ಒಟ್ಟು ಪುಟವೀಕ್ಷಣೆಗಳು

ಸೋಮವಾರ 27 ಜೂನ್ 2011

ಅಂತರಂಗದ ಅಭ್ಯಾಸಕ್ಕೊಂದು ಪುಟ್ಟ ಟಿಪ್ಪಣಿ - ರಾಧಿಕಾ ನಡಹಳ್ಳಿ-ತುಂಬಿಕೊಳ್ಳುವ ತವಕ

ಅಂತರಂಗದ ಅಭ್ಯಾಸಕ್ಕೊಂದು ಪುಟ್ಟ ಟಿಪ್ಪಣಿ.
ಸಮಕಾಲೀನ ಕನ್ನಡ ಕಾವ್ಯ ಕ್ರಿಯೆಯು ಇಷ್ಟೂ ದಿನ ಹರಿದು ಬಂದ ಕಾವ್ಯ ಪರಂಪರೆಯನ್ನೇ ಹೊರಳು ಹಾದಿಗೆ ತಂದು ನಿಲ್ಲಿಸಿರುವ ಸಂದರ್ಭವಿದು. ಕಾವ್ಯ ಕ್ರಿಯೆಗೆ ಪರಂಪರೆಯ ಅರಿವು ಮತ್ತು ಅನುಭವಗಳ ಪಾರಮ್ಯ ಬೇಕೆನ್ನುವ ಮೂಲ ಮಂತ್ರವನ್ನೇ ಧಿಕ್ಕರಿಸಿ ನುಡಿದುದೆಲ್ಲವನ್ನೂ ಕಾವ್ಯ ಸಂಭವವೆಂದು ತಮಗೊಲಿದ ಮಿತಿಯ ಐಕಾನುಗಳಲ್ಲಿ ಪರ್ಯಾಲೋಚಿಸುತ್ತಿರುವ ಆಧುನಿಕ ಕವಿತೆಗಳ ವಿಪುಲ ಸಾಮ್ರಾಜ್ಯ ಮುದ್ರಣಮಾಧ್ಯಮವನ್ನು ಮೀರಿ ನಿಂತು, ಅಂತರ್ಜಾಲದ ಸಾಮಾಜಿಕ ತಾಣಗಳಲ್ಲಿ, ವೆಬ್ ಪುಟಗಳಲ್ಲಿ, ಹಾಗೇ ಅನ್ನಿಸಿದ್ದೆಲ್ಲವನ್ನೂ ಬರೆದು ಬರೆದ ತಕ್ಷಣವೇ ಪ್ರಕಟಿಸಿಯೂ ಬಿಡುವ ಅವಕಾಶವಿರುವ ಬ್ಲಾಗುಗಳಲ್ಲಿ ತನ್ನ ವಿಸ್ತರತೆಯನ್ನು ಮೆರೆಯುತ್ತಿದೆ.

ಕಾವ್ಯದ ವಿಪುಲ ಬೆಳೆಯಿರುವ ಹಸಿರುಕ್ರಾಂತಿಯಂತೇ ತೋರುವ ಕಾವ್ಯಕ್ರಾಂತಿಯ ಈ ದಿನಗಳಲ್ಲಿ ಯುವ ಬರಹಗಾರರ ಮೊದಲ ಪುಸ್ತಕಕ್ಕೆ ಪ್ರೋತ್ಸಾಹ ಧನ ನೀಡಿ ಪುಸ್ತಕ ಪ್ರಕಟಿಸುವುದಕ್ಕೆ ನೆರವಾಗುತ್ತಿರುವ ಪುಸ್ತಕ ಪ್ರಾಧಿಕಾರದ ಯೋಜನೆಯಡಿ ರಾಧಿಕಾ ಅವರ ಈ ಸಂಕಲನ ‘ತುಂಬಿಕೊಳ್ಳುವ ತವಕ’ ಪ್ರಕಟವಾಗುತ್ತಿದೆ. ರೂಪಕಗಳಿಗೂ ಪದ್ಯದ ಶೀರ್ಷಿಕೆಗಳಿಗೂ ಬರ ಬಂದಿರುವ ಕಾಲದಲ್ಲಿ ಚಿಂತನೆಗೆ ಹಚ್ಚಬಲ್ಲ ತಲೆಬರಹ ನೀಡಿರುವ ಕವಿಗೆ ಅಭಿನಂದನೆ.

ಹೊಸ ಕವಿಯ ಮೊದಲ ಸಂಕಲನದ ಸಮಸ್ಯೆಗಳು ಸಂಕೀರ್ಣವಾಗಿರುತ್ತವೆ. ಎಷ್ಟು ಕವಿತೆಗಳನ್ನು ಸೇರಿಸಬೇಕೆನ್ನುವುದರಿಂದ ಹಿಡಿದು ಅವುಗಳ ಅನುಕ್ರಮಣಿಕೆಯ ಕ್ರಮ, ಪ್ರಕಾಶಕರ ಜೊತೆ ಮಾಡಿಕೊಳ್ಳಲೇ ಬೇಕಾದ ಒಡಂಬಡಿಕೆಗಳು, ಪ್ರಕಟಣೆಯ ಹಿಂದಿನ ಹಲವು ಹಂತಗಳನ್ನು ಸುಸೂತ್ರವಾಗಿ ನಿವಾರಿಸಿಕೊಳ್ಳುವ ಜಾಣತನ-ಇತ್ಯಾದಿ, ಇತ್ಯಾದಿ. ಅದೃಷ್ಟಕ್ಕೆ ಈ ಕವಿಯ ಪ್ರಸ್ತುತ ಸಂಕಲನದಲ್ಲಿ ಕಡಿಮೆ ಸಂಖ್ಯೆಯಲ್ಲಿ ಕವಿತೆಗಳಿರುವುದು, ‘ಸಂಚಯ’ ಇದನ್ನು ಪ್ರಕಟಿಸುತ್ತಿರುವುದು ಕವಿಯ ಕಾವ್ಯ ಪ್ರವೇಶದ ಹಾದಿಯನ್ನು ಸುಗಮಗೊಳಿಸಿವೆ. ಪುಸ್ತಕ ಪ್ರಕಟನೆಯ ಹಿಂದಿನ ಕರಾಳ ಹಸ್ತಗಳ ಹಿಡಿತದಿಂದಲೂ ಅವರು ಪಾರಾಗಿದ್ದಾರೆ.

ಒಬ್ಬ ಕವಿ ತನ್ನ ಕಾವ್ಯ ಸೃಷ್ಟಿಗೆ ತನ್ನದೇ ಆದ ಮನೋಧರ್ಮವೊಂದನ್ನು ಸ್ಥಾಪಿಸಿಕೊಂಡಿರುತ್ತಾನೆ ಮತ್ತು ಸ್ಥಾಪಿಸಿಕೊಂಡಿರಲೇ ಬೇಕು. ಬದುಕಿನಲ್ಲಿ ನಿತ್ಯ ಕಾಡುತ್ತಲೇ ಇರುವ ಮೂಲಭೂತ ಸಮಸ್ಯೆಗಳಿಗೆ ಅವನು ನೀಡುವ ಪ್ರತಿಕ್ರಿಯೆ ಮತ್ತು ಅಂಥ ಸಮಸ್ಯೆಗಳು ಆ ಕವಿಯ ಭಾವಕೋಶದ ಮೇಲೆ ಕೆತ್ತಿದ ಸಾಮಾಜಿಕ ಮತ್ತು ಭಾವನಾತ್ಮಕ ಸ್ಥಿತ್ಯಂತರಗಳು ಅವನ ಕಾವ್ಯ ಕ್ರಿಯೆಗೆ ಪುಷ್ಟಿ ನೀಡುತ್ತವೆ. ವರ್ತಮಾನದ ಸಂಗತಿಗಳಿಗೆ ತಟ್ಟನೆ ನೀಡಿ ಬಿಡುವ ಪ್ರತಿಕ್ರಿಯೆಗಳು ಬರಿಯ ಹೇಳಿಕೆಗಳಾಗೇ ಉಳಿದುಬಿಡುತ್ತವೆ. ಹಾಗಾದಾಗ ಅಪ್ಪಟ ಕಾವ್ಯ ಹುಟ್ಟಲಾರದು. ಹೀಗೆ ಲೋಕದ ಸಂಗತಿಗಳಿಗೆ ಭಾವನಾತ್ಮಕ ಪ್ರತಿಕ್ರಿಯೆ ನೀಡುವಲ್ಲಿ ಇರುವ ಅತಿ ಸೂಕ್ಷ್ಮ ಸಂಗತಿಯೇ ಕಾವ್ಯವಾಗಿ ಅರಳುತ್ತದೆ. ಭಾಷೆಯನ್ನು ದುಡಿಸಿಕೊಳ್ಳುವ ಹಲವು ಸಾಧ್ಯತೆಗಳ ಅರಿವಿನ ಜೊತೆಗೇ ಖಾಸಗಿ ಅನುಭವವನ್ನು ಪರಂಪರೆಯ ತಟ್ಟೆಯಲ್ಲಿಟ್ಟು ತೂಗಿ ನೋಡುವ ವ್ಯವಧಾನವೂ ಕವಿಗೆ ಇರಬೇಕಾಗುತ್ತದೆ. ನಮ್ಮ ಅನೇಕ ಯುವ ಕವಿಗಳಿಗೆ ಈ ತಾಳ್ಮೆ ಮತ್ತು ಸಂಯಮಗಳು ಇಲ್ಲದಿರುವುದರಿಂದಲೇ ಅವರಿಗೆ ಆ ಕ್ಷಣದಲ್ಲಿ ಅನ್ನಿಸಿದ್ದನ್ನೂ ಓದುಗರೂ ಕಾವ್ಯವೆಂದು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಒದಗಿ ಬಿಟ್ಟಿದೆ. ಪ್ರಸ್ತುತ ಸಂಕಲನದಲ್ಲಿ ‘ನಾನು’ ಅನ್ನುವ ಆತ್ಮ ಪ್ರತ್ಯಯದಲ್ಲೇ ಬದುಕಿನ ವಿವಿಧ ಮಗ್ಗುಲಗಳನ್ನು ವಿಶಿಷ್ಟವಾಗಿ ಮತ್ತು ಪ್ರತಿರಮ್ಯತೆಯ ಸ್ಥಾಯಿಯಲ್ಲೇ ಹಿಡಿದಿರುವ ರಾಧಿಕಾ ನಡಹಳ್ಳಿಯವರ ಈ ಸಂಕಲನ ಆಧುನಿಕ ಬಿಕ್ಕಟ್ಟುಗಳಿಂದ ಪಾರಾಗಿದೆಯೆಂದು ಧೈರ್ಯವಾಗಿ ಹೇಳಬಹುದು.

ಚಳಿಗಾಲ ಕವಿತೆ
ಕೆಂಡದ ನೆನಪ ಅಗ್ಗಿಷ್ಟಿಕೆಯ ಮುಂದೆ
ಬಿಸಿ ನೆನಪ ಹೊದ್ದು ಕೈ ಉಜ್ಜುತ್ತ ಕೂತಿದೆ
ಅಗ್ಗಿಷ್ಟಿಕೆಯ ಕೆಂಡದ ಬಿಸಿಯ ತನ್ನೊಳಗೂ
ಆವಾಹಿಸಿಕೊಳ್ಳಲು ಸಜ್ಜಾಗಿದೆ (ಸಂಕೇತ)

‘ಕವಿತೆ’ ಎಂದರೆ ಯಾವುದೆನ್ನುವ ನಿತ್ಯನೂತನ ಪ್ರಶ್ನೆ ಇವರ ಈ ಸಂಕಲನ್ದುದ್ದಕ್ಕೂ ಚಾಚಿಕೊಂಡಿದೆ. ವ್ಯಾಖ್ಯಾನ ಕವಿಯ ಕೆಲಸವಲ್ಲ. ಅದು ಓದುಗನ ಹಕ್ಕು. ಬರಿಯ ಹೇಳಿಕೆಗಳಾಗದ ಇಂಥ ಸಾಲುಗಳು ಅರ್ಥದ ಸಮುದ್ರದಲ್ಲಿ ಎದ್ದೆದ್ದು ಹಾರುವ ಅಲೆಗಳಂತೆ ಮೊದಲ ಓದಿನಲ್ಲೇ ವಿಸ್ಮಯಗೊಳಿಸುತ್ತವೆ, ತನ್ಮಯಗೊಳಿಸುತ್ತವೆ.

ಮೌನದುರಿಯ ಮಾತಿನಲಾರಿಸಬಹುದೇ
ಮಾತಿನುರಿಯ ಮೌನದಲಿ ಮರೆಸಬಹುದೇ
ಮಾತ ಮರೆಸಲು ಮೌನದ ಮೊರೆಯೇ
ಮೌನ ಮುಗಿಸಲು ಮಾತಿನ ಹೊಳೆಯೇ (ವ್ಯತ್ಯಾಸ)

ಶಬ್ದ ಮತ್ತು ಅದರೊಳಗಿನ ಲಯದ ಹದವರಿತ ಮನಸ್ಸು, ಆಶಯ ಮತ್ತು ಆಕೃತಿಗಳ ಅನನ್ಯ ಸಂಯೋಜನೆಯನ್ನು ನಿರ್ಮಿಸಬಲ್ಲುದು. ಹೀಗಾದಾಗಲೇ ಲಯ ವಿನ್ಯಾಸ ತನಗೆ ತಾನೇ ಏರ್ಪಡುತ್ತದೆ. ಈ ಕಾರಣಕ್ಕೆ ಇಲ್ಲಿನ ಬಹುತೇಕ ಪದ್ಯಗಳು ನಮ್ಮೊಳಗನ್ನು ಬೆಳಗುತ್ತವೆ.

ಇರುಳು ಅರ್ಧ ಕಳೆದಿದೆ
ಕೆಲ ತಾಸಿಗೆ ಹೊಸ ಬೆಳಕಿದೆ
ಎದೆಯೊಳಗಿನ್ನೂ ಕತ್ತಲಿದೆ
ನೀ ಬಂದ ಮೇಲಷ್ಟೇ ಬೆಳಗಲಿದೆ (ಪ್ರಥಮ)

ಎನ್ನುವುದು ಮೊದಲ ಓದಿಗೆ ಬರಿಯ ಅಂತ್ಯ ಪ್ರಾಸದ ಸರ್ಕಸ್ಸಿನಂತೆ ಕಂಡರೂ ಮರು ಓದಿಗೆ ಕವಿಯು ‘ಪ್ರಥಮ’ ಅನ್ನುವುದನ್ನು ಸಂಖ್ಯಾಸೂಚಕವಾಗಿ ಬಳಸಿದ್ದಾರೋ, ಪುರುಷ ವಾಚಕವಾಗಿ ಬಳಸಿದ್ದಾರೋ, ಅಥವ ಶ್ರೇಣೀಕರಣದ ವ್ಯಂಗ್ಯವಾಗಿ ಬಳಸಿದ್ದಾರೋ ಎನ್ನುವ ಕುತೂಹಲ ಹುಟ್ಟುತ್ತದೆ. ಪ್ರಯೋಗಗಳೇ ಕಡಿಮೆಯಾಗುತ್ತಿರುವ ಕಾಲದಲ್ಲಿ ಇದೂ ಉಚಿತವೇ!

ಅವನುಸಿರು ಒಮ್ಮೆಯೂ
ಸುಳಿಯದ ಗಾಳಿಯಲ್ಲೂ
ಅದೇನೋ ಗಂಧ ತೇಲಿದಂತಾಗಿ
ಹೃದಯ ಬಡಿತ ಏರಿ
ಕೊಂಚ ಬೆವರಿದಳು (ತಿಳಿ)

ಹರೆಯದ ಪುಳಕಗಳನ್ನು ಸಮರ್ಥವಾಗಿ ತೆರೆದಿಡುವ ಈ ಸಾಲುಗಳು ಹೃದಯ ಬಡಿತ ಏರಿ/ ಕೊಂಚ ಬೆವರಿದಳು ಅನ್ನುವುದು ಆಧುನಿಕ ಮನೋಭಾವದವರಿಗೆ ವಿಶಿಷ್ಠವೆನ್ನಿಸದಿದ್ದರೂ _ ಏಕೆಂದರೆ ಆಧುನಿಕ ಬದುಕು ಬಗೆಯುತ್ತಿರುವ ಜೀವನ ಕ್ರಮದಲ್ಲಿ ಅಮೂರ್ತ ಭಾವನೆಗಳಿಗಿಂತಲೂ ಮೂರ್ತ ಅನುಭವದ್ದೇ ಮೇಲುಗೈಯ್ಯಾಗಿರುವ ಕಾರಣ- ಒಳ್ಳೆಯ ಸಾಲುಗಳಾಗಿ ಕಾಣುತ್ತವೆ. ಆದರೂ ಪದ್ಯ ಮುಂದುವರೆಸಿದ ಕವಿ

ಬಣ್ಣ ತಿಳಿಯದ ಕಣ್ಣ ಕುರಿತು
ಕನಸ ಕಟ್ಟದಿದ್ದರೂ
ಇಂದಿನ ಮನಸ ಖುಷಿಯ
ನೆನಪಿಗೊಂದು ಕಾವ್ಯ ಬರೆದಿಟ್ಟಳು (ತಿಳಿ)

ಅನ್ನುವುದು ವ್ಯರ್ಥ ಮುಂದುವರೆಸಿದ ಸಾಲುಗಳಾಗಿ ತೋರುತ್ತವೆ. ಅಮೂರ್ತವಾಗಿ ಹೊಳೆದುದನ್ನು ಮೂರ್ತವಾಗಿ ತೋರಿಸಲೇಬೇಕೆನ್ನುವ ಹಟ ಕಾವ್ಯವಾಗುವುದಿಲ್ಲ ಎನ್ನುವ ಅರಿವು ಕವಿಗೆ ಹುಟ್ಟಬೇಕು.

ಅರರೇ ಇಲ್ಲೇ ಬಾಗಿಲಲ್ಲೇ ನಿಲ್ಲಿಸಿ ಏನಿದು ಯೋಚನೆ
ಹೋಗು ಒಳಗೆ- ಇದೋ ಬಂದೆ
ಇಟ್ತ ಚುಕ್ಕೆಯ ಎಳೆ ಸೇರಿಸಿ
ಅಮ್ಮಾ ನೋಡಲ್ಲಿ ಯಾರು ಬಂದರು?! (ಎಳೆ)

ಎಲ್ಲೆಲ್ಲೋ ಬಿಡಿಸಿಟ್ಟಿರುವ ಚುಕ್ಕೆಗಳನ್ನು ಸೇರಿಸಿ ರಂಗವಲ್ಲಿ ಅರಳಿಸುವ ಹಾಗೇ ಬದುಕಿನ ಚುಕ್ಕೆಗಳಾಗಿರುವ ನಮ್ಮೊಳಗನ್ನೂ ಸಂಬಂಧದ ಎಳೆ ಸೇರಿಸಿ ಜೋಡಿಸಬೇಕಿದೆ. ಇಂಥ ಹಂಬಲ ಈ ಕವಿಗಿದೆ. ಸಂಬಂಧಗಳನ್ನೇ ನಿರಾಕರಿಸುವ ‘ಸ್ಟೇ ಟುಗೆದರ್’ ಕಾಲದಲ್ಲಿ ಇದೂ ಅಪರೂಪವೇ.

ತಲ್ಲಣಗೊಳಿಸಿದ ಅನುಭವ
ಒಳಗಿದ್ದರೆ ಕ್ಷಣ ಕ್ಷಣ
ಅಣು ಅಣು ತಲ್ಲಣ
ಹೊರಬಂದ ಕ್ಷಣ ನಿರಾಳ
ಮರುಕ್ಷಣ ಅನುಮಾನ
ಪ್ರಶ್ನೆಗಳ ಆಕ್ರಮಣ (ಬರೆ)

ಕಬ್ಬಿಣದ ಸಲಾಕೆಯನ್ನು ನಿಗಿ ನಿಗಿ ಬೆಂಕಿಯಲ್ಲಿ ಕಾಯಿಸಿ ಮೈ ಸುಡುವ ‘ಬರೆ’ಯ ಹಾಗೇ ಬರೆಯುವುದು ಕೂಡ ಮನಸ್ಸನ್ನು ಸುಟ್ಟು ಸುಟ್ಟು ಶೋಧಿಸಬೇಕಾದದ್ದು. ಬರೆ ಎನ್ನುವ ಪದವೇ ಅನುಭವದ ಅರ್ಥಕೋಶದಿಂದ ಕಾಣೆಯಾಗುತ್ತಿರುವ ದಿನಗಳಲ್ಲಿ ಆ ಶಬ್ದವನ್ನೇ ಶಬ್ದ ಗಾರುಡಿಯನ್ನಾಗಿಸಿಕೊಂಡಿರುವ ಕ್ರಮ ಅವರ ತಕ್ಕಮಟ್ಟಿನ ಸಾಧನೆಯ ಕುರುಹಾಗಿ ಕಾಣುತ್ತದೆ.

ಹಗಲೆಲ್ಲ ಕವಿತೆ ಧ್ಯಾನ
ಇರುಳು ಅದರದೇ ಸನ್ನಿಧಾನ (ಪಾಠ)

ಕವಿತೆಯನ್ನು ಮತ್ತು ಕವಿತೆ ಹುಟ್ಟುವ ರೀತಿಯನ್ನೂ ಈ ಕವಿ ತಮ್ಮ ಹಲವು ರಚನೆಗಳಲ್ಲಿ ಚಿಂತಿಸಿದ್ದಾರೆ. ಚಿಂತನೆಯ ಲವಲೇಷವೂ ಇರದ ದುರ್ಭರ ದಿನಗಳಲ್ಲಿ ಈಕೆಯ ಕಾವ್ಯ ಕನ್ನಿಕೆ ನಡೆಯುತ್ತಿರುವುದೂ ಸೋಜಿಗವೆನ್ನಿಸುತ್ತದೆ.

ನಿನ್ನ ಕೊರಳ ಮೌನದ ನಕಲಿ
ಆಭರಣ ಕಳಚಿ ನಿಲ್ಲು
ಇಲ್ಲಿ ಸಂಭ್ರಮದಿಂದ ಕಾದಿದೆ
ಅಸಲಿ ಮಾತಿನ ಮುತ್ತಿನ ಹಾರ (ಹಾರದ ನಿರೀಕ್ಷೆ)

ಅನ್ನುವಲ್ಲಿ ಕೂಡ ‘ಹಾರದ ನಿರೀಕ್ಷೆ’ ಎನ್ನುವುದು ಕೊರಳಿಗೆ ಹಾಕುವ ಹಾರವೋ ಅಥವ ಹಾಗೇ ಹಗುರಕ್ಕೆ ಹಾರದೇ ಭದ್ರವಾಗಿ ನಿಲ್ಲುವ ನಿರೀಕ್ಷೆಯೇ ಎನ್ನುವ ಪರಿ ಕೂಡ ಓದುಗನ ವಿಸ್ತರಣೆಗೆ ಬಿಟ್ಟ ವಿಚಾರ.

ಇಷ್ಟೆಲ್ಲ ಹೇಳಿದ ಮಾತ್ರಕ್ಕೆ ಈ ಸಂಕಲನದ ಉಳಿದ ಪದ್ಯಗಳಿಗೂ ಈ ಮಾತು ಅನ್ವಯಿಸುತ್ತದೆ ಎನ್ನುವಂತಿಲ್ಲ. ಏಕೆಂದರೆ ಬರಿಯ ನಿರೀಕ್ಷೆಗಳು, ಕನಸುಗಳು, ಹೇಳಿಕೆಗಳನ್ನು ಕೂಡ ಪದ್ಯವಾಗಿಸುವ ಧಾರಾಳ ವಾಚಾಳಿತನ ಉಳಿದ ಹಲವು ಪದ್ಯಗಲಲ್ಲಿ ಕಾಣುತ್ತದೆ. ಒಂದು ಸಂಕಲನವೆಂದರೆ ಗಟ್ಟಿ ಮತ್ತು ಜೊಳ್ಳು ಕಾಳುಗಳ ಮಿಶ್ರಣ. ಗಟ್ಟಿಕಾಳುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಜೊಳ್ಳು ಕಾಳುಗಳು ಕಡಿಮೆ ಇದ್ದರೆ ಓದುಗ ಬದುಕುತ್ತಾನೆ. ಇಲ್ಲಿ ಜೊಳ್ಳು ಕಾಳುಗಳು ವಿಪರೀತಾವಾಗದೇ ಇರುವುದು ಸಮಾಧಾನದ ಅಂಶ.

ಸ್ವಮಗ್ನ ಸ್ಥಿತಿಗಳಲ್ಲಿ ಅನ್ನಿಸಿದ್ದನ್ನು ಕಾವ್ಯವೆನ್ನುವ ಆಧುನಿಕ ಕಾಲದಲ್ಲಿ ಹೃದಯೊಳಕ್ಕೂ ಇಳಿಯುವ ಸಾರ್ಥಕ ಸಾಲುಗಳನ್ನು ನೀಡಿರುವ ಕವಿಗೆ ಅಭಿನಂದನೆ ಸಲ್ಲಿಸುತ್ತಲೇ ಅವರು ಕನ್ನಡ ಕಾವ್ಯ ಪರಂಪರೆಯೊಂದಿಗೆ ತಮ್ಮ ಪುಟ್ಟ ಹೆಜ್ಜೆಗಳನ್ನೂ ಸೇರಿಸಬೇಕೆನ್ನುವ ತವಕವಿರುವುದನ್ನು ಗುರುತಿಸಿದ್ದೇನೆ. ಅದಕ್ಕೆ ತಯಾರಿಯಾಗಿ ಈಗಾಗಲೇ ತನಗೆ ದಕ್ಕಿರುವ ಸಂಗತಿಗಳಾಚೆಗಿನ ದಕ್ಕದ ಸಂಗತಿಗಳಿಗೂ ಕವಿ ಕಣ್ಣು ಕೈ ಕಿವಿಗಳನ್ನು ಚಾಚಬೇಕಿದೆ. ದೀರ್ಘ ಪರಂಪರೆಯ ಸವಿಸ್ತಾರ ಆಲಾಪಗಳನ್ನು ಅಭ್ಯಸಿಸುತ್ತಲೇ ಕಾಲಕ್ಕೆ ತಕ್ಕುದಾದ ಹ್ರಸ್ವ ಸ್ವರ ಪ್ರಸ್ತಾರವನ್ನೂ ಈಕೆ ದಕ್ಕಿಸಿಕೊಳ್ಳಲಿ ಎನ್ನುವ ಆಶಯದ ಜೊತೆಗೇ ನೀವೂ ಪದ್ಯಗಳನ್ನು ನಿಮ್ಮದಾಗಿಸಿಕೊಳ್ಳಿ ಎಂದು ಬಿನ್ನವಿಸಿಕೊಳ್ಳುತ್ತಾ ಸ್ನೇಹದ ಹೆಸರಲ್ಲಿ ಇಂಥ ಅಪ್ಪಟ ಜವಾಬ್ದಾರಿ ನೀಡಿದ ಪ್ರಕಾಶಕ ಮಿತ್ರ ಶ್ರೀ ಡಿ.ವಿ.ಪ್ರಹ್ಲಾದರನ್ನೂ ನೆನೆಯುತ್ತೇನೆ. ನಮಸ್ಕಾರ.




ರವಿವಾರ 26 ಜೂನ್ 2011

ಬೆಂಗಳೂರು ಪದ್ಯಗಳು



ಬೆಂಗಳೂರೆಂಬ ಅಪ್ಪಟ ಸುಂದರಿಗೆ
ಅದೆಷ್ಟೆಷ್ಟೋ ಮಿಂಡರು: ಕಣ್ಣು ಹೊಡೆದು
ಬಳಿಗೆ ಕರೆಯುವವರ ಹಾಗೇ ಗೌರವವಾಗಿ
ಕಾಣುವವರೂ ಕೂಡ ಬೆಚ್ಚಿಬೀಳುತ್ತಾರೆ-
ಅವಳ ಉದ್ದೋಉದ್ದದ ಯೋನಿಗೆ
ಬೊಗಸೆ ತುಂಬಿಯೂ ಉಳಿದು ಚೆಲ್ಲುವ ಮೊಲೆಗೆ
ಯಾವತ್ತಿಗೂ ಯಾರೂ ಚಿತ್ತು ಮಾಡಲಾಗದ ಅವಳ ಧಗೆಗೆ!



ಬೆಂಗಳೂರೆಂಬ ಮಾಯದೇವತೆಗೆ
ವರ ಕೊಡಲು ಅದೆಷ್ಟೆಷ್ಟೋ ಹಸ್ತಗಳು: ಸಲಹಲು
ಥೇಟು ಅಮ್ಮನದೇ ಕೈಗಳು, ಜಾಡಿಸಿ ಒದೆಯಲು
ಸಶಕ್ತ ಕಾಲುಗಳು, ಕರೆದು ಕೂರಿಸಿ ಹಸಿದ ಹೊಟ್ಟೆಗೆ
ಹಿಟ್ಟು ಹಾಕುವ ಬೀದಿ ಬದಿಯ ಅಂಗಡಿಗಳು
ಮೆಜೆಸ್ಟಿಕ್ಕಿನ ಸ್ಲಮ್ಮಿನಲ್ಲಿ ಆಡುವ ಬಡಕಲು ದೇಹಗಳು
ಮತ್ತು ಆ ದೇಹಗಳನ್ನು ಸಾಕಲು ಒದಗುವ ದೇಹ ವ್ಯಾಪಾರಗಳು!



ಬೆಂಗಳೂರೆಂಬ ಮಾಯಾಮೋಹಿನಿಗೆ
ಐಟಿ ಬೀಟಿಗಳೆಂಬ ಅವಳಿ ಮಕ್ಕಳುಗಳು
ಕಷ್ಟ ಸುಖ ಅರಿಯದ ಅರಿವಳಿಕೆ ಕುಡಿದ ಜೀವ ಕುಡಿಗಳು
ವೀಕೆಂಡಿನಲ್ಲಷ್ಟೇ ಸೂರ್ಯನ ಮುಖ ನೋಡುವ ದಂದುಗಗಳು
ಪ್ಲಾಸ್ಟಿಕ್ಕ್ ಕಾರ‍್ಡಿಗೆ ಮನುಷ್ಯರಿಗಿಂತಲೂ ಮಿಗಿಲಾದ ಬೆಲೆಗಳು
ಗಾಡಿಗೆ, ಮನೆಗೆ, ಮಜಾ, ಮೋಜವಾನಿಗೂ ಸಿಕ್ಕುವ ಸಾಲಗಳು
ಪಡೆದು ತೀರಿಸಲಾಗದೇ ರೈಲಿನಡಿಗೆ ಬೀಳುವ ದೇಹಗಳು!



ಟ್ರಾಫಿಕ್ ಜಾಮಿನಲ್ಲಿ ಪೇಪರ್ ಮಾರುವ ಮಾನವಂತರು
ಕಾರಿಗಡ್ದಡ್ಡ ನುಗ್ಗಿ ಕಾಸಿಗೆ ಕೈ ಚಾಚುವ ಖೋಜಾಗಳು
ಸುಳ್ಳು ಸುಳ್ಳೇ ಭರ್ತಿಯಾಗುವ ಸರ್ಕಾರೀ ಆಸ್ಪತ್ರೆಗಳ ಬೆಡ್ಡುಗಳು
ಪೀಕ್ ಅವರಿನಲ್ಲಿ ಸರ್ರನೆ ಸರಿದು ಹೋಗುವ ಗೂಟದ ಕಾರುಗಳು
ಈ ಮೂಲೆಯಿಂದ ಆ ಮೂಲೆಗೆ ಸಾಗುವ ಬಿಗ್ ಸರ್ಕಲ್ ಬಸ್ಸುಗಳು
ಸಾಯಿಬಾಬಾನ ದರ್ಶನಕ್ಕೆ ನಿಂತಷ್ಟೇ ನಿಷ್ಠೆಯಲ್ಲಿ ಗೋಭಿ ಮಂಚೂರಿಗೆ
ಇನಾಕ್ಸ್ ಥಿಯೇಟರಿಗೆ, ಶವದ ದರ್ಶನಕ್ಕೆ ಕಾದಿರುವ ಕಡು ಮೋಹಿಗಳು!



