ಒಟ್ಟು ಪುಟವೀಕ್ಷಣೆಗಳು

ಗುರುವಾರ, ಜುಲೈ 22, 2010

ಕಡಲ ತುಂಬಾ ಅವಿಶ್ರಾಂತ ಅಲೆಗಳು-

ಈ ಕಡಲ ತುಂಬ ಅವಿಶ್ರಾಂತ ಅಲೆಗಳು. . . . . .

‘ಕಡಲಿಗೆಷ್ಟೊಂದು ಬಾಗಿಲು’ ರೂಪ ಹಾಸನ ಅವರ ನಲವತ್ತು ಪದ್ಯಗಳ ಮೂರನೆಯ ಸಂಕಲನ. ‘ಒಂದಷ್ಟು ಹಸಿಮಣ್ಣು’ ‘ಬಾಗಿಲಾಚೆಯ ಮೌನ’ ಸಂಕಲನಗಳಿಂದ ಸಾರಸ್ವತ ಲೋಕದ ಹೆಬ್ಬಾಗಿಲು ಬಡಿದು ಅಲ್ಲಿ ಈಗಾಗಲೇ ಪ್ರತಿಷ್ಠಾಪನೆಗೊಂಡ ಕೆಲ ಹೆಸರುಗಳಲ್ಲಿ ರೂಪ ಅವರೂ ಒಬ್ಬರು. ವಿವಿಧ ಕವಿಗೋಷ್ಠಿಗಳ ಖಾಯಂ ಹೆಸರುಗಳಲ್ಲಿ ಒಬ್ಬರಾಗಿರುವ ರೂಪ, ಪದ್ಯ ಬರೆಯುವದರ ಜೊತೆಜೊತೆಗೆ ನಾಡಿನ ಬಹುತೇಕ ಯುವ ಬರಹಗಾರರೊಂದಿಗೆ ಸಾಹಿತ್ಯಕ ಒಡನಾಟಗಳನ್ನಿಟ್ಟುಕೊಂಡಿರುವ ಕಾರಣಕ್ಕೂ ವರ್ತಮಾನದ ತವಕ ತಲ್ಲಣಗಳ ಅಭಿವ್ಯಕ್ತಿಯನ್ನು ಪದ್ಯಗಳ ಮೂಲಕ ಸಹಜವಾಗಿ ಮತ್ತು ಕೃತ್ರಿಮತೆಯಿಲ್ಲದೇ ಪ್ರದರ್ಶಿಸಬಲ್ಲರು. ಸ.ಉಷಾ, ಪ್ರತಿಭಾ, ಸುನಂದಾ ಕಡಮೆ ಮುಂತಾದವರು ಸೃಷ್ಟಿಸಿಕೊಂಡಿರುವ ಪ್ರತ್ಯೇಕ ಲೋಕ ರೂಪ ಅವರ ಜಗತ್ತಿಗೆ ಹತ್ತಿರದ್ದು. ಅಂದರೆ ‘ಮಹಿಳೆ’ ಎಂಬ ಮೀಸಲಾತಿ ಬೇಡದೇ ಸಹಜ ಕವಿತೆಗಳನ್ನು ಅನುದಿನದ ವರ್ತಮಾನದ ಪಲುಕುಗಳಿಂದ ಆಯ್ದು ಪೋಣಿಸುವ ಕೆಲಸ ಇಲ್ಲೂ ಮುಂದುವರೆದಿದೆ.
ರೂಪಕಗಳನ್ನು ಗೃಹೀತದ ಅಡುಗೆಮನೆಯಿಂದಲೇ ನೇರ ತಂದು ಮುಂದಿಟ್ಟುಬಿಡುವುದು ಇವರಿಗೆ ಸಿದ್ಧಿಸಿದೆ. ದೋಸೆ, ಹಂಚು, ಸೂಜಿ, ಮಸಾಲೆ ಡಬ್ಬಿಗಳನ್ನೇ ತಮ್ಮ ರೂಪಕಗಳನ್ನಾಗಿ ಹಿಂದಿನ ಸಂಕಲನಗಳಲ್ಲಿ ಬಳಸಿದ್ದ ಕವಯತ್ರಿ ಈ ಸಂಕಲನದಲ್ಲಿ ಬಾಗಿಲೇ ಇಲ್ಲದ ಸದಾ ತೆರೆದೇ ಇರುವ ಕಡಲಿಗೂ ಬಾಗಿಲುಗಳನ್ನಿಟ್ಟು ಆ ಬಾಗಿಲುಗಳ ಮೂಲಕ ಒಳಬರುವ-ಹೊರಹೋಗುವ ಕ್ರಿಯೆಗಳನ್ನು ಧ್ಯಾನಿಸಿದ್ದಾರೆ. ಆದರೆ ಬಾಗಿಲುಗಳನ್ನೆಂದಿಗೂ ಜೋಡಿಸಲಾಗದ ಕಡಲಿನ ಅಗಾಧತೆಗೆ ಬಾಗಿಲನ್ನಿಡುವುದರ ಮೂಲಕ ಬೇರೆಯದೇ ಸಂದೇಶವನ್ನೇನಾದರೂ ಈಕೆ ಕೊಡಹೊರಟಿದ್ದಾರಾ ಎಂದು ಪರಿಶೀಲಿಸಬೇಕಾಗುತ್ತದೆ. ಕಡಲ ತುಂಬಿರುವ ಅವಿಶ್ರಾಂತ ಅಲೆಗಳ ಮೂಲಕವೂ ಕವಿತೆಯ ವಿದ್ಯುತ್ತನ್ನು ತಯಾರಿಸಿ ಕೊಡಬಹುದೆನ್ನುವ ಕನಸೇ ಈ ಸಂಕಲನದ ಹಿಂದಿರುವ ಕಣ್ಣಾಗಿದೆ.
‘ಕ್ಷಮಿಸಿ ಬಿಡು ಪ್ರಭುವೆ/ ನಾವು ಅವರಂತಲ್ಲ/ ಅವರಂತಿಲ್ಲದ್ದಕ್ಕೆ ಖೇದವೂ ಇಲ್ಲ’ ಎಂದು ಆರಂಭವಾಗುವ ‘ನಾವು ಅವರಂತಲ್ಲ’ ಎಂಬ ಕವಿತೆ ಉಳಿದ ಮಹಿಳೆಯರ ಕಾವ್ಯದ ಥರ ಯಥಾಪ್ರಕಾರ ಗಂಡಸರನ್ನು ಇಕ್ಕಳಕ್ಕೆ ಸಿಕ್ಕಿಸದೇ, ತಂತ್ರಕ್ಕೆ ಪ್ರತಿತಂತ್ರ ರೂಪಿಸುವ ಬದುಕಿನ ಚದುರಂಗದಾಟದ ಮೋಸಕ್ಕೆ ತಾನು ಬಲಿ ಬೀಳುವುದಿಲ್ಲವೆಂಬ ಶಪಥದ ಜೊತೆಜೊತೆಗೇ ‘ನಮ್ಮೆದೆಯ ನೋವು ಹಾಡಲು ಬಿಡು’ ಎಂದು ಪ್ರಾರ್ಥಿಸುತ್ತಲೇ ‘ನಾವು ಹೀಗೆಯೇ ನೋವ ಹಾಡುತ್ತೇವೆ/ಆಟವಾಡದೆಯೂ ಜೀವಂತವಿರುತ್ತೇವೆ/ಚರಿತ್ರೆಯಾಗದೆಯೂ ವರ್ತಮಾನದಲ್ಲಿರುತ್ತೇವೆ’ ಎಂಬ ನಿಲುವು ತಾಳುತ್ತದೆ. ಇಂಥದೇ ಆಶಯ ಇಲ್ಲಿನ ಹಲವು ಕವಿತೆಗಳಲ್ಲಿ ಬೇರೆ ಬೇರೆಯದೇ ರೂಪಗಳಲ್ಲಿ ಕಾಣಿಸಿಕೊಳ್ಳುತ್ತವೆ. ಬದುಕಿನ ಒಳಹೊರಗುಗಳನ್ನು, ಜೀವನದ ಅರ್ಥಾನರ್ಥಗಳನ್ನು, ಗಂಡು-ಹೆಣ್ಣಿನ ಸ್ಥಾನಮಾನಗಳನ್ನು ಸಂಕಲನದುದ್ದಕ್ಕೂ ರೂಪ ಪ್ರಶ್ನಿಸುತ್ತಲೇ ಇಂಥ ಪ್ರಶ್ನೆಗಳಿಗೆಲ್ಲ ತೀರ ಖಾಸಗಿಯದಾದರೂ ಸಾರ್ವಜನಿಕವೂ ಆಗಬಹುದಾದ ಉತ್ತರಗಳನ್ನು ಪಡೆದಿದ್ದಾರೆ. ಕವಿತೆಯೊಂದರ ವಸ್ತುವನ್ನು ವ್ಯಾಪ್ತಿಯಾಚೆಗೂ ಅರಳಿಸಬಲ್ಲರಾದರೂ ಅದೇಕೋ ಪ್ರಾಸಗಳ ತ್ರಾಸಿಗೆ ಬಿದ್ದಾಗಲೆಲ್ಲ ಅವರ ಚುರುಕುತನ, ಸಹಜ ನಡಿಗೆ ಅಲ್ಲೇ ನಿಂತಂತೆ ಭಾಸವಾಗುತ್ತದೆ.
‘ಆ ಹಾಳು ಅಸಮ ಪುರಾಣದ / ಕಥೆ ಮುಗಿದು/ ಯಾವುದೋ ಕಾಲವಾಯ್ತಲ್ಲ/ನನ್ನೊಳಗಿನವಳೇ/ನಿನಗಿನ್ನೂ ಅದರದೇ ಕನವರಿಕೆ’ ಎಂದು ಆರಂಭವಾಗುವ ಮೊದಲ ಪದ್ಯದಿಂದ ‘ಇಷ್ಟೇ ಹೀಗೇ ಎಂಬ ನಿರ್ಧಾರವಿಲ್ಲ/ ಕೊನೆ ಇಲ್ಲ ಮೊದಲೂ ಇಲ್ಲ/ ಎಲ್ಲೆಗಳ ದಾಟಿಯೂ ಉತ್ತರಗಳಿಲ್ಲ/ ಎಂದು ಕೊನೆಯಾಗುವ ಕಡೆಯ ಕವಿತೆಯವರೆಗೂ ಎಲ್ಲೂ ತನ್ನದೇ ಎಂಬ ಹಟವಾಗಲೀ, ಇದೇ ಇದೊಂದೇ ಬಿಡುಗಡೆಯ ದಾರಿ ಎಂಬ ಅಂತಿಮ ತೀರ್ಪಿಗೆ ಈಕೆ ಬೀಳದ ಕಾರಣಕ್ಕೆ ಎಲ್ಲ ಪದ್ಯಗಳಲ್ಲೂ ಸಹಜ ಜೈವಿಕತೆ ಇದೆ.
ಬೆಣ್ಣೆ ತುಪ್ಪವಾಗುವ ರೂಪಾಂತರದ ಹದವನ್ನು ‘ಅಮ್ಮನಾಗುವುದೆಂದರೆ’ ಕವಿತೆಯಲ್ಲಿ ಹೀಗೆ ಹೇಳುತ್ತಾರೆ-‘ಸಿದ್ಧಿಸಿದಂತೆಲ್ಲಾ, ಬೆಣ್ಣೆ ಉಕ್ಕುವುದಿಲ್ಲ/ ಮಾಗುವ ಸದ್ದಿಗೆ ಧ್ಯಾನಿಸಿ/ ಸ್ಥಿರಗೊಳ್ಳುತ್ತದೆ ಮನ. ಕರಟುವುದಿಲ್ಲ/ ಹಸಕಲಾಗುವುದಿಲ್ಲ,. ಸದಾ ಹದ ತುಪ್ಪ.’ ‘ನಿರಾಕರಣ’ ಎನ್ನುವ ಕವಿತೆ ಧ್ಯಾನಿಸುವ ಹದ ಎಲ್ಲರಿಗೂ ನಿಲುಕಿದರೆ ಪ್ರಾಯಶಃ ಸಮಾಜದ ಮೇಲು-ಕೀಳುಗಳೆಲ್ಲ ಕ್ಷಣದೊಳಗೇ ಅಳಿಯಬಹುದು. ಆದರೆ ಸ್ಪರ್ಧೆಗಿಳಿಯದೇ, ಗೋಲು ಹೊಡೆಯದೇ ಸುಮ್ಮನಿದ್ದೇ ವರ್ತಮಾನಕ್ಕೆ ಉತ್ತರಿಸುವುದು ಎಲ್ಲರಿಂದಲೂ ಸಾಧ್ಯವಿರುವ ಸಂಗತಿಗಳಲ್ಲವಲ್ಲ.
ಅದಲ್ಲ ಅದಲ್ಲ, ಒಂದು ಅಗುಳಿನ ಸತ್ಯ, ಅನಾಗತ ಹುಡುಕುತ್ತ, ಪರ್ಯಾಯ ಮುಂತಾದ ಕವಿತೆಗಳಲ್ಲಿ ಇತ್ತೀಚೆಗೆ ಕನ್ನಡ ಕಾವ್ಯವು ಅಧ್ಯಾತ್ಮಕ್ಕೆ ತೆರೆದುಕೊಳ್ಳುತ್ತಿರುವ ರೀತಿಯನ್ನು ತೆರೆದಿಟ್ಟರೆ, ಕವಿತೆಯನ್ನೇ ಕುರಿತ ಪದ್ಯಗಳಾದ ಅಂತರ ನಿರಂತರ, ಕಾಲಾಂತರ, ದಾರಿಗುಂಟ ಕವಿತೆ ನಿರಾಸೆಯನ್ನೇನೂ ಮಾಡುವುದಿಲ್ಲ. ಆದರೂ ಎಲ್ಲಿ ಎಲ್ಲಿ ಈ ಕವಿ ಪ್ರಾಸದ ಜೊತೆ ಏಗಲು ಹೋಗುತ್ತಾರೋ ಅಲ್ಲೆಲ್ಲ ಇವರ ಕವಿತೆಗಳೂ ಏದುಸಿರು ಬಿಟ್ಟಿವೆ, ಸಹಜ ನಡಿಗೆಯಿಂದ ಆಮೆ ವೇಗಕ್ಕೆ ಜರುಗಿವೆ.
ಮೊದಲ ಓದಿಗೆ, ಪತ್ರಿಕೆಗಳಲ್ಲಿ ಚಿತ್ರಗಳೊಂದಿಗೆ ಅಚ್ಚಾದ ಗಳಿಗೆಗಳಲ್ಲಿ ಇಲ್ಲಿನೆಲ್ಲ ಕವಿತೆಗಳೂ ಚಂದವಾಗಿ ಕಾಣುವುವಾದರೂ ಎರಡನೆಯ, ಮೂರನೆಯ ಮರು ಓದುಗಳಿಗೂ ಈ ಕವಿತೆಗಳು ಉಳಿಯಬಲ್ಲವೇ ಎಂಬುದು ಪ್ರಶ್ನೆ. ಹೊಸ ರೂಪಕಗಳನ್ನು ಸೃಷ್ಟಿಸದೇ, ಈಗಾಗಲೇ ತಮಗೊಲಿದು ಬಂದಿರುವ ಭಾಷೆ, ವಸ್ತು ವಿನ್ಯಾಸಗಳಲ್ಲೇ ಉಳಿದು, ಹೇಳಿದ್ದನ್ನೇ ಹೇಳುತ್ತಿರುವ ಇತರ ಕವಿಗಳ ನಿಂತಲ್ಲೇ ನಿಂತುಬಿಟ್ಟಿರುವ ಕಾವ್ಯದ ಬಂಡಿಗಳನ್ನೂ ಈಕೆ ಧ್ಯಾನಸ್ಥಸ್ಥಿತಿಯಲ್ಲಿ ಅಧ್ಯಯನ ಮಾಡಿದರೆ ತಾವೇ ನಿರ್ಮಿಸಿಕೊಂಡಿರುವ ಕೋಟೆಯಾಚೆಗೂ ಇಣುಕಬಲ್ಲರು. ಹೇಳದೇ ಉಳಿದ ಮಾತುಗಳನ್ನು, ಹೊಸ ಪ್ರಯೋಗಗಳನ್ನು, ಹೊಸ ರೂಪಕಗಳನ್ನೂ ಸೃಸ್ಟಿಸಬಲ್ಲರು.

ಎಚ್ಚೆಸ್ವಿ- ೬೭ರಲ್ಲೂ ಯುವಕ

ಎಚೆಸ್ವಿಗೆ ಅರವತ್ತೇಳು-ಅವರಿಗೊಂದು ನಮಸ್ಕಾರ ಮಾಡೇಳು. . . .
ಇದೇ ಜೂನ್ ೨೩ಕ್ಕೆ ಅರವತ್ತಾರು ತುಂಬಿ ಅರವತ್ತೇಳಕ್ಕೆ ಕಾಲಿಡುತ್ತಿರುವ ಡಾ.ಎಚ್.ಎಸ್.ವೆಂಕಟೇಶ ಮೂರ್ತಿ (೨೩.೦೬.೧೯೪೪) ನವ್ಯೋತ್ತರ ಕನ್ನಡ ಕಾವ್ಯದ ಮುಖ್ಯ ವಾಹಿನಿಗಳಲ್ಲಿ ಖಂಡಿತವಾಗಿ ಗಮನಿಸಲೇಬೇಕಾದ ಪ್ರಮುಖ ಹೆಸರು. ಅವರ ಕಾವ್ಯ ಮಾರ್ಗ ಕೇವಲ ತೀವ್ರತೆಯೊಂದನ್ನೇ ಅಲ್ಲದೇ ಪ್ರಮಾಣದ ಕಾರಣದಿಂದಲೂ ಮಹತ್ವದ್ದಾಗಿದೆ. ೧೯೬೮ರಲ್ಲಿ ತಮ್ಮ ಮೊದಲ ಕವನ ಸಂಕಲನ ‘ಪರಿವೃತ್ತ’ ಪ್ರಕಟಿಸಿದ ಅವರು ೨೦೦೮ರಲ್ಲಿ ‘ಉತ್ತರಾಯಣ ಮತ್ತು. . .’ ಸಂಕಲನ ಪ್ರಕಟಿಸಿದಾಗ ಅದು ಅವರ ೬೪ನೇ ಕೃತಿಯಾಗಿತ್ತು, ಅಂದರೆ ಅವರ ಒಟ್ಟೂ ಬರವಣಿಗೆಯ ಗಾತ್ರ ಕನ್ನಡ ಸಾಹಿತ್ಯವನ್ನು ಎಷ್ಟು ಶ್ರೀಮಂತಗೊಳಿಸಿದೆ ಎಂದು ಮನಗಾಣಬಹುದು. ಪರಂಪರೆಯ ಸತ್ವದೊಡನೆ ಸ್ವಂತದ ಅನುಭವಗಳನ್ನು ಅನುಸಂಧಾನ ಮಾಡುತ್ತ ಪ್ರಾಚೀನ ಮತ್ತು ವರ್ತಮಾನಗಳ ಸಹಯೋಗವನ್ನು ಅವರು ಸಾಧಿಸುತ್ತಲೇ ಬಂದಿದ್ದಾರೆ. ನಾಟಕಗಳನ್ನು, ಅನುವಾದಗಳನ್ನು, ಮಕ್ಕಳ ಕಾದಂಬರಿ ಮತ್ತು ವಿಮರ್ಶೆಗಳನ್ನು ಹಾಗೇ ಕವನ ಸಂಕಲನಗಳನ್ನು ಕಾಲದಿಂದ ಕಾಲಕ್ಕೆ ಪ್ರಕಟಿಸುತ್ತ ಬಂದಿರುವ ಎಚೆಸ್ವಿ, ‘ಆ ಮುಖೇನ’ ಎಂಬ ಅಂಕಣಬರಹವನ್ನು ಉದಯವಾಣಿಗೆ ಬರೆಯುತ್ತಿದ್ದುದನ್ನೂ ಮರೆಯುವ ಹಾಗಿಲ್ಲ. ಇತ್ತೀಚೆಗೆ ‘ಅವದಿ’ಯಲ್ಲಿ ಅವರು ಬರೆದುಕೊಳ್ಳುತ್ತಿರುವ ಆತ್ಮಕತೆಯ ಪುಟಗಳು ಅವರ ಜೀವನದ ಹಲವು ವಿವರಗಳನ್ನು ನಮ್ಮ ಮುಂದಿಡುತ್ತಿದೆ. ಜೊತೆಗೇ ‘ಮುಕ್ತ ಮುಕ್ತ’ ಧಾರಾವಾಹಿಯ ಟೈಟ್ಲ್ ಸಾಂಗ್ ಅವರದೇ ಕಾಂಪೊಸಿಷನ್ನು ಎನ್ನುವುದು ಕೂಡ ಇಲ್ಲಿ ಬಹಳ ಮುಖ್ಯ. ಏಕೆಂದರೆ ಕಮರ್ಷಿಯಲ್ ಸೂತ್ರದ ಟೀವಿ ಧಾರಾವಾಹಿಯೊಂದರ ಶೀರ್ಷಿಕೆ ಗೀತೆಗೂ ಸಾಹಿತ್ಯದ ಸ್ಪರ್ಶ ಕೊಟ್ಟು ಅದನ್ನು ಮತ್ತೆ ಮತ್ತೆ ಕೇಳುವಂತೆ ಮಾಡಿರುವ ಮೋಡಿಗಾರರು ಅವರು. ‘ಪರಸ್ಪರ’ಎನ್ನುವ ಬ್ಲಾಗನ್ನು ನಿರ್ವಹಿಸುತ್ತಿರುವ ಅವರು ಹೊಸಕಾಲಮಾನದ ಎಲ್ಲ ಅನುಕೂಲಗಳ ಪ್ರಯೋಜನವನ್ನು ಪಡೆದಿದ್ದಾರೆ. ಮತ್ತೆ ಆ ಕಾರಣಕ್ಕೇ ವರ್ತಮಾನದ ತಲ್ಲಣಗಳನ್ನು ತಕ್ಕಮಟ್ಟಿಗಾದರೂ ಅರಿತು ಹೊಸ ಬರಹಗಾರರಿಗೆ ಮುನ್ನುಡಿ ಬೆನ್ನುಡಿಗಳ ಆಶೀರ್ವಚನವನ್ನೂ ನಡೆಸಿಕೊಡುತ್ತಿದ್ದಾರೆ. ‘ಚಿನ್ನಾರಿ ಮುತ್ತ’ ಚಲನಚಿತ್ರ ಕೂಡ ಅವರ ಕೊಡುಗೆಯೇ. ಭಾಷೆಯ ಲವಲವಿಕೆ, ಜೀವಂತಿಕೆ, ಸಹಜೋಲ್ಲಾಸ, ಚಿತ್ರಕಶಕ್ತಿ, ಲಾಲಿತ್ಯ, ವಸ್ತು ನಿರ್ವಹಣೆಯ ನಾವೀನ್ಯ, ಹೀಗೆ ಅವರ ಕಾವ್ಯೋದ್ಯೋಗವನ್ನು ಬೇರೆ ಬೇರೆ ನೆಲೆಗಳಿಂದ ವಿಷ್ಲೇಷಿಸಬಹುದಾದರೂ, ಅವರು ತಮ್ಮ ಹೊಸ ಸಂಕಲನಗಳ ಮೂಲಕ ಹುಡುಕುತ್ತಿರುವ ಕಾವ್ಯದ ಹಾದಿಯನ್ನು ಗಮನಿಸುವುದೇ ಒಂದು ಸೊಗಸು.
ತಮ್ಮ ಇತ್ತೀಚಿನ ಸಂಕಲನ ‘ಉತ್ತರಾಯಣ’ದ ಹಲವು ಕವಿತೆಗಳಲ್ಲಿ ಅವರು ಧ್ಯಾನಿಸಿರುವ ರೀತಿ ಕನ್ನಡ ಕಾವ್ಯ ಪರಂಪರೆಗೆ ಮತ್ತೊಂದು ಮಜಲನ್ನು ಜೋಡಿಸಿದೆ. ಅನೇಕಾನೇಕ ಕೃತಿಗಳನ್ನು ಈವರೆಗೆ ತಂದಿದ್ದರೂ, ಅವರ ಕಾವ್ಯದ ಮೂಲಕೇಂದ್ರ ಯಾವುದೆಂದು ಮೇಲ್ನೋಟಕ್ಕೆ ದಕ್ಕದಿರುವುದೂ ಒಂದು ಹೆಗ್ಗಳಿಕೆಯೇ. ಬರಿಯ ಕನ್ನಡಕ್ಕಷ್ಟೇ ಅಲ್ಲದೆ ವಸಾಹತೋತ್ತರ ಭಾರತೀಯ ಕಾವ್ಯ ಸಂದರ್ಭಕ್ಕೇ ಅವರು ಮಾದರಿಯಾಗಿದ್ದಾರೆ. ಮೂಲಸ್ವರೂಪದ ಅಭಿಜ್ಞಾನದಲ್ಲೇ ಅವರ ಸಾಹಿತ್ಯ ಯಾತ್ರೆ ನಡೆಯುತ್ತಿರುತ್ತದೆ. ಬರಿಯ ಛಂದೋವಿನ್ಯಾಸಗಳಲ್ಲಲ್ಲದೇ ತಾತ್ವಿಕ ಕಾರಣಗಳಿಂದಲೂ ಅವರ ಕಾವ್ಯಕೃಷಿ ಮಹತ್ವದ್ದಾಗಿದೆ. ತಮ್ಮ ಕಾವ್ಯೋದ್ಯೋಗದುದ್ದಕ್ಕೂ ಕಾವ್ಯದ ಸ್ವದೇಶೀಕರಣಕ್ಕೆ ಬದ್ಧರಾಗಿರುವ ಅವರು, ಕಾವ್ಯವನ್ನು ಅಮೂರ್ತದ ಆಗಸದಿಂದ ಮಣ್ಣ ನೆಲಕ್ಕೆ, ತಾತ್ವಿಕತೆಯ ಒಗಟಿನಿಂದ ಅನುಭವದ ನಿಜಕ್ಕೆ, ಕನಸಿನಾದರ್ಶಗಳನ್ನು ಕಥನಕಾವ್ಯದ ಅನುಸರಣದ ಕೆಲಸದಿಂದ ಅರಿವಿನಂಗಳಕ್ಕೆ ತಂದು ನಿಲ್ಲಿಸಿದ್ದಾರೆ. ಹಾಗೆಯೇ ಪುರಾಣದ ಪಾತ್ರಗಳಿಗೆ ಹೊಸ ಪೋಷಾಕು ತೊಡಿಸಿ ಬೆಚ್ಚಿಬೀಳಿಸಿದ್ದಾರೆ. ಶ್ರೀಸಂಸಾರಿ ಮತ್ತು ಆಪ್ತಗೀತೆ ಎಂಬ ಪದ್ಯಗಳಲ್ಲಿ ಅವರು ದೈವತ್ವಕ್ಕೆ ನೀಡಿದ ಮರುವ್ಯಾಖ್ಯಾನ ಕೂಡ ಗಮನೀಯವೇ ಆಗಿದೆ. ‘ಹರಿವ ಇರುವೆ ಕೂಡ ನೋಯದ ಹಾಗೆ, ಪಂಚಮದ ಇಂಚರ ಎಷ್ಟು ಮಾತ್ರಕ್ಕೂ ಒಡೆಯದ ಹಾಗೆ ಕಾಪಿಡಬೇಕೆನ್ನುವುದು’ ಅವರ ಕವಿಮನಸ್ಸಿನ ವೈಚಾರಿಕತೆಯಾಗಿದೆ. ಪೌರಾಣಿಕ ಸ್ಮೃತಿಯ ಮಂಥನದ ಮೂಲಕ ಆಧುನಿಕ ಕಾಲಕ್ಕೂ ಪ್ರಸ್ತುತವಾಗುವ ವೈಚಾರಿಕ ನವನೀತವನ್ನು ಹಂಚುತ್ತಿರುವ ಎಚೆಸ್ವಿ ಆಧುನಿಕ ಮನೋಭೂಮಿಕೆಯಲ್ಲಿರುವ ನಮ್ಮನ್ನೆಲ್ಲ ಪರಂಪರೆಯ ಆಗಸದವಕಾಶಕ್ಕೆ ಜೋಡಿಸಿ ಹೊಸ ಚಿಂತನೆಗಳು ಸಾಧ್ಯವಿದೆಯೆಂದು ಮನಗಾಣಿಸಿದ್ದಾರೆ.
ಎಚೆಸ್ವಿಯವರ ಕವಿತೆಗಳು ಸರಳವಾಗಿವೆಯೆನ್ನಿಸಿದರೂ ಅವು ಓದುಗನಲ್ಲಿ ಉಳಿಸುವ ಪ್ರಶ್ನೆಗಳು ದೊಡ್ಡವು. ಅವುಗಳ ಆಶಯವೂ ದೊಡ್ಡದೇ. ಕಾವ್ಯವೆಂದರೇನೆಂದು ಮತ್ತೆ ಮತ್ತೆ ಆಲೋಚಿಸುವ ಹಾಗೆ ಮಾಡುವ ಅವರ ಕಾವ್ಯಕ್ರಿಯೆಗೆ ಶರಣೆನ್ನಲೇ ಬೇಕಾಗುತ್ತದೆ. ಏಕೆಂದರೆ ವೈಚಾರಿಕತೆಗೆ ಪೂರ್ವ-ಪಶ್ಚಿಮ, ಎಡ-ಬಲ, ಇತ್ಯಾದಿ ಆಕೃತಿಗಳ ಪ್ರತ್ಯೇಕ ಅಸ್ತಿತ್ವವನ್ನೇ ಅವರ ಕಾವ್ಯ ನಿರಾಕರಿಸುತ್ತ ಬಂದಿದೆ. ಅನುಭವದ ಪಾತಳಿಯಲ್ಲೇ ಅರಿವಿನ ಆವಿಷ್ಕಾರ ಆಗಬೇಕೆನ್ನುವುದು ಈ ಕವಿ ಮೊದಲಿಂದಲೂ ಮಂಡಿಸುತ್ತ ಬಂದ ಗಂಧವಾಗಿದೆ, ಮತ್ತು ಅವರ ಕಾವ್ಯದುದ್ದಕ್ಕೂ ಅಂಟಿ ನಿಂತ ಪರಿಮಳವೂ ಅದೇ ಆಗಿದೆ. ಸಹನೌ, ಸೌಗಂಧಿಕಾ, ಮುಂತಾದ ಪದ್ಯಗಳಲ್ಲಿ ಅವರು ಕಟೆದು ನಿಲ್ಲಿಸುವ ಸಾಮಾಜಿಕ ಕಳಕಳಿ ಅವುಗಳನ್ನು ಓದಿಯೇ ಅನುಭವಿಸಬೇಕಾದ ಪಾರಮ್ಯಗಳು. ಸ್ಮೃತಿ ಮತ್ತು ಪುರಾಣಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳುವ ಅವರು ಅವನ್ನು ತಮ್ಮ ಕಾವ್ಯದ ಅಲಂಕರಣಕ್ಕೆ ಬಳಸದೇ ಅವುಗಳ ತಳಹದಿಯಲ್ಲೇ ಹೊಸ ಆಲೋಚನೆಗಳ ಪಟ್ಟಕವನ್ನಾಗಿ ರೂಪಿಸಿ, ವರ್ತಮಾನದ ತಹತಹಿಕೆಗಳಿಗೆ ಉತ್ತರವನ್ನಾಗಿಸಿ ಆಶ್ಚರ್ಯ ಹುಟ್ಟಿಸುತ್ತಾರೆ. ‘ಭೂಮಿಯೂ ಒಂದು ಆಕಾಶ’ ಕವಿತೆಯಲ್ಲಿ ಸಂಬಂಧಗಳ ಅನಿವಾರ್ಯತೆಯನ್ನೂ, ಜೊತೆಗೇ ಅವೆಲ್ಲ ಹೇಗೆ ಅಪ್ರಾಕೃತ ಎಂದೂ ಹೇಳಿದ್ದಾರೆ. ಅಂದರೆ ಪುರಾಣ ಪ್ರತಿಮೆಯ ಮೂಲಕ ಸಮಕಾಲೀನ ತೊಡಕುಗಳನ್ನೂ, (ವಿಮುಕ್ತಿ) ಜೊತೆಗೆ ಸಮಕಾಲೀನ ಬದುಕನ್ನು ಪುರಾಣವಾಗಿಸುವ ಮೂಲಕವೂ (ಹರಿಗೋಲು, ಬಸವ ಪುರಾಣ ಥರದ ಕವಿತೆಗಳು) ಅವರು ಈಗಾಗಲೇ ಕಾವ್ಯಾಸಕ್ತರ ಗಮನವನ್ನೂ ಮನವನ್ನೂ ಸೆಳೆದಿದ್ದಾರೆ. ಕಥನ ಕಲೆ ಕೂಡ ಅವರಿಗೆ ಸಿದ್ಧಿಸಿದ ಕಲೆಯಾಗಿದ್ದರಿಂದಲೇ ಕಥನ ಕವನಗಳಲ್ಲೂ ಅವರ ಮುದ್ರೆ ಇದ್ದೇ ಇದೆ. ‘ಕಂಡದ್ದು’ ಕವಿತೆ ಓದುಗನನ್ನು ಬರಿಯ ಕವಿತೆಯಾಗಿ ಕಾಡದೇ ಅವನ ಸ್ವಂತ ಅನುಭವವಾಗಿಯೇ ಉಳಿದು ಬಿಡುತ್ತದೆ. ಹೀಗೆ ಕಾವ್ಯೋದ್ಯೋಗವೆಂಬ ಮಥನದಿಂದ ತಾತ್ವಿಕತೆಯ ಎಳೆಗಳನ್ನು ನೇಯ್ದು ಬೆಚ್ಚನೆಯ ಅರಿವಿನ ಹೊದಿಕೆಗಳನ್ನು ತಯಾರಿಸಿ ಕೊಡುತ್ತಿರುವ ಎಚೆಸ್ವಿ ಒಂದು ರೀತಿಯಲಿ ಕಬೀರನೇ ಆಗಿದ್ದಾರೆ. ಮಡಿವಂತಿಕೆಯ ಸೋಂಕಿಲ್ಲದ, ಸಾಮಾಜಿಕ ನ್ಯಾಯಕ್ಕೆ ಪರಿತಪಿಸುವ ಅವರೊಳಗಿನ ಕವಿ ಜಾಗತೀಕರಣ ಕಾಲದಲ್ಲೂ ಸ್ವದೇಶೀಕರಣದಲ್ಲಿ ನಿರತನಾಗಿದ್ದಾನೆ. ಸಮಕಾಲೀನ ಸಂದರ್ಭವನ್ನು ಪಾರಂಪರಿಕ ಕಾವ್ಯದೊಂದಿಗೆ ವಾದಿ-ಸಂವಾದಿಗಳ ಸ್ವರೂಪದಲ್ಲಿ ಮುಖಾಮುಖಿಯಾಗಿಸುತ್ತಲೇ ಗೇಯತೆಯನ್ನೂ ಅವರು ಉಳಿಸಿ ಬೆಳೆಸಿದ್ದಾರೆ.
ಆದರೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಶತಮಾನದ ಕನ್ನಡ ಕಾವ್ಯದ ಸಂಪಾದಕರಾಗಿ ಅವರು ಎಡವಟ್ಟು ಮಾಡಿಕೊಂಡಿದ್ದೂ ಇದೆ. ನೂರು ವರ್ಷಗಳ ಕಾವ್ಯ ಪರಂಪರೆಯ ಪ್ರಾತಿನಿಧಿಕ ಸಂಕಲನವಾಗಬೇಕಿದ್ದ ಅದು ಅವರ ಆಯ್ಕೆಯ ದ್ವಂದ್ವಗಳ ಕಾರಣ ಪೇಲವವಾದದ್ದೂ ಈಗ ಇತಿಹಾಸ. ಜೊತೆಗೇ ಸುಮ್ಮಸುಮ್ಮನೇ ಮುಲಾಜಿಗೆ ಸಿಕ್ಕಿಕೊಳ್ಳುವ ಅವರ ಮುಗ್ಢತೆ ಸಹ ಅವರನ್ನು ತೊಂದರೆಗಿಳಿಸಿದೆ. ಉದಾಹರಣೆಗೆ ಮುಕ್ತ ಮುಕ್ತ ಸೀರಿಯಲ್ಲಿನ ಅವರ ಜಡ್ಜು ಪಾತ್ರವನ್ನೇ ನೋಡಿ. ಪಾಪ ಪದ್ಯ ಬರೆದುಕೊಂಡಿದ್ದ ಅವರಿಗೆ ಗೌನು ಹಾಕಿ ಕೂರಿಸಿ ಸೀತಾರಾಂ ಮಜಾ ತೆಗೆದುಕೊಳ್ಳುತ್ತಿದ್ದಾರೆ.
ಎಂಭತ್ತರ ದಶಕದಲ್ಲಿ ಕ್ಯಾಸೆಟ್ಟು ಕವಿಗಳ ಒಂದು ದಂಡೇ ಸಾಂಸ್ಕೃತಿಕ ಲೋಕವನ್ನು ಗುತ್ತಿಗೆ ಹಿಡಿದಂತೆ ವರ್ತಿಸಿದ್ದು ಈಗ ಇತಿಹಾಸ. ದಾಸಪಂಥದವರೆಂದು ರಾಮಚಂದ್ರಶರ್ಮರಿಂದ ಮೂತಿಗೆ ಇಕ್ಕಿಸಿಕೊಂಡವರ ಪೈಕಿ ಎಚೆಸ್ವಿ ಕೂಡ ಒಬ್ಬರು. ಸಿ.ಅಶ್ವಥ್ ರಾಗಸಂಯೋಜನೆಯಲ್ಲಿ ಕ್ಯಾಸೆಟ್ಟುಗಳ ಸುಗ್ಗಿಯೋ ಸುಗ್ಗಿಯ ಕಾಲದಲ್ಲಿ ಪದ್ಯ ಬರೆಯುವ ಹುಕ್ಕಿಯಿದ್ದವರೆಲ್ಲ ರಾತ್ರಿ ಕಳೆದು ಬೆಳಗಾಗುವುದರಲ್ಲಿ ಖ್ಯಾತರಾಗಿಬಿಟ್ಟರು. ಈಗ ಆ ಸಾಲಿನಲ್ಲಿ ಉಳಿದಿರುವ ಏಕೈಕ ಹೆಸರೆಂದರೆ ಎಚೆಸ್ವಿಯವರದ್ದು ಮಾತ್ರ, ಏಕೆಂದರೆ ಬರೀಹಾಡುಗಳನ್ನಷ್ಟೇ ಅಲ್ಲದೇ ನಿಜ ಕವಿತೆಗಳನ್ನು ಬರೆಯುವ ತಾಕತ್ತಿದ್ದುದು ಅವರೊಬ್ಬರಿಗೆ ಮಾತ್ರ. ಉಳಿದವರೆಲ್ಲ ಯಾವ ಯಾವ ನಿಗೂಢ ಜಗತ್ತಿಗೆ ಸೇರಿಬಿಟ್ಟರೋ ಅರಿತವರಿಲ್ಲ.
ಜೊತೆಗೆ ಎಚೆಸ್ವಿಯವರ ವರ್ಷಕ್ಕೊಂದು ಪುಸ್ತಕ ತರಲೇಬೇಕೆನ್ನುವ ಛಲ ಕೂಡ ಅವರನ್ನು ಇನ್ನೂ ಸಾಹಿತ್ಯ ಲೋಕದ ಹೊಳೆಯುವ ತಾರೆಯಾಗಿಸಿದೆ. ನವ್ಯರ ಕಾಲದ ‘ಕ್ವಾಲಿಟಿ’ಯ ವಾದವನ್ನು ಧಿಕ್ಕರಿಸಿ ‘ಕ್ವಾಂಟಿಟಿ’ಯ ಮೂಲಕ ನವ್ಯೋತ್ತರರ ಅಜೆಂಡಾವನ್ನು ವಿಸ್ತರಿಸಿದ್ದು ಕೂಡ ಅವರೇ. ಇದರ ಜೊತೆಗೆ ಬರಹಗಾರನಾಗಿರುವವನಿಗೆ ಮಾಧ್ಯಮದ ಅಡೆತಡೆಗಳಿರಬಾರದೆಂಬ ಸೂತ್ರ ಕೂಡ ಅವರಲ್ಲಿರುವುದರಿಂದಲೇ ಬರೀ ಕಾವ್ಯಕ್ಕಂಟಿಕೊಳ್ಳದೇ ಅಭಿಜಾತ ಬರಹಗಾರರು ಮಾತ್ರ ಕೈ ಇಡಬಹುದಾದ ನಾಟಕ ರಚನೆಗೂ ಅವರು ಕೈ ಹಾಕಿದ್ದಾರೆ. ‘ಊರ್ಮಿಳೆ’ ಇದಕ್ಕೊಂದು ಅಪ್ಪಟ ಉದಾಹರಣೆ. ಮಕ್ಕಳ ಪದ್ಯಗಳೆಂದರೆ ಉತ್ತರಕರ್ನಾಟಕದವರೆಂಬ ಮಾತನ್ನು ಅಳಿಸಿದ್ದೂ ಎಚೆಸ್ವಿಯವರೇ! ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಬರೆದೂ ಆ ಎಲ್ಲ ಪ್ರಕಾರಗಳಲ್ಲೂ ಏಕಮುಖೀ ಯಶಸ್ಸು ಗಳಿಸಿದವರು ಕು.ವೆಂ.ಪು ನಂತರ ಎಚೆಸ್ವಿಯವರೊಬ್ಬರೇ ಇರಬೇಕು.
೨೦೦೦ರಲ್ಲಿ ಪ್ರಕಟವಾದ ಅವರ ‘ಭೂಮಿಯೂ ಒಂದು ಆಕಾಶ’ ಸಂಕಲನದ ಬಗ್ಗೆ ಪ್ರೊ.ಸಿ.ಎನ್.ರಾಮಚಂದ್ರನ್ ಹೇಳಿದ್ದ ಮಾತುಗಳನ್ನಿಲ್ಲಿ ಉಲ್ಲೇಖಿಸಲೇಬೇಕು: ಅಡಿಗರ ನಂತರ ವೆಂಕಟೇಶಮೂರ್ತಿಗಳಷ್ಟು ಸಮರ್ಥವಾಗಿ ರೂಪಕಗಳನ್ನು ಬಳಸುವ ಕನ್ನಡ ಕವಿಗಳು ಅಪರೂಪ. ನಿದರ್ಶನವಾಗಿ, ಮೊದಲ ಓದಿಗೇ ನಮ್ಮನ್ನು ಚಕಿತಗೊಳಿಸುವ,ಬೆಚ್ಚಿಸುವ,ಇಡಿಯಾಗಿ ಆವರಿಸುವ ಈ ರೂಪಕಗಳನ್ನು ಪರಿಗಣಿಸಬಹುದು. ‘ಮರಗಳು ನೆರಳ ಹಾಸಿದ್ದೇ ಹಾಸಿದ್ದು’, ‘ಹೇಳಿ ಕೇಳಿ ಹಗಲ ಕೊನೆ-ಹೊಗೆ ಬತ್ತಿಯ ತುಕಡಾ’, ‘ಕನ್ನಡಿ ಒಂದು ಅಲೆಯಿಲ್ಲದ ಕೊಳ’, ‘ಒಲೆಯಲ್ಲಿ ಬೂದು ಬಣ್ಣದ ಶಾಲು ಹೊದ್ದ ಕೆಂಡ’, ‘ಎಣ್ಣೆ ಕೊಳಗದೊಳಕ್ಕೆ ಬಿತ್ತೆ ಒಣಗಿದ ನಗೆಯ ಬಿದಿಗೆ ಚಕ್ಕೆ’, ‘ಅನಾದಿ ಕಾಲದಿಂದ ಪ್ರವಾಸಿಗಳ ಮುಂದೆ ಮೊಂಡು ಕೈಯೊಡ್ಡಿ ಕೂತಿರೋ ಕುಷ್ಠ ಹಿಡಿದ ತಿರುಕ’ (ಮುಕ್ಕಾದ ಉಗ್ರ ನರಸಿಂಹ..ಹಂಪೆಯಲ್ಲಿ) ಇತ್ಯಾದಿ,,. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಇಂಥ ಬಿಡಿ ರೂಪಕಳಾಚೆಗೂ ಕೆಲವೊಮ್ಮೆ ಇಡೀ ಕವನವೇ ರೂಪಕವಾಗಿಬಿಡುವ -‘ಮೀನು ಬುಟ್ಟಿಯಲ್ಲಿ ಅಂಟಿಕೊಂಡಿರುವ ಕಿರು ಮೀನಂತೆ’ ಹಾಗೆಯೇ ದೀರ್ಘ ಕಥಾನಕಗಳಲ್ಲಿ ಕೇಂದ್ರ ಪಾತ್ರವೇ ರೂಪಾಕಗವಾಗಿ ಮಾರ್ಪಡಬಹುದು ‘ವಿಮುಕಿ’ಯ ಗರುಡನಂತೆ.
ಖಾಸಗೀ ಬದುಕಿನ ಸುಖ, ದುಃಖಗಳನ್ನು, ನೋವು ನಲಿವುಗಳನ್ನು, ಹೇಳಿಕೊಳ್ಳಲಾರದ ಆದರೆ ಹೇಳಿಕೊಳ್ಳಲೇಬೇಕಾದ ಯಾತನೆಗಳನ್ನು ವೈಯುಕ್ತಿಕ ಪರಿಧಿಯಿಂದ ಬೇರ್ಪಡಿಸಿ ಅರ್ಥಪೂರ್ಣ ಸಾರ್ವತ್ರಿಕ ಪ್ರತಿಮೆಯನ್ನಾಗಿಸುವ ಕವಿಶ್ರದ್ಧೆ ಅವರಿಗಿರುವುದರಿಂದಲೇ ಶ್ರೀರಾಮನೂ ಅವರ ಕೈಯಲ್ಲಿ ಶ್ರೀಸಂಸಾರಿಯಾಗುತ್ತಾನೆ, ಉಡುಪಿಯ ಕೃಷ್ಣ ಕನಕನಿಗಾಗಿ ಕಿಂಡಿಯಲ್ಲಿ ಕಣ್ಣಿಟ್ಟು ಕಾಯುತ್ತಾನೆ. ಅವರ ಹುಟ್ಟುಹಬ್ಬದ ದಿನಕ್ಕೆ ಅವರದೇ ಮೂರು ಕವಿತೆಗಳನ್ನು ಆರಿಸಿ ಪೋಣಿಸಿದ್ದೇನೆ: ಅವರ ವೈಚಾರಿಕತೆಯ ರೀತಿ ಮೇಲ್ನೋಟಕ್ಕೆ ಸರಳವಾಗಿದ್ದರೂ ಹೇಗೆ ಗಾಢವಾಗಿದೆ ಅಂತ ತೋರಿಸಲು;

ಎಚ್.ಎಸ್.ವೆಂಕಟೇಶ ಮೂರ್ತಿ ಅವರ ಮೂರು ಕವಿತೆಗಳು
ಭೂಮಿಯೂ ಒಂದು ಆಕಾಶ
ಆಕಾಶದಲ್ಲಿ ಗ್ರಹ ತಾರೆಗಳು ಚಲ್ಲಾಪಿಲ್ಲಿ ಚೆಲ್ಲಿ ಬಿದ್ದಿದ್ದಾವೆ
ಅದು ವಶಿಷ್ಠ, ಅದು ಅರುಂಧತಿ
ಅವರು ಬೆಳಕಿನ ಕೈಚಾಚಿ ಪರಸ್ಪರ ವರಿಸಿದ್ದಾರೆ
ನವದಂಪತಿಗಳೇ... ಅವರಂತಿರಬೇಕು ಸತಿ-ಪತಿ.

ಆಕಾಶದಲ್ಲಿ ಗ್ರಹತಾರೆಗಳು ಚಲ್ಲಾಪಿಲ್ಲಿ ಚೆಲ್ಲಿ ಬಿದ್ದಿದ್ದಾವೆ
ಅದು ಸಪ್ತರ್ಷಿ ಮಂಡಲ, ಅವು ಭತ್ತದ ಅರಳು
ಸಪ್ತರ್ಷಿಗಳು ಅಗ್ನಿಕುಂಡದ ಸುತ್ತ ಕೂತಿದ್ದಾರೆ
ಹೋಮಾಗ್ನಿ ಉರಿಸಿ ಅಂತರತಮ ಕೆದಕುತ್ತ

ಆಕಾಶದಲ್ಲಿ ಗ್ರಹತಾರೆಗಳು ಚಲ್ಲಾಪಿಲ್ಲಿ ಚೆಲ್ಲಿ ಬಿದ್ದಿದ್ದಾವೆ
ಅವನು ಚಂದ್ರ ಅವಳು ತಾರೆ ಅವನು ಬುಧ
ಅವರದ್ದು ಚಿಕ್ಕ ಚೊಕ್ಕ ಸಂಸಾರ
ಒಡಕು ಮರೆತು ಒಡನಿರುವುದೇ ಸಂಸಾರದ ಹದ

ಆಕಾಶದಲ್ಲಿ ಗ್ರಹತಾರೆಗಳು ಚಲ್ಲಾಪಿಲ್ಲಿ ಚೆಲ್ಲಿ ಬಿದ್ದಿದ್ದಾವೆ
ಆಗಾಗ ಇವರ ಮನೆಗೆ ಅವರು ಅವರ ಮನೆಗೆ ಇವರು
ಇದು ಕುಟುಂಬ ಧರ್ಮ; ಇದು ಮಾನವತ್ವದ ಮಾರ್ಗ
ಆದರೆ ನಿಷ್ಠುರ ಸತ್ಯ: ಆಳದಲ್ಲಿ ಅವರೆಲ್ಲ ಏಕಾಂಗಿಗಳು

ಆಕಾಶದಲ್ಲಿ ಗ್ರಹತಾರೆಗಳು ಚಲ್ಲಾಪಿಲ್ಲಿ ಚೆಲ್ಲಿ ಬಿದ್ದಿದ್ದಾವೆ
ನಕಾಷೆ ಬಿಡಿಸಿದ್ದು ನಾವು-ಎಳೆದು ಅವರ ನಡುವೆ ಸಂಬಂಧದ ಗೆರೆ
ಅಂತರ್ಜಾಲ ಹೆಣೆದಿದ್ದೇವೆ,ವಿಶ್ವ ಕುಟುಂಬ ಕನಸಿದ್ದೇವೆ
ಆದರೂ ನಮಗೆ ಗೊತ್ತು-ಭೂಮಿಯೂ ಒಂದು ಆಕಾಶ, ಇಲ್ಲಿ
ನಾವೆಲ್ಲ ಗ್ರಹ ತಾರೆಗಳು.

ಕಂಡದ್ದು

ರಾತ್ರಿ ಮಳೆ ಮಿಂಚು, ವಿದ್ಯುತ್ತು ಹೋಗಿದೆ. ನೀವು
ಬಂದಾಗ ಮನೆಗೆ ಏನೇನೂ ಕಾಣುತ್ತಿಲ್ಲ
ಹೇಗೋ ಬಾಗಿಲು ತೆಗೆದು ಒಳಗೆ ಬರುವಿರಿ. ಬಂದು
ಕಡ್ಡಿಪೆಟ್ಟಿಗೆಗಾಗಿ ತಡವರಿಸುವಿರಿ, ಇಲ್ಲ.
ಸಿಗಲಿಲ್ಲ.ಸಿಡಿಮಿಡಿ.ಮನೆಯೊಡತಿ ಸಂಜೆಯೇ
ರಜ ಎಂದು ಮಗನೊಡನೆ ತಾಯಿಯೂರಿಗೆ. ನೀವು
ಚಡಪಡಿಸುವಿರಿ ಈಗ, ಅಡುಗೆ ಮನೆಯಲ್ಲಾಕೆ
ಕಿಟಕಿಯಲ್ಲಿಡುತ್ತಿದ್ದಳಲ್ಲವೆ ಹಣತೆಯನು?
ಹಣತೆ ಸಿಕ್ಕಿತು. ಅಲ್ಲೆ... ಅಲ್ಲೆ... ಕೆಳಗಡೆ ಹುಡುಕಿ
ಇದ್ದೀತು ಕಡ್ಡಿಪೆಟ್ಟಿಗೆ. ಹೌದು ಅಲ್ಲೆ ಇದೆ.
ಈಗ ಕಡ್ದಿಯ ಗೀರಿ ಮಣಿದೀಪ ಹೊತ್ತಿಸಿ.
ದೀಪವಷ್ಟೇ ಮೊದಲು ಕಾಣುವುದು. ಅಮೇಲೆ...
ಕಾಣುವುವು ಫ್ಲಾಸ್ಕು...ಬಿಸಿಯಡುಗೆ...ಕಾಸಿದ ಹಾಲು
ಪ್ರೀತಿ...ಕಳಕಳಿ...ಅಕರಾಸ್ತೆ...ಕವಿತೆಯ ಸಾಲು

ಹೀಗೇ ಒಂದು ರಾತ್ರಿ
ಬಿದಿಗೆ
ರಾತ್ರಿ
ಹಸಿರು ಸೀರೆ ಉಟ್ಟ
ಯಶೋದೆ
ಅಂಗಾತ ಮಲಗಿದ್ದಾಳೆ

ನೀಲ ಮೇಘ ಶ್ಯಾಮ
ಅವಳ
ಮೊಲೆತೊಟ್ಟಿಗೆ ತುಟಿ ಹಚ್ಚಿ
ಚೀಪುತ್ತಿದ್ದಾನೆ

ಡೊಂಕಾದ
ಅವನ ಕೆಳದುಟಿಗೆ ಬೆಳ್ಳಗೆ
ಹಾಲು ಮೆತ್ತಿದೆ.

ಅವನ ಚಂಡಿಕೆ ಹಾರಿ ಸೂಜಿಮಲ್ಲೆ
ಎಲ್ಲೆಲ್ಲೂ ಚೆಲ್ಲಿವೆ.

ಅರುಣ ಜೋಳದ ಕೂಡ್ಲಿಗಿ ಅವರ 'ಅವ್ವನ ಅಂಗನವಾಡಿ'

ವಾಚ್ಯವಾಗಿಯೇ ಉಳಿವ ಅಂಗನವಾಡಿಯ ಪದ್ಯಗಳು.

ಡಾ.ಅರುಣ ಜೋಳದಕೂಡ್ಲಿಗಿ ವಾಚಕರವಾಣಿ ಮತ್ತು ಓದುಗರ ಪತ್ರದ ಮೂಲಕ ನಿರಂತರವಾಗಿ ತಮ್ಮ ಸುತ್ತಲಿನ ಅನ್ಯಾಯಗಳನ್ನು ಕುಂದುಕೊರತೆಗಳನ್ನೂ ಅವರಿವರ ಕತೆ-ಕವಿತೆಗಳಿಗೆ ಪ್ರತಿಕ್ರಿಯೆಗಳನ್ನು ಬರೆಯುತ್ತಲೇ ಕವಿಯಾಗಿ ಅರಳಿದವರು. ಕಾವ್ಯ ಸ್ಪರ್ಧೆಗಳಲ್ಲೂ ತಮ್ಮ ಕವಿತೆಗಳಿಗೆ ಬಹುಮಾನಗಳನ್ನು ಪಡೆಯುವ ಮೂಲಕ ಎಡ ಪಂಥೀಯ ಆಶಯಗಳನ್ನು, ಸಮಾನತೆಯ ಕನಸುಗಳನ್ನೂ ತಮ್ಮ ಬರಗಳುದ್ದಕ್ಕೂ ಕಾಣಿಸುತ್ತಲೇ ಬಂದವರು. ಈಗಾಗಲೇ ‘ನೆರಳು ಮಾತಾಡುವ ಹೊತ್ತು’ (೨೦೦೪) ಕವನ ಸಂಕಲನವನ್ನೂ, ಮತ್ತು ‘ಸೊಂಡೂರಿನ ಭೂ ಹೋರಾಟಗಳು’ (೨೦೦೮) ಅಧ್ಯಯನ ಕೃತಿಯನ್ನೂ ಪ್ರಕಟಿಸಿ ಸಾರಸ್ವತ ಲೋಕದಲ್ಲಿ ದಾಖಲಾಗಿರುವವರು. ಅವರ ಎರಡನೇ ಕವನ ಸಂಕಲನ ‘ಅವ್ವನ ಅಂಗನವಾಡಿ’.

ಒಟ್ಟು ೪೧ ಪದ್ಯಗಳೆಂದು ಕರೆದಿರುವ ರಚನೆಗಳು ಈ ಸಂಕಲನದಲ್ಲಿವೆ. ಕಾವ್ಯ ಪರಂಪರೆಯ ಬೆರಗು ಹುಟ್ಟಿಸುವ ದನಿಗಳನ್ನು ಅಭ್ಯಸಿಸಿ ಆ ಮೂಲಕ ಅದನ್ನು ಪಡೆದ ಕವಿ, ಹಾಗೆ ತನಗೊಲಿದ ತನ್ನದೇ ದನಿಯಲ್ಲಿ ಕವಿತೆ ಕಟ್ಟಬೇಕೆಂಬ ಮತ್ತು ಪ್ರತಿಮೆ/ರೂಪಕಗಳ ಜೊತೆಗೇ ಕವಿಯು ಅನುಸಂಧಾನ ಮಾಡಬೇಕೆನ್ನುವ ‘ಪುರಾತನ’ ಮಾತುಗಳನ್ನೂ ಈ ಕವಿ ನೇರವಾಗಿ ಮತ್ತು ನಯವಾಗಿ ತಿರಸ್ಕರಿಸಿರುವುದು ಮೊದಲ ಓದಿಗೇ ಶೃತವಾಗುವ ಅಂಶಗಳು. ಏಕೆಂದರೆ ಕವಿತೆಯ ಕಟ್ಟುವಿಕೆಗೆ ಕವಿಯಾದವನಿಗೆ ಇರಲೇಬೇಕೆಂದು ಬಹುತೇಕರು ನಂಬಿರುವ ‘ಕವಿಸಮಯ’ ಮತ್ತು ಕಾವ್ಯಾನ್ವೇಷಣೆಯ ದೀರ್ಘಪಥವನ್ನು ಬೇಕೆಂತಲೇ ಬಿಟ್ಟುಕೊಟ್ಟು ತನಗೊಲಿದ ಕಾಲುದಾರಿಯಲ್ಲೇ ಇಲ್ಲಿನ ಎಲ್ಲ ಕವಿತೆಗಳನ್ನೂ ಅರುಣ ಅರಳಿಸಿದ್ದಾರೆ.

ಮುನ್ನುಡಿಕಾರ ಕೆ.ವಿ.ನಾರಾಯಣರವರು ಗುರ್ತಿಸಿರುವಂತೆ ಈ ಕಾಲದ ಹೊಸ ಬರಹಗಾರ ಹಳೆಯ ಕಾಲದವರ ಹಳಹಳಿಕೆಯ ಮಾತುಗಳು ನುಸುಳದಂತೆ ಇಲ್ಲವೇ ಎಲ್ಲರೂ ಮೆಚ್ಚಿದಂತೆ, ಯಾರಿಗೂ ಗೊತ್ತಾಗದಂತೆ ಬರೆಯುವ ಬಗೆಯಿಂದ ಇಲ್ಲಿನ ಪದ್ಯಗಳು ತಪ್ಪಿಸಿಕೊಂಡಿವೆ. ಅರುಣ ವಯಸ್ಸು ಮತ್ತು ಅನುಭವದಲ್ಲಿ ಇನ್ನೂ ಚಿಕ್ಕವರು. ಅವರು ಬೆಳೆದು ಬಂದ ವಾತಾವರಣದಲ್ಲಿ ಅವರು ಕಂಡುಂಡ ನೋವು, ಹತಾಶೆ ನಿರಾಶೆಗಳನ್ನು ತಮಗೊಲಿದ ಕಾವ್ಯಮಾರ್ಗದಲ್ಲಿ ಹೇಳಬಯಸಿದ್ದಾರೆ. ಇಲ್ಲಿನ ಎಲ್ಲ ಕವಿತೆಗಳಲ್ಲೂ ಸಂತಸದ ಸುಳಿವಾಗಲೀ, ಆನಂದದ ಕ್ಷಣಗಳಾಗಲೀ ಇಲ್ಲವೇ ಇಲ್ಲ. ಎಲ್ಲ ರಚನೆಗಳ ಹಿಂದೂ ನೋವು ನಿಟ್ಟುಸಿರು ಮತ್ತದಕ್ಕೆ ಮರುಗುವ ಹೃದಯದ ಹಾಡುಗಳಿವೆ. ಆದರೆ ಎಂತಹುದೇ ಕಷ್ಟಕಾರ್ಪಣ್ಯದಲ್ಲಿರುವ ವ್ಯಕ್ತಿಗೂ ಕ್ಷಣಕಾಲದವರೆಗಾದರೂ ಸಂತಸದ ಘಳಿಗೆಗಳಿದ್ದೇ ಇರುವುದರಿಂದ ಈ ಕವಿ ಬೇಕೆಂತಲೇ ಅವನ್ನು ನಿರಾಕರಿಸಿದ್ದಾರೋ ಅಥವ ಪ್ರಯತ್ನಪೂರ್ವಕವಾಗಿ ಬೇಕೆಂತಲೇ ನೋವು-ವಿಷಾದಗಳನ್ನೇ ತಮ್ಮ ಕಾವ್ಯಾಭಿವ್ಯಕ್ತಿಯ ಮಾಧ್ಯಮವನ್ನಾಗಿಸಿಕೊಂಡಿದ್ದಾರೋ ಎಂಬುದನ್ನು ಕವಿತೆಗಳ ಓದಿನಿಂದಲೇ ಮನಗಾಣಬಹುದು.

ಅವ್ವನ ರಂಗೋಲಿ-ಹೆಸರಿನ ಸಂಕಲನದ ಮೊದಲ ಪದ್ಯದಲ್ಲಿ ತನ್ನವ್ವ ಎಳೆದ ರಂಗೋಲಿಯ ಗೆರೆಗಳನ್ನೇ ದಾರವಾಗಿ ಮಾಡಿಕೊಂಡು ಗಾಳಿಪಟ ಹಾರಿಸುವ ಕವಿ ಫ್ಯಾಂಟಸಿಯ ಲೋಕವೊಂದನ್ನು ಕಟ್ಟಿಕೊಡುತ್ತಲೇ ಆ ದಾರವನ್ನೇ ಹಗ್ಗವನ್ನಾಗಿ ಮಾಡಿಕೊಂಡು ಅವ್ವನನ್ನು ಬಯ್ಯುವ ತನ್ನಪ್ಪನನ್ನು ಹೆಡೆಮುರಿ ಕಟ್ಟುತ್ತಾನೆ. ಚಿತ್ರಪಟದ ಗಾಂಧಿಗೆ ನೂಲುವ ದಾರ ಖಾಲಿಯಾಗಿದೆಯೆಂದು ರಂಗೋಲಿಯಿಂದ ಪಡೆದ ದಾರವನ್ನೇ ನೀಡುವಾಗ ಅವ್ವನಿಗೊಂದು ಸೀರೆ ನೇಯ್ದು ಕೊಡಬೇಕೆಂಬ ಷರತ್ತು ಹಾಕುತ್ತಾನೆ. ಪದ್ಯ ಇಂಥ ರಮ್ಯ ಕಲ್ಪನೆಯಿಂದ ತೆರೆದುಕೊಳ್ಳುವುದಾದರೂ ಮೊದಲೇ ನಿರ್ಧರಿಸಿದ ಅಂತ್ಯ ಪದ್ಯಕ್ಕೆ ಬಂದೆದಗುವುದರಿಂದ, ಪದ್ಯ ಎದೆಗಿಳಿಯದೇ ಬರಿಯ ಫ್ಯಾಂಟಸಿಯ ಲೋಕವೊಂದನ್ನು ಮಾತ್ರ ಕಾಣಿಸಿಬಿಡುತ್ತದೆ.

ವ್ಯಂಗ್ಯದ ಮೊನಚನ್ನು ತಮ್ಮ ಕವಿತೆಗಳಿಗೆ ಆಯುಧವನ್ನಾಗಿ ಮಾಡಿಕೊಂಡಿರುವ ಈ ಕವಿ ‘ವಿಶ್ವ ವಿದ್ಯಾಲಯದ ಸೆಮಿನಾರಿನಲ್ಲಿ’, ‘ರೆಕ್ಕೆಗಳೇ ತ್ರಿಶೂಲವಾದ ದೇಶದಲ್ಲಿ’, ‘ಬಯಲ ಬಸಿರಿನ ಕನವರಿಕೆ’, ಪದ್ಯಗಳಲ್ಲಿ ವ್ಯಂಗ್ಯದ ಮೂಲಕವೇ ಈ ಸಮಾಜ ಅನೂಚಾನವಾಗಿ ನಡೆಸಿಕೊಂಡು ಬರುತ್ತಿರುವ ಆಚರಣೆಗಳಿಗೆ ಉತ್ತರವನ್ನು ನೀಡುತ್ತಾರಾದರೂ, ಏಕೋ ಈ ಉತ್ತರಗಳೆಲ್ಲ ಚಳವಳಿಗಾರರ ಒಣ ಭಾಷಣದಂತೆ ಶುಷ್ಕವಾಗಿವೆಯೇ ವಿನಾ ಕವಿತೆಯಾಗುವಲ್ಲಿ ಸೋತಿವೆ.

ನೆಲದ ನೆತ್ತಿಯ ಮೇಲೆ, ಬಯಲೆಂದರೆ ಬರೀ ಬಯಲಲ್ಲ ಪ್ರಭುವೇ ಪದ್ಯಗಳು ಈ ಕವಿ ಮುಂದೆ ಬೆಳೆಯಬಹುದಾದ ಸಾಧ್ಯತೆಗಳನ್ನು ಹೇಳಿದರೆ ಬಿಡುಗಡೆಯ ಬಿಡಿ ಪದ್ಯಗಳು, ಮುಖವಿರದ ಚಿತ್ರಗಳು, ಮಾತುಗಳ ಸುಟ್ಟವರು ಕವಿತೆಗಳಲ್ಲಿ ಅನೇಕ ಸಾಧ್ಯತೆಗಳನ್ನು ಕಾಣಿಸುತ್ತಾರೆ. ಹುಲಿಯಾಗಲು ಬಣ್ಣ ಹಚ್ಚಿದವರು ಥರದ ಮೂರು ನಾಲ್ಕು ಪದ್ಯಗಳು ಬೇಕೆಂತಲೇ ವ್ಯವಸ್ಥೆಯನ್ನು ಅಣಕಿಸುವ ಸಲುವಾಗಿ ಬರೆದಂತೆ ಭಾಸವಾಗುತ್ತವೆ.

ತನ್ನ ಸ್ವಂತ ಅವ್ವನ ಬದುಕಿನ ಪುಟಗಳನ್ನೇ ಅವ್ವನ ಅಂಗನವಾಡಿ ಶೀರ್ಷಿಕೆಯಲ್ಲಿ ಪದ್ಯವಾಗಿಸಿರುವ ಕವಿ, ಇತ್ತ ಲಯಗಾರಿಕೆಯೂ ಇಲ್ಲದ ಅತ್ತ ಕಥನ ಕವನಗಳಲ್ಲಿರುವ ಕುತೂಹಲದ ಅಂಶಗಳನ್ನೂ ಹಿಡಿದಿಡದೇ ತನ್ನವ್ವನ ಬದುಕನ್ನು ನೆನೆಯುತ್ತಾರೆ. ಅವರ ಮಹತ್ವಾಕಾಂಕ್ಷೆಯ ಪದ್ಯ ಇದಾಗಿದೆಯೆಂಬುದು ಸಂಕಲನವನ್ನು ಇದೇ ಹೆಸರಿನಿಂದ ಕರೆದಿರುವುದು ಕಾರಣವಾಗಿದೆ.

ತಮ್ಮ ಆಶಯಗಳನ್ನು ವೈಭವೀಕರಿಸಲು ಮತ್ತು ತಾವು ನಂಬಿದ ಸಿದ್ಧಾಂತಗಳನ್ನು ಪ್ರತಿಪಾದಿಸಲು ಅರುಣ ಸಂಕಲನದ ರಚನೆಗಳಿಗೆ ಕೈ ಹಾಕಿದ್ದಾರೆ. ವಾಚ್ಯವಾಗಿಯೇ ಉಳಿದುಬಿಡುವ ಇಲ್ಲಿನ ಹಲವು ರಚನೆಗಳ ವಿನ್ಯಾಸ ಓದಿನ ಕ್ಷಣದಲ್ಲಿ ಕಾಡುವುವಾದರೂ ಮರು ಓದಿಗೆ ನಮ್ಮನ್ನು ಹಿಡಿದಿಡುವುದರಲ್ಲಿ ಸೋತಿವೆ. ಅಕಾರಣ ಎಲ್ಲ ತೊಂದರೆಗಳಿಗೂ ಅನ್ಯರನ್ನೇ ಸಂಶಯಿಸುವ/ಹೊಣೆಗಾರರನ್ನಾಗಿಸುವ ಮತ್ತು ಸಾಮಾಜಿಕ ಅಸಮಾನತೆಗೆ ಪ್ರಭುತ್ವವನ್ನೇ ಗುರಿಮಾಡುವ ಬಹುತೇಕರು ಇಂಥ ಸಮಸ್ಯೆಗಳಿಗೆ ಪರ್ಯಾಯವನ್ನು ಹುಡುಕದೇ/ಕಟ್ಟಿಕೊಡದೇ ಬರಿಯ ಸಂಕಟದ ಪ್ರದರ್ಶನಗಳಿಂದಲೇ ಸಮಾಧಾನಗೊಂಡರೆ/ಗೊಳ್ಳುತ್ತಲೇ ಹೋದರೆ, ‘ಕಾವ್ಯ’ ಮುಂದಿನ ದಿನಗಳಲ್ಲಿ ಸಾಗಬೇಕಾದ ಹೊರಳುದಾರಿಗಳ ಬಗ್ಗೆ ಆತಂಕಗಳೂ ಉಂಟಾಗುತ್ತವೆ.

ಕೃತಿ: ಅವ್ವನ ಅಂಗನವಾಡಿ ಕವಿ: ಅರುಣ್ ಜೋಳದ ಕೂಡ್ಲಿಗಿ ವರ್ಷ: ೨೦೧೦
ಪ್ರಕಾಶಕರು: ಅಹರ್ನಿಶಿ, ಶಿವಮೊಗ್ಗ ಪುಟಗಳು ೧೦೪, ಬೆಲೆ ರೂ ೬೦/-