ಒಟ್ಟು ಪುಟವೀಕ್ಷಣೆಗಳು

ಶನಿವಾರ, ಅಕ್ಟೋಬರ್ 16, 2010

ಕರುಣಾಳು ಬಾ ಬೆಳಕೇ...

ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು. . . .ಕವಿ ಬೆಳಕನ್ನು ಆರ್ತವಾಗಿ ಪ್ರಾರ್ಥಸಿದ್ದಾನೆ. ಬೆಳಕೆಂಬುದು ಭಗವಂತನ ನೆರಳು ಅಂದವನು ಗ್ರೀಕ್ ದಾರ್ಶನಿಕ ಪ್ಲೇಟೋ. ಭೌತಿಕ ವಸ್ತುಗಳ ನೆರಳು ಕಪ್ಪನೆಯ ಬಣ್ನದಲ್ಲಿದ್ದರೆ ಭಗವಂತನ ನೆರಳು ಬೆಳಕಿನ ರೂಪದಲ್ಲಿರುತ್ತದೆ ಎನ್ನುತ್ತ್ತಾನೆ ಒಬ್ಬ ಭಕ್ತಿ ಕವಿ. ಸ್ವಯಂ ಪ್ರಕಾಶನೆಂದು ವೇದಗಳು ಪ್ರಮಾಣಿಸಿರುವ ಭಗವಂತನ ನೆರಳೇ ಬೆಳಕಿನ ರೂಪದಲ್ಲಿ ಈ ಜಗತ್ತನ್ನು ಕಾಪಿಡುತ್ತಿದೆಯೆಂದು ನಂಬಿದವರೂ ಬಹಳ ಜನರಿದ್ದಾರೆ. ಲೋಕ ಜೀವನದ ಸಾತತ್ಯವನ್ನು ಕೆಡದಂತೆ ನಡೆಸಿಕೊಡುವುದೇ ಬೆಳಕಿನ ಮೂಲಸ್ವರೂಪನಾದ ಸೂರ್ಯನ ಕೆಲಸವೂ ಆಗಿರುವುದರಿಂದ ಸೂರ್ಯನನ್ನೇ ಭಗವಂತನೆಂದು ಕರೆಯಲೂ ಅಡ್ಡಿಯಿಲ್ಲ. ದೇವರ ಅಸ್ತಿತ್ವನ್ನು ನಂಬುವುದು ಅಥವ ಬಿಡುವುದೂ ಅವರವರ ಮನೋಧರ್ಮಕ್ಕೆ ಬಿಟ್ಟ ವಿಚಾರವಾದರೂ ಬೆಳಕೆಂಬುದು ಆಸ್ತಿಕರಿಗೂ ನಾಸ್ತಿಕರಿಗೂ ಸಮಾನವಾಗಿ ಜೀವನ ನಿರ್ವಹಣೆಯ ಮೂಲಸ್ರೋತವಾಗಿರುವುದನ್ನು ಅಲ್ಲಗಳೆಯಲಾಗದು. ಬೆಳಕಿನ ಉಪಯೋಗ ಸಂದೇಹಾತೀತವಾದುದು. ದ್ವಂದ್ವಾತೀತವಾದುದು. ಬೆಳಕಿಲ್ಲದೇ ಬದುಕು ಸಾಗುವುದಿಲ್ಲ. ಬದುಕನ್ನು ಅನುಭವಿಸಲು ಆಸ್ವಾದಿಸಲು ಬೆಳಕು ಬೇಕೇ ಬೇಕು.

