮಂಗಳಾರತಿ ಎತ್ತಿ ನಮಗವನನ್ನು ಹಸ್ತಾಂತರಿಸಿದರೆಂದರೆ ಮುಂದೆ ನಮ್ಮ ಹಿಗ್ಗು ಭುಗಿಲೆದ್ದು ಕುಣಿಯುತಿತ್ತು. ಅವನ ನಿವೇದನೆಗೆಂದೇ ಹೊಸ ಹೊಸ ಬಯ್ಗಳು ಹುಟ್ಟುತ್ತಿದ್ದವು. ಊರಿನ ಹಾದರದ ಸುದ್ದಿಗಳು ಪ್ರಚುರ ಪಡೆಯುತ್ತಿದ್ದುದೇ ಈ ಶುಭ ಸಂದರ್ಭದಲ್ಲಿ. ಕದ್ದು ಮುಚ್ಚಿ ನಡೆಯುತ್ತಿದ್ದ ಪ್ರಣಯ ಪ್ರಸಂಗಗಳು ಊರ ಹೆಬ್ಬಾಗಿಲಿನ ಮುಂದಿನ ಗೋಡೆಯಲ್ಲಿ ಇದ್ದಲಿನಲ್ಲಿ ರಾರಾಜಿಸಿ, ಬೆಳಗಾಗುವುದರಲ್ಲಿ ಎಲ್ಲರ ನಾಲಿಗೆಗಳಲ್ಲಿ ನಲಿದಾಡಲು ತೊಡಗುತ್ತಿದ್ದವು. ವೈದ್ಯರ ನಾಮಫಲಕ ನಾಪಿತನಂಗಡಿಗೆ ಹೋಗಿ, ನಾಪಿತನ ನಾಮ ಫಲಕ ನ್ಯಾಯವಾದಿಯ ಬಾಗಿಲಿನಲ್ಲಿ ತೂಗಾಡಿ, ಕತ್ತೆಯ ಬಾಲಕ್ಕೆ ಕಟ್ಟಿದ್ದ ಪಟಾಕಿ ಸಿಡಿದು ಉಬ್ಬಸದ ಸುಬ್ಬಣ್ಣಯ್ಯ ನಮಗೆಲ್ಲ ಸಹಸ್ರನಾಮ ಶುರುಮಾಡುತ್ತಿದ್ದರು.

ವರಾಡಕ್ಕೆಂದು ಮನೆಯಂಗಳ ತುಳಿಯುವ ಮೊದಲೇ ಅವರವರ ಯೋಗ್ಯತಾನುಸಾರ ಮನೆಯ ಚಿಕ್ಕ ಮಕ್ಕಳ ಮೂಲಕ ತಮ್ಮ ದೇಣಿಗೆ ಕಳಿಸಿದ ಹಿರಿಯರು ಹೆಣ್ಣು ಮಕ್ಕಳನ್ನು ಮನೆಯಿಂದ ಹೊರಗೆ ಕಾಲಿಡದಂತೆ ಕಾಯುತ್ತಿದ್ದರು.

ಕೆಲವು ರಸಿಕ ಶಿಖಾಮಣಿ ಮುದಿಗೊಡ್ದುಗಳು ತಮಗೆ ಗೊತ್ತಿದ್ದ ಕಾಮನ ಪದಗಳನ್ನು ನಮಗೆ ಕದ್ದು ಬರೆದು ಕೊಟ್ಟು ನಾವದನ್ನು ಹಾಡುವಾಗ ಕೇಳಿ ಖುಶಿಪಡುತ್ತ, ದೇಣಿಗೆಯ ಮೊತ್ತಕ್ಕೆ ತಮ್ಮ ಪಾಲೂ ಸೇರಿಸಿ ಧನ್ಯವಾಗುತ್ತಿದ್ದವು. ನಾವು ವರ್ಷವಿಡೀ ಬಾಯಿ ಮುಚ್ಚಿಕೊಂಡು ಮನದಲ್ಲೇ ಧ್ಯಾನಿಸಿದ ಪ್ರಸಂಗಗಳಿಗೆಲ್ಲ ಜೀವ ಬಂದು, ನಮ್ಮೊಳಗಿದ್ದ ಕವಿ ಮಹಾಶಯ ಹೊರಗೆ ಬರುತ್ತಿದ್ದ. ಅದರಲ್ಲೂ ಆಷು ಕವಿತ್ವವಿದ್ದವರಿಗಂತೂ ಮಿಂಚಲು ಒಳ್ಳೆಯ ಅವಕಾಶ ಅದಾಗಿತ್ತು.ಹೀಗೆ ಪ್ರಸಂಗಗಳೆಲ್ಲ ಜೋಗದ ಜಲಪಾತದಂತೆ ಸುರಿದು ಬೀಳುತ್ತಿರುವಾಗ ಸಂನ್ಯಾಸಿಗಳಿಗೂ ಕೋಗಿಲೆಯ ಸ್ವರ ಕೇಳುತ್ತಿತ್ತು.

