ಒಟ್ಟು ಪುಟವೀಕ್ಷಣೆಗಳು

ಗುರುವಾರ, ಜುಲೈ 22, 2010

ಎಚ್ಚೆಸ್ವಿ- ೬೭ರಲ್ಲೂ ಯುವಕ

ಎಚೆಸ್ವಿಗೆ ಅರವತ್ತೇಳು-ಅವರಿಗೊಂದು ನಮಸ್ಕಾರ ಮಾಡೇಳು. . . .
ಇದೇ ಜೂನ್ ೨೩ಕ್ಕೆ ಅರವತ್ತಾರು ತುಂಬಿ ಅರವತ್ತೇಳಕ್ಕೆ ಕಾಲಿಡುತ್ತಿರುವ ಡಾ.ಎಚ್.ಎಸ್.ವೆಂಕಟೇಶ ಮೂರ್ತಿ (೨೩.೦೬.೧೯೪೪) ನವ್ಯೋತ್ತರ ಕನ್ನಡ ಕಾವ್ಯದ ಮುಖ್ಯ ವಾಹಿನಿಗಳಲ್ಲಿ ಖಂಡಿತವಾಗಿ ಗಮನಿಸಲೇಬೇಕಾದ ಪ್ರಮುಖ ಹೆಸರು. ಅವರ ಕಾವ್ಯ ಮಾರ್ಗ ಕೇವಲ ತೀವ್ರತೆಯೊಂದನ್ನೇ ಅಲ್ಲದೇ ಪ್ರಮಾಣದ ಕಾರಣದಿಂದಲೂ ಮಹತ್ವದ್ದಾಗಿದೆ. ೧೯೬೮ರಲ್ಲಿ ತಮ್ಮ ಮೊದಲ ಕವನ ಸಂಕಲನ ‘ಪರಿವೃತ್ತ’ ಪ್ರಕಟಿಸಿದ ಅವರು ೨೦೦೮ರಲ್ಲಿ ‘ಉತ್ತರಾಯಣ ಮತ್ತು. . .’ ಸಂಕಲನ ಪ್ರಕಟಿಸಿದಾಗ ಅದು ಅವರ ೬೪ನೇ ಕೃತಿಯಾಗಿತ್ತು, ಅಂದರೆ ಅವರ ಒಟ್ಟೂ ಬರವಣಿಗೆಯ ಗಾತ್ರ ಕನ್ನಡ ಸಾಹಿತ್ಯವನ್ನು ಎಷ್ಟು ಶ್ರೀಮಂತಗೊಳಿಸಿದೆ ಎಂದು ಮನಗಾಣಬಹುದು. ಪರಂಪರೆಯ ಸತ್ವದೊಡನೆ ಸ್ವಂತದ ಅನುಭವಗಳನ್ನು ಅನುಸಂಧಾನ ಮಾಡುತ್ತ ಪ್ರಾಚೀನ ಮತ್ತು ವರ್ತಮಾನಗಳ ಸಹಯೋಗವನ್ನು ಅವರು ಸಾಧಿಸುತ್ತಲೇ ಬಂದಿದ್ದಾರೆ. ನಾಟಕಗಳನ್ನು, ಅನುವಾದಗಳನ್ನು, ಮಕ್ಕಳ ಕಾದಂಬರಿ ಮತ್ತು ವಿಮರ್ಶೆಗಳನ್ನು ಹಾಗೇ ಕವನ ಸಂಕಲನಗಳನ್ನು ಕಾಲದಿಂದ ಕಾಲಕ್ಕೆ ಪ್ರಕಟಿಸುತ್ತ ಬಂದಿರುವ ಎಚೆಸ್ವಿ, ‘ಆ ಮುಖೇನ’ ಎಂಬ ಅಂಕಣಬರಹವನ್ನು ಉದಯವಾಣಿಗೆ ಬರೆಯುತ್ತಿದ್ದುದನ್ನೂ ಮರೆಯುವ ಹಾಗಿಲ್ಲ. ಇತ್ತೀಚೆಗೆ ‘ಅವದಿ’ಯಲ್ಲಿ ಅವರು ಬರೆದುಕೊಳ್ಳುತ್ತಿರುವ ಆತ್ಮಕತೆಯ ಪುಟಗಳು ಅವರ ಜೀವನದ ಹಲವು ವಿವರಗಳನ್ನು ನಮ್ಮ ಮುಂದಿಡುತ್ತಿದೆ. ಜೊತೆಗೇ ‘ಮುಕ್ತ ಮುಕ್ತ’ ಧಾರಾವಾಹಿಯ ಟೈಟ್ಲ್ ಸಾಂಗ್ ಅವರದೇ ಕಾಂಪೊಸಿಷನ್ನು ಎನ್ನುವುದು ಕೂಡ ಇಲ್ಲಿ ಬಹಳ ಮುಖ್ಯ. ಏಕೆಂದರೆ ಕಮರ್ಷಿಯಲ್ ಸೂತ್ರದ ಟೀವಿ ಧಾರಾವಾಹಿಯೊಂದರ ಶೀರ್ಷಿಕೆ ಗೀತೆಗೂ ಸಾಹಿತ್ಯದ ಸ್ಪರ್ಶ ಕೊಟ್ಟು ಅದನ್ನು ಮತ್ತೆ ಮತ್ತೆ ಕೇಳುವಂತೆ ಮಾಡಿರುವ ಮೋಡಿಗಾರರು ಅವರು. ‘ಪರಸ್ಪರ’ಎನ್ನುವ ಬ್ಲಾಗನ್ನು ನಿರ್ವಹಿಸುತ್ತಿರುವ ಅವರು ಹೊಸಕಾಲಮಾನದ ಎಲ್ಲ ಅನುಕೂಲಗಳ ಪ್ರಯೋಜನವನ್ನು ಪಡೆದಿದ್ದಾರೆ. ಮತ್ತೆ ಆ ಕಾರಣಕ್ಕೇ ವರ್ತಮಾನದ ತಲ್ಲಣಗಳನ್ನು ತಕ್ಕಮಟ್ಟಿಗಾದರೂ ಅರಿತು ಹೊಸ ಬರಹಗಾರರಿಗೆ ಮುನ್ನುಡಿ ಬೆನ್ನುಡಿಗಳ ಆಶೀರ್ವಚನವನ್ನೂ ನಡೆಸಿಕೊಡುತ್ತಿದ್ದಾರೆ. ‘ಚಿನ್ನಾರಿ ಮುತ್ತ’ ಚಲನಚಿತ್ರ ಕೂಡ ಅವರ ಕೊಡುಗೆಯೇ. ಭಾಷೆಯ ಲವಲವಿಕೆ, ಜೀವಂತಿಕೆ, ಸಹಜೋಲ್ಲಾಸ, ಚಿತ್ರಕಶಕ್ತಿ, ಲಾಲಿತ್ಯ, ವಸ್ತು ನಿರ್ವಹಣೆಯ ನಾವೀನ್ಯ, ಹೀಗೆ ಅವರ ಕಾವ್ಯೋದ್ಯೋಗವನ್ನು ಬೇರೆ ಬೇರೆ ನೆಲೆಗಳಿಂದ ವಿಷ್ಲೇಷಿಸಬಹುದಾದರೂ, ಅವರು ತಮ್ಮ ಹೊಸ ಸಂಕಲನಗಳ ಮೂಲಕ ಹುಡುಕುತ್ತಿರುವ ಕಾವ್ಯದ ಹಾದಿಯನ್ನು ಗಮನಿಸುವುದೇ ಒಂದು ಸೊಗಸು.
ತಮ್ಮ ಇತ್ತೀಚಿನ ಸಂಕಲನ ‘ಉತ್ತರಾಯಣ’ದ ಹಲವು ಕವಿತೆಗಳಲ್ಲಿ ಅವರು ಧ್ಯಾನಿಸಿರುವ ರೀತಿ ಕನ್ನಡ ಕಾವ್ಯ ಪರಂಪರೆಗೆ ಮತ್ತೊಂದು ಮಜಲನ್ನು ಜೋಡಿಸಿದೆ. ಅನೇಕಾನೇಕ ಕೃತಿಗಳನ್ನು ಈವರೆಗೆ ತಂದಿದ್ದರೂ, ಅವರ ಕಾವ್ಯದ ಮೂಲಕೇಂದ್ರ ಯಾವುದೆಂದು ಮೇಲ್ನೋಟಕ್ಕೆ ದಕ್ಕದಿರುವುದೂ ಒಂದು ಹೆಗ್ಗಳಿಕೆಯೇ. ಬರಿಯ ಕನ್ನಡಕ್ಕಷ್ಟೇ ಅಲ್ಲದೆ ವಸಾಹತೋತ್ತರ ಭಾರತೀಯ ಕಾವ್ಯ ಸಂದರ್ಭಕ್ಕೇ ಅವರು ಮಾದರಿಯಾಗಿದ್ದಾರೆ. ಮೂಲಸ್ವರೂಪದ ಅಭಿಜ್ಞಾನದಲ್ಲೇ ಅವರ ಸಾಹಿತ್ಯ ಯಾತ್ರೆ ನಡೆಯುತ್ತಿರುತ್ತದೆ. ಬರಿಯ ಛಂದೋವಿನ್ಯಾಸಗಳಲ್ಲಲ್ಲದೇ ತಾತ್ವಿಕ ಕಾರಣಗಳಿಂದಲೂ ಅವರ ಕಾವ್ಯಕೃಷಿ ಮಹತ್ವದ್ದಾಗಿದೆ. ತಮ್ಮ ಕಾವ್ಯೋದ್ಯೋಗದುದ್ದಕ್ಕೂ ಕಾವ್ಯದ ಸ್ವದೇಶೀಕರಣಕ್ಕೆ ಬದ್ಧರಾಗಿರುವ ಅವರು, ಕಾವ್ಯವನ್ನು ಅಮೂರ್ತದ ಆಗಸದಿಂದ ಮಣ್ಣ ನೆಲಕ್ಕೆ, ತಾತ್ವಿಕತೆಯ ಒಗಟಿನಿಂದ ಅನುಭವದ ನಿಜಕ್ಕೆ, ಕನಸಿನಾದರ್ಶಗಳನ್ನು ಕಥನಕಾವ್ಯದ ಅನುಸರಣದ ಕೆಲಸದಿಂದ ಅರಿವಿನಂಗಳಕ್ಕೆ ತಂದು ನಿಲ್ಲಿಸಿದ್ದಾರೆ. ಹಾಗೆಯೇ ಪುರಾಣದ ಪಾತ್ರಗಳಿಗೆ ಹೊಸ ಪೋಷಾಕು ತೊಡಿಸಿ ಬೆಚ್ಚಿಬೀಳಿಸಿದ್ದಾರೆ. ಶ್ರೀಸಂಸಾರಿ ಮತ್ತು ಆಪ್ತಗೀತೆ ಎಂಬ ಪದ್ಯಗಳಲ್ಲಿ ಅವರು ದೈವತ್ವಕ್ಕೆ ನೀಡಿದ ಮರುವ್ಯಾಖ್ಯಾನ ಕೂಡ ಗಮನೀಯವೇ ಆಗಿದೆ. ‘ಹರಿವ ಇರುವೆ ಕೂಡ ನೋಯದ ಹಾಗೆ, ಪಂಚಮದ ಇಂಚರ ಎಷ್ಟು ಮಾತ್ರಕ್ಕೂ ಒಡೆಯದ ಹಾಗೆ ಕಾಪಿಡಬೇಕೆನ್ನುವುದು’ ಅವರ ಕವಿಮನಸ್ಸಿನ ವೈಚಾರಿಕತೆಯಾಗಿದೆ. ಪೌರಾಣಿಕ ಸ್ಮೃತಿಯ ಮಂಥನದ ಮೂಲಕ ಆಧುನಿಕ ಕಾಲಕ್ಕೂ ಪ್ರಸ್ತುತವಾಗುವ ವೈಚಾರಿಕ ನವನೀತವನ್ನು ಹಂಚುತ್ತಿರುವ ಎಚೆಸ್ವಿ ಆಧುನಿಕ ಮನೋಭೂಮಿಕೆಯಲ್ಲಿರುವ ನಮ್ಮನ್ನೆಲ್ಲ ಪರಂಪರೆಯ ಆಗಸದವಕಾಶಕ್ಕೆ ಜೋಡಿಸಿ ಹೊಸ ಚಿಂತನೆಗಳು ಸಾಧ್ಯವಿದೆಯೆಂದು ಮನಗಾಣಿಸಿದ್ದಾರೆ.
ಎಚೆಸ್ವಿಯವರ ಕವಿತೆಗಳು ಸರಳವಾಗಿವೆಯೆನ್ನಿಸಿದರೂ ಅವು ಓದುಗನಲ್ಲಿ ಉಳಿಸುವ ಪ್ರಶ್ನೆಗಳು ದೊಡ್ಡವು. ಅವುಗಳ ಆಶಯವೂ ದೊಡ್ಡದೇ. ಕಾವ್ಯವೆಂದರೇನೆಂದು ಮತ್ತೆ ಮತ್ತೆ ಆಲೋಚಿಸುವ ಹಾಗೆ ಮಾಡುವ ಅವರ ಕಾವ್ಯಕ್ರಿಯೆಗೆ ಶರಣೆನ್ನಲೇ ಬೇಕಾಗುತ್ತದೆ. ಏಕೆಂದರೆ ವೈಚಾರಿಕತೆಗೆ ಪೂರ್ವ-ಪಶ್ಚಿಮ, ಎಡ-ಬಲ, ಇತ್ಯಾದಿ ಆಕೃತಿಗಳ ಪ್ರತ್ಯೇಕ ಅಸ್ತಿತ್ವವನ್ನೇ ಅವರ ಕಾವ್ಯ ನಿರಾಕರಿಸುತ್ತ ಬಂದಿದೆ. ಅನುಭವದ ಪಾತಳಿಯಲ್ಲೇ ಅರಿವಿನ ಆವಿಷ್ಕಾರ ಆಗಬೇಕೆನ್ನುವುದು ಈ ಕವಿ ಮೊದಲಿಂದಲೂ ಮಂಡಿಸುತ್ತ ಬಂದ ಗಂಧವಾಗಿದೆ, ಮತ್ತು ಅವರ ಕಾವ್ಯದುದ್ದಕ್ಕೂ ಅಂಟಿ ನಿಂತ ಪರಿಮಳವೂ ಅದೇ ಆಗಿದೆ. ಸಹನೌ, ಸೌಗಂಧಿಕಾ, ಮುಂತಾದ ಪದ್ಯಗಳಲ್ಲಿ ಅವರು ಕಟೆದು ನಿಲ್ಲಿಸುವ ಸಾಮಾಜಿಕ ಕಳಕಳಿ ಅವುಗಳನ್ನು ಓದಿಯೇ ಅನುಭವಿಸಬೇಕಾದ ಪಾರಮ್ಯಗಳು. ಸ್ಮೃತಿ ಮತ್ತು ಪುರಾಣಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳುವ ಅವರು ಅವನ್ನು ತಮ್ಮ ಕಾವ್ಯದ ಅಲಂಕರಣಕ್ಕೆ ಬಳಸದೇ ಅವುಗಳ ತಳಹದಿಯಲ್ಲೇ ಹೊಸ ಆಲೋಚನೆಗಳ ಪಟ್ಟಕವನ್ನಾಗಿ ರೂಪಿಸಿ, ವರ್ತಮಾನದ ತಹತಹಿಕೆಗಳಿಗೆ ಉತ್ತರವನ್ನಾಗಿಸಿ ಆಶ್ಚರ್ಯ ಹುಟ್ಟಿಸುತ್ತಾರೆ. ‘ಭೂಮಿಯೂ ಒಂದು ಆಕಾಶ’ ಕವಿತೆಯಲ್ಲಿ ಸಂಬಂಧಗಳ ಅನಿವಾರ್ಯತೆಯನ್ನೂ, ಜೊತೆಗೇ ಅವೆಲ್ಲ ಹೇಗೆ ಅಪ್ರಾಕೃತ ಎಂದೂ ಹೇಳಿದ್ದಾರೆ. ಅಂದರೆ ಪುರಾಣ ಪ್ರತಿಮೆಯ ಮೂಲಕ ಸಮಕಾಲೀನ ತೊಡಕುಗಳನ್ನೂ, (ವಿಮುಕ್ತಿ) ಜೊತೆಗೆ ಸಮಕಾಲೀನ ಬದುಕನ್ನು ಪುರಾಣವಾಗಿಸುವ ಮೂಲಕವೂ (ಹರಿಗೋಲು, ಬಸವ ಪುರಾಣ ಥರದ ಕವಿತೆಗಳು) ಅವರು ಈಗಾಗಲೇ ಕಾವ್ಯಾಸಕ್ತರ ಗಮನವನ್ನೂ ಮನವನ್ನೂ ಸೆಳೆದಿದ್ದಾರೆ. ಕಥನ ಕಲೆ ಕೂಡ ಅವರಿಗೆ ಸಿದ್ಧಿಸಿದ ಕಲೆಯಾಗಿದ್ದರಿಂದಲೇ ಕಥನ ಕವನಗಳಲ್ಲೂ ಅವರ ಮುದ್ರೆ ಇದ್ದೇ ಇದೆ. ‘ಕಂಡದ್ದು’ ಕವಿತೆ ಓದುಗನನ್ನು ಬರಿಯ ಕವಿತೆಯಾಗಿ ಕಾಡದೇ ಅವನ ಸ್ವಂತ ಅನುಭವವಾಗಿಯೇ ಉಳಿದು ಬಿಡುತ್ತದೆ. ಹೀಗೆ ಕಾವ್ಯೋದ್ಯೋಗವೆಂಬ ಮಥನದಿಂದ ತಾತ್ವಿಕತೆಯ ಎಳೆಗಳನ್ನು ನೇಯ್ದು ಬೆಚ್ಚನೆಯ ಅರಿವಿನ ಹೊದಿಕೆಗಳನ್ನು ತಯಾರಿಸಿ ಕೊಡುತ್ತಿರುವ ಎಚೆಸ್ವಿ ಒಂದು ರೀತಿಯಲಿ ಕಬೀರನೇ ಆಗಿದ್ದಾರೆ. ಮಡಿವಂತಿಕೆಯ ಸೋಂಕಿಲ್ಲದ, ಸಾಮಾಜಿಕ ನ್ಯಾಯಕ್ಕೆ ಪರಿತಪಿಸುವ ಅವರೊಳಗಿನ ಕವಿ ಜಾಗತೀಕರಣ ಕಾಲದಲ್ಲೂ ಸ್ವದೇಶೀಕರಣದಲ್ಲಿ ನಿರತನಾಗಿದ್ದಾನೆ. ಸಮಕಾಲೀನ ಸಂದರ್ಭವನ್ನು ಪಾರಂಪರಿಕ ಕಾವ್ಯದೊಂದಿಗೆ ವಾದಿ-ಸಂವಾದಿಗಳ ಸ್ವರೂಪದಲ್ಲಿ ಮುಖಾಮುಖಿಯಾಗಿಸುತ್ತಲೇ ಗೇಯತೆಯನ್ನೂ ಅವರು ಉಳಿಸಿ ಬೆಳೆಸಿದ್ದಾರೆ.
ಆದರೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಶತಮಾನದ ಕನ್ನಡ ಕಾವ್ಯದ ಸಂಪಾದಕರಾಗಿ ಅವರು ಎಡವಟ್ಟು ಮಾಡಿಕೊಂಡಿದ್ದೂ ಇದೆ. ನೂರು ವರ್ಷಗಳ ಕಾವ್ಯ ಪರಂಪರೆಯ ಪ್ರಾತಿನಿಧಿಕ ಸಂಕಲನವಾಗಬೇಕಿದ್ದ ಅದು ಅವರ ಆಯ್ಕೆಯ ದ್ವಂದ್ವಗಳ ಕಾರಣ ಪೇಲವವಾದದ್ದೂ ಈಗ ಇತಿಹಾಸ. ಜೊತೆಗೇ ಸುಮ್ಮಸುಮ್ಮನೇ ಮುಲಾಜಿಗೆ ಸಿಕ್ಕಿಕೊಳ್ಳುವ ಅವರ ಮುಗ್ಢತೆ ಸಹ ಅವರನ್ನು ತೊಂದರೆಗಿಳಿಸಿದೆ. ಉದಾಹರಣೆಗೆ ಮುಕ್ತ ಮುಕ್ತ ಸೀರಿಯಲ್ಲಿನ ಅವರ ಜಡ್ಜು ಪಾತ್ರವನ್ನೇ ನೋಡಿ. ಪಾಪ ಪದ್ಯ ಬರೆದುಕೊಂಡಿದ್ದ ಅವರಿಗೆ ಗೌನು ಹಾಕಿ ಕೂರಿಸಿ ಸೀತಾರಾಂ ಮಜಾ ತೆಗೆದುಕೊಳ್ಳುತ್ತಿದ್ದಾರೆ.
ಎಂಭತ್ತರ ದಶಕದಲ್ಲಿ ಕ್ಯಾಸೆಟ್ಟು ಕವಿಗಳ ಒಂದು ದಂಡೇ ಸಾಂಸ್ಕೃತಿಕ ಲೋಕವನ್ನು ಗುತ್ತಿಗೆ ಹಿಡಿದಂತೆ ವರ್ತಿಸಿದ್ದು ಈಗ ಇತಿಹಾಸ. ದಾಸಪಂಥದವರೆಂದು ರಾಮಚಂದ್ರಶರ್ಮರಿಂದ ಮೂತಿಗೆ ಇಕ್ಕಿಸಿಕೊಂಡವರ ಪೈಕಿ ಎಚೆಸ್ವಿ ಕೂಡ ಒಬ್ಬರು. ಸಿ.ಅಶ್ವಥ್ ರಾಗಸಂಯೋಜನೆಯಲ್ಲಿ ಕ್ಯಾಸೆಟ್ಟುಗಳ ಸುಗ್ಗಿಯೋ ಸುಗ್ಗಿಯ ಕಾಲದಲ್ಲಿ ಪದ್ಯ ಬರೆಯುವ ಹುಕ್ಕಿಯಿದ್ದವರೆಲ್ಲ ರಾತ್ರಿ ಕಳೆದು ಬೆಳಗಾಗುವುದರಲ್ಲಿ ಖ್ಯಾತರಾಗಿಬಿಟ್ಟರು. ಈಗ ಆ ಸಾಲಿನಲ್ಲಿ ಉಳಿದಿರುವ ಏಕೈಕ ಹೆಸರೆಂದರೆ ಎಚೆಸ್ವಿಯವರದ್ದು ಮಾತ್ರ, ಏಕೆಂದರೆ ಬರೀಹಾಡುಗಳನ್ನಷ್ಟೇ ಅಲ್ಲದೇ ನಿಜ ಕವಿತೆಗಳನ್ನು ಬರೆಯುವ ತಾಕತ್ತಿದ್ದುದು ಅವರೊಬ್ಬರಿಗೆ ಮಾತ್ರ. ಉಳಿದವರೆಲ್ಲ ಯಾವ ಯಾವ ನಿಗೂಢ ಜಗತ್ತಿಗೆ ಸೇರಿಬಿಟ್ಟರೋ ಅರಿತವರಿಲ್ಲ.
ಜೊತೆಗೆ ಎಚೆಸ್ವಿಯವರ ವರ್ಷಕ್ಕೊಂದು ಪುಸ್ತಕ ತರಲೇಬೇಕೆನ್ನುವ ಛಲ ಕೂಡ ಅವರನ್ನು ಇನ್ನೂ ಸಾಹಿತ್ಯ ಲೋಕದ ಹೊಳೆಯುವ ತಾರೆಯಾಗಿಸಿದೆ. ನವ್ಯರ ಕಾಲದ ‘ಕ್ವಾಲಿಟಿ’ಯ ವಾದವನ್ನು ಧಿಕ್ಕರಿಸಿ ‘ಕ್ವಾಂಟಿಟಿ’ಯ ಮೂಲಕ ನವ್ಯೋತ್ತರರ ಅಜೆಂಡಾವನ್ನು ವಿಸ್ತರಿಸಿದ್ದು ಕೂಡ ಅವರೇ. ಇದರ ಜೊತೆಗೆ ಬರಹಗಾರನಾಗಿರುವವನಿಗೆ ಮಾಧ್ಯಮದ ಅಡೆತಡೆಗಳಿರಬಾರದೆಂಬ ಸೂತ್ರ ಕೂಡ ಅವರಲ್ಲಿರುವುದರಿಂದಲೇ ಬರೀ ಕಾವ್ಯಕ್ಕಂಟಿಕೊಳ್ಳದೇ ಅಭಿಜಾತ ಬರಹಗಾರರು ಮಾತ್ರ ಕೈ ಇಡಬಹುದಾದ ನಾಟಕ ರಚನೆಗೂ ಅವರು ಕೈ ಹಾಕಿದ್ದಾರೆ. ‘ಊರ್ಮಿಳೆ’ ಇದಕ್ಕೊಂದು ಅಪ್ಪಟ ಉದಾಹರಣೆ. ಮಕ್ಕಳ ಪದ್ಯಗಳೆಂದರೆ ಉತ್ತರಕರ್ನಾಟಕದವರೆಂಬ ಮಾತನ್ನು ಅಳಿಸಿದ್ದೂ ಎಚೆಸ್ವಿಯವರೇ! ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಬರೆದೂ ಆ ಎಲ್ಲ ಪ್ರಕಾರಗಳಲ್ಲೂ ಏಕಮುಖೀ ಯಶಸ್ಸು ಗಳಿಸಿದವರು ಕು.ವೆಂ.ಪು ನಂತರ ಎಚೆಸ್ವಿಯವರೊಬ್ಬರೇ ಇರಬೇಕು.