ಬೆಂಗಳೂರೆಂಬ ನಿಜಗಳು, ನಿಜದ ತಲೆಗೆ ಮೊಟಕುವ ಸುಳ್ಳುಗಳು
ಸುಳ್ಳು ಸುಳ್ಳೇ ಬ್ರೇಕಿಂಗ್ ಸುದ್ದಿಯ ಸದ್ದು ಹೊರಡಿಸುವ ಚ್ಯಾನಲ್ಲುಗಳು
ದುಃಖ ಮಡುಗಟ್ಟಿರುವಾಗಲೂ ಸಿನಿಮಾದ ಹಾಡು ಒದರುತ್ತಲೇ ಇರುವ ಎಫೆಮ್ಮುಗಳು
ಶ್ರೀ ಸಾಮಾನ್ಯನ ಸಂಸಾರ ಸರಿಗಮದ ತರಾನಗಳು
ಇಲ್ಲಿರಲೂ ಆಗದೇ ಓಡಿ ಹೋಗಲೂ ಆಗದ ಅಸಂಖ್ಯಾತ ಕನಸುಗಳು
ರಂಗಶಂಕರ, ಕಲಾಕ್ಷೇತ್ರ, ಎಡಿಯೆಗಳಲ್ಲಷ್ಟೇ ಇಣುಕುವ ಮೌಲ್ಯಗಳು.
ಬಿಟ್ಟೆನೆಂದರೂ ಬಿಡದ ಮಾಯಿಯ ಮುಖದ ಸುಕ್ಕುಗಳು!

(ಇವತ್ತಿನ ವಿಜಯಕರ್ನಾಟಕದಲ್ಲಿ ಪ್ರಕಟಿತ)

ಪ್ರಾರ್ಥನೆ

ಪ್ರಾರ್ಥನೆ
ಪ್ರಭೂ,
ಸುಳ್ಳಿನ ಪುಗ್ಗೆಯನ್ನೂದಿ
ಭ್ರಮೆಯ ಮತ್ತಿನಲ್ಲಿ ಮೈ ಮರೆತಿದ್ದೇನೆ
ನಿಜದ ಸೂಜಿ ಮೊನೆ ತಾಗಿಸಬೇಡ
ವಾಸ್ತವಕ್ಕಿಲ್ಲಿ ಕಿಮ್ಮತ್ತೇ ಇಲ್ಲ.

ಪ್ರಭೂ,
ಕೃತಕ ಹೂವಿನ ಹಾರತೊಡಿಸಿ
ಸನ್ಮಾನ ಸಂಭ್ರಮದ ಮಾತೆತ್ತಿದ್ದೇನೆ
ತಾಜಾ ಕುಸುಮದ ಉಸಿರಟ್ಟಬೇಡ
ಸಹಜಕ್ಕಿಲ್ಲಿ ಅವಕಾಶವಿಲ್ಲ.

ಪ್ರಭೂ,
ನಿಸ್ತೇಜದ ಮುಖಕ್ಕಷ್ಟು ರಂಗು ಬಳಿದು
ಮುಖವಾಡದೊಳಡಗಿಸಿಟ್ಟಿದ್ದೇನೆ
ನಿಜದ ಮಾತೆತ್ತಿ ತತ್ತಿಗೆ ಕಾವಿಡಬೇಡ
ಸಂತತಿಯ ಸಲಹುವುದಕ್ಕೆ ಸಮಯವಿಲ್ಲಿಲ್ಲ.

ಪ್ರಭೂ,
ಮೇಲ್ನೋಟದ ತಿಳುವಳಿಕೆಯನ್ನೇ
ಜ್ಞಾನವೆಂದು ಬಿಂಬಿಸಿದ್ದೇನೆ
ಪರಂಪರಾಗತ ಪರಾಮರ್ಶೆಗೊಡ್ಡಬೇಡ
ಪೂರ್ಣಾವದಿಯ ಪಿಂಚಣಿಗಿನ್ನು ಕೆಲವೇ ನಿಮಿಷ!

(ಇವತ್ತಿನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿತ)

ಶನಿವಾರ 18 ಜೂನ್ 2011

ಕೆರೆ ಕೊಟ್ಟ ಕರೆ......

ಕೆರೆ ಕೊಟ್ಟ ಕರೆ.. ..
ನನ್ನ ಹುಟ್ಟೂರು ತರೀಕೆರೆ. ಬದುಕಿನ ಬಹುಭಾಗ ಕಳೆದದ್ದು ಅಂದರೆ ಹೆಂಡತಿ, ಮಕ್ಕಳು ಮನೆ ಕಟ್ಟಿಸಿದ್ದು ಅರಸೀಕೆರೆ. ಈಗ ಕಾರ್ಯಾರ್ಥ ಇರುವುದು ಬೆಂಗಳೂರಿನ ಕೆರೆಯೊಂದನ್ನು ಅಚ್ಚುಕಟ್ಟು ಮಾಡಿ ನಿರ್ಮಿಸಲಾದ ಬಡಾವಣೆ ಚನ್ನಮ್ಮನ ಕೆರೆ. ನಿನ್ನ ಪ್ರವರ ಯಾರು ಕೇಳಿದ್ದು ಅಂತ ಗೊಣಗಿದಿರಾ? ಸ್ವಲ್ಪ ಇರಿ. ಕೆರೆ ಅನ್ನುವ ಅಂತ್ಯಪ್ರಾಸ ಇರುವ ಊರುಗಳು ಕೆರೆಯ ಹಂಗೇ ಇಲ್ಲದೆ ಹೇಗೆ ಈಗ ಬದುಕು ಕಳೆದುಕೊಳ್ಳುತ್ತಿವೆ ಅಂತ ಕೊಂಚ ಆಲೋಚಿಸುವುದು ಈ ಬರಹದ ಉದ್ದೇಶ.

ಹಾಗೆ ನೋಡಿದರೆ ಎಲ್ಲ ಊರುಗಳಿಗೂ ಒಂದಲ್ಲ ಒಂದು ಕೆರೆಯ ಸಂಬಂಧ ಇರಲಿಕ್ಕೇ ಬೇಕು. ಕೃಷಿಗೆ, ನಿತ್ಯದ ಉಪಯೋಗಕ್ಕೆ, ಊರಿಗೊಂದು ನೀರಿನ ಮೂಲ ನೆಲೆ ಬೇಕೇ ಬೇಕು. ಬಯಲು ಸೀಮೆಯ ತರೀಕೆರೆ, ತುರುವೇಕೆರೆ, ನೊಣವಿನಕೆರೆ ಮುಂತಾದ ಸ್ಥಳ ನಾಮಗಳು ಆಯಾ ಊರುಗಳಲ್ಲಿರುವ ಕೆರೆಗಳಿಂದ ಬಂದದ್ದಾದರೆ, ತುಮಕೂರು ಪ್ರಾಂತ್ಯದ ಅಮ್ಮಸಂದ್ರ, ಬಾಣಸಂದ್ರ, ತಿಪ್ಪಸಂದ್ರ ಮುಂತಾದವು ಕೆರೆಗಿಂತಲೂ ದೊಡ್ಡದಾದ ನೀರಿನ ತಾಣ ಸಮುದ್ರ ಅನ್ನುವ ಅರ್ಥ ಸೂಸುವ ಸಂದ್ರಗಳ ಮೂಲಕ ಬಂದದ್ದು. ಎಮ್ಮೆಗಳು ಆರಾಮಾಗಿ ವಿಶ್ರಮಿಸಬಹುದಾದ ಜಾಗಕ್ಕೂ ಸಂದ್ರ ಅಂತ ಕರೆದಿರುವುದು ಆ ಜನ ಸಮುದ್ರವನ್ನು ಕಾಣದೇ ಇದ್ದುದ್ದಕ್ಕೇ ಇರಬಹುದೇನೋ? ಇನ್ನು ಹುಬ್ಬಳ್ಳಿಯ ಕಡೆ ಹೊಂಡ ಎನ್ನುವ ಅಂತ್ಯಪ್ರಾಸದ ಹಲವು ಹೆಸರುಗಳು ಸಿಕ್ಕುವಂತೆಯೇ ದಕ್ಷಿಣಕನ್ನಡದ ಬಹುತೇಕ ನೀರ ಝರಿಗಳಿಗೆ ತೀರ್ಥ ಅಂತ ಕರೆಯುವುದೂ ವಾಡಿಕೆ. ಈಗ ಹೆಸರಿಗಷ್ಟೇ ಕೆರೆ ಅಂತ ಅಂತ್ಯವಾಗುವ ಊರುಗಳಲ್ಲಿರಲಿ, ಬಹುತೇಕ ಎಲ್ಲ ಊರುಗಳಲ್ಲೂ ನಜೀರ್ ಸಾಬರ ದಯದಿಂದ ಹೆಜ್ಜೆಗೊಂದು ಕೊಳವೆ ಬಾವಿ ಬಂದ ಕಾರಣ ಆ ಊರುಗಳ ಕೆರೆಗಳೆಲ್ಲ ಸ್ಟೇಡಿಯಂಗಳಾಗಿ ಅಥವ ಹೊಸಬಡಾವಣೆಗಳಾಗಿ ಬದಲಾಗಿವೆ. ಕೆರೆ ಅನ್ನುವ ಪದಕ್ಕಿರುವ ನಿಘಂಟಿನರ್ಥಕ್ಕಿಂತಲೂ ಕೆರೆಗೆ ಹಾರವಾದ ಭಾಗೀರಥಿಯ ಕತೆಗೊತ್ತಿರುವವರಿಗೆ ಈ ಕೆರೆಗಳ ಜೊತೆಗಿರುವ ಭಾವನಾತ್ಮಕ ಸಂಬಂಧಗಳನ್ನು ಅರಿಯುವುದು ಸುಲಭ ಸಾಧ್ಯ.

ಕುಕ್ಕರಹಳ್ಳಿಯ ಕೆರೆ ಮೈಸೂರಿನವರಿಗಷ್ಟೇ ಅಲ್ಲದೇ ಕುವೆಂಪು ಮೂಲಕ ಕನ್ನಡ ಬಲ್ಲ ಎಲ್ಲರಿಗೂ ಗೊತ್ತಾದ ಹಾಗೇ, ತರೀಕೆರೆ ಏರಿ ಮೇಲೆ ಮೂರು ಕರಿಕುರಿಮರಿ ಮೇಯ್ತಿತ್ತೂ ಅನ್ನುವ ನಾಲಿಗೆ ಹೊರಳಿಸುವ ಪದಗಳ ಮೂಲಕ ಗೊತ್ತಿದ್ದ ತರೀಕೆರೆ ಈಗ ವಿಮರ್ಶಕ ರಹಮತ್ ಹೆಸರಿಗೆ ಅಂಟಿಸಿಕೊಂಡ ಕಾರಣಕ್ಕೂ ಖ್ಯಾತಿಗೆ ಬಂದಿದೆ. ಕಳ್ಳರಸೀಕೆರೆ ಅಂತಲೇ ಖ್ಯಾತವಾದ ಅರಸೀಕೆರೆಯಲ್ಲೇ ನಟ ರಾಜಕುಮಾರ್‌ಗೆ ನಟಸಾರ್ವಭೌಮ ಅನ್ನುವ ಬಿರುದು ಬಂದದ್ದು ಅಂತ ಎಷ್ಟೋ ಜನರಿಗೆ ಗೊತ್ತೇ ಇಲ್ಲ! ಊರಿಗೆ ಬಂದವಳು ಕೆರೆಯ ನೀರಿಗೆ ಬಾರಳೇ ಅನ್ನುವ ಹಾಗೇ ಆ ಕೆರೇಲಿ ಹುಟ್ಟಿದಾಕೇನು, ಗೇಕೇನು, ಗೆಡ್ಡೇನು, ಗೆಣಸೇನು? ಅನ್ನುವ ಎಲ್ಲರ ಮಾನವನ್ನೂ ಕಳೆದು ಬಿಸಾಕುವ ಗಾದೆ ಮಾತೂ ಅಷ್ಟೇ ಪ್ರಖ್ಯಾತವಾದದ್ದು. ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೋ ಅನ್ನುವ ದಾಸರ ಮಾತಿನ ಅಂತರಾರ್ಥ ಹಾಗೆಲ್ಲ ಲೌಕಿಕದ ಕೆಸರಲ್ಲಿ ಬಿದ್ದಿರುವ ನನ್ನಂಥ ಸಾಮಾನ್ಯರಿಗೆ ಅರ್ಥವಾಗದ್ದು.
ತಮ್ಮ ಹೆಸರಿನ ಪಕ್ಕದಲ್ಲೇ ಕೆರೆ ಅನ್ನುವ ಅಭಿದಾನವಿದ್ದೂ ಕೃಷಿಗಿರಲಿ ನಿತ್ಯೋಪಯೋಗದ ನೀರಿಗೂ ತತ್ವಾರವಿರುವ ಹಲವು ಹತ್ತು ಊರುಗಳ ಪಟ್ಟಿ ಕ್ಷಣಾರ್ಧದಲ್ಲಿ ಸಿದ್ಧಪಡಿಸಿಕೊಡಬಹುದು. ಅಂಥ ಊರಿನ ಕೆರೆಗಳ ಪಕ್ಕದ ಜಮೀನು ತೋಟಗಳವರು ತಮ್ಮ ಜಾಗವನ್ನು ಒತ್ತರಿಸಿ ಒತ್ತರಿಸಿ ಕೆರೆಯ ಮೂಲ ಆಕಾರಕ್ಕೆ ಕುಂದು ತಂದಿರುವ ಘಟನೆಗಳು ಕೆರೆಯಿರುವ ಎಲ್ಲ ಊರುಗಳ ಮಾಮೂಲಿ ಕರ್ಮಕಾಂಡ. ಮೊದಲೆಲ್ಲ ಕೆರೆ ಎಂದರೆ ಕುಡಿಯುವ ನೀರಿನ ಆಕರ. ಸಂಜೆ ಸೂರ್ಯ ಕಂತುವ ಮೊದಲು ಹಾಗೇ ಬೆಳಗು ಹರಿದು ಸೂರ್ಯ ನೆತ್ತಿ ಮೇಲೆ ಏರುವ ಮೊದಲೂ ಸೊಂಟದಲ್ಲೊಂದು ತಲೆಯ ಮೇಲೊಂದು ಬಿಂದಿಗೆಯಿಟ್ಟುಕೊಂಡ ಚೆಲುವೆಯರು ನೀರಿಗೆ ಕೆರೆಯ ದಾರಿ ಹಿಡಿದು ಬರುತ್ತಿದ್ದರೆಂದರೆ ಆ ಹೆಂಗೆಳೆಯರ ಗುಂಪು ಕಲರವ ಮಾಡುತ್ತ ಕಾಲು ಕಾಲಿಗೆ ತೊಡರುವ ತಮ್ಮ ಕಂದಮ್ಮಗಳನ್ನು ನಿವಾರಿಸಿಕೊಳ್ಳುತ್ತ ಆ ದಾರಿಯುದ್ದಕ್ಕೂ ಜಗಲಿಗಳ ಮೇಲೆ ಸೊಪ್ಪು ಶೋಧಿಸುತ್ತಲೋ, ಹೂವು ಕಟ್ಟುತ್ತಲೋ ಕುಳಿತಿರುತ್ತಿದ್ದ ಅಜ್ಜಮ್ಮಗಳನ್ನು ಮಾತನಾಡಿಸುತ್ತ ಕಷ್ಟ-ಸುಖ ಹೇಳಿಕೊಳ್ಳುತ್ತ ಹೋಗುತ್ತಿದ್ದರೆಂದರೆ ಆ ಮೋಜನ್ನು ಈಗ ವರ್ಣಿಸಲೂ ಅಸಾಧ್ಯವಾಗಿದೆ. ದನಕರುಗಳನ್ನು ಮೇಯಿಸಲು ಕೆರೆಯ ಏರಿಯ ಮೇಲೇ ಅಟ್ಟಿಕೊಂಡು ಹೋದ ದನಗಾಹಿಗಳ ಹಿಂದೆಯೇ ಕತ್ತೆಗಳ ಬೆನ್ನ ಮೇಲೆ ಬಟ್ಟೆಗಳ ಹೊರೆ ಹೊರಿಸಿಕೊಂಡು ಅಗಸರ ಕ್ಯಾರವಾನು ಬರುತ್ತಿತ್ತು. ಕೆರೆಯ ಮುಂದಣ ಪಾವಟಿಕೆಗಳ ಬಳಿ ಕುಡಿಯುವ ನೀರಿನ ಘಟ್ಟಗಳಿದ್ದರೆ ಜಾತಿಗೊಂದೊಂದರಂತೆ ಇರುತ್ತಿದ್ದ ಸ್ನಾನಘಟ್ಟಗಳಲ್ಲಿ ಆಯಾ ಕುಲಕಸುಬು ಬಿಡುವು ಕೊಟ್ಟ ವಾರದ ದಿನಗಳಲ್ಲಿ ಆಯಾ ಜಾತಿಯವರು ಮಡಿಯಾಗುತ್ತಿದ್ದರು. ಕೋಡಿ ಹತ್ತಿರವಿದ್ದ ದೋಭಿಘಾಟಿನಲ್ಲಿ ಊರವರೆಲ್ಲರ ಬಟ್ಟೆಗಳೂ ಮಡಿಯಾಗಿ ಕೋಡಿ ಕಲ್ಲುಗಳಲ್ಲಿ ಒಗೆದು ಒಣಹಾಕಿದ ಬಟ್ಟೆಗಳು ಸೂರ್ಯನ ಪ್ರಖರತೆಯನ್ನೇ ತಗ್ಗಿಸಿಬಿಡುತ್ತಿದ್ದವು. ಬಟ್ಟೆಯೊಗೆದು ಹಿಂಡಿ ಕಲ್ಲಿನ ಮೇಲೆ ಒಣಹಾಕಿ ಅವು ಗಾಳಿಗೆ ಹಾರದಂತೆ ಅವುಗಳ ಮೇಲೊಂದು ಪುಟ್ಟಕಲ್ಲಿನ ಭಾರವನ್ನು ಇರಿಸಿ ಪಾದಗಳನ್ನು ತರಚು ಕಲ್ಲುಗಳ ಮೇಲೆ ಉಜ್ಜುತ್ತಿದ್ದಾಗ ಪಾದದ ಸೀಳಿದ ಸಂದುಗಳಲ್ಲಿದ್ದ ಕೊಳೆ ತಿನ್ನಲು ಪಾದ ಚುಂಬಿಸುತ್ತಿದ್ದ ಮೀನಿನ ನೆನಪು ಬಲು ಮೋಜು. ಬಟ್ಟೆಯೊಗೆದು ಮೆತ್ತಗಾಗಿದ್ದ ಬೆಳೆದ ಉಗುರುಗಳನ್ನು ಕತ್ತರಿಸಿಹಾಕುವುದೂ ಎಷ್ಟು ಸುಲಭದ ಕೆಲಸವಾಗಿತ್ತು. ನೈಲ್ ಕಟ್ಟರಿನಲ್ಲಿ ಗಂಟೆಗಟ್ಟಲೇ ಒದ್ದಾಡಿದರೂ ಸ್ವಚ್ಛವಾಗದ ಟ್ರಿಂ ಆಗದ ಬೆರಳ ಉಗುರುಗಳು ಕ್ಷಣಾರ್ಧದಲ್ಲಿ ಸುಲಭವಾಗಿ ಸಾಪುಗೊಳ್ಳುತ್ತಿದ್ದುದ್ದರ ಮಜವೇ ಬೇರೆ.

ಊರಿನವರೆಲ್ಲರ ನೀರಿನ ಅಗತ್ಯತೆಯನ್ನೂ ಊರಿನಲ್ಲಿದ್ದ ಒಂದು ಕೆರೆಯೇ ಪೂರೈಸುತ್ತಿದ್ದದ್ದು ಈಗಲೂ ಆಶ್ಚರ್ಯದ ಮಾತೇ. ಜನ ಜಾನುವಾರುಗಳಿಗಾಗಿ ಮಿಕ್ಕುವಂತೆ ಆ ಕೆರೆಯನ್ನು ಪರಿಪೋಷಿಸುತ್ತಿದ್ದ ರೀತಿಯೂ ಸ್ತುತ್ಯಾರ್ಹವೇ. ತಳವಾರ ನೀರುಕಂಟಿ ಭದ್ರಯ್ಯ ಯಾವ ಜಲತಜ್ಞ ಇಂಜಿನಿಯರಿಗಿಂತಲೂ ಮಿಗಿಲಾಗಿ ಕೆರೆಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದನೆಂದರೆ ಸ್ವತಃ ಪಟೇಲರು, ಶ್ಯಾನುಭೋಗರು ಅಥವ ಒಮ್ಮೊಮ್ಮೆ ಅಮಲ್ದಾರರು ಉಸ್ತುವಾರಿಯ ಬಗ್ಗೆ ನಿಗಾ ವಹಿಸುವುದು ಹೆಚ್ಚುಕಡಿಮೆ ಮಾಡಿದರೂ ಅವನು ತಡೆದುಕೊಳ್ಳುತ್ತಿರಲಿಲ್ಲ. ಕೆರೆಯ ತೂಬೆತ್ತಿ ನೀರು ಬಿಡುವುದಕ್ಕೂ ಅವನ ಪಂಚಾಂಗವೇ ಬೇರೆಯದಿತ್ತು. ಯಾರ ಜಮೀನಲ್ಲಿ ಯಾವ ಯಾವ ಬೆಳೆ ಬೆಳೆದಿದ್ದಾರೆ, ಅದಕ್ಕೆ ಅಗತ್ಯವಿರುವ ನೀರೆಷ್ಟು ಎನ್ನುವುದರ ಸಂಪೂರ್ಣ ವಿವರ ಅವನಲ್ಲಿರುತ್ತಿತ್ತು. ಕೆರೆಯ ಸ್ವಚ್ಛತೆಗೆ ಕೊಂಚ ಭಂಗ ತಂದವರಿಗೂ ಅವನ ದಂಡದ ಭರಾಟೆ ಗೊತ್ತಿರುತ್ತಿತ್ತು. ಬೇಸಿಗೆಯ ಕಡೆಯಲ್ಲೊಮ್ಮೆ ಕೆರೆಯ ಹೂಳೆತ್ತಿ ಶುದ್ಧ ಮಾಡುವುದಕ್ಕೆ ಗಾಡಿಗಿಷ್ಟೆಂದು ಸುಂಕ ವಸೂಲಿಮಾಡಿ, ಆಬಾದು ಮಾಡುವವರಿಗೆ, ತೆಂಗಿನ ಸಸಿ ಹಾಕಿಸುವ ಉದ್ದೇಶವುಳ್ಳವರಿಗೆ ತಳವಾರರ ಮಾರ್ಗದರ್ಶನ ಇದ್ದೇ ಇರುತ್ತಿತ್ತು. ಜೊತೆಗೇ ಕೆರೆಗೆ ನೀರಿನ ಹರಿವು ಎಲ್ಲೆಲ್ಲಿಂದ ಬರಬೇಕೋ ಆಯಾ ಮಾರ್ಗಗಳನ್ನು ಸಾಪುಗೊಳಿಸಿ ಮಳೆಗಾಲಕ್ಕೆ ಪೂರ್ವದಲ್ಲೇ ಒಂದು ವಿಚಕ್ಷಣೆ ಕೂಡ ನಡೆದಿರುತ್ತಿತ್ತು. ಒಮ್ಮೊಮ್ಮೆ ಬಟಾಬೇಸಿಗೆಯಲ್ಲಿ ಕೆರೆಯನೀರೊಣಗಿ ಪರಿಸ್ಥಿತಿ ವಿಪರೀತಕ್ಕಿಟ್ಟುಕೊಂಡಾಗಲೂ ನೀರುಕಂಟಿಯ ಲೆಕ್ಕಾಚಾರವೇ ಬೇರೆಯಾಗಿರುತ್ತಿತ್ತು. ಪಂಚಾಯತಿನವರ ತಾಲ್ಲೂಕು ಅಮಲ್ದಾರರ ಸಹಾಯ ಪಡೆದು ಕುಡಿಯುವ ನೀರಿನ ಘಟ್ಟವಿದ್ದಲ್ಲಿ ತೋಡುಗುಂಡಿ ತೆಗೆದು ಒಸರುವ ನೀರಒರತೆಯನ್ನು ಇನಿತೂ ಹಾಳಾಗದಂತೆ ಕಾಪಾಡಿ ಜನಜಾನುವಾರುಗಳನ್ನು ಜಲಕ್ಷಾಮದಿಂದ ಪೊರೆಯುತ್ತಿದ್ದ ಆ ದಿನಗಳಲ್ಲಿನ ಸ್ವಾರ್ಥ ರಹಿತ ಜನಸೇವೆಯ ಕಿಲುಬೂ ಈ ಹೊತ್ತಿನ ನಮ್ಮ ಅಧಿಕಾರಷಾಹಿಗಳಿಗಿಲ್ಲದಿರುವುದು ನಮ್ಮ ದೌರ್ಭಾಗ್ಯ.
ಯಾವಾಗ ಕೊಳಾಯಿಗಳಲ್ಲಿ ನೀರು ಮನೆಯ ಅಂಗಳಕ್ಕೆ ಬರತೊಡಗಿತೋ ಆವತ್ತಿನ ದಿನದಿಂದಲೇ ಕೆರೆಗಳಿಗೆ ಶಾಪ ಹಿಡಿಯಿತೆನ್ನಬೇಕು. ಸ್ವಲ್ಪವೂ ಶ್ರಮ ಪಡದೇ ಕುಡಿದ ನೀರು ಅಲ್ಲಾಡದ ಹಾಗೆ ಅನುಕೂಲಗಳು ಸಿಕ್ಕುವಂತಾದರೆ ಮನುಷ್ಯ ಹೆಚ್ಚು ಹೆಚ್ಚು ಸ್ವಾರ್ಥಿಯಾಗುತ್ತಾನೆ ಅನ್ನುವುದು ಸತ್ಯ. ಯಾವಾಗ ಕೆರೆಯ ದಾರಿ ಜನ ಮರೆತರೋ ಪೋಲಿಪಟಾಲಮ್ಮುಗಳಿಗೆ, ದನಗಾಹಿಗಳಿಗೆ, ಬಹಿರ್ದೆಸೆಗೆಂದು ಕೋಡಿಯ ತುದಿಯವರೆಗೂ ಓಡಬೇಕಲ್ಲ ಎಂದು ಪರಿತಪಿಸುತ್ತಿದ್ದ ಶುದ್ಧ ಸೋಂಬೇರಿಗಳಿಗೆ ಈಗ ಸುಲಭವಾಯ್ತು. ಸುಂಕ ಕಟ್ಟದೇ ಬೇಕಾಬಿಟ್ಟಿ ಕೆರೆಯ ಮಣ್ಣನ್ನೆತ್ತಿಕೊಂಡು ಹೋಗುವವರಿಗೆ ಕಾಲ ನಡೆಸಿತು. ಕೆರೆಯ ಗೋಡು ಹೇಗೆಂದರೆ ಹಾಗೇ ತೋಡಿದ ಕಾರಣ ಸೊಳ್ಳೆಗಳಿಗೂ, ಹಂದಿಗಳಿಗೂ ಸಾಮ್ರಾಜ್ಯವನ್ನೇರ್ಪಡಿಸಿಕೊಳ್ಳಲು ತಾಂಬೂಲ ಕೊಟ್ಟಂತಾಯಿತು. ಕೆರೆಯ ಅಂಗಳದಲ್ಲಿ ಮಾತ್ರ ರಾರಾಜಿಸುತ್ತಿದ್ದ ಆಪಿನ ಜೊತೆಗೇ ಇತರ ಮುಳ್ಳುಕಂಟಿಗಳೂ, ಪೊದೆಗಳೂ ಬೆಳೆದ ಕಾರಣ ಕೆರೆಯ ಅಂಗಳವೇ ಸಾರ್ವಜನಿಕ ಶೌಚಾಲಯವಾಗಿ ಪರಿವರ್ತನೆಗೊಂಡು ಕೆರೆಯ ಏರಿಯ ಮೇಲಿನ ಸೊಗಾಸಾದ ಸಂಜೆಯ ಸುತ್ತಾಟ ಮರಣಾಂತಿಕ ಶಿಕ್ಷೆಯಾಗಿ ಬದಲಾಯಿತು, ಒತ್ತುವರಿ ಮಾಡುವವರಿಗೆ ಸಿಕ್ಕ ನಿಧಿಯೂ ಆಯಿತು. ಕಾಲ ಕಳೆದಂತೆ ನೀರಿನ ಒರತೆಗಳು ಅಕ್ಕಪಕ್ಕದ ಸ್ಥಳಗಳಲ್ಲಿ ತೋಡಿದ ಕೊಳವೆಬಾವಿಗಳಿಂದಾಗಿ ಮಾಯವಾಗಿ ಕೆರೆಯ ಅಂಗಳವೆಂಬುದು ಶೋಭೆಕಳೆದುಕೊಂಡು ಗಲೀಜಿನ ಗ್ಯಾರೇಜಾಯಿತು, ಮುನಿಸಿಪಾಲಿಟಿಯವರು ಕಸತಂದು ಹೊತ್ತು ಹಾಕುವ ತೊಟ್ಟಿಯಾಗಿಯೂ ಬದಲಾಯಿತು. ಕೋಡಿ ಹರಿಯುತ್ತಿದ್ದ ಅಕ್ಕಪಕ್ಕದ ಜಾಗ ವಸತಿಹೀನರ ಆಕ್ರಮಣಕ್ಕೆ ತುತ್ತಾಗಿ ಅಕ್ರಮ ಸಕ್ರಮದ ಅರ್ಜಿಗೆ ವಸ್ತುವಾಗಿ ಬದಲಾಯಿತು. ತಳವಾರ ತೋಟಿಗಳು ಕಾಲವಾಗಿ ಅವರ ಮಕ್ಕಳು ಅವರಿವರ ಬಾಯಿಂದ ಅವರ ಹಿರೀಕರ ಬದುಕನ್ನು ತಿಳಿಯುವ ಮಟ್ಟಿಗೆ ಕಾಲ ಓಡುತ್ತೋಡುತ್ತ ಇವತ್ತಿನ ಮಟ್ಟಿಗೆ ಬಂದು ನಿಂತಿದೆ.

ಈಗ ಯಾವುದೇ ಊರಿಗೆ ಹೋಗಿ ನೋಡಿ. ವರ್ಷದ ಒಂದಲ್ಲ ಒಂದು ಕಾಲದಲ್ಲಿ ಕುಡಿಯುವ ನೀರಿಗೆ ತತ್ವಾರವಿದ್ದೇ ಇರುತ್ತದೆ. ಮಳೆಗಾಲ ಚೆನ್ನಾಗಿ ನಡೆಸಿದರೂ ಬಿದ್ದ ನೀರು ಅಂತರ್ಜಲವಾಗಿ ಬದಲಾಗದೇ ಹರಿದು ಹೋಗಿ ಕೆರೆಕಟ್ಟೆಗಳು ಪೋಷಿಸುವವರಿಲ್ಲದೇ ಒಣಗಿಹೋಗಿ ಎಲ್ಲ ಊರುಗಳವರೂ ಭೂಮಿಯ ಆಳದಾಳದಿಂದ ನೀರನ್ನೆತ್ತುವ ಕೊಳವೆಬಾವಿಗೆ ಶರಣು ಹೋಗಿದ್ದಾರೆ. ಸಹಜವಾಗಿ ನೈಸರ್ಗಿಕವಾಗಿ ಸಿಕ್ಕ ನೀರನ್ನು ಸರಿಯಾಗಿ ಹಿಡಿದಿಟ್ಟುಕೊಳ್ಳದ ಕಾರಣ ಕೊಳವೆಬಾವಿಗಳಿಂದ ಹೊರಬರುವ ಸಲ್ಫೇಟ್ ನೀರನ್ನೋ ಅಥವ ಇತರ ವಿಷಕಾರೀ ವಸ್ತುಗಳಿಂದ ಒಡಗೂಡಿದ ನೀರನ್ನೇ ಜನ ಜಾನುವರು ಉಪಯೋಗಿಸಲೇ ಬೇಕಾದ ಅನಿವಾರ್ಯತೆಯೊದಗಿದೆ. ನಮ್ಮನ್ನು ಪೊರೆಯಬೇಕಾದ ಸರ್ಕಾರಗಳೇ ನೆಲದ ಅದಿರನ್ನು ಕದ್ದು ತೆಗೆದು ಮಾರಾಟವಾಡುವವರ ಅಡುಂಬೊಲವಾಗಿರುವಾಗ ಕೆರೆಯ ನೀರಿಗೆ ಯಾವ ದೊಣ್ಣೆನಾಯಕನ ಅಪ್ಪಣೆ ಯಾರಿಗೆ ಬೇಕಾಗಿದೆ?

ಇದೇನು ಕೆರೆಗಳ ಬಗ್ಗೆ ಹೇಳುತ್ತ ಇದ್ದವನು ಗಲೀಜು ರಾಜಕೀಯಕ್ಕೆ ವಿಷಯಾಂತರ ಮಾಡಿದೆ ಅಂತ ಗೊಣಗಿದಿರಾ? ಇವತ್ತು ರಾಜಕೀಯ ಇಲ್ಲದ ಒಂದೇ ಒಂದು ಸಣ್ಣ ಕ್ಷೇತ್ರ ತೋರಿಸಿ. ನಾವೆಲ್ಲರೂ ರಾಜಕೀಯ ಮಾಡಲೇಬೇಕು. ಅಂದರೆ ರಾಜನಿರಲಿ ಬಿಡಲಿ ನಮ್ಮ ಸವಲತ್ತುಗಳನ್ನು ಆಪೋಷನ ತೆಗೆದುಕೊಳ್ಳುವ ಯಾರದೇ ವಿರುದ್ಧವೂ ನಮ್ಮ ಬಂಡುತನ ತೋರಲೇಬೇಕು. ಯಾವ ಕೆರೆ ಅಭಿವೃದ್ಧಿಯ ಹೆಸರಲ್ಲಿ ಎಷ್ಟು ಕೋಟಿಗಳ ಸ್ವಾಹ ಆಗಿದೆ ಅಂತ ಬೇಕಾದರೆ ಆರ್.ಟಿ.ಐನಲ್ಲಿ ಅರ್ಜಿ ಸಲ್ಲಿಸಿ ಬರೇ ಹತ್ತು ರೂಪಾಯಿಯಲ್ಲಿ ಸಮಗ್ರ ವಿವರ ಪಡೀಬಹುದು. ವಿಷಯ ಯಾಕೆ ಎತ್ತಿದೆ ಅಂದರೆ ಇತ್ತೀಚೆಗೆ ಹಿಂದೆಲ್ಲ ತಳವಾರ ತೋಟಿಗಳು ಮಾಡುತ್ತ ಇದ್ದ ಕೆಲಸವನ್ನು ಅಂದರೆ ಕೆರೆ ಬಾವಿ ತೋಡುಗಳನ್ನು ನಿರ್ವಹಿಸಲು ಸರ್ಕಾರದ ಒಂದು ಇಲಾಖೆಯೇ ಇದೆಯಂತೆ. ಕೆರೆ ತೊರೆಗಳ ಹೂಳೆತ್ತಿಸಿ ಅಲ್ಲಿ ಮೀನುಗಾರಿಕೆಯನ್ನು ಅಭಿವೃದ್ಧಿಪಡಿಸಿ, ಅವರಿವರು ಒತ್ತರಿಸದಂತೆ ತಡೆಯಲು, ಶುದ್ಧ ನೀರನ್ನು ಜನ ಜಾನುವಾರಿಗೆ ನೀಡುವ ಸಲುವಾಗಿ ಆ ಇಲಾಖೆಗೆ ವರ್ಷೇ ವರ್ಷೇ ಬಜೆಟ್ಟಿನಲ್ಲಿ ಕೋಟಿಗಳ ಮೊತ್ತ ನಿಗದಿಮಾಡಲಾಗಿರುತ್ತದೆ. ಆದರೆ ಎಲ್ಲ ಊರುಗಳ ಕೆರೆಗಳ ಏರಿಯ ಕಲ್ಲುಗಳು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿವೆ, ನಗರೀಕರಣದ ಕಾರಣ ಗಮನಿಸುವವರಿಲ್ಲದೇ ಗಲೀಜು ಗುಂಡಿಗಳಾಗುತ್ತಿವೆ.

ಹೊತ್ತುಗೊತ್ತಿಲ್ಲದೇ ಬರುವ ನಲ್ಲಿ ನೀರಿಗೆ ತೆರಿಗೆ ಕಟ್ಟಿಯೂ ಶಬರಿಯೋಪಾದಿಯಲ್ಲಿ ಅದರ ಬರವಿಗೆ ಕಾಯುತ್ತಿರುವ ಜನಸಮುದಾಯದ ಸಾಮಾನ್ಯ ಸದಸ್ಯನಾದ ನನಗೂ ಈ ಸಾರಿಗೆ ಬಸ್ಸುಗಳ ಸಂಚಾರ, ನಗರ ಜೀವನದ ತಲ್ಲಣ-ತವಕಗಳು, ಏರುತ್ತಿರುವ ನಿತ್ಯಬಳಕೆಯ ವಸ್ತುಗಳ ಬೆಲೆ ಕನಿಷ್ಠ ಇಷ್ಟು ಹೊತ್ತಾದರೂ ಅವೆಲ್ಲ ತರಲೆ, ತಾಪತ್ರಯಗಳನ್ನು ಮರೆಸಿ, ಮಾಯವಾದ ಮದಗದಂಥ ಹಲವು ಕೆರೆಗಳ ಕುರಿತು ಆಲೋಚಿಸುವಂತೆ ಮಾಡಿತು. ಜಲದ ಕಣ್ಣುಗಳನ್ನು ತೆರಸುವ ಆ ಮೂಲಕ ಶುದ್ಧವಾದುದನ್ನು ಪಡೆಯುವ ಅವಕಾಶ ಆಧುನಿಕ ಮನೋಭೂಮಿಕೆಯಲ್ಲಿರುವ ನಮ್ಮಿಂದ ಸಾಧ್ಯವಿಲ್ಲದಿರುವುದೇ ಈ ಹೊತ್ತಿನ ನಮ್ಮ ಸಮಸ್ಯೆಗಳಿಗೆ ಮೂಲ. ಬಳಸುವ ನೀರಿನ ಮೂಲ ಯಾವುದು ಎಂದು ತಿಳಿಯುವ ಗೋಜಿಗೂ ಹೋಗದೇ ನಲ್ಲಿಯಲ್ಲಿ ಸುರಿಯುವ ನೀರನ್ನು ದಂಢಿಯಾಗಿ ಬಳಸುತ್ತಿರುವ ನಮ್ಮ ಕುರುಡು ಆ ನೀರು ನಿಲ್ಲುವವರೆಗೂ ಅನ್ಯರಿಗಿರಲಿ ನಮಗೇ ಗೊತ್ತಾಗುವುದಿಲ್ಲ ಅನ್ನುವುದು ಸದ್ಯದ ಸತ್ಯ. ಕೆರೆಯ ಶುದ್ಧಿಗೆ ಮೊದಲು ನಮ್ಮೊಳಗಿನ ಕರೆಗೆ ಓಗೊಡೋಣ, ನಂತರ ಕೆರೆ ಕಟ್ಟೆಗಳಿಗೆ ನೀರು ಹಾಯಿಸುವ ಮಾತನಾಡೋಣ. ಏನಂತೀರಿ?

ರವಿವಾರ 14 ನವೆಂಬರ್ 2010

ಮಕ್ಕಳ ದಿನಕ್ಕೆ ಹೀಗೊಂದು ಆಲೋಚನೆ.. .. .. .. ..

ಮಕ್ಕಳ ದಿನಕ್ಕೆ ಹೀಗೊಂದು ಆಲೋಚನೆ.. .. .. .. ..

ನವಂಬರ್ ೧೪ರ ಈ ದಿನ ಮಕ್ಕಳ ದಿನಾಚರಣೆ. ಮಹಿಳೆಯರಿಗೆ, ಹೆತ್ತವರಿಗೆ, ಪ್ರೀತಿಯಲ್ಲಿ ಬಿದ್ದವರಿಗೆ, ಪರಿಸರಕ್ಕೆ, ಪಾಠ ಹೇಳುವ ಮಾಸ್ತರರಿಗೆ ಹೀಗೆ ಎಲ್ಲರಿಗೂ ದಿನಾಚರಣೆಗಳನ್ನು ಆಚರಿಸುವ ನಾವು ನಿಜದ ಅರ್ಥದಲ್ಲಿ ಈ ದಿನಾಚರಣೆಗಳಿಗಿರುವ ಮಹತ್ವವನ್ನು ಮರೆತುಬಿಟ್ಟಿದ್ದೇವೆ. ಮಾಧ್ಯಮಗಳಲ್ಲಿ ಬರುವ ವರದಿಗಳು, ಸಂಘ ಸಂಸ್ಥೆಗಳು ನಡೆಸುವ ಸನ್ಮಾನ, ಗೌರವರ್ಪಣೆಗಳಲ್ಲೇ ಬಹುತೇಕ ದಿನಾಚರಣೆಗಳು ಕಳೆದುಹೋಗಿಬಿಡುತ್ತಿವೆ. ಶಾಲಾ ಕಾಲೇಜುಗಳಂತೂ ಭಾಷಣ ಸ್ಪರ್ಧೆಯನ್ನೋ, ಲೇಖನಸ್ಪರ್ಧೆಯನ್ನೋ ನಡೆಸಿ ತಮ್ಮ ಜವಾಬ್ದಾರಿಯನ್ನು ಮುಗಿಸಿಕೊಳ್ಳುತ್ತಿವೆ. ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳಂತೂ ಸಿನಿಮಾ ಹಾಡುಗಳ ಸಿಡಿಗಳಿಗೆ ಕೈಕಾಲಾಡಿಸುವ ವ್ಯರ್ಥ ಉಪಕ್ರಮಗಳಾಗೇ ನಿಲ್ಲುತ್ತಿವೆ.

ಉದಾಹರಣೆಗೆ ಮಕ್ಕಳದಿನಾಚರಣೆಯನ್ನು ನಾವು ನಡೆಸುತ್ತಿರುವ ಕ್ರಮವನ್ನೇ ನೋಡಿ. ಪಂಡಿತ ನೆಹರೂ ತಮ್ಮ ಜನ್ಮದಿನಾಚರಣೆಯನ್ನು ಮಕ್ಕಳ ದಿನವನ್ನಾಗಿ ಆಚರಿಸಲು ಹೇಳಿದ್ದನ್ನೇ ಮತ್ತೆ ಮತ್ತೆ ನೆನೆಯುತ್ತ, ಅವರು ಅಂದೆಂದೋ ಧರಿಸಿದ್ದ ದಿರಿಸನ್ನೋ, ಅವರು ಬರಹಗಾರರಾಗಿದ್ದನ್ನೋ ಅಥವಾ ಅವರು ಜಾರಿಗೆ ತಂದ ಪಂಚಶೀಲ ತತ್ವವನ್ನೋ ಪುನಃ ಪುನಃ ಹೇಳಿ ಅವರು ಕೋಟಿನ ಗುಂಡಿಗೆ ಸಿಕ್ಕಿಸಿಕೊಳ್ಳುತ್ತಿದ್ದ ಗುಲಾಬಿಯನ್ನು ನಾಚಿಸುತ್ತೇವೆ. ನೆಹರೂ ಯಾವಕಾರಣಕ್ಕೆ ಮಕ್ಕಳಿಗೆ ಇಷ್ಟು ಮಹತ್ವ ನೀಡಿದರು? ಅವರೇಕೆ ಎಲ್ಲ ಮಕ್ಕಳಿಗೂ ‘ಚಾಚಾ’ಆಗಿರಲು ಬಯಸಿದ್ದರು ಎಂದು ಬಹುತೇಕರು ಆಲೋಚಿಸುವುದೇ ಇಲ್ಲ.

‘ಪ್ರತಿಯೊಂದು ಮಗುವೂ ಮನುಷ್ಯನೊಬ್ಬನ ತಂದೆ’ ಎನ್ನುವ ಆಂಗ್ಲ ಗಾದೆಯೊಂದಿದೆ. ಬಾಲ್ಯದಲ್ಲಿ ಕಲಿತ ಬುದ್ಧಿ-ಮನಸ್ಸುಗಳೇ ಮುಂದಿನ ದಿನಮಾನಗಳನ್ನು ರೂಪಿಸುವುದರಿಂದ ಎಲ್ಲರ ಬಾಲ್ಯವೂ ಪರಿಶುದ್ಧವಾಗಿರುತ್ತದೆ ಎನ್ನುವ ಮಾತೂ ಇದೆ. ಹಸಿವು, ನೀರಡಿಕೆ, ನಿದ್ದೆಗಳು ಮಾತ್ರ ಮಕ್ಕಳು ದೊಡ್ಡವರನ್ನು ಕಾಡುವಂತೆ ಮಾಡುತ್ತವೆ. ಉಳಿದಂತೆ ಮಕ್ಕಳ ಮನಸ್ಸು ಎಷ್ಟು ನಿರ್ಮಲವಾಗಿರುತ್ತದೆ ಅಂದರೆ ಅದಕ್ಕೆಂದೇ ನಮ್ಮ ಹಿರಿಯರು ಮಕ್ಕಳನ್ನೂ ದೇವರ ಸ್ವರೂಪ ಅಂತ ಕರೆದದ್ದು. ಕೂಡು ಕುಟುಂಬ ವ್ಯವಸ್ಥೆ ಇದ್ದಷ್ಟೂ ದಿನ ಮಕ್ಕಳು ಪಂಕ್ತಿಭೇದವಿಲ್ಲದೇ, ತರತಮಗಳ ಸೋಕಿಲ್ಲದೇ ಉಂಡು ಆಡಿ ನಲಿಯುತ್ತಿದ್ದವು. ಅಜ್ಜನೋ, ಅಜ್ಜಿಯೋ. ದೊಡ್ಡಮ್ಮ, ದೊಡ್ಡಪ್ಪನೋ ನೀತಿ ಕತೆಗಳನ್ನು ಹೇಳುವ ಮೂಲಕ ಒಳಿತು ಕೆಡುಕಗಳ ವ್ಯತ್ಯಾಸವನ್ನು ಮನದಟ್ಟು ಮಾಡಿ ಮಗುವಿನ ಮನಸ್ಸಿನಲ್ಲಿ ನೈತಿಕತೆಯ ಬೀಜನೆಟ್ಟು ಬೆಳಸಿರುತ್ತಿದ್ದರು. ಅವರು ಕಲಿಸುವ ಬಾಯಿಪಾಠ, ಮಗ್ಗಿ, ಶ್ಲೋಕ, ಅಮರಗಳಿಗೆ ಕಾದು ಉಳಿದ ಮಕ್ಕಳೊಂದಿಗೆ ಬೆರೆತು ಆಡಿ ನಲಿದು ಬಾಲ್ಯವೆಂಬ ಬೆಲ್ಲದ ರುಚಿ ನಿರಂತರ ಉಳಿಯುವಂತೆ ಅದನ್ನು ಸವಿಯುತ್ತಿದ್ದವು. ನಮ್ಮ ಜನಪದರು ಸೃಷ್ಟಿಸಿರುವ ಕತೆ ಹಾಡುಗಳಲ್ಲಂತೂ ಮಕ್ಕಳಿಗೆ ಇಷ್ಟವಾಗುವ ಗಿಡ,ಮರ,ಪಶು, ಪಕ್ಷಿಗಳೂ ಮಾತನಾಡಿ ಬದುಕಿನ ಸೂಕ್ಷ್ಮಗಳನ್ನು ಮಗುವಿನ ಮನಸ್ಸಿನೊಳಗಿಳಿಸಿ ಆ ಮಗು ತನ್ನ ಭಾವೀ ಜೀವನ ರೂಪಿಸಿಕೊಳ್ಳುವ ನಿಜದ ಯತ್ನವಾಗಿ ಇರುತ್ತಿತ್ತು. ಊರೊಳಗಿನ ಉತ್ಸವ, ಜಾತ್ರೆ, ಹಬ್ಬಗಳಲ್ಲಿ ಮನೆಯವರೆಲ್ಲ ಭಾಗವಹಿಸುವ ಮೂಲಕ ಮನುಷ್ಯ ಸಂಬಂಧಗಳ ಅನಾವರಣವನ್ನು ತಮಗೆ ಗೊತ್ತಿಲ್ಲದೇ ಮಕ್ಕಳು ಅರಿಯುತ್ತಿದ್ದವು. ಶಾಲೆ ಮುಗಿದ ಮೇಲೆ ದೊಡ್ಡಬಯಲಲ್ಲಿ ಚಿನ್ನಿದಾಂಡು, ಕಬಡ್ಡಿಗಳನ್ನಾಡಿ ಊರ ಹೊರಗಿನ ತೋಪಿನಲ್ಲಿ ಮರಕೋತಿ ಆಟವಾಡಿ, ರಜಾ ದಿನಗಳಲ್ಲಿ ಹಳ್ಳದಲ್ಲಿ ಈಜಿ ದೈಹಿಕ ಸಾಮರ್ಥ್ಯದ ಜೊತೆಜೊತೆಗೇ ತಾರ್ಕಿಕ ಪ್ರಜ್ಞೆಯನ್ನೂ ಹಿಂದಿನ ಕಾಲದ ಮಕ್ಕಳು ಪಡೆಯುತ್ತಿದ್ದರು.

ಮನೆತುಂಬ ಮಕ್ಕಳಿರುವ ಕಾಲ ಈಗ ಬದಲಾಗಿದೆ. ವಿಘಟಿತ ಕುಟುಂಬ ವ್ಯವಸ್ಥೆ ಎಲ್ಲ ಮನೆ ಊರುಗಳಲ್ಲೂ ವಿಸ್ತರಿಸಿ ನಗರೀಕರಣದ ನೆರಳು ಮನೆಗೊಂದೇ ಮಗುವೆಂಬ ಸೂತ್ರವನ್ನು ಪಠಿಸಿ,ಹೆತ್ತವರ ಹಣೆಯಲ್ಲಿ ಮಗುವಿನ ಭವಿಷ್ಯದ ಚಿಂತೆಯ ಗೆರೆಯನ್ನು ಢಾಳಾಗಿಸಿದೆ. ಬಾಲ್ಯದ ಆಟೋಟಗಳಿಗಿಂತಲೂ ಅರಿವಿರದ ಭಾಷೆಯ ರೈಮುಗಳನ್ನು ಮನಸ್ಸಿಗೊಗ್ಗದ ಶೈಲಿಯಲ್ಲಿ ಹಾಡಿಸುತ್ತ, ಕೃತಕತೆಯನ್ನೆ ಸಹಜವೆಂದುಕೊಳ್ಳುವ ಹಾಗೆ ಬೆಳಸುತ್ತ ನೈಸರ್ಗಿಕವಾಗಿ ಬಿಡುಗಡೆಯಾಗಬೇಕಿರುವ ಮುಗ್ಧತೆಯ ಆವರಣಕ್ಕೆ ಕೌಶಲ್ಯದ ಹೆಸರಿನ ಮೇಲಾಟಗಳು ದಾಳಿ ಇಟ್ಟಿವೆ. ಸಹಜವಾದ ಬೇಕು ಬೇಡಗಳಿಗಿಂತಲೂ ಒತ್ತಾಯದ ಹೇರಿಕೆಗಳು ಮಕ್ಕಳ ಮುಗ್ಧತೆಯನ್ನೇ ಆಪೋಷನ ತೆಗೆದುಕೊಂಡಿವೆ. ‘ಇಂದಿನ ಮಕ್ಕಳೇ ನಾಳಿನ ಪ್ರಜೆಗಳು’ ಎಂದು ಹೇಳುತ್ತಲೇ ಆ ಮಕ್ಕಳನ್ನು ಇರುಳು ಕಂಡ ಬಾವಿಗೆ ಹಗಲಲ್ಲಿ ನೂಕುವ ಕಾಯಕ ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ವ್ಯವಸ್ಥಿತವಾಗಿ ನಡೆಯುತ್ತಿದೆ, ಅಷ್ಟೆ.

ಮಕ್ಕಳ ಶಿಕ್ಷಣ, ಅವರ ಹಕ್ಕುಗಳ ಕುರಿತಂತೆ ಇರುವ ನಮ್ಮ ಕಾನೂನುಗಳು, ಕಡ್ಡಾಯ ಶಿಕ್ಷಣದ ಮಹತ್ವ ಇತ್ಯಾದಿ ಬಹುಚರ್ಚಿತ ವಿಷಯಗಳನ್ನು ಬಿಟ್ಟು ಮೇಲ್ನೋಟಕ್ಕೆ ಸಿಗಬಹುದಾದ ಮಕ್ಕಳ ಸಾಹಿತ್ಯ ಮತ್ತು ಮಕ್ಕಳ ಸಿನಿಮಾಗಳನ್ನು ಕುರಿತು ಯೋಚಿಸಹೋದರೆ ಅಲ್ಲೂ ಇದೇ ಕತೆಯೇ! ಕನ್ನಡದಲ್ಲಿ ಮಕ್ಕಳ ಸಾಹಿತ್ಯ ಸಾಕಷ್ಟು ವಿಪುಲವಾಗಿಯೇ ಇದೆ. ಅನ್ಯದೇಶಗಳಿಂದ ಬಂದು ನಮ್ಮ ಮಕ್ಕಳ ಮನಸ್ಸಲ್ಲಿ ಕೂತುಬಿಟ್ಟಿರುವ ಡಾನ್ ಕ್ವಿಕ್ಸೋಟ, ಅಲೀಸ್ ಇನ್ ವಂಡರ್ ಲ್ಯಾಂಡ್, ಸಿಂಡ್ರೆಲ, ಡಿಸ್ನಿ ವರ್ಲ್ಡ್‌ನ ಟಾಮ್ ಅಂಡ್ ಜೆರ್ರಿ ಮತ್ತಿತರ ಕತೆಗಳು, ಕಾರ್ಟೂನ್ ನೆಟ್‌ವರ್ಕಿನ ಬಹುತೇಕ ತರ್ಕಾತೀತ ಸಶೇಷ ಧಾರಾವಾಹಿಗಳಿಗಿಂತಲೂ ಸಶಕ್ತವಾದ ಅವಕ್ಕಿಂತಲೂ ಕುತೂಹಲ ಮತ್ತು ನೈತಿಕತೆಯನ್ನು ಇನ್ನಷ್ಟು ವಿವರವಾಗಿ ಬಗೆಯಬಲ್ಲ ಸಾಹಿತ್ಯ ಕೃತಿಗಳು ನಮ್ಮಲ್ಲೇ ಇವೆ. ಆದರೆ ಅವನ್ನು ನಮ್ಮ ಭಾಷೆಗಿರುವ ಮಾರುಕಟ್ಟೆಯ ಮಿತಿಯಲ್ಲಿ ಪುನರ್ ನಿರ್ಮಿಸುವುದು ಸಾಧ್ಯವಿಲ್ಲವಾಗಿದೆ. ಪಂಚತಂತ್ರದ ಕತೆಗಳು, ರಾಮಾಯಣ ಮಹಾಭಾರತದ ಕತೆಗಳನ್ನು ಈಗಾಗಲೇ ವಿದೇಶೀ ಸಂಸ್ಥೆಗಳು ಪುನಃ ರೂಪಿಸುತ್ತಿರುವುದನ್ನೂ ಮರೆಯಬಾರದು. ಆದರೆ ಇದು ಹೇಳುವಷ್ಟು ಅಥವ ಬರೆಯುವಷ್ಟು ಸುಲಭದ್ದಲ್ಲ. ಏಕೆಂದರೆ ಮಕ್ಕಳ ಬಹುಮುಖ ಬೆಳವಣಿಗೆಗೆ ಅಂದರೆ ಅವರ ಮಾನಸಿಕ, ಬೌದ್ಧಿಕ, ಸಾಮಾಜಿಕ ಹಾಗೂ ಭಾಷಾ ಬೆಳವಣಿಗೆಯ ಸಹಕಾರಿಯಾಗಿಯೂ ಇವನ್ನೆಲ್ಲ ನಾವು ಉಪಯೋಗಿಸಿಕೊಳ್ಳಬೇಕು ಎಂಬ ವಾದ ಈ ಹಂತದಲ್ಲೇ ಹುಟ್ಟುತ್ತದೆ. ಮಕ್ಕಳ ಸಹಜ ಕುತೂಹಲವನ್ನು ತಣಿಸುವವೆನ್ನುವ ಏಕೈಕ ಕಾರಣ ಇಲ್ಲಿ ಸಾಕಾಗುವುದಿಲ್ಲ. ಇಂಥ ವಿಷಯಗಳಲ್ಲಿ ಸಂಶೋಧನೆ ಮತ್ತು ಪ್ರಯೋಗಗಳನ್ನು ನಡೆಸದ ಹೊರತೂ ಇವನ್ನೆಲ್ಲ ಬರಿಯ ಚರ್ಚೆಯ ವಸ್ತುವನ್ನಾಗಿಯಷ್ಟೇ ನಾವು ಪರಿಗಣಿಸಬೇಕು.

ಮಕ್ಕಳ ಮನಸ್ಸಿಗೆ ಮುದ ನೀಡುವ ಸಾಹಿತ್ಯ ಹೇಗಿರಬೇಕು? ಅವರು ಯಾವ ರೀತಿಯ ಸಾಹಿತ್ಯ ಇಷ್ಟಪಡುತ್ತಾರೆ? ಅವರ ಬುದ್ಧಿ ಭಾವನೆಗಳ ಬೆಳವಣಿಗೆಗೆ ಇಂಬು ನೀಡಬಲ್ಲ ವಿಷಯ ವಿವೇಚನೆ ನಮ್ಮ ಸಾಹಿತಿಗಳಿಗಿದೆಯೇ? ಸಾಹಿತ್ಯದ ಯಾವ ಪ್ರಕಾರ ಮಕ್ಕಳಿಗೆ ಖುಷಿ ಕೊಡುತ್ತದೆ? ಇತ್ಯಾದಿ ಪ್ರಶ್ನೆಗಳಿಗೆ ಸಮಂಜಸ ಉತ್ತರಗಳು ನಮಗಿನ್ನೂ ದೊರೆತಿಲ್ಲ. ಈ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನವನ್ನೂ ನಾವು ಮಾಡಿಲ್ಲ. ಮುಂದುವರೆದ ದೇಶಗಳಲ್ಲಿ ಜಾರಿಯಲ್ಲಿರುವ ಮಕ್ಕಳ ಕಾನೂನುಗಳನ್ನು, ಅವರ ಹಕ್ಕುಗಳನ್ನೂ ಕೇಳಿ ತಿಳಿದು ಭಯಗೊಂಡಿರುವ ನಾವು ಈ ದೇಶದಲ್ಲಿ ಅಂಥದೊಂದು ಪ್ರಯತ್ನಕ್ಕೆ ಕೈಹಾಕುವ ಎದೆಗಾರಿಕೆ ಇಟ್ಟುಕೊಂಡಿದ್ದೇವೆಯೇ ಎನ್ನುವುದೂ ಇಲ್ಲಿ ಮುಖ್ಯ. ನಮ್ಮಲ್ಲಿ ವಿಪುಲವಾಗಿ ಲಭ್ಯವಿರುವ ನೀತಿ ಬೋಧಕ ಕೃತಿಗಳು ಇಂದಿನ ಮಕ್ಕಳಲ್ಲಿ ನೈತಿಕತೆಯನ್ನು ಉಳಿಸಿ ಬೆಳಸಬಲ್ಲವೇ ಎನ್ನುವುದೂ ಮುಖ್ಯಪ್ರಶ್ನೆ. ವೈಜ್ಞಾನಿಕವಾಗಿ ತುಂಬ ಮುಂದುವರೆದ ಕಾಲದಲ್ಲಿ ಪಾರ್ವತಿಯ ಮೈಯ ಬೆವರಿನಿಂದ ಗಣೇಶ ಹುಟ್ಟಿದ ಅಂತ ಹೇಳಹೋದರೆ ಅವಳೇನು ನಿತ್ಯವೂ ಸ್ನಾನ ಮಾಡುತ್ತಿರಲಿಲ್ಲವಾ ಅನ್ನುವ ಪ್ರಶ್ನೆ ಚಿಣ್ಣರಿಂದ ಹುಟ್ಟುತ್ತದೆ. ರಾಮ ಸೀತೆಯರು ಕಾಡಿಗೆ ಹೋದರು ಅಂದರೆ ಪಿಕ್‌ನಿಕ್‌ಗೆ ಹೋದರಾ ಅಂತ ಕೇಳುವ ಮಕ್ಕಳೂ ಇದ್ದಾರೆ. ಬಾಣ ಬಿರುಸುಗಳು, ಗದೆ, ತೋಮರಗಳು, ಗಜಾಶ್ವಗಳು ಅಣುಬಾಂಬಿನ ಕಾಲದಲ್ಲಿ ಓಬಿರಾಯನ ಕಾಲದ ವ್ಯರ್ಥ ಪರಿಕರಗಳಾಗಿ ಕಾಣುತ್ತವೆ. ಇದರ ಜೊತೆಜೊತೆಗೇ ಮಕ್ಕಳ ಸಾಹಸದ ಧಾರಾವಾಹಿಗಳನ್ನು ನೋಡಿ ಅದನ್ನು ಅನುಸರಿಸಲು ಹೋಗಿ ಅಪಾಯ ಎದುರಿಸಿದ ಮಕ್ಕಳೂ ಕಡಿಮೆ ಏನಿಲ್ಲ. ಅಲ್ಲದೇ ಈ ಕಾಲದ ಮಕ್ಕಳು ಓದುವುದಕ್ಕಿಂತಲೂ ನೋಡುವುದನ್ನೇ, ಅನುಸರಿಸುವುದನ್ನೇ ಹೆಚ್ಚು ಇಷ್ಟಪಡುವವರು. ಏಕೆಂದರೆ ಇಂದಿನ ಬಹುತೇಕ ಮಕ್ಕಳು ಕಲಿಯುತ್ತಿರುವುದು ಇಂಗ್ಲಿಷಿನಲ್ಲಿ. ಅವರ ಓದುವ ಸಾಮರ್ಥ್ಯವೇನಾದರೂ ಇದ್ದರೆ ಅದು ಅವರು ಕಲಿಯುತ್ತಿರುವ ಇಂಗ್ಲಿಷಿನಲ್ಲಿ ಮಾತ್ರ. ಮೂರನೆಯ ಭಾಷೆಯನ್ನಾಗಿ ಅವರು ಮಾತೃ ಭಾಷೆ ಕಲಿಯುವುದರಿಂದ ಜೊತೆಗೆ ಇಂಗ್ಲಿಷಿನಲ್ಲಿ ಮಾತನಾಡುವುದು ಬಹುತೇಕ ಶಾಲೆಗಳಲ್ಲಿ ಕಡ್ಡಾಯವೂ ಆಗಿರುವುದರಿಂದ ಈ ಮಕ್ಕಳು ಕನ್ನಡದ ಪತ್ರಿಕೆಗಳಲ್ಲಿ ಪ್ರಕಟವಾಗುವ ಸಾಹಿತ್ಯವನ್ನು ಓದುತ್ತಾರೆನ್ನುವುದು ಬರಿಯ ಊಹೆಯ ಮಾತು.

ಸಂಶೋಧನಾ ಮಾಹಿತಿಯಿಲ್ಲದೇ ಮಕ್ಕಳ ಮನಸ್ಸನ್ನು ಉದ್ದೀಪಿಸಿ ಅವರಿಗೆ ಅಗತ್ಯವಿರುವ ಕಸುವನ್ನು ಕೊಡುತ್ತೇವೆನ್ನುವುದು ಉಢಾಫೆಯೇ ಆಗುತ್ತದೆ. ವಿವಿಧ ಪೇಯಗಳ ಜಾಹೀರಾತುಗಳಲ್ಲಿ ನಟಿಸುವ ಅಮ್ಮಂದಿರಿಗೆ ಮಾತ್ರ ಮಕ್ಕಳ ಅಗತ್ಯ ಗೊತ್ತಿರುವುದು ಈ ಕಾರಣಕ್ಕೇ! ಸೈದ್ಧಾಂತಿಕ ಅಡಿಪಾಯಗಳ ಮನಶಾಸ್ತ್ರೀಯ ಅಧ್ಯಯನ ಮಾತ್ರ ಇಂಥ ಸಮಸ್ಯೆಗಳನ್ನು ನೀಗಬಲ್ಲುದು. ನಾವೀಗ ಬದುಕುತ್ತಿರುವ ಸಮಾಜ, ಸನ್ನಿವೇಶ, ಆರ್ಥಿಕ ಸವಲತ್ತು, ವಿದ್ಯಾಭ್ಯಾಸದ ಮಟ್ಟ, ಅಂಧಶ್ರದ್ಧೆಗಳು, ಜಾತಿಯ ವಿಷಬೀಜಗಳು, ಲಿಂಗ ಭೇದಗಳು, ಮಕ್ಕಳ ಮನಸ್ಸಿಗೆ ನಿಲುಕದ ಹಾಗೆ ಬೆಳಸುತ್ತೇವೆನ್ನುವುದು ಮತ್ತೆ ಉಢಾಫೆಯೇ. ಇನ್ನು ಮಕ್ಕಳ ಆರೋಗ್ಯ ಮತ್ತು ದೈಹಿಕ ಬೆಳವಣಿಗೆಗಳ ಬಗ್ಗೆ ಸಾಕಷ್ಟು ಮಾಹಿತಿ ನಮಗಿದೆ ಎನ್ನುವುದು ಸಮಾಧಾನದ ವಿಚಾರ. ಪೋಲಿಯೋದಂಥ ಪಿಡುಗು, ಸಿಡುಬಿನಂಥ ಮಹಾಮಾರಿಗಳನ್ನು ನಾವು ಎದುರಿಸಿ ಗೆದ್ದಿದ್ದೇವೆ.

ಆದರೆ ಮಕ್ಕಳ ಸಾಹಿತ್ಯವೆನ್ನುವುದು ದೊಡ್ದವರು ಮಕ್ಕಳಿಗೆಂದು ಬರೆದ ಸರಕಾಗೇ ಉಳಿಯುತ್ತಿದೆ. ಮಕ್ಕಳ ಮನಸ್ಸಿಗೆ ಇದು ಖುಷಿಕೊಡುತ್ತದೆ ಎನ್ನುವ ಊಹಾಪೋಹಗಳಲ್ಲೇ ದೊಡ್ಡವರು ಬರೆದೂ ಬರೆದೂ ಪ್ರಕಟಿಸುತ್ತಿದ್ದೇವೆ. ಪ್ರಾಥಮಿಕ ಶಾಲೆಯ ಪಾಠವೊಂದರಲ್ಲಿ ‘ಅವಳು ಕಮಲ ಇವನು ಬಸವ’ ಎಂದು ಲಿಂಗ ತಾರತಮ್ಯವನ್ನು ಮೆರೆಸುವ ನಾವು ‘ಕಮಲಳ ಲಂಗ ಝಳ ಝಳ’ ಎಂದು ಹೇಳಿ ಅವಳನ್ನು ಲಂಗಕ್ಕೇ ಮಿತಿಗೊಳಿಸುತ್ತೇವೆ. ಇನ್ನು ಮಕ್ಕಳಿಗೆಂದೇ ತಯಾರಾಗುವ ಚಲನಚಿತ್ರಗಳು ಮಕ್ಕಳಿಗೇನು ಬೇಕೋ ಅದನ್ನು ಬಿಟ್ಟು ಉಳಿದೆಲ್ಲ ಮಾರುಕಟ್ಟೆಯ ಮಸಾಲೆಗಳನ್ನು ಇಟ್ಟುಕೊಂಡಿರುತ್ತದೆ. ಕೋತಿ, ಹಾವು, ದೈವ ಮಹಿಮೆ ಇಲ್ಲದೇ ನಮ್ಮ ಮಕ್ಕಳ ಚಿತ್ರಗಳು ನಿರ್ಮಾಣವಾಗುವುದಿಲ್ಲ.ಮಕ್ಕಳ ಅಲೋಚನೆಗಳಿಗೆ ಗಗನದಗಲದ ವಿಶ್ವಾಸವನ್ನು ತುಂಬಿ ಅವರ ಮಾನಸಿಕ, ಬೌದ್ಧಿಕ ವಿಸ್ತರಣಕ್ಕೆ ಸಹಕರಿಸಿದ ಚಿತ್ರಗಳು ಬಂದಿರುವುದು ತೀರ ಅಪರೂಪಕ್ಕೆ. ವೈಜ್ಞಾನಿಕವಾಗಿ ತುಂಬ ಮುಂದುವರೆದಿರುವ ಈ ಕಾಲದಲ್ಲಿ ಮೌಢ್ಯ ಮತ್ತು ಅತಿಮಾನುಷ ಶಕ್ತಿಗಳನ್ನು ಕೊಂಡಾಡುವ ಮಕ್ಕಳ ಚಿತ್ರಗಳನ್ನು ಮೊದಲು ನಿಷೇದಿಸಬೇಕಿದೆ. ಬರಿಯ ಮನರಂಜನೆಯೊಂದೇ ಮಕ್ಕಳ ಚಿತ್ರಗಳ ಮುಖ್ಯ ಉದ್ದೇಶವಾಗಬಾರದು. ಮಕ್ಕಳ ಚಿತ್ರಗಳಲ್ಲೂ ನಾಯಕ-ನಾಯಕಿ ಡ್ಯುಯೆಟ್ ಹಾಡುವುದು, ಅವರ ಪ್ರೀತಿಗಾಗಿ ಮಕ್ಕಳು ಸೇತುವೆಯಾಗುವುದು ಮೊದಲು ನಿಲ್ಲಬೇಕು.

ಈಗಲೂ ಪ್ರಸ್ತುತವಾಗುವ ಪಂಜೆಯವರ ಹಲವು ಕವಿತೆಗಳನ್ನು ನಮ್ಮ ಮಕ್ಕಳು ಕಲಿತಿಲ್ಲ ಎನ್ನುವುದರ ಅರಿವು ನಮಗಿಲ್ಲದಿರುವುದೂ ನೆನಪಾಗಬೇಕಿದೆ. ಪ್ರಾಥಮಿಕ ಶಿಕ್ಷಣದ ಪಠ್ಯಕ್ರಮ ನಿರೂಪಿಸುವ ಜವಾಬ್ದಾರಿ ಹೊತ್ತ ಹಲವರು ಶಿಕ್ಷಣ ಕ್ಷೇತ್ರಕ್ಕಿಂತಲೂ ರಾಜಕೀಯ ವರಸೆಗಳನ್ನು ಅರಿತವರಾಗಿರುತ್ತಾರೆ ಎನುವುದನ್ನು ಬಿಡಿಸಿ ಹೇಳಬೇಕಿಲ್ಲ. ಕಾರಂತರು ಪ್ರಾಯೋಗಿಕವಾಗಿ ನಡೆಸಿದ್ದ ಬಾಲವನ, ಕೇಂದ್ರ ಸರ್ಕಾರ ರೂಪಿಸಿರುವ ಜವಾಹರ ನೆಹರು ವಿದ್ಯಾಲಯ, ಸರ್ಕಾರೀ ಶಾಲೆಗಳಲ್ಲಿ ಇರುವ ಪಠ್ಯಕ್ರಮ, ಅಲ್ಲಿ ವಿತರಿಸಲಾಗುತ್ತಿರುವ ಪಠ್ಯ ಪರಿಕರಗಳು,ಸಮವಸ್ತ್ರ ಸಂಹಿತೆ, ನಮ್ಮ ಮುಂದೇ ಇರುವ ಅವಕಾಶಗಳಾಗಿವೆ. ಖಾಸಗಿ ಶಾಲೆಗಳು ಬೋಧನೆಗೆ ಬಳಸುತ್ತಿರುವ ಅಪಾಯಕಾರೀ ಕ್ರಮಗಳನ್ನು, ಮಕ್ಕಳ ಮನಸ್ಸಿನ ಮೇಲೆ ಹೆಚ್ಚುತ್ತಿರುವ ಒತ್ತಡಗಳನ್ನೂ ಗಮನಿಸಬೇಕು. ಧಾರ್ಮಿಕ ಸಂಸ್ಥೆಗಳು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾರ್ಥನೆಯ ಹೆಸರಲ್ಲಿ ಎಳೆಯ ಮನಸ್ಸುಗಳ ಮೇಲೆ ಹೇರಲಾಗುತ್ತಿರುವ ಒತ್ತಡಗಳನ್ನು ನಾವು ಅರಿಯಬೇಕಿದೆ.

ಪ್ರಾಥಮಿಕ ಶಿಕ್ಷಣವನ್ನು ಎಲ್ಲ ಶಾಲೆಗಳಲ್ಲೂ ಏಕ ಸೂತ್ರದಡಿಯಲ್ಲಿ ಕೊಡದಿದ್ದರೆ ನಾವೇ ನಮ್ಮ ಮಕ್ಕಳಿಗೆ ಪ್ರಾಥಮಿಕ ಹಂತದಿಂದಲೇ ಸಾಮಾಜಿಕ ವೈರುಧ್ಯವನ್ನು ಕಲಿಸಿಕೊಟ್ಟಂತಾಗುತ್ತದೆ. ಮತ್ತು ಮೆಕಾಲೆಯಿಂದ ಬಳುವಳಿಯಾಗಿ ಬಂದಿರುವ ಗುಮಾಸ್ತೆಗಳನ್ನು ಸೃಷ್ಟಿಸುತ್ತಿರುವ ಶಿಕ್ಷಣ ಕ್ರಮ ಮುಂದುವರಿಕೆಯಾಗಿಯೇ ಉಳಿಯುತ್ತದೆ. ಇದಕ್ಕಿರುವ ಏಕೈಕ ಉಪಾಯವೆಂದರೆ ಪ್ರಾಥಮಿಕ ಶಿಕ್ಷಣವನ್ನು ಮಾತೃ ಭಾಷೆಯಲ್ಲಿ ಕಡ್ಡಾಯ ಮಾಡುವುದು. ಮತ್ತು ಪ್ರಾಥಮಿಕ ಶಿಕ್ಷಣವನ್ನು ಖಾಸಗೀ ಕಬಂಧ ಬಾಹುಗಳಿಂದ ತಪ್ಪಿಸಿ, ಸಾರ್ವಜನಿಕಗೊಳಿಸಿ ಕಡ್ಡಾಯವಾಗಿಸಿ ಅದನ್ನು ಸರ್ಕಾರವೇ ನಿರ್ವಹಿಸುವುದು. ಮಕ್ಕಳಿಗೇನು ಬೇಕೆಂಬುದನ್ನು ಕಪೋಲಕಲ್ಪಿತ ಸಂಗತಿಯನ್ನಾಗಿಸದೇ ವಿಧಿವತ್ತಾದ ಸಂಶೋಧನೆಯಿಂದ ತಿಳಿದುಕೊಳ್ಳಬೇಕಿದೆ. ಆಗ ಮಾತ್ರ ಮಕ್ಕಳ ದಿನಾಚರಣೆಗೆ ಒಂದು ಅರ್ಥ ಬಂದೀತು. ಇಲ್ಲದೇ ಹೋದರೆ ಅದೂ ಸರ್ಕಾರ ನಡೆಸುವ ಇತರ ಉತ್ಸವಗಳ ಹಾಗೇ ನಮ್ಮ ರಾಷ್ಟ್ರೀಯ ಹಬ್ಬಗಳ ಹಾಗೇ ತೋರುಗಾಣಿಕೆಯ ಸಂಕೇತವಾದೀತು, ಅಷ್ಟೆ.

ಶನಿವಾರ 16 ಅಕ್ಟೋಬರ್ 2010

ಕರುಣಾಳು ಬಾ ಬೆಳಕೇ...

ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು. . . .ಕವಿ ಬೆಳಕನ್ನು ಆರ್ತವಾಗಿ ಪ್ರಾರ್ಥಸಿದ್ದಾನೆ. ಬೆಳಕೆಂಬುದು ಭಗವಂತನ ನೆರಳು ಅಂದವನು ಗ್ರೀಕ್ ದಾರ್ಶನಿಕ ಪ್ಲೇಟೋ. ಭೌತಿಕ ವಸ್ತುಗಳ ನೆರಳು ಕಪ್ಪನೆಯ ಬಣ್ನದಲ್ಲಿದ್ದರೆ ಭಗವಂತನ ನೆರಳು ಬೆಳಕಿನ ರೂಪದಲ್ಲಿರುತ್ತದೆ ಎನ್ನುತ್ತ್ತಾನೆ ಒಬ್ಬ ಭಕ್ತಿ ಕವಿ. ಸ್ವಯಂ ಪ್ರಕಾಶನೆಂದು ವೇದಗಳು ಪ್ರಮಾಣಿಸಿರುವ ಭಗವಂತನ ನೆರಳೇ ಬೆಳಕಿನ ರೂಪದಲ್ಲಿ ಈ ಜಗತ್ತನ್ನು ಕಾಪಿಡುತ್ತಿದೆಯೆಂದು ನಂಬಿದವರೂ ಬಹಳ ಜನರಿದ್ದಾರೆ. ಲೋಕ ಜೀವನದ ಸಾತತ್ಯವನ್ನು ಕೆಡದಂತೆ ನಡೆಸಿಕೊಡುವುದೇ ಬೆಳಕಿನ ಮೂಲಸ್ವರೂಪನಾದ ಸೂರ್ಯನ ಕೆಲಸವೂ ಆಗಿರುವುದರಿಂದ ಸೂರ್ಯನನ್ನೇ ಭಗವಂತನೆಂದು ಕರೆಯಲೂ ಅಡ್ಡಿಯಿಲ್ಲ. ದೇವರ ಅಸ್ತಿತ್ವನ್ನು ನಂಬುವುದು ಅಥವ ಬಿಡುವುದೂ ಅವರವರ ಮನೋಧರ್ಮಕ್ಕೆ ಬಿಟ್ಟ ವಿಚಾರವಾದರೂ ಬೆಳಕೆಂಬುದು ಆಸ್ತಿಕರಿಗೂ ನಾಸ್ತಿಕರಿಗೂ ಸಮಾನವಾಗಿ ಜೀವನ ನಿರ್ವಹಣೆಯ ಮೂಲಸ್ರೋತವಾಗಿರುವುದನ್ನು ಅಲ್ಲಗಳೆಯಲಾಗದು. ಬೆಳಕಿನ ಉಪಯೋಗ ಸಂದೇಹಾತೀತವಾದುದು. ದ್ವಂದ್ವಾತೀತವಾದುದು. ಬೆಳಕಿಲ್ಲದೇ ಬದುಕು ಸಾಗುವುದಿಲ್ಲ. ಬದುಕನ್ನು ಅನುಭವಿಸಲು ಆಸ್ವಾದಿಸಲು ಬೆಳಕು ಬೇಕೇ ಬೇಕು.

ಭಾರತೀಯ ದಾರ್ಶನಿಕ ವಿವೇಚನೆಯ ಪ್ರಕಾರ ಭಗವಂತನ ರೂಪವು ಇಂದ್ರಿಯ ಗೋಚರವಾಗಿರುವ ನಮ್ಮ ಸುತ್ತಮುತ್ತಲಿನ ಪ್ರಪಂಚವೇ ಆಗಿದೆ. ಅದು ಮುಮುಕ್ಷುವಿನ ಅನುಭವಕ್ಕೆ ಬರುವುದು ಆ ಮುಮುಕ್ಷು ಆ ಅರಿವನ್ನು ಪಡೆದಾಗ ಮಾತ್ರ. ಆದರೆ ತೀರ ಸಾಮನ್ಯರಾದ ನಮ್ಮೆಲ್ಲರಿಗೂ ಭಗವಂತನ ಕೃಪಾಶೀರ್ವಾದಗಳು ಬೆಳಕಿನ ಸ್ವರೂಪದಲ್ಲಿ ಕಾಪಾಡುತ್ತಿದೆ ಅಂದರೆ ತಪ್ಪಾಗಲಾರದು. ಬೆಳಕು ಅಂದರೆ ಶಕ್ತಿಯ ಮೂಲ, ಜ್ಞಾನದ ಆಕರ. ಅರಿವಿನ ಕೇಂದ್ರ,. ಚರಾಚರ ಪ್ರಕೃತಿಯ ವಿವಿಧ ರೂಪಗಳು ಕಾಣುವುದು ಬೆಳಕಿನ ಸಹಾಯದಿಂದ ಮಾತ್ರ ಸಾಧ್ಯವಿರುವ ಸಂಗತಿಯಾದ್ದರಿಂದ ಬೆಳಕನ್ನು ಬರಿಯ ಬೆಳಕಾಗಿ ನೋಡಲಾಗದು. ಹೊರ ಜಗತ್ತಿನ ಬೆಳಕಿಗೆ ಸಂವಾದಿಯಾಗಿ ನಮ್ಮೆಲ್ಲರೊಳಗೂ ಒಂದೊಂದು ಬೆಳಕಿನ ಗಣಿಯೇ ಇದೆ. ಆದರೆ ಆ ಗಣಿಯನ್ನು ಬಗೆದು ಒಳಗಿನ ಖನಿಜವನ್ನೆತ್ತಿ ತರುವುದು ಹಾಗೆ ತಂದ ಖನಿಜವನ್ನು ಶೋಧಿಸಿ, ಕಾಯಿಸಿ, ಲೋಹವನ್ನಾಗಿ ಪರಿವರ್ತಿಸಿ ಇಷ್ಟ ದೇವತೆಯ ವಿಗ್ರಹವನ್ನಾಗಿ ಕಟೆದು ನಿಲ್ಲಿಸುವುದು ಅಷ್ಟೇನೂ ಸುಲಭಕ್ಕೆ ದಕ್ಕದ ಸಂಗತಿ. ನಮ್ಮೊಳಗಿರುವ ವಿವೇಕವೆಂಬ ಬತ್ತಿಯನ್ನು ಅರಿವಿನ ತೈಲದೊಂದಿಗೆ ಸಮ್ಮೇಳಿಸಿ ಜ್ಞಾನದ ಬೆಳಕನ್ನು ಪಡೆಯಬಹುದೆಂದು ಸಮರ್ಥ ರಾಮದಾಸರು ಹೇಳಿದ್ದಾರೆ. ವಿವೇಕವೆಂಬ ಸಾಕ್ಷಿಪ್ರಜ್ಞೆ ಬೆಳಕನ್ನು ಮಂಕಾಗದಂತೆ ಕಾಯುವ ತವನಿಧಿ. ಬೆಳಕು ನಂದಿಹೋಗಿ ಕತ್ತಲಾವರಿಸದಂತೆ ಕಾಪಾಡಿಕೊಳ್ಳಬೇಕಾದ ನಿರಂತರ ಎಚ್ಚರ ಎಂಬ ಜವಾಬ್ದಾರಿ ನಮ್ಮೆಲ್ಲರದು. ನಮ್ಮೊಳಗಿನ ವ್ಯಕ್ತಿಗೆ ವ್ಯಕ್ತಿತ್ವ ಲಭಿಸಬೇಕಾದರೆ ನೈತಿಕ ವಿಕಸನವೆಂಬ ಬೆಳಕಿನ ಅನಿವಾರ್ಯತೆ ಇದ್ದೇ ಇದೆ.

ಭೂಮಿಯ ಮೇಲಿನ ಸಕಲ ಜೀವಾತ್ಮ ಕೋಟಿಗಳಿಗೆ ಸೂರ್ಯನೇ ಆದಿಮೂಲವಾಗಿದ್ದಾನೆ. ವೈಜ್ಞಾನಿಕವಾಗಿಯೂ ಸೂರ್ಯನೇ ಈ ಲೋಕದ ಸಕಲ ಭೌತಿಕ, ಜೈವಿಕ, ಮಾನಸಿಕ ಚಟುವಟಿಕೆಗಳ ಪ್ರೇರಕ ಶಕ್ತಿಯಾಗಿದ್ದಾನೆ, ಪೋಷಕನಾಗಿದ್ದಾನೆ, ನಿಯಂತ್ರಕನೂ ಆಗಿ ಕಾಪಾಡುತ್ತಿದ್ದಾನೆ. ದ್ಯುತಿ ಸಂಷ್ಲೇಷಣೆಯ ಮೂಲಕ ಜೈವಿಕ ಚಟುವಟಿಕೆಗಳಿಗೆ ಪ್ರೇರಕ ಶಕ್ತಿಯಾಗಿರುವುದರ ಜೊತೆ ಜೊತೆಗೇ ನೀರು-ಆವಿ-ಮೋಡ-ಮಳೆಗಳ ಜಲಚಕ್ರವನ್ನು ಯಶಸ್ವಿಯಾಗಿ, ನಿರಂತರವಾಗಿ, ಬೇಸರಿಸದೇ ಮಾಡುತ್ತಿರುವವನೇ ಸೂರ್ಯನಾರಾಯಣ. ಹಾಗೆಂದೇ ಸಂಧ್ಯಾ ಸಮಯದಲ್ಲಿ ಅರ್ಘ್ಯವನ್ನು ನೀಡುವುದರ ಮೂಲಕ ನಮ್ಮ ಹಿರಿಯರು ಸೂರ್ಯನಿಗೆ ಸದಾ ಕೃತಜ್ಞತೆಯನ್ನು ಸೂಚಿಸುತ್ತಿದ್ದರು. ದಿನ,ರಾತ್ರಿ,ವಾರ,ಪಕ್ಷ,ಮಾಸ,ಸಂವತ್ಸರಗಳ ನಿಲ್ಲದ ಗಡಿಯಾರದ ಮೂಲ ಶಕ್ತಿ ಸೂರ್ಯನೆಂಬ ಬೆಳಕೇ ಆಗಿದೆ. ಸೂರ್ಯುನು ಸ್ಥಾವg. ಜಂಗಮ ಸ್ವರೂಪವಾದ ಸಮಸ್ತ ಜಗತ್ತಿನ ಆತ್ಮವೇ ಅವನಾಗಿದ್ದಾನೆ.

ಬೆಳಕೆಂದರೆ ಬದುಕು. ಕತ್ತಲೆಂದರೆ ಸಾವು. ಬದುಕಿನಲ್ಲಿ ಕತ್ತಲು ಅನಿವಾರ್ಯ. ಕತ್ತಲ ಬಿಡುಗಡೆಗೆ ಬೆಳಕೊಂದೇ ಆಧಾರ. ಹಾಗಾಗಿಯೆ ಕವಿ ಹಾಡಿಯೇ ಹಾಡುತ್ತಾನೆ- ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು... ... ...

ಮೌನವೆಂಬ ಮಹಾನಿಧಿ

ಮೌನವನ್ನು ಕುರಿತು ಮಾತನಾಡಿದರೆ ಅಥವ ಅದನ್ನು ಕುರಿತು ಬರೆಯುತ್ತ ಹೋದರೆ ಅದು ವಿರೋಧಾಭಾಸವೇ ಆಗುತ್ತದೆ. ಏಕೆಂದರೆ ಮೌನವೆನ್ನುವುದು ಅದರ ಶುದ್ಧ ಸ್ವರೂಪದಲ್ಲಿ ಒಂದು ಅನಿರ್ವಚನೀಯ ಸ್ಥಿತಿ. ಅಂದರೆ ಮಾತುಗಳೆಲ್ಲವನ್ನೂ ನಿರಾಕರಿಸಿದ ಮತ್ತು ಕೇವಲ ಅನುಭವದ ಮೂಲಕವೇ ಸಕಲಕ್ಕೂ ಉತ್ತರಕೊಡಬಲ್ಲ ತಾಕತ್ತು ಮೌನಕ್ಕಿದೆ. ಸರಿಯಾದ ಮಾತುಗಳು ಹುಟ್ಟುವುದೂ ಮೌನದ ಗರ್ಭದಲ್ಲೇ!

ಸದಾ ಮಾತನಾಡುತ್ತಲೇ ಇರುವುದು ಶಕ್ತಿಯ ಅಪವ್ಯಯ ಅನ್ನುತ್ತಾರೆ ತಿಳಿದವರು. ಅವರ ಪ್ರಕಾರ ಮೌನವೆನ್ನುವುದು ಶಕ್ತಿ ಸಂಚಯನದ ಒಂದು ಸಾಧನ. ಜನರಿಂದ ಬಹಳ ದೂರವೇ ಉಳಿಯುವ ಯೋಗಿಗಳೂ, ಸಿದ್ಧಪುರಷರೂ ಮೌನಿಗಳಾಗಿದ್ದರೂ ಜನರ ಒಳದನಿಗಳನ್ನು ಆಲಿಸಿ ಸಮಾಧಾನಕಾರವಾದ ಉತ್ತರವನ್ನು ನೀಡಬಲ್ಲವರು. ಪರಿಪೂರ್ಣ ಮೌನ ಎಂಥವರಲ್ಲೇ ಆಗಲಿ ನಿರ್ಮಲ ಭಾವಗಳನ್ನು ಉದ್ದೀಪಿಸಬಲ್ಲುದು. ಎಮರ್ಸನ್ ‘ಭಗವಂತನಾಡುವ ಪಿಸುಮಾತುಗಳನ್ನು ಆಲಿಸಲು ಮೌನವೊಂದೇ ಸಾಧನ’ ಎನ್ನುತ್ತಾನೆ. ಮೌನದ ಮೂಲಕವೇ ಜಿಜ್ಞಾಸುಗಳೊಂದಿಗೆ ಭಗವಾನ್ ರಮಣರು ಮಾತನಾಡುತ್ತಿದ್ದರೆಂಬ ಪ್ರತೀತಿಯೂ ಇದೆ. ರಮಣರು ಹೇಳುವ ಹಾಗೆ ಮೌನವೆಂಬುದೇ ಅನಂತವಾದ ಮಾತು.

ಸಾತ್ವಿಕ ಮೌನವು ಅಂತರಂಗದ ಕೊಳೆಯನ್ನು ಗುಡಿಸಿಹಾಕುವ ಪೊರಕೆಯಾಗಿದೆ. ಅಂತರಂಗವು ಶುಚಿಯಾಗಿ ವಿವೇಕ, ಆರ್ದ್ರತೆ, ಸಹೃದಯತೆ, ಸಹಸ್ಪಂದನ ಇತ್ಯಾದಿ ದೈವೀಗುಣಗಳು ವ್ಯಕ್ತಿತ್ವದಲ್ಲಿ ಪಡಿಮೂಡಿ ಬರಬೇಕಾದರೆ ಮೌನದ ವ್ರತ ಹಿಡಿಯಲೇ ಬೇಕಾಗುತ್ತದೆ. ಯೋಚನೆಗಳಿಗೆ ಸರಿಯಾದ ದಿಕ್ಕು ದೆಶೆ, ಭಾವನೆಗಳಿಗೆ ಗಟ್ಟಿ ಬುನಾದಿ ಬರುವುದು ಮೌನದಿಂದ ಮಾತ್ರ ಸಾಧ್ಯವಿರುವ ಸಂಗತಿಗಳು. ಆಡುವ ಮಾತಿಗೆ ತೂಕ, ಘನತೆ, ಅರ್ಥವಂತಿಕೆಗಳೆಲ್ಲ ಬೇಕಾದರೆ ಮಾತನ್ನು ಅಪರೂಪಕ್ಕೆ ಮಾತ್ರ ಆಡಬೇಕಾಗುತ್ತದೆ. ಅದೇ ವಾಚಾಳಿಯ ಮಾತು ಯಾವತ್ತೂ ಹಗುರಾಗಿ ನಗಣ್ಯವೆನ್ನಿಸುಕೊಳ್ಳುತ್ತಲೇ ಇರುತ್ತದೆ.

ಮೌನವೆಂದರೆ ಮಾತನಾಡದೇ ಸುಮ್ಮನಿರುವುದು ಎಂದಲ್ಲ. ಹೊರಗೆ ಮಾತಲ್ಲಿ ತೋರಿಸದಿದ್ದರೂ ಒಳಗೇ ಸದಾ ಕಾಡುವ ಚಿಂತೆ, ಬಯಕೆ, ಭಯ, ಗೊಂದಲ ಮುಂತಾದುವಕ್ಕೆ ಕುದಿಯುತ್ತಲೇ ಇರುವ ಸಂದರ್ಭಗಳು ಸಾಮಾನ್ಯ ಮನುಷ್ಯನ ಜೀವನದಲ್ಲಿ ಇದ್ದೇಇರುವ ಸಂಗತಿಗಳು. ಅವುಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದೇ ಮೌನದ ಸಾಧನೆ. ಮನಸ್ಸಿನೊಳಗಿನ ಎಲ್ಲ ಚಲನೆಗಳನ್ನೂ ಹಿಡಿತದಲ್ಲಿಟ್ಟುಕೊಂಡು ಬುದ್ಧಿಯನ್ನು ಯಾವುದೋ ಶ್ರದ್ಧಾಕೇಂದ್ರವೊಂದರಲ್ಲಿ ನಿಲ್ಲಿಸುವುದು ವಾಚಾಳಿಯಿಂದ ಸಾಧ್ಯವಿಲ್ಲದ ಸಂಗತಿ. ಮೌನೋಪಾಸನೆಯಿಂದ ಮಾತ್ರ ಶ್ರದ್ಧ್ಧೆಯ ವಿವೇಕ ಹೆಚ್ಚುತ್ತದೆ.

ಬದುಕಿನ ಹಲವು ಸ್ತರಗಳಲ್ಲಿ ಮಾತು ಸೋತು ಹೋದಾಗ ಮೌನ ಗೆದ್ದಿರುವ ಸಂದರ್ಭಗಳಿದ್ದೇ ಇರುತ್ತವೆ. ಅತ್ಯಂತ ನವಿರು ಭಾವಗಳನ್ನು ಮಾತು ಸ್ಪಷ್ಟವಾಗಿ ಹೊರಹಾಕದೇ ಹೋದ ನಿದರ್ಶನಗಳೂ ಇರುತ್ತವೆ. ಆದರೆ ವಾತ್ಸಲ್ಯ, ಕರುಣೆ, ಅನುರಾಗ ಮುಂತಾದ ಸ್ನಿಗ್ಧ ಭಾವಗಳನ್ನು ಮೌನ ಯಶಸ್ವಿಯಾಗಿ ಅಭಿವ್ಯಕ್ತಿಸಿ ಹೃದಯ ಸಂವಾದವನ್ನು ಆರಂಭಿಸಿಬಿಡುತ್ತದೆ.
ಮೌನದ ದೇಗುಲದಲ್ಲಿ ಮಾತೇ ಜ್ಯೋತಿರ್ಲಿಂಗವಾಗಿ ಬದಲಾಗುತ್ತದೆ. ಮೌನದ ಮಣ್ಣಿನಲ್ಲಿ ಮಾತಿನ ಬೀಜ ಬೆಳಕೇ ಆಗಿ ಕುಡಿಯೊಡೆಯುತ್ತದೆ. ಮೌನದ ಚಿಪ್ಪೊಡೆದು ಬಂದ ಮಾತಿಗೆ ಮುತ್ತಿನ ಬೆಲೆ ಬರುತ್ತದೆ.

ಪು.ತಿ.ನ ತಮ್ಮ ಕವಿತೆಯೊಂದರಲ್ಲಿ ಹಾಡಿದ ಹಾಗೆ- ಭಾವನೆ ಕಾಯುವ ನಾಂತಿಹ ಮೌನ, ಮೋಕ್ಷಾನಂದದ ಜೀವನ್ ಮೌನ, ಓ ಕಡು ಸೋಜಿಗವೀ ಮೌನ! ಚಿನ್ಮೌನ!

ಶಬ್ದ ಮಾಲಿನ್ಯದಿಂದ ಆವೃತವಾಗಿರುವ ಪ್ರಸ್ತುತ ವರ್ತಮಾನದಲ್ಲಿ ಶುದ್ಧ ಮೌನದ ದಾರಿ ಸುಲಭಕ್ಕೆ ಸರಳಕ್ಕೆ ಸಿಕ್ಕಲಾರದು. ಮಾತು ಮತ್ತು ಮೌನದ ನಡುವೆ ಇರುವುದು ಸೇತುವೆಯಲ್ಲ, ಬದಲಿಗೆ ಅದು ಇರುವ ಇಲ್ಲದಿರುವ ತೆಳ್ಳನೆಯ, ಅಳಿಸಿಬಿಡಬಹುದಾದ ಬದಲಿಸಿಬಿಡಬಹುದಾದ ಬಹುಶೃತ ಧಾರೆ. ಅದರ ವ್ಯತ್ಯಾಸ ಸಾಧನೆಯಿಂದಷ್ಟೇ ಗುರ್ತಿಸಲು ಸಾಧ್ಯವಿರುವಂತಹುದು.