ಒಟ್ಟು ಪುಟವೀಕ್ಷಣೆಗಳು

ಶನಿವಾರ, ಡಿಸೆಂಬರ್ 27, 2008

ನಾಯಿ ಸಾಕುವ ನಾಯಿ ಪಾಡು....

‘ನಾಯಿ ಮನೆಕಾಯುತ್ತದೆ. ತಂಗಳನ್ನೂ ಅಮೃತವೆನ್ನುವಂತೆ ಉಣ್ಣುತ್ತದೆ. ಎಂದೆಂದೂ ಮನೆಯ ಸುತ್ತಳತೆಯಲ್ಲೇ ಇದ್ದು ಹೋಗಿ ಬರುವವರ ನಿಗ ನೋಡುತ್ತದೆ. ಬೇಜಾರಿನ ಘಳಿಗೆಗಳಲ್ಲಿ, ಸಂತಸದ ಸಂದರ್ಭಗಳಲ್ಲೂ ಮನೆಯ ಯಜಮಾನನ ಕಾಲ ಬುಡದಲ್ಲೇ ಇದ್ದು ಆ ಕ್ಷಣಗಳ ಸಾಕ್ಷಿಯಾಗುತ್ತದೆ....’

ನಾಯಿಯ ಮೇಲೆ ಪ್ರಬಂಧ ಬರೆಯಲು ತಿಣುಕುತ್ತಿದ್ದ ನನ್ನ ಚಿಕ್ಕ ಮಗನಿಗೆ ಇಷ್ಟು ವಿವರ ಕೊಟ್ಟದ್ದೇ ತಪ್ಪಾಗಿಬಿಟ್ಟಿತು. ಪ್ರಬಂಧ ಬರೆಯುವುದನ್ನು ಅಷ್ಟಕ್ಕೇ ಬಿಟ್ಟವನೇ ತನಗೊಂದು ನಾಯಿಮರಿ ಬೇಕೇ ಬೇಕೆಂದು ಹಟ ಹಿಡಿದು ಕುಳಿತು ಬಿಟ್ಟ. ಸಾಮ, ಬೇಧ, ಮುಗಿದು ದಂಡನೆಯ ತುರೀಯಕ್ಕೆ ನಾನಿಳಿದರೂ ಅವನು ಜಪ್ಪಯ್ಯ ಅನ್ನದೇ ನಾಯಿಯ ಧ್ಯಾನದಲ್ಲೇ ಊಟ, ತಿಂಡಿಗಳನ್ನು ಬಿಟ್ಟು ಸತ್ಯಾಗ್ರಹದ ಹಾದಿ ತುಳಿದ. ಎಷ್ಟಾದರೂ ಹೆತ್ತ ಕರುಳು. ಇವಳೂ ಮಗನ ಪರವಾಗಿ ನಿಂತಳು. ಇಷ್ಟೂ ದಿನ ನನ್ನೆದುರು ನಿಲ್ಲಲೂ ಹೆದರುತ್ತಿದ್ದ ನನ್ನ ಮಗಳೂ ತಮ್ಮನ ಪರವಾಗಿ ವಾದಿಸತೊಡಗಿದಳು.

ಹೀಗೆ ಮನೆಯವರೆಲ್ಲರೂ ನಾಯಿಯೊಂದನ್ನು ತಂದು ಸಾಕುವುದಕ್ಕೆ ತುದಿಗಾಲಲ್ಲಿರುವಾಗ ನನ್ನ ಎಲ್ಲ ಮಾತುಗಳೂ ಅವರನ್ನು ತಡೆಯಲು ವಿಫಲವಾದುವು. ನಾಯಿ ಸಾಕುವುದಕ್ಕೆ ನನ್ನ ವಿರೋಧ ಇರದಿದ್ದರೂ ಅದರಿಂದಾಗಬಹುದಾದ ಹೆಚ್ಚಿನ ಕೆಲಸ ಮಾಡುವವರು ಯಾರೆಂಬುದು ನನಗೆ ಮುಖ್ಯವಾಗಿತ್ತು. ನಾಯಿ ಸಾಕುವುದು ಅಂದರೆ ಬೀದಿಯ ದೊಡ್ಡ ನಾಯಿಯನ್ನು ಕುರು ಕುರು ಅಂದು ಕರೆದು ಮಿಕ್ಕಿದ ಅನ್ನ ಹಾಕುವ ಹಾಗಲ್ಲ. ಮರಿಯೊಂದನ್ನು ತಂದು ಅದು ದೊಡ್ಡದಾಗುವವರೆಗೂ ಕಾಪಾಡುವುದು ಎಷ್ಟು ಕಷ್ಟದ ಕೆಲಸ ಅಂತ ಅನುಭವಿಸೇ ತಿಳಿಯಬೇಕು. ಅದಕ್ಕೂ ಸ್ನಾನ ಮಾಡಿಸಬೇಕು. ಜಡ್ಡಾದಾಗ ಆಸ್ಪತ್ರೆಗೆ ಒಯ್ಯಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಬೆಳಗ್ಗಿನ ಸಿಹಿ ನಿದ್ದೆಯನ್ನು ತ್ಯಜಿಸಿ, ನಾಯಿಯನ್ನು ತಪ್ಪದೇ ಬಯಲಿಗೆ ಕರೆದೊಯ್ಯಬೇಕು. ಗಲೀಜಾದರೆ ಕರ್ಮವೆಂದು ತಿಳಿದು ಬಾಚಿ ಒಗೆಯಬೇಕು. ಮನೆಗೆ ಬಂದ ನೆಂಟರನ್ನೋ, ಪೇಪರು-ಹಾಲಿನ ಹುಡುಗನನ್ನೋ ಅಪ್ಪಿ, ತಪ್ಪಿ ಕಚ್ಚಿದರೆ ದಂಡ ತುಂಬಿಕೊಡಲು ಸದಾ ಸಿದ್ಧವಾಗಿರಬೇಕು.

ನನ್ನ ಮಾತುಗಳನ್ನು ಹೆಂಡತಿ ಮಕ್ಕಳು ಕೇಳಲೇ ಇಲ್ಲ. ಯಾರ ಮನೆಯಲ್ಲಿ ತಾನೇ ಕೇಳುತ್ತಾರೆ? ಜಾತಿ ನಾಯಿ ತಂದರೆ ಅದಕ್ಕೆ ಮಾಂಸ, ಮೊಟ್ಟೆ ಕೊಡಬೇಕಾಗುತ್ತದದೆಂಬ ಕಾರಣಕ್ಕೆ ಕಂತ್ರಿ ಜಾತಿಯ ಮರಿಯನ್ನೇ ಮನೆ ತುಂಬಿಸಿಕೊಳ್ಳಲು ನನ್ನ ಹೆಂಡತಿ ಮಕ್ಕಳಿಗೆ ಸೂಚಿದಳು. ಜಾತಿ ನಾಯಿಯ ಮರಿಗೆ ಸಾವಿರಗಟ್ಟಲೇ ಸುರಿಯುವ ಅಪಾಯ ಸ್ವಲ್ಪದರಲ್ಲಿ ಕಳೆಯಿತು. ಆದರೆ ಶಾಲೆಯಿಂದ ಬಂದ ಕೂಡಲೇ ನನ್ನ ಮಗ ನಾಯಿ ಮರಿ ಹುಡುಕಿಕೊಂಡು ಬೀದಿ, ಬೀದಿ ಸುತ್ತುತ್ತಿದ್ದಾನೆಂದು ಮಗಳು ವರದಿ ಮಾಡಿದಳು. ಹೋಂ ವರ್ಕನ್ನು ಮಾಡದೇ, ಯೂನಿಫಾರಂ ಬದಲಿಸದೇ, ಅನ್ನ ನೀರುಗಳ ಮೋಹ ಕಳೆದುಕೊಂಡು ತಿರುಗುತ್ತಿರುವ ಮಗನ ಬಗ್ಗೆ ಮರುಕ ಹುಟ್ಟಿತು. ಇದು ನಾಯಿ ಮರಿ ಸಿಕ್ಕುವ ಕಾಲ ಅಲ್ಲ, ಆ ಕಾಲ ಬಂದಾಗ ಬೀದಿ ಬೀದಿಗಳಲ್ಲಿ ಬಿಟ್ಟಿ ತಿರುಗುತ್ತಿರುತ್ತವೆ ಅಂತ ಅವನಿಗೆ ಹೇಳಿ, ಹೇಳಿ ಸಾಕಾಯಿತೇ ವಿನಾ ಅವನನ್ನು ನಾಯಿ ಧ್ಯಾನದಿಂದ ಬಿಡಿಸಲಾಗಲಿಲ್ಲ. ಆಸ್ಪತ್ರೆಗಳಲ್ಲಿ ಎಲ್ಲ ಕಾಲಗಳಲ್ಲೂ ಮಕ್ಕಳು ಹುಟ್ಟುತ್ತಲೇ ಇರುತ್ತವೆ. ನಾಯಿಯೂ ಸಿಕ್ಕಬಹುದು. ಆಸ್ಪತ್ರೆಯಿಂದಲೇ ತರೋಣ ಅನ್ನುವ ಅವನ ವಾದಕ್ಕೆ ಉತ್ತರ ಗೊತ್ತಾಗದೇ ಸುಮ್ಮನಾದೆ.

ಅಂತೂ ಇಂತೂ ನಾಯಿ ಮರಿ ಸಿಕ್ಕಿದ್ದೇ ಮತ್ತೊಂದು ಕಥೆ. ತಮ್ಮ ಮನೆಯ ನಾಯಿ ಆರು ಮರಿಗಳನ್ನು ಈದಿದೆ ಅಂತ ನಮ್ಮ ಆಫೀಸಿನ ಪ್ಯೂನ್ ಸಿದ್ದಯ್ಯ ಒಂದು ಗಂಟೆ ಮೊದಲೇ ಮನೆಗೆ ಹೋಗಲು ನನ್ನ ಪರ್ಮಿಷನ್ ಕೇಳಿದ. ಬಾಣಂತಿ ಮಕ್ಕಳನ್ನು ನೋಡಲು ಓಣಿಯ ಹುಡುಗರೆಲ್ಲ ಸೇರಿ ಗದ್ದಲ ಮಾಡುವುದನ್ನು ಕಣ್ಣಿಗೆ ಕಟ್ಟುವ ಹಾಗೆ ವಿವರಿಸಿದ. ಆರು ಮರಿಗಳಲ್ಲಿ ಈಗಾಗಲೇ ಮೂರು ಗಂಡುಮರಿಗಳನ್ನು ಅವರ ನೆಂಟರು ತಮಗೆ ಕೊಡಲೇ ಬೇಕೆಂದು ಕೇಳಿದ್ದಾರೆಂದೂ ಸೇರಿಸಿದ. ಮರುಕ್ಷಣವೇ ನನ್ನ ಮಗನ ನಾಯಿ ಹಂಬಲ ನೆನಪಾಗಿ, ನಮಗೊಂದು ಮರಿಯನ್ನು ಕೊಡಬೇಕೆಂದು ಕೇಳಿದೆ. ಪ್ರಾಣಿ, ಪಕ್ಷಿಗಳ ಮೇಲೆ ಅಷ್ಟೇನೂ ಒಲವಿರದ ನನ್ನ ಬೇಡಿಕೆಗೆ ಸಿದ್ದಯ್ಯ ತಕ್ಷಣವೇ ಒಪ್ಪಿಗೆ ಕೊಟ್ಟುದುದಲ್ಲದೇ ಅದರ ನಿಗ ನೋಡುವುದರಲ್ಲಿ ತಾನೂ ಸಹಾಯ ಮಾಡುವುದಾಗಿ ಮಾತು ಕೊಟ್ಟ. ಮತ್ತು ನಾಯಿ ಸಾಕುವ ನನ್ನ ಮಗನ ನಿರ್ಧಾರವನ್ನು ಮನಸಾರೆ ಹೊಗಳಿದ.

ನಾಯಿಮರಿಯ ಅಡ್ರೆಸೇನೋ ಸಿಕ್ಕಿತು. ಆದರೆ ಅದನ್ನು ಮನೆಗೆ ತರುವ ಬಗ್ಗೆ ಈಗ ಯೋಚನೆ ಸುರುವಾಯಿತು. ಜೊತೆಗೆ ನನಗೆ ಸಿದ್ದಯ್ಯನ ಮನೆಯೂ ಗೊತ್ತಿರದ ಕಾರಣ ಸಿದ್ದಯ್ಯನನ್ನೇ ಮತ್ತೆ ಪುಸಲಾಯಿಸಬೇಕಾಗಿ ಬಂತು. ನಾಯಿ ಮರಿಯನ್ನು ಮನೆಗೆ ತರುವ ಸಂತೋಷದಲ್ಲಿ ನನ್ನ ಮಗ ಈಗಾಗಲೇ ತಾನು ದುಡ್ಡು ಕೂಡಿಡುವ ಹಂದಿ ಬೊಂಬೆಯ ಬಾಯಿಯಿಂದ ಹಲವು ರೂಪಾಯಿಗಳನ್ನು ಕಕ್ಕಿಸಿ ಕ್ಯಾಡ್ ಬರೀಸ್ ಚಾಕಲೇಟುಗಳನ್ನು ಕೊಂಡು ತಂದು ಬೀದಿಯ ಮಕ್ಕಳಿಗೆಲ್ಲ ಹಂಚಿಬಿಟ್ಟಿದ್ದ. ಇನ್ನು ತಡ ಮಾಡುವುದು ಬೇಡವೆಂದು ಮಾರನೇ ದಿನವೇ ಕಾರಿನಲ್ಲಿ ಮಗ ಮತ್ತು ಮಗಳನ್ನಲ್ಲದೇ ಈಗಾಗಲೇ ನಾಯಿ ಸಾಕಿದ ಅನುಭವವಿರುವ ಮಗಳ ಕ್ಲಾಸ್ ಮೇಟ್ ಅನಿತಾಳನ್ನೂ ಕರೆದುಕೊಂಡು ಹೊರಟೆ.

ಆಗಲೇ ಹಗಲು ಕಳೆದು ರಾತ್ರಿ ಅಡಿ ಇಡುತ್ತಿದ್ದ ಹೊತ್ತು. ಸಿದ್ದಯ್ಯ ಕೊಟ್ಟಿದ್ದ ಅಡ್ರೆಸ್ಸಿಗೆ ಅಂತೂ ಇಂತೂ ತಲುಪಿದರೆ ಆಸಾಮಿ ಅವನೇ ಪತ್ತೆ ಇಲ್ಲ. ಇನ್ನೂ ಆಫೀಸಿಂದ ಬಂದೇ ಇಲ್ಲ ಅಂದ ಅವನ ಕುಲಪುತ್ರ. ಪುಣ್ಯಕ್ಕೆ ಯಾವಾಗಲೋ ಅಪ್ಪನನ್ನು ಕಾಣಲು ಬಂದವನು ನನ್ನನ್ನು ನೋಡಿದ್ದ. ಅಪ್ಪನ ಆಫೀಸಿನವರು ಎಂಬ ಕಾರಣಕ್ಕೆ ಅವನೂ ನಾಯಿಮರಿಯೊಂದನ್ನು ನಮಗೆ ಕೊಡಲು ಒಪ್ಪಿದ. ಸರಿ. ತಾಯಿ ನಾಯಿಯ ಕಣ್ಣು ತಪ್ಪಿಸಿ ಒಂದು ಪುಟಾಣಿ ಸ್ಮಾರ್ಟ್ ಮರಿಯನ್ನು ತಂದು ಕಾರಿನ ಹಿಂದಿನ ಸೀಟಿನಲ್ಲಿ ಇಟ್ಟ. ಅವರಮ್ಮ ನಾಯಿ ಮರಿ ಕೂರಿಸಿಕೊಂಡು ಬನ್ನಿರೆಂದು ಕೊಟ್ಟಿದ್ದ ಪ್ಲಾಸ್ಟಿಕ್ ಬುಟ್ಟಿಯನ್ನು ನನ್ನ ಮಗಳು ತೋರಿಸುತ್ತಿದ್ದರೂ ಹಿಂದಿನ ಸೀಟಿನಲ್ಲಿ ವಿರಾಜಮಾನವಾಗಿದ್ದ ಗ್ರಾಮಸಿಂಹದ ಮೋಹಕ ಮುಖಕ್ಕೆ ಸೋತ ನಾನು ಅಲ್ಲೇ ಇರಲಿ ಬಿಡೆ ಎಂದಂದು ಕಾರಿನ ಬಾಗಿಲು ಮುಚ್ಚಿ ಮುಂದೆ ಅಡಿಇಟ್ಟಿದ್ದೆ, ಅಷ್ಟೆ. ಅದೆಲ್ಲಿತ್ತೋ ಆ ತಾಯಿ ನಾಯಿ ವಾಸನೆ ಗ್ರಹಿಸಿಯೇ ಬಂದಿರಬೇಕು. ನನ್ನುದ್ದಕ್ಕೂ ಎಗರಿ ಎಗರಿ ಬೊಗಳ ತೊಡಗಿತು. ಅಂತೂ ಆ ವೇಳೆಗೆ ಅಲ್ಲಿಗೆ ಯೋಜನದೂರಕ್ಕೂ ತನ್ನ ಬಾಯಿಂದ ಬರುವ ಹೆಂಡದ ವಾಸನೆಗೆ ಪ್ರಸಿದ್ಧನೂ, ಹಾಗೇ ಅಂತಹ ಸ್ಥಿತಿಯಲ್ಲಿ ಎದುರು ಸಿಕ್ಕ ಎಲ್ಲರನ್ನೂ ಬಯ್ದು ಕೆಡವುದರಲ್ಲಿ ನಿಷ್ಣಾತನೂ ಆದ ಸಿದ್ದಯ್ಯನ ಸವಾರಿ ಬಂದಿತು. ಪುಣ್ಯಕ್ಕೆ ನನ್ನನ್ನು ಎಂದಿನ ಗೌರಾವಾದರಗಳಲ್ಲೇ ಕಂಡು ಮೇಲೆ ಬೀಳುತ್ತಿದ್ದ ತನ್ನ ನಾಯಿಯಿಂದ ನನ್ನನ್ನು ಬಚಾವು ಮಾಡಿದ. ಬದುಕಿದೆಯಾ ಬಡ ಜೀವವೇ ಎಂದಂದು ಕೊಂಡವನೇ ಮನೆಯತ್ತ ಡ್ರೈವ್ ಮಾಡತೊಡಗಿದೆ.

ಅಂತೂ ಹೀಗೆ ಮನೆ ಸೇರಿದ ನಾಯಿಮರಿಗಾಗಿ ಈಗಾಗಲೇ ತಾನೇ ಸ್ವತಃ ಹಳೆಯ ಹರಿದ ಬೆಡ್ ಶೀಟಿನಿಂದ ತಯಾರಿಸಿದ್ದ ಹಾಸಿಗೆಯನ್ನು ವರಾಂಡದಲ್ಲಿ ಹಾಸಿ ಕಾಯುತ್ತ ನಿಂತಿದ್ದ ನನ್ನ ಮನೆಯಾಕೆ ಯಾಕೋ ಆರತಿ ಮಾಡುವುದೊಂದನ್ನು ಮರೆತು ಬಿಟ್ಟಿದ್ದಳು. ಕಾರು ಮನೆಯ ಮುಂದೆ ನಿಲ್ಲುವುದೇ ತಡ, ಮಗನ ವಾರಿಗೆಯ ಬೀದಿಯ ಮಕ್ಕಳೆಲ್ಲ ನಾಯಿಮರಿಯ ಸ್ವಾಗತಕ್ಕೆ ಸಜ್ಜಾಗಿ ನಿಂತು ಕುತೂಹಲದ ಮೂತಿಗಳಲ್ಲಿ ಮುತ್ತಿಕೊಂಡರು. ಅಂತೂ ಮಕ್ಕಳ ಎಳೆದಾಟ, ಕಿತ್ತಾಟಗಳಲ್ಲಿ ಹಣ್ಣಾದ ಮರಿ ಇದ್ದಕ್ಕಿದ್ದಂತೆ ಕುಂಯ್ ಕುಂಯ್ ಮಾಡತೊಡಗಿತು. ‘ಪಾಪ ಅದರ ಅಮ್ಮ ನೆನಪಾಗಿರಬೇಕು ಅಲ್ಲವೇನಪ್ಪ?’ ಮಗನ ಪ್ರಶ್ನೆಗೆ ಉತ್ತರ ಗೊತ್ತಾಗದಿದ್ದರೂ ಉಳಿದ ಹುಡುಗರನ್ನು ಮನೆಯಿಂದ ಹೊರಕ್ಕೆ ಕಳಿಸಲು ಉಪಾಯವಂತೂ ಸಿಕ್ಕ ಹಾಗಾಯಿತು. ಅಂತೂ ಇಂತೂ ನಾಯಿಯ ಗೃಹಪ್ರವೇಶ ಸಮಾರಂಭವು ಮುಗಿದದ್ದು ನಮ್ಮ ಹೊಟ್ಟೆಗಳಲ್ಲಿ ತಾಳ ಮದ್ದಲೆ ಪ್ರಾರಂಭವಾದ ಮೇಲಷ್ಟೆ. ಊಟಕ್ಕೆ ತಟ್ಟೆಯಮುಂದೆ ಕುಳಿತಾಗ ನಾಯಿಗೇನು ಊಟ ಕೊಡುವುದು ಅನ್ನುವ ಪ್ರಶ್ನೆ. ದೊಡ್ಡ ಬಟ್ಟಲಿನ ತುಂಬ ಹಾಲಿಟ್ಟು ಅದರ ಮುಂದೆ ಹಿಡಿದರೂ ಜಪ್ಪಯ್ಯ ಅನ್ನದೇ ಹಿಂದು ಹಿಂದಕ್ಕೆ ತೆವಳ ತೊಡಗಿದ ಅದು ಮತ್ತೆ ತನ್ನ ಕುಂಯ್ ಕುಂಯ್ ರಾಗವನ್ನು ಆರಂಭಿಸಿತು. ಹೊಸ ಪರಿಸರ ತನಗೆ ತಾನೇ ಸರಿಹೋಗುತ್ತೆ ಅನ್ನುವ ಸಮಾಧಾನದಲ್ಲಿ ಅಂತೂ ಹಾಸಿಗೆ ಸೇರಿದೆವು.

ಒಂದರಘಳಿಗೆಯೂ ಕಳೆದಿತ್ತೋ ಇಲ್ಲವೋ, ಕುಂಯ್ ಕುಂಯ್ ರಾಗ ತಾರಕಕ್ಕೇರಿತು. ಅದು ಎಷ್ಟು ಕರುಣಾರಸಭರಿತವಾಗಿತ್ತೆಂದರೆ, ಆಚೀಚೆಯ ಮನೆಯ ಗೇಟುಗಳೆಲ್ಲ ಸಶಬ್ದವಾಗಿ ತೆರೆದುಕೊಂಡು, ದಪ್ಪ ದಪ್ಪ ಹೆಜ್ಜೆಗಳು ನಮ್ಮ ಮನೆಯತ್ತ ಧಾವಿಸಿಬಂದುದು ನಮ್ಮ ಅರಿವೆಗೆ ಬರುವ ಮೊದಲೇ, ನಮ್ಮ ಅಕ್ಕಪಕ್ಕದವರೆಲ್ಲ ತಮ್ಮ ನಿದ್ರೆಗೆ ಭಂಗ ತರುತ್ತಿರುವ ಈ ರೋದನವನ್ನು ತಕ್ಷಣ ನಿಲ್ಲಿಸದಿದ್ದರೆ ಪೋಲೀಸರಿಗೆ ದೂರು ಕೊಡಬೇಕಾಗುತ್ತದೆನ್ನುವವರೆಗೂ ಮುಟ್ಟಿಹೋಯಿತು. ಎಂದೆಂದೂ ಕತ್ತು ತಗ್ಗಿಸದೇ ಅವರಿವರ ಕಾಲು ಹಿಡಿಯದೇ ನಾನಾಯಿತು ನನ್ನ ದಾರಿಯಾಯಿತು ಎಂದು ತಿರುಗುತ್ತಿದ್ದ ನನ್ನನ್ನು ಮಣಿಸಲೆಂದೇ ಅವ್ರೆಲ್ಲರೂ ಗುಂಪು ಕಟ್ಟಿಕೊಂಡು ನಿಶ್ಯಸ್ತ್ರನನ್ನಾಗಿಸಿದ ಹಾಗೆ ಅನ್ನಿಸಿತು. ಏನು ಮಾಡುವುದು? ಸರಿ ರಾತ್ರಿ. ವಿಧಿ ಇಲ್ಲ. ಅವರ ಕ್ಷಮೆ ಕೇಳಿ, ಮಾರನೇ ದಿನದೊಳಗೆ ಅವರಿಗಾಗಿರುವ ತೊಂದರೆಯನ್ನು ಸರಿಪಡಿಸುತ್ತೇನೆಂದು ಹೇಳಿ ಬೆವರೊರಿಸಿಕೊಂಡೆ. ಮಕ್ಕಳು ಪಾಪ ಮತ್ತೊಂದು ನಾಯಿಮರಿಯ ಹಾಗೆ ನನ್ನ ಕಾಲ ಬುಡದಲ್ಲಿ ತೆಪ್ಪಗೆ ಕೂತಿದ್ದವು. ದೇವರ ದಯೆ. ಅಥವಾ ಅದಕ್ಕೇ ಹಾಡುತ್ತಿದ್ದ ರಾಗದ ಮೇಲೆ ಉದಾಸೀನ ಹುಟ್ಟಿತೋ, ಅಂತೂ ನಾಯಿ ಮರಿ ರಾಗ ಪಾಡುವುದನ್ನು ನಿಲ್ಲಿಸಿ, ಬಟ್ಟಲಲ್ಲಿಟ್ಟಿದ್ದ ಕ್ಷೀರವನ್ನು ತೊಟ್ಟೂ ಬಿಡದಂತೆ ಸ್ವೀಕರಿಸಿ, ವರಾಂಡದ ಕಾಲೊರಸಿನ ಮೇಲೆ ಪವಡಿಸಿತು.

ಬೆಳಿಗ್ಗೆ ಅಲ್ಲಾ ಕೂಗುವ ಮೊದಲೇ ಎದ್ದು ನಾಯಿಮರಿಯನ್ನು ಬಹಿರ್ದೆಶೆಗೆ ಹೊರಗೆ ಕರೆದು ಕೊಂಡು ಹೋಗಬೇಕೆಂಬ ಆತಂಕದಲ್ಲಿ ರಾತ್ರಿಯಿಡೀ ನಿದ್ದೆ ಬಾರದೇ ಹೊರಳಿದೆ. ಅಂತೂ ಬೆಳಗಾಗಿ ನಾಯಿಮರಿಯಿದ್ದ ವರಾಂಡಕ್ಕೆ ಕಣ್ಣು ಹಾಯಿಸಿದರೆ, ಎಲ್ಲಿದೆ ನಾಯಿಮರಿ? ಮಗ, ಮಗಳ ಹಾಸಿಗೆಯೂ ಖಾಲಿ. ಸದ್ಯ ಮಕ್ಕಳು ತಮ್ಮ ಜವಾಬ್ದಾರಿ ತಾವೇ ವಹಿಸಿಕೊಂಡರಲ್ಲಾ ಎಂಬ ಹೆಮ್ಮೆ. ಹತ್ತೇ ನಿಮಿಷ ಇದ್ದ ಈ ಸಮಾಧಾನವನ್ನು ಓಡುತ್ತ ಬಂದ ಮಗಳು ಪುಸ್ಸೆನ್ನಿಸಿದಳು. ‘ಅಪ್ಪಾ ನೋಡು ನಾಯಿಮರಿಯನ್ನು ಯಾರೋ ಪೋಲಿ ಹುಡುಗರು ತಮ್ಮದು ಅಂತ ಎತ್ತಿಕೊಂಡು ಹೋಗುತ್ತಾ ಇದಾರೆ’ ಅವಳು ವಾಕ್ಯ ಮುಗಿಸುವ ಮೊದಲೇ ಅವಳಮ್ಮ ‘ನೀನೇನು ಮಾಡ್ತಾ ಇದ್ದೆ? ಹೇಳಕ್ಕೆ ಗೊತ್ತಾಗಲಿಲ್ವಾ?’ ಸಹಸ್ರನಾಮಾರ್ಚನೆ ಪ್ರಾರಂಭವಾಗುವುದರೊಳಗಾಗಿ ಮಗಳ ಜೊತೆಗೆ ಬಿರು ಹೆಜ್ಜೆಗಳನ್ನಿಡುತ್ತ ಓಡಿದೆ.
‘ಅಂಕಲ್, ನಮ್ಮನೇಲೂ ಇದೇ ಕಲರ್ ನಾಯಿ ಮರಿ ಇದೆ. ಅದೇ ಇರಬೇಕು ಅಂತ ತಗಂಡಿದ್ದೆ. ಆದ್ರೆ ಇದು ಹೆಣ್ಣು, ನಮ್ಮದಲ್ಲ. ತೊಗೊಳ್ಳಿ’ ನಾಯಿಮರಿಯನ್ನು ನನ್ನ ಮುಖಕ್ಕೆ ಹಿಡಿದ ಹುಡುಗನನ್ನು ದಿಟ್ಟಿಸಿದೆ. ಸುಳ್ಳು ಅನ್ನಿಸಲಿಲ್ಲ. ಇಷ್ಟರವರೆಗೂ ನಾಯಿಮರಿಯ ಸಂಭ್ರಮದಲ್ಲಿ ಅದು ಗಂಡೋ, ಹೆಣ್ಣೋ ಯೋಚಿಸದೇ ಇದ್ದ ನನಗೆ ಈಗ ಮತ್ತೊಂದು ವಿಷಯ ಗಮನಕ್ಕೆ ಬಂತು. ಅದೆಂದರೆ ನಮ್ಮ ನಾಯಿ ಮರಿ ಹೆಣ್ಣು! ಮತ್ತು ಇಂದಲ್ಲ ನಾಳೆ ಇಂಥ ಹಲವು ಮರಿಗಳಿಗೆ ಮಾತೆಯಾಗುವ ಪುಣ್ಯವಂತೆ ಅಂತ.

ಫೀಡಿಂಗ್ ಬಾಟಲು, ಒಳಲೆ ಇಲ್ಲದೇ ಅಂತೂ ನಾಯಿ ಮರಿ ಹಾಲು ಕುಡಿಯಲು ಕಲಿಯಿತು. ಆ ಎಳೆಯ ಬೊಮ್ಮಟೆಯ ಮುಂದೆ ತನ್ನ ಪಾಲಿನ ಬ್ರೆಡ್ಡು ಜಾಮುಗಳನ್ನಿಟ್ಟು ಹಿಂದಿನ ದಿನದ ಅಪೂರ್ಣ ಹೋಮ್ ವರ್ಕ್ನ್ನು ಪೂರೈಸಿಕೊಳ್ಳುತ್ತ ಆಟೋ ಬರುವವರೆಗೂ ನಾಯಿ ಮರಿಯ ಸಾಮೀಪ್ಯದಲ್ಲೇ ಸುಖ ಕಾಣುತ್ತಿದ್ದ ಮಗ ಸಂಜೆ ಶಾಲೆಯಿಂದ ಬಂದ ಮೇಲೆ ಆಟಕ್ಕೆ ಹೊರಗೆಲ್ಲೂ ಹೋಗದೇ ಅದರೊಂದಿಗೇ ಆಟ, ಓಟಗಳಿಗೆ ತೊಡಗಿದ. ಅದಕ್ಕೆ ಯಾವ ಹೆಸರಿಡುವುದೆಂದು ಸದಾ ಚರ್ಚೆಯಲ್ಲೇ ಇರುತ್ತಿದ್ದ ಮಕ್ಕಳು ಅಂತೂ ಇಂತೂ ‘ರಾಣಿ’ಎಂಬ ಅಭಿದಾನವನ್ನು ಅದಕ್ಕೆ ಕರುಣಿಸಿದರು.

ಆಗೀಗ ನಾಯಿಸಾಕುವ ಪಾಠ ಹೇಳಿಕೊಡುವ ನೆವದಿಂದ ಮನೆಗೆ ಹೋಗಿ-ಬಂದು ರೂಢಿಯಾಗಿದ್ದ ಸಿದ್ದಯ್ಯ ನನ್ನ ಮನೆಯಾಕೆಯಿಂದ ದುಡ್ಡು ಕಾಸು ಅಷ್ಟಿಷ್ಟು ಗಿಟ್ಟಿಸಿದ. ಬಂದಾಗ ಕಾಫಿಯ ಜೊತೆಗೆ ತಿಂಡಿ-ಊಟಗಳನ್ನೂ ಗಿಟ್ಟಿಸಿಕೊಂಡೇ ವಾಪಸಾಗುತ್ತಿದ್ದ. ಜೊತೆಗೆ ನಾನು ಇಷ್ಟೂ ದಿನ ಹೇಳದೇ ಬಚ್ಚಿಟ್ಟಿದ್ದ ಆಫೀಸಿನ ಕೆಲವು ಸುದ್ದಿಗಳನ್ನು ಮನೆಯಾಕೆಯ ಕಿವಿಗೆ ಹಾಕಿ, ನನ್ನನ್ನು ಅವಳು ಅನುಮಾನಿಸುವಂತೆಯೂ ಮಾಡಿಬಿಟ್ಟ.

ದಿನದಿಂದ ದಿನಕ್ಕೆ ನಮಗೆ ಹೊಂದಿಕೊಳ್ಳುತ್ತ ಹಾಲಿನ ಜೊತೆಗೆ ಬಿಸ್ಕತ್ತು, ರೊಟ್ಟಿಗಳನ್ನೂ ಮೆಲ್ಲುತ್ತ ರಾಣಿ ಎರಡು ತಿಂಗಳು ಕಲೆಯುವಷ್ಟರಲ್ಲಿ ಮನೆಯ ಒಬ್ಬ ಗೌರವಾನ್ವಿತ ಸದಸ್ಯೆಯಾಗಿಬಿಟ್ಟಳು. ಮೈಕೈಗಳ ಜೊತೆಗೇ ಗಂಟಲನ್ನೂ ಬೆಳೆಸಿಕೊಂಡ ಅವಳು ಮನೆಯೆದುರು, ಬೀದಿಯಲ್ಲಿ, ಸುಮ್ಮನೇ ನಡೆದು ಹೋಗುವವರಿಗೂ ತನ್ನ ಅರಚಾಟ, ಕಿರುಚಾಟಗಳಿಂದ ಭಯದ ಬೀಜವನ್ನು ಬಿತ್ತತೊಡಗಿದಳು. ಪೋಸ್ಟ್ ಮ್ಯಾನ್, ಪೇಪರು-ಹಾಲಿನ ಹುಡುಗರು ದೂರದಲ್ಲೇ ನಿಂತು ನಮ್ಮ ಹೆಸರನ್ನು ಗಟ್ಟಿಯಾಗಿ ಒದರುವಂತೆ ಮಾಡಿದಳು. ಎಚ್ಚರಿಕೆ ಎಂಬ ಬೋರ್ಡನ್ನು ಗೇಟಿಗೆ ತಗಲಿಸುವ ಅವಶ್ಯಕತೆ ಬೀಳಲೇ ಇಲ್ಲ.

ನಾಯಿಯೂ ಮತ್ತೊಂದು ಮಗುವಿನಂತಾಯಿತು ನನ್ನಾಕೆಗೆ. ಮಡಿಮೈಲಿಗೆಗಳೆಂದು ಅದನ್ನು ದೂರವಿಡಲು ಅವಳು ಪ್ರಯತ್ನಿಸಿದಶ್ಟೂ ಅದು ಅವಳ ಗಮನ ಸೆಳೆಯಲು ಚಿತ್ರ ವಿಚಿತ್ರ ಆಟಗಳನ್ನು ಹೂಡುತ್ತಿತ್ತು. ಅವಳ ಗದರಿಕೆಗೆ ಜಗ್ಗಿದಂತೆ ತೋರಿಸುತ್ತಲೇ, ಅವಳ ಮೈಮೇಲಿ ಹಾರಿ ಅದನ್ನು ಮುದ್ದಿಸುವಂತೆ ಪೀಡಿಸುತ್ತಿತ್ತು. ನಮ್ಮ ಊಟ ತಿಂಡಿಗಳು ನಡೆಯುತ್ತಿದ್ದಷ್ಟೂ ಹೊತ್ತು ಹೊರಗೇ ಇರುತ್ತಿದ್ದ ಅದು ಯಾವತ್ತೂ ನಮ್ಮ ಊಟದ ತಟ್ಟೆಗೆ ಮೂತಿ ಇಟ್ಟದ್ದು ಇಲ್ಲವೇ ಇಲ್ಲ. ನಮಗಿಂತಲೂ ಹೆಚ್ಚಾಗಿ ಅದು ವರಾಂಡ, ಹಾಲು, ರೂಮುಗಳ ವ್ಯತ್ಯಾಸವನ್ನು ಅಭ್ಯಸಿಸಿದ ಹಾಗೆ ಆಡುತ್ತಿತ್ತು. ವರಾಂಡ,ಹಾಲು ಮತ್ತು ಮುಂದಿನ ಮಕ್ಕಳ ರೂಮು ಬಿಟ್ಟು ಅದು ಒಳಕ್ಕೆ ಬಂದ ದಾಖಲೆ ಇಲ್ಲವೇ ಇಲ್ಲ. ಅದರ ತಟ್ಟೆಗೆ ಅನ್ನ ಬೀಳುವ ಮೊದಲು ಅದೆಂದೂ ಅನ್ನ ತೆಗೆದುಕೊಂಡು ಹೋಗಿದ್ದ ಪಾತ್ರೆಗೆ ಬಾಯಿ ಹಾಕಿದ ಉದಾಹರಣೆಗಳೇ ಇಲ್ಲ. ಮನೆಯ ಸದಸ್ಯರಲ್ಲೊಬ್ಬರು ಮನೆಗೆ ಬರುವವೇಳೆಯೊಳಗೆ ಮನೆಗೆ ಬಾರದಿದ್ದರೆ ಗೇಟಿನಲ್ಲೇ ನಿಂತು ಅವರನ್ನು ಕಾಯುವ ಅದರ ಪರಿ ಎಂಥವರೂ ಮೆಚ್ಚಲೇಬೇಕು. ಅದಕ್ಕೇನಾದರೂ ಅನಾರೋಗ್ಯದ ಸೂಚನೆಗಳಿದ್ದರೆ ನಮಗಿಂತಲೂ ಸ್ಪಷ್ಟವಾಗಿ ಊಟೋಪಚಾರಗಳನ್ನು ಬಿಡುವುದರ ಮೂಲಕ ಪ್ರಕಟಿಸುತ್ತಿತ್ತು. ಆಸ್ಪತ್ರೆಯತ್ತ ಕರೆದೊಯ್ಯುವಾಗ ಥೇಟ್ ರಚ್ಚೆ ಹಿಡಿದ ಮಗುವಿನ ಹಾಗೆ ನಮ್ಮ ಕಾಲು ಕಾಲಿಗೆ ಸುತ್ತಿಕೊಳ್ಳುತ್ತ, ನಮ್ಮ ರಕ್ಷಣೆಯಲ್ಲಿ ತಾನು ಸುಭದ್ರವಾಗಿದ್ದೇನೆಂದು ಪ್ರಕಟಿಸುತ್ತಲೇ ಇರುತ್ತಿತ್ತು.

ಹಬ್ಬಹರಿದಿನಗಳಿಗೆ ನಮ್ಮೂರಿಗೆ ಹೋಗಬೇಕಾಗಿ ಬಂದಾಗ ಈಗ ಸಮಸ್ಯೆಯಾಗತೊಡಗಿತು. ನಾಯಿಮುಂಡೇದು ಅದನ್ನು ಹ್ಯಾಗೆ ಊರಿಗೆ ಕರೆದೊಯ್ಯಲು ಸಾಧ್ಯ? ಕಂಡಕ್ಟರು ಸುಮ್ಮನಿರುತ್ತಾನೆಯೇ? ಪ್ರತಿಸಾರಿ ಕಾರಿನಲ್ಲಿ ಹೋಗುವುದು ಅನವಶ್ಯಕ ಖರ್ಚಿನ ದಾರಿ. ಅದರ ಊಟ ಮತ್ತು ಬಯಲಿನ ಕೆಲಸಗಳಿಗೆ ಒಂದು ಜನವನ್ನು ನೇಮಿಸದೇ ನಮ್ಮ ಪ್ರಯಾಣ ದುಸ್ತರವಾಗತೊಡಗಿತು. ಸಿದ್ದಯ್ಯನೋ ಅವನ ಮಗನೋ ನಾಯಿಯ ಉಸ್ತುವಾರಿ ನೋಡಿಕೊಳ್ಳುತ್ತೇವೆಂದರೂ, ಅವರ ಉಸ್ತುವಾರಿ ನಮ್ಮ ಅಳತೆಗೆ ಮೀರಿದ ಖರ್ಚಾಗಿ ಬಿಡುತ್ತಿತ್ತು. ಜೊತೆಗೆ ಇಡೀ ಬೀದಿಯ ಮೇಲುಸ್ತುವಾರಿ ತನ್ನದೇ ಅನ್ನುವ ಹಾಗೆ ವರ್ತಿಸುವ ನಮ್ಮ ರಾಣಿಯ ಠಾಕು ಠೀಕಿಗೆ ಹೊರ ಬೀದಿಯ ನಾಯಿಗಳು ದೂರದಿಂದಲೇ ಬೈ ಬೈ ಮಾಡುತ್ತಿದ್ದವು. ನಾವು ಕಣ್ಣೆದುರಿಲ್ಲದ ಘಳಿಗೆಯೊಳಗೆ ಅದು ಬೇರೆ ನಾಯಿಯ ಜೊತೆ ಹೊಡೆದಾಡಿ ವಿಜಯ ದುಂದುಭಿ ಮೊಳಗಿಸಿಯೇ ಬರುತ್ತಿತ್ತು. ಕಿವಿಯನ್ನು ಹರಿದುಕೊಂಡೋ, ಕಾಲಿನಲ್ಲಿ ಗಾಯ ಮಾಡಿಕೊಂಡೋ ಬರುತ್ತಿದ್ದ ಅದನ್ನು ಕಾಯುವುದು ನಮ್ಮ ನಾಯಿಪಾಡಾಗಿ ಬದಲಾಯಿತು.

ನಮ್ಮ ಹೆಮ್ಮೆ ಭೂಮಿಗಿಳಿದದ್ದು ಕಳೆದ ಶ್ವಾನ ಮಾಸ. ಬೀದಿ ಬೀದಿಗಳಲ್ಲಿ ರಾಸಕ್ರೀಡೆಗೆ ಅದರ ಸೋದರ ಸಂಭಂಧಿಗಳು ಪ್ರಯತ್ನಿಸುತ್ತಿರುವಾಗ ಇದೆಲ್ಲಿ ಸುಮ್ಮನಿರಲು ಸಾಧ್ಯ? ಬೆಳಗು ಬೈಗುಗಳಿಲ್ಲದೇ ಅದರ ಗೆಳೆಯರನೇಕರು ನಮ್ಮ ಮನೆಯ ಸುತ್ತ ಠಳಾಯಿಸತೊಡಗಿದರು. ನಮ್ಮ ಚೈನು ಅದರ ಉರುಳಾದಂತೆ, ಬಿದ್ದು ಹೊರಳಿ ತನ್ನ ಪ್ರತಿಭಟನೆ ತೋರಿಸತೊಡಗಿತು. ಸ್ವಲ್ಪ ಸದರ ಕೊಟ್ಟರೆ ತಪ್ಪಿಸಿಕೊಂಡು ದಿನಗಟ್ಟಲೆ ಮನೆಗೆ ಬಾರದೇ ತನ್ನ ಗೆಳೆಯರೊಂದಿಗೆ ಕಳೆಯತೊಡಗಿತು. ಲೌಕಿಕದ ಎಲ್ಲ ವಿಚಾರಗಳಲ್ಲೂ ಒಂದು ಬಗೆಯ ನಿರ್ಲಕ್ಷ್ಯ ತೋರಿಸುವ ಸಾಮಾನ್ಯ ಮಧ್ಯಮವರ್ಗದ ನಮ್ಮಂಥವರಿಗೆ ಮುಜುಗರ ಹುಟ್ಟಿಸುವುದೇ ಇಂಥ ಸಂಗತಿಗಳು. ಪಶು ಆಸ್ಪತ್ರೆಗೆ ಕರೆದೊಯ್ದು ಕೃತಕ ಗರ್ಭಧಾರಣೆ ಮಾಡಿಸಿದರೂ ಅದರ ಬಾಣಂತನ ನಮ್ಮನ್ನೊಂದು ಸಮಸ್ಯೆಯಾಗಿ ಕಾಡುವುದು ಖಂಡಿತವಾಗತೊಡಗಿತು. ನಾಯಿಸಾಕಿದ ನಾಯಿಪಾಡು ನಮ್ಮನ್ನು ಕಾಡತೊಡಗಿತು.

ಎಲ್ಲವೂ ನಾನೆಣಿಸಿದಂತೆಯೇ ನಡೆದುಹೋಯಿತು. ಹತ್ತೆಂಟು ದಿನಗಳಲ್ಲಿ ತನ್ನ ಮೂಲ ವಾಂಛೆಯನ್ನು ಪೂರೈಸಿಕೊಂಡ ನಮ್ಮ ರಾಣಿ ಏನೂ ನಡೆದೇ ಇಲ್ಲವೆಂಬಂತೆ ಮಾಮೂಲಿಯಾದರೂ ಮೈಕೈ ತುಂಬಿಕೊಂಡು ದಷ್ಟಪುಷ್ಟವಾಗಿ ಕಾಣತೊಡಗಿದಳು. ಮೊದಲಿನ ಹುಡುಗಾಟಿಕೆ ಮರೆತು ಜವಾಬ್ದಾರಿಯಿಂದ ಬರಿಯ ಗುರುಗುಟ್ಟುವಿಕೆ ಮತ್ತು ಗಂಭೀರ ನಡಿಗೆಗಳಿಂದ ನಡೆದುಕೊಳ್ಳತೊಡಗಿದಳು. ಊಟೋಪಚಾರ ಮತ್ತು ಆರಾಮವನ್ನೇ ಇಷ್ಟಪಡತೊಡಗಿದಳು. ನನ್ನ ಹೆಂಡತಿ ಮನೆಯ ತುಂಬ ಓಡಾಡಬಹುದಾದ ನಾಯಿ ಮರಿಗಳನ್ನು ಕಲ್ಪಿಸಿಕೊಂಡು ನತಮಸ್ತಕಳಾದಳು. ಗಂಡುನಾಯಿಯನ್ನು ತಾರದಿದ್ದದ್ದಕ್ಕೆ ಇದೇ ಮೊದಲ ಬಾರಿ ಸಿಡಿಮಿಡಿ ಮಾಡಿದಳು.

ನಾವು ಏನೇ ಮಾಡಿದರೂ ಕಾಲ ನಿಲ್ಲುವುದಿಲ್ಲವಲ್ಲ. ಪ್ರಸವದ ದಿನ ಸಮೀಪಿಸಿದ ಹಾಗೆ ತನ್ನ ಚಟುವಟಿಕೆ ಮತ್ತು ಕ್ರಿಯಾಶೀಲತೆಗಳನ್ನು ದಮನಿಸಿಕೊಳ್ಳುತ್ತ ಬಂದ ನಮ್ಮ ರಾಣಿ ಅದೊಂದು ಶುಭ ಮುಂಜಾವಿನಲ್ಲಿ ಐದು ಮರಿಗಳಿಗೆ ಜನ್ಮ ನೀಡಿಯೇ ಬಿಟ್ಟಳು. ಸ್ಕ್ಯಾನಿಂಗ್ ಮಾಡಿಸದೇ, ಸಿಸೇರಿಯನ್ನಿನ ಹಂಗಿಲ್ಲದೇ ನಾರ್ಮಲ್ ಡೆಲಿವೆರಿಯಲ್ಲಿ ತನ್ನು ಆರೋಗ್ಯವನ್ನೂ ಉಳಿಸಿಕೊಂಡಳು. ವೈದ್ಯರಿಲ್ಲದೇ, ನರ್ಸುಗಳಿಲ್ಲದೇ, ಸ್ವತಃ ತಾನೇ ತನ್ನ ಗರ್ಭವನ್ನಿಳಿಸಿಕೊಂಡ ಅವಳು, ಈಗ ತನ್ನ ಮಕ್ಕಳನ್ನು ಕಾಪಿಡುವುದರಲ್ಲಿ ಮಗ್ನಳಾಗಿಬಿಟ್ಟಳು. ಕಾಂಪೌಡಿನ ಸುತ್ತ ಠಳಾಯಿಸುತ್ತಲೇ ಮರಿಗಳಿಗೂ ಬದುಕಿನ ಪಾಠ ಕಲಿಸತೊಡಗಿದಳು.

ವಿಧಿ ಯಾರನ್ನು ತಾನೆ ತಮ್ಮ ಪಾಡಿಗೆ ಇರಲು ಬಿಟ್ಟಿದೆ? ಅದು ರಾಜನಿಗೂ, ಮಹರಾಣಿಗೂ ಹಾಗೆ ನಮ್ಮ ರಾಣಿಗೂ ಸಹ. ಹುಟ್ಟಿದ ಐದು ಮರಿಗಳಲ್ಲಿ ಮೂರನ್ನು ಸಿದ್ದಯ್ಯನ ಮಗ ಅವನ ನೆಂಟರಿಗೆ ಕೊಂಡೊಯ್ದರೆ ಒಂದು ನಮ್ಮೆದುರು ಮನೆ ಸೇರಿತು. ಉಳಿದ ಒಂದು ಮರಿ ಪ್ರಾಯಶಃ ಅದಕ್ಕೆಲ್ಲೋ ಬಾಲಾರಿಷ್ಠವಿದ್ದಿರಬೇಕು. ಸದಾ ತಾಯಿಯ ಜೊತೆಯಲ್ಲೇ ಇರುತ್ತಾ, ಸ್ವಾಭಾವಿಕ ಚಟುವಟಿಕೆಗಳಿಂದ ದೂರವೇ ಇರುವ ಮತ್ತು ಮಕ್ಕಳ ಶಬ್ದ ಕೇಳಿದರೆ ಬಾಗಿಲ ಸಂದಿಗೆ ಓಡುವ ಆ ಪುಟ್ಟ ಕಂದನ ಪಾಲನೆ ರಾಣಿಗೆ ಪ್ರಾಯಶಃ ಕಷ್ಟದ್ದೆನಿಸಿರಬೇಕು. ವೈದ್ಯರೂ ಯಾವ ಭರವಸೆಯನ್ನೂ ಕೊಡದೇ ಹೋದರು.

ಆ ಸಂಜೆ ನಮ್ಮ ಬದುಕಿನ ಕರಾಳ ಸಂಜೆ. ನನ್ನ ಮಗನನ್ನು ಶಾಲೆ ಮುಗಿದ ಬಳಿಕ ಮನೆಗೆ ಕರೆತರುವ ಆಟೋ ರಿಕ್ಷಾ ಭರ್ರನೆ ಬಂದು ಆ ಪಾಪಿ ಮರಿಯ ಮೇಲೆ ಹತ್ತಿ ಇಳಿಯಿತು. ನಮ್ಮ ದುಃಖದ ಕಟ್ಟೆಯ ಮಿತಿ ಮೀರಿಸಿ, ನೆಂಟರಿಷ್ಟರು ಸತ್ತಾಗಲೂ ಸೂತಕವಿರದಿದ್ದ ನಮ್ಮ ಕುಟುಂಬ ಆ ಇಡೀ ರಾತ್ರಿ ನತದೃಷ್ಟ ತಾಯಿಯನ್ನು ಸಂತೈಸುತ್ತಲೇ ಬೆಳಗು ಮೂಡಿಸಿತು.

ಪುತ್ರ ಶೋಕ ನಿರಂತರವೆನ್ನುತ್ತದೆ ಗರುಡ ಪುರಾಣ. ಎದೆಯುದ್ದ ಬೆಳೆದ ಮಕ್ಕಳು ಕಣ್ಮುಚ್ಚಿದರೆ ತಂದೆ ತಾಯಿಯರ ದುಃಖಕ್ಕೆ ಪಾರವಾದರೂ ಇದ್ದೀತೆ? ಇದು ಬರಿಯ ಮನುಷ್ಯನಿಗಷ್ಟೇ ಅಲ್ಲ. ಸಕಲ ಜೀವ ಜಂತುಗಳಿಗೂ ಕಾಡುವ ಕರುಳು-ಕೊರಳಿನ ಸಂಬಂಧ. ಮರಿ ತೀರಿಕೊಂಡ ದಿನದಿಂದಲೇ ಲೌಕಿಕದ ಗದ್ದಲಗಳಿಂದ ದೂರಾಗುತ್ತ ಉಳಿದ ನಮ್ಮ ರಾಣಿ ಯಾವಾಗ ಊಟ ಮಾಡುತ್ತಿದ್ದಳೋ, ನಿದ್ರಿಸುತ್ತಿದ್ದಳೋ ಬಲ್ಲವರಿಲ್ಲ. ಸುಮ್ಮಸುಮ್ಮನೆ ಅವರಿವರ ಮೇಲೆ ಹರಿಹಾಯುವುದನ್ನು, ಗುರ್ರೆಂದು ಹೊಸಬರ ಮೈಮೇಲೇರಿ ಹೋಗುವುದನ್ನೂ ಮರೆತೇ ಬಿಟ್ಟ ಅವಳು ನಮಗೆಲ್ಲ ನಿಗೂಢವಾಗತೊಡಗಿದಳು.

ನಾಯಿಯನ್ನು ನಾರಾಯಣ ಸ್ವರೂಪಿ ಅನ್ನುತ್ತಿದ್ದರು ನಮ್ಮಪ್ಪ. ದತ್ತಾತ್ರೇಯ ದೇವರ ಸುತ್ತ ನಾಕು ನಾಯಿಗಳಿರುವುದನ್ನು ಕ್ಯಾಲೆಂಡರಿನಲ್ಲಿ ನೋಡಿದ್ದೇವೆ. ಧರ್ಮರಾಜನ ಜೊತೆ ಸ್ವರ್ಗಕ್ಕೆ ಹೋದುದು ನಾಯಿ ಮಾತ್ರವಂತೆ. ಕುರುಡು ನಾಯಿ ತಾ ಸಂತೇಗೆ ಬಂತಂತೆ ಅಂತ ದಾಸರು ಕರೆದದ್ದು ಈ ಮನುಜ ನಾಯಿಯನ್ನು ತಾನೆ? ನಾಯಿನೆರಳು ಕಳೆದ ಜನ್ಮದ ನೆನಪಂತೆ. ನಾಯಿ ನಿಷ್ಟೆ, ನಾಯ ನಂಬಿಕೆ ಹೇಳಿ ಮುಗಿಸಲು ಅಸಾಧ್ಯವಾದವು. ನಾಯಿ ನಾಲಗೆ ಮತ್ತು ನಾಯಿಯ ಮೂಗೂ ಖ್ಯಾತವಾದುವೇ.

ಹೀಗೆ ಒಂದು ದಿನ ನಮ್ಮ ಕಣ್ಣಳತೆಯಿಂದ ಇದ್ದಕ್ಕಿದ್ದಂತೆ ದೂರವಾದ ನಮ್ಮ ರಾಣಿ ಈಗೆಲ್ಲಿದ್ದಾಳೋ ನಮಗಂತೂ ಗೊತ್ತಿಲ್ಲ. ಅವಳು ಮನೆ ಬಿಟ್ಟು ಹೋಗುವ ಸಂಜೆಯಿಡೀ ನನ್ನಾಕೆಯ ಕಾಲುಕಾಲಿಗೆ ಸುತ್ತಿಕೊಳ್ಳುತ್ತಿತ್ತೆಂದು ಅದು ಕಾಣೆಯಾದ ಮೂರನೇ ದಿನ ನನ್ನಾಕೆ ಬಾಯಿ ಬಿಟ್ಟಮೇಲಷ್ಟೇ ನನಗೆ ತಿಳಿದದ್ದು. ಮಗ ಮತ್ತು ಮಗಳು ಇಬ್ಬರೂ ಎರಡು ದಿನ ಮಂಕಾಗಿದ್ದವರು ನಂತರ ದೈನಿಕದ ಬಿರುಸಿಗೆ ಮಾಮೂಲಾದರೂ ಯಾಕೋ ಮತ್ತೊಂದು ನಾಯಿಯನ್ನು ತಂದು ಸಾಕೋಣ ಅಂತ ಹೇಳಲೇ ಇಲ್ಲ. ಅನ್ನ ವಿಪರೀತ ಮಿಕ್ಕ ದಿನ ಇವಳು ರಾಣಿಯನ್ನು ನೆನೆಸಿಕೊಳ್ಳುತ್ತಾಳಾದರೂ ಹೆಚ್ಚೇನೂ ಲಂಬಿಸುವುದಿಲ್ಲ.

ಕರೆಂಟು ಇಲ್ಲದ ರಾತ್ರಿಗಳಲ್ಲಿ, ನಿದ್ರೆ ಬಾರದೇ ಹೊರಳುವ ದಿನಗಳಲ್ಲಿ, ಈಗ ರಿಟೈರಾಗಿ ಅಪರೂಪಕ್ಕೆ ಆಫೀಸಿಗೆ ಬರುವ ಸಿದ್ದಯ್ಯನನ್ನು ಕಂಡಾಗಲೆಲ್ಲ ನಮ್ಮ ನಾಯಿಯ ನೆನಪು ಒತ್ತರಿಸಿ ಬರುತ್ತದೆ. ದೂರದಲ್ಲೆಲ್ಲೋ ಬೊಗಳುತ್ತಿರುವ ಶಬ್ದ, ನ್ಯಾಷನಲ್ ಜಿಯಾಗ್ರಫಿಕ್ನಲ್ಲಿ ಕಂಡ ಬೇರೆ ಯಾವುದೋ ನಾಯಿಯ ಚಿತ್ರ ಕ್ಷಣಕಾಲ ಮನಸ್ಸನ್ನು ಆರ್ದ್ರಗೊಳಿಸುತ್ತದೆ. ಆದರೂ ನನಗೆ ಮತ್ತೊಂದು ನಾಯಿ ತಂದು ಸಾಕುವ ಮನಸ್ಸು ಬಂದಿಲ್ಲ. ಪ್ರಾಯಶಃ ಮುಂದೂ ಬರಲಾರದು ಅನ್ನಿಸುತ್ತಿದೆ.

(ಕೃಪೆ ’ಮಯೂರ’ ಜನವರಿ ೨೦೦೯)

ಮಂಗಳವಾರ, ಡಿಸೆಂಬರ್ 23, 2008

ಮಾತೆಂಬ ಜ್ಯೋತಿರ್ಲಿಂಗ

ಮಾತು- ಭಾಷೆಯೊಂದನ್ನು ಆಡುವ ಸ್ವರೂಪ. ನಾವುಕನ್ನಡಿಗರು, ಅವರು ತಮಿಳರು, ನೀವು ತುಳುವರು ಎಂದು ಹೇಳುವಾಗೆಲ್ಲ ಭಾಷೆಯನ್ನೇ ಅವರವರ ಪರ್ಯಾಯವಾಗಿ ಬಳಸುತ್ತೇವೆ. ಭಾಷೆಯ ಮೂಲಕ ಜನರನ್ನು ಗುರ್ತಿಸುವುದು ಜಾತಿಯ ಮೂಲಕ ಗುರ್ತಿಸುವುದಕ್ಕಿಂತಲೂ ಒಳ್ಳೆಯದೇ ತಾನೆ? ‘ಭಾಷ್’ ಎಂಬ ಸಂಸ್ಕೃತದ ಧಾತುವಿಗೆ ಹೇಳು, ತಿಳಿಸು ಎಂಬ ಅರ್ಥ ಇರುವುದಾದರೂ, ‘ಸೊಲ್’ ಎಂಬ ಕನ್ನಡದ ರೂಪಕ್ಕಿರುವ ಅರ್ಥವೂ ಇದೇ ಬಗೆಯದು. ಅಂದರೆ ಒಂದು ಹೇಳಿಕೆಯನ್ನು ಕೊಡುವುದಕ್ಕೆ ಬಳಸುವ ಮಾಧ್ಯಮವನ್ನು ಭಾಷೆ ಎಂದು ಕರೆಯುವುದಾದಲ್ಲಿ ಆ ಮಾಧ್ಯಮವು ಬಳಸುವ ಶಬ್ದರೂಪಗಳನ್ನು ‘ಮಾತು’ ಎಂದು ಒಪ್ಪಿಕೊಳ್ಳಬೇಕಾಗುತ್ತದೆ. ನಮಗರ್ಥವಾಗದ ಪ್ರಾಣಿಗಳ ಕೂಗುಗಳು ಅವು ಬಳಸುವ ಭಾಷೆಯ ಮಾತುಗಳೇ ತಾನೆ? ಕಾಗೆಯ ಕೂಗನ್ನು, ಗುಬ್ಬಿಯ ದನಿಯನ್ನು ಗಮನವಿಟ್ಟು ಕೇಳಿದರೆ ಅವುಗಳ ಕೂಗಿನ ಸ್ತರ ಸಂದರ್ಭಕ್ಕೆ ತಕ್ಕಂತೆ ಬದಲಾಗುವುದನ್ನು ಗುರ್ತಿಸಬಹುದು. ಮಾತು ಜ್ಯೋತಿರ್ಲಿಂಗ ಎಂಬ ಸಾಲಿನ ಅರ್ಥ ಈಗ ಎಟುಕಲಿಕ್ಕೆ ಸಾಧ್ಯವಾದೀತು. ಆದರೆ ಭಾಷೆ ಅನ್ನುವುದು ಪ್ರಮಾಣಮಾಡು ಎನ್ನುವ ಅರ್ಥವನ್ನೂ ತನ್ನೊಟ್ಟಿಗೇ ಇಟ್ಟುಕೊಂಡಿರುವುದರಿಂದ ಯಾವತ್ತೂ ಆಡುವುದನ್ನು ಮನಸ್ಸಾಕ್ಷಿಪೂರ್ವಕವಾಗಿ ಸ್ಪಷ್ಟವಾಗಿ ಮತ್ತು ಪ್ರಾಮಾಣಿಕವಾಗಿಯೇ ಆಡಬೇಕು ಎಂದಾಯಿತು. ಆದರೆ ಇವತ್ತು ಶಾಸ್ತ್ರೀಯ ಭಾಷೆಯ ವಿಷಯದಲ್ಲಿ ನಡೆಯುತ್ತಿರುವ ಸಂಗತಿಗಳನ್ನು ನೋಡಿದರೆ ‘ಭಾಷೆ’ಎನ್ನುವುದರ ಹಿಂದೆ ಮನಸ್ಸಾಕ್ಷಿ ಇರಲೇಬೇಕು ಎನ್ನುವುದಕ್ಕೂ ಪುರಾವೆ ದೊರಕುತ್ತಿದೆ.

ಮಾತು- ಒಂದು ಪ್ರಭೆ. ಮಾತಿನ ಪ್ರಭೆಯಿಲ್ಲದಿದ್ದಲ್ಲಿ ಜಗತ್ತು ಕತ್ತಲಲ್ಲಿರುತ್ತಿತ್ತು ಅನ್ನುತ್ತಾನೆ ಒಬ್ಬ ಭಾಷಾತಜ್ಞ. ಮಾತನಾಡುವ ವಿಶೇಷ ಶಕ್ತಿ ಇರುವ ಏಕ ಮಾತ್ರ ಜೀವಿಯಾಗಿರುವ ಮನುಷ್ಯ ತನ್ನ ಮಾತಿಗೆ ಮಿತಿ, ನಿರ್ಮಿತಿ ಮತ್ತು ಪ್ರಾದೇಶಿಕತೆಗಳ ಕಾರಣ ಕೊಟ್ಟು ಹಲವು ಭಾಷೆಗಳನ್ನು ಕಟ್ಟುತ್ತ ಹೋದ. ಒಂದೇ ಭಾಷೆಯು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುವುದನ್ನೂ ನಾವು ನೋಡಿದ್ದೇವೆ. ಹಾಗೆಯೇ ದಿನ ಕಳೆದ ಹಾಗೆಲ್ಲ ಭಾಷೆಯೊಂದರ ಬಳಸುವಿಕೆ ಅದರ ವಿಸ್ತರಣೆಯನ್ನು ಬಿಂಬಿಸುವ ಹಾಗೇ ಬಳಸಲಾರದ ಕಾರಣಕ್ಕೆ ಅದು ಸಾಯುವುದನ್ನೂ ನಾವು ಗಮನಿಸಿದ್ದೇವೆ. ಎಲ್ಲೆಲ್ಲಿ ಮಾಧ್ಯಮವಾಗಿ ಭಾಷೆ ಬಳಕೆಯಾಗುವುದಿಲ್ಲವೋ ಅಲ್ಲೆಲ್ಲ ಅದು ತನ್ನ ಆಯುಷ್ಯವನ್ನು ಕಳೆದುಕೊಳ್ಳುತ್ತಲೇ ಇದೆ. ಕನ್ನಡವನ್ನೇ ಉದಾಹರಿಸಿದರೂ ಸಾಕು. ಹಳೆಗನ್ನಡ, ನಡುಗನ್ನಡ ಮುಗಿದು ಈಗ ಬಳಕೆಯಲ್ಲಿರುವ ಹೊಸಗನ್ನಡವೂ ಸಾಕಷ್ಟು ಬದಲಾವಣೆಗಳಿಗೆ ತನ್ನನ್ನು ತೆರೆದುಕೊಳ್ಳುತ್ತಲೇ ಇದೆ. ಇನ್ನು ಆದಿಮಾನವನಾಡಿದ ಮಾತು ಹೇಗೆ ನಮಗೆ ಅರ್ಥವಾಗಲು ಸಾಧ್ಯ? ಪುರಾಣಯುಗದ ಮಾತು ವಿಜ್ಞಾನ-ತಂತ್ರ ಜ್ಞಾನಯುಗದಲ್ಲಿ ಕವಡೆಯ ಕಿಮ್ಮತ್ತನ್ನೂ ಉಳಿಸಿಕೊಂಡಿಲ್ಲ. ಅದು ಸಾಧ್ಯವೂ ಇಲ್ಲದ ಮಾತು! ನಿನ್ನೆ ಆಡಿದ ಮಾತು ಇವತ್ತಿಗೆ ಬೇರೆಯದೇ ಅರ್ಥವನ್ನು ಕೊಡುವುದೂ ಇದೆ. ಹೊಸ ಹೊಸ ಪದಗಳ ಸೇರ್ಪಡೆ ಭಾಷೆಯೊಂದರ ಶ್ರೀಮಂತಿಕೆಯನ್ನು ಹೆಚ್ಚಿಸುತ್ತದೆಯಾದರೂ ಸದ್ಯ ಬೆಂಗಳೂರಿನ ಕನ್ನಡದಲ್ಲಿ ಬಳಸಲಾಗುತ್ತಿರುವ ಜೋಷ್, ಬೊಂಬಾಟ್, ಮಸ್ತು ಇವೆಲ್ಲದರ ಮೂಲ ಯಾವುದಿರಬಹುದೆಂಬ ಕುತೂಹಲವನ್ನೂ ಹುಟ್ಟಿಹಾಕುತ್ತಿದೆ. ಮನುಷ್ಯನ ಮಾತು ನಿರಂತರವಾಗಿ ಪರಿವರ್ತನಶೀಲವಾಗಿರುವುದರಿಂದಲೇ ನಾವದನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಬಲ್ಲೆವು, ಬದಲಾಯಿಸಬಲ್ಲೆವು.

ಮಾತು- ನಮಗಿರುವ ಒಂದು ಸಾಧನ. ಬುದ್ಧಿ ಬಲದ ಪ್ರತೀಕ. ಅದು ಒಂದು ಕಲೆ ಕೂಡ. ಎಲ್ಲರಿಗೂ ಇದು ಒಲಿಯದು. ಒಲಿದವರಂತೂ ಹಿಂದಿರುಗಿ ನೋಡರು. ದೂರದರ್ಶನ ವಾಹಿನಿಗಳಲ್ಲಂತೂ ಹರಟೆಮಲ್ಲರಿಗೆ ಮನ್ನಣೆ. ಮಣೆ. ಮಾತು ಬಲ್ಲವ ಮಾಣಿಕ್ಯ ತಂದ ಎನ್ನುವುದು ಇವರಿಗೇ ಅನ್ವಯಿಸುವುದು. ಮಾತು ಅರಿಯದವ ಜಗಳ ತಂದ ಎನ್ನುವುದು ನಮ್ಮ ಲೋಕಸಭಾಸದಸ್ಯರ/ ವಿಧಾನ ಸಭಾ ಸದಸ್ಯರ ಮಾತುಗಳನ್ನು ಕೇಳಿದಾಗೆಲ್ಲ ಅಲ್ಲಲ್ಲ, ನೋಡಿದಾಗೆಲ್ಲ ಶೃತವಾಗುತ್ತಲೇ ಇದೆ. ಮಾತಿನಿಂದ ಲಾಭವಾಗುವ ಹಾಗೇ ಹಾನಿಯಾಗುವುದು, ಗೆಲುವು ಸಿಗುವ ಹಾಗೇ ಸೋಲು ಎದಿರಾಗುವುದು, ಗೆಳೆಯರು ಸಿಗುವ ಹಾಗೇ ಸಣ್ಣ ಮಾತೊಂದರ ಬಳಕೆ ಶಾಶ್ವತ ಭಿನ್ನಮತವನ್ನು ಹೆಗಲಿಗಂಟಿಸಿದ ಪ್ರಸಂಗಗಳು ಎಲ್ಲರ ಬದುಕಿನಲ್ಲೂ ಇದ್ದೇ ಇರುತ್ತವೆ.

ಮಾತು- ಆಯುಧವಾಗಿರುವಂತೆಯೇ ಯುದ್ಧವೆಬ್ಬಿಸುವ ಅಸ್ತ್ರವಾಗಿಯೂ ಬಳಸಿದ್ದಿದೆ. ಮಿತಿಯಿಲ್ಲದ ಅತಿಯಾದ ಮಾತು ಅಪಾಯವನ್ನು ಹಾಗೇ ಅಂಥ ಮಾತುಗಾರರಿಂದ ಉಪಾಯವಾಗಿ ತಪ್ಪಿಸಿಕೊಳ್ಳುವುದನ್ನೂ ನಮಗೆ ಕಲಿಸಿದೆ. ಮಾತು ಬೆಳ್ಳಿ ಮೌನ ಬಂಗಾರ ಎನ್ನುವುದೂ ಒಂದು ಮುಖ್ಯ ಮಾತು! ಒಂದಾಡಿದರೆ ಹೆಚ್ಚು ಮತ್ತೊಂದಾಡಿದರೆ ಕಡಿಮೆ ಎನ್ನುವ ಪ್ರಸಂಗಗಳೂ, ಪರಿಸ್ಥಿತಿಗಳೂ ಇದ್ದೇ ಇರುತ್ತವೆ. ಮಾತುಗಾರಿಕೆಯನ್ನು ಅರ್ಥಗಾರಿಕೆ ಎನ್ನುವ ರೀತಿಯಲ್ಲಿ ಬಳಸುವುದೂ ಇದೆ. ಪಾಪ, ಈ ಅರ್ಥಗಾರಿಕೆಯವರದಂತೂ ಹುಲಿ ಮೇಲಿನ ಸವಾರಿ. ಬಿಡುವ ಹಾಗಿಲ್ಲ, ಹಿಡಿದು ಕೊಳ್ಳುವ ಹಾಗೂ ಇಲ್ಲ. ಗುರ್ರೆನ್ನುವ ಹುಲಿಯ ಹಾಗೇ ಮಾತು ಇವರ ಜೊತೆ ಸದಾ ಯುದ್ಧಕ್ಕೆ ನಿಂತೇ ಇರುತ್ತದೆ. ಪಳಗಿಸಿ ಮಟ್ಟಹಾಕಿದರೆ ಮುಂದಿನ ವೇದಿಕೆ ದಕ್ಕೀತು. ಇಲ್ಲದಿದ್ದರೆ ಅನ್ಯ ಅರ್ಥದಾರಿಯನ್ನು ಹುಟ್ಟುಹಾಕೀತು.

ಮಾತು- ಅನೇಕಾನೇಕ ರೀತಿಯಲ್ಲಿ, ಬಗೆಯಲ್ಲಿ ನಮ್ಮನ್ನಾವರಿಸಿದೆ. ಅತ್ತೆ ಬಳಸುವ ಚುಚ್ಚುಮಾತು, ತಂದೆ-ಮಕ್ಕಳ ನಡುವಿನ ಬಿಚ್ಚುಮಾತು, ಅಮ್ಮ ಮಗುವಿಗೆ ಬಳಸುವ ಮೃದು ಮಾತು, ಬಾಸ್ ಬಳಸುವ ಕಟು ಮಾತು, ಯೂನಿಯನ್ ಲೀಡರ್ಗಳು ಬಳಸುವ ನೇರ ಮಾತು, ಹಿರಿಯ ಸಹೋದ್ಯೋಗಿಗಳು ಹೇಳುವ ಕಿವಿಮಾತು, ಅಫೇರ್ಗಳನ್ನು ಬಿತ್ತರಿಸುವ ಪಿಸುಮಾತು, ಒಂದೊಂದು ಮಾತಿನ ರೀತಿಗೂ ಭಿನ್ನ ಭಿನ್ನ ಪರಿಣಾಮ, ಭಿನ್ನವಾಗದೇ ಉಳಿದವನೇ ಪುಣ್ಯಾತ್ಮ.

ಮಾತು- ಒಂದು ಬಗೆಯ ಮೋಡಿ. ಮನಸ್ಸನ್ನು ಗೆದ್ದು, ದೇಹವನ್ನು ಜಗ್ಗುವ ಖೋಡಿ. ಹಿಂದೆಲ್ಲ ಪಾರ್ಕುಗಳಲ್ಲಿ, ಈಗೀಗ ಬ್ರೌಸಿಂಗ್ ಕೇಂದ್ರಗಳಲ್ಲಿ ಒಟ್ಟೊಟ್ಟಿಗೆ ಇರುವ ಜೋಡಿಗಳ ಮಾತು ಕಣ್ಣಲ್ಲಿ, ಹೆಣೆದ ಬೆರಳಲ್ಲಿ, ಕಳಿಸಿದ ಮೆಸೇಜುಗಳಲ್ಲಿ. ಮೋಡದಲ್ಲಿ ಪ್ರಿಯತಮೆಗೆ ಸಂದೇಶ ಕಳಿಸಿದ ದೇಶದಲ್ಲಿ ಈಗ ಮೊಬೈಲ್ನಲ್ಲಿ ಬೆಲೆ ಇರದ, ಅಂದರೆ ಕರೆನ್ಸಿ ಖರ್ಚಾಗದೇ, ಸಂದೇಶ ಪೆಟ್ಟಿಗೆ ಭರ್ತಿಯಾಗುವ ಹಾಗೆ ಅವರಿವರು ಹೇಳಿದ್ದನ್ನೆಲ್ಲ ತನ್ನದೇ ಎನ್ನುವ ಹಾಗೆ ಹೇಳುವ ಸಂದೇಶದ ಮಾತು.

ಮಾತು- ಅದೂ ಒಂದು ಚಟ. ಪರಿಣಾಮ ಕಟು. ಬರಿಯ ಮಾತೇ ಬಂಡವಾಳವಾಗಿ ಲೋಕ ಗೆದ್ದ ವೀರರೂ ಇದ್ದಾರೆ. ಮಾತಿನ ಭರದಲ್ಲಿ ಕೊಚ್ಚಿ ಹೋದ ಕನಸಿಗರೂ ಇದ್ದಾರೆ. ನಮ್ಮ ಲೋಕನಾಯಕರು ಭಾಷಣಕ್ಕೆ ಬಳಸಿದ ಸಮಯವನ್ನು ನಾಡು ಕಟ್ಟುವುದಕ್ಕೆ ಬಳಸಿದ್ದರೆ ಅದರ ಮಾತೇ ಬೇರೆಯಾಗುತ್ತಿತ್ತು. ಗಾಂಧಿಯವರ ಒಂದೇ ಒಂದು ಮಾತಿಗೆ ಮನೆ, ಸಂಸಾರಗಳನ್ನು ಬಿಟ್ಟು ಚಳವಳಿಗೆ ಧುಮುಕಿದವರ ಸಾಕಷ್ಟು ಕತೆಗಳು ಇವೆ.

ಮಾತು- ನುಡಿದರೆ ಮುತ್ತಿನ ಹಾರದಂತಿರಬೇಕು ಅನ್ನುವುದಕ್ಕೂ, ನುಡಿದರೆ ಸ್ಪಟಿಕದ ಶಲಾಕೆಯಂತಿರಬೇಕು ಅನ್ನುವುದಕ್ಕೂ ವ್ಯತ್ಯಾಸಗಳಿದ್ದೇ ಇವೆ. ಮುತ್ತಿನ ಹಾರದಂತಿರುವ ಮಾತು ಸ್ಫಟಿಕದ ಹಾಗೆ ಶುಭ್ರವಾಗಿರಲು ಹೇಗೆ ಸಾಧ್ಯ? ಮಾತು ಮಾಣಿಕ್ಯದ ಹೊಳಪಿನಂತಿದ್ದರೆ ಕಣ್ಣು ಕುಕ್ಕದೇ ಇರಲು ಸಾಧ್ಯವೇ? ಜಗಮೆಚ್ಚಿ ಅಹುದು ಅಹುದು ಎನ್ನುವ ಹಾಗೆ ಮಾತಾಡಬೇಕು ಅಂದರೆ ಒಂದೋ ಪಕ್ಕಾ ಎಡ ಪಂಥೀಯನಾಗಿ ಜಾಗತೀಕರಣ ವಿರೋಧೀ ನಿಲುವಿನಲ್ಲಿ ಎದುರಿದ್ದವರನ್ನು ಬಗ್ಗು ಬಡಿಯಬೇಕು ಅಥವ ಬಲ ಪಂಥೀಯನಾಗಿ ಪರಂಪರೆಯ ಶ್ರೇಷ್ಠತೆಯನ್ನು ವೈಭವೀಕರಿಸಿ ವರ್ತಮಾನದ ಮರ್ಯಾದೆಯನ್ನು ಬೆತ್ತಲಾಗಿಸಬೇಕು. ಮೃದು ವಚನಗಳೇ ಸಕಲ ಜಪಂಗಳಯ್ಯ, ಮೃದು ವಚನಗಳೇ ಸಕಲ ತಪಂಗಳಯ್ಯ ಎಂದ ವಚನಕಾರರು ‘ವಚನ’ ಎಂಬ ಮತ್ತೊಂದು ರೀತಿಯ ಮಾತಿನ ಉಪಯೋಗವನ್ನು ಶೃತಪಡಿಸಿದ್ದಾರೆ. ವಚನ ಎನ್ನುವುದನ್ನು ಮಾತು ಎನ್ನುವುದಕ್ಕೆ ಪೂರಕವಾಗಿ ಬಳಸಬಹುದಾದರೂ ವಚನ ಎನ್ನುವುದು ಮಾತು ಕೊಡು, ಮಾತು ಉಳಿಸಿಕೊ ಎನ್ನುವ ಅಂತರಾರ್ಥವನ್ನೇ ಸೂಚಿಸುತ್ತದೆ. ಹಾಗೇ ವಚನ ಎನ್ನುವುದು ವಾಚ್ಯ ಎಂಬ ಮೂಲ ಧಾತುವನ್ನೇ ಅಶ್ರಯಿಸಿರುವುದರಿಂದ, ಅದು ಕೇಳುವುದಕ್ಕೆ ಹಿತವೂ, ಪಾಲಿಸುವುದಕ್ಕೆ ಕಷ್ಟಕರವೂ ಆದುದೇ ಆಗಿರುತ್ತದೆ.

ಮಾತು- ಅದೊಂದು ವ್ರತ. ದಶರಥನಂಥವರಿಗೆ, ಕರ್ಣನಿಗೆ ಕೊಟ್ಟಮಾತು ಬಹು ಮಹತ್ವದ್ದು. ಮಾತು ಕೊಟ್ಟಕಾರಣಕ್ಕೆ ನಾಲಗೆ ಕಳಕೊಂಡ ಭೈರವಿ ವೆಂಕಟಸುಬ್ಬಯ್ಯನಂಥವರೂ ಇದ್ದಾರೆ. ಮಾತಿಗಷ್ಟೇ ಹಾಗಂದಿದ್ದೆ ಎಂದು ಮುಂದೊಂದು ದಿನ ಮಾತು ಕದ್ದವರೂ ಇದ್ದಾರೆ. ಮಾತಾಡುವ ಜನರಿರುವಂತೇ ಅವರಿವರನ್ನು ಮಾತಿಗೆಳೆದು ಸಿಕ್ಕಿಸುವ ಬುದ್ಧಿವಂತರಿಗೆ ‘ಲಂಗರು’- ಆಂಖರ್ ಎಂಬ ಆಂಗ್ಲ ಶಬ್ದದ ಸಹಜ ಉಪಯೋಗ. ಮಾತಲ್ಲಿ ಮನುಷ್ಯರನ್ನೇ ಕಟ್ಟಿಹಾಕುವ ಇವರ ಕಾಯಕ ದೂರದರ್ಶನಕ್ಕಷ್ಟೇ ಸೀಮಿತವಾಗಿರುವುದು ಮಾತ್ರ ನಮ್ಮೆಲ್ಲರ ದೌರ್ಭಾಗ್ಯ. ಮಾತು ಬೇಡವೇ ಬೇಡ ಎಂಬಂತೆ ಸದಾ ಮೌನಿಗಳಾಗಿರುವವರೂ ಇದ್ದಾರೆ. ಹೀಗೆ ಲೋಕೋ ಭಿನ್ನ ಭಾವಃ, ಲೋಕೋ ಭಿನ್ನ ರುಚಿಃ, ಹಲವು ಮಾತಪ್ಪಗಳ ಜೊತೆ ಮಾತುಗೇಡಿಗಳು, ಮಾತುಗಳ್ಳರ ಹಾಗೇ ಮಾತಿಗೆ ಕಟ್ಟುಬಿದ್ದವರು.

ಮಾತು- ನುಡಿ ಎಂಬುದರ ಪ್ರಬೇಧ. ಸತ್ಯದ ಮಾತು, ಅಸತ್ಯದ ಮಾತು, ಮೋಸದ ಮಾತು, ನ್ಯಾಯದ ಮಾತು. ಇದರ ಜೊತೆ ಜೊತೆಗೇ ಪಾರ್ವತೀಪ-ರಮೇಶ್ವರರನ್ನು ಶಬ್ದಾರ್ಥಗಳಲ್ಲಿ ಕಂಡ ಕಾಳಿದಾಸ, ಸತ್ಯವ ನುಡಿದೆಡೆ ದೇವಲೋಕ, ಮಿಥ್ಯವ ನುಡಿದೆಡೆ ಮರ್ತ್ಯಲೋಕ ಎಂದ ಶರಣರೂ ಪ್ರತ್ಯಕ್ಷರಾಗಿ ಸಾಕ್ಷಿ ಹೇಳುತ್ತಾರೆ. ಮಾತನ್ನು ಜ್ಯೋತಿ ಎಂದು ಕರೆದವರಿಗೆ ಇದ್ದ ಮೋಹ ಯಾವ ಮಟ್ಟದ್ದು? ಅವರು ಮಾತಿನ ಬಗ್ಗೆ ಇಟ್ಟುಕೊಂಡಿದ್ದ ಪವಿತ್ರ ಭಾವನೆಯ ಆಳ ಅಳೆಯಲಾರದಂಥದು. ಮಾತು ಜ್ಯೋತಿರ್ಲಿಂಗ ಅನ್ನುವುದು ಪರಿಶುದ್ಧತೆಯ ಪರಾಕಾಷ್ಟತೆಯದು.

ಮಾತು ಭಾವೇಕತೆಯ ಸಾಧನವಾಗಿರುವಂತೆಯೇ ವಿರಸದ ಮುನ್ನುಡಿಯೂ ಆಗಿರುವುದು ದುರ್ದೈವ. ಪಕ್ಕದ ರಾಜ್ಯಗಳ ವರ್ತನೆಗಳು ನಮ್ಮ ಸಹನೆಯ ಗಡಿಮೀರಿಸುವ ಸಂದರ್ಭಗಳೂ ಆಗುತ್ತಿರುವುದೂ ಈ ಹೊತ್ತಿನ ವರ್ತಮಾನ. ಅಭಿಮಾನದ ಬದಲಿಗೆ ದುರಭಿಮಾನ, ಮಮಕಾರದ ಬದಲಿಗೆ ಅಹಂಕಾರ ಇರುವಕಡೆಯಲ್ಲೆಲ್ಲ ಹೀಗೇ ಆಗುವುದು. ಅಯ್ಯಾ ಎಂದೊಡೆ ಸ್ವರ್ಗ ಎಂದು ಭಾವಿಸಿರುವ ನಮಗೆ ಎಲವೋ ಎಂದೇ ಸಂಬೋಧಿಸುವ ಅನ್ಯರ ಉಪಟಳಕ್ಕೆ ಆತ್ಮ ಗೌರವವಿಲ್ಲದೇ ಸ್ವ ಲಾಭಕ್ಕೆ ಅನ್ಯರನ್ನು ಓಲೈಸುವ ನಮ್ಮೊಳಗಿನವರೇ ಆಗಿರುವುದೂ ಬರಿಯ ಮಾತೇನೂ ಅಲ್ಲ.

ಇನ್ನು ನಮ್ಮ ನಡೆ ನುಡಿಗಳಲ್ಲಿ ಸಾಮ್ಯತೆ ಇರಬೇಕು ಎನ್ನುವುದೂ ಒಂದು ನೀತಿ. ಅದು ಸಹಜ ರೀತಿ. ಆದರೆ ಹೇಳುವುದು ಒಂದು, ಮಾಡುವುದು ಮತ್ತೊಂದು. ಇದು ನಮ್ಮ ಹಲವರ ರೀತಿ. ನುಡಿಯಲ್ಲಿ ಎಚ್ಚೆತ್ತು, ನಡೆಯಲ್ಲಿ ತಪ್ಪಿದರೆ ಹಿಡಿದಿರ್ದ ಲಿಂಗವು ಘಟಸರ್ಪವಾಗುವುದು ಎನ್ನುವುದೂ ಒಂದು ಮಾತೇ! ಹಾಗೇ ಘಟಸರ್ಪಗಳಾಗುತ್ತ ಹೋಗಿದ್ದರೆ ಈವತ್ತು ಮನುಷ್ಯರ ಜೊತೆಜೊತೆಗೇ ಘಟಸರ್ಪಗಳೂ ತುಂಬಿರಬೇಕಾಗುತ್ತಿತ್ತು. ಅಷ್ಟು ಮಾತು ಕದ್ದವರು, ನಾವು. ನುಡಿದು ಹುಸಿವ, ನಡೆದು ತಪ್ಪುವ ಪ್ರಪಂಚ ನಾನೊಲ್ಲೆ ಎಂದಿದ್ದ ಬಸವಣ್ಣ ಅಪ್ಪಿತಪ್ಪಿ ಈ ಕಾಲದಲ್ಲಿ ಹುಟ್ಟಿದ್ದರೇನು ಮಾಡುತ್ತಿದ್ದನೋ ಪಾಪ. ಕಲ್ಯಾಣದ ಕ್ರಾಂತಿಯಾಗುವ ಮೊದಲೇ ಅವನು ಭ್ರಾಂತನಾಗುತ್ತಿದ್ದ, ಅಷ್ಟೆ.

ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು. ಇದೂ ಒಂದು ಗಾದೆ ಮಾತು. ಮಾತು ಮುಖ್ಯವಾದರೂ ಬರಿಯ ಮಾತೇ ಮುಖ್ಯವಲ್ಲ. ತೂತು ಇರದಿದ್ದರೆ ಗಾಳಿಯಾಡುವುದಾದರೂ ಎಲ್ಲಿಂದ? ಆದರೆ ತೂತೇ ದೊಡ್ಡದಾದರೆ ಉರಿ ಹರಡಿ ಹೋಗುತ್ತದೆ. ವ್ಯರ್ಥವಾಗುತ್ತದೆ. ಮಾತೂ ಹಾಗೆಯೇ. ವ್ಯರ್ಥವಾಗದ ಹಾಗೇ ನಮ್ಮ ಮಾತು ಇರಬೇಕು. ಒಂದು ತುತ್ತು ಬೇಕೆನ್ನಿಸುವ ಮೊದಲೇ ಊಟ ಮುಗಿಸಬೇಕು ಎನ್ನುವ ಹಾಗೇ ಇನ್ನೂ ಕೇಳಬೇಕಿತ್ತು ಎನ್ನುವ ಹಾಗೇ ನಮ್ಮ ಭಾಷಣಕಾರರೂ ತಮ್ಮ ಭಾಷಣ ನಿಲ್ಲಿಸಿದರೆ ಬರಿಯ ಮಾತೆಂಬ ಭ್ರಮೆಯಲ್ಲಿ ಲೋಕ ಲೋಲಕದ ಚಲನೆ ಮರೆತು ಕುಳಿತ ನಮ್ಮಂಥವರಿಗೆ ಹೊಸದಾರಿ ಸಿಕ್ಕೀತು. ಹೊಸಬರಾಗಿ ನಡೆ ನುಡಿಯನ್ನೂ ಕಲಿಯಬಹುದಿತ್ತು. ಆದರೆ ಏನು ಮಾಡೋಣ? ನಾವೆಲ್ಲ ಈಗಾಗಲೇ ನಮ್ಮ ನಮ್ಮ ಕ್ಷೇತ್ರಗಳಲ್ಲಿ ನಮ್ಮ ಮಾತನ್ನೇ ಸತ್ಯವೆಂದು ನಂಬಿದ್ದೇವೆ. ನಂಬಿ ಕೆಟ್ಟವರಿಲ್ಲವೋ ಎನ್ನುವ ಮಾತು ನಮಗೂ ಗೊತ್ತಿದೆ ಅಲ್ಲವೆ?
ಕೃಪೆ: ಹೊಸದಿಗಂತ ದೀಪಾವಳಿ ವಿಶೇಷಾಂಕ ೨೦೦೮ರಲ್ಲಿ ಪ್ರಕಟಿತ ಪ್ರಬಂಧ
-

ಬುಧವಾರ, ಡಿಸೆಂಬರ್ 17, 2008

ಉಳಿದ ಪ್ರತಿಮೆಗಳು

ಚರಿತ್ರೆ ಈವರೆಗೂ ಸವೆಸಿದ ಪ್ರತಿಮೆಗಳನೆಲ್ಲ
ಒಂದರ ಮೇಲೊಂದರಂತೆ ಇಟ್ಟು
ಒಂದಪೂರ್ವ ರೂಪ ಮೂಡಿಸಿಬಿಡಬಹುದೆಂದು
ವ್ರತಕ್ಕೆ ಕೂತವರು ಫಲಕ್ಕೆ ಕಾಯುವ ಹಾಗೆ
ಜಯ-ವಿಜಯ, ಸನಕ ಸನಂದನರ ದಂಡು.

ಸತ್ತ ಮಗನಿಗೆ ಮತ್ತೆ ಜೀವ ಬರಿಸುವುದಕ್ಕೆ
ಸಾವಿರದ ಮನೆಯ ಸಾಸಿವೆಯ ಅರಸಿ
ಮುಸುಕಿದ್ದ ಮಬ್ಬಷ್ಟೂ ಕಳೆದು ನಿಗಿ ನಿಗಿ ಹೊಳೆದ ಸತ್ಯ-
ದೆದುರಲ್ಲಿ ಮಂಡಿಯೂರಿದವಳಿಗೆಂಥ ಉಪದೇಶ?
ಬುದ್ಧನ ಮುಗುಳ್ನಗೆ ಇನ್ನೂ ಮಾಸಿಲ್ಲ.

ಬೆನ್ನ ಹಿಂದೇ ಇರುವ ಸಾವ ಠಾವಿನ ಗುರುತು
ಗೊತ್ತಿದ್ದರೂ ಬಿಡದದೆಂಥದೋ ಬಡಿವಾರ
ಧರ್ಮನುತ್ತರ ಕೇಳಿ ತೃಪ್ತ ಯಕ್ಷನ ಹಿಂದೆ
ಭಯ, ವಿಹ್ವಲೆ ಶಚಿಗೆ, ನಹುಷನರಮನೆ ಮೇನೆ
ಯುದ್ಧ ಮುಗಿದ ಮೇಲೇ, ಉತ್ತರೆಗೆ ಹೆರಿಗೆ ಬೇನೆ.

ಬೆಂಬಿಡದ ಬೇತಾಳ ತಂದಿತ್ತ ಜಿಜ್ಞಾಸೆಗುತ್ತರ
ಗೊತ್ತಿದ್ದೂ ಬಾಯಿ ಬಿಡದಿದ್ದರೆ ತಲೆ ಸಹಸ್ರ ಚೂರು
ಮೌನ ಧಿಕ್ಕರಿಸಿ ಹೊರಬಿದ್ದ ಮಾತಿಗೆ ಛಕ್ಕನೆ ಜಿಗಿ-
ದೆದ್ದು ಮತ್ತೆ ರೆಂಬೆಗೇ ಜೋತು ಬೀಳುವ ಆಟ
ಸುಳಿವ ಗಾಳಿಯಲಿ ಬರುವ ಸೌಗಂಧಿಕೆಯ ಸೊಗಡು.

ಹೀಗೆ ನಮ್ಮೊಳಗೆ ನಮ್ಮೊಡನೆ ನಮ್ಮ ಜೊತೆಗೇ ಬೆಳೆವ
ಛಂದಸ್ಸು, ರಗಳೆ, ರೂಪಕದಂಥ ಎಷ್ಟೊಂದು ಕತೆಗಳು
ಹುಲಿ, ಹಾವುಗಳ ಹಲ್ಲುಗಳನ್ನೇ ಕಿತ್ತು
ಬೇಕಾದಂತೆ ಆಡಿಸುವ ಛಲದಂಕ ಮಲ್ಲರ ಪಟ್ಟಿಗೆ
ಕತೆ, ಕಾವ್ಯ, ಸಂಗೀತ, ನಾಟಕಗಳೂ ಒತ್ತಿಟ್ಟಿಗೆ.

ಆದರೂ ದೇಶ ಕಾಲಗಳಾಚೆ ನಿಲ್ಲಬಲ್ಲ ಕತೆಗಳೂ ಕೂಡ
ನೆಲಕ್ಕಿಳಿದು ಭ್ರಮೆಗೊಂಡು ತತ್ತರಿಸುತಿಹವು
ಇಂದ್ರಪ್ರಸ್ಥ, ಅಮರಾವತಿ, ಬೃಂದಾವನದ ನೆನಕೆಗಳು
ಬರಿದೇ ಬರೆದು ಹೋದವರ ಕನಸುಗಳು
ಲೌಕಿಕದ ಮೈಲಿಗೆಗೆ ಮೈಲುಗಲ್ಲಾಗುವವು.

ದೇಶ ಕಾಲಗಳಾಚೆ, ಕೋಶವ್ಯಾಪ್ತಿಯ ಮೀರಿ
ವಿಕಸಿಸುವ ಸಹಜ ಆಂತರ್ಯದಲ್ಲಿ
ಯುದ್ಧ ಭೂಮಿಯ ನಡುವೆ ಗೀತೆ ದಕ್ಕಿದ ಹಾಗೆ
ಸಂತೆಯೊಳಗಿಂದಲೇ ಸಂತ ಎದ್ದು ಬರಬೇಕು
ಉಳಿದ ಪ್ರತಿಮೆಗಳಿಗಾದರೂ ಜೀವ ತುಂಬಬೇಕು.
=========೦======== (ಪ್ರಜಾವಾಣಿ ದೀಪಾವಳಿ ಕವನಸ್ಪರ್ಧೆ-೨೦೦೫ ಪ್ರಥಮ ಬಹುಮಾನ ಪಡೆದ ಕವಿತೆ)

ಅವಸ್ಥೆ

ಇದ್ದ ಹಾಗೆ ಇದ್ದಕ್ಕಿದ್ದಂತೆ
ಮನೆ, ಮಡದಿ, ಮಕ್ಕಳನ್ನೆಲ್ಲ ತೊರೆದು
ರಾತ್ರೋ ರಾತ್ರಿ ಎದ್ದು ಹೋಗಿ ಬಿಡೋಣವೆಂದರೆ-

ನರೆತ ಕೂದಲಿಗೆ ಹಚ್ಚುತ್ತಿರುವ ಬಣ್ಣ
ನಿತ್ರಾಣದಲ್ಲೂ ರೋಮಾಂಚನವೆಬ್ಬಿಸುವ ಮಾತ್ರೆ
ಇನ್ನೇನು ಮುಗಿದೇ ಹೋಯಿತೆನ್ನುವಾಗಲೂ ಕರೆವ
ಖಾಸಗಿ ನರ್ಸಿಂಗ್ ಹೋಂಮಿನ ದುಬಾರಿ ಕೊಠಡಿ
ಎದ್ದ ಕಾಲುಗಳನ್ನಿಲ್ಲಿಗೇ ಅಂಟಿಸಿಬಿಡುತ್ತದೆ.

ಕುಣಿಸುವ ಈ ಮಾಯೆಯ ಮೀರಿ
ನೆಲದ ಮರೆಯ ನಿಧಾನವನ್ನಷ್ಟು ಸರಿಸಬೇಕೆಂದರೆ
ನೃತ್ಯಾಂಗನೆಯರಿಗೇ ಛಳಿಹುಟ್ಟಿಸುವ
ಎಂ,ಎಫ್,ವಿ ಚಾನೆಲ್ಲಿನ ಬೆಡಗಿಯರು
ಮತ್ತದೇ ಮರುಳ ಹೊಯಿಗೆಯಲ್ಲಿ ಸಿಕ್ಕಿಸುತ್ತಾರೆ.

ಇದ್ದಲ್ಲೇ ಇರಲೂ ಆಗದೆ
ಹೊಗಿಸಲೂ ಆಗದ ದುರವಸ್ಥೆಯಲ್ಲಿ
ಮಲಗಿದ್ದಲ್ಲೇ ನರಳುವ ಕುಂತಿಯನ್ನೆಂದೂ ತಣಿಸದೆ
ಮುಟ್ಟಿದರೆ ಮುಲುಗುವ ಮಾದ್ರಿಯ ತೋಳ ತೆಕ್ಕೆಯಲ್ಲೇ
ಮರಗಟ್ಟಿದ ಪಾಂಡು ಎದೆ ಕನ್ನಡಿಯೊಳಕ್ಕೆ ಇಣುಕುತ್ತಾನೆ

ಬುದ್ಧ ಅಲ್ಲಮರನ್ನು ತನ್ನೊಟ್ಟಿಗೆ ಕರೆತರುತ್ತಾನೆ.
ಒಳಗನ್ನಡಿಯಲ್ಲಿ ಕಂಡಾಗಲೆಲ್ಲ ವಿಶ್ವಾಸ ತುಂಬುತ್ತಿದ್ದ ನನ್ನದೇ ಮುಖ
ಇತ್ತೀಚೆಗೆ ಕನಸು, ತವಕ, ತಲ್ಲಣ ಕಳಕೊಂಡ ಸಖ
ತಟ್ಟನೆ ಬಂದವರ ಕಂಡು ಮುಗುಳ್ನಗುತ್ತಾನೆ
ಅವರೊಟ್ಟಿಗೆ ಹೊರಟವನಂತೆ ವಿದಾಯದ ಕೈ ಬೀಸುತ್ತಾನೆ.

ಮಾರನೇ ಬೆಳಿಗ್ಗೆಯಿಂದಲೇ ಮುಖ ಮಾರ್ಜನಕ್ಕಾಗಿ
ಹೊಚ್ಚ ಹೊಸ ಕನ್ನಡಿಯ ಮುಂದೆ ನಿಂತರೂ
ನನ್ನ ಮುಖ ನನಗೇ ಗುರುತು ಸಿಕ್ಕುತ್ತಿಲ್ಲ-

ಪಾದರಸವಿರದ ದರ್ಪಣದಲ್ಲಿ ಸ್ಫುಟವಾಗದು ಚಿತ್ರ,
ಬಯಸಿದಂತೆ ದೊರೆಯುವುದೇ ಇಲ್ಲ ಇಲ್ಲಿ ಬೇಕಾದ ಪಾತ್ರ!
*********************

ಮಂಗಳವಾರ, ಡಿಸೆಂಬರ್ 16, 2008

ಪ್ರಶ್ನೋತ್ತರಗಳ ಪರಿಧಿಯಲ್ಲಿ

ಪ್ರಶ್ನೆ ದೊಡ್ಡದೋ ಅಥವಾ ಆ ಪ್ರಶ್ನೆಗೆ ಇರಬಹುದಾದ ಉತ್ತರ ದೊಡ್ಡದೋ? ಸಾಮಾನ್ಯವಾಗಿ ಉತ್ತರವೇ ದೊಡ್ಡದೆಂಬ ಮಾತನ್ನು ನಮ್ಮಲ್ಲಿ ಬಹುತೇಕರು ನಂಬಿದ್ದೇವೆ. ಏಕೆಂದರೆ ಬರೆಯುವ ಪರೀಕ್ಷೆಗಳಲ್ಲೆಲ್ಲ ಕೊಡುವ ಉತ್ತರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ. ಪಾಸು ಆಗಬೇಕೆಂದರೆ ಇರುವ ಪ್ರಶ್ನೆಗಳಲ್ಲಿ ಸುಲಭದ್ದನ್ನಾರಿಸಿಕೊಂಡು ಪರೀಕ್ಷೆ ಬರೆಯದಿದ್ದರೆ ಮತ್ತೆ ಓದಿದುದನ್ನೇ ಓದಬೇಕಾಗುತ್ತದೆ.

ಆದರೆ ಬದುಕಿನಲ್ಲಿ ಉತ್ತರಕ್ಕಿಂತ ಪ್ರಶ್ನೆಯೇ ಮುಖ್ಯ. ಏಕೆಂದರೆ ಪ್ರಶ್ನೆಗಳೇ ಹುಟ್ಟದಿದ್ದರೆ ಬದುಕು ಬರಡಾಗುತ್ತದೆ. ನಿಂತ ನೀರಾಗುತ್ತದೆ. ಬರಡಲ್ಲಿ ಬೆಳೆ ಅಸಾಧ್ಯ. ನಿಂತ ನೀರಿಗೆ ಕೊಳೆಯುವ ಭಯ.

ಎಂಥ ಕ್ಲಿಷ್ಟ ಪ್ರಶ್ನೆಗೂ ಉತ್ತರ ಇದ್ದೇ ಇರುತ್ತದೆಂಬ ನಂಬಿಕೆಯೇ ಬದುಕಿನುದ್ದಕ್ಕೂ ಇರುತ್ತದೆ. ಅಂಥ ಭಾವ ನಶಿಸಿದರೆ ಆ ಕ್ಷಣವೇ ಮನುಷ್ಯ ಅಧೀರನಾಗುತ್ತಾನೆ. ತಾನು ಒಂಟಿಯೆಂದು ಮರುಗುತ್ತಾನೆ. ಎಲ್ಲ ಬಗೆಯ ಪರೀಕ್ಷೆಗಳಲ್ಲೂ ಒಂದೇ ಬಗೆಯ ಸಿದ್ಧ ಉತ್ತರ ಅಥವ ಮಾದರಿ ಉತ್ತರಗಳನ್ನು ಪ್ರಶ್ನೆಗಳೊಟ್ಟಿಗೇ ಸೃಷ್ಟಿಸಿಕೊಳ್ಳಲಾಗುತ್ತದೆ. ಅಂದರೆ ಪ್ರಶ್ನೆ ಹುಟ್ಟಿಸುವವರಿಗೆ ಉತ್ತರ ಎಂಬುದು ಪ್ರಶ್ನೆಗೆ ಮೊದಲೇ ಗೊತ್ತಿರುವುದರಿಂದಲೇ ಅಂಥ ಪ್ರಶ್ನೆಗಳನ್ನು ಅವರು ಕೇಳಿರುತ್ತಾರೆ. ಇನ್ನು ಕೆಲವು ಸಂದರ್ಭಗಳಲ್ಲಿ ಕೇಳುವ ಪ್ರಶ್ನೆಗಳಲ್ಲೇ ಗೊಂದಲವನ್ನು ತುರುಕಿ ಉತ್ತರಿಸುವವನನ್ನು ತಬ್ಬಿಬ್ಬುಗೊಳಿಸಿ ಗೊತ್ತಿರುವ ಉತ್ತರಗಳು ಹೌದೋ ಅಲ್ಲವೋ ಎನ್ನುವ ಅನುಮಾನಗಳನ್ನು ಬಿತ್ತಲಾಗುತ್ತದೆ. ಆದರೆ ಬದುಕಿನ ಪ್ರಶ್ನೆಗಳಿಗೆ ಉತ್ತರ ಆಯಾ ಸಂದರ್ಭಗಳಲ್ಲಿ ಆಯಾ ವ್ಯಕ್ತಿಯು ಹುಡುಕಿಕೊಳ್ಳುವ ಮಾರ್ಗಕ್ಕೆ ಹೊಂದಿಕೊಂಡಿರುತ್ತದೆ. ಅಂದರೆ ಒಂದೇ ಥರದ ಸಮಸ್ಯೆಗಳಿಗೆ ಎಲ್ಲರ ಉತ್ತರವೂ ಬೇರೆ ಬೇರೆಯಾಗಿಯೇ ಇರುತ್ತದೆ. ಇದು ಬದುಕು ನಮಗೆ ಕಲಿಸುವ ಅನನ್ಯ ಪಾಠವಾಗಿದೆ. ಒಂದೇ ಥರದ ಪ್ರಶ್ನೆಗಳಿಗೆ ಒಂದೇ ರೀತಿಯ ಸಿದ್ಧ ಉತ್ತರವಿದೆ ಎಂಬ ವಾದವನ್ನು ಇಲ್ಲಿ ಅಲ್ಲಗಳೆದಂತಾಯಿತು.

ಇನ್ನು ಕೆಲವು ಬಾರಿ ನಮ್ಮಲ್ಲಿ ಸಿದ್ಧವಿರುವ ಉತ್ತರಗಳಿಗೆ ತಕ್ಕಂತೆ ನಮ್ಮ ಪ್ರಶ್ನೆಗಳನ್ನು ಎತ್ತಿರುತ್ತೇವೆ. ನಮ್ಮ ಧಾರ್ಮಿಕ ನಂಬುಗೆ, ಸಾಂಸ್ಕೃತಿಕ ಚಿಂತನೆ, ರಾಜಕೀಯ ಪ್ರಜ್ಞೆ ಪ್ರಶ್ನೆಗಳನ್ನೆಂದೂ ಬಯಸದ ಸದಾ ಸಿದ್ಧ ಉತ್ತರಗಳನ್ನು ಇಟ್ಟುಕೊಂಡಿರುವ ಮತ್ತು ಅದನ್ನೇ ಬಿಂಬಿಸುವ ಸಲುವಾಗಿ ನಾವೇ ನೇಯ್ದು ನಾವೇ ಬಿದ್ದ ಬಲೆಯಾಗಿರುತ್ತದೆ. ಮೋಕ್ಷವೆಂದರೆ ಏನು? ಸತ್ಯವನ್ನೆಂದು ಯಾವುದನ್ನು ಕರೆಯಬೇಕು? ಯಾವ ಧರ್ಮವು ದೊಡ್ಡದು? ಇಂತಹ ಹಲವು ಪ್ರಶ್ನೆಗಳು ತಲೆತಲಾಂತರದಿಂದ ನಮ್ಮೊಳಗಿನ ಭಾವಗಳನ್ನು ಮುಟ್ಟದೆಯೇ ಬರಿದೇ ತೋರಿಕೆಯ ಉತ್ತರಗಳಿಂದಲೇ ತುಂಬಿಹೋಗಿವೆ. ಈ ಉತ್ತರಗಳು ನಾವು ಸ್ವತಃ ಅನುಭವಿಸಿ ಕಂಡುಕೊಂಡ ಉತ್ತರಗಳಲ್ಲದಿದ್ದರೂ ಅವು ನಮ್ಮದೇ ಎಂಬಂತೆ ನಮ್ಮ ತಲೆಯ ಮೇಲೆ ಹೊತ್ತು, ನಮ್ಮ ತಲೆಯೊಳಗೂ ತುಂಬಿಕೊಂಡಿರುತ್ತೇವೆ. ಆ ಕಾರಣದಿಂದಾಗಿಯೇ ಸಿದ್ಧ ಉತ್ತರಗಳನ್ನು ಪರಿಣಾಮಕಾರಿಯಾಗಿ ಸುಂದರವಾಗಿ ಹೇಳಬಲ್ಲವರು ಜ್ಞಾನಿ ಎನ್ನಿಸಿಕೊಳ್ಳುತ್ತಾರೆ. ಅವರಿಗೆ ನಾವು ಮಹತ್ವವನ್ನು ನೀಡಿ ಅವರನ್ನೇ ಆರಾಧಿಸತೊಡಗುತ್ತೇವೆ.

ಆದರೆ ಪ್ರಶ್ನೆಗಳನ್ನೆಂದೂ ಹುಟ್ಟಿಸದ ಸಿದ್ಧ ಉತ್ತರಗಳ ಆಧಾರದ ಮೇಲೇ ತಮ್ಮ ನಿಲುವುಗಳನ್ನು ಪ್ರಕಟಿಸುವುದು ಎಷ್ಟರ ಮಟ್ಟಿಗೆ ನಮ್ಮನ್ನು ವೈಚಾರಿಕವಾಗಿ ಬೆಳಸುತ್ತಿದೆ ಎನ್ನುವುದು ನಮ್ಮನಮ್ಮ ಅನುಭವದಿಂದಲೇ ಕಂಡುಕೊಳ್ಳಬೇಕಾದಉತ್ತರವಾಗಿದೆ. ಹಾಗಾಗಿಯೇ ಬದುಕಿನ ಒಳಸ್ತರಗಳಲ್ಲಿ ಹುಟ್ಟಿಕೊಳ್ಳುವ ಪ್ರಶ್ನೆಗಳಿಗೆ ನಮ್ಮೊಳಗಿಂದಲೇ ಉತ್ತರ ಹುಡುಕುವುದು ಅನಿವಾರ್ಯವೂ ಉಪಯುಕ್ತವೂ ಆದ ದಾರಿಯಾಗಿದೆ. ಮತ್ತು ಪ್ರಶ್ನೋತ್ತರಗಳ ಮಥನದಿಂದ ಉತ್ಪನ್ನವಾದ ನವನೀತವಾಗಿದೆ.

ಬಿಂಬ

ದಿನವೊಂದರಲ್ಲಿ ಕನಿಷ್ಟ ಹದಿನೈದು ಬಾರಿ ಮನುಷ್ಯ ಕನ್ನಡಿಯಲ್ಲಿ ತನ್ನ ಮುಖ ನೋಡಿಕೊಳ್ಳುತ್ತಾನೆ ಎಂದು ಒಂದು ಅಧ್ಯಯನ ಹೇಳುತ್ತದೆ. ಪ್ರತಿ ನೋಟದಲ್ಲೂ ತನ್ನ ಕೆದರಿರುವ ತಲೆಕೂದಲನ್ನು ಸರಿಪಡಿಸಿಕೊಳ್ಳುತ್ತಾನೆ. ಅಥವಾ ಇಣುಕುತ್ತಿರುವ ಬೆಳ್ಳಿಕೂದಲನ್ನು ಕಂಡು ಕಳವಳಗೊಳ್ಳುತ್ತಾನೆ. ಇಲ್ಲವೇ ಕಣ್ಣಂಚ ತುದಿಗಂಟಿದ ಪಿಸುರನ್ನೋ, ತುಟಿತುದಿಯಲ್ಲಿ ಕೂತ ಅನ್ನದಗಳನ್ನೋ ಒರೆಸಿಕೊಳ್ಳುತ್ತಾನೆ. ಕೊಳೆಯಾಗಿರುವ ಬಟ್ಟೆಯನ್ನು ಕಂಡು ಅಸಹ್ಯ ಪಟ್ಟುಕೊಳ್ಳುತ್ತಾನೆ.

ಕನ್ನಡಿ ಎಂದೇ ನಾವೆಲ್ಲ ಸಾಮಾನ್ಯವಾಗಿ ಕರೆಯುವ ಈ ದರ್ಪಣ ಹೀಗೆ ನಮ್ಮ ಮುಖದ ಮೇಲಣ ಬಾಹ್ಯದ ಶುಚಿಗೆ ಕಾರಣವಾಗುವಂತೆಯೇ ಅಶುಚಿಯನ್ನು ಎತ್ತಿ ತೋರುತ್ತದೆ. ಸರಿಯಿಲ್ಲದುದನ್ನು ಸರಿಪಡಿಸಿಕೊಳ್ಳಬೇಕೆಂಬ ಅರಿವನ್ನು ಒಳಗಿನಿಂದ ಮೂಡಿಸುತ್ತದೆ.

ಆದರೆ ಇಲ್ಲಿ ಗಮನಿಸಬೇಕಾದ ಸತ್ಯ ಒಂದಿದೆ. ಅದೆಂದರೆ ಕನ್ನಡಿ ಇದ್ದುದನ್ನು ಇದ್ದಂತೆ ತೋರಿಸಬಲ್ಲುದೇ ವಿನಾ ಇರದೇ ಇರುವುದನ್ನೆಂದೂ ಬಣ್ಣಿಸುವುದಿಲ್ಲ. ವೈಭವೀಕರಿಸುವುದಿಲ್ಲ. ಕನ್ನಡಿಯ ಬಿಂಬ ನಿಜವನ್ನೇ ಪ್ರತಿಫಲಿಸುತ್ತಿದ್ದರೂ ಆ ವಸ್ತುವಿನ ಪೂರಾ ವಿರುದ್ಧದ ಪ್ರತಿಬಿಂಬವನ್ನೆ ಸೃಷ್ಟಿಸಿರುತ್ತದೆ. ಎಡದಲ್ಲಿರುವುದನ್ನು ಬಲದಲ್ಲಿರುವಂತೆ ಅದು ತೋರಿಸುತ್ತಿದ್ದರೂ ನೋಡುವ ನಾವು ಮಾತ್ರ ನಿಜದ ನೆಲೆಯನ್ನೆಂದೂ ಶೋಧಿಸದೆಯೇ ಕನ್ನಡಿಯ ಬಿಂಬವನ್ನೇ ನಿಜವೆಂದು ನಂಬಿಬಿಟ್ಟಿದ್ದೇವೆ.

ಅಲ್ಲಮ ತನ್ನೊಂದು ವಚನದಲ್ಲಿ ಹೀಗೆ ಹೇಳುತ್ತಾನೆ. ಕನ್ನಡಿ ಮತ್ತು ಪಾತ್ರೆಗೆ ಉಪಯೋಗಿಸುವ ಲೋಹವೊಂದೇ ಆದರೂ ಕಂಚಿನ ಪಾತ್ರೆ ಸಂಗ್ರಹಬುದ್ಧಿಯನ್ನು ತೋರಿಸುತ್ತದೆ. ಅದೇ ಲೋಹದಿಂದ ಮಾಡಿದ ಕನ್ನಡಿ ಲೋಕಸತ್ಯವನ್ನು ಹೇಳಲು ಮರೆಮಾಚುವುದಿಲ್ಲ. ಇರುವುದನ್ನು ಪ್ರತಿಫಲಿಸುತ್ತಲೇ ಸತ್ಯದ ಮಾರ್ಗ ಹಿಡಿಯುವ ಕನ್ನಡಿ ಭಾಂಡದ ಸಂಗ್ರಹ ಬುದ್ಧಿಯನ್ನು ಮೀರಿ ವರ್ತಿಸುತ್ತದೆ. ನಾವು ಲೋಕದ ಅನುಭವದ ಪ್ರತಿಬಿಂಬದಿಂದ ನಮ್ಮ ಮುಖಕ್ಕಂಟಿರುವ ಕೊಳೆಯನ್ನು ಒರೆಸಿಕೊಳ್ಳಬೇಕೋ ಅಥವ ಅದೇ ಲೋಕಾನುಭವದಿಂದ ಹುಟ್ಟುವ ನವನೀತವನ್ನು ಸಂಗ್ರಹಿಸಿಟ್ಟುಕೊಳ್ಳಬೇಕೋ ಅದು ಆಯಾ ವ್ಯಕ್ತಿಯು ನಂಬುವ ತತ್ವಾದರ್ಶಗಳ ಮೇಲೆ ನಿಲ್ಲುತ್ತದೆ.

ಆದರೆ ದೊಡ್ದ ಅಳತೆಯ ಕನ್ನಡಿಗಳು ಭ್ರಮೆಯ ಲೋಕವೊಂದರ ಅನಾವರಣದಲ್ಲಿ ನಿರತವಾಗಿ ನಿಜವನ್ನು ಲಂಬಿಸಿರುತ್ತವೆ. ವಾಸ್ತವದ ಅರಿವಿರದವರಿಗೆ ಇದೂ ಒಂದು ಬಗೆಯ ವಂಚನೆಯೇ ಆಗುತ್ತದೆ. ಕಂಬವೆಂದು ತಿಳಿದು ಢೀ ಡಿಕ್ಕಿ ಕೊಟ್ಟ ದುರ್ಯೋಧನ ನೆಲಕ್ಕೆ ಹಾಸಿರುವುದು ಕನ್ನಡಿಯೆಂದು ಭ್ರಮಿಸಿ ಕೊಳದೊಳಕ್ಕೆ ಬೀಳುತ್ತಾನೆ. ನಾವೂ ಹಾಗೆಯೇ ದೂರ ಇಡಬೇಕಾದ ಪದಾರ್ಥಗಳನ್ನು ಮುಚ್ಚಟೆಯಿಂದ ಮುದ್ದಿಸುತ್ತೇವೆ. ಒಯ್ಯಬಾರದ ಒಜ್ಜೆಗಳನ್ನೆಲ್ಲ ತಲೆಯ ಮೇಲೆ ಹೊತ್ತೊಯ್ದು ಮೆರೆಸುತ್ತೇವೆ.

ಕನ್ನಡಿಯೇನೋ ಬಾಹ್ಯದ ಕೊಳಕನ್ನು ಎತ್ತಿತೋರಿಸುತ್ತದೆ. ಆದರೆ ಆಂತರ್ಯದ ಕೊಳಕನ್ನು ಯಾರು ಎತ್ತಿ ತೋರಿಸುತ್ತಾರೆ? ತೋರಿಸಿದರೂ ಒಪ್ಪಿಕೊಳ್ಳುವ ಮನಸ್ಥಿತಿ ಯಾರಿಗಿದೆ? ನಮ್ಮ ಅರಿವನ್ನು ಇತರರೊಂದಿಗೆ ಹಂಚಿಕೊಳ್ಳುವುದು ಇದಕ್ಕಿರುವ ಪರಿಹಾರ. ಅನ್ಯರ ಸಾಧನೆಯನ್ನೆಂದೂ ಒಪ್ಪಿಕೊಳ್ಳದೆಯೇ ಕೊಂಕು ತೆಗೆಯುವ ನಮ್ಮ ಬುದ್ಧಿಯನ್ನು ನಿಯಂತ್ರಿಸಿಕೊಳ್ಳುವುದು ಎರಡನೆಯ ಉಪಾಯ. ಸರೀಕರೊಂದಿಗೆ ಸ್ನೇಹದಿಂದಿರುತ್ತಲೇ ಸ್ವತಃ ಅಗ್ನಿದಿವ್ಯಕ್ಕೆ ಈಡಾಗುವುದು ಕಷ್ಟಸಾಧ್ಯದ ಮಾತು. ತೋಚಿದ್ದೆಲ್ಲವನ್ನೂ ಗೀಚಿ ಮನಸ್ಸು ಹಗುರ ಮಾಡಿಕೊಳ್ಳುವಂತೆಯೇ ಅನಿಸಿದ್ದೆಲ್ಲವನ್ನೂ ಆಡದೆಯೇ ಮೌನಕ್ಕೆ ಶರಣಾಗುವುದು ದಿವಿನಾದ ಮಾರ್ಗ. ಕನ್ನಡಿ ಮುಖದ ಮೇಲಣ ಕಲೆಯನ್ನು ಎತ್ತಿ ತೋರಿಸುವಂತೆಯೇ ಮನಸ್ಸು ಆಂತರ್ಯದಲ್ಲಿನ ಕಲೆಗಳೆಲ್ಲವನ್ನೂ ಗುಡಿಸಿ ಹಾಕುವ ಹದಕ್ಕೆ ನಮ್ಮ ಮನಸ್ಸನ್ನು ಹದಗೊಳಿಸಬೇಕು. ರಾಗ-ದ್ವೇಷಗಳಿಲ್ಲದ ಕರುಣೆ ಆರ್ದ್ರತೆಗಳೇ ಆಗ ನಮ್ಮ ಕಣ್ಣುಗಳಾಗುತ್ತವೆ. ಆಗ ಮನಸ ಕನ್ನಡಿಯೊಳಗಿನ ಬಿಂಬಗಳೆಲ್ಲವೂ ಶೃತಿಯಾಗಿ ಬದುಕು ಹೊಸರಾಗಕ್ಕೆ ತೆರೆದುಕೊಳ್ಳುತ್ತದೆ.

ಭಾನುವಾರ, ಡಿಸೆಂಬರ್ 14, 2008

ಕೇಳುವುದು ಮತ್ತು ಕೇಳಿಸಿಕೊಳ್ಳುವುದು

ಅನ್ಯರ ಮಾತುಗಳನ್ನು ಕೇಳುವುದಕ್ಕೂ ಮತ್ತು ಅದನ್ನು ಕೇಳಿಸಿಕೊಳ್ಳುವುದಕ್ಕೂ ಬಹಳ ವ್ಯತ್ಯಾಸಗಳಿವೆ. ಬೇರೆಯವರ ಮಾತುಗಳಷ್ಟನ್ನೇ ಕೇಳುವುದು ಒಂದು ಅರ್ಥದಲ್ಲಿ ದೌರ್ಬಲ್ಯ. ಹಾಗೇ ಕೇಳಿಸಿಕೊಳ್ಳದೇ ಇರುವುದು ಅಪರಾಧ. ಕೇಳುವುದು ಮತ್ತು ಕೇಳಿಸಿಕೊಳ್ಳುವುದರ ನಡುವೆ ಒಂದು ತೆಳುವಾದ ಪರದೆಯಿದೆ. ಅದು ಲೋಕ ಲೋಲಕದ ಜೀವನ ದರ್ಶನದಿಂದ ನಮಗೆ ಲಭಿಸುವಂತಹುದು.

ಆದರೆ ನಮಗೆಲ್ಲ ಸಾಮಾನ್ಯವಾಗಿ ಬೇರೆಯವರನ್ನು ನಾವು ಕೇಳಿಸಿಕೊಳ್ಳುವದಕ್ಕಿಂತ ನಮ್ಮನ್ನು ಇತರರು ಕೇಳಲಿ ಎಂಬ ಆಸೆಯು ಇದ್ದೇ ಇರುತ್ತದೆ. ನಮ್ಮ ಸಂಸಾರದಲ್ಲಿ ನನ್ನ ಮಾತು ನಡೆಯುವುದಿಲ್ಲ, ನನ್ನ ಮಕ್ಕಳು ನನ್ನ ಮಾತನ್ನು ಕೇಳುವುದೇ ಇಲ್ಲ, ನಾನು ಹೇಳಿದ್ದನ್ನು ನಮ್ಮ ಕಛೇರಿಯಲ್ಲಿ ಯಾರೂ ಒಪ್ಪುವುದೇ ಇಲ್ಲ- ಹೀಗೆ ನಮ್ಮ ಇಲ್ಲಗಳ ಸಾಲುಗಳು ಮುಂದುವರೆಯುತ್ತದೆ.

ಹೀಗೆ ಹೇಳುತ್ತೇವಲ್ಲ, ಅದರ ಸರಿಯಾದ ಅರ್ಥ ನಮಗಾಗಿದೆಯೇ ಎನ್ನುವುದು ಇಲ್ಲಿ ಮುಖ್ಯ. ಮೂಲತಃ ನಮ್ಮ ಮಾತನ್ನು ಅನ್ಯರು ಕೇಳಬೇಕೆಂದು ನಾವು ಬಯಸುವುದರಲ್ಲಿ, ನಮ್ಮ ಅಧಿಕಾರವನ್ನು ಸ್ಥಾಪಿಸುವ ಹುನ್ನಾರವಿದೆ. ನಮ್ಮ ಅನುಭವಗಳು ಏನೇ ಇರಲಿ, ನಮ್ಮ ಆಲೋಚನೆಗಳ ಮಟ್ಟ ಎಷ್ಟೇ ಎತ್ತರದ್ದಿರಲಿ, ನಾವು ಹೀಗೆ ನಮ್ಮ ಹಿತಾಸಕ್ತಿಗಳನ್ನು ಸ್ಥಾಪಿಸುವುದರಲ್ಲೇ ನಮ್ಮ ಅಪಾರ ಸಮಯ ಮತ್ತು ಶ್ರಮಗಳನ್ನು ವೃಥಾ ವ್ಯಯಿಸಿರುತ್ತೇವೆ.

ಇನ್ನೊಂದು ರೀತಿಯಲ್ಲಿ ಅನ್ಯರನ್ನು ಕೇಳಿಸಿಕೊಳ್ಳುವುದೆಂದರೆ, ಅವರನ್ನು ಅರ್ಥ ಮಾಡಿಕೊಳ್ಳುವುದು. ಕೇಳಿಸಿಕೊಳ್ಳುವುದು ಒಂದು ಅನುಭವ. ನಮ್ಮ ಒಳಗಿನ ಬದಲಾವಣೆಗೆ ಕಾರಣವಾಗುವಂಥದು. ಆದರೆ ಬರಿದೇ ಹೇಳಿದ್ದನ್ನು ಕೇಳುವುದು ದೌರ್ಬಲ್ಯ. ಅದು ನಮ್ಮ ಅನನುಭವವನ್ನು ಮತ್ತು ನಾವು ಯಾರನ್ನು ನಂಬಿದ್ದೇವೋ ಅವರನ್ನು ಅವಲಂಬಿಸಿರುವ ಕುರುಹಾಗುತ್ತದೆ.

ಮಾತು ಕೇಳುವುದಕ್ಕೆ ಬರಿಯ ವಿಧೇಯತೆ ಸಾಕಾಗುತ್ತದೆ. ಆದರೆ ಮಾತನ್ನು ಕೇಳಿಸಿಕೊಳ್ಳುವುದಕ್ಕೆ ಸಿದ್ಧತೆ ಮತ್ತು ಸ್ವಾತಂತ್ರ್ಯ ಬೇಕಾಗುತ್ತದೆ. ಕೇಳಿಸಿಕೊಳ್ಳುವುದು ಬಹು ಪ್ರಯಾಸದ ಕೆಲಸ. ಏಕೆಂದರೆ ನಾವು ಬೇರೆಯವರ ಮಾತುಗಳನ್ನು ಕೇಳಿಸಿಕೊಳ್ಳುತ್ತೇವೆಂದರೆ ಒಂದೋ ಅವರನ್ನು ಒಪ್ಪುವುದಕ್ಕೆ ಅಥವ ಅವರ ನಿಲುವುಗಳನ್ನು ವಿರೋಧಿಸಲಿಕ್ಕೆ. ಒಪ್ಪಿಗೆಯೂ ಇಲ್ಲದೆ, ವಿರೋಧವೂ ಇಲ್ಲದೆ ನಿಜವಾಗಿ ಅವರು ಏನು ಹೇಳಲು ಬಯಸಿದ್ದಾರೆ ಎಂದು ಸುಮ್ಮನೆ ಕೇಳಿಸಿಕೊಳ್ಳುವುದು ಎಂಥ ಕಷ್ಟದ ಕೆಲಸ ಅಲ್ಲವೇ?

ಇಷ್ಟಕ್ಕೂ ನಾವು ಕೇಳಿಸಿಕೊಂದ ಮಾತುಗಳನ್ನು ಒಪ್ಪುವುದಕ್ಕೆ ಅಥವ ವಿರೋಧಿಸುವುದಕ್ಕೆ ನಮ್ಮದೇ ಆದ ಕಾರಣಗಳಿರುತ್ತವೆ. ನಾವು ಈಗಾಗಲೇ ಒಪ್ಪಿಕೊಂಡ ಸಿದ್ಧಾಂತಗಳನ್ನು ಅಥವ ವಿರೋಧಿಸಿದ ಅಂಶಗಳನ್ನು ಈ ಮೊದಲೇ ನಮ್ಮ ತಲೆಯೊಳಗೆ ಭದ್ರವಾಗಿ ಊರಿಕೊಂಡುಬಿಟ್ಟಿರುವುದು ಇದಕ್ಕೆ ಕಾರಣವಾಗುತ್ತವೆ. ಎಷ್ಟೋ ಬಾರಿ ನಮ್ಮ ಪೂರ್ವಾಗ್ರಹ ಚಿಂತನೆಗಳು ನಮ್ಮ ಒಳಿತನ್ನು ದೂರವಾಗಿಸುತ್ತವೆ.ವಾಸ್ತವದ ನೆಲೆ, ಭಾವನೆಯ ನೆಲೆ, ಆಲೋಚನೆಯ ಸೆಲೆ, ತೀರ್ಮಾನದ ಬಲೆ, ನೀತಿಯ ನೆಲೆ, ಆಧ್ಯಾತ್ಮಿಕ ಸೆಲೆ ಹೀಗೆ ಮಾತು ಎಲ್ಲಿಂದ ಹೊರಟು ಕಡೆಗೆಲ್ಲಿ ಸೇರುತ್ತದೆ ಎಂದು ತಿಳಿಯುವುದಕ್ಕಾದರೂ ನಾವು ಬೇರೆಯವರನ್ನು ಕೇಳಿಸಿಕೊಳ್ಳಲೇಬೇಕು. ಸುಮ್ಮಸುಮ್ಮನೇ ಎದಿರಿರುವವರು ಮಾತು ಮುಗಿಸುವ ಮೊದಲೇ ನಮ್ಮ ನಿರ್ಧಾರವನ್ನು ಅವರ ಮೇಲೆ ಹೊರಿಸ ಹೋಗಿ ಜಗಳಕ್ಕಿಳಿದುಬಿಡುತ್ತೇವೆ. ಹಾಗೆ ಯೋಚಿಸಿದರೆ ನಮ್ಮ ಬಹುತೇಕ ಜಗಳಗಳು ನಮ್ಮ ಮನಸ್ಸಿನಲ್ಲಿ ಈಗಾಗಲೇ ನಾವು ತಯಾರಿಸಿಕೊಂಡ ಸಂಗತಿಗಳೇ ಆಗಿರುತ್ತವೆ. ಅವನು ಹಾಗನ್ನುತ್ತಾನಾದ್ದರಿಂದ ನಾನು ಹೀಗೆ ಹೇಳಲೇ ಬೇಕೆಂದು ಜಗಳಕ್ಕೆ ಮೊದಲೇ ನಾವು ಸಿದ್ಧತೆ ನಡೆಸಿಕೊಂಡುಬಿಟ್ಟಿರುತ್ತೇವೆ! ಒಮ್ಮೆ ನಮ್ಮ ಎದಿರುವಾದಿ ಹಾಗನ್ನದಿದ್ದರೂ ನಾವು ನಮ್ಮೊಳಗೆ ಸಿದ್ಧಮಾಡಿಟ್ಟುಕೊಂಡಿದ್ದ ಉತ್ತರ ಕೊಟ್ಟು ಜಗಳ ಪ್ರಾರಂಭಿಸಿಯೇ ಬಿಡುತ್ತೇವೆ. ಪಾಪ ನಮ್ಮೆದುರು ನಿಂತವರು ಏನು ಹೇಳಲು ಪ್ರಯತ್ನಿಸುತ್ತಿದ್ದರು ಎನ್ನುವುದನ್ನೂ ನಾವು ಕೇಳಿಸಿಕೊಂಡಿರುವುದೇ ಇಲ್ಲ.

ಹೀಗೆಲ್ಲ ಆಗುವುದಾದರೂ ಏಕೆ? ನಾವೆಲ್ಲ ನಮಗೆ ತಿಳಿದಿರುವ ಭಾಷೆಯಲ್ಲಿ ವ್ಯವಹರಿಸುತ್ತಿದ್ದರೂ ನಾವು ನಮ್ಮ ಭಾಷೆಯ ಒಂದೊಂದು ಪದಕ್ಕೂ ನಮ್ಮದೇ ಆದ ಭಾವಮೌಲ್ಯಗಳನ್ನು ಕೊಟ್ಟುಕೊಂಡಿರುತ್ತೇವೆ. ಇದು ನಮ್ಮ ಪರಿಸರ, ಅನುಭವ, ಪರಂಪರೆ ಇತ್ಯಾದಿಗಳಿಂದ ನಾವೇ ಭಾವಿಸಿರುವಂಥದು. ನಾವು ಸಿದ್ಧಮಾಡಿಕೊಂಡಿರುವ ರೀತಿಯೇ ಸರಿ, ಉಳಿದವರೂ ಅದನ್ನು ಜಾರಿಗೆ ತರಬೇಕೆಂಬ ನಮ್ಮ ಹಟವೇ ಈ ಹೊತ್ತಿನ ನಮ್ಮ ಹಲವು ಜಗಳಗಳ, ವ್ಯಾಜ್ಯಗಳ, ಭಿನ್ನಾಭಿಪ್ರಾಯಗಳ ಮೂಲ ಧಾತು. ಇದಕ್ಕೆ ಕಾರಣ ನಾವು ಮಾತನ್ನು ಕೇಳುವುದಕ್ಕೆ ಕೊಡುವ ಮಹತ್ವವನ್ನು ಅದೇ ಮಾತನ್ನು ಕೇಳಿಸಿಕೊಳ್ಳುವುದಕ್ಕೆ ಕೊಡುತ್ತಿಲ್ಲ.


ಮಾತನ್ನು ಕೇಳುವುದಕ್ಕಿಂತ ಅದನ್ನು ಕೇಳಿಸಿಕೊಳ್ಳತೊಡಗಿದರೆ ನಮ್ಮೊಳಗೇ ಬದಲಾವಣೆಗಳಾಗುವುದನ್ನು ನಾವೇ ಗಮನಿಸಬಹುದು. ಆದರೆ ಅಂಥ ಸ್ಥಿತಿಗೆ ದಾಟಿಸಲಾದರೂ ಮತ್ತೊಮ್ಮೆ ನಾವು ನಮ್ಮೊಳಗಿನ ಮಾತುಗಳನ್ನು ಮೊದಲು ಮರೆಯಬೇಕು.