ಭಾರತೀಯ ದಾರ್ಶನಿಕ ವಿವೇಚನೆಯ ಪ್ರಕಾರ ಭಗವಂತನ ರೂಪವು ಇಂದ್ರಿಯ ಗೋಚರವಾಗಿರುವ ನಮ್ಮ ಸುತ್ತಮುತ್ತಲಿನ ಪ್ರಪಂಚವೇ ಆಗಿದೆ. ಅದು ಮುಮುಕ್ಷುವಿನ ಅನುಭವಕ್ಕೆ ಬರುವುದು ಆ ಮುಮುಕ್ಷು ಆ ಅರಿವನ್ನು ಪಡೆದಾಗ ಮಾತ್ರ. ಆದರೆ ತೀರ ಸಾಮನ್ಯರಾದ ನಮ್ಮೆಲ್ಲರಿಗೂ ಭಗವಂತನ ಕೃಪಾಶೀರ್ವಾದಗಳು ಬೆಳಕಿನ ಸ್ವರೂಪದಲ್ಲಿ ಕಾಪಾಡುತ್ತಿದೆ ಅಂದರೆ ತಪ್ಪಾಗಲಾರದು. ಬೆಳಕು ಅಂದರೆ ಶಕ್ತಿಯ ಮೂಲ, ಜ್ಞಾನದ ಆಕರ. ಅರಿವಿನ ಕೇಂದ್ರ,. ಚರಾಚರ ಪ್ರಕೃತಿಯ ವಿವಿಧ ರೂಪಗಳು ಕಾಣುವುದು ಬೆಳಕಿನ ಸಹಾಯದಿಂದ ಮಾತ್ರ ಸಾಧ್ಯವಿರುವ ಸಂಗತಿಯಾದ್ದರಿಂದ ಬೆಳಕನ್ನು ಬರಿಯ ಬೆಳಕಾಗಿ ನೋಡಲಾಗದು. ಹೊರ ಜಗತ್ತಿನ ಬೆಳಕಿಗೆ ಸಂವಾದಿಯಾಗಿ ನಮ್ಮೆಲ್ಲರೊಳಗೂ ಒಂದೊಂದು ಬೆಳಕಿನ ಗಣಿಯೇ ಇದೆ. ಆದರೆ ಆ ಗಣಿಯನ್ನು ಬಗೆದು ಒಳಗಿನ ಖನಿಜವನ್ನೆತ್ತಿ ತರುವುದು ಹಾಗೆ ತಂದ ಖನಿಜವನ್ನು ಶೋಧಿಸಿ, ಕಾಯಿಸಿ, ಲೋಹವನ್ನಾಗಿ ಪರಿವರ್ತಿಸಿ ಇಷ್ಟ ದೇವತೆಯ ವಿಗ್ರಹವನ್ನಾಗಿ ಕಟೆದು ನಿಲ್ಲಿಸುವುದು ಅಷ್ಟೇನೂ ಸುಲಭಕ್ಕೆ ದಕ್ಕದ ಸಂಗತಿ. ನಮ್ಮೊಳಗಿರುವ ವಿವೇಕವೆಂಬ ಬತ್ತಿಯನ್ನು ಅರಿವಿನ ತೈಲದೊಂದಿಗೆ ಸಮ್ಮೇಳಿಸಿ ಜ್ಞಾನದ ಬೆಳಕನ್ನು ಪಡೆಯಬಹುದೆಂದು ಸಮರ್ಥ ರಾಮದಾಸರು ಹೇಳಿದ್ದಾರೆ. ವಿವೇಕವೆಂಬ ಸಾಕ್ಷಿಪ್ರಜ್ಞೆ ಬೆಳಕನ್ನು ಮಂಕಾಗದಂತೆ ಕಾಯುವ ತವನಿಧಿ. ಬೆಳಕು ನಂದಿಹೋಗಿ ಕತ್ತಲಾವರಿಸದಂತೆ ಕಾಪಾಡಿಕೊಳ್ಳಬೇಕಾದ ನಿರಂತರ ಎಚ್ಚರ ಎಂಬ ಜವಾಬ್ದಾರಿ ನಮ್ಮೆಲ್ಲರದು. ನಮ್ಮೊಳಗಿನ ವ್ಯಕ್ತಿಗೆ ವ್ಯಕ್ತಿತ್ವ ಲಭಿಸಬೇಕಾದರೆ ನೈತಿಕ ವಿಕಸನವೆಂಬ ಬೆಳಕಿನ ಅನಿವಾರ್ಯತೆ ಇದ್ದೇ ಇದೆ.

ಭೂಮಿಯ ಮೇಲಿನ ಸಕಲ ಜೀವಾತ್ಮ ಕೋಟಿಗಳಿಗೆ ಸೂರ್ಯನೇ ಆದಿಮೂಲವಾಗಿದ್ದಾನೆ. ವೈಜ್ಞಾನಿಕವಾಗಿಯೂ ಸೂರ್ಯನೇ ಈ ಲೋಕದ ಸಕಲ ಭೌತಿಕ, ಜೈವಿಕ, ಮಾನಸಿಕ ಚಟುವಟಿಕೆಗಳ ಪ್ರೇರಕ ಶಕ್ತಿಯಾಗಿದ್ದಾನೆ, ಪೋಷಕನಾಗಿದ್ದಾನೆ, ನಿಯಂತ್ರಕನೂ ಆಗಿ ಕಾಪಾಡುತ್ತಿದ್ದಾನೆ. ದ್ಯುತಿ ಸಂಷ್ಲೇಷಣೆಯ ಮೂಲಕ ಜೈವಿಕ ಚಟುವಟಿಕೆಗಳಿಗೆ ಪ್ರೇರಕ ಶಕ್ತಿಯಾಗಿರುವುದರ ಜೊತೆ ಜೊತೆಗೇ ನೀರು-ಆವಿ-ಮೋಡ-ಮಳೆಗಳ ಜಲಚಕ್ರವನ್ನು ಯಶಸ್ವಿಯಾಗಿ, ನಿರಂತರವಾಗಿ, ಬೇಸರಿಸದೇ ಮಾಡುತ್ತಿರುವವನೇ ಸೂರ್ಯನಾರಾಯಣ. ಹಾಗೆಂದೇ ಸಂಧ್ಯಾ ಸಮಯದಲ್ಲಿ ಅರ್ಘ್ಯವನ್ನು ನೀಡುವುದರ ಮೂಲಕ ನಮ್ಮ ಹಿರಿಯರು ಸೂರ್ಯನಿಗೆ ಸದಾ ಕೃತಜ್ಞತೆಯನ್ನು ಸೂಚಿಸುತ್ತಿದ್ದರು. ದಿನ,ರಾತ್ರಿ,ವಾರ,ಪಕ್ಷ,ಮಾಸ,ಸಂವತ್ಸರಗಳ ನಿಲ್ಲದ ಗಡಿಯಾರದ ಮೂಲ ಶಕ್ತಿ ಸೂರ್ಯನೆಂಬ ಬೆಳಕೇ ಆಗಿದೆ. ಸೂರ್ಯುನು ಸ್ಥಾವg. ಜಂಗಮ ಸ್ವರೂಪವಾದ ಸಮಸ್ತ ಜಗತ್ತಿನ ಆತ್ಮವೇ ಅವನಾಗಿದ್ದಾನೆ.

ಬೆಳಕೆಂದರೆ ಬದುಕು. ಕತ್ತಲೆಂದರೆ ಸಾವು. ಬದುಕಿನಲ್ಲಿ ಕತ್ತಲು ಅನಿವಾರ್ಯ. ಕತ್ತಲ ಬಿಡುಗಡೆಗೆ ಬೆಳಕೊಂದೇ ಆಧಾರ. ಹಾಗಾಗಿಯೆ ಕವಿ ಹಾಡಿಯೇ ಹಾಡುತ್ತಾನೆ- ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು... ... ...

ಮೌನವೆಂಬ ಮಹಾನಿಧಿ

ಮೌನವನ್ನು ಕುರಿತು ಮಾತನಾಡಿದರೆ ಅಥವ ಅದನ್ನು ಕುರಿತು ಬರೆಯುತ್ತ ಹೋದರೆ ಅದು ವಿರೋಧಾಭಾಸವೇ ಆಗುತ್ತದೆ. ಏಕೆಂದರೆ ಮೌನವೆನ್ನುವುದು ಅದರ ಶುದ್ಧ ಸ್ವರೂಪದಲ್ಲಿ ಒಂದು ಅನಿರ್ವಚನೀಯ ಸ್ಥಿತಿ. ಅಂದರೆ ಮಾತುಗಳೆಲ್ಲವನ್ನೂ ನಿರಾಕರಿಸಿದ ಮತ್ತು ಕೇವಲ ಅನುಭವದ ಮೂಲಕವೇ ಸಕಲಕ್ಕೂ ಉತ್ತರಕೊಡಬಲ್ಲ ತಾಕತ್ತು ಮೌನಕ್ಕಿದೆ. ಸರಿಯಾದ ಮಾತುಗಳು ಹುಟ್ಟುವುದೂ ಮೌನದ ಗರ್ಭದಲ್ಲೇ!

ಸದಾ ಮಾತನಾಡುತ್ತಲೇ ಇರುವುದು ಶಕ್ತಿಯ ಅಪವ್ಯಯ ಅನ್ನುತ್ತಾರೆ ತಿಳಿದವರು. ಅವರ ಪ್ರಕಾರ ಮೌನವೆನ್ನುವುದು ಶಕ್ತಿ ಸಂಚಯನದ ಒಂದು ಸಾಧನ. ಜನರಿಂದ ಬಹಳ ದೂರವೇ ಉಳಿಯುವ ಯೋಗಿಗಳೂ, ಸಿದ್ಧಪುರಷರೂ ಮೌನಿಗಳಾಗಿದ್ದರೂ ಜನರ ಒಳದನಿಗಳನ್ನು ಆಲಿಸಿ ಸಮಾಧಾನಕಾರವಾದ ಉತ್ತರವನ್ನು ನೀಡಬಲ್ಲವರು. ಪರಿಪೂರ್ಣ ಮೌನ ಎಂಥವರಲ್ಲೇ ಆಗಲಿ ನಿರ್ಮಲ ಭಾವಗಳನ್ನು ಉದ್ದೀಪಿಸಬಲ್ಲುದು. ಎಮರ್ಸನ್ ‘ಭಗವಂತನಾಡುವ ಪಿಸುಮಾತುಗಳನ್ನು ಆಲಿಸಲು ಮೌನವೊಂದೇ ಸಾಧನ’ ಎನ್ನುತ್ತಾನೆ. ಮೌನದ ಮೂಲಕವೇ ಜಿಜ್ಞಾಸುಗಳೊಂದಿಗೆ ಭಗವಾನ್ ರಮಣರು ಮಾತನಾಡುತ್ತಿದ್ದರೆಂಬ ಪ್ರತೀತಿಯೂ ಇದೆ. ರಮಣರು ಹೇಳುವ ಹಾಗೆ ಮೌನವೆಂಬುದೇ ಅನಂತವಾದ ಮಾತು.

ಸಾತ್ವಿಕ ಮೌನವು ಅಂತರಂಗದ ಕೊಳೆಯನ್ನು ಗುಡಿಸಿಹಾಕುವ ಪೊರಕೆಯಾಗಿದೆ. ಅಂತರಂಗವು ಶುಚಿಯಾಗಿ ವಿವೇಕ, ಆರ್ದ್ರತೆ, ಸಹೃದಯತೆ, ಸಹಸ್ಪಂದನ ಇತ್ಯಾದಿ ದೈವೀಗುಣಗಳು ವ್ಯಕ್ತಿತ್ವದಲ್ಲಿ ಪಡಿಮೂಡಿ ಬರಬೇಕಾದರೆ ಮೌನದ ವ್ರತ ಹಿಡಿಯಲೇ ಬೇಕಾಗುತ್ತದೆ. ಯೋಚನೆಗಳಿಗೆ ಸರಿಯಾದ ದಿಕ್ಕು ದೆಶೆ, ಭಾವನೆಗಳಿಗೆ ಗಟ್ಟಿ ಬುನಾದಿ ಬರುವುದು ಮೌನದಿಂದ ಮಾತ್ರ ಸಾಧ್ಯವಿರುವ ಸಂಗತಿಗಳು. ಆಡುವ ಮಾತಿಗೆ ತೂಕ, ಘನತೆ, ಅರ್ಥವಂತಿಕೆಗಳೆಲ್ಲ ಬೇಕಾದರೆ ಮಾತನ್ನು ಅಪರೂಪಕ್ಕೆ ಮಾತ್ರ ಆಡಬೇಕಾಗುತ್ತದೆ. ಅದೇ ವಾಚಾಳಿಯ ಮಾತು ಯಾವತ್ತೂ ಹಗುರಾಗಿ ನಗಣ್ಯವೆನ್ನಿಸುಕೊಳ್ಳುತ್ತಲೇ ಇರುತ್ತದೆ.

ಮೌನವೆಂದರೆ ಮಾತನಾಡದೇ ಸುಮ್ಮನಿರುವುದು ಎಂದಲ್ಲ. ಹೊರಗೆ ಮಾತಲ್ಲಿ ತೋರಿಸದಿದ್ದರೂ ಒಳಗೇ ಸದಾ ಕಾಡುವ ಚಿಂತೆ, ಬಯಕೆ, ಭಯ, ಗೊಂದಲ ಮುಂತಾದುವಕ್ಕೆ ಕುದಿಯುತ್ತಲೇ ಇರುವ ಸಂದರ್ಭಗಳು ಸಾಮಾನ್ಯ ಮನುಷ್ಯನ ಜೀವನದಲ್ಲಿ ಇದ್ದೇಇರುವ ಸಂಗತಿಗಳು. ಅವುಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದೇ ಮೌನದ ಸಾಧನೆ. ಮನಸ್ಸಿನೊಳಗಿನ ಎಲ್ಲ ಚಲನೆಗಳನ್ನೂ ಹಿಡಿತದಲ್ಲಿಟ್ಟುಕೊಂಡು ಬುದ್ಧಿಯನ್ನು ಯಾವುದೋ ಶ್ರದ್ಧಾಕೇಂದ್ರವೊಂದರಲ್ಲಿ ನಿಲ್ಲಿಸುವುದು ವಾಚಾಳಿಯಿಂದ ಸಾಧ್ಯವಿಲ್ಲದ ಸಂಗತಿ. ಮೌನೋಪಾಸನೆಯಿಂದ ಮಾತ್ರ ಶ್ರದ್ಧ್ಧೆಯ ವಿವೇಕ ಹೆಚ್ಚುತ್ತದೆ.

ಬದುಕಿನ ಹಲವು ಸ್ತರಗಳಲ್ಲಿ ಮಾತು ಸೋತು ಹೋದಾಗ ಮೌನ ಗೆದ್ದಿರುವ ಸಂದರ್ಭಗಳಿದ್ದೇ ಇರುತ್ತವೆ. ಅತ್ಯಂತ ನವಿರು ಭಾವಗಳನ್ನು ಮಾತು ಸ್ಪಷ್ಟವಾಗಿ ಹೊರಹಾಕದೇ ಹೋದ ನಿದರ್ಶನಗಳೂ ಇರುತ್ತವೆ. ಆದರೆ ವಾತ್ಸಲ್ಯ, ಕರುಣೆ, ಅನುರಾಗ ಮುಂತಾದ ಸ್ನಿಗ್ಧ ಭಾವಗಳನ್ನು ಮೌನ ಯಶಸ್ವಿಯಾಗಿ ಅಭಿವ್ಯಕ್ತಿಸಿ ಹೃದಯ ಸಂವಾದವನ್ನು ಆರಂಭಿಸಿಬಿಡುತ್ತದೆ.
ಮೌನದ ದೇಗುಲದಲ್ಲಿ ಮಾತೇ ಜ್ಯೋತಿರ್ಲಿಂಗವಾಗಿ ಬದಲಾಗುತ್ತದೆ. ಮೌನದ ಮಣ್ಣಿನಲ್ಲಿ ಮಾತಿನ ಬೀಜ ಬೆಳಕೇ ಆಗಿ ಕುಡಿಯೊಡೆಯುತ್ತದೆ. ಮೌನದ ಚಿಪ್ಪೊಡೆದು ಬಂದ ಮಾತಿಗೆ ಮುತ್ತಿನ ಬೆಲೆ ಬರುತ್ತದೆ.

ಪು.ತಿ.ನ ತಮ್ಮ ಕವಿತೆಯೊಂದರಲ್ಲಿ ಹಾಡಿದ ಹಾಗೆ- ಭಾವನೆ ಕಾಯುವ ನಾಂತಿಹ ಮೌನ, ಮೋಕ್ಷಾನಂದದ ಜೀವನ್ ಮೌನ, ಓ ಕಡು ಸೋಜಿಗವೀ ಮೌನ! ಚಿನ್ಮೌನ!

ಶಬ್ದ ಮಾಲಿನ್ಯದಿಂದ ಆವೃತವಾಗಿರುವ ಪ್ರಸ್ತುತ ವರ್ತಮಾನದಲ್ಲಿ ಶುದ್ಧ ಮೌನದ ದಾರಿ ಸುಲಭಕ್ಕೆ ಸರಳಕ್ಕೆ ಸಿಕ್ಕಲಾರದು. ಮಾತು ಮತ್ತು ಮೌನದ ನಡುವೆ ಇರುವುದು ಸೇತುವೆಯಲ್ಲ, ಬದಲಿಗೆ ಅದು ಇರುವ ಇಲ್ಲದಿರುವ ತೆಳ್ಳನೆಯ, ಅಳಿಸಿಬಿಡಬಹುದಾದ ಬದಲಿಸಿಬಿಡಬಹುದಾದ ಬಹುಶೃತ ಧಾರೆ. ಅದರ ವ್ಯತ್ಯಾಸ ಸಾಧನೆಯಿಂದಷ್ಟೇ ಗುರ್ತಿಸಲು ಸಾಧ್ಯವಿರುವಂತಹುದು.

ಭಾನುವಾರ, ಅಕ್ಟೋಬರ್ 3, 2010

ಅಂಗಿ

ಅಂಗಿ

ಇಷ್ಟೂ ದಿನ ತೊಟ್ಟು, ಬಣ್ಣ ಮಾಸಿರುವ
ಮೇಲಂಗಿಯನ್ನು ಕಳಚಿ ಹ್ಯಾಂಗರಿಗೆ ಹಾಕುವಾಗ
ಅಥವ
ಹಾಗೇ ಅಲ್ಲಿಂದ ತೆಗೆದು ತೊಟ್ಟುಕೊಳ್ಳುವಾಗ
ಮೂಗಿಗಡರುವ ಬೆವರ ವಾಸನೆ
ಮತ್ಯಾವುದೋ ಸ್ಮೃತಿಗೆ ದಬ್ಬುತ್ತದೆ
ಯಾವ ಯಾವುದೋ ಘಟನೆಗಳನ್ನು ತಬ್ಬುತ್ತದೆ.

ಹಾಗೆ ನೋಡಿದರೆ
ಹೊಸ ಅಂಗಿಗಳಿಗೆ ವಾಸನೆ
ಅಷ್ಟು ಸುಲಭಕ್ಕೆ ಹತ್ತಿಕೊಳ್ಳುವುದಿಲ್ಲ
ವಾದರೂ,
ತೊಟ್ಟು, ಕೊಳೆಯಾಗಿ ಮಡಿಮಾಡುವ ಹೊತ್ತಲ್ಲಿ
ಎಲ್ಲಿ ಬಣ್ಣ ಬಿಡುತ್ತದೋ ಎಂಬ ಜಿಜ್ಞಾಸೆ
ಯ ಜೊತೆ ಜೊತೆಗೇ ತೊಳೆಯುವ ಕಾಲಕ್ಕೆಲ್ಲಿ
ಉಳಿದ ಬಟ್ಟೆಗಳಿಗೂ
ಬಣ್ಣವಂಟಿಸಿಬಿಡುತ್ತದೋ ಎಂಬ ಆತಂಕ.

ಅಜ್ಜನ ಕಾಲವೇ ವಾಸಿ,
ಅಂಗಿ ತೊಡದೇ ಹಾಗೇ ತೆರೆದೆದೆಯಲ್ಲಿ
ದ್ದರೂ, ಅಂಗವಸ್ತ್ರದ ಮರೆ
ನೆಪಕ್ಕೆ, ಕೂತಾಗಲೂ ಜಪಕ್ಕೆ.

ವಾರ್ಡ್‌ರೋಬಿನ ತುಂಬ
ಲೆಕ್ಕಕ್ಕೆ ಸಿಕ್ಕದ ಅಷ್ಟೊಂದು ಅಂಗಿಗಳಿರುವಾಗಲೂ
ತೊಟ್ಟು ಮೆರದದ್ದಕ್ಕಿಂತ ಅನ್ಯರ ಮೈಮೇಲಿರುವ
ಅಂಗಿಗಳ ರಂಗು, ವಿನ್ಯಾಸ
ಕಾಡುತ್ತಲೇ ಇರುತ್ತವೆ-
ಬೆನ್ನಿಗಂಟಿದ ಬೇತಾಳದಂತೆ.