ಒಟ್ಟು ಪುಟವೀಕ್ಷಣೆಗಳು

ಗುರುವಾರ, ನವೆಂಬರ್ 19, 2009

ಮಣ್ಣಿನ ವಾಸನೆ ಉಳಿಸಿಕೊಂಡ ಗೋಡೆಗೆ ಬರೆದ ನವಿಲು

ಅತ್ಯಂತ ಜನಪ್ರಿಯ ಸಾಹಿತ್ಯ ಪ್ರಕಾರವಾದ ಸಣ್ಣಕತೆ ಕಾಲದಿಂದ ಕಾಲಕ್ಕೆ ತನ್ನೊಳಗಿನ ಆಂತರಿಕ ಶಿಸ್ತನ್ನು ಬದಲಿಸಿಕೊಳ್ಳದೆಯೂ ಮೇಲ್ನೋಟದ ಬದಲಾವಣೆಗಳಿಗೆ ಪಕ್ಕಾಗುತ್ತಲೇ ಬಂದಿದೆ. ಆಧುನಿಕ ಕನ್ನಡ ಕಥಾಜಗತ್ತಂತೂ ವರ್ತಮಾನದ ಬದುಕಿನ ಎಲ್ಲ ಮುಖಗಳನ್ನು ಒಳಗೊಳ್ಳುತ್ತಲೇ ಸ್ಥಿತ್ಯಂತರದ ಸಾಕ್ಷಿಯಾಗಿ ದಾಖಲಾಗುತ್ತಲೇ ಇದೆ. ಒಂದು ಸಿದ್ಧ ಚೌಕಟ್ಟನ್ನು, ‘ಕತೆ’ ಇರಲೇಬೇಕೆಂಬ ನಿಯಮವನ್ನೂ ಮೀರಿ ಈ ಹೊತ್ತಿನ ಕಥೆಗಾರರು ಬರೆಯತೊಡಗಿದ್ದಾರೆ. ಬಂಡಾಯ ಮತ್ತು ಹೋರಾಟದ ಹಾದಿಗಳನ್ನು ಮೇಲ್ನೋಟಕ್ಕೆ ಬಿಟ್ಟುಕೊಟ್ಟಂತಿದ್ದರೂ, ಬದುಕಿನ ಒಂದು ಸಣ್ಣ ಘಟನೆಯನ್ನೂ ವಿಸ್ತರಿಸಿ ಅದನ್ನು ಮಾನವೀಯ ನೆಲೆಯ ಮೂಲಕ ಕತೆಕಟ್ಟಿಕೊಡುವ ಪ್ರಯತ್ನ ಢಾಳಾಗಿ ಕಾಣಸಿಗುತ್ತಿದೆ.
ಇದಕ್ಕೆ ಇತ್ತಿಚಿನ ಉದಾಹರಣೆಯೆಂದರೆ ಸಂದೀಪ ನಾಯಕರ ‘ಗೋಡೆಗೆ ಬರೆದ ನವಿಲು’. 2009ನೇ ಸಾಲಿನ ಛಂದ ಪುಸ್ತಕ ಬಹುಮಾನ ಪಡೆದ ಈ ಕಥಾಸಂಕಲನದಲ್ಲಿ ಇರುವ ಒಂದು ಡಜನ್ ಕತೆಗಳೆಲ್ಲವೂ ಇದುವರೆಗೂ ನಾವು ಕತೆ ಎಂದು ನಂಬಿರುವ ರೀತಿಯಿಂದ ಭಿನ್ನವಾಗಿ, ಆದರೆ ಬದುಕಿನ ಸಣ್ಣ ಸಣ್ಣ ಘಟನೆಗಳನ್ನೇ ಮೂಲವಾಗಿಟ್ಟುಕೊಂಡು ಹೆಣೆದಿರುವ ಬದುಕಿನ ಮೌಲ್ಯ ಮಾಪನದಂತಿವೆ. ಇಲ್ಲಿನ ಎಲ್ಲ ಕಥೆಗಳ ಮೂಲ ಉತ್ತರಕನ್ನಡದ ನೆಲ ಮತ್ತು ಅಲ್ಲಿನ ಸಂಸ್ಕೃತಿಗಳನ್ನು ಆಧರಿಸಿದುವೇ ಆಗಿರುವುದೂ ವಿಶೇಷವಾಗಿದೆ. ಸಂಕಲನದ ಕತೆಗಳ ಕೆಲಪಾತ್ರಗಳು ಹಲವು ಕತೆಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುವುದೂ ಒಂದು ಬಗೆಯಲ್ಲಿ ಕತೆಗಾರ ಆ ಮೂಲಕ ಹಳೆಯ ಕತೆಗಳ ಕೊಂಡಿಯನ್ನು ಬೇರೆ ಬೇರೆ ಕತೆಗಳ ಕೇಂದ್ರ ಪಾತ್ರಗಳನ್ನು ವಿಮರ್ಶಿಸಲು, ಉದ್ದೀಪಿಸಲು ಬಳಸಿಕೊಂಡ ತಂತ್ರವೆಂದೇ ನನಗನಿಸುತ್ತಿದೆ. ನಗರ ಕೇಂದ್ರಿತ ಸಮಸ್ಯೆಗಳಿಲ್ಲದಿದ್ದರೂ ಇಲ್ಲಿನ ಬಹುತೇಕ ಕತೆಗಳ ಪಾತ್ರಗಳು ನಗರದಲ್ಲಿದ್ದೂ ಊರಿನ ಧ್ಯಾನದಲ್ಲಿ ನಿರತವಾಗಿರುವುದು ಮತ್ತು ಒಂದಲ್ಲ ಒಂದು ವಿಧದಿಂದ ಮತ್ತೆ ಊರಿನ ತೆಕ್ಕೆಗೆ ಬೀಳುವುದೂ ನಡೆದಿದೆ. ಜಾತಿಯ ಸಮಸ್ಯೆ, ಪರಿಸರ ಹಾನಿಯ ಎಚ್ಚರ, ಶೋಷಣೆಯೇ ಮುಂತಾದ ಸಾಮಾಜಿಕ ಅನಿಷ್ಟಗಳೂ ಇಲ್ಲಿನ ಕತೆಗಳಲ್ಲಿ ಇದ್ದರೂ ಅವನ್ನು ದೊಡ್ಡ ಭೂತವಾಗಿಸಿ ಅಥವ ಅವುಗಳ ವಿರುದ್ಧದ ಬಂಡಾಯದ ಕೂಗಾಗಲೀ ಇಲ್ಲದಿರುವುದೂ ಗಮನಿಸಬೇಕಾದ ವಿಷಯವೇ ಆಗಿದೆ. ಸಂಯಮ ಮೀರದ ಹದವಾದ ಭಾಷೆ ಇಲ್ಲಿನ ಕತೆಗಳ ಮುಖ್ಯ ಬಂಡವಾಳ. ಕೆಲವೇ ಕೆಲವು ಪಾತ್ರಗಳಲ್ಲೇ ಕತೆಯನ್ನು ಬೆಳೆಸಿ ಮುಗಿಸುವ ರೀತಿ ಕೂಡ ಗಮನಿಸಬೇಕಾದ ಸಂಗತಿಯಾಗಿದೆ. ಏಕೆಂದರೆ ಸಣ್ಣಕತೆಯೊಂದರಲ್ಲೇ ಕಾದಂಬರಿಗಾಗುವಷ್ಟು ಪಾತ್ರಗಳನ್ನು ಸೃಷ್ಟಿಸಿ ಅವುಗಳ ಪೋಷಣೆಗೆ ಗಮನ ಕೊಡದೇ ಬರೀ ಉದ್ದೋಉದ್ದುದದ ಕತೆಗಳನ್ನು ಬರೆಯುತ್ತಿರುವವರ ನಡುವೆ ಸಂದೀಪ ನಾಯಕರ ಕತೆಗಳೆಲ್ಲವೂ ಹೆಚ್ಚೆಂದರೆ ಹತ್ತುಪುಟಗಳ ಮಿತಿಯಲ್ಲೇ ಮುಗಿದುಬಿಡುವುದೂ ಮತ್ತೊಂದು ಅಂಶ. ಪ್ರಾಯಶಃ ಸಂದೀಪರು ಸಾಪ್ತಾಹಿಕವೊಂದರ ಉಸ್ತುವಾರಿ ನೋಡುತ್ತಿರುವ ಕಾರಣ ಉಳಿದ ಬರಹಗಾರರ ಬರಹಗಳನ್ನು ಪುಟಮಿತಿ, ಪದಮಿತಿಗಳ ಲೆಕ್ಕಾಚಾರದಲ್ಲಿ ‘ಕತ್ತರಿಸುತ್ತಿರುವ’ ಅನುಭವ ಇಲ್ಲಿನ ಕತೆಗಳು ಉದ್ದವಾಗದಂತೆ ನಿಯಂತ್ರಣ ಹೇರಿದೆಯೋ ಎಂಬ ಅನುಮಾನವೂ ಹುಟ್ಟುತ್ತದೆ. ಉದಾಹರಣೆಗೆ ‘ಬಾಗಿಲ ಮುಂದೆ’ ಎನ್ನುವ ಕತೆಯಂತೂ ಸುರುವಾಗುವ ಮೊದಲೇ ಮುಗಿದುಬಿಡುತ್ತದೆ. ಓದುಗನನ್ನು ಥಟ್ಟನೆ, ಹಟಾತ್ತನೆ ಸರಳ ಸಂಗತಿಯ ಅನಾವರಣದ ಮೂಲಕ ಖುಷಿಗೊಳಿಸಬಹುದೆಂಬ ಲೆಕ್ಕಾಚಾರ ಇಲ್ಲೆಲ್ಲ ಕೆಲಸ ಮಾಡಿದಂತಿದೆ.
ಸ್ವಗತದ ನಿರೂಪಣೆ ಮತ್ತು ಉತ್ತಮಪುರುಷದ ಗೊಂದಲಗಳಿಲ್ಲದೇ ಕತೆಗಳನ್ನು ಕಟ್ಟುವುದರಲ್ಲಿ ಕತೆಗಾರರು ಗೆದ್ದಿದ್ದಾರಾದರೂ ಒಂದು ಓದಿನ ನಂತರ ಮರು ಓದು ಬಯಸುವ ವಸ್ತುಗಳು ಇಲ್ಲಿನ ಕತೆಗಳಲ್ಲಿದ್ದರೂ ತೀರ ಸರಳೀಕೃತ ಕಥನ ವಿಧಾನದಿಂದಾಗಿ ಆ ಅವಕಾಶವನ್ನು ಕತೆಗಾರರೇ ಕಳೆದುಕೊಂಡಿದ್ದಾರೆ. ಬಾಗಿಲ ಮುಂದೆ, ಕಂಡಷ್ಟೇ ಆಕಾಶ ಮತ್ತು ಸಹಿ ಕತೆಗಳು ಇನ್ನೂ ವಿಸ್ತರಿಸಬಹುದಾದ ಅವಕಾಶವನ್ನು ಕಳೆದುಕೊಂಡ ಕಾರಣಕ್ಕೆ ಬರಿಯ ತುಟಿತುದಿಯ ಅನುಕಂಪವನ್ನಷ್ಟೇ ಹುಟ್ಟಿಸುತ್ತವೆ. ಪ್ರಾಯಶಃ ಕತೆಗಾರರು ಉದ್ದನೆಯ ಕತೆಗಳನ್ನು ಓದುಗರು ಇಷ್ಟಪಡಲಾರರೆಂಬ ತಮ್ಮದೇ ನಿರ್ಧಾರದಲ್ಲಿ ಎಡವಿದರೇನೋ ಅನ್ನಿಸುತ್ತದೆ. ಈ ಮೂರೂ ಕತೆಗಳೂ ಸ್ವಲ್ಪ ಪರಿಶ್ರಮ ಪಟ್ಟಿದ್ದರೆ ಬಹಳ ಕಾಲ ಕಾಡುವ ವಸ್ತುವನ್ನಿಟ್ಟುಕೊಂಡಿದ್ದೂ ಅವಸರದಲ್ಲಿ ಮುಗಿಸಿಬಿಟ್ಟ ಕಾರಣ ಬರಿಯ ಹಳಹಳಿಕೆಗಳಾಗೇ ಉಳಿದುಬಿಡುತ್ತವೆ. ‘ಆನೆ ಸಾಕಿದ ಮನೆಗೆ ಎರಡು ಹೂ ದಂಡೆ’ ಇಂಥ ಮಿತಿಗಳನ್ನು ಮೀರಿದ ಕಾರಣ ಸಂಕಲನದ ಯಶಸ್ವೀ ಕತೆಗಳಲ್ಲೊಂದಾಗಿದೆ. ‘ಕರೆ’ಯ ಮೋನಪ್ಪ ಮತ್ತು ‘ಮರೆತು ಹೋದ ಒಂದು ಸಂಬಂಧ’ದ ವೆಂಕಟಣ್ಣ ವರ್ತಮಾನದಲ್ಲಿ ಚಲಾವಣೆ ಕಳಕೊಂಡ ನಾಣ್ಯಗಳಾಗಿ ಕಾಡುತ್ತಾರೆ. ಹಾಗೆಯೇ ಹಿರಿಯರು ಆಧುನಿಕ ಜೀವನದಲ್ಲಿ ಹೇಗೆ ಮೂಲೆಗುಂಪಾಗುತ್ತಿದ್ದಾರೆ ಮತ್ತವರ ಪ್ರಸ್ತುತತೆಯನ್ನೇ ಕಳಕೊಳ್ಳುತ್ತಿದ್ದಾರೆ ಅನ್ನುವುದನ್ನೂ ದಟ್ಟವಾಗಿ ದಾಖಲಿಸಿವೆ. ‘ಉರುಳಿತೊಂದು ಮರ’ ಕತೆಗಾರರು ತಮಗೂ ಪರಿಸರ ಪ್ರಜ್ಞೆ ಕಾಡುತ್ತಿದೆ ಎನ್ನುವ ಕಾರಣಕ್ಕೆ ಬರೆದಂತೆ ಕಾಣುತ್ತದೆ. ಉಳಿದ ಕತೆಗಳಲ್ಲಿರುವ ‘ಓಟ’ ಮತ್ತು ಹಿಡಿತ ಸಿಗದ ಕಾರಣ ಹಾಗೂ ನಾಯಕನನ್ನು ಉದ್ಧಾಮನನ್ನಾಗಿ ಚಿತ್ರಿಸಲೇಬೇಕೆಂಬ ಹಟ ಇಲ್ಲಿ ಕೆಲಸ ಮಾಡಿರುವ ಕಾರಣ ‘ಉರುಳಿತೊಂದು ಕತೆ’ಯಾಗಿಬಿಟ್ಟಿದೆ. ‘ಇಲ್ಲಿ ಬಂದೆವು ಸುಮ್ಮನೆ’ ಮನುಷ್ಯನ ಆಸೆಗಳ ಮತ್ತು ಲಂಪಟತನದ ಅನಾವರಣವಾಗಿರುವುದರಿಂದ ಹಾಗೂ ಒಂದಲ್ಲ ಒಂದು ಕಾರಣಕ್ಕೆ ಬೇಸ್ತು ಬೀಳಲೇಬೇಕಾದ ಅನಿವಾರ್ಯತೆಗಳು ಎಲ್ಲರ ಬದುಕಿನಲ್ಲೂ ಘಟಿಸುವುದರಿಂದ ಓದುವಾಗ ಹಾಯೆನ್ನಿಸುತ್ತದೆ. ಅವರಿವರ ನಡುವಿನ ಆಟದ ದಾಳವಾದ ಮೋಹನನಂಥ ಪಾತ್ರಗಳನ್ನು ಕತೆಗಾರರು ಏಕೋ ಪೋಷಿಸಲು ಮನಸ್ಸು ಮಾಡದ್ದರಿಂದ ಪಾಪ ಈ ಕತೆಯ ಮೋಹನ ಮತ್ತು ‘ಒಂಭತ್ತು, ಎಂಟು, ಎಂಟು’ ಕತೆಯ ಮಂಕಾಳಜ್ಜಿ ಬಡವಾಗಿದ್ದಾರೆ. ಹಾಗೆ ನೋಡಿದರೆ ಹೇಳಹೊರಟದ್ದು ಒಂದಾದರೆ ಆಗುವುದು ಮತ್ತೊಂದಾಗುವ ಕಾರಣದಿಂದಾಗಿ ‘ಒಂಭತ್ತು, ಎಂಟು, ಎಂಟು’ ಮತ್ತು‘ಬೊಂಬೆಗೊಂದು ಸೀರೆ’ ಗಮನ ಸೆಳೆಯುತ್ತವೆ. ದಾರಿ ತಪ್ಪಿದ ಅಕ್ಕನ ಹುಡುಕಾಟದಲ್ಲಿನ ದೇವಿ ಮತ್ತು ಮನೆ ಬಿಟ್ಟು ಓಡಿ ಬಂದ ಶರಣ್ ಕಡೆಗೂ ವ್ಯವಸ್ಥೆಯ ಕೈಯಲ್ಲಿನ ಗೊಂಬೆಗಳಾಗುತ್ತಾರೆ. ಮೂಲತಃ ಅಲ್ಪತೃಪ್ತಿಯ ಈ ಎರಡೂ ಪಾತ್ರಗಳನ್ನೂ ಅವರ ಯತ್ನದಲ್ಲಿ ಉತ್ತೀರ್ಣರನ್ನಾಗಿಸದ ಕತೆಗಾರರು ಆ ಕಾರಣಕ್ಕೇ ಮೆಚ್ಚುಗೆ ಗಳಿಸುತ್ತಾರೆ. ಇದಕ್ಕೆ ತದ್ವಿರುದ್ಧವಾಗಿ ‘ಇನ್ನೊಂದೇ ಕಥೆ’ಯ ಶಶಕ್ಕ ಮತ್ತು ‘ನಿನ್ನಲ್ಲೇ ಇರಲಿ’ಯ ಮುಕುಂದರನ್ನು ದಡ ಸೇರಿಸುವ ಕತೆಗಾರರು ಆಶ್ಚರ್ಯ ಹುಟ್ಟಿಸುತ್ತಾರೆ.
ವ್ಯಕ್ತಿಯ ಒಳತುಮುಲಗಳನ್ನು, ಆ ವ್ಯಕ್ತಿ ಲೌಕಿಕದ ವ್ಯವಹಾರಗಳಲ್ಲಿ ಕಾಯ್ದುಕೊಳ್ಳಬೇಕಾದ ಎಚ್ಚರವನ್ನೂ ಜೊತೆಜೊತೆಯಾಗಿ ನಿರ್ವಹಿಸುವುದು ಕತೆಗಾರರಿಂದ ಸಾಧ್ಯವಾಗಿರುವುದು ಒಟ್ಟೂ ಸಂಕಲನದ ಧನಾತ್ಮಕ ಯತ್ನವಾಗಿದೆ. ಆದರೆ ದುರಂತಗಳಲ್ಲೇ ಅಂತ್ಯವಾಗುವ ಇಲ್ಲಿನ ಬಹುತೇಕ ಕತೆಗಳು ನಿರಾಶವಾದವನ್ನು ಪುಷ್ಟೀಕರಿಸುವುದು ಅಷ್ಟೇ ಋಣಾತ್ನಕವಾಗಿದೆ. ನಿರಾಶೆ, ವಿಷಾದ, ಸೋಲುಗಳಲ್ಲೇ ಉಳಿಯುವ ಇಲ್ಲಿನ ಬಹುತೇಕ ಪಾತ್ರಗಳು ಇರುವುದೇ ಸೀಮಿತ ಚೌಕಟ್ಟಿನ ಸರಳ ಸಮಸ್ಯೆಗಳಲ್ಲಿ. ಈ ಪಾತ್ರಗಳು ಸೀಮಿತ ಪ್ರದೇಶದ ಸರಳ ಸಮಸ್ಯೆಗಳಲ್ಲಿ ಒದ್ದಾಡುತ್ತಿದ್ದರೂ ಅವನ್ನು ಉತ್ಪ್ರೇಕ್ಷಿಸದ ಕಥನ ಕ್ರಮ ಮತ್ತು ಅಂಥ ಸನ್ನಿವೇಶ ನಿರ್ಮಾಣದ ಕಾರಣ ಸಣ್ಣ ಚೌಕಟ್ಟಿನಲ್ಲಿ ಬಿಡಿಸಿಟ್ಟ ಚಿತ್ರಗಳಾಗಿವೆ. ಇಲ್ಲಿನ ಎಲ್ಲ ಕತೆಗಳ ಪಾತ್ರಗಳೂ ಅರೆಶಿಕ್ಷಿತರಾಗಿರುವುದು ಮತ್ತು ಕೆಳಸ್ತರದ ಸಮಾಜದಿಂದ ಬಂದವರಾಗಿರುವುದೂ ಸಂಕಲನದ ವಿಶೇಷಗಳಲ್ಲೊಂದಾಗಿದೆ. ಜೊತೆಗೇ ಬರಿಯ ಮುಜುಗರದ ಕಾರಣದಿಂದಾಗಿ ವಿನಮ್ರರಂತಿರಬೇಕಾದ ಪಾತ್ರಗಳ ಅನಿವಾರ್ಯತೆಯನ್ನೂ ಚಿತ್ರಿಸಿದೆ.
‘ಗೋಡೆಗೆ ಬರೆದ ನವಿಲು’ ಹೆಸರಿನ ಕತೆ ಸಂಕಲನದಲ್ಲಿಲ್ಲದೇ ಹೋದರೂ ಒಟ್ಟು ಸಂಕಲನ ಮನೆಯ ಮುಂದಿನ ಗೋಡೆಯ ಅಲಂಕಾರಕ್ಕೆ ಬರೆದ ನವಿಲಿನ ಚಿತ್ರದ ಹಾಗೆ ಕತೆಗಾರರು ಅವರ ಕುಶಲ ಕತೆಗಾರಿಕೆಗೆ ತಾವೇ ಕೊಟ್ಟುಕೊಂಡ ಹೆಸರಾಗಿದೆ. ‘ಅಗಣಿತ ಚಹರೆ’ ಸಂದೀಪ ನಾಯಕರ ಮೊದಲ ಪ್ರಕಟಿತ ಕವನ ಸಂಕಲನ. ಕವಿಯಾಗಿ ಅವರಿಗಿದ್ದ ಭರವಸೆಗಳು ಕತೆಗಾರರಾದ ಕೂಡಲೇ ಏಕೆ ಹೊರಟುಹೋದವೋ ತಿಳಿಯದಾಗಿದೆ. ಆದರೆ ಕವಿತೆಗಳ ಜೊತೆಯಲ್ಲಿದ್ದ ಯಕ್ಷಗಾನ, ತಾಜಾ ಮೀನು, ಬಸ್ ಸ್ಟಾಂಡು, ಬಂಡಿಹಬ್ಬ ಇಲ್ಲಿನ ಕತೆಗಳಿಗೂ ವಿಸ್ತರಿಸಿರುವ ಕಾರಣಕ್ಕೆ ‘ಮಣ್ಣಿನ ವಾಸನೆ’ಉಳಿಸಿಕೊಂಡ ಕತೆಗಾರರಾಗಿಯೂ ಉಳಿಯುತ್ತಾರೆ.
ಪುಸ್ತಕ: ಗೋಡೆಗೆ ಬರೆದ ನವಿಲು. (ಕಥಾ ಸಂಕಲನ)
ಕತೆಗಾರ: ಸಂದೀಪ ನಾಯಕ
ಪ್ರಕಾಶಕರು: ಛಂದ ಪುಸ್ತಕ, ಬೆಂಗಳೂರು ಬೆಲೆ:ರೂ ೬೦/-

