ಒಟ್ಟು ಪುಟವೀಕ್ಷಣೆಗಳು

ಶುಕ್ರವಾರ, ಏಪ್ರಿಲ್ 16, 2010

ದೇಹವೆಂಬ ದೇವಾಲಯ

‘ದೇಹೋ ದೇವಾಲಯಃ ಪ್ರೋಕ್ತೋ, ಜೀವೋ ಹಂಸಃ ಸನಾತನಃ
ತ್ಯಜೇದಜ್ಞಾನ ನಿರ್ಮಾಲ್ಯಂ ಸೋಹಂ ಭಾವೇನ ಪೂಜಯೇತ್.’

ನಮ್ಮ ಹಿರಿಯರು ಕಂಡುಕೊಂಡಿದ್ದ ಆತ್ಮಾರಾಧನೆಯನ್ನು ವಿವರಿಸುವ ಈ ಶ್ಲೋಕ ದೇಹವನ್ನೇ ದೇವಾಲಯವೆಂದು ಭಾವಿಸು ಎಂದು ಹೇಳುತ್ತದೆ. ದೇಹವೆಂಬ ದೇವಾಲಯದಲ್ಲಿ ನೆಲೆಗೊಂಡಿರುವ ಜೀವಾತ್ಮವೆಂಬ ಹಂಸವೇ ಭಗವಂತ ಸ್ವರೂಪಿ. ಅಜ್ಞಾನವೆಂಬ ನಿರ್ಮಾಲ್ಯವನ್ನು ತೆಗೆದುಹಾಕಿ ಅವನೇ ನಾನೆಂಬ ಭಾವದಿಂದ ಪೂಜಿಸಬೇಕು ಎನ್ನುವುದು ತಾತ್ಪರ್ಯ.

ಬಸವಣ್ಣ ಹೇಳಿದ ಉಳ್ಳವರು ಶಿವಾಲಯ ಮಾಡುವರು, ನಾನೇನು ಮಾಡಲಿ ಬಡವನಯ್ಯಾ ಎಂಬುದು ಕೂಡ ದೇಹವನ್ನೇ ದೇವಾಲಯವೆಂದು ಬಣ್ಣಿಸಿದ ಒಂದು ವಚನ. ಶಿರವನ್ನು ಹೊನ್ನ ಕಳಸವೆಂದು ಪರಿಭಾವಿಸಿ ಶರೀರವನ್ನು ದೈವ ಪ್ರಭೆಯ ಪ್ರತೀಕವೆಂದು ಭಾವಿಸುವುದು ಉದಾತ್ತ ದೃಷ್ಟಿಕೋನ. ಮೂರು ದಿನ ಬದುಕಿ ಮಣ್ಣ ಪಾಲಾಗುವ ಈ ದೇಹವನ್ನು ಭಗವಂತನ ಆವಾಸ ಸ್ಥಾನವೆಂಬ ಔನ್ನತ್ಯಕ್ಕೇರಿಸುವುದು ಜೀವನ್ಮುಖಿ ಪರಿಕಲ್ಪನೆ ಮತ್ತು ಅದ್ವೈತ ದರ್ಶನದ ಸಹಜ ತಾತ್ಪರ್ಯವೂ ಆಗಿದೆ.

ಹೀಗೆ ದೇಹಕ್ಕೊಂದು ದೇವಾಲಯದ ಕಲ್ಪನೆಯನ್ನಿರಿಸಿಕೊಂಡು, ಅದನ್ನೊಂದು ಆರಾಧನಾ ಮಂದಿರವನ್ನಾಗಿ ಪರಿಭಾವಿಸುವುದು ಮೋಹದ ಜೊತೆಗೇ ಮಮಕಾರವನ್ನೂ ಉಳಿಸುತ್ತದೆ ಎನ್ನುವವರೂ ಇದ್ದಾರೆ. ಆದರೆ ದೇಹವನ್ನೆ ದೇಗುಲವನ್ನಾಗಿ ಪರಿಭಾವಿಸುವವನು ತನ್ನ ಕರ್ತವ್ಯದ ಅರಿವನ್ನೂ ಕಾಣುತ್ತಾನೆ. ಕೇವಲ ದೈಹಿಕ ಸ್ತರದಲ್ಲೇ ಬದುಕಲಾರದ ಮನುಷ್ಯ ಮನಸ್ಸೆಂಬ ಸೇತುವೆಯನ್ನೂ ಈ ದೇಹದೊಂದಿಗೇ ಕಲ್ಪಿಸಿಕೊಂಡಿದ್ದಾನೆ. ಒಬ್ಬರ ಬದುಕಿನುದ್ದಕ್ಕೂ ಚೈತನ್ಯದ ಆಶ್ರಯ ಸ್ಥಾನವಾದ ದೇಹವು ಅದನ್ನು ನಿಯಂತ್ರಿಸುವ ಬುದ್ಧಿ ಮತ್ತು ಶರೀರದ ಕ್ರಿಯೆಗಳಿಗೆ ಭಾವಸ್ಪಂದನದವೊದಗಿಸುವ ಮನಸ್ಸಿಗೂ ಆಧಾರವಾಗಿರುವುದನ್ನು ಗಮನಿಸಬೇಕು. ಹಾಗಾಗಿಯೇ ದೇಹ-ಮನಸ್ಸು-ಬುದ್ಧಿ ಭಾವಗಳ ಸಮ್ಮಿಲನವನ್ನು ದೇಗುಲವೆನ್ನಲೇ ಬೇಕಾಗುತ್ತದೆ. ಈ ದೇವಾಲಯ ಒಂದು ಪೂಜಾಮಂದಿರವಾಗಬೇಕೆಂದರೆ ಅಲ್ಲಿಯೂ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯಗಳ ಶೃಂಗವಾಗಲೇಬೇಕು. ಮನಸ್ಸು ಮತ್ತು ಶರೀರಗಳ ಹತೋಟಿ ಇದ್ದಲ್ಲಿ ಮಾತ್ರ ಲೌಕಿಕದ ಬದುಕೂ ಸಹನೀಯವಾಗಿರುತ್ತದೆ ಇಲ್ಲದೆ ಹೋದರೆ ಅದು ನರಕಸದೃಶವಾಗುತ್ತದೆ, ಪಾಪ ಯಾತ್ರೆಯ ಅಂಕಿತವಾಗುತ್ತದೆ.

ದೈಹಿಕ ಆರೋಗ್ಯ ಮತ್ತು ಮಾನಸಿಕ ಸೌಖ್ಯ ನಮ್ಮ ಅಸ್ತಿತ್ವವನ್ನು ತೋರ್ಪಡಿಸಲು ಅಗತ್ಯವಾಗಿ ಬೇಕಾದ ಮೂಲದ್ರವ್ಯಗಳಾಗಿವೆ. ಅಂದರೆ ದೈಹಿಕ ಆರೋಗ್ಯದ ಜೊತೆಜೊತೆಗೇ ಮಾನಸಿಕ ಸ್ವಾಸ್ಥ್ಯವೂ ದೇಹವನ್ನು ದೇಗುಲವನ್ನಾಗಿಸಿಕೊಳ್ಳಲು ಸಹಕರಿಯಾದ ಅಂಶವಾಗಿದೆ. ಯಾವಾಗ ಮನುಷ್ಯ ಸಮಂಜಸವಾಗಿ ಬುದ್ಧಿ ಭಾವಗಳನ್ನೂ, ದೈಹಿಕ ಕಾಮನೆಗಳನ್ನೂ ನಿಯಂತ್ರಿಸುವುದನ್ನು ಮರೆಯುತ್ತಾನೆಯೋ, ಆ ಕ್ಷಣದಿಂದಲೇ ದೇಹ ದೇಗುಲವು ಕುಸಿಯಲು ಪ್ರಾರಂಭವಾಗುತ್ತದೆ. ಆಹಾರ, ಪಾನೀಯ, ಜೀವನ ಶೈಲಿಗಳಲ್ಲಿ ಸ್ವೇಚ್ಛೆಯ ಕೈ ಮೇಲಾದರೆ ಮೈ ಮನಸ್ಸುಗಳ ಆರೋಗ್ಯ ಕೆಡುತ್ತದೆ. ಬದುಕು ಅಸಹನೀಯವಾಗುತ್ತದೆ.

ಶಿವಾಲಯವಾಗಬೇಕಿದ್ದ ದೇಹ ಶವಾಲಯ ಸೇರಿಸುವ ಲೌಕಿಕದ ಆಕರ್ಷಣೆಗಳನ್ನು ಮೀರಿ ನಿಲ್ಲುವ ತಾಕತ್ತು ಸುಲಭವಾಗಿ ಸಿಗುವಂಥಹುದೇನೂ ಅಲ್ಲ. ಅದೂ ಒಂದು ತಪಸ್ಸು. ದೇಹ ಮನಸ್ಸುಗಳ ಮೇಲಣ ಸುಲಭಕ್ಕೆ ದಕ್ಕದ ನಿರಂತರ ಗೆಲುವು ಅದು.

ಇಂದ್ರಿಯಗಳ ದಾಸನಾಗದೇ ರಾಗದ್ವೇಷಗಳನ್ನು ನಿಯಂತ್ರಿಸಿದರೆ ಮನಸ್ಸಿಗೆ ಕ್ಲೇಷವೊದಗದೇ ಅಂತಃಕರಣ ಶುದ್ಧಿ ಸಾಧ್ಯವಾಗುತ್ತದೆ ಎನ್ನುತ್ತದೆ ಭಗವದ್ಗೀತೆ. ಶರೀರ ಮತ್ತು ಬುದ್ಧಿ ಮನಸ್ಸುಗಳ ಮೇಲೆ ನಿಯಂತ್ರಣ ಸಾಧಿಸಿ, ದೇಹವನ್ನು ಕಾಯಕಕ್ಕೆ ಸಮರ್ಪಿಸಿಕೊಂಡರೆ ಮುಕ್ತಿ ಸಿಗುತ್ತದೆ ಎನ್ನುತ್ತದೆ ಕರ್ಮಯೋಗ. ಹೀಗೆ ತಮ್ಮ ದೇಹದ ಮೇಲೆ ಸ್ವನಿಯಂತ್ರಣ ಹೇರಿಕೊಂಡು, ಬುದ್ಧಿ ಭಾವಗಳನ್ನು ಮನಸ್ಸನ್ನೂ ಅಂಕಿತದಲಿಟ್ಟುಕೊಂಡವರ ದೇಹ ದೇಗುಲವೇ ಆಗುತ್ತದೆ. ಅವರಿಗೆ ಅಲ್ಲೆಲ್ಲೋ ಇರುವ ಶಿವಾಲಯಕ್ಕಿಂತಲೂ ತಮ್ಮೊಳಗಿರುವ ಅಂತರಾತ್ಮವೇ ದೇವರಾಗಿ ಕಾಣುತ್ತದೆ. ಅಂಥವರು ಹೊರಗಣ ಬಯಲಿಗೆ ಹೋಗದೆಯೂ ಒಡಲಲ್ಲೆ ಗುಡಿಯನ್ನು ಕಾಣುತ್ತಾರೆ. ಅಂಥವರು ಅಳಿಯುವ ಸ್ಥಾವರಕ್ಕಿಂತಲೂ ಮುಖ್ಯವಾದ ಜಂಗಮ ದೇಗುಲದ ಒಡೆಯರಾಗುತ್ತಾರೆ. ಅಂಥವರಿಗಷ್ಟೇ ದೇಹೋ ದೇವಾಲಯಃ ಪ್ರೋಕ್ತೋ ಎನ್ನುವ ಶ್ಲೋಕದ ಅಂತರಾರ್ಥ ತಿಳಿಯುತ್ತದೆ.

ಬುಧವಾರ, ಏಪ್ರಿಲ್ 14, 2010

ಸಂಚಲನ ಹುಟ್ಟಿಸಿದ ಶಿವಸಂಚಾರದ ನಾಟಕಗಳು

ಕಳೆದ ಹದಿಮೂರು ವರ್ಷಗಳಿಂದ, ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಕನಸು ನನಸು ಮಾಡಲು ಖ್ಯಾತ ರಂಗಕರ್ಮಿಗಳ ಸಹಕಾರದಿಂದ ಹೊಸ ಹೊಸ ನಾಟಕಗಳನ್ನು , ತಂಡಗಳನ್ನು ತಯಾರು ಮಾಡಿ ಆ ನಾಟಕಗಳನ್ನು ನಾಡಿನಾದ್ಯಂತ ಪ್ರದರ್ಶಿಸುತ್ತಿರುವ ‘ಶಿವಸಂಚಾರ’ ರಾಜ್ಯದ ಮುಖ್ಯ ರಂಗ ರೆಪರ್ಟರಿಗಳಲ್ಲೊಂದು. ನೀನಾಸಂ ಮತ್ತು ಶಿವಸಂಚಾರ ತಂಡಗಳು ಕನ್ನಡ ರಂಗಭೂಮಿಯ ಹೊಸ ಆವಿಷ್ಕಾರಗಳನ್ನು ಪ್ರಯೋಗಗಳನ್ನು ಗ್ರಾಮೀಣ ಜನತೆಗೂ ತಿರುಗಾಟದ ಹೆಸರಲ್ಲಿ ಸಿಗುವಂತೆ ಮಾಡಿರುವುದು ಶ್ಲಾಘನೀಯ ಕೆಲಸವೇ ಆಗಿದೆ. ಇಂಥದೇ ಪ್ರಯತ್ನಗಳನ್ನು ಈ ಹಿಂದೆ ಮಾಡಿದ್ದ ಕೊಡಗು ರಂಗ ಮತ್ತು ಧೃವ ರಂಗಗಳು ಹಾಗೇ ತುಮರಿಯ ಕಿನ್ನರ ತಂಡಗಳ ಪ್ರಯತ್ನಗಳನ್ನೂ ನೆನಪಿಸಿಕೊಳ್ಳಲೇಬೇಕು.

ಸಾಂಸ್ಕೃತಿಕ ಚಟುವಟಿಕೆಗಳಿಲ್ಲದ ಸಣ್ಣ ಊರುಗಳಲ್ಲಿ ಟೀವಿಯೊಂದೇ ಸುಲಭ ಮನರಂಜನಾ ಮಾಧ್ಯಮವಾಗಿರುವ ಕಾರಣ ಅಂಥ ಊರುಗಳಲ್ಲಿರುವ ಸಾಹಿತ್ಯ ಸಾಂಸ್ಕೃತಿಕಾಸಕ್ತರು ಇಂಥ ತಂಡಗಳ ಬರವನ್ನೇ ಕಾಯುತ್ತಿರುತ್ತಾರೆ. ಅರಸೀಕೆರೆಯ ಶ್ರೀ ಶಿವಕುಮಾರ ಬಳಗ ಮತ್ತು ತರಳಬಾಳು ಯುವ ವೇದಿಕೆಗಳ ಸಂಯುಕ್ತಾಶ್ರಯದಲ್ಲಿ ಹೊಯ್ಸಳೇಶ್ವರ ಕಾಲೇಜಿನಲ್ಲಿ ನಡೆದ ಮೂರುದಿನಗಳ ನಾಟಕೋತ್ಸವ ‘ಶಿವಸಂಚಾರ’ ೨೦೦೯ರ ನಾಟಕಗಳನ್ನು ಆಸಕ್ತರಿಗೆ ಪ್ರದರ್ಶಿಸಿತು.

ಪ್ರತಿವರ್ಷ ಒಂದು ನಿರ್ದಿಷ್ಟ ವಿಷಯದಲ್ಲಿ ನಾಟಕಗಳನ್ನು ಆಯ್ದು ಅವನ್ನು ಖ್ಯಾತನಾಮರಿಂದ ನಿರ್ಮಿಸುವ ‘ಶಿವಸಂಚಾರ’ದ ಈ ವರ್ಷದ ಆಶಯ ‘ಸ್ವಾತಂತ್ರ್ಯ- ಸಮಾನತೆಯತ್ತ’ ಪರಿಕಲ್ಪನೆಯಲ್ಲಿ ಉರ್ದು ನಾಟಕಕಾರ ಆಗಾ ಹಶ್ರ ಕಶ್ಮೀರಿಯವರ ಯಹೂದಿ ಕೀ ಲಡ್ಕೀ ಆಧರಿಸಿದ ‘ಯಹೂದಿ ಹುಡುಗಿ’ (ಸವಿತಾ, ಬೆಂಗಳೂರು) ಇಟಲಿಯ ನೋಬಲ್ ಪ್ರಶಸ್ತಿ ವಿಜೇತ ದಾರಿಯೋ ಫೋನ can’t pay, won’t pay ಆಧರಿಸಿದ ‘ಕೊಡಲ್ಲ ಕೊಡಕ್ಕಿರಲ್ಲ’(ಮಲ್ಲಿಕಾ ಪ್ರಸಾದ್) ಹಾಗೂ ನಲವಡಿ ಶ್ರೀಕಂಠ ಶಾಸ್ತ್ರಿಗಳ ಮೂಲ ರಂಗನಾಟಕ ಆಧರಿಸಿದ ‘ಹೇಮರೆಡ್ಡಿ ಮಲ್ಲಮ್ಮ’,(ಭಾಗೀರಥಿ ಬಾಯಿ ಕದಂ) ನಾಟಕಗಳನ್ನು ನಿರ್ಮಿಸಿದೆ. ಮಹಿಳಾ ಕೇಂದ್ರಿತ ವಸ್ತು ಹೊಂದಿರುವ ಈ ಮೂರೂ ನಾಟಕಗಳ ನಿರ್ದೇಶಕರು ಮಹಿಳೆಯರೇ ಆಗಿರುವುದು ವಿಶೇಷ.

ಧರ್ಮಾಂಧತೆ, ಹಿಂಸೆ, ಕ್ರೌರ್ಯ, ಅಹಂಕಾರ, ಅಟ್ಟಹಾಸಗಳೇ ಈ ಹೊತ್ತಿನ ವರ್ತಮಾನವನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳಾಗಿರುವಾಗ ಅವೆಲ್ಲವನ್ನೂ ಮೀರಿಸುವ ಗಂಡು ಹೆಣ್ಣಿನ ನಡುವಣ ಪ್ರೀತಿ, ಮತ್ತು ಸಹಜ ಮಾನವೀಯ ಮೌಲ್ಯದ ಶ್ರೇಷ್ಠತೆಯನ್ನು ಎತ್ತಿ ತೋರಿಸುವ ಮನೋಜ್ಞ ನಾಟಕ ‘ಯಹೂದಿ ಹುಡುಗಿ’. ಪ್ರೀತಿಯ ನಡುವೆ ಅಡ್ಡ ನಿಲ್ಲುವ ಧರ್ಮದ ಕೃತಕ ಗೋಡೆ ಕ್ರಮೇಣ ನಾಶವಾಗುವ ರೀತಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ರಂಗದ ಮೇಲೆ ತರಲಾಗಿದೆ. ಉರ್ದುವಿನ ಮೂಲ ನಾಟಕವು ಶಾಯಿರಿಯ ಕವಿ ಇಟಗಿ ಈರಣ್ಣನವರ ಪ್ರಾಸ ಬದ್ಧ ಸಂಭಾಷಣೆ ಮತ್ತು ಅವರ ಕುಸುರಿ ಕೆಲಸದಿಂದ ಹೊಸ ರೂಪು ತಳೆದಿದೆ. ಸಂಭಾಷಣೆಯ ಬಿಗಿ ಬಂಧ, ಶಾಯಿರಿಗಳ ಸಮಯೋಚಿತ ಬಳಕೆ ನಾಟಕದ ವಿಶೇಷತೆ ಹೆಚ್ಚಿಸಿವೆ. ಕೊನೆವರೆಗೂ ಕುತೂಹಲವನ್ನು ಕಾಯ್ದುಕೊಳ್ಳುವ ಕತೆಯ ಅಂತ್ಯ ನೋಡುಗರನ್ನು ವಾಸ್ತವದತ್ತ ಆಲೋಚಿಸಲು ಪ್ರೇರೇಪಿಸುತ್ತದೆ.

ಮೇಲು ನೋಟಕ್ಕೆ ಒಬ್ಬ ಕರ್ಮಠ ಯಹೂದಿಯಂತೆ ತೋರುವ ಅಜರಾನ ಕಲ್ಲು ಹೃದಯವು, ಅನ್ಯ ಧರ್ಮದ ಹಾಗೂ ತನ್ನ ಹೆಂಡತಿ- ಮಗುವನ್ನು ಕೊಂದ ವೈರಿಯ ಮಗು ಬೆಂಕಿಯಲ್ಲಿ ಬೆಂದು ಹೋಗಲಿರುವುದನ್ನು ನೋಡುತ್ತಿದ್ದಂತೆ, ಕರಗಿ ಹೋಗಿ ಆ ಮಗುವನ್ನೇ ನಜರಾ ರಕ್ಷಿಸಿ, ಪೋಷಿಸಿ ತನ್ನ ಸಾಕು ಮಗಳಾಗಿ (ರಾಹೀಲ್) ಬೆಳೆಸಿದ ರೀತಿಯು, ಹುಸಿ ಧರ್ಮಕ್ಕಿಂತ ಮನುಷ್ಯ ಪ್ರೀತಿ ದೊಡ್ಡದು ಎಂಬುದನ್ನು ಸಾಬೀತುಪಡಿಸುತ್ತದೆ. ಅಜರಾ, ಮಾರ್ಕಸ್ ಆಗಿ ಅರುಣ್ ಜಿ ಚಿಕ್ಕಾನಂಗಲ ಮತ್ತು ದಿನೇಶ್ ಚಮ್ಮಾಳಿಗೆ ಅವರ ಅಭಿನಯ ಬಹುಕಾಲ ಮನಸ್ಸಲ್ಲುಳಿಯುತ್ತದೆ.

‘ಕೊಡಲ್ಲ ಕೊಡಕ್ಕಿರಲ್ಲ’ ಮೇಲು ನೋಟಕ್ಕೆ ಪ್ರಹಸನವಾಗಿ ಕಾಣುವ ಅಸಂಗತ ನಾಟಕದಂತೆ ಕಂಡರೂ ಈ ಹೊತ್ತಿನ ಅರಾಜಕ ಜಾಗತೀಕರಣದ ಗೊದಲಗಳನ್ನು ಬಿಂಬಿಸಿದ ಪ್ರಸ್ತುತ ಸಮಾಜದ ಪ್ರತಿಬಿಂಬವೆಂದೇ ಭಾವಿಸಬೇಕು.

ನಿರುದ್ಯೋಗ, ನಗರದ ಆಕರ್ಷಣೆ ಮತ್ತು ಹಸಿವಿನ ಮುಂದೆ ಆದರ್ಶಗಳು ಹೇಗೆ ಮೂಲೆಗುಂಪಾಗುತ್ತವೆ, ಜನಸಾಮಾನ್ಯರ ಬದುಕು ಯಾಕೆ ಮೂರಾಬಟ್ಟೆಯಾಗುತ್ತದೆಂಬುದನ್ನು ಸಮರ್ಥವಾಗಲ್ಲದಿದ್ದರೂ ಚೋದ್ಯವಾಗಿ ನಾಟಕ ದ್ವನಿಸುತ್ತದೆ. ಶ್ರಮಿಕ ವರ್ಗದ ಹೋರಾಟದ ಎಳೆಗಳನ್ನು ಬಿಚ್ಚಿಡುತ್ತಲೇ ವಾಸ್ತವವನ್ನು ವಿಡಂಬಿಸುತ್ತಲೇ ಹೊಟ್ಟೆ ಹುಣ್ಣಾಗುವಂತೆ ನಗಿಸುವ ಶಕ್ತಿಯನ್ನೂ ಇಟ್ಟುಕೊಂಡಿರುವುದು ಇದರ ವೈಶಿಷ್ಟ್ಯ. ಅಭಿಜಾತ ಕಲಾವಿದ ಚಾರ್ಲಿ ಚಾಪ್ಲಿನ್‌ನನ್ನು ನೆನಪಿಸುವಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಪಾತ್ರಧಾರಿ ಅರುಣ್ ಜಿ. ಚಿಕ್ಕಾನಂಗಲ ಸಶಕ್ತರಗಿದ್ದಾರೆ. ಹಾಗೂ ಧಾರಾಳವಾಗಿ ನಗೆ ಬುಗ್ಗೆ ಚಿಮ್ಮಿಸುತ್ತಾರೆ. ಪೊಲೀಸ್ ಬಟ್ಟೆ ಧರಿಸುವಾಗ, ಕದ್ದು ತಂದ ವಸ್ತುಗಳನ್ನು ಗರ್ಭಿಣಿ ಹೆಂಗಸಿನ ಹೊಟ್ಟೆಯಿಂದ ಹೊರ ತೆಗೆಯುವಾಗ ಪ್ರೇಕ್ಷಕರು ಬಿದ್ದುಬಿದ್ದು ನಗುತ್ತಾರೆ. ರಂಗಸಜ್ಜಿಕೆ ಗಮನ ಸೆಳೆಯುತ್ತದೆ. ನಿರ್ದೇಶಕರು ಜಾಗತೀಕರಣದ ಪ್ರಭಾವದಿಂದ ಈಗಾಗಲೇ ಕಾರ್ಖಾನೆಗಳು ಮುಚ್ಚಿಹೋಗಿರುವುದನ್ನು, ಸಾಮಾನ್ಯ ಜನತೆ ಆದರ್ಶ ಮೌಲ್ಯಗಳನ್ನು ಸಿನಿಮಾ ನಾಟಕಗಳಲ್ಲಷ್ಟೇ ನೋಡಬಯಸುವುದನ್ನೂ ಗಮನಿಸದ ಕಾರಣ ಅಸಂಗತವಾಗಿ ಮುಕ್ತಾಯವಾಗುತ್ತದೆ. ಈ ಬಗೆಯ ನಾಟಕಗಳನ್ನು ಗ್ರಾಮಾಂತರದ ಮಂದಿ ಅಷ್ಟಾಗಿ ಇಷ್ಟಪಡುವುದಿಲ್ಲ ಎಂಬ ಅಂಶವನ್ನೂ ತಂಡ ಅರಿಯಬೇಕಿದೆ. ಅಲ್ಲದೇ ಅಗತ್ಯವಿಲ್ಲದೆಯೂ ಅಶ್ಲೀಲ ಸಂಭಾಷಣೆ ಸೇರಿಸಿದ ಉದ್ದೇಶವೂ ಅರ್ಥವಾಗುವುದಿಲ್ಲ.

ಜನಪ್ರಿಯ ಕಂಪೆನಿ ನಾಟಕವಾದ ‘ಹೇಮರೆಡ್ಡಿ ಮಲ್ಲಮ್ಮ’ ಹಳ್ಳಿಯ ಅವಿಭಕ್ತ ಕುಟುಂಬದ ಕಷ್ಟ ಕೋಟಲೆಗಳ ನಡುವೆಯೇ, ಜೀವಸೆಲೆ ಉಕ್ಕಿಸಿ ಅಧ್ಯಾತ್ಮದ ಔನ್ನತ್ಯದಲ್ಲಿ ಪರ್ಯವಸಾನಗೊಳ್ಳುವ ಕೃತಿ. ಅಸ್ಸಾಂ ಮತ್ತು ಕನ್ನಡ ರಂಗಭೂಮಿಗಳ ನಡುವೆ ಸೇತುವೆಯಾಗಿರುವ ಭಾಗೀರಥಿ ಬಾಯಿ ಕದಂ ಅವರ ನಿರ್ದೇಶನದಲ್ಲಿ ಈ ಹಳೆಯ ರಂಗ ನಾಟಕ ಹೊಸುಹುಟ್ಟು ಪಡೆದಿದೆ. ಪ್ರಬುದ್ಧ ಅಭಿನಯ, ಸುಶ್ರಾವ್ಯ ಸಂಗೀತ, ಉತ್ತಮ ಬೆಳಕಿನ ಸಂಯೋಜನೆ ನಾಟಕದ ಯಶಸ್ಸಿಗೆ ಕಾರಣವಾಗಿವೆ. ಅರೆಬರೆ ತಿಳುವಳಿಕೆಯ ಹೇಮರೆಡ್ಡಿಯಾಗಿ ಅಮೋಘ ಬಿರಾದಾರ್ ಅಭಿನಯ ಮನಸೆಳೆಯುತ್ತದೆ.

ನಾಟಕದ ಕ್ಲೈಮ್ಯಾಕ್ಸ್‌ನಲ್ಲಿ ಆಧ್ಯಾತ್ಮದತ್ತ ವಾಲುವ ವೇಮಣ್ಣನ ಪಾತ್ರಕ್ಕೆ ಜೀವನ ನೀನಾಸಂ ಕಾಯಕಲ್ಪ ತುಂಬಿ ನಟಿಸುತ್ತಾರೆ. ಮಲ್ಲಮ್ಮ ಹಾಗೂ ಮಲ್ಲಯ್ಯನ ಪಾತ್ರಧಾರಿಗಳಾದ ವಿ. ಲಕ್ಷ್ಮಿ ಹಾಗೂ ದಿನೇಶ ಚಮ್ಮಾಳಿಗೆ ಬಹುಕಾಲ ಮನಸ್ಸಲ್ಲುಳಿಯುತ್ತಾರೆ. ಮನ ಸೆಳೆಯುವ ಸಂಗೀತಕ್ಕೆ ವಚನಗಳನ್ನು ಬಳಸಿಕೊಂಡಿರುವುದು ಸಮಯೋಚಿತವಗಿ ಬಳಸಿಕೊಂಡಿರುವ ನಿರ್ದೇಶಕರ ಪ್ರಯತ್ನ ಯಶಸ್ವಿಯೂ ಆಗಿದೆ. (ಗುರುವಾದೊಡೆ ಕಾಯಕದಿಂದಲೇ ಜೀವನ್ಮುಕ್ತಿ ಇತ್ಯಾದಿ). ಸಿದ್ಧವೀರಿಯ ಪಾತ್ರಧಾರಿ ಅದೇಕೆ ಸಂಭಾಷಣೆಯನ್ನು ಅವಸರಕ್ಕೆ ಬಿದ್ದಂತೆ ಒಪ್ಪಿಸುತ್ತಾರೋ (ಎಲ್ಲ ಪ್ರದರ್ಶನಗಳ ಅವರ ಎಲ್ಲ ಪಾತ್ರಗಳೂ ಹೀಗೆ ಅವಸರದಲ್ಲೇ ಇದ್ದವು) ಸಂಚಾಲಕರೇ ಉತ್ತರ ಹೇಳಬೇಕು.

ಟೀವಿಯ ಧಾರಾವಾಹಿಗಳಿಂದ ಮೂರು ದಿನ ಮುಕ್ತಿ ಕೊಟ್ಟು ನಮ್ಮೆಲ್ಲರನ್ನೂ ಕಾಡುತ್ತಿರುವ ವರ್ತಮಾನದ ಬೇಗುದಿಗೆ ಸಹಜ ಉತ್ತರವನ್ನೀಯುವ ‘ಶಿವಸಂಚಾರ’ ತಂಡ ಹೀಗೆ ಊರೂರುಗಳಲ್ಲಿ ಭರವಸೆಯ ಬೆಳಕು ಮೂಡಿಸಿದರೆ ಪಂಡಿತಾರಾಧ್ಯರ ಕನಸು ನನಸಾದೀತು, ಅನುಭವ ಮಂಟಪದ ಮೂಲ ಉದ್ದೇಶವೂ ಈಡೇರೀತು.