ಖರ್ಚಿಗೆ ಕಾಸು ಗಿಟ್ಟಿಸಿದ ನಂತರ ಕಾಮದಹನಕ್ಕೆ ಸೌದೆಯ ಉಸ್ತುವಾರಿ. ತೊಟ್ಟಿಲಿನಿಂದ ಆಕಾಶ ಬುmಯವರೆಗೂ ಮನೆಗಳಿಂದ ಸಂಗ್ರಹಿಸಿದ ಬಿದಿರು ಸಾಮಾನುಗಳ ಜೊತೆಗೆ ಮನೆಗಿಷ್ಟೆಂದು ಎತ್ತಿ ತಂದ ಸೌದೆ, ಮರ, ಮುಟ್ಟು. ಮನೆ ಮುಂದಿನ ಗೇಟಿಗೆಂದು ನಿಲ್ಲಿಸಿದ್ದ ಉಣುಗೋಲಿನಿಂದ ಹಿಡಿದು ಏಣಿ ಕಾಲು, ಚಪ್ಪರದ ಗೂಟ, ಹೂವು ಕೀಳುವ ಕೋಲು ಎಲ್ಲವೂ ಕಾಮನ ಚಪ್ಪರಕ್ಕೆ ಬಂದು ಬೀಳುತ್ತಿದ್ದವು. ಹೀಗೆ ಕದ್ದು ತಂದ ಸಾಮಾನುಗಳನ್ನು ಮನೆಗೊಯ್ಯಲು ಬಂದವರಿಗೆ ಬಯ್ಗಳದ ಸ್ವಾಗತ ಕಾದಿರುತ್ತಿದ್ದುದರಿಂದ ಊರ ಮನೆಗಳ ಹಿರಿಯರು ತಮ್ಮ ತಮ್ಮ ಮನೆಯ ಹಿತ್ತಲಿನಲ್ಲಿ ಬಿಡಾರ ಹೂಡಿಕೊಂಡು ನಾವ್ಯಾರೂ ಅವರ ವಸ್ತುಗಳನ್ನು ಕದಿಯದಂತೆ ತಡೆ ಒಡ್ಡುತ್ತಿದ್ದರು. ಮಧ್ಯರಾತ್ರಿ ಕಳೆದ ನಂತರ ಕಾಮನ ರಥ ಊರ ಸಂಚಾರಕ್ಕೆ ಹೊರಡುತಿತ್ತು.

ಎತ್ತು ಕಟ್ಟಿದ ಕಾಮ ರಥದ ಚಾಲಕ ಅಂದರೆ ಕಾಮ ಸಾರಥಿ ಯಾರಾಗುತ್ತಾರೋ ಅವರಿಗೆ ಆ ವರ್ಷ ಮದುವೆ ಆಗೇ ಆಗುತ್ತದೆಂಬ ನಂಬಿಕೆ ಬಲವಾಗಿ ಇದ್ದುದ್ದರಿಂದ ಮದುವೆಯ ವಯಸ್ಸು ಬಂದು ಇನ್ನೂ ಮದುವೆಗೆ ಮನೆಯಲ್ಲಿ ಯಾವ ಸೂಚನೆಗಳೂ ದೊರೆಯದ ಹುಡುಗರು ನಾ ಮೊದಲು ತಾ ಮೊದಲೆಂದು ಕಾಮ ಸಾರಥಿಯಾಗಲು ಮುಂದೆ ಬರುತ್ತಿದ್ದರಿಂದ ಆಯಾ ಮನೆಯವರು ಆ ವರ್ಷ ಆ ಹುಡುಗನ ಮದುವೆಯ ವಿಷಯ ತೆಗೆಯಲೇ ಬೇಕಾಗುತಿತ್ತು. ಎತ್ತು ಕಟ್ಟಿದ ಬಂಡಿಯನ್ನು ಊರಿನ ಬೀದಿ ಬೀದಿಗಳಲ್ಲಿ ಓಡಿಸಿಕೊಂಡು ಹೋಗುವಾಗ ಆ ಕಾಮ ಸಾರಥಿಗಳ ಮುಖದಲ್ಲಿರುತ್ತಿದ್ದ ಕಾತರ, ಏನನ್ನೋ ಕುರಿತ ಅವರ ಕುತೂಹಲ, ಮುಖದ ಮೇಲೆ ಮೂಡಿದ್ದ ನಾಚಿಕೆ, ಉದ್ವೇಗಗಳನ್ನು ಮೀಟಿ, ಹರೆಯದ ಸಂಗೀತವನ್ನು ಅನ್ಯರೂ ಕೇಳುವಂತೆ ಆಗುತ್ತಿತ್ತು.

ಒಂದು ಗುಂಪು ಹೀಗೆ ಕಾಮನ ಮೆರವಣಿಗೆಯಲ್ಲಿ ಸಾಗಿದ್ದರೆ ಮತ್ತೊಂದು ಗುಂಪು, ಹುಡುಗರನ್ನು, ಅವರ ಚೇಷ್ಟೆಗಳನ್ನು ಸುಮ್ಮ ಸುಮ್ಮನೇ ಗದರಿಸುತ್ತ, ತಮ್ಮ ಹಿರಿತನವನ್ನು ತೋರ್ಪಡಿಸುತ್ತಿದ್ದವರ ವಿರುದ್ಧ ತನ್ನ ಕಾರ್ಯಾಚರಣೆಯ ತಯಾರಿಯಲ್ಲಿರುತ್ತಿತ್ತು. ಆ ಮನೆಯವರೂ ಎಂಥ ಕಿಲಾಡಿಗಳೆಂದರೆ, ಅವರೇ ಸ್ವತಃ ಎದ್ದು ಕೂತು ಅವರ ಹಿತ್ತಲದ ಸಾಮನುಗಳ ನಿಗ ನೋಡುತ್ತಿದ್ದರು. ಆದರೆ ಕಾರ್ಯಾಚರಣೆಯ ಪಟ್ಟಿಯಂತೆ ಅವರ ಮನೆಯ ತೆಂಗಿನ ಮರದ ಎಲ್ಲ ಎಳನೀರು ಕಾಮೋತ್ಸವದ ಹುಡುಗರ ಬಾಯಾರಿಕೆ ತಣಿಸಬೇಕು. ಸರಿ, ಮುಂದಿನ ಉಪಾಯವೆಂದರೆ, ಬಂದ ಗುಂಪು ಎರಡಾಗಿ, ಮೊದಲ ಗುಂಪು ಆ ವ್ಯಕ್ತಿಯ ಜೊತೆ ಕ್ಷೇಮ ಸಮಾಚಾರ, ಲೋಕಾರೂಢಿಯ ಮಾತಿಗೆ ಇಳಿಯಿತು. ಸ್ವಭಾವತಃ ಮನುಷ್ಯರಾದವರೆಲ್ಲರೂ ಖುಷಿ ಕೊಡುವ ಸಂಗತಿಗಳಿಗೆ ಸ್ಪಂದಿಸುವ ರೀತಿಯಲ್ಲಿ ಆ ಹಿರಿಯರೂ ತಮ್ಮ ಕಾಲದ ಶೌರ್ಯ

ಸಾಹಸಗಳ ವರ್ಣನೆಗೆ ತೊಡಗಿದರೆ, ಈ ಹೊತ್ತಿಗಾಗಲೇ ಅವರ ತೆಂಗಿನ ಮರಕ್ಕೆ ಸೇದುವ ಹಗ್ಗದ ಸಮೇತ ಮರ ಹತ್ತುವವರು ಹತ್ತಿಯಾಗಿತ್ತು. ಮರದ ಮೇಲಿದ್ದವರು ಇಡಿ ಎಳನೀರಿನ ಕೊಂಬೆಯನ್ನೇ ಕತ್ತರಿಸಿ ಜೊತೆಗೊಯ್ದಿದ್ದ ಹಗ್ಗದ ಮೂಲಕ ಇಳಿಬಿಟ್ಟರೆ, ಆ ಕೊಂಬೆ ಹಗ್ಗದ ಮೇಲೆ ಜಾರುತ್ತ ಬರುತಿತ್ತು. ಕೆಳಗಿದ್ದವರು ಅದನ್ನು ಜೋಪಾನವಾಗಿ ಹೊತ್ತೊಯ್ಯುತ್ತಿದ್ದರು. ಇತ್ತ ತಮ್ಮ ಸಾಹಸ ವಿವರಣೆಯಲ್ಲಿದ್ದ ಹಿರಿಯರಿಗೂ ಕೆತ್ತಿ ತಂದ ಎಳನೀರಿನ ಉಪಚಾರ ನಡೆದು, ಅವರು ಅದನ್ನು ಕುಡಿದು ರುಚಿ ಕಂಡ ಮೇಲಷ್ಟೇ ನಮ್ಮೊಂದಿಗೆ ಜಗಳಕ್ಕಿಳಿಯುತ್ತಿದ್ದರು. ಸಾಹಸವೊಂದರ ಯಶಸ್ಸಿನಲ್ಲಿ ಬೀಗುತ್ತಿದ್ದ ನಮಗೆ ಅವರ ಬಯ್ಗಳು ಹೂ ಹಾರದ ಹಾಗೆ ಕಾಣುತ್ತಿದ್ದವು.

ಹುಣ್ಣಿಮೆಯ ಬೆಳ್ಳಂಬೆಳಗು ಬಾಯಿ ಬಡಿದು ಕೊಳ್ಳುತ್ತ ಆಕಾಶದೆತ್ತರಕ್ಕೆ ಉರಿ ಚಾಚುವ ಚಿತೆಗೆ ಕಾಮನ ಗೊಂಬೆಯನ್ನೆಸೆದು ಚಳಿಯಿಂದ ನಡುಗುತ್ತಿದ್ದ ಮೈ, ಮುಖಗಳಿಗೆ ಬೆಚ್ಚನೆಯ ಶಾಖವನ್ನು ಕೊಟ್ಟು ಕೊಳ್ಳುತ್ತ ಮುಂದಿನ ಕಾಮದಹನದವರೆಗೂ ವಟಗುಟ್ಟುವ ಬಾಯಿ, ಕದಿಯುವ ಕೈ, ಮತ್ತು ಬಂಡಾಯವೇಳುವ ಮನಸ್ಸಿನ ಹತೋಟಿ ಹೇಗೆ ಸಾಧ್ಯವೆಂದು ತಲೆತುರಿಸಿಕೊಳ್ಳುತ್ತ ಮನೆಗೆ ಹೋದರೆ ಅಮ್ಮ ತಲೆ ತುಂಬ ಹರಳೆಣ್ಣೆ ತಟ್ಟಿ ಅಭ್ಯಂಜನ ಮಾಡಿಸಿ, ಬೆಚ್ಚಗೆ ಹೊದಿಸಿ ಮಲಗಿಸುತ್ತಿದ್ದಳು. ನಿದ್ದೆಯಿಂದೆದ್ದು ಕಣ್ಣು ತೆರೆದರೆ ಹೊಯ್ಕೊಂಡ ಬಾಯಿಗೆ ಹೋಳಿಗೆ ತುಪ್ಪ ಬಡಿಸಿ ಆಗಷ್ಟೆ ಮೂಡುತ್ತಿದ್ದ ನಮ್ಮ ಮೀಸೆ ಮೊನೆಯನ್ನು ಅಪ್ಯಾಯವಾಗಿ ನೋಡುತ್ತ ಸಂಭ್ರಮಿಸುತ್ತಿದ್ದುದನ್ನು ಯಾವ ಶಾಲೆಯ ಯಾವ ಸಿಲೆಬಸ್ಸೂ ಒಳಗೊಳ್ಳುವ ಸಾಧ್ಯತೆ ಇಲ್ಲದಿರುವುದರಿಂದಲೇ ಈ ಕಾಲದ ಹುಡುಗರು ಹುಣ್ಣಿಮೆಯ ಬೆಳಕಿಗಿರುವ ಏನೆಲ್ಲ ಅಂತರಾರ್ಥಗಳನ್ನು ಗ್ರಹಿಸಲು ಸೋಲುತ್ತಿದ್ದಾರೆಯೆ ಎನ್ನುವ ಪ್ರಶ್ನೆ ಮೂಡಿಸಿಕೊಳ್ಳುತ್ತ ಚಂದ್ರಮ ಹರಿಸುವ ಚಂದ್ರಿಕೆಯಲ್ಲಿ ಕರಗುವ ಚಂದ್ರಕಾಂತ ಶಿಲೆಗಳು ನಮ್ಮ ಹೊಸ ಪೀಳಿಗೆಯ ಹುಡುಗರೆದೆಗೂ ಒಂದಿಷ್ಟು ಕನಸುಗಳನ್ನು ಬಿತ್ತಲಿ ಎಂದು ಹಾರೈಸೋಣ, ಅಲ್ಲವೇ?