ನುಡಿಸಿರಿ- ಸಾಹಿತ್ಯ ಮತ್ತು ಸಂಸ್ಕೃತಿಗಳ ಭವ್ಯ ಮಿಲನ

ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ‘ನುಡಿಸಿರಿ-೨೦೦೯’ರಲ್ಲಿ ಭಾಗವಹಿಸಿದ ಸಂಭ್ರಮ, ಖುಷಿ ಮತ್ತು ಸಮ್ಮೇಳನವನ್ನು ಆಯೋಜಕರು ರೂಪಿಸಿದ್ದ ರೀತಿಗಳನ್ನು ಹಂಚಿಕೊಳ್ಳುವ ಯತ್ನ ಈ ಲೇಖನದ್ದು.
ನಮ್ಮಲ್ಲಿ ಬಹಳ ಜನ ಸಾಹಿತ್ಯ ಸಮ್ಮೇಳನಗಳನ್ನು ‘ಸಂತೆ’ ಎಂದು ಕರೆದಿದ್ದೇವೆ/ಭಾವಿಸಿದ್ದೇವೆ. ಆಯೋಜಕರ ಮರ್ಜಿಗನುಗುಣವಾಗಿ, ಆಳುವ ಸರ್ಕಾರದ ನೀತಿಗನುಗುಣವಾಗಿ ಸಮ್ಮೇಳನಗಳ ಕಾರ್ಯಕ್ರಮಗಳು ರೂಪುಗೊಳ್ಳುವುದರಿಂದಾಗಿ ಇಂಥ ಅಪವಾದಗಳು ತಪ್ಪಿದ್ದಲ್ಲ. ಅದರಲ್ಲೂ ಕನ್ನಡ ಸಾಹಿತ್ಯ ಸಮ್ಮೇಳನಗಳಂತೂ ‘ಸಾಹಿತ್ಯ’ವೊಂದನ್ನು ಬಿಟ್ಟು ಉಳಿದೆಲ್ಲ ಚಟುವಟಿಕೆಗಳನ್ನೂ ನಡೆಸಿರುತ್ತವೆ. ಹಲವು ಕಾರಣಗಳಿಂದಾಗಿ ಪದೇ ಪದೇ ಮುಂದೂಡಲ್ಪಡುವ ಈ ಸಮ್ಮೇಳನಗಳು ಸ್ವಾಗತ ಸಮಿತಿಯ ಅಧ್ಯಕ್ಷರ ಮತ್ತು ಎಲ್ಲಿ ಸಮ್ಮೇಳನ ನಡೆಯಲು ಆಯೋಜಿಸಲಾಗಿದೆಯೋ ಆ ಸ್ಥಳದ ಸಚಿವ/ಶಾಸಕ/ಸಂಸದರ ಕೃಪಾಶೀರ್ವಾದದಿಂದ ನಡೆಯಬೇಕಿರುವ ಕಾರಣ ರಾಜಕೀಯ ಬದಲಾವಣೆಗಳೂ ಇಂಥ ಸಮ್ಮೇಳನಗಳ ಹಣೆಯ ಬರಹವನ್ನೇ ಬದಲಾಯಿಸಿಬಿಡುತ್ತವೆ. ಊಟ-ತಿಂಡಿಗಳ ವಿತರಣೆ, ಪ್ರದೇಶವಾರು ಭೋಜನ ವಿಶೇಷತೆಯನ್ನು ಪ್ರದರ್ಶಿಸುವ ಸಲುವಾಗಿ ಮಠ, ಮಾನ್ಯಗಳನ್ನೂ ಓಲೈಸಿಲಾಗಿರುತ್ತದೆ. ಹೀಗೆ ಸಾಹಿತ್ಯ ಸಂಗತಿಗಳಿಗಿಂತಲೂ ಸಾಹಿತ್ಯೇತರ ಸಂಗತಿಗಳೇ ಮುಖ್ಯವಾಗಿ ಸಮ್ಮೇಳನಾಧ್ಯಕ್ಷರ ಆಯ್ಕೆಯಿಂದಲೂ ಕಸರತ್ತುಗಳ ಮೇಲೆ ಕಸರತ್ತುಗಳು ನಡೆದು ಅದು ಇಡೀ ಸಮ್ಮೇಳನದ ಸ್ವರೂಪವನ್ನೇ ಬದಲಿಸಿಬಿಡುವುದೂ ಸರ್ವೇ ಸಾಮಾನ್ಯವಾದ ವಿಷಯವಾಗಿದೆ. ಸಮ್ಮೇಳನಗಳಲ್ಲಿ ಮಂಡಿಸಲಾಗುವ ನಿರ್ಣಯಗಳಂತೂ ಹನುಮಂತನ ಬಾಲದಂತೆ ಬೆಳೆದೂ, ಬೆಳೆದೂ ಬೆಳೆಯುತ್ತವೇ ವಿನಾ ಅವುಗಳ ಅನುಷ್ಠಾನ ಎಂಬುದಂತೂ ಯಾವ ಸರ್ಕಾರಗಳಿಂದಲೂ ಸಾಧ್ಯವಾಗದಿರುವುದೂ ಇಂಥ ನಿರ್ಣಯಗಳ ಮೇಲಿನ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತಿದೆ. ಸಮ್ಮೇಳನದ ವೆಚ್ಚಕ್ಕಾಗಿ ಸರ್ಕಾರ ಕೊಡಮಾಡುವ ಅನುದಾನ, ಈಗಂತೂ ಅದು ಒಂದು ಕೋಟಿ ರೂಪಾಯಿ, ಅದರ ಮೇಲೆ ಸರ್ಕಾರೀ ನೌಕರರ ಒಂದು ದಿನದ ವೇತನ, ಸ್ಥಳೀಯ ಸಂಸ್ಥೆಗಳ ಹಣಕಾಸಿನ ಬೆಂಬಲ, ಮಠ ಮಾನ್ಯಗಳ ಸಹಾಯ ಹೀಗೆ ಒಟ್ಟೂ ಸೇರುವ ಹತ್ತಿರ ಹತ್ತಿರ ನಾಲ್ಕು ಕೋಟಿ ರೂಪಾಯಿ ಒಂದು ಸಮ್ಮೇಳನಕ್ಕೆ ಬಳಸಲಾಗುತ್ತದೆ.
ಮೂರು ದಿನಗಳ ನುಡಿಜಾತ್ರೆಗೆ ಅದ್ದೂರಿ ಖರ್ಚು ಅನಿವಾರ್ಯವೆಂದು ಒಪ್ಪಿಕೊಳ್ಳಬಹುದಾದರೂ ಇಂಥ ಸಮ್ಮೇಳನಗಳ ಫಲಶೃತಿ ಎಷ್ಟರ ಮಟ್ಟಿಗೆ ನಾಡು-ನುಡಿಗಳ ಬೆಳವಣಿಗೆಗೆ ಪೂರಕವಾಗಿದೆ ಮತ್ತು ಸಫಲವಾಗಿದೆ ಎಂಬ ಪ್ರಶ್ನೆ ನಿರುತ್ತರವಾಗಿಯೇ ಉಳಿಯುತ್ತದೆ. ಒಂದು ನಿರ್ದಿಷ್ಟ ವಿಚಾರದ ಮೇಲೆಂದೂ ಚರ್ಚೆ ನಡೆಸದ ಈ ಸಮ್ಮೇಳನಗಳಲ್ಲಿ ಪಾಲ್ಗೊಳ್ಳುವ ವಿಷಯ ತಜ್ಞರ ಉಪನ್ಯಾಸಗಳಿಗಿಂತಲೂ ಮುಖ್ಯಮಂತ್ರಿಗಳ/ರಾಜಕಾರಣಿಗಳ ರಾಜಕೀಯ ಭಾಷಣಗಳೇ ನಮ್ಮ ಮಾಧ್ಯಮಗಳಲ್ಲಿ ಸಿಂಹ ಪಾಲು ಪಡೆಯುತ್ತವೆ. ಇದುವರೆಗೂ ನಾಲ್ಕೈದು ಸಮ್ಮೇಳನಗಳಲ್ಲಿ ಪ್ರತಿನಿಧಿಯಾಗಿ/ಆಹ್ವಾನಿತನಾಗಿ ಭಾಗವಹಿಸಿರುವ ನಾನು ಯಾವ ಕಾರ್ಯಕ್ರಮವೂ ನಿಗದಿತ ಸಮಯಕ್ಕೆ ಪ್ರಾರಂಭವಾಗಿ ನಿಗದಿತ ಸಮಯಕ್ಕೆ ಮುಕ್ತಾಯವಾದುದನ್ನು ಕಂಡೇ ಇಲ್ಲ. ವಿಷಯವನ್ನು ಪ್ರವೇಶಿಸದೆಯೇ ‘ವಿಚಾರ ಪೂರ್ಣ’ ಭಾಷಣವನ್ನು ನೀಡಿದ ಅಪ್ರತಿಮರನ್ನೂ ಇಂಥ ಸಮ್ಮೇಳನಗಳಲ್ಲಿ ಕಂಡಿದ್ದೇನೆ. ತಮ್ಮ ಹೆಸರು ಒಂದಲ್ಲ ಒಂದು ಗೋಷ್ಠಿಯಲ್ಲಿ ಕನಿಷ್ಠ ಪ್ರತಿಕ್ರಿಯೆಯಲ್ಲಾದರೂ ಇರದಿದ್ದಲ್ಲಿ ಅಂಥ ಸಮ್ಮೇಳನಗಳಿಂದ ದೂರ ಉಳಿಯುವ ‘ಗಣ್ಯ ಸಾಹಿತಿ’ಗಳನ್ನೂ ಕಂಡಿದ್ದೇನೆ. ಇಷ್ಟೆಲ್ಲ ಪೀಠಿಕೆ ಇಲ್ಲದೇ ಮೂಡುಬಿದರೆಯ ‘ನುಡಿಸಿರಿ’ಯನ್ನು, ಅಲ್ಲಿ ನಡೆದ ನಿಜ ಸಾಹಿತ್ಯ ಸಮಾರಾಧನೆಯನ್ನೂ ವರ್ಣಿಸಲಾಗುವುದಿಲ್ಲವಲ್ಲ!
ನುಡಿಸಿರಿ- ಡಾ.ಮೋಹನ ಆಳ್ವ ತಾವು ಕಂಡ ಕನಸನ್ನು ನನಸು ಮಾಡಿದ ಬಗೆ. ೨೦೦೩ರ ಸಾಹಿತ್ಯ ಸಮ್ಮೇಳನವನ್ನು ಮೂಡುಬಿದರೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ನಡೆಸಿ ಬಂದ ಅನುಭವ ಕೂಡ ಅವರ ಈ ಕನಸಿನ ಹಿಂದೆ ಕೆಲಸ ಮಾಡಿದೆ. ಸರ್ಕಾರದ ಅನುದಾನ ಪಡೆದ ಮೇಲೆ ಅದರ ಋಣಕ್ಕೆ ಬಿದ್ದ ಕಾರಣದಿಂದಾಗಿ ಪಾಲಿಸಲೇ ಬೇಕಾದ ಶಿಷ್ಟಾಚಾರವೆಂಬ ಸೋಗು ಕೂಡ ಅವರ ಮನಸ್ಸಿನ ಮೇಲೆ ಇನ್ನಿಲ್ಲದ ಪ್ರಭಾವ ಬೀರಿರಬೇಕು. ಹಾಗೆಂತಲೇ ೨೦೦೪ರಿಂದ ಈವರೆಗೆ ನಡೆಸಿರುವ ಆರು ನುಡಿಸಿರಿ ಸಮ್ಮೇಳನಗಳನ್ನು ಸರ್ಕಾರದ ಅಥವಾ ಸಾರ್ವಜನಿಕರ ವಂತಿಗೆ ಪಡೆಯದೇ ಅವರು ಯಶಸ್ವಿಯಾಗಿ ನಡೆಸಿದ್ದಾರೆ. ಸಾಹಿತ್ಯ ಸಮ್ಮೇಳನಗಳಿಗೆ ಹೋಲಿಸಿದರೆ- ಹೋಲಿಸಬಾರದು ಬಿಡಿ. ಏಕೆಂದರೆ ಸರ್ಕಾರದ/ ಆಳುವವರ ಹಂಗಿನಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳೂ ಗೊತ್ತಿದ್ದೋ/ಗೊತ್ತಿಲ್ಲದೆಯೋ ಕಾಣದ ಕೈಗಳ ಸೂತ್ರಕ್ಕೆ ಕುಣಿದಿರುತ್ತವೆ. ಆದರೆ ನುಡಿಸಿರಿ ಸಂಪೂರ್ಣವಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪ್ರಾಯೋಜಕತ್ವದಲ್ಲಿ ಮತ್ತು ಅದರ ಎಲ್ಲ ನೌಕರ ವರ್ಗದವರ ಸಹಕಾರದಲ್ಲಿ ನಡೆಯುತ್ತಿರುವುದರಿಂದ ಎಲ್ಲ ವಿಚಾರಗಳಲ್ಲೂ ಅತ್ಯಂತ ಕರಾರುವಾಕ್ಕಾಗಿ, ಗೌಜು ಗೋಜಲುಗಳಿಲ್ಲದ ನಿರ್ದಿಷ್ಠ ಪ್ರಯತ್ನವಾಗಿ ರೂಪುಗೊಳ್ಳುತ್ತಿದೆ. ಕಳೆದ ಆರು ಸಮ್ಮೇಳನಗಳಲ್ಲಿ ನುಡಿಸಿರಿ ಚರ್ಚಿಸಿದ ವಿಷಯಗಳನ್ನೇ ಗಮನಿಸಿ: ಪ್ರೊ.ಬರಗೂರು ರಾಮಚಂದ್ರಪ್ಪನವರ ಅಧ್ಯಕ್ಷತೆಯಲ್ಲಿ ೨೦೦೪ರಲ್ಲಿ ‘ಕನ್ನಡ ಮನಸ್ಸು:ಸಾಹಿತ್ಯಕ-ಸಾಂಸ್ಕೃತಿಕ ಜವಾಬ್ದಾರಿಗಳು’ ೨೦೦೫ರಲ್ಲಿ ಎಸ್.ಎಲ್.ಭೈರಪ್ಪನವರ ಅಧ್ಯಕ್ಷತೆಯಲ್ಲಿ ‘ಕನ್ನಡ ಮನಸ್ಸು: ಬೌದ್ಧಿಕ ಸ್ವಾತಂತ್ರ್ಯ’ ೨೦೦೬ರಲ್ಲಿ ಡಾ.ಚಂದ್ರಶೇಖರ ಕಂಬಾರರ ಅಧ್ಯಕ್ಷತೆಯಲ್ಲಿ ‘ಕನ್ನಡ ಮನಸ್ಸು:ಪ್ರಚಲಿತ ಪ್ರಶ್ನೆಗಳು’, ೨೦೦೭ರಲ್ಲಿ ಪ್ರೊ.ಜಿ.ವೆಂಕಟಸುಬ್ಬಯ್ಯನವರ ಗುರುತ್ವದಲ್ಲಿ ‘ಕನ್ನಡ ಮನಸ್ಸು: ಸಾಹಿತಿಯ ಜವಾಬ್ದಾರಿಗಳು’, ೨೦೦೮ರಲ್ಲಿ ಡಾ.ಚನ್ನವೀರ ಕಣವಿಯವರ ಅಧ್ಯಕ್ಷತೆಯಲ್ಲಿ ‘ಕನ್ನಡ ಮನಸ್ಸು:ಶಕ್ತಿ ಮತ್ತು ವ್ಯಾಪ್ತಿ’ ಹಾಗೂ ಮೊನ್ನೆ ಸಂಪನ್ನಗೊಂಡ ೨೦೦೯ರ ಪ್ರೊ.ಹಂ.ಪ.ನಾ ಅವರ ಅಧ್ಯಕ್ಷತೆಯಲ್ಲಿ ನಡೆದ ‘ಕನ್ನಡ ಮನಸ್ಸು:ಸಮನ್ವಯದೆಡೆಗೆ’. ಈ ಎಲ್ಲ ನುಡಿಹಬ್ಬಗಳೂ ಒಂದು ವಿಷಯವನ್ನು ಕೇಂದ್ರವನ್ನಾಗಿಟ್ಟುಕೊಂಡು ಅದರ ಸುತ್ತ ನಾಡಿನ ಹಲವು ಚಿಂತಕರ/ವಾಗ್ಮಿಗಳ/ವಿದ್ವಾಂಸರ ಅಭಿಪ್ರಾಯಗಳನ್ನು ಕ್ರೋಢೀಕರಿಸಿಕೊಂಡು ನಮ್ಮೆಲ್ಲರ ಚಿಂತನಶೀಲತೆಗೆ ಹೊಸ ಪರಿಕಲ್ಪನೆ ಮತ್ತು ಸಾಧ್ಯತೆಗಳನ್ನು ವಿಸ್ತರಿಸಿರುವುದನ್ನು ಹೇಗೆ ತಾನೆ ಅಲ್ಲಗಳೆಯಲು ಸಾಧ್ಯ? ಇದರ ಜೊತೆಗೇ ೨೦೦೪ರ ಸಮ್ಮೇಳನವೊಂದನ್ನು ಬಿಟ್ಟು ಉಳಿದೆಲ್ಲ ಸಮ್ಮೇಳನಗಳಲ್ಲಿ ಆಹ್ವಾನಿತ ಗಣ್ಯರೆಲ್ಲರ ಉಪನ್ಯಾಸಗಳನ್ನು ದ್ವನಿಸುರುಳಿಗಳಿಂದ ಸಂಗ್ರಹಿಸಿ ಅಕ್ಷರರೂಪಕ್ಕಿಳಿಸಿ ಪುಸ್ತಕವನ್ನಾಗಿಸಿ ಪ್ರಕಟಿಸಿರುವುದಂತೂ ಅಕ್ಷರಮೋಹ ಇರುವವರೆಲ್ಲ ಮೋಹನ ಆಳ್ವರನ್ನು ಭೇಷ್ ಅನ್ನುವಂತೆ ಮಾಡುತ್ತವೆ.
ಸಮ್ಮೇಳನದ ಉದ್ಘಾಟನೆಯಿಂದ ಅದು ಸಮರೋಪ ಕಾಣುವವರೆಗೂ ಎಲ್ಲ ಕಡೆಯೂ ಸಮಯವನ್ನು ಅತ್ಯಂತ ಕಟ್ಟುನಿಟ್ಟಾಗಿ ಪರಿಪಾಲಿಸುವುದಲ್ಲದೇ ಉದ್ದೇಶಿತ ವಿಷಯದಡಿಯಲ್ಲೇ ಎಲ್ಲ ಚರ್ಚೆಗಳನ್ನು ಕೇಂದ್ರೀಕರಿಸುವುದು ಗೋಷ್ಠಿಗಳ ನಡುವಿನ ಕೆಲವೇ ನಿಮಿಷಗಳನ್ನೂ ಸ್ಥಳೀಯ ಶಾಲೆಗಳ ಮಕ್ಕಳ ಮೂಲಕ ಗಾದೆ ಮಾತುಗಳನ್ನೂ, ಕೃಷಿ ಸಂಬಂಧೀ ಮಾತುಗಳನ್ನೂ, ಕನ್ನಡ ಸಾಹಿತ್ಯದ ಮರೆಯಬಾರದ ಮಾತುಗಳನ್ನೂ ಹೇಳಿಸುವ ಮೂಲಕ ಆ ಮಕ್ಕಳಿಗೂ ಅವಕಾಶಕೊಡುವುದೂ, ಅವರಿಗೆ ಸಾಹಿತ್ಯ ಸಾಂಸ್ಕೃತಿಕ ಲೋಕವನ್ನು ಪರಿಚಯಿಸಿಕೊಡುವುದೂ ಕೇವಲ ದೂರದೃಷ್ಟಿಯುಳ್ಳ ಮಹನೀಯರು ಮಾತ್ರ ಮಾಡಬಹುದಾದ ಅಪರೂಪದ ಹಾಗೂ ಅತಿ ಜರೂರಾಗಿ ಎಲ್ಲರೂ ಅನುಕರಿಸಲೇ ಬೇಕಾದುದೂ ಆಗಿದೆ.
ಬರಿಯ ಸಾಹಿತ್ಯವನ್ನಷ್ಟೇ ಅಲ್ಲದೇ ಸಾಂಸ್ಕೃತಿಕ ಚಟುವಟಿಕೆಗಳಿಗೂ ನುಡಿಸಿರಿ ಅಪಾರ ಅವಕಾಶವನ್ನು ಒದಗಿಸಿಕೊಡುತ್ತದೆ. ಸಂಜೆ ಒಟ್ಟೊಟ್ಟಿಗೇ ನಾಲ್ಕು ಬೇರೆ ಬೇರೆ ವೇದಿಕೆಗಳಲ್ಲಿ ವಿವಿಧ ಕಾರ್ಯಕ್ರಮಗಳು ಜರುಗುತ್ತವೆ. ಯಾರಿಗೆ ಏನು ಇಷ್ಟವೋ ಅವರು ಅದನ್ನು ಸವಿಯಲು/ಆಸ್ವಾದಿಸಲು ಇದಕ್ಕಿಂತ ಹೆಚ್ಚಿನ ಅವಕಾಶ ಬೇಕೆ? ಬೆಳಿಗ್ಗೆ ಆರಕ್ಕೇ ಶಾಸ್ತ್ರೀಯ ಸಂಗೀತ ಮುಖ್ಯ ವೇದಿಕೆಯಲ್ಲಿ. ಗೋಷ್ಠಿಗಳ ನಡುನಡುವೆಯೇ ಮಾತಿನ ಮಂಟಪ-ನಗೆ ಚಟಾಕಿಗಳನ್ನು ಸಿಡಿಸಿದರೆ, ಕವಿ ಸಮಯ-ಕವಿನಮನ, ಕವಿಯ ಮಾತಿನ ಜೊತೆಗೇ ಕವಿತೆಗೆ ರಾಗ ಸಂಯೋಜಿಸಿ ಅದನ್ನು ಕೇಳಿಸುವ ಉತ್ಸಾಹ. ಕಥಾಸಮಯದಲ್ಲಿ ಕತೆಗಾರರು ತಮ್ಮ ಅನನ್ಯ ಅನುಭವಗಳನ್ನು ಹಂಚಿಕೊಳ್ಳುತ್ತಲೇ ತಮ್ಮ ಕತೆಯೊಂದನ್ನು ಓದುವ ಅವಕಾಶ. ಇದರ ಜೊತೆಗೇ ನಾಡು-ನುಡಿಗೆ ಸಂದುಹೋದವರ ನೆನಪಿಗೆ ಮಾತಿನ ಶ್ರದ್ಧಾಂಜಲಿ.
ಬರಿಯ ಬೌದ್ಧಿಕ ಹಸಿವಲ್ಲ ಹೊಟ್ಟೆಯ ಹಸಿವಿಗೂ ಏಕಕಾಲದಲ್ಲಿ ದಾಸೋಹ. ಮುಖ್ಯರಿಗೆ ಬಡಿಸಿದ ಭಕ್ಷ್ಯ ಭೋಜ್ಯಗಳೇ ಪ್ರತಿನಿಧಿಗಳಿಗೂ. ಯಾರಿಗೂ ಯಾವುದರಲ್ಲೂ ವ್ಯತ್ಯಾಸದ ಭಾವವಿಲ್ಲ. ಎಲ್ಲರನ್ನೂ ಏಕತ್ರಗೊಳಿಸಿ ಧನ್ಯರನ್ನಾಗಿಸಿದ ಅಪೂರ್ವ ಕ್ಷಣಗಳು.
ಕನ್ನಡದ ಕೆಲಸಗಳನ್ನು ಬರಿಯ ಸರ್ಕಾರೀ ಸಂಸ್ಥೆಗಳು, ಅಕಾಡೆಮಿ, ಪರಿಷತ್ತಿನಂಥ ಪರತಂತ್ರ ಸಂಸ್ಥೆಗಳು ಮಾತ್ರ ಮಾಡಬೇಕೆನ್ನುವ ಸಾಮಾನ್ಯ ಅಭಿಪ್ರಾಯವನ್ನು ಹುಸಿಗೊಳಿಸಿ ಅದನ್ನು ಈ ನಾಡಿನ ಸಾಹಿತ್ಯ ಸಂಸ್ಕೃತಿಗಳನ್ನು ಗೌರವಿಸುವ ಯಾರೂ ಮಾಡಬಹುದೆನ್ನುವ ಸತ್ಯವನ್ನೂ ಡಾ.ಮೋಹನ ಆಳ್ವ ಮಾಡಿತೋರಿಸುತ್ತಿದ್ದಾರೆ. ಭಾಷೆ ಮತ್ತು ಸಂಸ್ಕೃತಿಗಳನ್ನು ರೂಪಿಸುವ, ನಿರ್ವಚಿಸುವ, ನಿರ್ಧರಿಸುವ ಮತ್ತು ನಿರ್ವಹಿಸುವ ಅವಕಾಶ ಮತ್ತು ಜವಾಬ್ದಾರಿಗಳನ್ನು ಪ್ರಭುತ್ವಗಳ ಮೂಲಕ ಮಾಡಿಸದೇ ಅದನ್ನು ಸಮುದಾಯದ ಮೂಲಕ ಸಾಧಿಸುವ ಪ್ರಯತ್ನ ನುಡಿಸಿರಿಯದ್ದಾಗಿದೆ. ಅದು ಈ ನೆಲದ ಬಹುರೂಪೀ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುತ್ತಿರುವ ಪುರಾವೆಯಾಗಿಯೂ ಕಾಣುತ್ತಿದೆ. ರಾಜಕೀಯ ಒತ್ತಡಗಳಿಗೆ ಮಣಿಯದೇ, ಧಾರ್ಮಿಕ ಬಣ್ಣಗಳಿಗೂ ಅವಕಾಶ ನೀಡದೇ ಕೇವಲ ಋಜುಮಾರ್ಗದಲ್ಲಿ ನಡೆಸಲೇಬೇಕೆಂಬುದು ಇಡೀ ವ್ಯವಸ್ಥಾಪನಾ ಸಮಿತಿಯ ಕನಸು ನನಸಾದ ಬಗೆ ಇದು. ಅನ್ಯರ ಹಣಕಾಸು ಮುಟ್ಟದೇ ಇರುವ ಕಾರಣಕ್ಕೇ ಇಂಥ ಶಕ್ತಿ ಮತ್ತು ವ್ಯಾಪ್ತಿ ನುಡಿಸಿರಿಗೆ ಸಾಧಿಸಿದೆ.
ನಮ್ಮ ಸರ್ಕಾರ ವಿಶ್ವ ಕನ್ನಡ ಸಮ್ಮೇಳನ ನಡೆಸುತ್ತೇನೆಂದು ಹೇಳುತ್ತಲೇ ಇದೆ. ಹಲವು ಕಾರಣಗಳಿಂದ ಹಲವು ರಾಜಕೀಯ/ಸಾಮಾಜಿಕ ಒತ್ತಡಗಳನ್ನು ಮುಂದುಮಾಡಿ ಅದರ ನೆವದಿಂದ ವಿಶ್ವ ಕನ್ನಡ ಸಮ್ಮೇಳನ ಮುಂದು ಮುಂದಕ್ಕೆ ಹೋಗುತ್ತಲೇ ಇದೆ. ಪಕ್ಕದ ಮಹಾರಾಷ್ಟ್ರದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಕ್ಕೆ ಅಲ್ಲಿನ ಸರ್ಕಾರ ಹಣ ನೀಡಿದರೂ ಅದರಲ್ಲಿ ಭಾಗವಹಿಸಲು ಅದಕ್ಕೆ ಅವಕಾಶ ಇಲ್ಲವಂತೆ. ಆ ನಾಡಿನ ಚಿಂತಕರೂ, ಬುದ್ಧಿಜೀವಿಗಳೂ, ಸಾಹಿತಿಗಳೂ ಹಾಗೂ ಸಾಹಿತ್ಯಾಸಕ್ತರು ಮಾತ್ರ ಭಾಗವಹಿಸುವ ಸಮ್ಮೇಳನ ಅದಂತೆ. ನಮಗೂ ಅಂಥ ಸದವಕಾಶ ಬಂದೀತೆ? ಮುಖ್ಯ ಮಂತ್ರಿಗಳು ಬಂದೇ ಸಮ್ಮೇಳನವನ್ನು ಉದ್ಘಾಟಿಸಬೇಕೆನ್ನುವ ಮನೋಭಾವನೆ ದೂರವಾಗಬೇಕಾದರೆ ಅತ್ಯಗತ್ಯವಾಗಿ ನುಡಿಸಿರಿಯಲ್ಲಿ ಭಾಗವಹಿಸಿ ಅಲ್ಲಿನ ಚರ್ಚೆಗಳಲ್ಲಿ ಭಾಗವಹಿಸಿ ಕಲಿಯಬೇಕು.
ಮೂರೂ ದಿನ ಅಲ್ಲಿನ ಸಂಭ್ರಮ, ಸಂತೋಷಗಳಲ್ಲಿ ಭಾಗವಹಿಸಿ ಬರುವಾಗ ಕೇವಲ ಕುತೂಹಲಕ್ಕೆ ವ್ಯವಸ್ಥಾಪನಾ ಸಮಿತಿಯಲ್ಲಿರುವ ಒಬ್ಬರನ್ನು ಖರ್ಚು ವೆಚ್ಚಗಳ ಬಗ್ಗೆ ಕೇಳಿದೆ. ನುಡಿಸಿರಿಗೆ ನಲವತ್ತು ಲಕ್ಷ, ವಿರಾಸತ್ ಉತ್ಸವಕ್ಕೆ (ಶಾಸ್ತ್ರೀಯ ಸಂಗೀತ ನೃತ್ಯಗಳ ಹಬ್ಬ) ಅರವತ್ತು ಲಕ್ಷ ನಮ್ಮ ಅಂದಾಜು ವೆಚ್ಚ. ಸ್ವಲ್ಪ ಏರಿಳಿತ ಆಗಬಹುದು ಎಂದರವರು. ಕೇವಲ ನಲವತ್ತು ಐವತ್ತು ಲಕ್ಷಗಳಲ್ಲಿ ಇಷ್ಟು ಅಚ್ಚುಕಟ್ಟಾಗಿ ಸಂಭ್ರಮವಾಗಿ ನುಡಿಹಬ್ಬವನ್ನು ನಡೆಸಬಹುದಾದಲ್ಲಿ ನಮ್ಮ ಸಾಹಿತ್ಯ ಸಮ್ಮೇಳನಗಳಿಗೇಕೆ ನಾಲ್ಕೈದು ಕೋಟಿ ಸುರಿಯುತ್ತಿದ್ದೇವೆ/ಸಾರ್ವಜನಿಕರ ದುಡ್ಡನ್ನು ದುಂದು ಮಾಡುತ್ತಿದ್ದೇವೆ ಅನ್ನುವ ಪ್ರಶ್ನೆಗಳನ್ನು ನಿಮ್ಮಲ್ಲಿಯೂ ಹುಟ್ಟಿಸಿ ಈ ಲೇಖನವನ್ನು ಪರಿಸಮಾಪ್ತಿಗೊಳಿಸುತ್ತಿದ್ದೇನೆ.

ಶುಕ್ರವಾರ, ಅಕ್ಟೋಬರ್ 30, 2009

ರಾಜ್ಯೋತ್ಸವ ವಿಶೇಷ

ವಿಜಯನಗರ ಸಾಮ್ರಾಜ್ಯ ೧೫೨೬ಕ್ಕೆ ಪತನಗೊಂಡ ನಂತರ ಕನ್ನಡಿಗರಿಗೆ ಒಂದು ಅಖಂಡ ರಾಜ್ಯ ಇಲ್ಲವಾಯಿತು. ಕಾವೇರಿಯಿಂದ ಕೃಷ್ಣಾನದಿ ಮತ್ತು ಪಶ್ಚಿಮ ಘಟ್ಟದ-ಕರಾವಳಿಯಿಂದ ಆಂಧ್ರದ ತೆಲಂಗಾಣದವರೆಗೂ ಕನ್ನಡಿಗರ ನಾಡು ಅಖಂಡವಾಗಿ ಉಳಿದಿತ್ತು. ಚಾಲುಕ್ಯರು ರಾಷ್ಟ್ರಕೂಟರುಕಟ್ಟಿದ ಕರ್ನಾಟಕ ಸಾಮ್ರಾಜ್ಯ ಕನ್ನಡ ಭಾಷೆ, ಸಾಹಿತ್ಯ, ಕಲೆ, ತತ್ವಜ್ಞಾನ ಜನಪದಗಳ ಸುಂದರ ನೆಲೆಯಾಗಿತ್ತು. ಕನ್ನಡಿಗರಿಗೆ ಹೆಮ್ಮೆ ತರುವ ವಾತಾವರಣ ಇತ್ತು. ಮುಂದೆ ನಾನಾ ಅನ್ಯ ಅರಸರ ಆಳಿಕೆ ಸುರುವಾಗಿ ಕನ್ನಡನಾಡು ಅಖಂಡವಾಗಿ ಬೆಳೆಯುವ ಅವಕಾಶ ಕಳಚಿಕೊಂಡು, ಕೆಲವು ಭಾಗಗಳು ಅನಾಥವಾದುವು;ಹಿಂದುಳಿದುವು;ಸ್ವಂತಿಕೆಯ ಲಕ್ಷಣಗಲು ಮಾಯವಾದುವು.
ಈ ಪರಿಸ್ಥಿತಿ ೧೯೫೬ರವರೆಗೂ ಇತ್ತು. ಅಂದರೆ ಮೈಸೂರು ರಾಜ್ಯ ಎಂದು ಪುನರ್ನಿಮಾಣವಾಗುವವರೆಗೆ ಕನ್ನಡಿಗರು ಚದುರಿಹೋಗಿದ್ದರು. ೧೯೨೦ರಲ್ಲಿ ಭಾರತದಲ್ಲಿ ಸ್ವಾತಂತ್ರ್ಯ ಚಳವಳಿ ವೇಗದಿಂದ ಮುನ್ನಡೆಯತೊಡಗಿತೋ ಆಗ, ಹೊಸ ಶಿಕ್ಷಣದ ಅರಿವಿನಿಂದ ಗತ ವೈಭವದ ನೆನಪಿನಿಂದ ಕನ್ನಡಿಗರು ಎಚ್ಚೆತ್ತರು. ಬೇರೆ ಬೇರೆ ಭಾಗಗಳಲ್ಲಿ ಒಡೆದು ಹೋಗಿದ್ದ ನಾಡನ್ನು ಒಂದುಗೂಡಿಸುವ ಸಂಕಲ್ಪ ಹುಟ್ಟಿತು. ಇದಕ್ಕೆ ನಾಂದಿ ಹಾಡಿದವರು ಆಲೂರು ವೆಂಕಟರಾಯರು. ಏಕೀಕರಣದ ಮಂತ್ರ ಹೇಳಿ, ನಾಡಿಗರನ್ನು ಎಚ್ಚರಿಸಿದ ಆಲೂರರು ‘ಕರ್ನಾಟಕ ಕುಲ ಪುರೋಹಿತ’ರೆನಿಸಿದ್ದಾರೆ.
೧೯೦೭ರಿಂದ ಏಕೀಕರಣ ಚಳವಳಿ ಆರಂಭವಾಯಿತು. ರಾಷ್ಟ್ರೀಯ ಚಳವಳಿ ನಡೆದದ್ದು ಬ್ರಿಟಿಷರ ವಿರುದ್ಧ. ಅದರ ಜತೆಗೇ ನಡೆದ ಏಕೀಕರಣ ಚಳವಳಿ ಯಾರ ವಿರುದ್ಧವೂ ಆಗಿರದೆ ಕನ್ನಡದ ‘ನವೋದಯ’ದಪರವಾಗಿ. ಕನ್ನಡಿಗರಲ್ಲಿ ಸ್ವಂತಿಕೆಯನ್ನು ರೂಢಿಸಿಕೊಳ್ಳುವ ಅಗತ್ಯವಿತ್ತು. ಹಳೆಯದನ್ನು ಹೊಸಬೆಳಕಿನೊಂದಿಗೆ ಮುಂದುವರೆಸಿಕೊಂಡು, ಕನ್ನಡದ ದಾರಿ ನಿರ್ಮಿಸಿಕೊಳ್ಳುವ ಅಗತ್ಯವಿತ್ತು.
ಕನ್ನಡದ ದಾರಿ ಎಂದರೆ, ನಮ್ಮತನವನ್ನು ಉಳಿಸಿಕೊಂಡು ಬೆಳೆಸಿಕೊಂಡು ಜ್ಞಾನ-ವಿಜ್ಞಾನದ ಸಹಕಾರದಿಂದ ಹೊಸತನವನ್ನು ಸಾಧಿಸುವುದು. ಕನ್ನಡಗಳು ಕರ್ನಾಟಕದಲ್ಲಿವೆ. ಅವುಗಳ ನಡುವೆ ಇರುವ ವ್ಯತ್ಯಾಸಗಳು ಉಚ್ಚಾರಣಾಕ್ರಮದ್ದು. ಆದರೆ ಶಿಷ್ಟ ಕನ್ನಡ ಎಂಬುದು ಒಂದಿದೆ. ಅದರಲ್ಲಿ ಈ ನಾಡಿನ ಭಾವೈಕ್ಯದ ಬೀಜಗಳಿವೆ. ಭಾವೈಕ್ಯವೇ ಸಹಕಾರದ ಮೂಲ. ಕನ್ನಡ ಜ್ಞಾನದಿಂದ ರಾಜ್ಯವನ್ನು ಕಟ್ಟಿದಾಗ ಪರಂಪರೆಯ ಸೊಗಸು ಬರುತ್ತದೆ. ಭಾವ ಪರಂಪರೆಗೆ ಕಾರಣವಾದ ಹಳೆಯ ಅಂಶಗಳೆಂದರೆ ಸಾಹಿತ್ಯದಲ್ಲಿ ದಾಖಲಾಗಿರುವ ಕನ್ನಡಿಗರ ಚರಿತ್ರೆ. ಕವಿರಾಜ ಮಾರ್ಗಕಾರನು ೧,೧೫೦ ವರ್ಷಗಳ ಹಿಂದೆ ಇದನ್ನೇ ಹೇಳಿದ್ದ: ನಾಡವರ್ಗಗಳು ವಿವಿಧ. ಬಣ್ಣಗಳು ಹಲವು. ಆದರೆ ವಿವೇಕ ಒಂದೇ. ರಾಜಕೀಯ ದೌರ್ಬಲ್ಯಗಳಿಂದಾಗಿ ವಿವೇಕ ಮರೆತಿತ್ತು. ಕನ್ನಡದ ವಿವೇಕ ಸಾಹಿತ್ಯದಲ್ಲಿ, ಸಂಗೀತದಲ್ಲಿ ರಕ್ತಗತವಾಗಿದೆ. ಅದನ್ನು ಎಲ್ಲರೂ ಸಾಮೂಹಿಕವಾಗಿ ಗಮನಕ್ಕೆ ತಂದುಕೊಂಡು, ಭಾಷಿಕ ಏಕಾತ್ಮ ಭಾವ ಅನುಭವಿಸಬೇಕು. ಆದರೆ ಪರಕೀಯ ಆಡಲಿತದಲ್ಲಿ ಅದು ಸಾಧ್ಯವಾಗಲಿಲ್ಲ. ೩೦ ವರ್ಷಗಳ ಚಳುವಳಿಯ ನಂತರ ಗಾಂಧೀಜಿಯ ಭಾಷಾವಾರು ಪ್ರಾಂತ ರಚನೆ ತತ್ವದ ಮೇರೆಗೆ ಕನ್ನಡಿಗರಿಗೆ ಅಖಂಡ-ಸಂಯುಕ್ತ ರಾಜ್ಯ ಆಡಲಿತಕ್ಕೆ ಸಿಕ್ಕಿತು-ಅದೇ ರಾಜ್ಯೋದಯ.
ಕನ್ನಡದ ಶಕ್ತಿಯುಕ್ತಿಗೆ ಐತಿಹಾಸಿಕ ಪರಂಪರೆ ಇದೆ. ಅದನ್ನು ಮರೆಯದಂತೆ, ಹೊರಗಿನ ಕೆಟ್ಟ ಪ್ರಭಾವಗಳಿಗೆ ಸಿಗದಂತೆ ಕನ್ನಡವನ್ನು ಮಾತಿನಲ್ಲಿ, ಆಡಳಿತದಲ್ಲಿ, ಬರಹದಲ್ಲಿ ಬಳಸಿ ಉಳಿಸಿಕೊಳ್ಳಬೇಕಾಗಿದೆ. ‘ಕನ್ನಡ’ ಭಾರತದಲ್ಲಿ ಶಾಸ್ತ್ರೀಯ ಸ್ಥಾನ ಪಡೆದ ಮೂರನೇಯ ಭಾಷೆ. ಇದರ ಹೆಮ್ಮೆ, ಅಭಿಮಾನ ಸಾಮೂಹಿಕವಾಗಿ ಇದ್ದಾಗ-ಕನ್ನಡ-ಕನ್ನಡಿಗ-ಕರ್ನಾಟಕ-ಮೂರಕ್ಕೂ ನೆಲೆ,ಬೆಲೆ.
-ಸರ್ವಜಿತ, ಹುಬ್ಬಳ್ಳಿ

ಶುಕ್ರವಾರ, ಸೆಪ್ಟೆಂಬರ್ 4, 2009

ವಿಘ್ನ ವಿನಾಶಕ ವಿನಾಯಕ

ಆಷಾಡದ ಗಾಳಿಮಳೆಗಳು ಶ್ರಾವಣದ ಕುಂಭದ್ರೋಣ ಕಡಿಮೆಯಾಗಿ ಭಾದ್ರಪದ ಕಾಲಿಟ್ಟಿದೆ. ಚರಾಚರ ಪ್ರಕೃತಿಯಲ್ಲಿ ಮೇಳೈಸಿದ್ದ ಜಡತನ ಹಿಂದೆ ಸರಿದು ಜೀವನೋತ್ಸಾಹ ಪುಟಿದೇಳುವ ಕಾಲವಿದು ಎಂದು ಆಯುರ್ವೇದ ಹೇಳುತ್ತದೆ. ಮಳೆ ಕಡಿಮೆಯಾದ ಕಾರಣ ರೈತಾಪಿ ಜನರೂ ಬರುವ ದಿನಗಳ ನಿರೀಕ್ಷೆಯಲ್ಲಿ ಇರುತ್ತಾರೆ. ಭಾದ್ರಪದ ಶುಕ್ಲದ ಚೌತಿ ವಿನಾಯಕನ ಹಬ್ಬ. ಗೌರಿ ಮತ್ತು ಗಣೇಶರ ಹಬ್ಬ ಜನಸಮುದಾಯದಲ್ಲಿ ಹರ್ಷ-ಸಂಭ್ರಮಗಳನ್ನು ಅರಳಿಸುತ್ತದೆ.
ಭಾರತೀಯ ದೇವತೆಗಳಲ್ಲಿ ಅತ್ಯಂತ ಲೋಕ ಖ್ಯಾತನಾದವನು ಗಣೇಶನೇ. ಅವನು ಕೇವಲ ವಿಘ್ನ ನಾಶಕನಷ್ಟೇ ಅಲ್ಲ, ಸಿದ್ಧಿ ಪ್ರದಾಯಕನೆಂದೂ ಪೂಜಿಸಲ್ಪಡುತ್ತಾನೆ. ಎಲ್ಲ ಕೆಲಸಗಳ ಆರಂಭದಲ್ಲೂ ಗಣೇಶನನ್ನು ಪ್ರಾರ್ಥಿಸುವುದು ಪಾರಂಪರಿಕವಾಗಿ ನಡೆದು ಬಂದ ಆಚರಣೆ. ಹೀಗೆ ಅಗ್ರಪೂಜೆಗೂ ಮೊದಲ ನಮಸ್ಕಾರದ ಮನ್ನಣೆಗೂ ಪಾತ್ರನಾಗುವ ವಿನಾಯಕ ಭಕ್ತರ ಸಂಕಲ್ಪ ಶಕ್ತಿಗೆ ಬಲದುಂಬಿ ಕಾರ್ಯಸಿದ್ಧಿಯಾಗುವಂತೆ ಹರಸುತ್ತಾನೆಂಬ ನಂಬಿಕೆ ಇದೆ. ಮಹರ್ಷಿ ವೇದವ್ಯಾಸರು ರಚಿಸಿದ ಮಹಾಭಾರತ ಕೃತಿಗೆ ಗಣಪತಿಯೇ ಲಿಪಿಕಾರನೆಂಬ ಹೇಳಿಕೆಯೂ ಪ್ರಸಿದ್ಧವಾದುದೇ ಆಗಿದೆ. ನಮ್ಮ ಪ್ರಾಚೀನ ಕಾವ್ಯಗಳ ಆರಂಭವಂತೂ ಗಣಪತಿಯನ್ನು ನಮಿಸದೇ ಮುಂದೆ ಹೋಗುವುದೇ ಇಲ್ಲ. ಕವಿ, ಕಲಾವಿದ, ಪಂಡಿತ, ಪಾಮರರೆಲ್ಲರಿಗೂ ಗಣೇಶ ಪರಮಪ್ರಿಯ ದೇವರು.
ಮುಂಜಾನೆ ಮೂಡಣದ ಅಂಚಿನಲ್ಲಿ ನಿಧಾನವಾಗಿ ಸಣ್ಣವನಾಗಿ ಕಾಣಿಸಿಕೊಂಡು ನಂತರ ಭೂಮ್ಯಾಕಾಶಗಳನ್ನೆಲ್ಲ ಆವರಿಸಿಕೊಳ್ಳುವ ಸೂರ್ಯನಂತೆ ಸಿದ್ಧಿಪ್ರದ ವಿನಾಯಕನು ಭೂಮ್ಯಾಕಾಶಗಳನ್ನೆಲ್ಲ ವ್ಯಾಪಿಸಿರುವನೆಂದು ಲಕ್ಷೀಶ ಕವಿ ತನ್ನ ಜೈಮಿನಿ ಭಾರತದಲ್ಲಿ ವರ್ಣಿಸಿದ್ದಾನೆ. ಭಾವಜಗತ್ತನ್ನೂ, ಬೌಧ್ಧಿಕ ಜಗತ್ತನ್ನೂ, ವಿಜ್ಞಾನ ಜಗತ್ತನ್ನೂ ಸರಿಸಮನಾಗಿ ವ್ಯಾಪಿಸಿರುವ ಗಣೇಶನನ್ನು ಕುರಿತ ದಂತ ಕತೆಗಳೂ ಲೆಕ್ಕಕ್ಕೇ ಸಿಕ್ಕದಷ್ಟು ಹೇರಳವಾಗಿವೆ. ಶಿವ ಪುರಾಣದಲ್ಲಿ ವರ್ಣಿತನಾಗಿರುವಂತೆ -ಮತ್ತ ಮಾತಂಗ ವದನೋ, ಗಂಗೋಮಾ ಶಂಕರಾತ್ಮಜಃ, ಆಕಾಶದೇಹೋ, ದಿಗ್ಬಾಹುಃ, ಸೋಮಃ ಸೂರ್ಯಾಗ್ನಿಲೋಚನಃ- ಮದಿಸಿರುವ ಆನೆಯ ವದನವಿರುವ ವಿನಾಯಕ ಗಂಗೆ,ಉಮೆ ಮತ್ತು ಶಂಕರರ ಮುದ್ದಿನ ಮಗ. ಆಕಾಶವೇ ಅವನ ಶರೀರವಾದರೆ, ದಿಕ್ಕುಗಳವನ ತೋಳುಗಳು. ಸೂರ್ಯ ಚಂದ್ರರೇ ಅವನ ಕಣ್ಣುಗಳು.- ಈ ವಿಭೂತಿ ರೂಪವನ್ನು ಕಲ್ಪಿಸಿಕೊಂಡ ಮನಸ್ಸಿನ ಹಿಂದೆ ಇರುವ ಭೂಮ ಕಲ್ಪನೆ ಅದ್ಭುತವಾದುದು.
ಪೌರಾಣಿಕ ಮತ್ತು ಜಾನಪದ ಕಥೆಗಳಂತೂ ಗಣೇಶನ ಹುಟ್ಟು ಅವನ ಲೀಲೆ ಮತ್ತು ಮಹಿಮೆಗಳನ್ನು ಹಾಡಿಹೊಗಳಿವೆ. ಆ ಕಥೆಗಳ ಹಿಂದಿರುವ ರೋಚಕ ಕಲ್ಪನೆಯಂತೂ ರಮ್ಯಲೋಕವನ್ನು ಕೇಳುಗನಲ್ಲಿ ಮೂಡಿಸುತ್ತವೆ. ಈ ಕಲ್ಪಿತ ಆವರಣಗಳಿಂದ ಅವನನ್ನು ಬೇರ್ಪಡಿಸಿ ಸಾಕ್ಷಾತ್ ಪರಬ್ರಹ್ಮ ಸ್ವರೂಪನೆಂಬ ಎತ್ತರದ ನೆಲೆಯಲ್ಲಿ ಪರಿಭಾವಿಸಿದ ದಾರ್ಶನಿಕ ಚಿಂತನೆಯೂ ನಮಗೆ ಗೊತ್ತಿದೆ. ಇಡೀ ಬ್ರಹ್ಮಾಂಡದ ಆದಿ, ಮಧ್ಯ, ಅಂತ್ಯಗಳಲ್ಲಷ್ಟೇ ಅಲ್ಲದೆ ಸೃಷ್ಟಿಯ ಎಲ್ಲ ವ್ಯಾಪಾರಗಳಲ್ಲೂ ಗಣಪತಿಯ ಪಾರಮ್ಯವನ್ನೇ ಕಂಡ ಚಿಂತನೆಯೂ ನಮ್ಮ ಪ್ರಾಚೀನ ಚಿಂತನಗಳಲ್ಲಿವೆ. ಅಥರ್ವಶೀರ್ಷದಲ್ಲಿ ಅವನನ್ನು ಹೀಗೆ ವರ್ಣಿಸಲಾಗಿದೆ. - ಸರ್ವಂ ಜಗದಿದಂ ತ್ವತ್ತಸ್ತಿಷ್ಟತಿ, ಸರ್ವಂ ಜಗದಿದಂ ತ್ವಯಿಲಯಮೇಷ್ಯತಿ. ಸರ್ವಂ ಜಗದಿದಂ ತ್ವಯಿಪ್ರತ್ಯೇತಿ, ತ್ವಂ ಭೂಮಿರಾಪೋನಲೋನಿಲೋ ನಭಃ -ಈ ಜಗತ್ತು ನಿನ್ನ ಕಾರಣದಿಂದಲೇ ಉಂಟಾಗಿದೆ. ನಿನ್ನಾಧಾರದ ಮೇಲೇ ನಿಂತಿದೆ. ಕಡೆಗೂ ನಿನ್ನಲ್ಲಿಯೇ ಲೀನವಾಗುವುದು ಈ ಜಗತ್ತು. ಭೂಮಿ, ನೀರು, ಗಾಳಿ, ಬೆಂಕಿ, ಆಕಾಶ ಪಂಚಭೂತಗಳಲ್ಲೂ ನೀನೇ ತುಂಬಿದ್ದೀ-
ಇಂಥ ಉನ್ನತ ನೆಲೆಯಲ್ಲಿ ನಮ್ಮ ಹಿರಿಯರು ಕಂಡಿದ್ದ ಗಣೇಶ ಇವತ್ತು ಬೀದಿಬೀದಿಗಳ ಪೆಂಡಾಲುಗಳಲ್ಲಿ, ಶಾಲೆ ಕಾಲೇಜುಗಳ ಅಂಗಳದಲ್ಲಿ ಅಷ್ಟೇ ಏಕೆ ಸಂತೆ ಮಾಳಗಳ ಜನಸಾಗರದ ಮಧ್ಯದಲ್ಲೂ ವಿಜೃಂಭಿಸುತ್ತಿದ್ದಾನೆ. ಭಕ್ತಿಗೋ ಭಾವಕ್ಕೋ ಅಥವ ವಸೂಲಿ ದಂಧೆಯ ವ್ಯಾಪರಕ್ಕೋ ಪಕ್ಕಾಗುತ್ತಿದ್ದಾನೆ. ಸಿನಿಮಾ ಸಂಗೀತಗಳ ಭರಾಟೆಯಲ್ಲಿ, ಡಿಸ್ಕೋ ಹಾಡುಗಳ ದರಬಾರಿನಲ್ಲಿ ಕೂಡ ಗಣೇಶನ ಮೂರ್ತಿ ಇರುವುದು ಪರಿಸ್ಥಿತಿಯ ವ್ಯಂಗ್ಯವಾಗಿದೆ.
ಉನ್ನತ ನೆಲೆಯಲ್ಲಿ ವಿದ್ಯಾಧಿದೇವತೆಯೆಂದೂ ಪರಿಗಣಿಸಿರುವ ಗಣೇಶ ನಮ್ಮೆಲ್ಲರಲ್ಲೂ ನಾಳಿನ ಒಳ್ಳೆಯದಕ್ಕಾಗಿ ಇಂದು ನಾವು ಕೈಗೆತ್ತಿಕೊಳ್ಳಬೇಕಾದ ಕೆಲಸಕಾರ್ಯಗಳನ್ನು ನಿರ್ವಿಘ್ನವಾಗಿ ನಡೆಸಿಕೊಡಲಿ ಎಂಬುದು ಗಣೇಶ ಚೌತಿಯ ಪ್ರಾರ್ಥನೆಯಾಗಿದೆ. ಇನ್ನು ಗಣೇಶನ ತಾಯಿ ಗೌರಿಯಂತೂ ಸಾಕ್ಷಾತ್ ಪರಶಿವನ ಮಡದಿಯಾಗಿಯೂ ಲೌಕಿಕದ ಎಲ್ಲ ಹೆಣ್ಣುಮಕ್ಕಳ ಹಾಗೆ ಕಷ್ಟ-ಸುಖಗಳನ್ನು ಕಂಡವಳು. ದಾಕ್ಷಾಯಣಿಯಾಗಿ ಅವತರಿಸಿ ಶಿವನನ್ನೇ ವರಿಸಿದ ಛಲವಂತೆ ಅವಳು. ಹೀಗೆ ಗೌರಿ-ಗಣೇಶರ ಹಬ್ಬ ತಾಯಿ-ಮಗುವಿನ ಬಾಂಧವ್ಯದ ಸಂಕೇತವಾಗಿ ನಮಗೆಲ್ಲ ಪಾಠ ಹೇಳುತ್ತಲೇ ಇರುವುದನ್ನೂ ನಾವು ಗಮನಿಸಲೇಬೇಕು.

ಬುಧವಾರ, ಸೆಪ್ಟೆಂಬರ್ 2, 2009

ಕೃಷ್ಣನೆಂಬ ಮನೋಚಿಕಿತ್ಸಕ

ಗೀತಾಚಾರ್ಯನಾದ ಶ್ರೀ ಕೃಷ್ಣ ಭಾರತೀಯ ಚಿಂತನೆ ಮತ್ತು ಜೀವನ ತತ್ವಗಳ ಮೇಲೆ ಅದ್ಭುತ ಪ್ರಭಾವ ಬೀರಿದವನು. ಅತ್ಯಂತ ಆಳವಾಗಿ ಮತ್ತು ವಿಸ್ತಾರವಾಗಿ ಅವನ ಪ್ರಭಾವಳಿ ಇದೆ. ನಮ್ಮ ಮತಧರ್ಮ- ತತ್ವ ದೃಷ್ಟಿ, ಅಧ್ಯಾತ್ಮ- ಯೋಗ, ಕಾವ್ಯ- ಶಿಲ್ಪ, ಸಂಗೀತ-ನರ್ತನ, ಸಂಸ್ಕೃತಿ-ನಾಗರೀಕತೆ ಹೀಗೆ ಜೀವನದ ವೈವಿಧ್ಯತೆಗೆ ಸಂಬಂಧಿಸಿದ ಎಲ್ಲ ಕ್ಷೇತ್ರಗಳಲ್ಲಿಯೂ ಅವನು ಇದ್ದಾನೆ. ಅಂದರೆ ಈ ಎಲ್ಲ ಕ್ಷೇತ್ರಗಳ ಪರಿಣಿತರಿಗೂ ಕೃಷ್ಣನ ಪ್ರಭಾವಲಯ ತಟ್ಟಿದೆ. ಅವನು ನಮ್ಮೆಲ್ಲರ ಹೃದಯ-ಬುದ್ಧಿಗಳನ್ನು ಆಕರ್ಷಿಸಿದ ಸರ್ವಕಾಲಿಕ ಕಿಂದರಜೋಗಿಯೆಂದೇ ಖ್ಯಾತನಾಗಿದ್ದಾನೆ. ಯುವಕ-ಯುವತಿಯರು, ಋಷಿ-ಮುನಿಗಳು, ಪಂಡಿತ-ಪಾಮರರು, ವ್ಯವಹಾರ ಚತುರರು-ರಾಜಕೀಯ ನಿಪುಣರೂ ಅವನ ಮಾಂತ್ರಿಕ ಶಕ್ತಿಗೆ ತಲೆದೂಗಿದ್ದಾರೆ.

ಭಾಗವತ ಮತ್ತು ಭಾರತದ ಕತೆಗಳಂತೆಯೇ ನಮ್ಮ ಜಾನಪದರೂ ಕೃಷ್ಣನನ್ನು ಪೋಷಿಸಿ ಬೆಳಸಿದ್ದಾರೆ. ಅವನ ಜೀವನದ ಘಟನೆಗಳಿಗೆ ಲೌಕಿಕದ ಆಸೆ-ಆಮಿಷಗಳನ್ನೂ ತಳುಕು ಹಾಕಿ ಸಂಭ್ರಮಿಸಿದ್ದಾರೆ. ಶೈಶವದಿಂದಲೂ ಗಾರುಡಿಗನೆಂದೇ ಬಿಂಬಿಸಲ್ಪಟ್ಟ ಅವನು ಬಾಲ್ಯದಲ್ಲಿ ಬೆಣ್ಣೆ ಕದ್ದ ಬಾಲಕೃಷ್ಣ, ಯೌವನದಲ್ಲಿ ಗೋಪಿಯರ ಮನಸ್ಸು ಕದ್ದ ಗೋಪೀ ಕೃಷ್ಣ, ದ್ವಾರಕೆಯನ್ನು ಕಟ್ಟಿದ ನಿರ್ಮಾತೃ ಶ್ರೀ ಕೃಷ್ಣ, ಪಾಂಡವರ ಪರವಾಗಿ ನಿಂತ ಧರ್ಮೋದ್ಧಾರಕ, ಯುದ್ಧದ ಗೊಂದಲದ ನಡುವೆಯೇ ಗೀತೆಯನ್ನು ಬೋಧಿಸಿದ ಗೀತಾಚಾರ್ಯ.

ಹೀಗೆ ಸಲಹೆಗಾರನಾಗಿ, ರಾಯಭಾರಿಯಾಗಿ, ಸದಾ ಧರ್ಮದ ಪರವಾಗಿ, ಸದ್ಗುಣಿಗಳ ಪರವಾಗಿ, ದಿಕ್ಕಿಲ್ಲದವರ ಪರವಾಗಿ ಅವನು ನಿಂತಿದ್ದಾನೆ. ರಾಜಕೀಯವಾಗಿ ಪ್ರಮುಖ ಸ್ಥಾನವನ್ನು ಪಡೆಯದೆಯೂ ರಾಜನಿರ್ಮಾತೃವಾಗಿಯೇ ಅವನು ಉಳಿದಿದ್ದಾನೆ. ತನ್ನ ತಂತ್ರ, ಪ್ರತಿತಂತ್ರಗಳಿಂದ ರಾಜಕಾರಣವನ್ನು ನಿಯಂತ್ರಿಸಿದ ಕೃಷ್ಣ ಸದಾ ಸುಚೇತನ ಸ್ವರೂಪಿ. ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಶಸ್ತ್ರ ಸನ್ಯಾಸ ಮಾಡಿದ್ದ ಅರ್ಜುನನಿಗೆ ಸಾರಥಿಯಾಗಿ, ವಿಷಾದ ಭರಿತನಾಗಿದ್ದ ಪಾರ್ಥನಿಗೆ ಬುದ್ಧಿ-ಮನಸ್ಸುಗಳ ಸ್ಥಿಮಿತತೆಯನ್ನು ಬೋಧಿಸಿದವನು. ಗೀತೆಯ ಒಂದೊಂದು ಸಾಲೂ ಸೋಲಿನ ಭಯದಲ್ಲಿರುವವರಿಗೆ ಗೆಲುವಿನ ಸಂಜೀವಿನಿ ಕೊಡುವಂಥದು.

ಭಗವದ್ಗೀತೆಯಲ್ಲಿ ಪ್ರತಿಪಾದಿತವಾಗಿರುವ ಜೀವನ ತತ್ವವು ಸ್ವತಃ ಆ ತತ್ವಗಳಿಗೆ ಬದ್ಧನಾಗಿದ್ದ ಗುರುವಿನ ನಿಶ್ಚಿತ ಅಭಿಪ್ರಾಯಗಳನ್ನು ತಿಳಿಸುತ್ತದೆ. ಜೀವನೋತ್ಸಾಹವನ್ನು ತಗ್ಗಿಸದ, ಜ್ಞಾನದ ನಿಧಿಯೇ ಆಗಿರುವ ತತ್ವವಾಗಿದೆ. ಮನುಷ್ಯ ಹೇಗೆ ತನ್ನ ಜೀವಿತವನ್ನು ಶ್ರೇಷ್ಠವಾಗಿಸಿಕೊಳ್ಳಬಹುದೆಂಬುದರ ದಾರಿದೀವಿಗೆಯೂ ಆಗಿದೆ.

ಸಾಮಾನ್ಯ ಜೀವನದಲ್ಲಿ ನಾವು ತೋರುವ ಉತ್ಸಾಹ ಸ್ವಾರ್ಥಕ್ಕೆ ನೇರವಾಗಿ ಸಂಬಂಧಿಸಿರುತ್ತದೆ. ನಮ್ಮೆಲ್ಲರ ಕಾರ್ಯಕಲಾಪಗಳನ್ನು ಕಳವಳಗಳಿಂದ, ಭಾವೋದ್ರೇಕಗಳಿಂದ, ಅನುಕಂಪ-ದುಃಖಗಳಿಂದ ಇವೇ ಮೊದಲಾದ ಉಪಕರಣಗಳಿಂದ ನಮ್ಮ ಸ್ವಾರ್ಥಕ್ಕೆ ಲಾಭ ತರುವಂತೆ ಹೆಣೆದು ಕೊಂಡಿರುತ್ತೇವೆ. ಹಾಗೆ ಲಾಭ ಬಾರದಾದಾಗ ಜೀವನೋತ್ಸಾಹವೇ ಉಡುಗಿಹೋಗುತ್ತದೆ. ನಮ್ಮ ನೀತಿ ನಡವಳಿಕೆಗಳ ಹಿಂದಿನ ಚಾಲಕ ಶಕ್ತಿಯನ್ನೇ ಕಳೆದುಕೊಂಡು ಅಂತರಂಗದಲ್ಲಿ ಕಳವಳವೂ, ಬಹಿರಂಗದಲ್ಲಿ ಜಡತನವೂ ಸೇರಿದ ಉದಾಸೀನದೆಡೆಗೆ ನಾವು ಸಾಗುತ್ತೇವೆ. ಇಂತಹುದೇ ಸ್ಥಿತಿಯಲ್ಲಿದ್ದ ಅರ್ಜುನನಿಗೆ- ಅನಾಸಕ್ತನಾಗಿದ್ದಾಗಲೂ ಉತ್ಸಾಹ ಕಳೆದುಕೊಳ್ಳದ, ಕಳವಳಗೊಳ್ಳದೆಯೂ ಕಾರ್ಯಮಗ್ನನಾಗುವ ಸಾಧ್ಯತೆಯನ್ನು ಶ್ರೀಕೃಷ್ಣ ತನ್ನ ತತ್ವಬೋಧೆಯ ಮೂಲಕ ತಿಳಿಸಿ ಹೇಳಿದ. ಸ್ವಾರ್ಥ ಮೂಲವಾದ ಆಸೆ ಮತ್ತು ಭಾವೋದ್ರೇಕಗಳಿಂದ ಮುಕ್ತರಾದಾಗ ಮಾತ್ರ ಸರ್ವೋತ್ಕೃಷ್ಟತೆ ಸಾಧ್ಯವೆಂದು ಮನಗಾಣಿಸಿದ.

ಅವನು ನಮಗೆ ಬರಿಯ ಪುರಾಣದ ಪಾತ್ರವಲ್ಲ. ಕೇವಕ ಇತಿಹಾಸದ ನೆನಪೂ ಅಲ್ಲ. ಅವನೆಂದರೆ ಸದಾ ನಮ್ಮೊಂದಿಗಿರುವ ಸತ್ಯದ ಸಂಗತಿ. ಎಂದಿಗೂ ಬರೆದು ಮುಗಿಸಲಾಗದ ಕವಿತೆಯ ಪ್ರತಿಮೆ. ಜೊತೆಗಾತಿಯ ಕಾಲಂದುಗೆಗಳ ಝಲುರು. ಕಾಲ ಕಳೆದಂತೆಲ್ಲ ಅವನ ಧ್ವನಿ ಮತ್ತು ಆಕಾರಗಳಿಗೆ ಹೊಸ ರೂಪ ಮತ್ತು ಮಹತ್ವಗಳು ಜೊತೆಯಾಗುತ್ತಲೇ ನಡೆದಿವೆ. ಪ್ರಾಚೀನ ಆದರ್ಶದೊಡನೆ ಸಮಕಾಲೀನ ವ್ಯಸನಗಳನ್ನು ಸಮೀಕರಿಸಿಕೊಳ್ಳುವುದಕ್ಕೆ,ತತ್ವ ಜ್ಞಾನದೊಂದಿಗೆ ಆಧುನಿಕ ಪಡಿಪಾಟಲುಗಳನ್ನು ಅರ್ಥೈಸಿಕೊಳ್ಳುವುದಕ್ಕೆ ಕೃಷ್ಣ ತೋರಿಸಿರುವ ದಾರಿ ಸಮನ್ವಯದ ಕೊರತೆಯಿಂದ ನಲುಗುತ್ತಿರುವ ನಮಗೆ ಸಿದ್ಧೌಷಧವಾಗಿದೆ.

ಶ್ರೀಕೃಷ್ಣನ ಕತೆ ನಮ್ಮೆಲ್ಲರನ್ನೂ ಬೃಂದಾವನದ ಚಕ್ಕಂದಕ್ಕೆ, ದ್ವಾರಕೆಯ ಸೌಂದರ್ಯಕ್ಕೆ, ವ್ರಜದ ಕಷ್ಟ-ನಿಷ್ಟುರಗಳಿಗಷ್ಟೇ ಕರೆದೊಯ್ಯುವುದಿಲ್ಲ. ಬದಲಿಗೆ ಅವನ ಕತೆ ನಮ್ಮ ನಮ್ಮ ಪಯಣದ ಜೊತೆ ಜೊತೆಗೇ ಸಾಥಿಯಾಗುವ ಗೆಲುವಿನ ದಾರಿಗಿರುವ ಕಂಟಕಗಳನ್ನು ನಿವಾರಿಸುವ ಸುಲಭಕ್ಕೆ ದಕ್ಕುವ ಸಾಧನವೂ ಆಗಿದೆ.

ಇಷ್ಟೆಲ್ಲ ಪ್ರಭಾವ, ಪರಿಣಾಮಗಳು ನಮ್ಮ ಮೇಲಿದ್ದರೂ, ವಾಸುದೇವ ಕೃಷ್ಣನ ಅಸೀಮ ವ್ಯಕ್ತಿತ್ವದ ಎಲ್ಲ ಮಜಲುಗಳನ್ನೂ ವಿಮರ್ಶಿಸಿ, ಇದಮಿತ್ಥಂ ಎನ್ನುವ ವಿಶ್ಲೇಷಣೆ ಯಾರಿಂದಲೂ ಇದುವರೆಗೂ ಸಾಧ್ಯವಾಗಿಲ್ಲ. ವೇದವ್ಯಾಸರಿಂದಲೇ ಈ ಕೆಲಸ ಆಗದಿರುವಾಗ, ಅದಕ್ಕೆ ಕೈ ಹಾಕುವುದೆಂದರೆ ತಿಳಿಗೇಡಿತನದ್ದೇ ಆಗಿಬಿಡುತ್ತದೆ.

ಅವನ ರಾಜನೀತಿ ಮತ್ತು ಧರ್ಮ ಸೂಕ್ಷ್ಮಗಳು ಆಧುನಿಕ ಕಾಲದಲ್ಲೂ ಅನುಸರಿಸಲು ಯೋಗ್ಯವಾದುದೇ ಆಗಿದೆ. ತಾತ್ವಿಕತೆ, ಸ್ಥಿತಪ್ರಜ್ಞತೆ, ಸೌಂದರ್ಯ ಪ್ರಜ್ಞೆ, ಸಂಗೀತ, ನೃತ್ಯಗಳ ಮೇಲಣ ಅಪೂರ್ವ ಹಿಡಿತ, ವೀರೋಚಿತ ಸಹೃದಯತೆ ಕೃಷ್ಣನ ಆಸ್ತಿಗಳು. ನಮ್ಮೆಲ್ಲರಿಗೆ ಹಂಚಿಯೂ ಇನ್ನೂ ಉಳಿಯಬಹುದಾದ ಅಪ್ರತಿಮ ಖಣಿಯವನು.

ಆದರ್ಶವ್ಯಕ್ತಿಯೊಬ್ಬನಿಗಿರಬೇಕಾದ ಸಕಲ ಗುಣಗಳನ್ನು ಸ್ವತಃ ಹೊಂದಿದ್ದರೂ, ಅನ್ಯರ ಆದರ್ಶಗಳನ್ನೆಂದಿಗೂ ಲಘುವಾಗಿ ಕಾಣದ ಕೃಷ್ಣ ಈ ಕಾರಣದಿಂದಲೇ ಎಲ್ಲರಲ್ಲೂ ವಿಶ್ವಾಸ ಗಳಿಸುತ್ತಾನೆ. ಅತ್ಯಾಧುನಿಕ ಮನಶಾಸ್ತ್ರಜ್ಞನಿಗಿರಬೇಕಿರುವ ಸಕಲ ಸಂಯಮಗಳನ್ನು ಆವಿರ್ಭವಿಸಿಕೊಂಡಿದ್ದ ಅವನು ಸರ್ವಕಾಲದ ನಾಯಕ. ಮನುಕುಲದ ಮುಖ್ಯ ಪ್ರಾಣ. ದುರ್ಬಲರ, ದೀನರ ಪರಮಾಪ್ತ ಸಖ. ಅವನಿಗಿದ್ದ ಮನೋವಿಶ್ಲೇಷಣಾ ಸಾಮರ್ಥ್ಯ, ಚಿಕಿತ್ಸಕ ಗುಣ, ಅಪ್ಪಟ ದೇಶೀಯವಾದದ ಪ್ರಜ್ಞೆ, ಆಧುನಿಕ ಮನೋಭೂಮಿಕೆಯಲ್ಲಿ ಅರ್ಥೈಸಿಕೊಂಡರೆ ಕಾಣುವುದು ಬರೀ ಗೋಪಾಲಕನದಲ್ಲ, ಬದಲಿಗೆ ಅದು ಒಬ್ಬ ದೊಡ್ಡ ಮನೋಚಿಕಿತ್ಸಕನದು.

ಖಿನ್ನತೆಯಲ್ಲಿ ಬಳಲುತ್ತಲೇ ಇರುವ ಈ ದಿನಮಾನದ ನಮಗೆ ಅವನ ತತ್ವಬೋಧೆಗಳು ಕೊಡಬಹುದಾದ ಔಷಧ ಬಹು ಮೌಲ್ಯದ್ದು. ಬದುಕಿನ ಯುದ್ಧ ಭೂಮಿಯ ಮುಂದೆ ಪೈಪೋಟಿಯ ಅಕ್ಷೋಹಿಣೀ ಸೈನ್ಯಗಳು ಜಮಾಯಿಸಿರುವ ವರ್ತಮಾನದ ಸಂಕಟಗಳಲ್ಲಿ ವ್ಯಕ್ತಿತ್ವಗಳು ನಾಶವಾಗಿ, ಉಳಿಯಬಹುದಾದ ವ್ಯಕ್ತಿಗಳೂ ಮತ್ತಾರಿಂದಲೋ ಆಳಿಸಿಕೊಳ್ಳಬಹುದಾದ ಸೀಮಾತೀತ ದುರ್ವಿಧಿಗಳೇ ಕಾಡುತ್ತಿರುವ ಪ್ರಸ್ತುತದಲ್ಲಿ ಕೃಷ್ಣ ಕೊಡಬಹುದಾದ ನೆರವು, ಅವನ ಗೀತಾಬೋಧೆಯ ನೇರವೂ, ಸರಳವೂ ಮತ್ತು ಸುಲಭದಲ್ಲಿ ಅಳವಡಿಸಿಕೊಳ್ಳಲೂಬಹುದಾದ ನಿರ್ಮಮಕಾರತ್ವದ ಗುಣ.

ಆಧುನಿಕ ಮನಶಾಸ್ತ್ರಜ್ಞನೊಬ್ಬ ಚಿಕಿತ್ಸೆಗೆಂದು ತನ್ನಲ್ಲಿಗೆ ಬರುವ ಖಿನ್ನತೆಯಿಂದ ಬಳಲುತ್ತಿರುವ ರೋಗಿಯನ್ನು ಹೇಗೆ ಸಂತೈಸುತ್ತಾನೆಯೋ ಅಂಥದೇ ಭಾವಗುಣ ಶ್ರೀಕೃಷ್ಣನಲ್ಲಿದೆ. ದೂತನಾಗಿ ಬಂದಾಗ ವಿದುರನಮನೆಯಲ್ಲಿಯೇ ಉಳಿಯುವ ಕೃಷ್ಣ, ಬಾಲ್ಯಸಖ ಮಕರಂದ ಮತ್ತು ಕುಚೇಲರ ಪ್ರಸಂಗಗಳಲ್ಲಿ ವರ್ತಿಸುವ ರೀತಿಯೇ ಸದಾ ಸ್ಮರಣೆಯಲ್ಲಿ ಉಳಿಯುವಂಥದು. ಖಿನ್ನತೆಗಿರುವ ಏಕೈಕ ದಿವ್ಯೌಷಧವಾದ ಆಪ್ತಸಂಭಾಷಣೆಯನ್ನು ಕೈಗೊಳ್ಳುತ್ತಿದ್ದ ಕೃಷ್ಣ ಕರ್ಣನನ್ನೂ, ಕುಂತಿಯನ್ನೂ ಒಂದೇ ರೀತಿಯ ಮಾತಿನ ಅಸ್ತ್ರದಿಂದ ಬಂಧಿಸುತ್ತಾನೆ. ಸ್ವಂತ ತಂಗಿ ಸುಭದ್ರೆಗಿಂತಲೂ ನಂಬಿದ ದ್ರೌಪದಿಯನ್ನೇ ಸದಾ ಕಾಯುತ್ತಾನೆ. ಯಾರು ತಮಗೆ ಬೇರಾರೂ ಇಲ್ಲವೆಂದು ಭಾವಿಸಿ ಕೃಷ್ಣನಲ್ಲಿ ಮೊರೆಹೋಗುತ್ತಾರೋ ಅವರೆಲ್ಲರಿಗೆ ಕೃಷ್ಣ ಸಹಾಯ ಹಸ್ತ ಚಾಚುತ್ತಾನೆ, ಮುಕ್ತಿಯ ಹಾದಿಯನ್ನೂ ದಯಪಾಲಿಸುತ್ತಾನೆ. ಮನುಷ್ಯನ ಮೂಲ ವಾಂಛೆಯನ್ನೇ ಉದ್ದೀಪಿಸಿ ಅದನ್ನೇ ಚಿಕಿತ್ಸೆಯ ಸೌಲಭ್ಯವನ್ನಾಗಿಸಿಕೊಳ್ಳುವ ಕೃಷ್ಣ ಪೌರಾಣಿಕ ಪಾತ್ರವಾಗುವುದಕ್ಕಿಂತಲೂ ಮನೋಚಿಕಿತ್ಸಕ ವೈದ್ಯ ನಾರಾಯಣನಂತೆಯೇ ಆಪತ್ತಿಗೆ ಒದಗುತ್ತಾನೆ, ನಿಷ್ಕಾಮ ಭಕ್ತಿಗೆ ಒಲಿಯುತ್ತಾನೆ.

ಎಲ್ಲ ಸಮಸ್ಯೆಗಳ ಮೂಲ ಸ್ವತಃ ಆ ವ್ಯಕ್ತಿಯೇ ಆಗಿರುತ್ತಾನೆಂಬ ಸತ್ಯವನ್ನು ಮರೆಮಾಚದೇ ಶೃತಪಡಿಸುವ ಅವನು ಯಾರು ಯಾವುದರಲ್ಲಿ ನಂಬಿಕೆ ಇಟ್ಟಲ್ಲಿ ಹೆಚ್ಚು ಲಾಭ ಬರಬಹುದೆಂದು ಊಹಿಸುತ್ತಾನೆ. ಮನುಷ್ಯ ವ್ಯಾಪಾರಗಳನ್ನೇ ವಿಶ್ಲೇಷಿಸುವ ಅಪಾರ ಅನುಭವ ಅವನ ಜೊತೆಗಿರುವುದರಿಂದ ಅವನ ಊಹೆಗಳೇ ಸತ್ಯವಾಗಿ ಹೊರಹೊಮ್ಮಿ ಅವನೇ ಸತ್ಯವಾಗಿ ಉಳಿದುದೆಲ್ಲ ಮಿಥ್ಯವಾಗಿರುವ ಹಲವು ನಿದರ್ಶನಗಳನ್ನು ಕಾಣಬಹುದು.

ಬದುಕಲು ರಾಜಿ ಮುಖ್ಯವಾದರೂ ಎಲ್ಲರನ್ನೂ, ಎಲ್ಲವನ್ನೂ ಎಲ್ಲ ಕಾಲದಲ್ಲಿಯೂ ತೃಪ್ತಿಗೊಳಿಸಿಕೊಂಡಿರಲು ಅಸಾಧ್ಯವಾಗಿರುವುದರಿಂದಲೇ, ಕೆಲವು ಸಂದರ್ಭಗಳಲ್ಲಿ ಕೆಲವರೊಂದಿಗೆ ದ್ವೇಷ, ಮನಸ್ತಾಪಗಳು ಅನಿವಾರ್ಯ ಆಗಿಯೇ ಆಗುತ್ತದೆಂಬುದನ್ನೂ ಅವನು ವಿವರಿಸಿ ಹೇಳಬಲ್ಲ. ಆತ್ಮ ಸಂಭಾಷಣೆಯ ಪರಮಸ್ಥಿಯಲ್ಲಿ ಖಿನ್ನತೆಯೆಂಬುದೂ ಬದುಕನ್ನೆದುರಿಸಲು ಆ ವ್ಯಕ್ತಿ ಬಳಸಿದ ಮತ್ತೊಂದು ಸಾಧನವೆಂದು ಸ್ವತಃ ಆ ವ್ಯಕ್ತಿಗೇ ಮನದಟ್ಟು ಮಾಡಿಕೊಡುವ ಅವನು, ಈ ಸೈಕೋ ಥೆರಪಿಯ ಕಟ್ಟ ಕಡೆಯ ಹಂತದಲ್ಲಿ ಜಾಗೃತಗೊಳ್ಳುವ ಆತ್ಮವಿಶ್ವಾಸವನ್ನು ಉಛ್ರಾಯ ಸ್ಥಿತಿಗೆ ತಂದು ಬಿಟ್ಟುಬಿಡುತ್ತಾನೆ. ಮತ್ತು ಹೀಗೆ ಆತ್ಮ ವಿಶ್ವಾಸವನ್ನು ರೀಛಾರ್ಜ್ ಮಾಡಿಕೊಂಡ ವ್ಯಕ್ತಿ ಸಹಜವಾಗಿ ಸೋಲಿನ ಭಯದಿಂದ ಹೊರ ಬರುತ್ತಾನೆ ಮತ್ತು ತನ್ನ ಹೋರಾಟದಲ್ಲಿ ಮಾಡು ಇಲ್ಲವೇ ಮಡಿ ಎನ್ನುವ ಸೂತ್ರಕ್ಕೆ ಒಳಪಡುತ್ತಾನೆ.

ದುರ್ಯೋಧನನೊಡನೆ ಕೃಷ್ಣ ದೂತನಾಗಿ ವ್ಯವಹರಿಸಿದ್ದನ್ನು, ಕಂಸನನ್ನು ವಧಿಸಿದೊಡನೆ ಉಗ್ರಸೇನನನ್ನೇ ರಾಜನಾಗಿ ಮುಂದುವರೆಸಿದ್ದನ್ನು, ಯಾದವರ ಕುಲ ಕಸುಬು ಹೈನುಗಾರಿಕೆಯನ್ನು ವಿಸ್ತರಿಸಿದ್ದನ್ನು, ದ್ವಾರಕೆಯನ್ನು ನಿರ್ಮಿಸಿ ಶತ್ರುಗಳಿಂದ ದೂರ ಉಳಿದದ್ದನ್ನು, ಈ ಮನೋ ಬಲದ ಹಿಂದಿರುವ ಅನಿವಾರ್ಯ ಸೂತ್ರಗಳನ್ನೂ ನಾವು ಅರಿಯಬೇಕು. ಸೋಲೆಂಬುದು ಖಂಡಿತವಾದಾಗ ಸದ್ಯಕ್ಕೆ ತಪ್ಪಿಸಿಕೊಂಡು ಹೋಗುವುದು ನಂತರ ಸಂದರ್ಭ ಬಂದಾಗ ದಂಡೆತ್ತಿ ಬಂದು ಶತ್ರು ದಮನ ಮಾಡುವುದೂ ಕೃಷ್ಣನ ಕಲೆ. ಅದು ನಮೊಗೊಲಿದರೆ ನಾವೆಲ್ಲ ವಿಪರೀತಮತಿಯ ಚತುರ ರಾಯಭೇರಿಗಳಾದೇವು, ರಾಜ ನಿರ್ಮಾತೃಗಳೂ ಆದೇವು.

ಶಿಷ್ಟ ರಕ್ಷಣೆ, ದುಷ್ಟ ನಿಗ್ರಹಣೆಯೇ ತನ್ನ ಗುರಿಯೆನ್ನುವ, ಧರ್ಮಸಂಸ್ಥಾಪನೆಯೇ ತನ್ನ ಉದ್ದೇಶವೆನ್ನುವ ಕೃಷ್ಣ ಯುಗಯುಗಗಳಲ್ಲೂ ಈ ಅಭಯ ವಾಕ್ಯ ಪರಿಪಾಲನೆಗೆ ಬಳಸುವುದೆಂದರೆ ತನ್ನನ್ನು ನಂಬಿದವರ ಮನಃ ಪ್ರಚೋದನೆ. ಸಾಧು, ಸಜ್ಜನರ ರಕ್ಷಣೆಗೆ ಅವನು ಅವತರಿಸುತ್ತಾನೆಂದರೆ, ಈ ಲೋಕದ ವ್ಯವಹಾರದಲ್ಲಿ ದುರ್ಜನರ ಪಾಲೂ ಮುಂದುವರೆಯುತ್ತಲೇ ಇರಬೇಕು. ಇಲ್ಲವಾದರೆ ಅವನು ಅವತರಿಸುವ ಪ್ರಮೇಯವೇ ಬರುವುದಿಲ್ಲವಲ್ಲ! ಇಂಥ ಸಂದರ್ಭದಲ್ಲಿ ನಮಗುಳಿಯುವ ದಾರಿಯೆಂದರೆ ಒಂದೋ ಸಜ್ಜನರಾಗಿ ಅವನ ನಾಮಸ್ಮರಣೆಯಲ್ಲಿ ಅವನ ಹಾದಿ ಕಾಯುವುದು ಅಥವ ನಮ್ಮ ದುಷ್ಟತನವನ್ನು ಪ್ರದರ್ಶಿಸುತ್ತ ಅವನು ನಮ್ಮ ಸಂಹಾರಕ್ಕೆಂದು ಅವತರಿಸುವ ದಿನಗಳಿಗೆ ಕಾಯುವುದು.

ಈ ಆಪ್ತ ಸಲಹಾ ಕೇಂದ್ರ ಕೇವಲ ಮೊರೆಹೋದವರಿಗಷ್ಟೇ ಅಲ್ಲ, ಮದ ಹರಿಯದೇ ನಿಂತ ದುರ್ಯೋಧನರಿಗೂ ಸದಾ ತನ್ನ ಬಾಗಿಲು ತೆಗೆದಿರಿಸಿದೆ. ಈ ಕೇಂದ್ರದ ಮಹಾಪ್ರಬಂಧಕರ ಅಪ್ಪಣೆ ಚೀಟಿ ಸಿಗುವುದಕ್ಕೆ ಮಾತ್ರ ನಿರಂತರ ಕಾಯುವಿಕೆಯ ಕುಚೇಲ ನಿಷ್ಠೆ ಇರಬೇಕು ಅಥವ ಅವಮಾನದ ಭಯ, ಸಂಶಯದ ಜೊತೆಗೇ ಅಂಟಿಸಿಕೊಂಡ ಲೋಭ, ಬಾಹುಬಲದ ಮೇಲಿನ ಅತೀವ ನಂಬಿಕೆಗಳ ಮೇಲೇ ನಿಂತು, ವಿಜೃಂಭಿಸುತ್ತಲೇ ಎದುರಿನವರು ಕರೆದರೆಂದು ದ್ವಂದ್ವ ಯುದ್ಧಕ್ಕೆ ಧುಮುಕುವ ಜರಾಸಂಧನ, ಕಂಸನ ಮನಃಸ್ಥಿತಿ ನಮಗಿರಬೇಕು. ಇಬ್ಬರನ್ನೂ ಶ್ರೀಕೃಷ್ಣ ಸಲಹುತ್ತಾನೆ, ಸಂಭಾಳಿಸುತ್ತಾನೆ. ಪಾತ್ರವನ್ನು ಒಪ್ಪಿಕೊಳ್ಳುವ ಎದೆಗಾರಿಕೆ ನಮಗೆ ಬೇಕು ಅಷ್ಟೆ!

ಯುದ್ಧ ಭಯ

ಚರಿತ್ರೆಯುದ್ದಕ್ಕೂ ಯುದ್ಧಗಳು ನಡೆಯುತ್ತಲೇ ಬಂದಿವೆ. ಅದರಲ್ಲೂ ಧರ್ಮದ ನೆವದಲ್ಲಿ ನಡೆದ ಯುದ್ಧಗಳಂತೂ ಹೆಚ್ಚು. ಹಾಗೇ ಸಾಮ್ರಾಜ್ಯ ವಿಸ್ತರಣೆ, ಲೂಟಿ-ಕೊಳ್ಳೆಗಳಿಗಾಗಿಯೇ ನಡೆದ ಯುದ್ಧಗಳೂ ಸಾಕಷ್ಟಿವೆ. ಯುದ್ಧಾನಂತರ ಯುದ್ಧಪರಿಣಾಮಗಳಿಂದ ಉಂಟಾದ ರೋಗ-ರುಜಿನಗಳು, ಆರ್ಥಿಕ ಸಂಕಷ್ಟಗಳೂ, ತತ್ತರಿಸಿದ ಜನಸಾಮಾನ್ಯರ ಬದುಕುಗಳೂ ಯುದ್ಧ ಪಿಪಾಸುಗಳ ಬುದ್ಧಿಗೆ ಸಾಣೆ ಹಿಡಿಯದ ಕಾರಣ ಈ ಆಧುನಿಕ ಯುಗದಲ್ಲೂ ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಈಗಲೂ ಯುದ್ಧಗಳು ನಡೆಯುತ್ತಲೇ ಇರುವುದು ಮನುಕುಲಕ್ಕೇ ಹಿಡಿದ ಗ್ರಹಣವಾಗಿದೆ.

ಯುದ್ಧವೆಂದರೆ ನರಮೇಧ. ಸಂಪತ್ತಿನ ವಿನಾಕಾರಣ ನಾಶ. ಅಲೆಕ್ಸಾಂಡರ್, ಅಶೋಕನಂಥ ಯುದ್ಧಪಿಪಾಸುಗಳು ಯುದ್ಧಾನಂತರ ಪಶ್ಚಾತ್ತಾಪ ಪಟ್ಟದ್ದು ಇತಿಹಾಸಕ್ಕೆ ಸೇರಿತೇ ವಿನಾ ಅದು ಪಾಠವಾಗಲೇ ಇಲ್ಲ. ಬರೀ ಸೈನಿಕರ ನಡುವೆ ನಡೆಯುತ್ತಿದ್ದ ಸಾಮ್ರಾಜ್ಯಶಾಹೀ ಯುದ್ಧಗಳಿಗಿಂತ ಆಧುನಿಕ ಯುಗದ ಯುದ್ಧ ಪರಿಣಾಮಗಳು ಅಪಾಯಕಾರಿಯಾಗಿವೆ. ಹಿಂದೆಲ್ಲ ಯುದ್ಧವೆಂದರೆ ಬರಿಯ ಸೈನಿಕರ, ರಾಜ ಸಾಮಂತರುಗಳ ಸೋಲು-ಗೆಲುವಿನಲ್ಲಿ ಮುಗಿಯುತ್ತಿದ್ದವು. ಸಾಮಾನ್ಯ ಜನರಿಗೆ ತೆರಿಗೆಯ ಹೊರೆ ಬಿಟ್ಟರೆ ಉಳಿದಂತೆ ಜನಜೀವನದ ಮೇಲೆ ಪರಿಣಾಮ ಇರುತ್ತಿರಲಿಲ್ಲ. ಆದರೆ ಆಧುನಿಕ ಯುಗದ ಯುದ್ಧಗಳಲ್ಲಿ ಬಳಸಲಾಗುತ್ತಿರುವ ಆಪಾಯಕಾರೀ ಪರಮಾಣು ಶಸ್ತ್ರಾಸ್ತ್ರಗಳು ಜನಸಾಮಾನ್ಯರ ಬದುಕನ್ನು ಮೂರಾಬಟ್ಟೆಯಾಗಿಸುವುದಷ್ಟೇ ಅಲ್ಲದೆ ನೆಮ್ಮದಿಯನ್ನು ನಾಶಮಾಡಿ ಹತಾಶ ಸ್ಥಿತಿಗೆ ಒಯ್ಯುತ್ತವೆ. ಧರ್ಮದ ಹೆಸರಲ್ಲಿ ನಡೆಯುತ್ತಲೇ ಇರುವ ದಾಳಿಗಳಂತೂ ಮನುಷ್ಯನ ಕ್ರೂರ ಮನಸ್ಸಿನ ಪ್ರದರ್ಶನದಂತಿದೆ. ಹಿಂದೆಲ್ಲ ಯುದ್ಧಗಳಲ್ಲೂ ನೀತಿ,ನಿಯಮ, ಕಟ್ಟುಪಾಡುಗಳಿದ್ದುವಂತೆ. ಅವನ್ನು ಮೀರುವ ಅನೈತಿಕ ನಡವಳಿಕೆ ಹಿಂದಿನವರಿಗೆ ಇರಲಿಲ್ಲ. ಆದರೆ ಆಧುನಿಕರಾದಷ್ಟೂ ಮೋಸಕಪಟಗಳಿಗೂ ಆಧುನಿಕತೆಯ ಮೊಹರು ಬೀಳುತ್ತಿದೆ. ಕಟ್ಟುಪಾಡುಗಳನ್ನು ಮೀರಿ ವ್ಯವಸ್ಥೆಗೆ ಸಡ್ಡು ಹೊಡೆಯುವುದೇ ಗೆಲುವಿನ ಮಜಲಾಗುತ್ತಿದೆ.

ಇತ್ತೀಚೆಗಂತೂ ಧರ್ಮಾಂಧತೆ ಹೆಚ್ಚಿ ಮತಮೋಹವನ್ನು ಜಾಗೃತಗೊಳಿಸಿ ಶ್ರೇಷ್ಟತೆಯ ಭ್ರಮೆ ಹುಟ್ಟಿಸಿ ಅನ್ಯರನ್ನು ಕೀಳಾಗಿ ಕಾಣಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ವ್ಯಕ್ತಿಯ ಇಂಥ ದುಷ್ಟತನವನ್ನು ನಿಗ್ರಹಿಸಬೇಕಾದ ವ್ಯವಸ್ಥೆಯನ್ನೇ ಕತ್ತಲಿನಲ್ಲಿಟ್ಟಿರುವ ಧರ್ಮ ಮತ್ತು ಧರ್ಮಾಧಾರಿತ ಸೀಮಿತ ಚೌಕಟ್ಟಿನ ಧೋರಣೆಗಳು ಆ ವ್ಯಕ್ತಿಯನ್ನು ಬೆಂಬಲಿಸುತ್ತವೆ. ಧರ್ಮ ಪ್ರಚಾರ ಮತ್ತು ವಿಸ್ತರಣೆಯ ಹೆಸರಲ್ಲಿ ನಡೆಯುವ ಪುಂಡಾಟಿಕೆಗಳನ್ನು ಸತ್ಕ್ರಿಯೆ ಎಂದು ಬಿಂಬಿಸುವುದರಿಂದಾಗಿ ಜನಸಾಮಾನ್ಯರ ಮೇಲೆ ಅದರ ಪರಿಣಾಮ ಘೋರವಾಗುತ್ತದೆ. ವ್ಯಕ್ತಿಯೊಬ್ಬನ ನಂಬಿಕೆಗಳನ್ನು, ಆಚರಣೆಗಳನ್ನು ಪ್ರಶ್ನಿಸುವ ಮತ್ತು ಅಧಿಕಾರಯುತವಾಗಿ ಹೀಗೇ ಮಾಡಿ ಎಂದು ಆದೇಶಿಸುವ ಮೂಲಕ ಅವನ ಮೂಲಭೂತ ಹಕ್ಕುಗಳನ್ನೇ ಕಸಿದುಕೊಂಡಂತಾಗುತ್ತದೆ. ಧರ್ಮ ನೆಲೆಯಲ್ಲಿ ನಡೆಯುವ ಯುದ್ಧ ಮತ್ತು ದಂಗೆಗಳು ಹಾಗೇ ಪುಂಡಾಟಿಕೆಗಳು ಅತ್ಯಂತ ಅಮಾನವೀಯವೂ ಕ್ರೂರವೂ ಆಗಿರುತ್ತವೆಂದು ವಿವರಿಸಿ ಹೇಳಬೇಕಿಲ್ಲ.

ಧರ್ಮದ ನೆಲೆಗಟ್ಟಿನ ಹಾಗೆಯೇ ಜನಾಂಗೀಯ ನೆಲೆಗಳ ಆದಾರದ ಮೇಲೆ ನಡೆಯುವ ಹಲ್ಲೆ ಮತ್ತು ಗಲಭೆಗಳೂ ಜನಾಂಗೀಯ ವಾದಿಗಳ ಅಹಂಕಾರ ಮತ್ತು ಅವರ ಶ್ರೇಷ್ಠತೆಯ ಪರಿಕಲ್ಪನೆಯನ್ನೂ ಆಧರಿಸಿರುತ್ತವೆ. ಬಿಳಿಯರು ಕರಿಯರ ಮೇಲೆ ನಡೆಸುತ್ತಿರುವ ದುರಾಚಾರ, ಒಂದು ದೇಶದಲ್ಲಿ ತಲೆತಲಾಂತರದಿಂದ ನೆಲೆಸಿರುವವರನ್ನು ಅವರ ಮೂಲ ನೆಲೆಯ ಕಾರಣದಿಂದಾಗಿ ವಿದೇಶಿಯರಂತೆ ಕಾಣುವುದೂ ಹೆಚ್ಚಾಗುತ್ತಿದೆ. ಹಿಟ್ಲರ್ ಮತ್ತು ಮುಸಲೋನಿ ಇನ್ನೂ ಜೀವಂತವಾಗಿರುವುದು ನಮ್ಮೆಲ್ಲರ ದುರದೃಷ್ಟ.

ಮೂಲತಃ ಯುದ್ಧವೆನ್ನುವುದೇ ಮನುಕುಲದ ವಿರೋಧಿ. ಜೀವಪಿಪಾಸುಗಳ ಅಂತಿಮ ಆಯ್ಕೆ. ಅದು ಯಾವತ್ತೂ ಸಹಿಸಲಸಾಧ್ಯವಾದ ಅತ್ಯಂತ ಕ್ರೂರ ಕೆಲಸವೆಂಬುದನ್ನು ಮತ್ತೆ ಮತ್ತೆ ಒತ್ತಿ ಹೇಳಬೇಕಾದ ಅಗತ್ಯತೆ ಇಲ್ಲ. ಪರಸ್ಪರ ವಿದ್ವೇಷ, ಪೂರ್ವಾಗ್ರಹ ಪೀಡಿತ ನಂಬಿಕೆ ಎಂಬ ಭ್ರಾಂತುಗಳು ಈ ಅಮಾನವೀಯ ಕೃತ್ಯದ ಹಿಂದಿರುವ ಶಕ್ತಿಗಳು.
ಬುದ್ಧನ ಬದ್ಧತೆ, ಗಾಂಧೀಜಿಯ ಅಹಿಂಸಾತತ್ವ ಯಾವಕಾಲಕ್ಕೂ ಇಂಥ ಯುದ್ಧಗಳ ಪಾಶಗಳಿಂದ ನಮ್ಮನ್ನು ಬಿಡಿಸಿ ತರಬಲ್ಲ ಅಸ್ತ್ರಗಳು. ಸೋದರತ್ವ ಮತ್ತು ಸ್ನೇಹ ಸಂಬಂಧಗಳು ಮಾತ್ರ ಜಗತ್ತಿನ ಯುದ್ಧಗಳನ್ನು ನಿವಾರಿಸಬಲ್ಲವು. ಬುದ್ಧ ಮತ್ತು ಗಾಂಧಿ ಆ ಕಾರಣಕ್ಕೇ ಸರ್ವಕಾಲಿಕ ನಾಯಕರಾಗುತ್ತಾರೆ. ಶಾಂತಿ ಮಂತ್ರದ ಹರಿಕಾರರಾಗಿ ಗೋಚರಿಸುತ್ತಾರೆ.

ಬುಧವಾರ, ಜೂನ್ 10, 2009

ದೆಸಿತನದ ಸೊಗಡಿಗೆ ಆಧುನಿಕತೆಯ ಬಡಿವಾರ

ದೇಸೀತನದ ಘಮಲಿಗೆ ಆಧುನಿಕತೆಯ ಬಡಿವಾರ

ಚ. ಹ. ರಘುನಾಥರ ಬಿಡಿ ಬರಹಗಳನ್ನು ಓದಿದಾಗೆಲ್ಲಾ ಅವರೊಬ್ಬ ಸಾಹಿತ್ಯದ ವಿನಮ್ರ ವಿದ್ಯಾರ್ಥಿಯೆಂದು ಮತ್ತೆ ಮತ್ತೆ ಮನದಟ್ಟಾಗುತ್ತದೆ. ಸೂಕ್ಷ್ಮ ಮನಸ್ಸಿನ ಅಂತರ್ಮುಖೀ ವ್ಯಕ್ತಿತ್ವವೊಂದು ಸುತ್ತಣ ವಿವರಗಳನ್ನು, ಘಟನೆಗಳನ್ನು ಗಮನಿಸಿದ, ಗ್ರಹಿಸಿದ ಮತ್ತವುಗಳನ್ನು ಅತಿ ವಿಶಿಷ್ಟತೆಯಿಂದ ಬರಹಗಳನ್ನಾಗಿಸುವ ಕಲೆ ಅವರಿಗೆ ಸಿದ್ಧಿಸಿದೆ. ಈಗಾಗಲೇ ಕವಿಯಾಗಿ, ಕಥೆಗಾರನಾಗಿ ಹೊಸ ಪೀಳಿಗೆಯ ಲೇಖಕರ ನಡುವೆ ತಮ್ಮದೇ ಛಾಪನ್ನಿರಿಸಿಕೊಂಡಿರುವ ರಘುನಾಥರ ಪ್ರಬಂಧ ಸಂಕಲನ “ ರಾಗಿಮುದ್ದೆ” ದೇಸೀತನದ ಘಮಲನ್ನು ನೆನಪಿಸುತ್ತಲೇ ಆಧುನಿಕ ಬಡಿವಾರಗಳನ್ನು ಅಣಕಿಸುತ್ತದೆ, ವಿಮರ್ಶಿಸುತ್ತದೆ.

ಆತ್ಮೀಯತೆಯಿಂದ ನೇರವಾಗಿ ಸಹಜವಾಗಿ ಸಂಕೋಚಗಳಿಲ್ಲದೆ ತಮಗನಿಸಿದ್ದನ್ನು ದಿಟವಾಗಿ ಹೇಳುವುದು ಈ ಎಲ್ಲಾ ಪ್ರಬಂಧಗಳ ಮೂಲ ಗುಣ. ಗ್ರಾಮೀಣ ಬದುಕನ್ನು ಚಿತ್ರಿಸುತ್ತಲೇ ನಗರ ಜೀವನದ ತಲ್ಲಣಗಳನ್ನು ತೆರೆದಿಡುವ ರಘುನಾಥರ ಶೈಲಿ ಪ್ರಿಯವಾಗುತ್ತದೆ. ಸೂಕ್ಷ್ಮ ಮನಸ್ಸೊಂದು ಬದುಕನ್ನು ಅರಿಯುವ ಪ್ರಯತ್ನ ಇಲ್ಲಿನ ಪ್ರಬಂಧಗಳಲ್ಲಿ ಢಾಳಾಗಿದೆ. ಲೇಖಕನ ಸ್ವಂತ ಅನುಭವದ ಸ್ಪರ್ಶ ಈರೀತಿಯ ಬರಹಗಳಲ್ಲಿಲ್ಲದೇ ಹೋದಲ್ಲಿ ಅವು ಹೈಸ್ಕೂಲಿನ ಚರ್ಚಾಸ್ಪರ್ಧೆಯ ಭಾಷಣಗಳಾಗಿಬಿಡುತ್ತವೆ ಎನ್ನುವ ಅರಿವು ಅವರಿಗೆ ಗೊತ್ತಿದೆ. ಹಾಗಾಗಿಯೆ “ಅಧರಂ ಮಧುರಂ” ನಂತಹ ಕಾಮನ್ ಹ್ಯಾಂಗೋವರ್‌ನಲ್ಲಿ ಮಿಡಿಯುತ್ತಲೇ ಅಮೆಝಾನ್ ಕಾಡುಗಳಲ್ಲೂ ಹಲ್ಲು ತೊಳೆಸಿಕೊಳ್ಳಬಲ್ಲರು! ಮುಂಜಾನೆಯ “ಯಾತ್ರೆ” ಯ ಚಿತ್ರಗಳನ್ನು ಕಣ್ಮುಂದೆ ನಿಲ್ಲಿಸಬಲ್ಲಂತೆಯೇ ಚಂದಿರನನ್ನು ಕಂಬ ಕಂಬಗಳಿಗೆ ನೇಣು ಹಾಕಬಲ್ಲರು. ಜಾತ್ರೆಯ ಕಾಮನಬಿಲ್ಲು ಬಿಡಿಸಿಡುತ್ತಲೇ ಗುಬ್ಬಿಗಳಿಗೆ ಮನೆಯನ್ನೂ ಕಟ್ಟಿಕೊಡಬಲ್ಲವರು-ಚ.ಹ.ರಘುನಾಧ.

ಹೊಸ ಪೀಳಿಗೆಯ ಲೇಖಕರಲ್ಲಿ ಕವಿಗಳ ಸಂಖ್ಯೆ ವಿಫುಲವಾಗಿದೆ. ಕಥೆಗಾರರಂತೆ ಕಾದಂಬರಿಕಾರರ ಲೆಕ್ಕವೂ ಸಿಗುತ್ತವೆ. ಆದರೆ ಪ್ರಬಂಧ ನೇಯುವುದು ಸುಲಭದ ಮಾತಲ್ಲ ಎಂದು ಗೊತ್ತಿರುವುದರಿಂದಲೋ ಏನೋ ಈ ಕೆಲಸಕ್ಕೆ ಕೈ ಹಾಕಿದವರ ಸಂಖ್ಯೆ ತೀರ ಕಡಿಮೆ.

ಪ್ರಬಂಧವು ಸುಲಲಿತವಾಗುವುದು ಲಾಲಿತ್ಯದಿಂದ. ಕಾವ್ಯಗುಣದ ಜೊತೆಗೇ ಸ್ವಾರಸ್ಯಕರ ಅನುಭವಗಳನ್ನು ಮತ್ತು ಸೃಜನಶೀಲತೆಗಳನ್ನು ಅವು ಒಳಗೊಂಡಿರಬೇಕು. ಶಬ್ದಾರ್ಥಗಳ ಮೇಲಾಟದ ಜೊತೆಗೆ ಚಿಂತನಶೀಲತೆಯ ಸ್ಪರ್ಶವೂ ಪ್ರಬಂಧಕ್ಕಿರಬೇಕು. ಸೀಮಿತ ಚೌಕಟ್ಟಿನಲ್ಲೇ ವಸ್ತುವೊಂದನ್ನು ಆಕರ್ಷಕವಾಗಿ ಹೇಳುತ್ತಲೇ ಸಾಮಾಜಿಕ, ಸಾಂಸ್ಕೃತಿಕ ಪಲ್ಲಟಗಳನ್ನೂ ಅದು ಬಿಂಬಿಸಬೇಕು. ವಿಡಂಬನೆ ಮೂಲ ಉದ್ದೇಶವಲ್ಲದಿದ್ದರೂ ವಿಮರ್ಶಾತ್ಮಕ ನೆಲೆಯಲ್ಲಿ ವಸ್ತುವನ್ನ ಅನಾವರಣಗೊಳಿಸಿರಬೇಕು!......... ಪ್ರಬಂಧಗಳ ಮಾದರಿಗಳನ್ನು ಕುರಿತು ನೆನಪಿಸಿಕೊಂಡರೆ ಈ ಕಾಲದಲ್ಲಿ ನಮಗೆ ಅನುಭವಗಳ ಕೊರತೆಯಿದೆಯೇನೋ ಅನ್ನಿಸುತ್ತದೆ. ನಗರ ಜೀವನದ ಪಡಿಪಾಟಲುಗಳು ಸಂದರ್ಭವನ್ನ ಸಹಜವಾಗಿ ಗ್ರಹಿಸುವುದನ್ನ ನಿಯಂತ್ರಿಸುತ್ತಿದೆಯೇನೋ ಎಂಬ ಅನುಮಾನಗಳೂ ಕಾಡುತ್ತವೆ.

ಮೂರ್ತಿರಾವ್, ಗೊರೂರು ಮುಂತಾದವರು ಸಹಜವಾಗಿ ಸಮೃದ್ಧವಾಗಿ ಬೆಳೆದ ಪ್ರಬಂಧ ಪ್ರಕಾರವನ್ನು ನೆನಪಿಸಿಕೊಂಡರೆ ಅದು ವಿನಮ್ರತೆಯಿಲ್ಲದವರಿಗೆ ಒಲಿಯದ ಕಬ್ಬಿಣದ ಕಡಲೆ ಎಂದೇ ಭಾಸವಾಗುತ್ತದೆ. ಆದರೆ ರಘುನಾಥ ಸಮರ್ಥವಾಗಿ ಅದನ್ನು ಎದುರಿಸಿ ಗೆದ್ದಿದ್ದಾರೆ. ಸಾಹಿತ್ಯ, ಚಲನಚಿತ್ರ, ಪ್ರಯಾಣ ಮುಂತಾದ ಆಸಕ್ತಿಗಳ ಮೂಲಕ ಮನುಷ್ಯ ಸಂಬಂಧಗಳ ರೀತಿಯನ್ನು ಅವುಗಳ ವಿಭಿನ್ನ ನೆಲೆಗಳನ್ನು ಅನ್ವೇಷಿಸುವ ಶೈಲಿ ಗುಣಗ್ರಾಹಿಯಾದುದೇ ಆಗಿದೆ. ತೀವ್ರತೆಯ ತುರೀಯಕ್ಕೇರದೇ ಅನುಭವದ ಪಾತಳಿಯಲ್ಲಿ ಸಣ್ಣ ಸಂಗತಿಗಳನ್ನು ವಿಶ್ಲೇಷಿಸುವ ರೀತಿ ಮೆಚ್ಚತಕ್ಕದ್ದೇ ಆಗಿದೆ.

ಸಂಕಲನದಲ್ಲಿರುವ ಒಂದು ಡಜನ್ ಪ್ರಬಂಧಗಳನ್ನು ಒಂದೇ ಬೀಸಿನಲ್ಲಿ ಓದಿದರೆ ಅವುಗಳ ಸ್ವಾರಸ್ಯ ಮನಸ್ಸಿಗಿಳಿಯುವುದಿಲ್ಲ. ಕವಿತೆಗಳನ್ನೋ, ಕಥೆಗಳನ್ನೋ ಒಂದು ಸ್ಥಿರವಾದ ಮಾನಸಿಕ ಸ್ಥಿತಿಯಲ್ಲಿ ಮಾತ್ರ ಓದಲು ಸಾಧ್ಯ. ಪೂರ್ವ ತಯಾರಿಯಿರದಿದ್ದರೆ ಪದ್ಯಗಳ ಓದು ಒಂದು ರೀತಿಯಲ್ಲಿ ಶಿಕ್ಷೆಯೇ!. ಈ ಅಪಾಯಗಳನ್ನು ಪ್ರಬಂಧಗಳು ಮೀರಿರುವುದರಿಂದ ಪ್ರಯಾಣದ ನಡುವೆಯೋ, ಊಟದ ವಿರಾಮದಲ್ಲಿಯೋ ಇವನ್ನು ಅಸ್ವಾದಿಸಲು ಸಾಧ್ಯ. ಆದರೆ ಒಂದು ಸಿಟ್ಟಿಂಗ್‌ನಲ್ಲಿ ಒಂದಕ್ಕಿಂತ ಹೆಚ್ಚು ಪ್ರಬಂಧಗಳನ್ನು ಓದಿದರೆ ಅವುಗಳಲ್ಲಿ ಅಡಗಿರುವ ವಿಡಂಬನೆಯ ಶೃತಿ ನಮಗೆ ನಿಲುಕುವುದಿಲ್ಲ. ಹಾಗೆಯೇ ಆ ಪ್ರಬಂಧಗಳ ಒಳ ಹೂರಣದ ರುಚಿಯೂ ಸಿದ್ಧಿಸುವುದಿಲ್ಲ.

ಫ಼ೀಚರು (ಸಾಂದರ್ಭಿಕ ಬರಹ), ಫ಼ಿಲ್ಲರು (ಲಹರಿ) ಮತ್ತು ಲಲಿತ ಪ್ರಬಂಧಗಳೆಂದು ಸಂಕಲನದಲ್ಲಿರುವ ಬರಹಗಳನ್ನು ವಿಭಾಗಿಸಬಹುದಾದರೂ, ಮೂಲತಃ ಈ ಮೂರು ಪ್ರಭೇದಗಳ ಗುಣ ಧರ್ಮ ಒಂದೇ ಆಗಿರುವುದರಿಂದ ಇವನ್ನೆಲ್ಲಾ ಪ್ರಬಂಧಗಳೆಂದು ಕರೆಯಲು ಅಡ್ಡಿಪಡಿಸುವುದಿಲ್ಲ. ರಾಗಿಮುದ್ದೆ, ಹಲ್ಲು ತೊಳಿಸಿಕೊಳ್ಳುತ್ತಾ ಅಮೆಝಾನ್ ಕಾಡುಗಳಲ್ಲಿ, ನಾಯಿ ನೆರಳು, ಗುಬ್ಬಿಗಳಿಗೊಂದು ಮನೆಯಕಟ್ಟಿಕೊಟ್ಟೆವು ಲಲಿತ ಪ್ರಬಂಧಗಳಾದರೆ, ಅಧರಂ ಮಧುರಂ, ಸಂಪೂರ್ಣ ರಾಮಾಯಣ, ಅವಳು ಅಹಲ್ಯೆ-ಇವನು ನಹುಷ ಫ಼ೀಚರುಗಳು. ಉಳಿದೆಲ್ಲಾ ಬರಹಗಳು ಕವಿತೆಗಳಂತೆ ನಿಧಾನಕ್ಕೆ ಆವರಿಸುವ ತಮ್ಮೊಳಗೇ ಬೆಳಕನ್ನಿಟ್ಟುಕೊಂಡಿರುವ ನುಡಿ ಚಿತ್ರಗಳು. ಸುಲಲಿತ ಪ್ರಬಂಧಗಳಲ್ಲಿ ಕನ್ನಡದ ಹಿರಿಯ ಪ್ರಬಂಧಕಾರರ ನೆರಳುಗಳಿದ್ದರೆ ಫ಼ೀಚರುಗಳಲ್ಲಿ ಲೇಖಕರೊಳಗಿನ ಪತ್ರಕರ್ತ ಪ್ರತ್ಯಕ್ಷನಾಗುತ್ತಾನೆ. ಉಳಿದಂತೆ ನುಡಿ ಚಿತ್ರಗಳಲ್ಲಿ ರಘುನಾಥ್ ಗಮನ ಸೆಳೆಯುತ್ತಾರೆ.

“ರಾಗಿಮುದ್ದೆ” ದೇಸೀಧಾನ್ಯದ ಹಲವು ಮಗ್ಗಲುಗಳನ್ನು ಪರಿಚಯಿಸುತ್ತಲೇ ಹಳೆಯ ಮೈಸೂರುಪ್ರಾಂತದ ಆಹಾರ ಪದ್ಧತಿಯನ್ನು ವಿವರಿಸುವ ಸುಲಲಿತ ಪ್ರಬಂಧ. ಉಳ್ಳವರ ಮನೆಯ ಮಕ್ಕಳ ಜೇಬಲ್ಲಿ ವಿವಿಧ ತಿನಿಸಿದ್ದರೆ ಇಲ್ಲದವರ ಮನೆಯ ಮಕ್ಕಳಿಗೆ ಮುದ್ದೆಪಾತ್ರೆಯ ತಳದ “ಸೀಕು” ಚಾಕಲೇಟು! ಅನ್ನುತ್ತಲೇ “ರಾಗಿ ಲಕ್ಷ್ಮಣಯ್ಯ” ನವರನ್ನು ಪ್ರಾಸಂಗಿಕವಾಗಿ ನೆನೆಯುವುದು ಹಿತವೆನ್ನಿಸುತ್ತದೆ.

“ನಾಯಿನೆರಳು” ಲಘುಬರಹದ ಹಾಗೆ ಕಂಡರೂ ಅನುಭವವೊಂದರ ಪರಿಪಾಕ. ವಿಷಾದದ ತೀವ್ರತೆಯಲ್ಲಿ ಮುಕ್ತಾಯವಾಗುವ ಪ್ರಬಂಧ ಓದುಗನನ್ನು ಒಂದು ವಿಷಣ್ಣತೆಗೆ ದೂಡಿಬಿಡುತ್ತದೆ.

ರಾಮಾಯಣದ ಅಹಲ್ಯೆಯನ್ನು ಮಹಾಭಾರತ ನಹುಷನೊಂದಿಗೆ ಥಳಕುಹಾಕಿ ಹೊಸ ಪ್ರಮೇಯವೊಂದನ್ನು ಹಾಗೇ ಆ ಪಾತ್ರಗಳಿಗೆ ಇದುವರೆಗೂ ನಾವು ಒದಗಿಸಿದ “ಬೀಸ” ನ್ನು ಬೆಚ್ಚಿಬೀಳಿಸುವ ಹಾಗೆ ಬಿಕ್ಷೆಯ ಸ್ವರೂಪವನ್ನು ಹಿಡಿದಿಡುವ “ಅವಳು ಅಹಲ್ಯೆ-ಇವನು ನಹುಷ” ಪ್ರಬಂಧ ಸ್ವರೂಪ ಮೀರಿದ ಒಂದು ರೀತಿಯ ಗಪದ್ಯ.

“ಅಧರಂ ಮಧುರಂ” ಚುಂಬನದ ಮಹತ್ತನ್ನು ಕಾಮನ್ ಹ್ಯಾಂಗೋವರಿನಲ್ಲಿ ತೇಲಾಡಿಸುತ್ತಲೇ ಸಾಹಿತ್ಯ ಪರಂಪರೆಯ ಮೂಲಕ ಚಮಕಾಯಿಸುವ ರೀತಿ “ಫ಼ೀಚರ್”ನ ಮಿತಿಗೆ ನಿಂತುಬಿಡುವುದರಿಂದ ಪ್ರಬಂಧದ ಹರಿವು ಕಳಕೊಂಡ ಬರಿಯ ಲಹರಿಯಾಗಿದೆ.

“ಮನಸ್ಸಿನ ಸ್ಥಾವರ ಹಾಗೂ ಜಂಗಮ ಭಾವಗಳ ಬೆಸೆಯಲೊಂದು ಸೇತು ಬೇಕೆನಿಸುತ್ತದೆ” ಎಂದು ಕೊನೆಗೊಳ್ಳುವ “ಫ಼್ಲೈ ಓವರ್” ತನ್ನೊಡಲಲ್ಲಿ ಇಟ್ಟುಕೊಂಡಿರುವುದು ವಿಷಾದ ತೀವ್ರತೆಯನ್ನು. “ಬಡವರಿಗೆ ಎರಡು ನಿಮಿಷದ ಏರೋಪ್ಲೇನ್ ಪ್ರಯಾಣ” ಎನ್ನುವುದು “ಅತಿ” ಅನ್ನಿಸಿದರೂ ಆಧುನಿಕತೆಯ ಭೂತ-ಭವಿಷ್ಯಗಳನ್ನು ತನ್ನದೇ ರೀತಿಯಲ್ಲಿ ಓದುಗನಿಗೆ ದಾಟಿಸುವಲ್ಲಿ ಸಮರ್ಥವಾಗಿದೆ.

“ಮಳೆಯ ಮೂರು ಹನಿ” ಓದುಗನಲ್ಲಿ ಹೊಮ್ಮಿಸುವ ಮಾರ್ದನಿ ಹಲವುದಿನಗಳವರೆಗೂ ಕಾಡುವ ಸಮರ್ಥ ರೂಪಕ. ಕಥೆಯೋ ಕವಿತೆಯೋ ಲಲಿತ ಪ್ರಬಂಧವೋ ಈ ಎಲ್ಲವನ್ನೂ ಮೀರಿ ಓದುಗನಿಗೆ ಬೆರಗನ್ನು, ಬೆಳಗನ್ನು ಮೂರು ಬೇರೆ ಬೇರೆ ಹನಿಗಳಲ್ಲಿ ಎಸ್ಕಲೇಟ್ ಮಾಡಿಸುವ ಎಸ್ಕಲೇಟರ್.

ಸಂಕಲನದ ಸಹಜ ಪ್ರಬಂಧಗಳಲ್ಲೊಂದಾದ “ಹಲ್ಲು ತೊಳೆಸಿಕೊಳ್ಳುತ್ತಾ ಅಮೆಝಾನ್ ಕಾಡುಗಳಲ್ಲಿ” ಲೇಖಕರ ಸ್ವವಿವರಗಳನ್ನು ಹೆಕ್ಕಲು ಸಹಾಯ ಮಾಡುತ್ತದೆ. ಅನುಭವವನ್ನು ಬರಹವನ್ನಾಗಿಸಿದ ಅಭಿವ್ಯಕ್ತಿಯ ಶಕ್ತಿ ಇಲ್ಲಿ ಕೆಲಸ ಮಾಡಿದೆ.

“ಕಂಬ ಕಂಬಗಳಿಗೆ ಚಂದಿರನ ನೇಣು” ಮಳೆಯ ಮೂರುಹನಿ ರೀತಿಯದ್ದು. ಶಾಂತ ಮನಸ್ಥಿತಿಯಲ್ಲಿ ಮಾತ್ರ ಇದರ ಓದಿನ ರುಚಿ ದಕ್ಕೀತು. ಮುಂಜಾನೆಯ “ಯಾತ್ರೆ” ಯ ಚಿತ್ರಗಳು ಪಾಯಖಾನೆಯ ಪ್ರಸಂಗಗಳನ್ನು ಸ್ವಾರಸ್ಯವಾಗಿ ನಿರೂಪಿಸುತ್ತಲೇ ಲೇಖಕರ “ಬಯಲ” ಬಯಕೆಯನ್ನು ಹೊರಹೊಮ್ಮಿಸುತ್ತದೆ.

ಸಂಕಲನದ ಕಡೆಯ ಮೂರು ನಿಬಂಧಗಳು ಲೌಕಿಕ ಸತ್ಯವನ್ನು ಅನುಭವದ ಕಣ್ಣಲ್ಲಿ ಕಂಡ ದಾಖಲೆಗಳು. ಸ್ವಲ್ಪ ಅತಿಯೆನ್ನಿಸಿದರೂ ಉಳಿದವರಿಗಿಂತ “ನನ್ನ ಕಾಣ್ಕೆ” ಬೇರೆಯದು ಎಂದು ಈ ನಿಬಂಧಗಳು ಸೂಕ್ಷ್ಮ ವಾಗಿ ಮಿಡಿಯುತ್ತವೆ.

ಹೀಗೆ ವೈಯುಕ್ತಿಕ ಅನುಭವಗಳ ವಿವರಗಳನ್ನು ಈ ಪ್ರಬಂಧಗಳಲ್ಲಿ ಹಿಡಿದಿಡಲು ರಘುನಾಥ ಪ್ರಯತ್ನಿಸಿದ್ದಾರೆ. ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಅವರ ಅನುಭವಗಳು ಇಲ್ಲಿನ ಎಲ್ಲಾ ಪ್ರಬಂಧಗಳಿಗೆ ಖಚಿತತೆಯನ್ನು ಒದಗಿಸುವುದರ ಜೊತೆಗೆ ಸಾರ್ವತ್ರಿಕಗೊಳಿಸುವ ಗೆರೆಯಿಂದಲೂ ಬೇರ್ಪಡಿಸಿವೆ. ಇದು ಈ ಸಂಕಲನದ ಮಿತಿ ಮತ್ತು ಹೆಚ್ಚುಗಾರಿಗೆಯೂ ಆಗಿದೆ. ಭಾಷೆಯನ್ನು ಬಳಸಿರುವ ಕ್ರಮ, ವಾಕ್ಯ ರಚನಾ ವಿಧಾನ, ಅನೇಕ ಸಂಗತಿಗಳನ್ನು ಕುರಿತು ಹೇಳುತ್ತಲೇ ಅವೆಲ್ಲವನ್ನೂ ಏಕತ್ರಗೊಳಿಸಿ ಒಂದು ಕೇಂದ್ರಕ್ಕೆ ಒಗ್ಗಿಸುವ ರೀತಿ, ಮಧ್ಯೆ ಮಧ್ಯೆ ಆಧುನಿಕ ಕನ್ನಡ ಕಾವ್ಯದ ಅನಾಯಾಸ ಉದ್ಧರಣೆ ಪ್ರಬಂಧಗಳ ಅರ್ಥ ಸಾಧ್ಯತೆಯನು ವಿಸ್ತರಿಸಿದೆ.

ಈ ಲೇಖನ ವಿಮರ್ಶೆಯಲ್ಲ. ವಿಮರ್ಶೆಯಗುರಿ ಮತ್ತು ಅದರ ಆಶಯಗಳು ಕೃತಿಯೊಂದರ ಸೌಷ್ಟವತೆಯನ್ನು ಕರಾರುವಾಕ್ಕಾಗಿ ಅಳೆದು “ಇದಮಿತ್ತಂ” ಎಂದು ಕೊಡುವ ಅರ್ಹತಾಪತ್ರ. ಅಂತಹ ಅರ್ಹತೆಯನ್ನು ಈ ಸಂಕಲನ ಇಟ್ಟುಕೊಂಡಿದೆಯೋ ಇಲ್ಲವೋ ಆದರೆ ನಿತ್ಯ ಜಂಜಡದ ಸದ್ಯೋವರ್ತಮಾನದಲ್ಲಿ ನಮ್ಮೊಳಗಿದ್ದೂ ನಮ್ಮದಲ್ಲವಾಗಿದ್ದ ಅದೆಷ್ಟೋ ಸಂಗತಿಗಳಿಗೆ ಮರು ಹುಟ್ಟು ನೀಡಿ ಕ್ಷಣ ಕಾಲವಾದರೂ ನಮ್ಮೊಳಗಿನೊಂದಿಗೆ ಸಂಭಾಷಿಸಲು ಅವಕಾಶ ಮಾಡಿಕೊಡುತ್ತದೆ. ಅಂಥ ಅವಕಾಶ ನೀಡಿದ ಲೇಖಕನಿಗೆ ಅಭಿನಂದಿಸುವುದಷ್ಟೇ ಈ ಲೇಖನದ ಉದ್ದೇಶ.

ಭಾನುವಾರ, ಮಾರ್ಚ್ 15, 2009

ವಿಷಾದ

ಅಕಾರಣ ಹುಟ್ಟಿ ಬಿಡುವ ಈ ವಿಷಾದ
ಇರುವ ಸುಖ ಸವಲತ್ತುಗಳ ನಿರಾಕರಿಸಿ
ಶಬ್ದಾರ್ಥಗಳ ಮಿತಿಯ ಮೀರುವುದು

ಎದೆಯೊಳಗೆ ನವನೀತ ಕಡೆಯುತ್ತಲೇ
ಉತ್ತುಂಗಕ್ಕೇರಿದ ಕನಸನ್ನೊಡೆಯುವುದು
ಯಾವುದೋ ಮುರಳಿಯ ಕರೆಗೆ ಕಿವಿಗೊಡುವುದು

ಪೊಡಮಡುವೆ, ಹೇ, ವಿಷಾದವೆ
ಸುಡುವಗ್ನಿಗೆ ಉದಕವಾಗುವ ನಿನ್ನ ನೆರಳಿಗೆ
ಒಳಗಿನಿಂದ ನರಳುತ್ತಲೇ ಅರಳುವ ಹೂವಿಗೆ

ಹೊರಗಣ್ಣುಗಳ ದಿಟ್ಟಿಗೆ ನೀನು ಬೀಳದ ಹಾಗೆ
ನಿನ್ನಿರವ ಈ ಅರಿವೆಯೊಳಗೇ ನಿಲಿಸು
ಭಿನ್ನವೆನ್ನುವ ತೆರೆ-ತೆರಗಳನಳಿಸು

ನಮ್ಮ ನಾವೆ ಅನ್ಯರಿಗೆ ತೆತ್ತು ಕೊಳ್ಳದ ರೀತಿ
ಬಾಳಗಡಲಿನ ದಿಕ್ಸೂಚಿ ಕವಿತೆಯನುಳಿಸು.

ಬುಧವಾರ, ಮಾರ್ಚ್ 11, 2009

ಚಂದಿರನೇತಕೆ ಓಡುವನಮ್ಮ?

“ಚಂದಿರನೇತಕೆ ಓಡುವನಮ್ಮ ಮೋಡಕೆ ಹೆದರಿಹನೆ?” ಶಿಶು ಗೀತೆಯ ಸಾಲುಗಳು ನೆನಪಾದಾಗಲೆಲ್ಲ ನಮ್ಮೊಂದಿಗೆ ಓಡುತ್ತೋಡುತ್ತಲೇ ತಾನು ಮಾತ್ರ ಇದ್ದಂತೆಯೇ ಇರುವ ಚಂದ್ರನ ಬಗ್ಗೆ ಮತ್ಸರ ಹುಟ್ಟುತ್ತದೆ. ಅಳುವ ಮಕ್ಕಳಿಗೆಲ್ಲ ಚಂದಮಾಮನಾಗಿ ಬಂದು ಸಮಾಧಾನ ಮಾಡುವ ಅವನು, ಹದಿಹರಯದವರಲ್ಲಿ ಕುತೂಹಲ ಹುಟ್ಟಿಸುತ್ತ, ಪ್ರೇಮಿಗಳಿಗೆ ಸಂತಸದ ಸಂಭ್ರಮವನ್ನೇ ಹರಿಸುವ ಚಂದ್ರಮ ಮುಪ್ಪಡರಿದವರ ಜೊತೆ ಜೊತೆಗೇ ಹೆಜ್ಜೆ ಹಾಕುತ್ತ ಅವರ ಒಂಟಿತನ ನೀಗಿಸುತ್ತಾನೆ.

ಚಂದ್ರಿಕೆಯ ಬೆಳಕನ್ನೇ ಉಂಡು ಸುಖಿಸುವ ಚಕೋರ ಪಕ್ಷಿಯ ವಿಚಾರವೂ ಎಲ್ಲರಿಗೆ ತಿಳಿದದ್ದೇ ಆಗಿದೆ. ಗಣಪನಿಂದ ಶಪಿತನಾದ ಚಂದ್ರನ ಕತೆಯೂ ನಮಗೆ ಗೊತ್ತು. ಇನ್ನು ಈ ಚಂದ್ರನ ತಿಂಗಳ ಬೆಳಕಿನ ಬಗ್ಗೆ ಗೊತ್ತಿರದವರು ಯಾರಿದ್ದಾರೆ?

ಹಾಲು ಸುರಿದಂತೆ ಬೆಳದಿಂಗಳೆಂದು ಒಬ್ಬರು ಹೇಳಿದರೆ ಹಿಟ್ಟು ಚೆಲ್ಲಿದಂತೆ ಬೆಳದಿಂಗಳೆಂದು ಮತ್ತೊಬ್ಬರ ವಾದ. ಚೆಲ್ಲಲು ಹಾಲು ಸಿಕ್ಕಬಹುದಾದರೂ ಹಾಗೆ ಚೆಲ್ಲಿದ ಹಾಲು ನೆಲದಲ್ಲಿಂಗದೇ ಉಳಿಯಲು ಸಾಧ್ಯವೆ? ಹಿಟ್ಟನ್ನು ಚೆಲ್ಲಿದ್ದಾರೆನ್ನುವವರಿಗೂ ಅಷ್ಟೊಂದು ಹಿಟ್ಟು ಅದೆಲ್ಲಿ ಸಿಕ್ಕುತ್ತದೋ ಗೊತ್ತಿಲ್ಲ.

ಒಟ್ಟಿನಲ್ಲಿ ಉಪಮೆ ಇಲ್ಲದೆ ಗುಣ ವರ್ಣನೆ ಸಾಧ್ಯವಿಲ್ಲದ ಸಂಗತಿ. ಇವನ್ನೆಲ್ಲ ಕವಿತ್ವವೆಂದು ಕರೆದು, ವಿಜ್ಞಾನದ ಮೂಲಕ ಚಂದ್ರನನ್ನು ಕಾಣಹೋದರೂ ಸುತ್ತಿಕೊಳ್ಳುವುದು ಮತ್ತದೇ ಬೆಳದಿಂಗಳು. ಗುರುತ್ವಾಕರ್ಷಣೆಯ ತತ್ವದ ಮೇಲೆ ನಿಂತಿರುವ ನಮ್ಮ ಸೌರ ಮಂಡಲದ ಗ್ರಹಗಳಿಗೆ ಅವುಗಳ ತಾಕತ್ತಿಗೆ ತಕ್ಕಂತೆ ಚಂದ್ರರು ಅವರವರನ್ನು ಸುತ್ತುತ್ತಿದ್ದಾರೆ. ನಮ್ಮ ಭೂಮಿಗೆ ಪಾಪ ಈ ಚಂದ್ರನೊಬ್ಬನೇ ದಿಕ್ಕು. ಆಕಾಶದ ತುಂಬ ಹರಡಿರುವ ಅದೆಷ್ಟೋ ಅಸಂಖ್ಯ ನಕ್ಷತ್ರಗಳು, ತಿಂಗಳ ಬೆಳಕಲ್ಲಿ ಚಂದ್ರನ ಮನೆಯ ಮಿಣುಕು ದೀಪಗಳಂತೆ ಕಾಣುವುದೂ ಸತ್ಯದ ಮಾತೇ!

ಭೂಮಿಯ ಪ್ರದಕ್ಷಿಣೆಯಲ್ಲೇ ಆಯಸ್ಸು ಕಳೆಯುತ್ತಿರುವ ಚಂದ್ರ, ಸೂರ್ಯನ ಬೆಳಕನ್ನೇ ಎರವಲು ಪಡೆದ ಭೂಪ. ನಾವಾಗಲೇ ಅವನ ಮೇಲೂ ಹತ್ತಿಳಿದು ಬಂದು ಕವಿಕಲ್ಪನೆಗಳನೆಲ್ಲ ಸುಳ್ಳು ಮಾಡಿದ್ದೇವೆ. ಆದರೂ ತಿಂಗಳು, ತಿಂಗಳ ಚಂದ್ರನ ವೈಭವದ ಮುಂದೆ ಯಾವ ರಾಜ ಮಹಾರಾಜರ ದರ್ಬಾರು ಕಳೆಗಟ್ಟೀತು?

ಇನ್ನು ಚಂದ್ರನಿಗೂ, ಅಮೃತಕ್ಕೂ ಅವಿನಾವ ಸಂಬಂಧ. ಅವನೊಳಗಿರುವ ಹದಿನಾರು ಕಲೆಗಳಿಂದೊಡಗೂಡಿದ ಅಮೃತವನ್ನು ದೇವ ದೇವತೆಗಳು ಬೇಡಿ ಪಡೆಯುತ್ತಾರಂತೆ. ಹುಣ್ಣಿಮೆಯಂದು ನಳ ನಳಿಸುವ ಚಂದ್ರ ದಾನಾರ್ಥಿಗಳಿಗೆ ಸ್ವಲ್ಪ ಸ್ವಲ್ಪವೇ ಅಮೃತವನ್ನು ಹಂಚುತ್ತ ಕಡೆಗೆ ತಾನೇ ಇಲ್ಲವಾಗುತ್ತಾನೆ. ಅಮಾವಾಸ್ಯೆಯ ಕಾಳಕತ್ತಲೆಯಲ್ಲಿ ಹೊಸ ಜ್ಞಾನ ಸಂಪಾದಿಸಿ, ದಿನದಿಂದ ದಿನಕ್ಕೆ ಮತ್ತೆ ಅಮೃತ ಸಂಚಯನಕ್ಕೆ ತೊಡಗುವ ಚಂದ್ರ ನಮ್ಮ ಬದುಕಿಗೊಂದು ಅರಿವು ಹುಟ್ಟಿಸುತ್ತಾನೆ. ಕಷ್ಟ ಪಟ್ಟು ಪಡೆಯಬೇಕಿರುವ ಜ್ಞ್ನಾನ ಸಂಚಯನ ಆಸಕ್ತರೆಲ್ಲರಿಗೆ ಹಂಚಬೇಕಿರುವ ಔದಾರ್ಯ ಕಲಿಸುತ್ತಿದ್ದಾನೆ. ಅಂದರೆ ಸಂಪೂರ್ಣ ವಿದ್ಯೆ ನಮಗೆ ದಕ್ಕಿತೆಂದ ಕೂಡಲೇ ಅದನ್ನು ಬೇಡುವವರಿಗೆ ಹಂಚುತ್ತ ಪುನಃ ನಾವು ಖಾಲಿಯಾಗಬೇಕು. ಒಳಗೇ ತುಂಬಿಕೊಂಡಿದ್ದ ಅಹಂಕಾರ, ಮತ್ಸರ, ಕೊಬ್ಬುಗಳೆಲ್ಲ ಕರಗಿ ಉರಿವ ಕರ್ಪೂರದ ರೀತಿ ನಮಗೆ ಸಿದ್ಧಿಸಬೇಕು. ಹಾಗೆ ಮೂಡಿದ ಸ್ಥಿತಿಯಿಂದ ಮತ್ತೆ ಜ್ಞಾನ ಸಂಚಯನದ ಹಾದಿ ತುಳಿಯಬೇಕು.

ಇಂದಿನ ದಿನಗಳಲ್ಲಿ ಹೊಳೆಯುವ ನಿಯಾನ್ ಬೆಳಕಿನಲ್ಲಿ, ಝಗಮಗಿಸುವ ಸೋಡಿಯಂ ದೀಪಗಳಡಿಯಲ್ಲಿ ಚಂದ್ರನ ಚಂದ್ರಿಕೆಯ ತಂಪಿರಲಿ, ಅವನ ಇರುವಿಕೆಯೇ ಮರೆತು ಹೋಗುತ್ತಿದೆ. ಅಮಾವಾಸ್ಯೆ, ಹುಣ್ಣಿಮೆಗಳ ವ್ಯತ್ಯಾಸ ತಿಳಿಯದ ಹಾಗೆ ಬೀದಿ ದೀಪಗಳು ಬೆಳಗುತ್ತಲೇ ಇವೆ. ಹೊಳೆ ಹೊಳೆಯುವ ತಾರೆ, ಸುಡು ಸುಡುವ ಸೂರ್ಯನ ಪ್ರಖರತೆ, ಅಮಾವಾಸ್ಯೆಯ ದಟ್ಟ ತಿಮಿರ, ತಂಪೆರಚುವ ಹುಣ್ಣಿಮೆಯ ಹಾಲ್ಬೆಳಕು ಬರಿಯ ಪುಸ್ತಕಗಳಲ್ಲಿ, ಕವಿತೆಗಳ ಸಾಲುಗಳಲ್ಲಷ್ಟೇ ಕಾಣಬೇಕಾದ ಅನಿವಾರ್ಯತೆಯೊದಗಿದೆ. ಇಂಥ ಭವದ ಬದುಕಿನ ನಡುವೆಯೂ ನೈಸರ್ಗಿಕ ಬೆಳಕು-ಕತ್ತಲೆಗಳ ಬಗ್ಗೆ, ಕವಿಕಲ್ಪನೆಯ ಕನಸು- ನಿಜ ವಾಸ್ತವದ ಬಗ್ಗೆ, ಸುಡು ಬಿಸಿಲು- ಜೀವನ ಕ್ರಮದ ಬಗ್ಗೆ, ಕೊಂಚ ಯೋಚಿಸಿದರೆ ಸಾಕು, ನಮ್ಮೊಳಗೂ ಒಬ್ಬ ಚಂದ್ರ ಹುಟ್ಟುತ್ತಾನೆ. ಹೀಗೆ ಹುಟ್ಟುವ ಚಂದ್ರ ತರುವ ಬೆಳ್ಳಂ ಬೆಳಕಿನ ಹುಣ್ಣಿಮೆಯನ್ನು ಅನ್ಯರಿಗೂ ಸ್ಪರ್ಶಿಸುತ್ತ, ಬದುಕುವ ಕನಸೇ ಅಧ್ಭುತ.

ಈ ದಿಕ್ಕಿನಲ್ಲಿ ಆಲೋಚಿಸಲು, ಅಂದರೆ ನಮ್ಮೊಳಗೊಬ್ಬ ಚಂದ್ರನನ್ನು ಸೃಷ್ಟಿಸಿಕೊಳ್ಳಲು, ನಮ್ಮೊಳಗಿಗೆ ಎರವಲು ಬೆಳಕು ತರಲು ನಮಗೆ ನಾವೇ ಕೊಟ್ಟು ಕೊಂಡಿರುವ ಸವಲತ್ತುಗಳನ್ನು ಅಲಕ್ಷಿಸಬೇಕು. ಲೌಕಿಕದ ಸುಖಕ್ಕಿಂತಲೂ ಮಾನಸಿಕ ಸುಖದ ಬಯಕೆ, ಹರಳು ಕಟ್ಟಬೇಕು. ಆಗ ನಮ್ಮೊಳಗೆ ಹುಟ್ಟುವ ಚಂದ್ರ ತನಗೆ ತಾನೇ ಬೆಳದಿಂಗಳನ್ನು ಸೂಸುತ್ತ ಹೋಗುತ್ತಾನೆ.

ಇರಲಿ, ಒಂದು ಋತುವಿಗೆರಡು ಬಾರಿಯಂತೆ ಸಂಪೂರ್ಣ ಭೇಟಿ ಕೊಡುವ ಚಂದ್ರ ಋತು ವಿಲಾಸದ ಅಧ್ಯಯನಕ್ಕೆ ಸಹಕರಿಸುವ ರೀತಿಯೇ ಅನನ್ಯವಾದುದು. ವರ್ಷಾರಂಭದ- ಇಂಗ್ಲಿಷ್ ವರ್ಷವಲ್ಲ, ಯುಗಾದಿಯಿಂದ ಪ್ರಾರಂಭವಾಗುವ ನಮ್ಮ ವರ್ಷ- ವಸಂತದ ನೆಲದಲ್ಲಿ ಚಿಗಿತೆದ್ದ ಹಸಿರು ರಾಶಿಯ ನಡುವೆ ಚಿಗುರು ತಿನ್ನುತ್ತಲೇ ಹಾಡುವ ಕೋಗಿಲೆಗಳ ಪುಳಕದ ಹಗಲಿಗೆ ಸರಿಸಮವಾಗಿ ಜುಗಲಬಂದಿ ನೀಡುವ ರಾತ್ರಿಯನ್ನು ತಯಾರು ಮಾಡುವವನೇ ನಮ್ಮ ಚಂದ್ರ. ಶಾಂತಿರಸ್ತು, ಪುಷ್ಟಿರಸ್ತು, ತುಷ್ಠಿರಸ್ತು, ಎನ್ನುವ ಮೂರು ಮೂಲ ಉದ್ದೇಶದ ಚಂದ್ರ ಹರಿಸುವ ಶಾಂತಿ, ಸಮೃದ್ಧಿ, ಸಂತಸದ ಹೊನಲುಗಳು ಹಗಲ ಬೆಳಕಿನಲ್ಲೇ ಜೂಗರಿಸುತ್ತ ಕಾಲ ಕಳೆಯುವ ಅರಸಿಕರಿಗೆ ಸುಲಭವಾಗಿ ಅರ್ಥವಾಗುವಂಥದಲ್ಲ.

ಜಾತ್ರೆ, ಉತ್ಸವ, ತೇರುಗಳು ಚಂದ್ರನಿಲ್ಲದ ಹೊತ್ತಲ್ಲಿ ನಡೆಯುವದಪರೂಪ. ಅಮಾವಾಸ್ಯೆಯ ಲಕ್ಷ್ಮಿ ಪೂಜೆ, ತೀರ್ಥಹಳ್ಳಿಯ ಎಳ್ಳಮಾವಾಸ್ಯೆ ಜಾತ್ರೆಯಲ್ಲಿ ಮಾತ್ರ ಚಂದ್ರ ಇರುವುದಿಲ್ಲ. ಚಂದ್ರ ದರ್ಶನವೇ ಬೇಡದ ಭಾದ್ರಪದ ಶುಕ್ಲ ಚೌತಿಯ ಸಂಜೆ ಆಕಾಶದ ತುಂಬ ಸರ್ಚ್ ಲೈಟ್ ಹಚ್ಚಿಟ್ಟಂತೆ ಬೆಳಕ ಹರಡಿ ಕತ್ತೆತ್ತಿದವರೆಲ್ಲರ ಕಣ್ಣಿಗೂ ಬೀಳುವ ಚಂದ್ರ, ಯುಗಾದಿ ಚಂದ್ರ ದರ್ಶನದ ದಿನ ಮಾತ್ರ ಹುದುಕಿದರೂ ಸಿಗದೆ, ಕತ್ತು ಸೋತು ಕೆಳಗಿಳಿಸಿದ ಮೇಲೆ, ದೂರದಲ್ಲೆಲ್ಲೋ ಕಂಡು ಮಾಯವಾಗುತ್ತಾನೆ. ಹಾಗೆ ಅವನು ಕೊಟ್ಟ ದರ್ಶನದಲ್ಲೇ ಅವನು ಎಡಕ್ಕಿದ್ದನೋ, ಬಲಕ್ಕಿದ್ದನೋ ಎಂಬುದರ ಮೇಲೆ ಆ ವರ್ಷದ ಮಳೆ ಬೆಳೆಯ ಲೆಕ್ಕಾಚಾರ ಮಾಡುತ್ತಿದ್ದ ನಮ್ಮ ಹಿರಿಯರ ನೆನಪಿಸಿಕೊಳ್ಳುವುದೇ ಮತ್ತೊಂದು ಹುಣ್ಣಿಮೆಯ ಹಾಗೆ.

ಶ್ರಾವಣದ ಹುಣ್ಣಿಮೆಯ ವಿಶೇಷವೆಂದರೆ, ಅದು ತೊಟ್ಟ ಜನಿವಾರವನ್ನು ರಿವೈವ್ ಮಾಡಿಸುವ ಹಬ್ಬ. ಜನಿವಾರದ ಎಳೆಗಿಂತಲೂ ತೆಳ್ಳಗೆ, ಬೆಳ್ಳಗೆ, ಮೆತ್ತಗಿರುವ ಒತ್ತು ಶ್ಯಾವಿಗೆಯ ಹಬ್ಬ. ಆ ಶ್ಯಾವಿಗೆಗೆ ಎಳ್ಳು ಕಾಯಿರಸ ಬೆರಸಿದರೆ ಸಿಹಿ ಶ್ಯಾವಿಗೆ. ಕಡ್ಲೆ ಬೀಜದ ಒಗ್ಗರಣೆ ಕೊಟ್ಟು ಕೊತ್ತಂಬರಿಯಿಂದ ಅಲಂಕರಿಸಿದರೆ ಖಾರದ ಶ್ಯಾವಿಗೆ. ಒತ್ತು ಶ್ಯಾವಿಗೆಯ ಜೊತೆಗೆ ಒಬ್ಬಟ್ಟಿನ ಬೋನಸ್ಸು! ಶ್ರಾವಣದ ಜಡಿಮಳೆಯಲ್ಲಿ ಹೊರಗೆಲ್ಲೂ ಹೋಗಲಾಗದೇ ಕೂತು ಬೇಸರ ಬಂದವರಿಗೆ ಭೋಜನ ಪಂದ್ಯವೇರ್ಪಡಿಸಲು ಸಕಾಲ.

ಇನ್ನು ಪ್ರತಿ ಹುಣ್ಣಿಮೆಯ ಸಂಜೆ ಸತ್ಯನಾರಾಯಣ ಪೂಜೆ ನಡೆಸಿ, ಜನರ ಪಾಪ ಶೇಷಗಳೆಲ್ಲವನ್ನೂ ತೊಳೆಯುತ್ತಿರುವ ನಮ್ಮ ಅದೆಷ್ಟೋ ದೇವಸ್ಥಾನಗಳ ಸಮಿತಿಗಳಿಗಂತೂ, ಹುಣ್ಣಿಮೆಯೆಂದರೆ ಕಲೆಕ್ಷನ್. ಹುಣ್ಣಿಮೆ, ಅಮಾವಾಸ್ಯೆಗಳಲ್ಲಷ್ಟೇ ಚಿತ್ತ ವಿಭ್ರಮೆಗೊಳಗಾಗುವ ಜನರನ್ನು ಆಧುನಿಕ ವಿಜ್ಞಾನ ಅನುಮಾನದಿಂದ ನೋಡಿ, ಮನಶಾಸ್ತ್ರ ತಜ್ನರನ್ನು ಕಾಣುವಂತೆ ಸೂಚಿಸಿದರೂ, ಅದೇಕೆ ಹುಣ್ಣಿಮೆಯ ರಾತ್ರಿಗಳಲ್ಲಷ್ಟೇ ಸಮುದ್ರ ಉಕ್ಕಿ ಸೊಕ್ಕುತ್ತದೆ ಎನ್ನುವುದೂ ಗಮನಿಸಬೇಕಾದ ಸತ್ಯ. ಏಕೆಂದರೆ ಭೂಮ್ಯಾಕಾಶ, ನಕ್ಷತ್ರ, ನೀಹಾರಿಕೆಗಳ ಚಲನೆಯನ್ನೇ ಅಧ್ಯಯನಿಸುವ ಕಸುಬಿನವರಿಗೆ ಅದು ವಿಜ್ಞಾನ. ಅದನ್ನೇ ಅರೆ ಬರೆ ತಿಳಿದು, ಕುಂಡಲಿ ಹಾಕಿ ರವಿ, ಕುಜ, ಚಂದ್ರ ಎಂದು ಬರೆದು ಕವಡೆ ಹಾಕುವವನಿಗೆ ಶಾಸ್ತ್ರ. ನಮ್ಮ ಜನ ವಿಜ್ಞಾನಕ್ಕಿಂತ ಅಜ್ಞಾನವನ್ನೇ ಮೆಚ್ಚುವವರಾದ್ದರಿಂದ, ಭವಿಷ್ಯ ಹೇಳುವವರ ಭವಿಷ್ಯವಂತೂ ಉಜ್ವಲವಾಗಿಯೇ ಇರುತ್ತದೆ. ಅಮಾವಾಸ್ಯೆಯ ರಾತ್ರಿ ಭೂತ ಪ್ರೇತಗಳಿಗೆ ಇರುವಂತೆಯೇ ಹುಣ್ಣಿಮೆಯ ರಾತ್ರಿಗಳನ್ನು ಮೋಹಿನಿಯರಿಗೆ,ಬಾಣಂತಿ ದೆವ್ವಗಳಿಗೆ ಮೀಸಲಿಟ್ಟಿರುವ ನಮ್ಮ ಜನ ತಮಗೆಂದು ಮಾತ್ರ ಯಾವ ದಿನಗಳನ್ನೂ ನಿಗದಿಯಾಗಿಸಿಲ್ಲದಿರುವುದೇ ನಮ್ಮೆಲ್ಲ ಅಜ್ಞಾನದ ಮೂಲ ಸತ್ಯ.

ಚಂದ್ರನ ಅತಿ ಹತ್ತಿರದ ಸ್ನೇಹಿತನೆಂದರೆ ಮನ್ಮಥ. ಚಂದ್ರಿಕೆಯ ಸವಿಯಲ್ಲಿ ಪ್ರೇಮಿ ತೊಯ್ಯುತ್ತಿದ್ದರೆ, ಮನ್ಮಥನ ಬಾಣಗಳು ಇನ್ನೇನು ತಾಗುವವೆಂದೇ ಅರ್ಥ. ಇನ್ನು ಹೇಗೆ ತಾನೆ ಆ ಪ್ರ್ರೇಮಿ ರಾತ್ರಿಯ ಉದ್ದಗಲಗಳನ್ನಳೆಯದೇ ಬಿಡಲು ಸಾಧ್ಯ? ಶುಕ ಧ್ವಜ ಮನ್ಮಥ ತನ್ನ ಇಕ್ಷು ಚಾಪದಿಂದ ಸುಮ ಬಾಣಗಳನ್ನು ಬಿಡದಿರುತ್ತಿದ್ದರೆ, ಈ ಲೋಕದ ಜನರಿಗೆ ಅದು ಹೇಗೆ ತಾನೆ ಪ್ರೀತಿ- ವಿರಹಗಳ ಉತ್ಕಟತೆಯ ಅರಿವು ಬರುತ್ತಿತ್ತು? ಕಾಮನ ಹುಣ್ಣಿಮೆಯ ನೆನಪೇ ಮತ್ತೊಂದು ಹುಣ್ಣಿಮೆಯ ಅನುಭವವನ್ನು ಕೊಡಬಲ್ಲುದೆಂದರೆ, ಕಾಮನ ಹುಣ್ಣಿಮೆಯ ನೆನೆಯದೇ ಮುಂದಡಿಯಿಡುವುದು ಅಪರಾಧವಾದೀತು!

ಕಾಮನ ಹುಣ್ಣಿಮೆಯ ಸಾಂಪ್ರದಾಯಿಕ ಆಚರಣೆಗಿಂತಲೂ, ಹೊಸ ತಲೆಮಾರು ಅದನ್ನಾಚರಿಸುವಾಗ ಬದಲಾಯಿಸುತ್ತ ಬಂದ ರಿವಾಜುಗಳನ್ನು ಅಧ್ಯಯನ ಮಾಡಿದರೆ ಅದೇ ಒಂದು ವಿದ್ವತ್ ಪ್ರಬಂಧವಾಗಿಯೇ ಆಗುತ್ತದೆ. ಸ್ವಭಾವತಃ ಪುಕ್ಕಲು ಹುಡುಗರೂ, ಕಾಮೋತ್ಸವದ ದಿನ ತಮ್ಮ ಮಿತಿ ಮೀರಿ ವರ್ತಿಸುವ ರೀತಿಯೇ ಈ ಹಬ್ಬಕ್ಕಿರುವ ವಿಶೇಷತೆಯನ್ನು ಎತ್ತಿ ತೋರಿಸುತ್ತದೆ. ಒಂದೆರಡು ಸ್ವಾರಸ್ಯದ ಸಂಗತಿಗಳನ್ನಿಲ್ಲಿ ನೆನೆಯದೇ ಹೋದರೆ, ಈ ಬರಹ ಇಂಗಿನೊಗ್ಗರಣೆ ಇಲ್ಲದ ತಿಳಿಸಾರಿನಂತಾಗಿ ಬಿಡಬಹುದೆಂಬ ಭಯದಿಂದ ಆವನ್ನೀಗ ನೆನೆಯುತ್ತಿದ್ದೇನೆ.

ಕಾಮನ ಹುಣ್ಣಿಮೆಯ ಹಿಂದಿನ ರಾತ್ರಿ ಊರ ದೇವರ ಜಗಲಿಯಲ್ಲಿ ಆ ಒಂದು ರಾತ್ರಿಗೆಂದೇ ಪ್ರತಿಷ್ಠಾಪಿತನಾಗುವ ದೇವನೆಂದರೆ ಅದು ನಮ್ಮ ಮನ್ಮಥ ದೇವ. ಬತ್ತದ ಹುಲ್ಲಿನಲ್ಲಿ ತಯಾರಿಸಿದ ಮನುಷ್ಯ ಶರೀರ ಹೋಲುವ ಬೊಂಬೆಗೆ ಚಿಂದಿ ಪ್ಯಾಂಟು, ಶರಟುಗಳನ್ನು ತೊಡಿಸಿ, ಮನುಷ್ಯರಂತೇ ಕೂರಿಸುವ ಕೆಲಸ ಅನುಭವದ ಕೈಗಳಿಂದ ಮಾತ್ರ ಸಾಧ್ಯವಿರುವ ಸಂಗತಿ. ಹಾಗೆ ತಯಾರಾದ ಬೊಂಬೆಗೆ ಆ ರಾತ್ರಿಯ ಮಟ್ಟಿಗೆ ಕಡ ತಂದ ಸೂಟು ತೊಡಿಸಿ, ಅಟ್ಟೆ ಕಿತ್ತ ಬೂಟು ತೊಡಿಸಿ, ಆ ವರ್ಷದ ಹಿಟ್ ಸಿನಿಮಾದ ಹೀರೊ ಧರಿಸಿದ್ದ ಟೋಪಿ ಅಥವ ಹ್ಯಾಟು ತೊಡಿಸಿ, ಎಂ.ಜಿ.ಆರ್ ಕನ್ನಡಕ ತೊಡಿಸುವುದು ಕಿರಿಯರ ಕೆಲಸ.

ನಂತರ ದೇವಸ್ಥಾನದ ಅಟ್ಟದಲ್ಲಿ ಜೋಪಾನವಾಗಿ ತೆಗೆದಿರಿಸಿದ್ದ ಕಾಮ ದೇವನ ಹಸ್ತ, ಪಾದ, ಶಿರದ ಆಕೃತಿಗಳಿಗೆ ತಿಂಗಳ ಮೊದಲೇ ಧೂಳು ಹೊಡೆಸಿ, ಹೊಸ ಬಣ್ಣ ಹೊಡೆಸಿ, ಸಿಂಗರಿಸಿದ್ದ ಭಟ್ಟರು ಈ ಮೊದಲು ಹೇಳಿದ ಹಾಗೆ ತಯಾರಾದ ಬೊಂಬೆಗೆ ತೊಡಿಸಿ, ಪ್ರತಿಷ್ಠಾಪಿಸಿ, ಮಂಗಳಾರತಿ ಎತ್ತಿ ನಮಗವನನ್ನು ಹಸ್ತಾಂತರಿಸಿದರೆಂದರೆ ಮುಂದೆ ನಮ್ಮ ಹಿಗ್ಗು ಭುಗಿಲೆದ್ದು ಕುಣಿಯುತಿತ್ತು. ಅವನ ನಿವೇದನೆಗೆಂದೇ ಹೊಸ ಹೊಸ ಬಯ್ಗಳು ಹುಟ್ಟುತ್ತಿದ್ದವು. ಊರಿನ ಹಾದರದ ಸುದ್ದಿಗಳು ಪ್ರಚುರ ಪಡೆಯುತ್ತಿದ್ದುದೇ ಈ ಶುಭ ಸಂದರ್ಭದಲ್ಲಿ. ಕದ್ದು ಮುಚ್ಚಿ ನಡೆಯುತ್ತಿದ್ದ ಪ್ರಣಯ ಪ್ರಸಂಗಗಳು ಊರ ಹೆಬ್ಬಾಗಿಲಿನ ಮುಂದಿನ ಗೋಡೆಯಲ್ಲಿ ಇದ್ದಲಿನಲ್ಲಿ ರಾರಾಜಿಸಿ, ಬೆಳಗಾಗುವುದರಲ್ಲಿ ಎಲ್ಲರ ನಾಲಿಗೆಗಳಲ್ಲಿ ನಲಿದಾಡಲು ತೊಡಗುತ್ತಿದ್ದವು. ವೈದ್ಯರ ನಾಮಫಲಕ ನಾಪಿತನಂಗಡಿಗೆ ಹೋಗಿ, ನಾಪಿತನ ನಾಮ ಫಲಕ ನ್ಯಾಯವಾದಿಯ ಬಾಗಿಲಿನಲ್ಲಿ ತೂಗಾಡಿ, ಕತ್ತೆಯ ಬಾಲಕ್ಕೆ ಕಟ್ಟಿದ್ದ ಪಟಾಕಿ ಸಿಡಿದು ಉಬ್ಬಸದ ಸುಬ್ಬಣ್ಣಯ್ಯ ನಮಗೆಲ್ಲ ಸಹಸ್ರನಾಮ ಶುರುಮಾಡುತ್ತಿದ್ದರು.

ವರಾಡಕ್ಕೆಂದು ಮನೆಯಂಗಳ ತುಳಿಯುವ ಮೊದಲೇ ಅವರವರ ಯೋಗ್ಯತಾನುಸಾರ ಮನೆಯ ಚಿಕ್ಕ ಮಕ್ಕಳ ಮೂಲಕ ತಮ್ಮ ದೇಣಿಗೆ ಕಳಿಸಿದ ಹಿರಿಯರು ಹೆಣ್ಣು ಮಕ್ಕಳನ್ನು ಮನೆಯಿಂದ ಹೊರಗೆ ಕಾಲಿಡದಂತೆ ಕಾಯುತ್ತಿದ್ದರು.

ಕೆಲವು ರಸಿಕ ಶಿಖಾಮಣಿ ಮುದಿಗೊಡ್ದುಗಳು ತಮಗೆ ಗೊತ್ತಿದ್ದ ಕಾಮನ ಪದಗಳನ್ನು ನಮಗೆ ಕದ್ದು ಬರೆದು ಕೊಟ್ಟು ನಾವದನ್ನು ಹಾಡುವಾಗ ಕೇಳಿ ಖುಶಿಪಡುತ್ತ, ದೇಣಿಗೆಯ ಮೊತ್ತಕ್ಕೆ ತಮ್ಮ ಪಾಲೂ ಸೇರಿಸಿ ಧನ್ಯವಾಗುತ್ತಿದ್ದವು. ನಾವು ವರ್ಷವಿಡೀ ಬಾಯಿ ಮುಚ್ಚಿಕೊಂಡು ಮನದಲ್ಲೇ ಧ್ಯಾನಿಸಿದ ಪ್ರಸಂಗಗಳಿಗೆಲ್ಲ ಜೀವ ಬಂದು, ನಮ್ಮೊಳಗಿದ್ದ ಕವಿ ಮಹಾಶಯ ಹೊರಗೆ ಬರುತ್ತಿದ್ದ. ಅದರಲ್ಲೂ ಆಷು ಕವಿತ್ವವಿದ್ದವರಿಗಂತೂ ಮಿಂಚಲು ಒಳ್ಳೆಯ ಅವಕಾಶ ಅದಾಗಿತ್ತು.ಹೀಗೆ ಪ್ರಸಂಗಗಳೆಲ್ಲ ಜೋಗದ ಜಲಪಾತದಂತೆ ಸುರಿದು ಬೀಳುತ್ತಿರುವಾಗ ಸಂನ್ಯಾಸಿಗಳಿಗೂ ಕೋಗಿಲೆಯ ಸ್ವರ ಕೇಳುತ್ತಿತ್ತು.

ಖರ್ಚಿಗೆ ಕಾಸು ಗಿಟ್ಟಿಸಿದ ನಂತರ ಕಾಮದಹನಕ್ಕೆ ಸೌದೆಯ ಉಸ್ತುವಾರಿ. ತೊಟ್ಟಿಲಿನಿಂದ ಆಕಾಶ ಬುmಯವರೆಗೂ ಮನೆಗಳಿಂದ ಸಂಗ್ರಹಿಸಿದ ಬಿದಿರು ಸಾಮಾನುಗಳ ಜೊತೆಗೆ ಮನೆಗಿಷ್ಟೆಂದು ಎತ್ತಿ ತಂದ ಸೌದೆ, ಮರ, ಮುಟ್ಟು. ಮನೆ ಮುಂದಿನ ಗೇಟಿಗೆಂದು ನಿಲ್ಲಿಸಿದ್ದ ಉಣುಗೋಲಿನಿಂದ ಹಿಡಿದು ಏಣಿ ಕಾಲು, ಚಪ್ಪರದ ಗೂಟ, ಹೂವು ಕೀಳುವ ಕೋಲು ಎಲ್ಲವೂ ಕಾಮನ ಚಪ್ಪರಕ್ಕೆ ಬಂದು ಬೀಳುತ್ತಿದ್ದವು. ಹೀಗೆ ಕದ್ದು ತಂದ ಸಾಮಾನುಗಳನ್ನು ಮನೆಗೊಯ್ಯಲು ಬಂದವರಿಗೆ ಬಯ್ಗಳದ ಸ್ವಾಗತ ಕಾದಿರುತ್ತಿದ್ದುದರಿಂದ ಊರ ಮನೆಗಳ ಹಿರಿಯರು ತಮ್ಮ ತಮ್ಮ ಮನೆಯ ಹಿತ್ತಲಿನಲ್ಲಿ ಬಿಡಾರ ಹೂಡಿಕೊಂಡು ನಾವ್ಯಾರೂ ಅವರ ವಸ್ತುಗಳನ್ನು ಕದಿಯದಂತೆ ತಡೆ ಒಡ್ಡುತ್ತಿದ್ದರು. ಮಧ್ಯರಾತ್ರಿ ಕಳೆದ ನಂತರ ಕಾಮನ ರಥ ಊರ ಸಂಚಾರಕ್ಕೆ ಹೊರಡುತಿತ್ತು.

ಎತ್ತು ಕಟ್ಟಿದ ಕಾಮ ರಥದ ಚಾಲಕ ಅಂದರೆ ಕಾಮ ಸಾರಥಿ ಯಾರಾಗುತ್ತಾರೋ ಅವರಿಗೆ ಆ ವರ್ಷ ಮದುವೆ ಆಗೇ ಆಗುತ್ತದೆಂಬ ನಂಬಿಕೆ ಬಲವಾಗಿ ಇದ್ದುದ್ದರಿಂದ ಮದುವೆಯ ವಯಸ್ಸು ಬಂದು ಇನ್ನೂ ಮದುವೆಗೆ ಮನೆಯಲ್ಲಿ ಯಾವ ಸೂಚನೆಗಳೂ ದೊರೆಯದ ಹುಡುಗರು ನಾ ಮೊದಲು ತಾ ಮೊದಲೆಂದು ಕಾಮ ಸಾರಥಿಯಾಗಲು ಮುಂದೆ ಬರುತ್ತಿದ್ದರಿಂದ ಆಯಾ ಮನೆಯವರು ಆ ವರ್ಷ ಆ ಹುಡುಗನ ಮದುವೆಯ ವಿಷಯ ತೆಗೆಯಲೇ ಬೇಕಾಗುತಿತ್ತು. ಎತ್ತು ಕಟ್ಟಿದ ಬಂಡಿಯನ್ನು ಊರಿನ ಬೀದಿ ಬೀದಿಗಳಲ್ಲಿ ಓಡಿಸಿಕೊಂಡು ಹೋಗುವಾಗ ಆ ಕಾಮ ಸಾರಥಿಗಳ ಮುಖದಲ್ಲಿರುತ್ತಿದ್ದ ಕಾತರ, ಏನನ್ನೋ ಕುರಿತ ಅವರ ಕುತೂಹಲ, ಮುಖದ ಮೇಲೆ ಮೂಡಿದ್ದ ನಾಚಿಕೆ, ಉದ್ವೇಗಗಳನ್ನು ಮೀಟಿ, ಹರೆಯದ ಸಂಗೀತವನ್ನು ಅನ್ಯರೂ ಕೇಳುವಂತೆ ಆಗುತ್ತಿತ್ತು.

ಒಂದು ಗುಂಪು ಹೀಗೆ ಕಾಮನ ಮೆರವಣಿಗೆಯಲ್ಲಿ ಸಾಗಿದ್ದರೆ ಮತ್ತೊಂದು ಗುಂಪು, ಹುಡುಗರನ್ನು, ಅವರ ಚೇಷ್ಟೆಗಳನ್ನು ಸುಮ್ಮ ಸುಮ್ಮನೇ ಗದರಿಸುತ್ತ, ತಮ್ಮ ಹಿರಿತನವನ್ನು ತೋರ್ಪಡಿಸುತ್ತಿದ್ದವರ ವಿರುದ್ಧ ತನ್ನ ಕಾರ್ಯಾಚರಣೆಯ ತಯಾರಿಯಲ್ಲಿರುತ್ತಿತ್ತು. ಆ ಮನೆಯವರೂ ಎಂಥ ಕಿಲಾಡಿಗಳೆಂದರೆ, ಅವರೇ ಸ್ವತಃ ಎದ್ದು ಕೂತು ಅವರ ಹಿತ್ತಲದ ಸಾಮನುಗಳ ನಿಗ ನೋಡುತ್ತಿದ್ದರು. ಆದರೆ ಕಾರ್ಯಾಚರಣೆಯ ಪಟ್ಟಿಯಂತೆ ಅವರ ಮನೆಯ ತೆಂಗಿನ ಮರದ ಎಲ್ಲ ಎಳನೀರು ಕಾಮೋತ್ಸವದ ಹುಡುಗರ ಬಾಯಾರಿಕೆ ತಣಿಸಬೇಕು. ಸರಿ, ಮುಂದಿನ ಉಪಾಯವೆಂದರೆ, ಬಂದ ಗುಂಪು ಎರಡಾಗಿ, ಮೊದಲ ಗುಂಪು ಆ ವ್ಯಕ್ತಿಯ ಜೊತೆ ಕ್ಷೇಮ ಸಮಾಚಾರ, ಲೋಕಾರೂಢಿಯ ಮಾತಿಗೆ ಇಳಿಯಿತು. ಸ್ವಭಾವತಃ ಮನುಷ್ಯರಾದವರೆಲ್ಲರೂ ಖುಷಿ ಕೊಡುವ ಸಂಗತಿಗಳಿಗೆ ಸ್ಪಂದಿಸುವ ರೀತಿಯಲ್ಲಿ ಆ ಹಿರಿಯರೂ ತಮ್ಮ ಕಾಲದ ಶೌರ್ಯ

ಸಾಹಸಗಳ ವರ್ಣನೆಗೆ ತೊಡಗಿದರೆ, ಈ ಹೊತ್ತಿಗಾಗಲೇ ಅವರ ತೆಂಗಿನ ಮರಕ್ಕೆ ಸೇದುವ ಹಗ್ಗದ ಸಮೇತ ಮರ ಹತ್ತುವವರು ಹತ್ತಿಯಾಗಿತ್ತು. ಮರದ ಮೇಲಿದ್ದವರು ಇಡಿ ಎಳನೀರಿನ ಕೊಂಬೆಯನ್ನೇ ಕತ್ತರಿಸಿ ಜೊತೆಗೊಯ್ದಿದ್ದ ಹಗ್ಗದ ಮೂಲಕ ಇಳಿಬಿಟ್ಟರೆ, ಆ ಕೊಂಬೆ ಹಗ್ಗದ ಮೇಲೆ ಜಾರುತ್ತ ಬರುತಿತ್ತು. ಕೆಳಗಿದ್ದವರು ಅದನ್ನು ಜೋಪಾನವಾಗಿ ಹೊತ್ತೊಯ್ಯುತ್ತಿದ್ದರು. ಇತ್ತ ತಮ್ಮ ಸಾಹಸ ವಿವರಣೆಯಲ್ಲಿದ್ದ ಹಿರಿಯರಿಗೂ ಕೆತ್ತಿ ತಂದ ಎಳನೀರಿನ ಉಪಚಾರ ನಡೆದು, ಅವರು ಅದನ್ನು ಕುಡಿದು ರುಚಿ ಕಂಡ ಮೇಲಷ್ಟೇ ನಮ್ಮೊಂದಿಗೆ ಜಗಳಕ್ಕಿಳಿಯುತ್ತಿದ್ದರು. ಸಾಹಸವೊಂದರ ಯಶಸ್ಸಿನಲ್ಲಿ ಬೀಗುತ್ತಿದ್ದ ನಮಗೆ ಅವರ ಬಯ್ಗಳು ಹೂ ಹಾರದ ಹಾಗೆ ಕಾಣುತ್ತಿದ್ದವು.

ಹುಣ್ಣಿಮೆಯ ಬೆಳ್ಳಂಬೆಳಗು ಬಾಯಿ ಬಡಿದು ಕೊಳ್ಳುತ್ತ ಆಕಾಶದೆತ್ತರಕ್ಕೆ ಉರಿ ಚಾಚುವ ಚಿತೆಗೆ ಕಾಮನ ಗೊಂಬೆಯನ್ನೆಸೆದು ಚಳಿಯಿಂದ ನಡುಗುತ್ತಿದ್ದ ಮೈ, ಮುಖಗಳಿಗೆ ಬೆಚ್ಚನೆಯ ಶಾಖವನ್ನು ಕೊಟ್ಟು ಕೊಳ್ಳುತ್ತ ಮುಂದಿನ ಕಾಮದಹನದವರೆಗೂ ವಟಗುಟ್ಟುವ ಬಾಯಿ, ಕದಿಯುವ ಕೈ, ಮತ್ತು ಬಂಡಾಯವೇಳುವ ಮನಸ್ಸಿನ ಹತೋಟಿ ಹೇಗೆ ಸಾಧ್ಯವೆಂದು ತಲೆತುರಿಸಿಕೊಳ್ಳುತ್ತ ಮನೆಗೆ ಹೋದರೆ ಅಮ್ಮ ತಲೆ ತುಂಬ ಹರಳೆಣ್ಣೆ ತಟ್ಟಿ ಅಭ್ಯಂಜನ ಮಾಡಿಸಿ, ಬೆಚ್ಚಗೆ ಹೊದಿಸಿ ಮಲಗಿಸುತ್ತಿದ್ದಳು. ನಿದ್ದೆಯಿಂದೆದ್ದು ಕಣ್ಣು ತೆರೆದರೆ ಹೊಯ್ಕೊಂಡ ಬಾಯಿಗೆ ಹೋಳಿಗೆ ತುಪ್ಪ ಬಡಿಸಿ ಆಗಷ್ಟೆ ಮೂಡುತ್ತಿದ್ದ ನಮ್ಮ ಮೀಸೆ ಮೊನೆಯನ್ನು ಅಪ್ಯಾಯವಾಗಿ ನೋಡುತ್ತ ಸಂಭ್ರಮಿಸುತ್ತಿದ್ದುದನ್ನು ಯಾವ ಶಾಲೆಯ ಯಾವ ಸಿಲೆಬಸ್ಸೂ ಒಳಗೊಳ್ಳುವ ಸಾಧ್ಯತೆ ಇಲ್ಲದಿರುವುದರಿಂದಲೇ ಈ ಕಾಲದ ಹುಡುಗರು ಹುಣ್ಣಿಮೆಯ ಬೆಳಕಿಗಿರುವ ಏನೆಲ್ಲ ಅಂತರಾರ್ಥಗಳನ್ನು ಗ್ರಹಿಸಲು ಸೋಲುತ್ತಿದ್ದಾರೆಯೆ ಎನ್ನುವ ಪ್ರಶ್ನೆ ಮೂಡಿಸಿಕೊಳ್ಳುತ್ತ ಚಂದ್ರಮ ಹರಿಸುವ ಚಂದ್ರಿಕೆಯಲ್ಲಿ ಕರಗುವ ಚಂದ್ರಕಾಂತ ಶಿಲೆಗಳು ನಮ್ಮ ಹೊಸ ಪೀಳಿಗೆಯ ಹುಡುಗರೆದೆಗೂ ಒಂದಿಷ್ಟು ಕನಸುಗಳನ್ನು ಬಿತ್ತಲಿ ಎಂದು ಹಾರೈಸೋಣ, ಅಲ್ಲವೇ?

ಸೋಮವಾರ, ಮಾರ್ಚ್ 9, 2009

ಒಗೆತ

ನೀರೊಳಗೆ ಕೈ ಕಾಲು ಬಡಿಯುತ್ತ ಈಜುವ ಹಾಗಲ್ಲ-
ಅಂಗಾಂಗ ಕದಲಿಸದೇ ಹಾಗೇ ತೇಲುವ ಸುಖ
ಹರಿವ ನೀರಿನ ಶಬ್ದ, ಚರ್ಮಕ್ಕೆ ಕಚಗುಳಿಯಿಡುವ ಹರಿವು
ಮೀಯುತ್ತಲೇ ಮಾಯೆಯರಿಯುವ ತಂತ್ರ;

ಸಿದ್ಧಿಸದೇ ಒದ್ದೆ ಮೈಯಲ್ಲಿ ಬಟ್ಟೆ ತೊಳೆಯುವ ಹಾಗಲ್ಲ-
ಪ್ರತಿ ಒಗೆತಕ್ಕೂ ಬಣ್ಣ ಮಾಸಲಾಗುವ ಅರಿವೆ
ಕೊಳೆ ಕಲ್ಲಿಗೂ ಅಂಟಿ ನೀರು ಮಲಿನವಾಗುವ ಸತ್ಯ
ಬಗೆ ಬಗೆಯ ಬಟ್ಟೆಗಳಿಗೂ ಮತ್ತದೇ ಸೋಪ ಬುರುಜು;

ಜಾಲಿಸಿ, ಹಿಂಡಿ, ಬಂಡೆಯ ಮೇಲೆಲ್ಲ ಹರಡಿದಂತಲ್ಲ-
ಸಣ್ಣ ಗಾಳಿಗೇ ಹಾರಿ ಮತ್ತೆ ಕೊಚ್ಚೆಗೆ ಬೀಳುವ ಆಟ
ನೀಗುವುದಕ್ಕೆ ಬಟ್ಟೆಯ ಮೇಲೊಂದು ಪುಟ್ಟ ಕಲ್ಲಿನ ಭಾರ
ಹಿಮ್ಮಡಿ ಉಜ್ಜಿ ತೊಳೆದೇಳುವಷ್ಟರಲ್ಲಿ ಒಣಗಿ ಗಾರಾದ ಬಟ್ಟೆ;

ಕೊಳೆ ತೆಗೆದು ಮಡಿ ಮಾಡಿ ಮಾಟವಾಗಿ ಮಡಿಚಿಟ್ಟಂತಲ್ಲ-
ನದಿಯ ದಡದುದ್ದಕ್ಕೂ ಏಗಿ ಆಟ ಕಟ್ಟುವ ಸದ್ದು
ಹೊಳೆಗೇ ಹುಚ್ಚು ಹಿಡಿಸುವಂತೆ ಜಡಿದು ಸುರಿವ ಮಳೆಯೊಮ್ಮೆ
ತೇವವಷ್ಟನ್ನೂ ತಾನೇ ಕುಡಿದು ಢರ್ರನೆ ತೇಗುವ ಕ್ಷಾಮ ಮತ್ತೊಮ್ಮೆ;

ಮಿಂದು, ಮಡಿಯುಟ್ಟು, ಮಾದರಿಯಾಗುವುದುಂಟಲ್ಲ-
ಅದೆಂದರೆ ಹೊಳೆ ಮಧ್ಯದ ಬಂಡೆ ಸವೆತದ ಹಾಗೆ
ಬಟ್ಟೆ, ಬಟ್ಟೆ ತೊಳೆದವರು, ಈಜಿ ಸುಸ್ತಾಗಿ ವಿಶ್ರಮಿಸಿದವರು
ಬಂಡೆಯ ನುಣುಪಿಗೆ ಕಾರಣ ಧ್ಯಾನಿಸಿದವರು ಯಾರು, ಯಾರು?

ಭಾನುವಾರ, ಫೆಬ್ರವರಿ 8, 2009

ದುರ್ಗದ ಕವಿಗೋಷ್ಠಿ ಕೇಳಿ ಬಂದ ಮೇಲೆ.....

ಸಾಹಿತ್ಯದ ಹೆಸರಲ್ಲಿ ನಡೆಯುತ್ತಿರುವ ಜನಜಾತ್ರೆ ಚಿತ್ರದುರ್ಗದಲ್ಲಿ ಸಂಪನ್ನವಾಗಿದೆ. ಗೋಷ್ಠಿಗಳಲ್ಲಿ ಮಂಡಿಸಿದ ಪ್ರಬಂಧಗಳ ಮೇಲಣ ಚರ್ಚೆಗಳಿಗಿಂತಲೂ ಈ ಸಮ್ಮೇಳನ ವಿವಾದಗಳಿಂದ ಆರಂಭವಾಗಿ ವಿವಾದಗಳಲ್ಲೇ ಅಂತ್ಯ ಕಂಡಿದೆ. ಇಷ್ಟೂ ದಿನ ಮುದ್ರಿತ ವಿಚಾರಗಳನ್ನು ಹಲ್ಲುಬಿದ್ದ ಬಾಯಲ್ಲಿ ಅಸ್ಪಷ್ಟವಾಗಿ ಓದುತ್ತಿದ್ದ ಅಧ್ಯಕ್ಷೀಯ ಭಾಷಣದ ರೀತಿ ಬದಲಾಗಿ ಮಠ ಮಾನ್ಯಗಳನ್ನು., ವ್ಯವಸ್ಥೆಯನ್ನೂ ಛೀಕರಿಸುವ ಮೂಲಕ ಮಿಂಚಬಹುದೆನ್ನುವ ಮತ್ತು ಚಪ್ಪಾಳೆ ಗಿಟ್ಟಿಸಬಹುದೆನ್ನುವ ಅಪ್ಪಟ ಸತ್ಯ ಮತ್ತೆ ವಿಜೃಂಭಿಸಿದೆ. ಉಧ್ಘಾಟನೆಯ ನಂತರ ಮಾತ್ಯಾವುದೇ ಗೋಷ್ಠಿಗಳಲ್ಲೂ ಕಾಣಿಸಿಕೊಳ್ಳದ ಸಮ್ಮೇಳನಾಧ್ಯಕ್ಷರು ಮುಕ್ತ ಸಂವಾದದಲ್ಲಿ ಪಾಲ್ಗೊಂಡು ಮತ್ತೆ ವಿಜೃಂಭಿಸಿದ್ದಾರೆ. ಅಪರೂಪಕ್ಕೆಂಬಂತೆ ಮಾರುದ್ದದ ನಿರ್ಣಯಗಳ ಪಟ್ಟಿ ಬದಲಾಗಿ ಮೂರೇ ಮೂರು ನಿರ್ಣಯಗಳು ಸಮ್ಮೇಳನದ ಅಂಗಳದಿಂದ ಬಿಂಬಿಸಲ್ಪಟ್ಟಿವೆ.

ಅವ್ಯವಸ್ಥೆಯ ಆಗರವೆಂದು ನಮ್ಮ ಮಾಧ್ಯಮಗಳು ಈ ಸಮ್ಮೇಳನಕ್ಕೆ ಹಣಿಪಟ್ಟಿ ಕಟ್ಟಿದ್ದರೂ, ಈ ಹಿಂದಿನ ಸಮ್ಮೇಳನಗಲ್ಲೂ ಒಂದೆರಡು ದಿನಗಳ ಮಟ್ಟಿಗಾದರೂ ಭಾಗವಹಿಸುತ್ತಲೇ ಇರುವ ನನಗೆ ಅದೇನೂ ವಿಶೇಷ ಎನ್ನಿಸಲೇ ಇಲ್ಲ. ಈ ಹಿಂದೆ ತುಮಕೂರಿನ ಸಮ್ಮೇಳನದಲ್ಲಿ ಊಟ ತಿಂಡಿಗಳ ಸರತಿಯಲ್ಲೇ ನಿಂತು ನಿಂತು ಸಮ್ಮೇಳನ ಅವಧಿ ಪೂರೈಸಿದ ಸ್ನೇಹಿತರ ಅನುಭವ ನೆನಪಾಯಿತು. ಶಿವಮೊಗ್ಗದಲ್ಲೂ ಧೂಳಿನ ಜೊತೆಗೇ ವಿವಾದಗಳೂ ಕಣ್ಣಿಗೆ ಬಿದ್ದುದು ಮರೆತು ಹೋಗಿಲ್ಲ. ಕನಕಪುರದಲ್ಲಿ ಸಮ್ಮೇಳನದ ಅಂಗಳದ ತುಂಬ ಭೈರಪ್ಪ ಪರ-ವಿರೋಧದ ಮಾತುಗಳು ಕೈಕೈ ಮಿಲಾಯಿಸುವ ಮಟ್ಟಕ್ಕೆ ಮುಟ್ಟಿದ್ದೂ ನೆನಪ ನೆಲೆಯಿಂದ ದೂರವಾಗಿಲ್ಲ. ಹಾಗೇ ತಾವು ಭಾಗವಹಿಸ ಬೇಕಿರುವ ಗೋಷ್ಠಿಯ ಸಮಯಕ್ಕೆ ಆಗಮಿಸಿ ನಂತರ ಅಂತರ್ಧಾನವಾಗುವ ನಮ್ಮ ಹಿರಿಯ ಬರಹಗಾರ, ಲೇಖಕ, ಚಿಂತಕರ ಆಂತರ್ಯವೂ ಬದಲಾಗಿಲ್ಲ. ಕರೆಯದೇ ಬರಲು ಅವರೇನು ಗತಿಗೆಟ್ಟಿದ್ದಾರಾ ಅಂದರೆ ಪಾಪ ಪ್ರತಿ ಸಮ್ಮೇಳನದಲ್ಲೂ ಒ ಒ ಡಿ ಯ ಆಸೆಯಿಂದ ಬಂದು ಬೀದಿಗಳಲ್ಲೇ ಮಲಗಿ, ಹೊತ್ತು ಹೊತ್ತಿಗೆ ಊಟ ತಿಂಡಿಗಳಿಲ್ಲದೇ ಪರಿತಪಿಸಿಯೂ ಮತ್ತೆ ಮುಂದಿನ ಸಮ್ಮೇಳನ ಯಾವ ಊರಲ್ಲಿ ನಡೆಯುತ್ತೆ, ಅಲ್ಲಾದರೂ ಈ ನಾಯಿ ಪಾಡು ತಪ್ಪಲಿ ಎಂದು ಅಂದುಕೊಳ್ಳುತ್ತಲೇ ಬಸ್ಸು ಹತ್ತುವ ಲಕ್ಷಾಂತರ ಸಾಹಿತ್ಯಾಸಕ್ತ ಬಂಧುಗಳ ಅಲವತ್ತುಗಳನ್ನು ದಾಖಲಿಸಿದವರಾದರೂ ಯಾರು? ಚಿತ್ರದುರ್ಗದಿಂದ ವಾಪಸು ಬಂದು ಎರಡು ದಿನವಾದರೂ ಭವ್ಯ ವೇದಿಕೆ ಮತ್ತು ಪುಸ್ತಕದಂಗಡಿಗಳ ಸಾಲು ಮತ್ತೆ ಮತ್ತೆ ನೆನಪ ಜೇನನ್ನು ಮನಸ್ಸಿಗೆ ಉಣ್ಣಿಸುತ್ತಲೇ ಇವೆ.

ಹಾಗೆ ನೋಡಿದರೆ ನಮ್ಮ ಮಾಧ್ಯಮಗಳು ಬಿಂಬಿಸದಷ್ಟೇನೂ ವ್ಯವಸ್ಥೆ ಕೆಟ್ಟಿರಲಿಲ್ಲ. ಎಲ್ಲ ಸಮ್ಮೇಳನಗಳಲ್ಲೂ ನಡೆಯುವ ಹಾಗೇ ಈ ಸಮ್ಮೇಳನದಲ್ಲೂ ಯಾವ ಗೋಷ್ಠಿಗಳೂ ಸರಿಯಾದ ಸಮಯಕ್ಕೆ ಪ್ರಾರಂಭವಾಗಲಿಲ್ಲ. ಹಾಗಾಗಿ ಹೊತ್ತಿಗೆ ಸರಿಯಾಗಿ ಮುಗಿಯಲಿಲ್ಲ. ಅದರ ಕಾರಣದಿಂದ ಮುಂದಿನ ಗೋಷ್ಠಿಗಳೂ ಮುಂದು ಮುಂದಕ್ಕೆ ಹೋದವು, ಅಷ್ಟೆ! ಎಲ್ಲ ಕಡೆ ನಡೆಯುವ ಹಾಗೇ ಇಲ್ಲೂ ಸಾಹಿತ್ಯಕ್ಕಿಂತಲೂ ಸಾಹಿತ್ಯೇತರ ಸಂಗತಿಗಳಾದ ಕೃಷಿ, ಕೈಗಾರಿಕೆ, ರಾಜಕೀಯ, ಇತ್ಯಾದಿ ವಿಷಯಗಳಲ್ಲಿ ಚರ್ಚೆ-ಗೋಷ್ಠಿಗಳು ಎಡವುತ್ತೆಡುವತ್ತಲೇ ನಡೆದುವು. ಎಲ್ಲೆಲ್ಲಿ ರಾಜಕೀಯದವರನ್ನೂ, ಖಾಕಿಕಾವಿಗಳನ್ನೂ ಮನಬಂದಂತೆ ಹಳಿಯಲಾಯಿತೋ ಅಲ್ಲೆಲ್ಲ ಚಪ್ಪಾಳೆಗಳು ಮುಗಿಲು ಮುಟ್ಟಿದವು. ಆದರೆ ಊಟದ ವ್ಯವಸ್ಥೆಯಲ್ಲಿ, ಅಸ್ತವ್ಯಸ್ಥತೆಯನ್ನು ತಡೆಯುವುದರಲ್ಲಿ, ಇದೇ ಖಾಕಿ ಕಾವಿಗಳು ಹೆಣಗುತ್ತಿದ್ದುದನ್ನು ಅಪ್ಪಿತಪ್ಪಿ ಬಾಯಿ ಮಾತಿಗಾದರೂ ಹೇಳಲೇ ಇಲ್ಲ. ಇನ್ನು ಗೋಷ್ಠಿಗಳೋ ಅವುಗಳ ಸ್ವರೂಪಗಳೋ ಕಳೆದ ಎಪ್ಪತ್ತನಾಲ್ಕು ಸಮ್ಮೇಳನಗಳಲ್ಲಿ ನಡೆದುದರ ಪುನರಾವರ್ತನೆಯೇ! ಗೋಷ್ಠಿಗಳಲ್ಲಿ ಭಾಗವಹಿಸದವರಲ್ಲಿ ಬಹುತೇಕರು ಆಯಾ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿದವರಿದ್ದರೂ ಆಯ್ಕೆಯಲ್ಲಿ ಅನಿವಾರ್ಯ ಒತ್ತಡಗಳು ಇದ್ದೇ ಇರುತ್ತವೆ ಎನುವುದಕ್ಕೆ ಪುರಾವೆಯಾದುವು. ಸ್ವತಃ ಸಮ್ಮೇಳನಾಧ್ಯಕ್ಷರೇ ಅದರಿಂದ ಹೊರಗುಳಿದು ಹೊಸ ಭಾಷ್ಯ ಬರೆದ ವಿಶೇಷಕ್ಕೂ ಈ ಸಮ್ಮೇಳನವೇ ಮುನ್ನುಡಿ ಬರೆದುದೂ ಸ್ವಾರಸ್ಯ ದ ಸಂಗತಿ.

ಹಲವರಂತೆ ನಾನೂ ಸಮ್ಮೇಳನಗಳಲ್ಲಿ ಭಾಗವಹಿಸುವುದು ರಾಜ್ಯಾದ್ಯಂತ ಇರುವ ನನ್ನ ಅನೇಕ ಸ್ನೇಹಿತರೂ ಹಿರಿಯ ಬರಹಗಾರರೂ ಅಲ್ಲಿನ ಪುಸ್ತಕದಂಗಡಿಗಳಲ್ಲಿ ಸಿಕ್ಕೇ ಸಿಕ್ಕುತ್ತಾರೆನ್ನುವ ವಿಶ್ವಾಸದಿಂದ. ಮತ್ತು ಹಾಗೆ ಸಿಕ್ಕವರೊಡನೆ ನನ್ನ ಅನ್ನಿಸಿಕೆಗಳನ್ನೂ ಹಾಗೇ ಅನುಮಾನಗಳನ್ನೂ ಹಂಚಿಕೊಳ್ಳುವ ಮುಕ್ತ ಅವಕಾಶದ ಆಸೆಯಿಂದ. ಜೊತೆಗೇ ನನ್ನ ಸಹಬರಹಗಾರರ ತವಕ ತಲ್ಲಣಗಳನ್ನು ಮತ್ತವರ ಕಷ್ಠ ಸುಖಗಳನ್ನು ಮುಖತಾ ಹಂಚಿಕೊಳ್ಳಬಹುದೆನ್ನುವ ದುರಾಸೆಯಿಂದ!

ಆದರೆ ಈ ಸಮ್ಮೇಳನದಲ್ಲಿ ಹಿರಿಯ ಬರಹಗಾರರಿರಲಿ ಚಿತ್ರದುರ್ಗ ಸೀಮೆಯ ಅನೇಕ ಯುವ ಬರಹಗಾರರಾರೂ ಸಿಕ್ಕಲಿಲ್ಲ. ಸ್ವತಃ ಆ ಜಿಲ್ಲೆಯವರಾಗಿದ್ದೂ ಈಗಾಗಲೇ ತಮ್ಮ ಸಂಕಲನಗಳಿಂದ ಸಂಚಲನಗೊಳಿಸಿದ ಎಚ್.ಆರ್.ರಮೇಶ, ಆನಂದ ಋಗ್ವೇದಿ, ತಾರಿಣಿ, ಪಕ್ಕದ ಜಿಲ್ಲೆಯ ಅರುಣ ಜೋಳದಕೂಡ್ಲಿಗಿ, ಪೀರ ಭಾಷಾ, ಇವರಾರೂ ಕವಿಗೋಷ್ಠಿಯಲ್ಲಿ ಅಹ್ವಾನಿತರಾಗಿರಲೇ ಇಲ್ಲ. ಅಹ್ವಾನಿತ ಕವಿಗಳ ಪಟ್ಟಿ ಸಾಕಷ್ಟು ದೊಡ್ಡದಿದ್ದರೂ ಅಷ್ಟಿಷ್ಟು ಓದಿಕೊಂಡಿರುವ ಮತ್ತು ವರ್ತಮಾನದಲ್ಲಿ ಸಾಹಿತ್ಯ ಕೃಷಿ ಮಾಡುತ್ತಿರುವವರ ಹೆಸರುಗಳನ್ನು ಬಲ್ಲೆನೆಂಬ ನನ್ನ ವಿಶ್ವಾಸವನ್ನು ಆ ಪಟ್ಟಿ ಅಣಕಿಸಿತು. ನಾಲ್ಕೈದು ಹೆಸರುಗಳನ್ನು ಪತ್ರಿಕೆಗಳಲ್ಲಿ ಪ್ರಕಟವಾಗುವ ಕವಿತೆಗಳ ಮೂಲಕ ಗುರುತಿಸಿ ಹೊರತು ಪಡಿಸ ಬಹುದೇ ವಿನಾ ಉಳಿದವರೂ ಕವಿಗಳೆಂದು ಗೊತ್ತ್ತಾಗಿದ್ದೇ ನಿರೂಪಕರು ಅವರ ಕೃತಿಗಳನ್ನು ಹೆಸರಿಸಿದ ನಂತರ.

ಮೊದಲ ಕವಿಗೋಷ್ಠಿಯ ಆಶಯ ಭಾಷಣಮಾಡಿದ ಎಲ್.ಹನುಮಂತಯ್ಯನವರು ತಾವು ನೆಚ್ಚಿದ ಬಂಡಾಯದ ನೆಲೆಯನ್ನು ಮತ್ತೆ ಪ್ರಸ್ತಾಪಿಸುತ್ತಲೇ ಪದ್ಯವೊಂದನ್ನು ಓದಿದ ರೀತಿ ಪುಳಕಗೊಳಿಸಿತು. ಹನುಮಂತಯ್ಯ ಈಗಾಗಲೇ ಇಂಥ ಹತ್ತು ಹಲವು ಗೋಷ್ಠಿಗಳಲ್ಲಿ ಭಾಗವಹಿಸಿ ಇದೇ ಬಗೆಯ ಹತ್ತಿಪ್ಪತ್ತು ಭಾಷಣಗಳನ್ನು ನಮಗೆಲ್ಲ ಉಣಬಡಿಸಿದವರು. ಹಾಗೇ ಅಧ್ಯಕ್ಷತೆ ವಹಿಸಿದ್ದ ಸುಮತೀಂದ್ರ ನಾಡಿಗರಂತೂ ಅವರ ಪದ್ಯಗಳಿಗಿಂತಲೂ ಮಾತಿಗೆ ನಿಂತರೆ ಮುಗಿಸದ ಖ್ಯಾತಿಯವರು. ತಮ್ಮ ಹಳೆಯ ಎರಡು ಪದ್ಯಗಳನ್ನು ಅವರು ಆಕರ್ಷಕವಾಗಿ ಮಂಡಿಸಿದರಾದರೂ ಅವರು ಅಧ್ಯಕ್ಷೀಯ ಭಾಷಣವನ್ನು ಮಾಡಲಿಲ್ಲವೆನ್ನುವುದು ನನ್ನ ತಕರಾರು. ಕವಿಗೋಷ್ಠಿಯ ಅಧ್ಯಕ್ಷರು ಆ ಗೋಷ್ಠಿಯಲ್ಲಿ ಮಂಡಿಸಿದ ಕವಿತೆಗಳನ್ನು ಅವುಗಳ ವಿಷೇಷತೆಯನ್ನೂ ಹಾಗೇ ಕಾವ್ಯ ಹೊರಳಿದ ಹೊಸದಿಕ್ಕನ್ನೂ ಗುರ್ತಿಸಿ ಹೇಳಬೇಕಾದ ಜವಾಬ್ದಾರಿ ಇರುವಂಥವರು. ಅದರೆ ನಮ್ಮ ಮಾಧ್ಯಮಗಳು ಕಾಯುತ್ತಿರುತ್ತವೆ ಮತ್ತು ಗೋಷ್ಠಿಯ ಕಡೆಯವರೆಗೂ ಕೂರುವ ತಾಳ್ಮೆ ಕೆಲವರಿಗಿರುವುದಿಲ್ಲವೆಂಬ ನೆಪಒಡ್ಡಿ ಆಹ್ವಾನಿತ ಕವಿಗಳು ತಮ್ಮ ಪದ್ಯಗಳನ್ನು ಪ್ರಸ್ತುತಿಗೊಳಿಸುವ ಮೊದಲೇ ಅಧ್ಯಕ್ಷೀಯ ಮಾತುಗಳನ್ನು ಮುಗಿಸಿಬಿಡುವುದು ವರ್ತಮಾನದ ಕಾವ್ಯಕೃಷಿಕರಿಗೆ ತೋರಿಸುತ್ತಿರುವ ಅನಾದರವೆಂದೇ ನಾನು ಭಾವಿಸಿದ್ದೇನೆ. ಹಾಗೆಯೇ ಕಾವ್ಯಾಸಕ್ತರಾರಿಗೂ ಗೊತ್ತಿರದ ಮತ್ತು ಕೇವಲ ಪ್ರಾತಿನಿಧ್ಯದ ದೃಷ್ಟಿಯಿಂದಲೇ ತಯಾರಿಸುವ ಈ ಕವಿಪಟ್ಟಿಗೂ ನನ್ನ ಪರಮ ವಿರೋಧವನ್ನು ದಾಖಲಿಸುತ್ತಲೇ ಬಂದಿದ್ದೇನೆ. ಈ ಸಮ್ಮೇಳನದಲ್ಲೂ ನಿಜವಾದ ಕವಿತೆಗಳನ್ನು ಓದಿದವರು ಲಕ್ಷೀಪತಿ ಕೋಲಾರ, ಕಂಜರ್ಪಣೆ, ಬ.ಹ.ರಮಾಕುಮಾರಿ, ಬಿಳಿಗೆರೆ ಮತ್ತು ಹೆಸರು ನೆನಪಲ್ಲಿ ಉಳಿಯದ ಇನ್ನಿಬ್ಬರು ಮಾತ್ರ. ಗೆಳೆಯ ನಿಸಾರ್ ತನ್ನ ಕವಿತೆಯನ್ನು ಆಕರ್ಷಕವಾಗಿ ಮಂಡಿಸಿದನಾದರೂ ಆ ಬಗೆಯ ಕವಿತೆಗಳು ಕೇವಲ ಹೇಳಿಕೆಗಳಾಗುತ್ತವೆ ಮತ್ತು ಯಾರೂ ಬರೆಯಬಹುದಾದ ಸಾಲುಗಳಾಗುತ್ತವೆ ಎನ್ನುವುದನ್ನು ಮರೆಯಬಾರದು. ಕೆಲವು ಕವಿಗೋಷ್ಠಿಗಳಲ್ಲಿ ಖಾಲಿ ಕುರ್ಚಿಗಳಿಗೆ ಪದ್ಯ ಓದುವ ಅನಿವಾರ್ಯತೆಗಾಗಿ ಸಂಕಟ ಪಟ್ಟಿರುವ ನಾನು ದುರ್ಗದ ಕವಿಗೋಷ್ಠಿಯಲ್ಲಿ ಇಡೀ ಸಭಾಂಗಣ ಕಿಕ್ಕಿರಿದು ತುಂಬಿದ್ದ ಅಪ್ರತಿಮ ಕ್ಷಣಗಳಿಗೆ ಸಂತಸ ಪಟ್ಟಿದ್ದೇನೆ. ಹಾಗೆಯೇ ತುಂಬಿದ ಸಭೆಗೆ ಕಿಂಚಿತ್ತೂ ಸಾಥ್ ಕೊಡದ ಕವಿಗಣದ ಉಢಾಫೆಗೆ ಮರುಕ ಪಟ್ಟಿದ್ದೇನೆ.

ಕವಿಗೋಷ್ಠಿ ನಡೆಯುತ್ತಿರುವಾಗಲೇ ಅದಕ್ಕೆ ಜಯಂತ ಕಾಯ್ಕಿಣಿಯ ಸಾರಥ್ಯ ಸಿಕ್ಕು, ಸಂಧ್ಯಾದೇವಿ ಉದ್ಘಾಟಿಸಿ ಕವಿಪಟ್ಟಿಯಲ್ಲಿ ಎಸ್.ಮಂಜುನಾಥ್, ಪ್ರತಿಭಾ ಒಳಗೊಂಡಂತೆ ನಮ್ಮ ತಲೆಮಾರಿನ ಹತ್ತು ಹಲವು ಹೆಸರುಗಳನ್ನು ಕಲ್ಪಿಸಿಕೊಳ್ಳುತ್ತ ಹೋದೆ. ಆ ಕಲ್ಪನೆಯೇ ಒಂದು ಕವಿತೆಯಾಗಿ ಸಂತಸ ಮೈತುಂಬಿಕೊಳ್ಳುತ್ತಿರುವಾಗಲೇ ದುರ್ಗದ ರೈಲ್ವೇ ನಿಲ್ದಾಣವನ್ನು ಹೊತ್ತಿಗೆ ಸರಿಯಾಗಿ ಸೇರದಿದ್ದರೆ ಓಓಡಿ ಸೌಲಭ್ಯವಿಲ್ಲದ ನಾನು ಮಾರನೇ ದಿನಕ್ಕೂ ರಜೆ ಕೊಡಬೇಕಾಗುತ್ತದೆನ್ನುವ ನಿಜವಾಸ್ತವ ನೆನಪಾಗಿ ಸಮ್ಮೇಳನದ ಅಂಗಳದಿಂದ ನಿರ್ಗಮಿಸಿದೆ.

ಊರು ತಲುಪವವರೆಗೂ ಕಂಜರ್ಪಣೆಯವರೊಂದಿಗೆ ಕೆ.ಪಿ.ಸುರೇಶರ ಹೊಸ ಸಂಕಲನದ ಪದ್ಯಗಳನ್ನು , ವಸುದೇಂಧ್ರ ತಮ್ಮ ಅಂಗಡಿಯಲ್ಲಿ ಪುಸ್ತಕ ಮಾರುತ್ತಿದ್ದ ರೀತಿಯನ್ನು ಹಾಗೇ ಸಂಚಯದ ಸ್ಟಾಲಿನಲ್ಲಿ ಕನಸು ಕಂಡಿದ್ದ ಕವಿಗೋಷ್ಠಿ ಖದರು ಕಳೆದುಕೊಂಡುದನ್ನೂ ಮೆಲ್ಲುತ್ತ ಪ್ರಯಾಣಿಸಿದೆ. ಈಗ ನನ್ನೆದುರು ನಮ್ಮ ಪತ್ರಿಕೆಗಳು ಪ್ರಕಟಿಸಿದ ನಾಲ್ಕೂ ದಿನದ ಸಮ್ಮೇಳನದ ವಿವರಗಳನ್ನು ಹರಡಿಕೊಂಡಿದ್ದೇನೆ. ಉಡುಪಿಯಲ್ಲಿ ನಡೆದುದೇ ತುಮಕೂರಲ್ಲಿ ಘಟಿಸಿದುದೇ ಅಥವಾ ಕನಕಪುರದಲ್ಲಿ ಅಪ್ಪಳಿಸಿದ ಅಲೆಗಳೇ ಇಲ್ಲಿಯೂ ಮುಂದುವರೆದಿದೆ, ವರದಿಗಾರರ ಹೆಸರುಗಳೂ ವರದಿಗಾರಿಕೆಯ ರೀತಿಯೂ ಹೆಚ್ಚೇನೂ ಬದಲಾಗಿಲ್ಲ. ಇನ್ನು ಸಾಹಿತ್ಯ ಮಾತ್ರ ಸಮಾಜವನ್ನು ಬದಲಿಸಿಬಿಡುತ್ತದೆಂಬ ಹೇಳಿಕೆ ಎಷ್ಟು ಸರಿ ಎಷ್ಟು ತಪ್ಪು ಎಂಬ ಗೊಂದಲದಲ್ಲಿ ಉಳಿದಿದ್ದೇನೆ.

ಭಾನುವಾರ, ಜನವರಿ 25, 2009

ತಪಸ್ಸೆಂಬ ತಾಪ

‘ತಪಸ್ಸು’ ಎಂಬ ಪದವನ್ನು ನಿತ್ಯದ ಮಾತುಗಳಲ್ಲಿ ನಾವೆಲ್ಲ ಬಳಸುತ್ತಲೇ ಇರುತ್ತೇವೆ. ತಪಸ್ಸು ಎಂಬ ಪದ ‘ತಪ್’ ಧಾತುವಿನಿಂದ ನಿಷ್ಪನ್ನವಾದ ಪದ. ಅಂದರೆ ಕಷ್ಟ ಪಡು ಎಂದರ್ಥ. ಒಂದು ಉದ್ದೇಶ ಸಾಧನೆಗಾಗಿ ದೈಹಿಕ ಕಾಮನೆಗಳನ್ನು, ಲೌಕಿಕದ ಸುಖಸವಲತ್ತುಗಳನ್ನು ಸ್ವಯಂಪ್ರೇರಣೆಯಿಂದ ಬಿಟ್ಟುಕೊಟ್ಟು ಕಷ್ಟಕ್ಕೆ ಒಡ್ಡಿಕೊಳ್ಳುವುದು ತಪಸ್ಸು. ಹಿಮಾಲಯದ ತಪ್ಪಲಿಗೋ, ಗುಹೆಯ ಏಕಾಂತಕ್ಕೋ ತೆರಳಿದ ಮಾತ್ರಕ್ಕೇ ತಾಪಕ್ಕೆ ಸಿಲುಕಿದವರೆಲ್ಲ ತಪಸ್ವಿಗಳಾಗುವುದಿಲ್ಲ. ಸಂಕಲ್ಪವನ್ನು ಸ್ವಶಕ್ತಿಯ ಮೂಲಕ ಸಿದ್ಧಿಯ ನೆಲೆಗೆ ಒಯ್ಯುವುದು ತಪಸ್ಸಿನ ಉದ್ದೇಶ. ಅದರ ಪರಿಕಲ್ಪನೆ ವೇದೋಪನಿಷತ್ತುಗಳ ಕಾಲದಿಂದಲೂ ಪರಂಪರೆ ನಮಗೆ ಕಲಿಸುತ್ತ ಬಂದಿದೆ. ಮನಸ್ಸು ಮತ್ತು ಇಂದ್ರಿಯಗಳ ಮೇಲಿನ ಅಪಾರ ಹಿಡಿತವೇ ತಪಸ್ಸಿನ ಮೂಲ. ಪಂಚೇದ್ರಿಯಗಳಾದ ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮಗಳು ಲೌಕಿಕದ ವಿವಿಧ ಸಂವೇದನೆಗಳನ್ನು ಮೊಗೆಮೊಗೆದು ಮನಸ್ಸಿನ ಕಣಜದೊಳಗೆ ತುಂಬುತ್ತಲೇ ಇರುತ್ತವೆ. ಹಾಗೆ ಸಿಕ್ಕ ಸಂವೇದನೆಗಳನ್ನು ಅನುಭವಿಸುವಂತೆ ಮನಸ್ಸು ದೇಹವನ್ನು ಪ್ರಚೋದಿಸುತ್ತದೆ. ಪ್ರಲೋಭನೆಗೆ ಒಳಗಾದಾಗ ಸಹಜವಾಗಿ ಚಂಚಲವಾಗುವ ಮನಸ್ಸು ದೇಹದ ಮೇಲಿನ ಹಿಡಿತವನ್ನು ಕಳೆದುಕೊಳ್ಳುತ್ತದೆ. ಆಕರ್ಷಣೆಯ ಸುಳಿಗೆ ಸಿಕ್ಕ ದೇಹ ಉತ್ಕಂಠಿತತೆಯ ಮೋಹದಲ್ಲಿ ಪರಿವೆಯ ಇರವನ್ನೇ ಮರೆಮಾಚುತ್ತದೆ.

ಸಿದ್ಧಿ ಮತ್ತು ಸಾಧನೆಯ ಉದ್ದೇಶವಿದ್ದವರು ಸಹಜವಾಗಿ ಲೌಕಿಕ ಒಡ್ಡುವ ಆಮಿಷಗಳಿಂದ ಹೊರಗಿರಲು ಪ್ರಯತ್ನಿಸುತ್ತಲೇ ಇರುತ್ತಾರೆ. ಒಮ್ಮೆ ಸಿದ್ಧಿ ಕೈ ವಶವಾಯಿತೆಂದರೆ ನಂತರ ಲೌಕಿಕದ ಯಾವ ಆಮಿಷಗಳೂ ಸಿದ್ಧಿಸಿದ ಬಲದ ಮುಂದೆ ಅಗಣ್ಯವಾಗುತ್ತವೆ. ದುರಂತವೆಂದರೆ ಸಾಧನೆಯ ಹೊಸ್ತಿಲು ಮುಟ್ಟಿದೊಡನೆಯೇ ಅದು ತಮ್ಮ ಪಾಲಿಗೆ ಸಿದ್ಧಿಸಿತೆಂದು ಭಾವಿಸುವ ಅಲ್ಪಮತಿಗಳು ಲೌಕಿಕ ಒಡ್ಡುವ ಮಾನ, ಸನ್ಮಾನಗಳ, ಭರದಲ್ಲಿ ಸಿಲುಕಿ ಸ್ವಲ್ಪದರಲ್ಲೇ ಸಿಗಬಹುದಾಗಿದ್ದ ಸಿದ್ಧಿಯಿಂದ ಬಹು ಬೇಗ ಬಲುದೂರಕ್ಕೆ ಕ್ರಮಿಸಿಬಿಡುತ್ತಾರೆ. ಸಿದ್ಧಿ ಎಂಬುದು ಆಗ ಅಂಥವರಿಗೆ ಎಟುಕದ ನಕ್ಷತ್ರವಾಗುತ್ತದೆ. ಸದಾ ಚಂಚಲತೆಗೆ ಸಿಕ್ಕು ಇಂದ್ರಿಯದ ಹತೋಟಿಯನ್ನು ಕಳೆದುಕೊಳ್ಳುವ ಮನಸ್ಸನ್ನು ನಿಗ್ರಹಿಸುವ ಕ್ರಿಯೆ ಅತಿ ಕಷ್ಟಕರವಾದುದು. ಅದು ತಾಪದಾಯ್ಕವಾದುದು. ಸದಾ ಸುಡುತ್ತಲೇ ಇರುವಂಥದು. ಆದುದರಿಂದಲೇ ಅದು ತಪಸ್ಸು.

ನಮ್ಮ ಪ್ರಾಚೀನ ಪರಂಪರೆಯಲ್ಲಂತೂ ತಪಸ್ಸಿನ ಪ್ರಸ್ತಾಪ ಆಗಾಗ ಬರುತ್ತಲೇ ಇರುತ್ತದೆ. ದೇವಗಂಗೆಯನ್ನು ಪಿತೃಮೋಕ್ಷಕ್ಕಾಗಿ ಧರೆಗೆ ತಂದ ಭಗೀರಥನ ಹೆಸರಂತೂ ಸರ್ವದಾ ಪ್ರಸ್ತಾಪ ಯೋಗ್ಯವಾದುದೇ ಆಗಿದೆ. ವಿಶ್ವಾಮಿತ್ರನೆಂಬ ಸಾಮಾನ್ಯ ಬ್ರಹ್ಮರ್ಷಿ ಎಂಬ ಅಸಾಮಾನ್ಯ ಪದವಿ ಪಡೆದುದರ ಹಿಂದೆ ತಪಸ್ಸಿನ ಬಲವಿದೆ. ಗಾಂಧಿ ಬಸವರೂ ತಪಸ್ವಿಗಳಾಗಿದ್ದಕ್ಕೇ ಲೌಕಿಕದ ಆಮಿಷಗಳನ್ನು ಗೆದ್ದು ತಮ್ಮ ಸಾಧನೆಯ ದಾರಿಯನ್ನು ಲೋಕಕ್ಕೆ ತಿಳಿಸಲು ಸಾಧ್ಯವಾದದ್ದು. ಸಂಕಲ್ಪವೆಂಬುದು ಸಿದ್ಧಿಯಾಗಿ ಬದಲಾದಾಗ ತಪಸ್ಸಿನ ಉದ್ದೇಶ ಪರಿಪೂರ್ಣವಾಗುತ್ತದೆ. ‘ತಪೋ ಬ್ರಹ್ಮೇತಿ’ ಎನ್ನುತ್ತದೆ ಉಪನಿಷತ್ತು. ಭಗವದ್ಗೀತೆ ತಪಸ್ಸನ್ನು ಮೂರು ಬಗೆಯಲ್ಲಿ ವಿಭಾಗಿಸಿ ಕಾಯಿಕ, ವಾಚಿಕ ಮತ್ತು ಮಾನಸಿಕ ಎಂದು ಹೆಸರಿಸುತ್ತದೆ. ಶುಚಿತ್ವ, ಸರಳತೆ, ಬ್ರಹ್ಮಚರ್ಯ, ಅಹಿಂಸೆ ಇವ್ಯ್ ಕಾಯಿಕ ತಪಸ್ಸಿನ ಧಾತುಗಳು. ಉದ್ವೇಗಕ್ಕೆ ಅವಕಾಶ ಕೊಡದೇ ಹಿತವೂ, ಪ್ರಿಯವೂ, ಸತ್ಯವೂ ಆದ ಮಾತನಾಡುವುದು ವಾಚಿಕ ತಪಸ್ಸು. ಮನಸ್ಸನ್ನು ಹದಗೊಳಿಸಿಕೊಂಡು ಆಹ್ಲಾದತೆಯನ್ನು ಕಾಪಾಡಿಕೊಳ್ಳುವುದು, ಇಂದ್ರಿಯಗಳನ್ನು ನಿಗ್ರಹಿಸಿಕೊಳ್ಳುತ್ತಲೇ ಭಾವಶುದ್ಧಿಯನ್ನು ಕಾಪಾಡಿಕೊಳ್ಳುವುದು ಮಾನಸಿಕ ತಪಸ್ಸು. ಕಾಯಿಕ ಮತ್ತು ವಾಚಿಕ ತಪಸ್ಸುಗಳನ್ನು ನಮ್ಮದಾಗಿಸಿಕೊಳ್ಳಬಹುದಾದರೂ ಮಾನಸಿಕ ತಪಸ್ಸು ಸುಲಭಕ್ಕೆ ಒಗ್ಗಿ ಬಗ್ಗುವಂಥದಲ್ಲ. ಅದಕ್ಕೆ ಅಚಲ ಸಂಕಲ್ಪ ಮತ್ತು ಸತತ ಸಾಧನೆ ಬೇಕಾಗುತ್ತದೆ. ವಿದ್ಯಾರ್ಥಿಯೊಬ್ಬ ತನ್ನ ಓದಿನಲ್ಲಿ ಹಿರಿದನ್ನು ಸಾಧಿಸಬೇಕಾದರೆ ಅವನಿಗೆ ತಾನು ವಿದ್ಯಾರ್ಥಿ ಎಂಬ ಅರಿವಿನ ಜೊತೆಜೊತೆಗೇ ತಾನು ಸಾಗಬೇಕಾದ ದಾರಿಯ ಸ್ಪಷ್ಟ ಕಲ್ಪನೆ ಇರಬೇಕಾಗುತ್ತದೆ. ಗೊಂದಲಕ್ಕೆ ಬಿದ್ದ ಹಾಗೆಲ್ಲ ಅವನ ಶೈಕ್ಷಣಿಕ ಶ್ರೇಯಾಂಕಗಳು ಕಡಿಮೆಯಾಗುತ್ತ ಹೋಗುತ್ತವೆ. ಈ ಮಾತು ಕಲೆ, ಸಾಹಿತ್ಯ, ವಿಜ್ಞಾನ, ಆಧ್ಯಾತ್ಮ, ಕೃಷಿ, ವಾಣಿಜ್ಯ- ಹೀಗೆ ಬದುಕಿನ ಎಲ್ಲ ಕ್ಷೇತ್ರಗಳಿಗೂ ಅನ್ವಯಿಸುತ್ತದೆ.

ತಪಸ್ಸು ಎಂಬುದು ಜಟಾಜೂಟಗಳನ್ನು ಬಿಟ್ಟುಕೊಂಡು ಮರವೊಂದರ ಕೆಳಗೆ ಕೂತ ಮಾತ್ರಕ್ಕೆ ಎಟುಕುವಂಥದಲ್ಲ. ತೋರುಗಾಣಿಕೆಗೇ ತಪಸ್ಸಿಗೆ ಕೂತವರ ಮಾತು ಬೇರೆ!. ತಪಸ್ಸು ಎಂಬುದು ಸವೆದುಹೋದ ಅರ್ಥಕಳಕೊಂಡ ಪದವಲ್ಲ. ಅದು ಎತ್ತೆತ್ತರದ ಸುಮೇರುಗಳಿಗೆ ಮನುಷ್ಯನ ಮನಸ್ಸನ್ನು ಒಯ್ಯುವ ಮತ್ತು ಅಂಥ ಎತ್ತರದಲ್ಲೂ ವಿನಮ್ರತೆಯನ್ನು ಕಾಪಾಡಿಕೊಳ್ಳುವ ಕಲೆಯನ್ನು ಕಲಿಸುವ ವಿಷಿಷ್ಟ ಬೆರಗು. ನಮ್ಮ ಸಣ್ಣತನಗಳನ್ನು ಕಳೆದು ಹೊಸ ಎತ್ತರಗಳನ್ನು ಕೊಡುವ ಸಾಧನ.

ಬುಧವಾರ, ಜನವರಿ 21, 2009

ವ್ರುತ್ತದೊಳಗಿನ ಬದುಕು

ಬದುಕು ವಿಸ್ತಾರವಾದುದು. ಅದಕ್ಕೆ ಚೌಕಟ್ಟನ್ನು ಕಟ್ಟಿದಷ್ಟೂ ದೃಷ್ಟಿಗೆ ಮಿತಿ ಬರುತ್ತದೆ. ಮಿತಿಗಳಾಚೆಯೇ ಇರುವ ಬದುಕು ಸುಲಭಕ್ಕೆ ದಕ್ಕುವುದಿಲ್ಲ. ಮಿತಿಯೊಳಗೇ ನಾವು ಬದುಕಿದರೆ, ಚಿಂತಿಸಿದರೆ ನಮ್ಮಾಚೆಗೂ ಇರುವ ಬದುಕ ಮಜಲು ನಮಗೆ ಅರ್ಥವೇ ಆಗುವುದಿಲ್ಲ. ಹೀಗೆಲ್ಲ ಮಾತಿಗೆ ಹೇಳಬಹುದಾದರೂ ಮೂಲತಃ ನಾವೆಲ್ಲ ನಮ್ಮ ನಮ್ಮ ಮಿತಿಯೊಳಗೇ ಬದುಕ ಕಡಲನ್ನು ಈಜುವ ಅಭ್ಯಾಸ ಮಾಡಿಕೊಂಡಿರುತ್ತೇವೆ. ಹಳ್ಳ, ಕೆರೆ, ಬಾವಿಗಳಲ್ಲಿ ಸುಲಭವಾಗಿ ಈಜುವವರು ಸಮುದ್ರಕ್ಕೆ ಹೆದರಬಹುದು. ಆಳ ಅಗಲಗಳ ಪರಿವೆಯಿಲ್ಲದೇ ಸಿಕ್ಕ ಸಿಕ್ಕ ನೀರಿಗೆ ಧುಮುಕುವುದೂ ಅಪಾಯದ ಮಾತೇ. ಹಾಗಾಗಿಯೇ ನಾವೆಲ್ಲ ನಮಗೆ ಗೊತ್ತಿರುವ ದೇಶ ಮತ್ತು ಭಾಷೆಗಳಲ್ಲಿ ಬದುಕಲು ಇಚ್ಛಿಸುತ್ತೇವೆ. ಗೊತ್ತಿದ್ದೂ ನಾಲ್ಕು ಗೋಡೆಗಳ ಬಂಧನದಲ್ಲಿ, ಕಿಟಕಿ, ಬಾಗಿಲು, ಪರದೆಗಳ ಹಂಗಿನಲ್ಲೇ ಇರಲು ಇಚ್ಛಿಸುತ್ತೇವೆ. ನಮಗೆಲ್ಲರಿಗೂ ಪ್ರಿಯವಾದ ಏಕಾಂತದಲ್ಲಿ ಇದ್ದುಬಿಡಲು ಪ್ರಯತ್ನಿಸುತ್ತೇವೆ. ಜೊತೆ ಜೊತೆಗೇ ನಾವೇ ಸೃಷ್ಟಿಸಿಕೊಂಡ ಈ ಮಿತಿಯನ್ನು ಮೀರುವ ಮತ್ತು ಹೊರಗಿರುವ ವಿಸ್ತಾರ ಬಯಲನ್ನು ಅದು ಕೊಡುವ ಸ್ವಾತಂತ್ರ್ಯದ ಬಗೆಯನ್ನೂ ಯೋಚಿಸುತ್ತಲೇ ಇರುತ್ತೇವೆ. ಬಯಲಲ್ಲಿ ಬೀಳಬಹುದಾದ ಮಂಜು ಮತ್ತು ಗಾಳಿಯ ಕಲ್ಪನೆ ತಿಳಿಯಿತೋ ಪುನಃ ನಮ್ಮ ನಾಲ್ಕು ಗೋಡೆಗಳ ಬೆಚ್ಚನೆಯ ಮನೆಯತ್ತ ನಡೆಯುತ್ತೇವೆ.

ಬಯಲು ವಿಸ್ತಾರದೊಟ್ಟಿಗೇ ಸ್ವಾತಂತ್ರ್ಯವನ್ನು ಕೊಡಬಹುದಾದರೂ ಅದು ಭಯದ ಮೂಲ. ಅಭದ್ರತೆಯ ಸೇತು. ಏಕೆಂದರೆ ಬಯಲ ಅನಂತತೆಯನ್ನು ಗ್ರಹಿಸುವ ಚಿತ್ತಬಲ ಸುಲಭಕ್ಕೆ ಒಲಿಯುವಂಥದಲ್ಲ. ಸಾಮಾಜಿಕ ಜೀವಿಯಾಗಿ ಒಂದು ಮನೆ, ಮನೆತನ ಮತ್ತು ನಡವಳಿಕೆಗಳಿಗೆ ಮಿತಿಗೊಳಿಸಿಕೊಂಡ ನಮ್ಮ ಚಟುವಟಿಕೆಗಳು ಬಯಲ ಅನುಭವ ಜನ್ಯ ಸತ್ಯಗಳನ್ನು ಅರ್ಥಮಾಡಿಕೊಳ್ಳುವುದನ್ನು ನಿಷೇದಿಸುತ್ತವೆ. ಅಂಥ ಸ್ವಾತಂತ್ರ್ಯವನ್ನು ಇಟ್ಟುಕೊಂಡಿರುವ ಮರ, ಗಿಡ, ಬಳ್ಳಿಗಳು, ಕ್ರಿಮಿ, ಕೀಟ, ಪ್ರಾಣಿಗಳು ಕತ್ತಲೆ, ಬೆಳಕು, ಗಾಳಿ ಸದ್ದುಗಳು ನಮ್ಮನ್ನು ಅಧೀರರನಾಗಿಸುತ್ತವೆ. ಹಾಗಾಗಿಯೇ ಮಿತಿಯ ಅರಿವಿರುವ ಮನುಷ್ಯ ತನ್ನಾಚೆಯ ಜಗತ್ತನ್ನು ಅರಿಯುವುದನ್ನು ಬೇಕೆಂತಲೇ ಮರೆಯುತ್ತಾನೆ. ತನಗೆ ಸಿಕ್ಕಿರುವುದರಲ್ಲೇ ಮೈ ಮರೆಯುತ್ತಾನೆ.

ನಾವೆಲ್ಲ ನಾವು ಬದುಕುತ್ತಿರುವ ಬಗೆಯನ್ನೆ ಅನನ್ಯವನ್ನು ಭಾವಿಸಿದ್ದೇವೆ. ನಾವು ಉಪಜೀವನಕ್ಕೆ ನೆಚ್ಚಿರುವ ಕಸುಬನ್ನೇ ಅಂತಿಮವೆಂದು ಭಾವಿಸಿದ್ದೇವೆ. ನಮ್ಮ ಅನುಭವವನ್ನೇ ಪರಮಸತ್ಯವೆಂದು ನಂಬಿಬಿಟ್ಟಿದ್ದೇವೆ. ನಮ್ಮಾಚೆಗೂ ಒಂದು ಜಗತ್ತಿದೆ. ಅಲ್ಲಿಯೂ ನಮ್ಮಂತೆಯೇ ಯೋಚಿಸುವ, ನಮ್ಮದೇ ತಹತಹಕಿಯ ಜೀವಿಗಳಿದ್ದಾರೆಂದು ಮರೆತುಬಿಟ್ಟಿದ್ದೇವೆ. ಸಮೂಹದ ಸಾಧ್ಯತೆಗಳನ್ನು ನಿರಾಕರಿಸಿದಷ್ಟೂ ನಮ್ಮ ಮಿತಿಯ ವ್ಯಾಸ ಕುಗ್ಗುತ್ತ ಬರುತ್ತದೆ. ದುರಂತವೆಂದರೆ ನಾವೆಲ್ಲ ನಮ್ಮ ಜೀವನವೆ ಭದ್ರವೆಂದು ಅನ್ಯರಿಗೂ ಇರುವ ಇದೇ ಬಗೆಯ ಕಾಳಜಿಯನ್ನು ಮೋಹವೆಮು ಬಗೆಯುತ್ತೇವೆ. ಹಾಗೆಯೇ ನಮ್ಮದು ಮಾತ್ರ ಸಮಸ್ಯೆ. ಉಳಿದವರೆಲ್ಲ ಪಾರಾಗಿದ್ದಾರೆಂದೂ ಭ್ರಮಿಸಿರುತ್ತೇವೆ.

ನಮ್ಮ ಸಮಾಜವನ್ನು ಸಾವಧಾನವಾಗಿ, ಸೂಕ್ಷ್ಮವಾಗಿ ಗಮನಿಸಿದರೆ ಇಂತಹ ನೂರಾರು ವೃತ್ತಗಳು ನಮ್ಮೆಲ್ಲರನ್ನೂ ಸುತ್ತುವರಿದಿರುವ ಸತ್ಯ ಗೋಚರಿಸುತ್ತದೆ. ಒಂದೊಂದಕ್ಕೂ ತನ್ನದೇ ಆದ ವ್ಯಾಸ, ತ್ರಿಜ್ಯ ಮತ್ತು ಕ್ಷೇತ್ರಫಲಗಳಿದ್ದು ಅಂತಹ ಹಲವು ವೃತ್ತಗಳು ನಮ್ಮೆಲ್ಲರ ಬದುಕನ್ನೂ ಆವರಿಸಿರುತ್ತವೆ. ಒಂದೊಂದೂ ಮತ್ತೊಂದಕ್ಕೆ ಸೇರದ ಬೆರೆಯಲಿಚ್ಛಿಸದ ವೃತ್ತಗಳು. ತನ್ನನ್ನು ಸುತ್ತುವರೆದಿರುವ ವೃತ್ತದಾಚೆಗೆಂದೂ ನೋಡದ, ಮತ್ತೊಂದು ವೃತ್ತದಲ್ಲಿರುವವರ ಪರಿಸ್ಥಿತಿಯರಿಯದ ನಮ್ಮ ಈ ಮಿತಿಗಳೇ ಸಾಮಾಜಿಕ ವೈರುಧ್ಯಗಳನ್ನು ಬಿತ್ತುತ್ತಿರುವ ಮತ್ತು ಇರುವವರ ಹಾಗೂ ಇಲ್ಲದಿರುವವರ ನಡುವಣ ಅಂತರವನ್ನು ಹೆಚ್ಚಿಸುತ್ತಲೇ ಇರುವ ಕಾರಣಗಳೆಂದು ನಾವಾರೂ ಅರಿಯದಿರುವುದೇ ನಮ್ಮ ನಡುವಣ ಹಲವು ಸಮ್ಸ್ಯೆಗಳ ಮೂಲ ಕಾರಣವಾಗಿದೆ. ನೂರಾರು ವೃತ್ತಗಳು! ಆ ವೃತ್ತಗಳಳೊಗೆ ಮತ್ತೆ ನೂರು ಸೀಳುಗಳು. ಗುಂಪು, ಗುಂಪಾಗಿ, ಮತ್ತೆ ಮತ್ತೆ ವಿಭಜನೆಯಾಗುತ್ತಾ, ಸೀಳಿಕೊಳ್ಳುತ್ತಾ, ಒಂದಕ್ಕೊಂದು ದೂರವಾಗಿ ನಮ್ಮ ಚಿಪ್ಪಿನೊಳಗೆ ನಾವೇ ಬಂಧಿಯಾಗುತ್ತಾ ಅಪರಿಚಿತವಾಗುತ್ತಾ ಹೋಗುವ ಕವಲು ದಾರಿಗಳು.

ಆದರೆ ಒಂದು ನಾಗರೀಕ ಸಮಾಜ ಸುಸಂಸ್ಕೃತವಾಗಬೇಕೆಂದರೆ, ಇಡಿಯಾಗಿ ತನ್ನ ಸ್ವರೂಪ ಪ್ರದರ್ಶಿಸಬೇಕೆಂದರೆ ಈ ವೃತ್ತಗಳನ್ನು ನಿವಾರಿಸಬೇಕು. ವೃತ್ತಗಳ ವ್ಯಾಸವನ್ನು ಹಿರಿದುಮಾಡುತ್ತ ಸಮಷ್ಟಿಯಲ್ಲಿ ಎಲ್ಲರನ್ನೂ, ಎಲ್ಲವನ್ನೂ ಒಳಗೊಳಿಸಬೇಕು. ಏಕನಾದದ ಸಮೂಹ ಗೀತೆಗೆ ಎಲ್ಲರನ್ನೂ ಅನುಗೊಳಿಸಬೇಕು. ದೂರದೃಷ್ಟಿಯುಳ್ಳ ಸಮೂಹ ನಾಯಕತ್ವ ಪ್ರಭುತ್ವವನ್ನು ಪ್ರಶ್ನಿಸುವ ಎದೆಗಾರಿಕೆ ತೋರಬೇಕು. ಆಗ ಅಂಥ ಸಂದರ್ಭ ಬಯಲ ಸ್ವಾತಂತ್ರವನ್ನು ಅನುಭವಿಸುವ ರೀತಿಗೆ ನಮ್ಮನ್ನು ಸಜ್ಜುಗೊಳಿಸುತ್ತದೆ.

ಗುರುವಾರ, ಜನವರಿ 8, 2009

ಬೆಂಕಿ ಕಡ್ಡಿಗಳು

ಬೆಂಕಿ ಕಡ್ಡಿಗಳು,
ನಾನು, ನೀನು, ಅವನು, ಅವಳು
ಹೌದು, ನಾವೆಲ್ಲರೂ ಬೆಂಕಿಯ ತುಂಡುಗಳು:

ನಮ್ಮ ತಲೆಯ ಮೇಲಷ್ಟು ಮದ್ದು ಮೆತ್ತಿ,
ಒಬ್ಬರ ಮೇಲೊಬ್ಬರನ್ನು ತುರುಕಿ,
ಪುಟ್ಟ ಪೆಟ್ಟಿಗೆಯೊಳಗಿಟ್ಟು ಭದ್ರ ಮಾಡಿದ್ದಾರೆ:

ಬೇಕಿನಿಸಿದಾಗೆಲ್ಲ ನಮ್ಮಲ್ಲೊಬ್ಬರನ್ನೆಳೆದು
ಚರಕ್ಕನೆ ಗೀರಿ ಬೆಂಕಿ ಹೊತ್ತಿಸುತ್ತಾರೆ,
ಚಳಿಯ ಮೈಯನ್ನು ಕಾಯಿಸಿ ಕೊಳ್ಳುತ್ತಾರೆ.

ಬೆಂಕಿ ಹೊತ್ತಿಸಿದ ಸಂಭ್ರಮದಲ್ಲಿ
ಸುಟ್ಟು ಭಸ್ಮವಾಗುವ ನಮಗೇ
ನಮ್ಮ ಶಕ್ತಿ ಗೊತ್ತಿಲ್ಲ; ಹಾಗಾಗಿ

ಜೊತೆಜೊತೆಯಾಗಿದ್ದರೂ ಅತಂತ್ರ ಸ್ಥಿತಿ ಹೋಗಲ್ಲ
ಈ ಪುಟ್ಟ ಪೆಟ್ಟಿಗೆಯ ವಾಸವೂ ತಪ್ಪೋಲ್ಲ!

ಗುರುವಾರ, ಜನವರಿ 1, 2009

ವಿಮಾ ರಂಗದ ಮೇಲೆ ಉದಾರೀಕರಣದ ಕರಿ ನೆರಳು

ವಿಮಾರಂಗದ ಮೇಲೆ ಉದಾರೀಕರಣದ ಕರಿನೆರಳು
ಸದ್ಯೋವರ್ತಮಾನದ ಜಾಗತಿಕ ಹಣಕಾಸು ಪರಿಸ್ಥಿತಿ ತಿಳಿದವರಿಗೆ ಈಗಿನ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ವಿವರಿಸಬೇಕಿಲ್ಲ. ಈಗಾಗಲೇ ನಮ್ಮ ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಹಲವು ‘ದೈತ್ಯ’ ಕಂಪನಿಗಳು ಮತ್ತವುಗಳ ಒಡೆತನದಲ್ಲಿದ್ದ ಬ್ಯಾಂಕು, ವಿಮೆ, ಇತರೆ ಹಣಕಾಸು ವ್ಯವಹಾರಗಳೆಲ್ಲ ಕುಸಿದುಬಿದ್ದು ಆ ಕಂಪನಿಗಳು ದಿವಾಳಿಯಾಗಿರುವ , ಆಗುತ್ತಿರುವ ಸಂದರ್ಭ ಇದು. ಅಮೇರಿಕಾದಲ್ಲಾದ ತಲ್ಲಣಗಳು ಹೀಗೆ ಇಡೀ ವಿಶ್ವವನ್ನೇ ಅಲ್ಲಾಡಿಸಬಹುದೆಂದು ಜಾಗತೀಕರಣ ಪ್ರಕ್ರಿಯೆ ಶುರುವಾಗುವ ಮುನ್ನ ಊಹಿಸಲು ಸಾಧ್ಯವೂ ಇರಲಿಲ್ಲ. ಆದರೆ ಈಗ ಜಾಗತೀಕರಣದ ಬಲೆ ಬೀಸಿ ಎಲ್ಲ ಸಾರ್ವಭೌಮ ದೇಶಗಳನ್ನೂ ತನ್ನ ಹಿಡಿತದಲ್ಲಿಟ್ಟುಕೊಂಡಿರುವ ಅಮೆರಿಕಕ್ಕೆ ನೆಗಡಿಯಾದರೆ ಈ ದೇಶಗಳ ಮೂಗಿನಲ್ಲಿ ನೀರು ಸೋರತೊಡಗುತ್ತದೆ. ಅದು ಕೆಮ್ಮಿದರೆ ಈ ದೇಶಗಳು ಆಸ್ಪತ್ರೆ ಸೇರುತ್ತವೆ.

ಅಮೇರಿಕದ ಆರ್ಥಿಕತೆ ಅಪಾಯದ ಅಂಚು ತಲುಪಿದೆ ಎಂದು ಹೇಳಲು ನಾವೇನು ಆರ್ಥಿಕ ತಜ್ಞರಾಗಿರಬೇಕಿಲ್ಲ. ಜಾಗತೀಕರಣ ಮತ್ತು ಉದಾರೀಕರಣದ ಹುಚ್ಚು ಹತ್ತಿಸಿ ಎಲ್ಲ ಅರ್ಥವ್ಯವಸ್ಥೆಯನ್ನೂ ಖಾಸಗಿಯವರಿಗೆ ಒಪ್ಪಿಸಿದ ಪರಿಣಾಮ ಇದು. ಜಗತ್ತಿನ ಎಲ್ಲ ದೇಶಗಳೂ ಪರಸ್ಪರ ವ್ಯಾವಹಾರಿಕವಾಗಿ ಬೆಸೆದುಕೊಂಡಿರುವ ಕಾರಣ ಅಮೆರಿಕದ ಬಿಕ್ಕಟ್ಟು ಎಲ್ಲ ದೇಶಗಳ ಅರ್ಥ ವ್ಯವಸ್ಥೆಯ ಮೇಲೂ ತನ್ನ ಪರಿಣಾಮ ತೋರುತ್ತ ಸಾಗಿದೆ. ಬ್ರಜಿಲ್ ಮತ್ತು ಇಂಡೋನೇಷಿಯಾದ ಪರಿಸ್ಥಿತಿಯಂತೂ ಶೋಚನೀಯವಾಗಿದೆ. ನಮ್ಮ ದೇಶದ ಮೇಲೆ ಈ ಕಂಪನದ ಪರಿಣಾಮ ತೀವ್ರವಾಗಿಲ್ಲವಾದರೂ ಅಲ್ಪ ಸ್ವಲ್ಪ ನಷ್ಟ ಉಂಟುಮಾಡಿದೆ. ಅಮೆರಿಕ ಮತ್ತು ಸಾಫ್ಟ್ವೇರನ್ನು ನಂಬಿದ್ದ ಬಹುತೇಕ ಖಾಸಗಿ ಸಂಸ್ಥೆಗಳು ತಮ್ಮ ನೌಕರರ ಸಂಖ್ಯೆ ತಗ್ಗಿಸುತ್ತಲೋ, ಅಥವಾ ಅವರ ಸಂಬಳ ಕಡಿತಗೊಳಿಸಿಯೋ ಸುದ್ದಿ ಮಾಡುತ್ತಲೇ ಇವೆ. ಮಾಧ್ಯಮ ಕ್ಷೇತ್ರದ ಮೇಲೂ ಇದರ ಕರಿನೆರಳು ಬಿದ್ದ ಕಾರಣ ನಿಯತಕಾಲಿಕೆಗಳ ಅವಧಿ ಬದಲಾಗತೊಡಗಿದೆ. ಕನ್ನಡದಲ್ಲೂ ಪ್ರಕಟವಾಗುವ ‘ದಿ ಸಂಡೆ ಇಂಡಿಯನ್’ ಪತ್ರಿಕೆಯ ಸ್ಥಳೀಯ ಸಾಪ್ತಾಹಿಕ ಆವೃತ್ತಿಗಳು ಪಾಕ್ಷಿಕ ಪತ್ರಿಕೆಗಳಾಗಿ ಬದಲಾಗಿವೆ.

ಪುಣ್ಯದ ಮಾತೆಂದರೆ ನಮ್ಮ ದೇಶದ ಸಾರ್ವಜನಿಕ ವಲಯದ ಬ್ಯಾಂಕು ಮತ್ತು ವಿಮಾ ವಲಯ ‘ಜಾಗತಿಕ ಕುಸಿತ’ವೆಂದು ಬಿಂಬಿಸಲಾಗಿರುವ ಅಮೆರಿಕಾ ಪ್ರಣೀತ ಅರ್ಥ ವ್ಯವಸ್ಥೆಯ ನರಳಾಟವನ್ನು ಮೆಟ್ಟಿ ನಿಂತಿವೆ. ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾ ದೊಡ್ಡ ಮಟ್ಟದಲ್ಲಿ ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುತ್ತಿರುವುದರ ಜೊತೆಜೊತೆಗೇ ಇನ್ನಿತರ ರಾಷ್ಠ್ರೀಕೃತ ಬ್ಯಾಂಕುಗಳೂ ವಿವಿಧ ಹುದ್ದೆಗಳಿಗೆ ನೇಮಕಾತಿಯ ವಿವರಗಳನ್ನು ಪ್ರಕಟಿಸುತ್ತಲೇ ಇವೆ. ಈ ದೇಶದ ಅತಿದೊಡ್ಡ ವಿಮಾ ಸಂಸ್ಥೆಯಾದ ಎಲ್ಲೈಸಿ ಬರುವ ವರ್ಷದಲ್ಲಿ ಹತ್ತು ಸಾವಿರ ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿದೆಯೆಂದು ಅದರ ಅಧ್ಯಕ್ಷರು ಪ್ರಕಟಿಸಿದ್ದಾರೆ. ಈ ಸಂಸ್ಥೆಗಳು ಗಟ್ಟಿಯಾಗಿ ನಿಲ್ಲಲು ಅವೆಲ್ಲ ಸಾರ್ವಜನಿಕ ವಲಯದಲ್ಲಿರುವುದು ಮತ್ತು ಜನರಿಗೆ ಉತ್ತರ ದಾಯಿತ್ವವನ್ನು ಹೊಂದಿರುವುದೂ ಕಾರಣ.

ಅಮೆರಿಕಕ್ಕೇನಾಗಿತ್ತು? ಹಣಕಾಸು ಬಂಡವಾಳದ ತೀರದ ದಾಹ ಹಾಗೂ ಅನಿರ್ಭಂಧಿತ ಮುಕ್ತ ಮಾರುಕಟ್ಟೆಯು ಅಲ್ಲಿನ ಪ್ರಭುತ್ವದ ನಿಯಂತ್ರಣ ಪರಿಧಿಯಿಂದ ದೂರ ಉಳಿದದ್ದೇ ಎಂದು ಈಗಾಗಲೇ ವಿಶ್ಲೇಷಿಸಲಾಗಿದೆ. ಅಲ್ಲಿ ಗೃಹಸಾಲ ನೀಡುತ್ತಿದ್ದ ಖಾಸಗೀ ಸಂಸ್ಥೆಗಳು ತಮಗೆ ಅಡವಿಡಲಾಗುವ ಸ್ಥಿರಾಸ್ತಿಯ ಮೌಲ್ಯವನ್ನು ಊಹಾತ್ಮಕವಾಗಿ ಹೆಚ್ಚಿಸಿ ಅರ್ಜಿದಾರನ ಸಾಲ ವಾಪಸಾತಿಯ ಅರ್ಹತೆಗಳನ್ನು ಲೆಕ್ಕಿಸದೇ ಸಾಲ ನೀಡಿದವು. ಸರ್ಕಾರದ ನಿಯಂತ್ರಣ ಪರಿಧಿಯನ್ನು- ಅವು ಬರಿಯ ಕಾಗದದ ಹುಲಿಗಳು-ಬೇಕೆಂತಲೇ ಕಣ್ತಪ್ಪಿಸಿ ಹೂಡಿಕೆದಾರರನ್ನು ಪುಸಲಾಯಿಸಿ ಸಾರ್ವಜನಿಕ ಬಂಡವಾಳ ಸಂಗ್ರಹಿಸಲಾಯಿತು. ಯಾವಾಗ ಸ್ತಿರಾಸ್ಥಿಯ ಮಾರುಕಟ್ಟೆ ಮೌಲ್ಯ ಸರಿಯಾಗಿ ಅಳೆಯಲಾಯಿತೋ ಆವಾಗ ಹೀಗೆ ಊಹಾತ್ಮಕವಾಗಿ ಆಕಾಶದೆತ್ತರಕ್ಕೆ ಜಿಗಿದಿದ್ದ ಈ ಖಾಸಗೀ ಹಣಕಾಸು ಸಂಸ್ಥೆಗಳ ಶೇರು ಬೆಲೆ ನೆಲ್ಲ ಕಚ್ಚ ತೊಡಗಿದವು. ಮೊದಲೇ ಹೀಗಾಗಬಹುದೆಂದು ಅರಿತಿದ್ದ ದೈತ್ಯರು ವಹಿವಾಟಿನಿಂದ ದೂರ ಉಳಿಯತೊಡಗಿದ ಕಾರಣ ಪರಿಸ್ಥಿತಿ ಮತ್ತಷ್ಟು ಹದ ಕೆಟ್ಟಿತು. ಪರಿಣಾಮ ಈ ಖಾಸಗಿಯವರ ಹುಚ್ಚಾಟಗಳ ಮೇಲೆ ಬಂಡವಾಳ ಹೂಡಿದ್ದವರೆಲ್ಲ ಪಾತಾಳಕ್ಕೆ ಬಿದ್ದರು. ಲಾಭಕ್ಕಿಂತಲೂ ಬರಿಯ ಕೈ ಬದಲಾವಣೆಯನ್ನೇ ನಂಬಿಕೊಂಡಿದ್ದ ಅದೆಷ್ಟೋ ಚಿಕ್ಕ ಪುಟ್ಟ ಕಂಪನಿಗಳು ಬಾಗಿಲು ಹಾಕಿಕೊಂಡವು. ಅವು ಜಾಗತಿಕ ಮಾರುಕಟ್ಟೆಯ ಹಲವು ಸ್ತರಗಳಲ್ಲಿ ಹೂಡಿದ್ದ ಅಥವ ಈಗಾಗಲೇ ಅಲ್ಪಸ್ವಲ್ಪ ಮುಂಗಡ ಕೊಟ್ಟು ಕಾದಿರಿಸಿದ್ದ ವ್ಯವಹಾರಗಳನ್ನೆಲ್ಲ ಅರ್ಧಕ್ಕೇ ಬಿಟ್ಟವು. ಪರಿಣಾಮ ಅಮೆರಿಕವನ್ನೇ ನಂಬಿಕೊಂಡಿರುವ ಸಾಫ್ಟ್ವೇರ್ ಪ್ರಪಂಚ ಅಲ್ಲಾಡತೊಡಗಿತು.

ಒಂದು ಅಂದಾಜಿನಂತೆ ಒಂದು ಟ್ರಿಲಿಯನ್ ಅಮೆರಿಕನ್ ಡಾಲರ್ ಹಣ ಈ ಜಾಗತಿಕ ಕುಸಿತದಿಂದಾಗಿ ಕೊಚ್ಚಿಹೋಗಿದೆ. ಬೇರ್ಸ್ಟರ್ನ್, ಎಐಜಿ, ಅವಿವಾ, ಫೋರ್ಟಿಸ್ ಇನ್ನೂ ಮುಂತಾದ ಹೂಡಿಕೆ, ಬ್ಯಾಂಕಿಂಗ್ ಮತ್ತು ವಿಮಾ ವ್ಯವಹಾರದ ಕಂಪೆನಿಗಳು ಮತ್ತೆ ತಲೆ ಎತ್ತಲಾರದ ದುರವಸ್ಥೆ ತಲುಪಿದವು. ಅಮೆರಿಕದ ಸರ್ಕಾರ ನಷ್ಟ ಪೀಡಿತ ಹಣಕಾಸು ಸಂಸ್ಥೆಗಳಿಗೆ, ಬ್ಯಾಂಕ್ ಮತ್ತು ವಿಮಾ ಕಂಪನಿಗಳಿಗೆ ೭೦೦ ಬಿಲಿಯನ್ ಡಾಲರ್ ನೆರವು ಘೋಷಿಸಿ ಅವುಗಳ ನೆರವಿಗೆ ನಿಂತಿದೆ. ಎಐಜಿ ಕಂಪನಿಯ ೭೯.೯% ಶೇರುಗಳನ್ನು ಸರ್ಕಾರವೇ ಖರೀದಿಸಿ ಅದಕ್ಕೆ ೮೫ ಬಿಲಿಯನ್ ಡಾಲರ್ ನೆರವು ಕೊಟ್ಟಿದೆ. ಬ್ಯಾಂಕ್ ಆಫ್ ಅಮೆರಿಕ ಮೆರಿಲ್ ಲಿಂಚ್ ಕಂಪನಿಯನ್ನು ವಶಪಡಿಸಿಕೊಂಡಿದೆ. ಬ್ರಿಟನ್ ಸರ್ಕಾರವಂತೂ ಖಾಸಗೀ ಬ್ಯಾಂಕುಗಳನ್ನೆಲ್ಲ ತನ್ನ ಸುಪರ್ದಿಗೆ ತೆಗೆದುಕೊಂಡು ಪುನಃ ರಾಷ್ಠ್ರೀಕರಣದ ಕೆಲಸಕ್ಕೆ ಕೈ ಹಾಕಿದೆ.

ಪರಿಸ್ಥಿತಿ ಹೀಗಿರುವಾಗ ಲಜ್ಜರಹಿತವಾದ ಮತ್ತು ಅಮೆರಿಕದ ಅಣತಿಗೆ ತಕ್ಕಂತೆ ಕುಣಿಯುತ್ತಿರುವ ಮನಮೋಹನ್ ಸಿಂಗ್ ಪ್ರಣೀತ ಉದಾರವಾದೀ ಸರ್ಕಾರ ಲೋಕಸಭೆ ಮತ್ತು ರಾಜ್ಯಸಭೆಗಳ ಕಲಾಪದಲ್ಲಿ ವಿಮಾ ಮಸೂದೆಗೆ ತಿದ್ದುಪಡಿ ತರುವ ಅಧಿಸೂಚನೆ ಮಂಡಿಸಿದೆ. ಹೊಸ ವಿಧೇಯಕದ ಪ್ರಕಾರ ವಿಮಾ ವಲಯದಲ್ಲಿ ಖಾಸಗೀ ಬಂಡವಾಳ ಹೂಡಿಕೆ ೪೯% ಕ್ಕೆ ಏರುತ್ತದೆ. ಮತ್ತು ಸಾರ್ವಜನಿಕ ರಂಗದ ವಿಮಾ ಸಂಸ್ಥೆ ಎಲ್ಲೈಸಿಯ ಬಂಡವಾಳವನ್ನು ಈಗಿರುವ ೫ ಕೋಟಿಗಳಿಂದ ೧೦೦ ಕೋಟಿಗಳಿಗೆ ಹೆಚ್ಚಿಸಿ ಸಾರ್ವಜನಿಕವಾಗಿ ಅದನ್ನು ಸಂಗ್ರಹಿಸಲಾಗುತ್ತದೆ. ಅಂದರೆ ಅದನ್ನು ಖಾಸಗಿಯವರಿಗೆ ಹಂತಹಂತವಾಗಿ ಬಿಟ್ಟುಕೊಡಲಾಗುತ್ತದೆ. ಮೇಲ್ನೋಟಕ್ಕೆ ಇದೊಂದು ಉದಾರವಾದೀ ಸರ್ಕಾರದ ಧೃಢ ಹೆಜ್ಜೆಯಂತೆ ಮತ್ತು ಬಂಡವಾಳವನ್ನು ಆಕರ್ಷಿಸುವ ಯೋಜನೆಯಂತೆ ಕಂಡರೂ ಇದೂ ಅಮೆರಿಕದ ಕನಸನ್ನು ನನಸಾಗಿಸುವ ದುರುದ್ದೇಶ ಹೊಂದಿರುವ ಮತ್ತು ಈ ದೇಶದ ಅಸಂಖ್ಯಾತ ಜನರು ಸಾರ್ವಜನಿಕ ಸಂಸ್ಥೆಗಳ ಮೇಲೆ ಇಟ್ಟಿರುವ ಅಚಲ ವಿಶ್ವಾಸವನ್ನೇ ಪ್ರಶ್ನಿಸುತ್ತಿರುವ ವಿಧೇಯಕವಾಗಿದೆ. ಸರ್ಕಾರದ ಪಂಚವಾರ್ಷಿಕ ಯೋಜನೆಗಳೂ ಸೇರಿದಂತೆ ದೇಶದ ಬಹುತೇಕ ನೀರಾವರಿ, ಸಾರಿಗೆ ಮತ್ತು ವಿದ್ಯುತ್ ಯೋಜನೆಗಳಿಗೆ ಹಣಕಾಸು ನೆರವು ನೀಡುತ್ತಿದ್ದ ಬೃಹತ್ ಉದ್ಯಮವೊಂದು ಖಾಸಗಿಯವರ ಪಾಲಾದರೆ ದೇಶದ ಆರ್ಥಿಕತೆಯ ಮೇಲಾಗುವ ಪರಿಣಾಮಗಳು ಒಂದೆರಡಲ್ಲ. ಮುಖ್ಯವಾಗಿ ಜಾಗತಿಕ ವಿಮಾವಲಯದಲ್ಲಿ ತಾವೇ ದೈತ್ಯರೆಂದು ಬಿಂಬಿಸಿಕೊಳ್ಳುವ ಎಐಜಿ, ಪ್ಯುಡೆನ್ಶಿಯಲ್, ಅವಿವಾ ಈಗಾಗಲೇ ನಷ್ಟದ ಭರದಿಂದ ಕುಸಿದು ಕೂತಿದ್ದರೂ ಈ ನೆಲದಲ್ಲಿ ಈಗಾಗಲೇ ಕಾಲಿಟ್ಟಿರುವುದರಿಂದ ಸಾರ್ವಜನಿಕ ಸಂಸ್ಥೆಯೊಂದು ಇಷ್ಟು ದಿನಗಳ ಕಾಲ ಸಂಗ್ರಹಿಸಿರುವ ದೊಡ್ಡ ಮೊತ್ತದ ‘ಲೈಫ್ ಫಂಡ್’ ಮತ್ತು ವಿಶ್ವಾಸದ ಜಾಲವನ್ನು ಬೇಧಿಸಿ ಲಾಭಬಡುಕತನದ ಪೈಪೋಟಿಯ ಮೂಲಕ ಹುಚ್ಚು ಹಿಡಿಸುತ್ತವೆ. ಲಾಭದ ಆಸೆಗೆ ಬಿದ್ದ ಗ್ರಾಹಕರು ಅರಿವು ಪಡೆಯುವುದರೊಳಗಾಗಿ ತಮ್ಮ ಕಷ್ಟಾರ್ಜಿತವನ್ನೆಲ್ಲ ಕಳೆದುಕೊಂಡಿರುತ್ತಾರೆ. ಶೇರು ಮಾರುಕಟ್ಟೆಯೆಂಬ ಮಾಯಾಮೋಹಿನಿಯ ಪಾಶದ ಜೂಜಿಗೆ ಬಿದ್ದ ಸಾಮಾನ್ಯ ಹೂಡಿಕೆದಾರ ತನ್ನದೆಲ್ಲವನ್ನೂ ಕಳೆದುಕೊಳ್ಳುತ್ತಾನೆ.

ಖಾಸಗೀ ಕಂಪನಿಗಳ ಕೆಲ ಸ್ವಾರಸ್ಯಗಳು:
1.AIG (ಟಾಟಾ ಕಂಪನಿಯ ಸಹಯೋಗಿ) ದಿವಾಳಿ ಘೋಷಿಸಲು ಕೆಲವೇ ಗಂಟೆಗಳ ಮೊದಲು ಅಮೆರಿಕದ ಸರ್ಕಾರ ಕೊಡಮಾಡಿದ ೮೫ ಬಿಲಿಯನ್ ಡಾಲರ್ ಮೂಲಕ ಕೃತಕ ಉಸಿರಾಟ ಪಡೆಯಿತು.
೨. ಪ್ಯುಡೆನ್ಶಿಯಲ್ ದಾವೆ ಕೊಡಲಾಗದೇ ತನ್ನನ್ನು ತಾನು ದಿವಾಳಿ ಎಂದು ಘೋಷಿಸಿಕೊಂಡಿದ್ದ ಇತಿಹಾಸ ಹೊಂದಿದೆ.
೩. ಫೋರ್ಟಿಸ್ ತನ್ನೆಲ್ಲ ಹಕ್ಕುಗಳನ್ನು ಯೂರೋಪಿನ ಮೂರು ದೇಶಗಳಿಗೆ ಮಾರಿಕೊಂಡಿದೆ.
೪. ING ಮತ್ತು aegon ಕಂಪೆನಿಗಳಿಗೆ ಡಚ್ ಸರ್ಕಾರ ಹಣಕಾಸು ಸಹಾಯ ವಿಸ್ತರಿಸಿ ಬೆಂಬಲಿಸಿದೆ.
೫. ಅಮೆರಿಕ, ಯೂರೋಪ್, ಜಪಾನ್ ದೇಶಗಳಲ್ಲಿ ವಿಮಾ ವಹಿವಾಟು ಋಣಾತ್ಮಕವಾಗುತ್ತಿದೆ.

ಜಾಗತಿಕ ಸ್ಥಿತಿ ಹೀಗಿರುವಾಗ ಮುಕ್ತ ಮಾರುಕಟ್ಟೆಯ ಉದಾರೀಕರಣ ನೀತಿ ವಿಫಲವಾಗಿರುವ ಉದಾಹರಣೆ ಕಣ್ಣೆದುರೇ ಇರುವಾಗ ಅಲ್ಲದೇ ಅಮೆರಿಕಾ, ಯೂರೋಪ್, ಡಚ್ ಸರ್ಕಾರಗಳು ತಮ್ಮ ದೇಶದ ಕಂಪನಿಗಳು ದಿವಾಳಿಯಾಗುವುದನ್ನು ತಪ್ಪಿಸಲು ಅವನ್ನೆಲ್ಲ ಕೊಂಡು ಕೊಂಡು ರಾಷ್ಟ್ರೀಕರಣ ಮಾಡುತ್ತಿರುವ ವರ್ತಮಾನದಲ್ಲಿ ನಮ್ಮ ದೇಶದ ನೇತಾರರು ನಮ್ಮ ಸಾರ್ವಜನಿಕ ವಲಯವನ್ನು ಖಾಸಗಿಗೊಳಿಸುವ ವಿಧೇಯಕವನ್ನು ಮಡಿಸುತ್ತಿದ್ದಾರೆ. ಆ ಮೂಲಕ ಅಮೆರಿಕದ ದುರುದ್ದೇಶಗಳನ್ನು ಈ ದೇಶದ ಸಾಮಾನ್ಯ ಜನತೆಯ ಮೇಲೆ ಹೇರುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಜಾಗತಿಕ ಬಿಕ್ಕಟ್ಟಿನ ಪರಿಣಾಮ ನಮ್ಮ ಅರ್ಥ ವ್ಯವಸ್ಥೆಯ ಮೇಲಾಗದಂತೆ ನಮ್ಮ ಸಾರ್ವಜನಿಕ ರಂಗವನ್ನು ಬಲಪಡಿಸಬೇಕಿತ್ತು. ಅದು ಬಿಟ್ಟು ನಷ್ಟದಲ್ಲಿರುವ ವಿದೇಶೀ ಕಂಪನಿಗಳಿಗೆ ನಡೆಮುಡಿ ಹಾಸುತ್ತಿರುವ ಕಾರಣವಾದರೂ ಏನು? ಜಾಗತಿಕ ಹಣಕಾಸು ಬಂಡವಾಳ ಅಂದರೆ ಅಮೆರಿಕದ ಪ್ರಾಬಲ್ಯ ಮತ್ತು ಇಷ್ಟಾರ್ಥವನ್ನು ಪೂರೈಸಲು ದೇಶದ ಆರ್ಥಿಕ ಹಿತಾಸಕ್ತಿಯನ್ನು ಬಲಿಕೊಡಲು ಈ ಸರ್ಕಾರ ಹೊರಟಿದೆ.

ಇನ್ನು ಕೆಲವೇ ದಿನಗಳ ತನ್ನ ಆಯುಷ್ಯ ಹೊಂದಿರುವ ಈ ಸರ್ಕಾರ ಜನ ವಿರೋಧಿ ಮತ್ತು ದೇಶದ ಆರ್ಥಿಕ ಭದ್ರತೆಗೆ ವಿರುದ್ಧವಾದ ಈ ಸನ್ನದನ್ನು ಪ್ರಕಟಿಸುವ ಉದ್ದೇಶವಾದರೂ ಏನು? ನಮ್ಮ ಎಷ್ಟು ಜನ ಲೋಕಸಭಾಸದಸ್ಯರಿಗೆ/ ರಾಜ್ಯ ಸಭಾ ಸದಸ್ಯರಿಗೆ ಭವಿಷ್ಯದ ಚಿಂತೆ ಇದೆ? ಎಷ್ಟು ಜನರಿಗೆ ಸಮಸ್ಯೆಯ ಅರಿವಿದೆ? ಅದನ್ನು ನಾವು ಅವರಿಗೆ ತಿಳಿಸಿ ಹೇಳಬೇಕಿದೆ. ಸಮೂಹ ಮಾಧ್ಯಮಗಳ ಮೂಲಕ ಜನಸಾಮಾನ್ಯರಿಗೆ ಪರಿಸ್ಥಿತಿಯನ್ನು ವಿವರಿಸುವ ಕೆಲಸ ಈಗ ಜರೂರಾಗಿ ಆಗಬೇಕಿದೆ. ಮತ್ತು ನಮ್ಮ ಮುದ್ರಣ ಮಾಧ್ಯಮವೂ ಸಮಸ್ಯೆಯನ್ನು ಕೂಲಂಕುಷವಾಗಿ ಅವಲೋಕಿಸುವ ಮತ್ತು ವಿಶ್ಲೇಷಿಸುವುದೂ ಅತ್ಯಗತ್ಯ ಮಾಡಲೇ ಬೇಕಾದ ಕೆಲಸವಾಗಿದೆ.