ಒಟ್ಟು ಪುಟವೀಕ್ಷಣೆಗಳು

ಗುರುವಾರ, ನವೆಂಬರ್ 29, 2012

ಕನಸು ಕೂರಿಗೆಯ ಕಣ್ಣು

ಕೃತಿಯೆನ್ನುವುದು
ಕಲಾವಿದನ ಮನ-
ಸ್ಸಿನ ಕನ್ನಡಿ,
ಒಳಗೇ ಉಳಿದ ಉಮ್ಮಳಗಳಿಗೊಂದು ರೂಪ
ಕೊಡಲೆಂದೇ ಕವಿ ಬರೆದ ಕವಿತೆಯ ಸಾಲು,
ತನ್ನೊಳಗನ್ನೇ ತೆರೆತೆರೆದು ತೋರಿಸುವ ಗಾಯಕ.
ಶ್ರೋತೃವಿನ ಮನಸ್ಸಿನ ಆಳಕ್ಕೆ ಇಳಿದಂತೆ;
ನೂರೆಂಟು ಬಣ್ಣಗಳ ಲೋಕ ವ್ಯಾಪಾರದ ನಡುವೆ
ಚಿತ್ತಾಪಹಾರೀ ಕಾಣ್ಕೆಗೆ ತುಡಿಯುವುದು
ಇರುವುದು ಸತತ, ಕಂಗೆಟ್ಟ ಮನಸ್ಸು-
ಗಳ ಕಳವಳವಕ್ಕಷ್ಟು ಸಮಾಧಾನ, ಸೋತು
ಕೂತವರಿಗೆ ಕೊಂಚ ಸಾಂತ್ವನದ ಮಾತು.
ಲಲಿತ ಕಲೆಯೆಂದರೆ ಕ್ಷಣ ಭಂಗುರಕ್ಕೊಂದು ಅಲ್ಪ ವಿರಾಮ.
ಕಟ್ಟು ಹಾಕಿ ಬಂಧಿಸಿರುವ ಚಿತ್ರಗಳಲ್ಲಂತೂ
ನಿಷ್ಕರ್ಷಕ್ಕೆ ಸಿಲುಕುವ ಪಲುಕಗಳನ್ನಿತ್ತು
ಸೌಂದರ್ಯೋಪಾಸನೆಯ ಮಾತುಗಳನ್ನಾಡಬಹುದು
ಚಿತ್ತ ಭಿತ್ತಿಯ ಮೇಲೆ ಸಾಲು ಸಾಲು ಅಸ್ಪಷ್ಠ ಚಿತ್ರಗಳ-
ಮೆರವಣಿಗೆ, ಮಾಸಲು ಬಣ್ಣಗಳಭಿಷೇಕ
ಸ್ಪರ್ಶಕ್ಕಷ್ಟೇ ಸಿಲುಕುವ ಸೂಕ್ಷ್ಮಗಳನ್ನೇನು ಮಾಡಬೇಕು?
ಅನುಭೂತಿಯೆಂದರೆ ದೌರ್ಬಲ್ಯವೆನ್ನುವ ವಾದ-
ಕ್ಕೆ ಮನದ ಮೂಲೆ ಮೂಲೆಯ ಪರಿಮಳದ ಗಂಧ
ಮೂಗಿಗಡರುವುದಿಲ್ಲ, ಗಾಳಿತೊನೆದತ್ತಲೇ ಅದರ ನಿತ್ಯ ಪಯಣ.
ಧರೆಗಿಳಿಯುತ್ತಿದ್ದಭಿಸಾರಿಕೆಯ ಸಂಗಕ್ಕೆ ಮಧು-ಚಂದ್ರ
ದ ಬಣ್ಣವೇ ಬದಲಾಗಿರುವ ಸತ್ಯದ ಮುಂದೆ
ಆರು* ಕಟ್ಟುವ ಕನಸು ಮಣ್ಣು ಪಾಲು-
ಅಂತ ಗೊತ್ತಿದ್ದರೂ ಮತ್ತೆ ಮತ್ತೆ ತುಡಿಯುವಾತ್ಮಕ್ಕೆ
ಬಯಲ ಮೋಹವ ಬಿಡದ ಸುರತದಾಸೆ, ಶಾಶ್ವತ-
ದ ಸಾವಿರದ ಕನಸ ಕೂರಿಗೆ*ಯ ಸಣ್ಣ ಕಣ್ಣು!

ಆರು= ಭೂಮಿ ಹದ ಮಾಡುವ ಕ್ರಿಯೆ, ಅರಿಷಡ್ವರ್ಗ
ಕೂರಿಗೆ= ಬೀಜ ಬಿತ್ತುವ ಉಪಕರಣ
(ವಿಜಯ ಕರ್ನಾಟಕ ದೀಪಾವಳಿ ವಿಶೇಷಾಂಕ 2012 ರಲ್ಲಿ ಪ್ರಕಟಿತ ಕವಿತೆ)