೨೦೦೦ರಲ್ಲಿ ಪ್ರಕಟವಾದ ಅವರ ‘ಭೂಮಿಯೂ ಒಂದು ಆಕಾಶ’ ಸಂಕಲನದ ಬಗ್ಗೆ ಪ್ರೊ.ಸಿ.ಎನ್.ರಾಮಚಂದ್ರನ್ ಹೇಳಿದ್ದ ಮಾತುಗಳನ್ನಿಲ್ಲಿ ಉಲ್ಲೇಖಿಸಲೇಬೇಕು: ಅಡಿಗರ ನಂತರ ವೆಂಕಟೇಶಮೂರ್ತಿಗಳಷ್ಟು ಸಮರ್ಥವಾಗಿ ರೂಪಕಗಳನ್ನು ಬಳಸುವ ಕನ್ನಡ ಕವಿಗಳು ಅಪರೂಪ. ನಿದರ್ಶನವಾಗಿ, ಮೊದಲ ಓದಿಗೇ ನಮ್ಮನ್ನು ಚಕಿತಗೊಳಿಸುವ,ಬೆಚ್ಚಿಸುವ,ಇಡಿಯಾಗಿ ಆವರಿಸುವ ಈ ರೂಪಕಗಳನ್ನು ಪರಿಗಣಿಸಬಹುದು. ‘ಮರಗಳು ನೆರಳ ಹಾಸಿದ್ದೇ ಹಾಸಿದ್ದು’, ‘ಹೇಳಿ ಕೇಳಿ ಹಗಲ ಕೊನೆ-ಹೊಗೆ ಬತ್ತಿಯ ತುಕಡಾ’, ‘ಕನ್ನಡಿ ಒಂದು ಅಲೆಯಿಲ್ಲದ ಕೊಳ’, ‘ಒಲೆಯಲ್ಲಿ ಬೂದು ಬಣ್ಣದ ಶಾಲು ಹೊದ್ದ ಕೆಂಡ’, ‘ಎಣ್ಣೆ ಕೊಳಗದೊಳಕ್ಕೆ ಬಿತ್ತೆ ಒಣಗಿದ ನಗೆಯ ಬಿದಿಗೆ ಚಕ್ಕೆ’, ‘ಅನಾದಿ ಕಾಲದಿಂದ ಪ್ರವಾಸಿಗಳ ಮುಂದೆ ಮೊಂಡು ಕೈಯೊಡ್ಡಿ ಕೂತಿರೋ ಕುಷ್ಠ ಹಿಡಿದ ತಿರುಕ’ (ಮುಕ್ಕಾದ ಉಗ್ರ ನರಸಿಂಹ..ಹಂಪೆಯಲ್ಲಿ) ಇತ್ಯಾದಿ,,. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಇಂಥ ಬಿಡಿ ರೂಪಕಳಾಚೆಗೂ ಕೆಲವೊಮ್ಮೆ ಇಡೀ ಕವನವೇ ರೂಪಕವಾಗಿಬಿಡುವ -‘ಮೀನು ಬುಟ್ಟಿಯಲ್ಲಿ ಅಂಟಿಕೊಂಡಿರುವ ಕಿರು ಮೀನಂತೆ’ ಹಾಗೆಯೇ ದೀರ್ಘ ಕಥಾನಕಗಳಲ್ಲಿ ಕೇಂದ್ರ ಪಾತ್ರವೇ ರೂಪಾಕಗವಾಗಿ ಮಾರ್ಪಡಬಹುದು ‘ವಿಮುಕಿ’ಯ ಗರುಡನಂತೆ.
ಖಾಸಗೀ ಬದುಕಿನ ಸುಖ, ದುಃಖಗಳನ್ನು, ನೋವು ನಲಿವುಗಳನ್ನು, ಹೇಳಿಕೊಳ್ಳಲಾರದ ಆದರೆ ಹೇಳಿಕೊಳ್ಳಲೇಬೇಕಾದ ಯಾತನೆಗಳನ್ನು ವೈಯುಕ್ತಿಕ ಪರಿಧಿಯಿಂದ ಬೇರ್ಪಡಿಸಿ ಅರ್ಥಪೂರ್ಣ ಸಾರ್ವತ್ರಿಕ ಪ್ರತಿಮೆಯನ್ನಾಗಿಸುವ ಕವಿಶ್ರದ್ಧೆ ಅವರಿಗಿರುವುದರಿಂದಲೇ ಶ್ರೀರಾಮನೂ ಅವರ ಕೈಯಲ್ಲಿ ಶ್ರೀಸಂಸಾರಿಯಾಗುತ್ತಾನೆ, ಉಡುಪಿಯ ಕೃಷ್ಣ ಕನಕನಿಗಾಗಿ ಕಿಂಡಿಯಲ್ಲಿ ಕಣ್ಣಿಟ್ಟು ಕಾಯುತ್ತಾನೆ. ಅವರ ಹುಟ್ಟುಹಬ್ಬದ ದಿನಕ್ಕೆ ಅವರದೇ ಮೂರು ಕವಿತೆಗಳನ್ನು ಆರಿಸಿ ಪೋಣಿಸಿದ್ದೇನೆ: ಅವರ ವೈಚಾರಿಕತೆಯ ರೀತಿ ಮೇಲ್ನೋಟಕ್ಕೆ ಸರಳವಾಗಿದ್ದರೂ ಹೇಗೆ ಗಾಢವಾಗಿದೆ ಅಂತ ತೋರಿಸಲು;

ಎಚ್.ಎಸ್.ವೆಂಕಟೇಶ ಮೂರ್ತಿ ಅವರ ಮೂರು ಕವಿತೆಗಳು
ಭೂಮಿಯೂ ಒಂದು ಆಕಾಶ
ಆಕಾಶದಲ್ಲಿ ಗ್ರಹ ತಾರೆಗಳು ಚಲ್ಲಾಪಿಲ್ಲಿ ಚೆಲ್ಲಿ ಬಿದ್ದಿದ್ದಾವೆ
ಅದು ವಶಿಷ್ಠ, ಅದು ಅರುಂಧತಿ
ಅವರು ಬೆಳಕಿನ ಕೈಚಾಚಿ ಪರಸ್ಪರ ವರಿಸಿದ್ದಾರೆ
ನವದಂಪತಿಗಳೇ... ಅವರಂತಿರಬೇಕು ಸತಿ-ಪತಿ.

ಆಕಾಶದಲ್ಲಿ ಗ್ರಹತಾರೆಗಳು ಚಲ್ಲಾಪಿಲ್ಲಿ ಚೆಲ್ಲಿ ಬಿದ್ದಿದ್ದಾವೆ
ಅದು ಸಪ್ತರ್ಷಿ ಮಂಡಲ, ಅವು ಭತ್ತದ ಅರಳು
ಸಪ್ತರ್ಷಿಗಳು ಅಗ್ನಿಕುಂಡದ ಸುತ್ತ ಕೂತಿದ್ದಾರೆ
ಹೋಮಾಗ್ನಿ ಉರಿಸಿ ಅಂತರತಮ ಕೆದಕುತ್ತ

ಆಕಾಶದಲ್ಲಿ ಗ್ರಹತಾರೆಗಳು ಚಲ್ಲಾಪಿಲ್ಲಿ ಚೆಲ್ಲಿ ಬಿದ್ದಿದ್ದಾವೆ
ಅವನು ಚಂದ್ರ ಅವಳು ತಾರೆ ಅವನು ಬುಧ
ಅವರದ್ದು ಚಿಕ್ಕ ಚೊಕ್ಕ ಸಂಸಾರ
ಒಡಕು ಮರೆತು ಒಡನಿರುವುದೇ ಸಂಸಾರದ ಹದ

ಆಕಾಶದಲ್ಲಿ ಗ್ರಹತಾರೆಗಳು ಚಲ್ಲಾಪಿಲ್ಲಿ ಚೆಲ್ಲಿ ಬಿದ್ದಿದ್ದಾವೆ
ಆಗಾಗ ಇವರ ಮನೆಗೆ ಅವರು ಅವರ ಮನೆಗೆ ಇವರು
ಇದು ಕುಟುಂಬ ಧರ್ಮ; ಇದು ಮಾನವತ್ವದ ಮಾರ್ಗ
ಆದರೆ ನಿಷ್ಠುರ ಸತ್ಯ: ಆಳದಲ್ಲಿ ಅವರೆಲ್ಲ ಏಕಾಂಗಿಗಳು

ಆಕಾಶದಲ್ಲಿ ಗ್ರಹತಾರೆಗಳು ಚಲ್ಲಾಪಿಲ್ಲಿ ಚೆಲ್ಲಿ ಬಿದ್ದಿದ್ದಾವೆ
ನಕಾಷೆ ಬಿಡಿಸಿದ್ದು ನಾವು-ಎಳೆದು ಅವರ ನಡುವೆ ಸಂಬಂಧದ ಗೆರೆ
ಅಂತರ್ಜಾಲ ಹೆಣೆದಿದ್ದೇವೆ,ವಿಶ್ವ ಕುಟುಂಬ ಕನಸಿದ್ದೇವೆ
ಆದರೂ ನಮಗೆ ಗೊತ್ತು-ಭೂಮಿಯೂ ಒಂದು ಆಕಾಶ, ಇಲ್ಲಿ
ನಾವೆಲ್ಲ ಗ್ರಹ ತಾರೆಗಳು.

ಕಂಡದ್ದು

ರಾತ್ರಿ ಮಳೆ ಮಿಂಚು, ವಿದ್ಯುತ್ತು ಹೋಗಿದೆ. ನೀವು
ಬಂದಾಗ ಮನೆಗೆ ಏನೇನೂ ಕಾಣುತ್ತಿಲ್ಲ
ಹೇಗೋ ಬಾಗಿಲು ತೆಗೆದು ಒಳಗೆ ಬರುವಿರಿ. ಬಂದು
ಕಡ್ಡಿಪೆಟ್ಟಿಗೆಗಾಗಿ ತಡವರಿಸುವಿರಿ, ಇಲ್ಲ.
ಸಿಗಲಿಲ್ಲ.ಸಿಡಿಮಿಡಿ.ಮನೆಯೊಡತಿ ಸಂಜೆಯೇ
ರಜ ಎಂದು ಮಗನೊಡನೆ ತಾಯಿಯೂರಿಗೆ. ನೀವು
ಚಡಪಡಿಸುವಿರಿ ಈಗ, ಅಡುಗೆ ಮನೆಯಲ್ಲಾಕೆ
ಕಿಟಕಿಯಲ್ಲಿಡುತ್ತಿದ್ದಳಲ್ಲವೆ ಹಣತೆಯನು?
ಹಣತೆ ಸಿಕ್ಕಿತು. ಅಲ್ಲೆ... ಅಲ್ಲೆ... ಕೆಳಗಡೆ ಹುಡುಕಿ
ಇದ್ದೀತು ಕಡ್ಡಿಪೆಟ್ಟಿಗೆ. ಹೌದು ಅಲ್ಲೆ ಇದೆ.
ಈಗ ಕಡ್ದಿಯ ಗೀರಿ ಮಣಿದೀಪ ಹೊತ್ತಿಸಿ.
ದೀಪವಷ್ಟೇ ಮೊದಲು ಕಾಣುವುದು. ಅಮೇಲೆ...
ಕಾಣುವುವು ಫ್ಲಾಸ್ಕು...ಬಿಸಿಯಡುಗೆ...ಕಾಸಿದ ಹಾಲು
ಪ್ರೀತಿ...ಕಳಕಳಿ...ಅಕರಾಸ್ತೆ...ಕವಿತೆಯ ಸಾಲು

ಹೀಗೇ ಒಂದು ರಾತ್ರಿ
ಬಿದಿಗೆ
ರಾತ್ರಿ
ಹಸಿರು ಸೀರೆ ಉಟ್ಟ
ಯಶೋದೆ
ಅಂಗಾತ ಮಲಗಿದ್ದಾಳೆ

ನೀಲ ಮೇಘ ಶ್ಯಾಮ
ಅವಳ
ಮೊಲೆತೊಟ್ಟಿಗೆ ತುಟಿ ಹಚ್ಚಿ
ಚೀಪುತ್ತಿದ್ದಾನೆ

ಡೊಂಕಾದ
ಅವನ ಕೆಳದುಟಿಗೆ ಬೆಳ್ಳಗೆ
ಹಾಲು ಮೆತ್ತಿದೆ.

ಅವನ ಚಂಡಿಕೆ ಹಾರಿ ಸೂಜಿಮಲ್ಲೆ
ಎಲ್ಲೆಲ್ಲೂ ಚೆಲ್ಲಿವೆ.

ಕಾಮೆಂಟ್‌ಗಳಿಲ್ಲ: