ಒಟ್ಟು ಪುಟವೀಕ್ಷಣೆಗಳು

ಶನಿವಾರ, ಅಕ್ಟೋಬರ್ 16, 2010

ಕರುಣಾಳು ಬಾ ಬೆಳಕೇ...

ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು. . . .ಕವಿ ಬೆಳಕನ್ನು ಆರ್ತವಾಗಿ ಪ್ರಾರ್ಥಸಿದ್ದಾನೆ. ಬೆಳಕೆಂಬುದು ಭಗವಂತನ ನೆರಳು ಅಂದವನು ಗ್ರೀಕ್ ದಾರ್ಶನಿಕ ಪ್ಲೇಟೋ. ಭೌತಿಕ ವಸ್ತುಗಳ ನೆರಳು ಕಪ್ಪನೆಯ ಬಣ್ನದಲ್ಲಿದ್ದರೆ ಭಗವಂತನ ನೆರಳು ಬೆಳಕಿನ ರೂಪದಲ್ಲಿರುತ್ತದೆ ಎನ್ನುತ್ತ್ತಾನೆ ಒಬ್ಬ ಭಕ್ತಿ ಕವಿ. ಸ್ವಯಂ ಪ್ರಕಾಶನೆಂದು ವೇದಗಳು ಪ್ರಮಾಣಿಸಿರುವ ಭಗವಂತನ ನೆರಳೇ ಬೆಳಕಿನ ರೂಪದಲ್ಲಿ ಈ ಜಗತ್ತನ್ನು ಕಾಪಿಡುತ್ತಿದೆಯೆಂದು ನಂಬಿದವರೂ ಬಹಳ ಜನರಿದ್ದಾರೆ. ಲೋಕ ಜೀವನದ ಸಾತತ್ಯವನ್ನು ಕೆಡದಂತೆ ನಡೆಸಿಕೊಡುವುದೇ ಬೆಳಕಿನ ಮೂಲಸ್ವರೂಪನಾದ ಸೂರ್ಯನ ಕೆಲಸವೂ ಆಗಿರುವುದರಿಂದ ಸೂರ್ಯನನ್ನೇ ಭಗವಂತನೆಂದು ಕರೆಯಲೂ ಅಡ್ಡಿಯಿಲ್ಲ. ದೇವರ ಅಸ್ತಿತ್ವನ್ನು ನಂಬುವುದು ಅಥವ ಬಿಡುವುದೂ ಅವರವರ ಮನೋಧರ್ಮಕ್ಕೆ ಬಿಟ್ಟ ವಿಚಾರವಾದರೂ ಬೆಳಕೆಂಬುದು ಆಸ್ತಿಕರಿಗೂ ನಾಸ್ತಿಕರಿಗೂ ಸಮಾನವಾಗಿ ಜೀವನ ನಿರ್ವಹಣೆಯ ಮೂಲಸ್ರೋತವಾಗಿರುವುದನ್ನು ಅಲ್ಲಗಳೆಯಲಾಗದು. ಬೆಳಕಿನ ಉಪಯೋಗ ಸಂದೇಹಾತೀತವಾದುದು. ದ್ವಂದ್ವಾತೀತವಾದುದು. ಬೆಳಕಿಲ್ಲದೇ ಬದುಕು ಸಾಗುವುದಿಲ್ಲ. ಬದುಕನ್ನು ಅನುಭವಿಸಲು ಆಸ್ವಾದಿಸಲು ಬೆಳಕು ಬೇಕೇ ಬೇಕು.

ಭಾರತೀಯ ದಾರ್ಶನಿಕ ವಿವೇಚನೆಯ ಪ್ರಕಾರ ಭಗವಂತನ ರೂಪವು ಇಂದ್ರಿಯ ಗೋಚರವಾಗಿರುವ ನಮ್ಮ ಸುತ್ತಮುತ್ತಲಿನ ಪ್ರಪಂಚವೇ ಆಗಿದೆ. ಅದು ಮುಮುಕ್ಷುವಿನ ಅನುಭವಕ್ಕೆ ಬರುವುದು ಆ ಮುಮುಕ್ಷು ಆ ಅರಿವನ್ನು ಪಡೆದಾಗ ಮಾತ್ರ. ಆದರೆ ತೀರ ಸಾಮನ್ಯರಾದ ನಮ್ಮೆಲ್ಲರಿಗೂ ಭಗವಂತನ ಕೃಪಾಶೀರ್ವಾದಗಳು ಬೆಳಕಿನ ಸ್ವರೂಪದಲ್ಲಿ ಕಾಪಾಡುತ್ತಿದೆ ಅಂದರೆ ತಪ್ಪಾಗಲಾರದು. ಬೆಳಕು ಅಂದರೆ ಶಕ್ತಿಯ ಮೂಲ, ಜ್ಞಾನದ ಆಕರ. ಅರಿವಿನ ಕೇಂದ್ರ,. ಚರಾಚರ ಪ್ರಕೃತಿಯ ವಿವಿಧ ರೂಪಗಳು ಕಾಣುವುದು ಬೆಳಕಿನ ಸಹಾಯದಿಂದ ಮಾತ್ರ ಸಾಧ್ಯವಿರುವ ಸಂಗತಿಯಾದ್ದರಿಂದ ಬೆಳಕನ್ನು ಬರಿಯ ಬೆಳಕಾಗಿ ನೋಡಲಾಗದು. ಹೊರ ಜಗತ್ತಿನ ಬೆಳಕಿಗೆ ಸಂವಾದಿಯಾಗಿ ನಮ್ಮೆಲ್ಲರೊಳಗೂ ಒಂದೊಂದು ಬೆಳಕಿನ ಗಣಿಯೇ ಇದೆ. ಆದರೆ ಆ ಗಣಿಯನ್ನು ಬಗೆದು ಒಳಗಿನ ಖನಿಜವನ್ನೆತ್ತಿ ತರುವುದು ಹಾಗೆ ತಂದ ಖನಿಜವನ್ನು ಶೋಧಿಸಿ, ಕಾಯಿಸಿ, ಲೋಹವನ್ನಾಗಿ ಪರಿವರ್ತಿಸಿ ಇಷ್ಟ ದೇವತೆಯ ವಿಗ್ರಹವನ್ನಾಗಿ ಕಟೆದು ನಿಲ್ಲಿಸುವುದು ಅಷ್ಟೇನೂ ಸುಲಭಕ್ಕೆ ದಕ್ಕದ ಸಂಗತಿ. ನಮ್ಮೊಳಗಿರುವ ವಿವೇಕವೆಂಬ ಬತ್ತಿಯನ್ನು ಅರಿವಿನ ತೈಲದೊಂದಿಗೆ ಸಮ್ಮೇಳಿಸಿ ಜ್ಞಾನದ ಬೆಳಕನ್ನು ಪಡೆಯಬಹುದೆಂದು ಸಮರ್ಥ ರಾಮದಾಸರು ಹೇಳಿದ್ದಾರೆ. ವಿವೇಕವೆಂಬ ಸಾಕ್ಷಿಪ್ರಜ್ಞೆ ಬೆಳಕನ್ನು ಮಂಕಾಗದಂತೆ ಕಾಯುವ ತವನಿಧಿ. ಬೆಳಕು ನಂದಿಹೋಗಿ ಕತ್ತಲಾವರಿಸದಂತೆ ಕಾಪಾಡಿಕೊಳ್ಳಬೇಕಾದ ನಿರಂತರ ಎಚ್ಚರ ಎಂಬ ಜವಾಬ್ದಾರಿ ನಮ್ಮೆಲ್ಲರದು. ನಮ್ಮೊಳಗಿನ ವ್ಯಕ್ತಿಗೆ ವ್ಯಕ್ತಿತ್ವ ಲಭಿಸಬೇಕಾದರೆ ನೈತಿಕ ವಿಕಸನವೆಂಬ ಬೆಳಕಿನ ಅನಿವಾರ್ಯತೆ ಇದ್ದೇ ಇದೆ.

ಭೂಮಿಯ ಮೇಲಿನ ಸಕಲ ಜೀವಾತ್ಮ ಕೋಟಿಗಳಿಗೆ ಸೂರ್ಯನೇ ಆದಿಮೂಲವಾಗಿದ್ದಾನೆ. ವೈಜ್ಞಾನಿಕವಾಗಿಯೂ ಸೂರ್ಯನೇ ಈ ಲೋಕದ ಸಕಲ ಭೌತಿಕ, ಜೈವಿಕ, ಮಾನಸಿಕ ಚಟುವಟಿಕೆಗಳ ಪ್ರೇರಕ ಶಕ್ತಿಯಾಗಿದ್ದಾನೆ, ಪೋಷಕನಾಗಿದ್ದಾನೆ, ನಿಯಂತ್ರಕನೂ ಆಗಿ ಕಾಪಾಡುತ್ತಿದ್ದಾನೆ. ದ್ಯುತಿ ಸಂಷ್ಲೇಷಣೆಯ ಮೂಲಕ ಜೈವಿಕ ಚಟುವಟಿಕೆಗಳಿಗೆ ಪ್ರೇರಕ ಶಕ್ತಿಯಾಗಿರುವುದರ ಜೊತೆ ಜೊತೆಗೇ ನೀರು-ಆವಿ-ಮೋಡ-ಮಳೆಗಳ ಜಲಚಕ್ರವನ್ನು ಯಶಸ್ವಿಯಾಗಿ, ನಿರಂತರವಾಗಿ, ಬೇಸರಿಸದೇ ಮಾಡುತ್ತಿರುವವನೇ ಸೂರ್ಯನಾರಾಯಣ. ಹಾಗೆಂದೇ ಸಂಧ್ಯಾ ಸಮಯದಲ್ಲಿ ಅರ್ಘ್ಯವನ್ನು ನೀಡುವುದರ ಮೂಲಕ ನಮ್ಮ ಹಿರಿಯರು ಸೂರ್ಯನಿಗೆ ಸದಾ ಕೃತಜ್ಞತೆಯನ್ನು ಸೂಚಿಸುತ್ತಿದ್ದರು. ದಿನ,ರಾತ್ರಿ,ವಾರ,ಪಕ್ಷ,ಮಾಸ,ಸಂವತ್ಸರಗಳ ನಿಲ್ಲದ ಗಡಿಯಾರದ ಮೂಲ ಶಕ್ತಿ ಸೂರ್ಯನೆಂಬ ಬೆಳಕೇ ಆಗಿದೆ. ಸೂರ್ಯುನು ಸ್ಥಾವg. ಜಂಗಮ ಸ್ವರೂಪವಾದ ಸಮಸ್ತ ಜಗತ್ತಿನ ಆತ್ಮವೇ ಅವನಾಗಿದ್ದಾನೆ.

ಬೆಳಕೆಂದರೆ ಬದುಕು. ಕತ್ತಲೆಂದರೆ ಸಾವು. ಬದುಕಿನಲ್ಲಿ ಕತ್ತಲು ಅನಿವಾರ್ಯ. ಕತ್ತಲ ಬಿಡುಗಡೆಗೆ ಬೆಳಕೊಂದೇ ಆಧಾರ. ಹಾಗಾಗಿಯೆ ಕವಿ ಹಾಡಿಯೇ ಹಾಡುತ್ತಾನೆ- ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು... ... ...

ಕಾಮೆಂಟ್‌ಗಳಿಲ್ಲ: