ಒಟ್ಟು ಪುಟವೀಕ್ಷಣೆಗಳು

ಬುಧವಾರ, ಜನವರಿ 21, 2009

ವ್ರುತ್ತದೊಳಗಿನ ಬದುಕು

ಬದುಕು ವಿಸ್ತಾರವಾದುದು. ಅದಕ್ಕೆ ಚೌಕಟ್ಟನ್ನು ಕಟ್ಟಿದಷ್ಟೂ ದೃಷ್ಟಿಗೆ ಮಿತಿ ಬರುತ್ತದೆ. ಮಿತಿಗಳಾಚೆಯೇ ಇರುವ ಬದುಕು ಸುಲಭಕ್ಕೆ ದಕ್ಕುವುದಿಲ್ಲ. ಮಿತಿಯೊಳಗೇ ನಾವು ಬದುಕಿದರೆ, ಚಿಂತಿಸಿದರೆ ನಮ್ಮಾಚೆಗೂ ಇರುವ ಬದುಕ ಮಜಲು ನಮಗೆ ಅರ್ಥವೇ ಆಗುವುದಿಲ್ಲ. ಹೀಗೆಲ್ಲ ಮಾತಿಗೆ ಹೇಳಬಹುದಾದರೂ ಮೂಲತಃ ನಾವೆಲ್ಲ ನಮ್ಮ ನಮ್ಮ ಮಿತಿಯೊಳಗೇ ಬದುಕ ಕಡಲನ್ನು ಈಜುವ ಅಭ್ಯಾಸ ಮಾಡಿಕೊಂಡಿರುತ್ತೇವೆ. ಹಳ್ಳ, ಕೆರೆ, ಬಾವಿಗಳಲ್ಲಿ ಸುಲಭವಾಗಿ ಈಜುವವರು ಸಮುದ್ರಕ್ಕೆ ಹೆದರಬಹುದು. ಆಳ ಅಗಲಗಳ ಪರಿವೆಯಿಲ್ಲದೇ ಸಿಕ್ಕ ಸಿಕ್ಕ ನೀರಿಗೆ ಧುಮುಕುವುದೂ ಅಪಾಯದ ಮಾತೇ. ಹಾಗಾಗಿಯೇ ನಾವೆಲ್ಲ ನಮಗೆ ಗೊತ್ತಿರುವ ದೇಶ ಮತ್ತು ಭಾಷೆಗಳಲ್ಲಿ ಬದುಕಲು ಇಚ್ಛಿಸುತ್ತೇವೆ. ಗೊತ್ತಿದ್ದೂ ನಾಲ್ಕು ಗೋಡೆಗಳ ಬಂಧನದಲ್ಲಿ, ಕಿಟಕಿ, ಬಾಗಿಲು, ಪರದೆಗಳ ಹಂಗಿನಲ್ಲೇ ಇರಲು ಇಚ್ಛಿಸುತ್ತೇವೆ. ನಮಗೆಲ್ಲರಿಗೂ ಪ್ರಿಯವಾದ ಏಕಾಂತದಲ್ಲಿ ಇದ್ದುಬಿಡಲು ಪ್ರಯತ್ನಿಸುತ್ತೇವೆ. ಜೊತೆ ಜೊತೆಗೇ ನಾವೇ ಸೃಷ್ಟಿಸಿಕೊಂಡ ಈ ಮಿತಿಯನ್ನು ಮೀರುವ ಮತ್ತು ಹೊರಗಿರುವ ವಿಸ್ತಾರ ಬಯಲನ್ನು ಅದು ಕೊಡುವ ಸ್ವಾತಂತ್ರ್ಯದ ಬಗೆಯನ್ನೂ ಯೋಚಿಸುತ್ತಲೇ ಇರುತ್ತೇವೆ. ಬಯಲಲ್ಲಿ ಬೀಳಬಹುದಾದ ಮಂಜು ಮತ್ತು ಗಾಳಿಯ ಕಲ್ಪನೆ ತಿಳಿಯಿತೋ ಪುನಃ ನಮ್ಮ ನಾಲ್ಕು ಗೋಡೆಗಳ ಬೆಚ್ಚನೆಯ ಮನೆಯತ್ತ ನಡೆಯುತ್ತೇವೆ.

ಬಯಲು ವಿಸ್ತಾರದೊಟ್ಟಿಗೇ ಸ್ವಾತಂತ್ರ್ಯವನ್ನು ಕೊಡಬಹುದಾದರೂ ಅದು ಭಯದ ಮೂಲ. ಅಭದ್ರತೆಯ ಸೇತು. ಏಕೆಂದರೆ ಬಯಲ ಅನಂತತೆಯನ್ನು ಗ್ರಹಿಸುವ ಚಿತ್ತಬಲ ಸುಲಭಕ್ಕೆ ಒಲಿಯುವಂಥದಲ್ಲ. ಸಾಮಾಜಿಕ ಜೀವಿಯಾಗಿ ಒಂದು ಮನೆ, ಮನೆತನ ಮತ್ತು ನಡವಳಿಕೆಗಳಿಗೆ ಮಿತಿಗೊಳಿಸಿಕೊಂಡ ನಮ್ಮ ಚಟುವಟಿಕೆಗಳು ಬಯಲ ಅನುಭವ ಜನ್ಯ ಸತ್ಯಗಳನ್ನು ಅರ್ಥಮಾಡಿಕೊಳ್ಳುವುದನ್ನು ನಿಷೇದಿಸುತ್ತವೆ. ಅಂಥ ಸ್ವಾತಂತ್ರ್ಯವನ್ನು ಇಟ್ಟುಕೊಂಡಿರುವ ಮರ, ಗಿಡ, ಬಳ್ಳಿಗಳು, ಕ್ರಿಮಿ, ಕೀಟ, ಪ್ರಾಣಿಗಳು ಕತ್ತಲೆ, ಬೆಳಕು, ಗಾಳಿ ಸದ್ದುಗಳು ನಮ್ಮನ್ನು ಅಧೀರರನಾಗಿಸುತ್ತವೆ. ಹಾಗಾಗಿಯೇ ಮಿತಿಯ ಅರಿವಿರುವ ಮನುಷ್ಯ ತನ್ನಾಚೆಯ ಜಗತ್ತನ್ನು ಅರಿಯುವುದನ್ನು ಬೇಕೆಂತಲೇ ಮರೆಯುತ್ತಾನೆ. ತನಗೆ ಸಿಕ್ಕಿರುವುದರಲ್ಲೇ ಮೈ ಮರೆಯುತ್ತಾನೆ.

ನಾವೆಲ್ಲ ನಾವು ಬದುಕುತ್ತಿರುವ ಬಗೆಯನ್ನೆ ಅನನ್ಯವನ್ನು ಭಾವಿಸಿದ್ದೇವೆ. ನಾವು ಉಪಜೀವನಕ್ಕೆ ನೆಚ್ಚಿರುವ ಕಸುಬನ್ನೇ ಅಂತಿಮವೆಂದು ಭಾವಿಸಿದ್ದೇವೆ. ನಮ್ಮ ಅನುಭವವನ್ನೇ ಪರಮಸತ್ಯವೆಂದು ನಂಬಿಬಿಟ್ಟಿದ್ದೇವೆ. ನಮ್ಮಾಚೆಗೂ ಒಂದು ಜಗತ್ತಿದೆ. ಅಲ್ಲಿಯೂ ನಮ್ಮಂತೆಯೇ ಯೋಚಿಸುವ, ನಮ್ಮದೇ ತಹತಹಕಿಯ ಜೀವಿಗಳಿದ್ದಾರೆಂದು ಮರೆತುಬಿಟ್ಟಿದ್ದೇವೆ. ಸಮೂಹದ ಸಾಧ್ಯತೆಗಳನ್ನು ನಿರಾಕರಿಸಿದಷ್ಟೂ ನಮ್ಮ ಮಿತಿಯ ವ್ಯಾಸ ಕುಗ್ಗುತ್ತ ಬರುತ್ತದೆ. ದುರಂತವೆಂದರೆ ನಾವೆಲ್ಲ ನಮ್ಮ ಜೀವನವೆ ಭದ್ರವೆಂದು ಅನ್ಯರಿಗೂ ಇರುವ ಇದೇ ಬಗೆಯ ಕಾಳಜಿಯನ್ನು ಮೋಹವೆಮು ಬಗೆಯುತ್ತೇವೆ. ಹಾಗೆಯೇ ನಮ್ಮದು ಮಾತ್ರ ಸಮಸ್ಯೆ. ಉಳಿದವರೆಲ್ಲ ಪಾರಾಗಿದ್ದಾರೆಂದೂ ಭ್ರಮಿಸಿರುತ್ತೇವೆ.

ನಮ್ಮ ಸಮಾಜವನ್ನು ಸಾವಧಾನವಾಗಿ, ಸೂಕ್ಷ್ಮವಾಗಿ ಗಮನಿಸಿದರೆ ಇಂತಹ ನೂರಾರು ವೃತ್ತಗಳು ನಮ್ಮೆಲ್ಲರನ್ನೂ ಸುತ್ತುವರಿದಿರುವ ಸತ್ಯ ಗೋಚರಿಸುತ್ತದೆ. ಒಂದೊಂದಕ್ಕೂ ತನ್ನದೇ ಆದ ವ್ಯಾಸ, ತ್ರಿಜ್ಯ ಮತ್ತು ಕ್ಷೇತ್ರಫಲಗಳಿದ್ದು ಅಂತಹ ಹಲವು ವೃತ್ತಗಳು ನಮ್ಮೆಲ್ಲರ ಬದುಕನ್ನೂ ಆವರಿಸಿರುತ್ತವೆ. ಒಂದೊಂದೂ ಮತ್ತೊಂದಕ್ಕೆ ಸೇರದ ಬೆರೆಯಲಿಚ್ಛಿಸದ ವೃತ್ತಗಳು. ತನ್ನನ್ನು ಸುತ್ತುವರೆದಿರುವ ವೃತ್ತದಾಚೆಗೆಂದೂ ನೋಡದ, ಮತ್ತೊಂದು ವೃತ್ತದಲ್ಲಿರುವವರ ಪರಿಸ್ಥಿತಿಯರಿಯದ ನಮ್ಮ ಈ ಮಿತಿಗಳೇ ಸಾಮಾಜಿಕ ವೈರುಧ್ಯಗಳನ್ನು ಬಿತ್ತುತ್ತಿರುವ ಮತ್ತು ಇರುವವರ ಹಾಗೂ ಇಲ್ಲದಿರುವವರ ನಡುವಣ ಅಂತರವನ್ನು ಹೆಚ್ಚಿಸುತ್ತಲೇ ಇರುವ ಕಾರಣಗಳೆಂದು ನಾವಾರೂ ಅರಿಯದಿರುವುದೇ ನಮ್ಮ ನಡುವಣ ಹಲವು ಸಮ್ಸ್ಯೆಗಳ ಮೂಲ ಕಾರಣವಾಗಿದೆ. ನೂರಾರು ವೃತ್ತಗಳು! ಆ ವೃತ್ತಗಳಳೊಗೆ ಮತ್ತೆ ನೂರು ಸೀಳುಗಳು. ಗುಂಪು, ಗುಂಪಾಗಿ, ಮತ್ತೆ ಮತ್ತೆ ವಿಭಜನೆಯಾಗುತ್ತಾ, ಸೀಳಿಕೊಳ್ಳುತ್ತಾ, ಒಂದಕ್ಕೊಂದು ದೂರವಾಗಿ ನಮ್ಮ ಚಿಪ್ಪಿನೊಳಗೆ ನಾವೇ ಬಂಧಿಯಾಗುತ್ತಾ ಅಪರಿಚಿತವಾಗುತ್ತಾ ಹೋಗುವ ಕವಲು ದಾರಿಗಳು.

ಆದರೆ ಒಂದು ನಾಗರೀಕ ಸಮಾಜ ಸುಸಂಸ್ಕೃತವಾಗಬೇಕೆಂದರೆ, ಇಡಿಯಾಗಿ ತನ್ನ ಸ್ವರೂಪ ಪ್ರದರ್ಶಿಸಬೇಕೆಂದರೆ ಈ ವೃತ್ತಗಳನ್ನು ನಿವಾರಿಸಬೇಕು. ವೃತ್ತಗಳ ವ್ಯಾಸವನ್ನು ಹಿರಿದುಮಾಡುತ್ತ ಸಮಷ್ಟಿಯಲ್ಲಿ ಎಲ್ಲರನ್ನೂ, ಎಲ್ಲವನ್ನೂ ಒಳಗೊಳಿಸಬೇಕು. ಏಕನಾದದ ಸಮೂಹ ಗೀತೆಗೆ ಎಲ್ಲರನ್ನೂ ಅನುಗೊಳಿಸಬೇಕು. ದೂರದೃಷ್ಟಿಯುಳ್ಳ ಸಮೂಹ ನಾಯಕತ್ವ ಪ್ರಭುತ್ವವನ್ನು ಪ್ರಶ್ನಿಸುವ ಎದೆಗಾರಿಕೆ ತೋರಬೇಕು. ಆಗ ಅಂಥ ಸಂದರ್ಭ ಬಯಲ ಸ್ವಾತಂತ್ರವನ್ನು ಅನುಭವಿಸುವ ರೀತಿಗೆ ನಮ್ಮನ್ನು ಸಜ್ಜುಗೊಳಿಸುತ್ತದೆ.

ಕಾಮೆಂಟ್‌ಗಳಿಲ್ಲ: