ಒಟ್ಟು ಪುಟವೀಕ್ಷಣೆಗಳು

ಭಾನುವಾರ, ಜೂನ್ 30, 2013

ಸಮ್ಮೇಳನ ಅಧ್ಯಕ್ಷತೆಯ ಭಾಷಣ

ಕನ್ನಡದ ಪ್ರಿಯ ಬಂಧುಗಳೇ,
ಎಲ್ಲರಿಗೂ ನನ್ನ ಗೌರವ ಪೂರ್ವಕ ನಮಸ್ಕಾರಗಳು. ಅಧ್ಯಕ್ಷ ಪದವಿಯ ಈ ಗೌರವವನ್ನು ಸದ್ಯಕ್ಕಂತೂ ನಾನು ನಿರೀಕ್ಷಿಸಿರಲಿಲ್ಲ. ಇಂಥ ಗೌರವವನ್ನು ಕೊಡಮಾಡಿದ ಪರಿಷತ್ತಿನ ಕಾರ್ಯಕಾರೀ ಮಂಡಲಿಗೆ, ಸ್ವಾಗತ ಸಮಿತಿಗೆ ನಾನು ಕೃತಜ್ಞ.
ಎಲ್ಲಿಂದ ಮಾತು ಆರಂಭಿಸಲಿ? ಯಾವೆಲ್ಲ ವಿಷಯಗಳನ್ನು ಪರಿಷತ್ತಿನ ದಾಖಲೆಯಾಗಿ ಉಳಿಯುವ ಈ ಭಾಷಣದಲ್ಲಿ ಸೇರಿಸಲಿ ಎಂದು ಆಲೋಚಿಸುತ್ತಿರುವಾಗಲೇ ಅಲ್ಲಮನ ‘ಶಬ್ದ ಸೂತಕ’ ಅನ್ನುವ ಪದ ನನ್ನನ್ನು ಕಾಡತೊಡಗಿದೆ. ಈವರೆವಿಗೂ ಯಾರೂ ಯೋಚಿಸದ, ಬಿಂಬಿಸದ, ಸೂಚಿಸದ ಆಲೋಚನೆಗಳೇನೂ ನನ್ನಲ್ಲಿಲ್ಲ. ಏಕೆಂದರೆ ಸಾಹಿತಿಯೊಬ್ಬ ಸ್ವತಃ ಏನನ್ನೂ ಹೊಸದಾಗಿ ಸೃಷ್ಟಿಸಲಾರ. ವ್ಯಾಸೋಚ್ಚಿಸ್ಟಂ ಜಗತ್ ಸರ್ವಂ ಎಂಬ ಮಾತು ನಿಮಗೆಲ್ಲರಿಗೂ ಗೊತ್ತಿದೆ. ತನ್ನ ಕಣ್ಣಮುಂದಿನ ಸಮಸ್ಯೆಗಳಿಗೆ ವಿಚಾರಿಯೊಬ್ಬ ದಾರಿಯನ್ನು ಹುಡುಕಬಲ್ಲ ಅಷ್ಟೆ. ಹಾಗೆ ಸಮುದಾಯದೊಂದಿಗೆ ಅನುಸಂಧಾನ ಮಾಡಿದಾಗ ಹೊಳೆದ ಕೆಲವು ವಿಚಾರಗಳನ್ನುಚರ್ಚಿಸಬಯಸುತ್ತೇನೆ.
ದೀರ್ಘ ಇತಿಹಾಸವುಳ್ಳ ಸಾಹಿತ್ಯ ಪರಿಷತ್ತಿನ ತಾಲ್ಲೂಕು, ಜಿಲ್ಲೆ ಮತ್ತು ಅಖಿಲ ಭಾರತ ಸಮ್ಮೇಳನಗಳ ಅಧ್ಯಕ್ಷ ಭಾಷಣಗಳ ಪ್ರತಿಗಳನ್ನು ಮುಂದಿಟ್ಟುಕೊಂಡು ಟಿಪ್ಪಣಿ ಮಾಡಿಕೊಳ್ಳಲು ಕೂತಾಗ ಈ ಸ್ಥಾನ ಗೌರವ ಎಷ್ಟು ಮಹತ್ವದ್ದೆಂದು ಅರಿವಾಯಿತು. ಕನ್ನಡ ನಾಡುನುಡಿಗಳನ್ನು ಕಟ್ಟಿ ಬೆಳೆಸಿದ ಅನುಭವ ಜನ್ಯ ಸಿದ್ಧತೆಯಿಂದಾಗಿ ನಾಡು ನುಡಿಗಳ ಏಳಿಗೆಗಾಗಿ ಪ್ರತಿಯೊಬ್ಬ ಅಧ್ಯಕ್ಷರೂ ತಮ್ಮ ಒಳನೋಟಗಳಿಂದ ಕೂಡಿದ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಕನ್ನಡದ ಸೋಂಕಿಲ್ಲದ, ಕಂಪ್ಯೂಟರುಗಳಿಲ್ಲದೇ ಅಣುವಿನಷ್ಟು ಕೆಲಸವೂ ಆಗದ ಸಂಸ್ಥೆಯಲ್ಲಿ ಹೊಟ್ಟೆಪಾಡಿಗೆ ದುಡಿಯುತ್ತಿರುವ ನಾನು ಪರಿಷತ್ತಿಗಾಗಲೀ, ಕನ್ನಡ ಸಾಹಿತ್ಯ ನಿಮರ್ಾತೃಗಳಿಗಾಗಲೀ ಸಲಹೆ ಸೂಚನೆಗಳನ್ನು ಕೊಡುವಷ್ಟು ಶಕ್ತನಲ್ಲ. ಅಲ್ಲದೇ ರಾಜಕೀಯವಾಗಿ, ಸಾಮಾಜಿಕವಾಗಿ ಆಗಬೇಕಿರುವ ಕೆಲಸಗಳಿಗೆ ಸಾಹಿತಿಯೊಬ್ಬನ ಚಿಂತನೆಗಳು ಕೇವಲ ತೋರುಬೆರಳಷ್ಟೇ ವಿನಾ ಅದೇನೂ ಲಕ್ಷ್ಮಣ ರೇಖೆಯಲ್ಲ. ಆದರೂ ಕಳೆದ ಮೂವತ್ತು ವರ್ಷಗಳಿಂದ ಬರವಣಿಗೆಯಲ್ಲಿ ತೊಡಗಿ, ಸಾಂಸ್ಕೃತಿಕ ಲೋಕದ ಒಳ ಪದರಗಳನ್ನು ಅತಿ ಹತ್ತಿರದಿಂದ ಕಂಡಿರುವ ನನಗೆ ಇವತ್ತಿನ ಸಾಹಿತ್ಯಕ, ಸಾಂಸ್ಕೃತಿಕ ವ್ಯಕ್ತಿಗಳು ತಮ್ಮ ಶಕ್ತಿ ಮತ್ತು ವ್ಯಾಪ್ತಿಯಾಚೆಗಿನ ಪ್ರಭಾವಳಿ ಪಡೆಯಲು ಏನೆಲ್ಲ ಹುನ್ನಾರಗಳನ್ನು ಮಾಡುತ್ತಿದ್ದಾರೆಂದು ವಿವರಿಸ ಹೊರಟರೆ ಈ ಐಕಾನುಗಳೆಲ್ಲ ನಾಚಿಕೆಯಿಂದ ತಲೆ ತಗ್ಗಿಸಬೇಕಾದ ಹಲವು ಘಟನೆಗಳು ನಡೆದಿವೆ, ನಡೆಯುತ್ತಿವೆ. ಉದಾಹರಣೆಗೆ ಕನ್ನಡವನ್ನು ಶಾಸ್ತ್ರೀಯ ಭಾಷೆಯೆಂದು ಕೇಂದ್ರ ಸರ್ಕಾರ ಘೋಷಿಸಿದ ದಿನ ಸಿಹಿ ಹಂಚಿ, ಪಟಾಕಿ ಸಿಡಿಸಿ ನಾವೆಲ್ಲ ಸಂಭ್ರಮ ಪಟ್ಟೆವು. ಮುಂದೆ ಅದೇನಾಯಿತು? ಕನ್ನಡದ ಉದ್ಧಾರಕ್ಕೆ ಶಾಸ್ತ್ರೀಯ ಭಾಷೆಯ ಕೋಡು ಎಷ್ಟರ ಮಟ್ಟಿಗೆ ಸಹಕಾರಿಯಾಯಿತು? ಪ್ರಾಯಶಃ ವಿಶ್ವ ವಿದ್ಯಾಲಯಗಳಲ್ಲಿ ಸಂಶೋಧಕರಾಗಿ ಕೆಲಸಮಾಡುವವರಿಗೆ ಹೆಚ್ಚಿನ ಅವಕಾಶ, ಬೇರೆ ಭಾಷೆಗಳಿಂದ ಕನ್ನಡಕ್ಕೆ ನೇರ ಅನುವಾದದ ಸೌಲಭ್ಯ, ಕನ್ನಡ ಬೋಧಕರಿಗೆ ವಿಶ್ವ ವಿದ್ಯಾಲಯ ಮಟ್ಟದಲ್ಲಿ ಸಂಬಳ ಸಾರಿಗೆಗಳ ಹೆಚ್ಚಳ. ಜನ ಸಾಮಾನ್ಯರ ಮೇಲೆ ಯಾವ ಪ್ರಭಾವವನ್ನೂ ಮಾಡದ ಇಂಥ ಘೋಷಣೆಗಳ ಬಗ್ಗೆಯೇ ಅನುಮಾನಗಳು ಹುಟ್ಟುತ್ತವೆ. ನಮ್ಮ ದುರದೃಷ್ಟ. ಸರೋಜಿನಿ ಮಹಿಷಿ ವರದಿಯಾಗಲೀ, ಡಿ.ಎಂ.ನಂಜುಂಡಪ್ಪ ವರದಿಗಳನ್ನಾಗಲೀ ಕಡೆಗೆ ಕಾವೇರಿ ನೀರು ಹಂಚಿಕೆಯ ವ್ಯಾಜ್ಯದ ಬಗೆಗಿನ ಟ್ರಿಬ್ಯುನಲ್ ವರದಿಗಳನ್ನು ಅಧ್ಯಯನ ಮಾಡದೇ ಚಳವಳಿಗೆ ಕರೆನೀಡುವ ರಾಜಕೀಯ ನಾಯಕರನ್ನೂ, ಅವರನ್ನು ಓಲೈಸಲು ಆ ಕ್ಷಣಕ್ಕೆ ಜನರ ಅತ್ಮಾಭಿಮಾನವನ್ನು ಪ್ರಶ್ನಿಸುವ ಮಾತುಗಳನ್ನಾಡುವ ಹೋರಾಟಗಾರರನ್ನೂ ನಾವು ಅರ್ಥ ಮಾಡಿಕೊಳ್ಳದೇ ದಾರಿ ತಪ್ಪುತ್ತಿರುವುದು ಮಾತ್ರ ಸತ್ಯ. ನವೆಂಬರ್ನಲ್ಲಿ ಮಾತ್ರ ಕನ್ನಡಿಗರಾಗುವ ನಮಗೆ ನಮ್ಮ ಸಾಂಸ್ಕೃತಿಕ ಸಂಗತಿಗಳ ಅರಿವಿಗಿಂತಲೂ ಜನಾಕರ್ಷಣೆಯ ಸಂಗತಿಗಳಲ್ಲೇ ಹೆಚ್ಚಿನ ಆಸಕ್ತಿ ಇರುವುದು ದೌರ್ಭಾಗ್ಯ.
ಕನ್ನಡದ ಉದ್ಧಾರದ ಬಗ್ಗೆ ಮೇಲಿಂದ ಮೇಲೆ ಮಾತನಾಡುವ ನಾವು ಭಾಷೆಯೊಂದು ಅರಳಿ ಬೆಳೆಯಬೇಕಾದ ಪ್ರಾಥಮಿಕ ಹಂತದ ಶಿಕ್ಷಣದಲ್ಲಿ ಕನ್ನಡದ ಸ್ಥಾನವೇನಿದೆ ಎಂದು ಪ್ರಾಯೋಗಿಕವಾಗಿ ಆಲೋಚಿಸುವುದೇ ಇಲ್ಲ. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಮುಗಿಸುವುದಿರಲಿ, ಅದನ್ನೊಂದು ಐಚ್ಚಿಕ ವಿಷಯವನ್ನಾಗಿ ಆಯ್ಕೆ ಮಾಡುವ ಸ್ವಾತಂತ್ರವನ್ನೂ ವಿದ್ಯಾಥರ್ಿಗಳಿಗೆ ನಮ್ಮ ಶೈಕ್ಷಣಿಕ ವ್ಯವಸ್ಥೆ ನೀಡಿಲ್ಲ. ಅದರಲ್ಲೂ ಪದವಿ ಹಂತದಲ್ಲಿ ವಿಜ್ಞಾನವನ್ನು ಮುಖ್ಯ ವಿಷಯವನ್ನಾಗಿ ಆಯ್ಕೆ ಮಾಡಿಕೊಳ್ಳುವ ವಿದ್ಯಾಥರ್ಿ ಭಾಷೆಯನ್ನು ಭಾಷೆಯನ್ನಾಗಿ ಕಲಿಯಬಹುದೇ ವಿನಾ ಮುಖ್ಯ ವಿಷಯವನ್ನಾಗಿ ಕಲಿಯುವ ಅವಕಾಶ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿಲ್ಲ. ಆದರೆ ಹಿಂದೆ ಇದ್ದ, ಮತ್ತು ಸದ್ಯ ದೇಶದ ಕೆಲವೇ ವಿಶ್ವವಿದ್ಯಾಲಯಗಳಲ್ಲಿ ಮಾತ್ರ ಲಭ್ಯವಿರುವ ಆನರ್ಸ್ ತರಗತಿಗಳಲ್ಲಿ ಈ ಸೌಲಭ್ಯ ಇದೆ. ಇದು ನಮ್ಮಲ್ಲಿ ಎಷ್ಟು ಜನಕ್ಕೆ ಗೊತ್ತಿದೆ ಅನ್ನುವುದು ಮುಖ್ಯ. ಇನ್ನು ನಗರ ಮತ್ತು ನಗರ ಸಮೀಪದ ಕೆಳಮಧ್ಯಮ ವರ್ಗ ತಮ್ಮ ಸಮೀಪದಲ್ಲೇ ಇರುವ ಖಾಸಗಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸುತ್ತಾರೆಯೇ ವಿನಾ ಸಕರ್ಾರದ ಶಾಲೆಗಳತ್ತ ಸುಳಿಯುವುದೂ ಇಲ್ಲ. ಯಾವ ತರಬೇತಿಯೂ ಇಲ್ಲದ ಆದರೆ ಡಾಂಭಿಕತೆಯೊಂದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗೀ ಶಾಲೆಗಳು ನಾಯಿಕೊಡೆಗಳ ಹಾಗೆ ತಲೆಯೆತ್ತುತ್ತಿದ್ದರೆ, ದಶಮಾನಗಳ ಇತಿಹಾಸವಿರುವ ಸರ್ಕಾರೀ ಶಾಲೆಗಳು ಶಿಕ್ಷಕ-ವಿದ್ಯಾರ್ಥಿ ಅನುಪಾತವಿಲ್ಲದೇ ವರ್ಷದಿಂದ ವರ್ಷಕ್ಕೆ ಮುಚ್ಚುತ್ತ ಹೋಗುತ್ತಿವೆ. ಸರ್ಕಾರದ ಕಾರ್ಯ ಸೂಚಿ, ಬಿಸಿಯೂಟ, ಸಮವಸ್ತ್ರ, ಉಚಿತ ಪಠ್ಯ ಪುಸ್ತಕದ ಆಕರ್ಷಣೆಗಳಿದ್ದರೂ ದಿನದಿಂದ ದಿನಕ್ಕೆ ಸರ್ಕಾರೀ ಶಾಲೆಗಳಲ್ಲಿ ಹಾಜರಾತಿ ಮತ್ತು ದಾಖಲಾತಿಗಳು ಕಡಿಮೆಯಾಗುತ್ತಿರುವ ಕಾರಣವನ್ನು ವಿಶ್ಲೇಷಿಸದೇ ಬರಿಯ ವೇದಿಕೆಯ ಭಾಷಣಗಳಿಂದ ಯಾವ ಪ್ರಯೋಜನವೂ ಆಗುವುದಿಲ್ಲ. ಕಳೆದ ವರ್ಷಗಳಲ್ಲಿ ಸರ್ಕಾರೀ ಶಾಲೆಗಳಲ್ಲಿ ಆಂಗ್ಲ ಮಾಧ್ಯಮವನ್ನು ತೆರೆಯುವ ಹುಂಬ ನಿರ್ಧಾರ ಕೂಡ ಯಾವ ಪುರುಷಾರ್ಥವನ್ನೂ ಸಾಧಿಸಲಾಗಲಿಲ್ಲವೆನ್ನುವುದು ಸದ್ಯದ ಆತಂಕವನ್ನು ಇನ್ನೂ ಹೆಚ್ಚು ಮಾಡುತ್ತಿದೆ. ಸದ್ಯ ವೇದಿಕೆಯ ಮೇಲಿರುವ ಮತ್ತು ಈ ಸಭೆಯಲ್ಲಿ ಹಾಜರಿರುವ ಮೂವತ್ತು-ನಲವತ್ತು ವರ್ಷಗಳಿಗಿಂತ ಹೆಚ್ಚಿನ ವಯೋಮಾನದವರೆಲ್ಲರೂ ಓದಿರುವುದು ಕನ್ನಡ ಮಾಧ್ಯಮದ ಸರ್ಕಾರದ ಶಾಲೆಗಳಲ್ಲೇ! ಈ ಖಾಸಗೀ ಶಾಲೆಗಳ ಹುನ್ನಾರ ಶುರುವಾಗಿ ಹೆಚ್ಚೆಂದರೆ ಇಪ್ಪತ್ತೈದು ವರ್ಷಗಳಾಗಿರಬಹುದು. ಈ ಶಾಲೆಗಳಲ್ಲಿ ಆಂಗ್ಲ ಮಾಧ್ಯಮದಲ್ಲೇ ಕಲಿತವರ ಇಂಗ್ಲಿಷ್ಗಿಂತಲೂ ಕನ್ನಡದ ಶಾಲೆಗಳಲ್ಲಿ ಕಲಿತ ನಮ್ಮ ಇಂಗ್ಲಿಷ್ ವ್ಯಾಕರಣ ದೋಷಗಳಿಂದ ಮುಕ್ತವಾಗಿದೆಯೆಂದು ಹೇಳಿಕೊಳ್ಳಲು ಹೆಮ್ಮೆ ಎನ್ನಿಸುತ್ತದೆ. ದೂರದೃಷ್ಟಿಯಿಲ್ಲದ, ಯಾವ ಸೌಲಭ್ಯಗಳನ್ನೂ ಕೊಡದ ಖಾಸಗಿಯವರಿಗೆ ಶಾಲೆಗಳನ್ನು ತೆರೆಯುವ ಅವಕಾಶ ಕೊಟ್ಟ ಅಧಿಕಾರಿಗಳನ್ನೂ, ಅವರಿಗೆ ಅಂಥ ನಿರ್ದೇಶನಗಳನ್ನು ಕೊಡುವ ರಾಜಕೀಯ ನಾಯಕರನ್ನೂ ಕನ್ನಡಾಂಬೆ ಖಂಡಿತ ಕ್ಷಮಿಸಲಾರಳು.
ಇದು ರಾಜಕೀಯವನ್ನು ಕುರಿತು ಮಾತನಾಡುವ ವೇದಿಕೆಯಲ್ಲ. ಸಾಹಿತ್ಯವನ್ನು ಕುರಿತಂತೆ ಚರ್ಚಿಸುವ, ಸಂಸ್ಕೃತಿ ಚಿಂತನೆಯನ್ನು ಬಿತ್ತುವ ವೇದಿಕೆ ಎನ್ನುವುದು ಸತ್ಯದ ಮಾತಾದರೂ ನಮ್ಮ ಯಾವ ಚರ್ಚಿಗಳು, ಚಿಂತನೆಗಳು ರಾಜಕೀಯದ ಸೋಂಕಿಲ್ಲದೇ ನಡೆಯುವ ತಾಕತ್ತು ಹೊಂದಿವೆ ಅನ್ನುವುದು ಮುಖ್ಯವಾದ ಮಾತು. ‘ರಾಜಕೀಯ’ ಅನ್ನುವ ಶಬ್ದ ಪಡೆದಿರುವ ಅಪಭ್ರಂಶ ಇದು. ರಾಜರನ್ನು ಅಂದರೆ ನಾಯಕರನ್ನು ಸೃಷ್ಟಿಸುವ, ಅವರ ಯೋಚನೆಗಳಿಗೆ ಹರಿತ್ತನ್ನು ನೀಡುವುದೇ ರಾಜಕೀಯ. ಅಂದರೆ ಸಾಹಿತ್ಯ ಸಂಸ್ಕೃತಿಗಳ ನಾಯಕರನ್ನೂ ಸಂಗತಿಗಳನ್ನೂ ನಿರ್ಮಿಸುವ ಕೆಲಸ ಇಲ್ಲಿ ನಡೆಯುತ್ತಿದೆಯಾದ್ದರಿಂದ ಇದು ರಾಜಕೀಯದ ಸೋಂಕಿಲ್ಲದ್ದು ಅನ್ನುವುದೇ ಉಢಾಫೆಯ ಮಾತು. ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಗತಿಗಳು ಸಾಮಾಜಿಕ ನೆಲೆಯ ಮೇಲೇ ನಿಂತಿರುವಂಥವು. ಅಂದರೆ ಆಯಾ ಪ್ರದೇಶದ ಸಾಮಾಜಿಕ ರಾಜಕೀಯ ಮತ್ತು ಭೌಗೋಲಿಕ ಸಂಗತಿಗಳು ಆಯಾ ಪ್ರದೇಶದ ಸಾಹಿತ್ಯ ಸಂಸ್ಕೃತಿಗಳ ಮೇಲೆ ಪ್ರಭಾವ ಬೀರುತ್ತವೆ ಮತ್ತು ಹೊಸ ಆಲೋಚನೆಗಳಿಗೆ ಕಾರಣೀ ಭೂತವಾಗುತ್ತವೆ. ಇದರ ಜೊತೆಗೆ ಐತಿಹಾಸಿಕ ಸತ್ಯಗಳು ಮತ್ತು ಸಾಹಿತ್ಯಕ ಸತ್ಯಗಳು ಯಾವತ್ತೂ ಬೇರೆ ಬೇರೆಯಾಗಿರುವುದರಿಂದ ಮುಂದೊಂದು ಕಾಲಕ್ಕೆ ಯಾವುದು ನಿಜವಾದ ಸತ್ಯವೆನ್ನುವುದೂ ಗೊಂದಲಕ್ಕೆ ಕಾರಣವಾಗುತ್ತವೆ. ಉದಾಹರಣೆಗೆ ನಾನೀಗ ಉಲ್ಲೇಖಿಸುವುದು ಕನ್ನಡ ಪರಂಪರೆಯ ಉಚ್ಛ್ರಾಯದ್ದೆಂದು ನಂಬಲಾಗಿರುವ ವಿಜಯನಗರದ ಅರಸರ ಕಾಲ. ನಾವೆಲ್ಲ ಇತಿಹಾಸದ ಪಠ್ಯಗಳಲ್ಲಿ ಓದಿರುವ ಹಾಗೆ ವಿಜಯನಗರದ ಅರಸರ ಕಾಲದಲ್ಲಿ ಮುತ್ತು ರತ್ನಗಳನ್ನೂ, ವಜ್ರ ವೈಢೂರ್ಯಗಳನ್ನೂ ದಾರಿಬದಿಯಲ್ಲಿ ಮಾರಲಾಗುತ್ತಿತ್ತು ಮತ್ತು ಕಳ್ಳಕಾಕರ ಭೀತಿಯಿಲ್ಲದೇ ಜನ ಬದುಕಿದ್ದರು. ಇದು ಐತಿಹಾಸಿಕ ಸತ್ಯ. ಅಂದರೆ ಇತಿಹಾಸವನ್ನು ದಾಖಲಿಸಿದವರು ಬರೆದ ಸತ್ಯ. ಇದೇ ಕಾಲದಲ್ಲಿ ಅಂದರೆ ವಿಜಯ ನಗರದ ಅರಸರ ಕಾಲದಲ್ಲೇ ಬದುಕಿದ್ದ ದಾಸಶ್ರೇಷ್ಠ ಪುರಂದರ ದಾಸರ ಪದ್ಯವೊಂದನ್ನು ಉಲ್ಲೇಖಿಸುವುದಾದರೆ ಅದು ‘ಸತ್ಯವಂತರಿಗಿದು ಕಾಲವಲ್ಲ, ದುಷ್ಠ ಜನರಿಗೇ ಸುಭಿಕ್ಷ ಕಾಲ’. ಈಗ ನೀವೇ ಯೋಚಿಸಿ ನೋಡಿ. ಇತಿಹಾಸವನ್ನು ಹೊಟ್ಟೆಪಾಡಿಗೆ ಅಂದಂದಿನ ರಾಜಕೀಯನಾಯಕರನ್ನು ಮೆಚ್ಚಿಸಲು ದಾಖಲಿಸಿದ ಸತ್ಯಕ್ಕೂ, ಮತ್ತು ಸಾಮಾಜಿಕವಾಗಿ ನೊಂದು ಬೆಂದು ಸಾಹಿತ್ಯದ ಮೂಲಕ ಅಂದಂದಿನ ಸನ್ನಿವೇಶಗಳನ್ನು ಚಿತ್ರಿಸುವ ಸಾಹಿತ್ಯಕ ಸತ್ಯಕ್ಕೂ ಇರುವ ಅಂತರವನ್ನು. ಅಂದರೆ ನಾವೇ ಸೃಷ್ಟಿಸುವ ಐತಿಹಾಸಿಕ ಸತ್ಯಕ್ಕಿಂತಲೂ ಸಾಹಿತ್ಯಕ ಸತ್ಯ ಹೆಚ್ಚು ಮಹತ್ವದ್ದಾಗಿರುತ್ತದೆ.
ಮೇಲಿನ ಮಾತನ್ನು ಸಮರ್ಥಿಸುವ ಸಲುವಾಗಿ ನಾವೀಗ ಸ್ವಾತಂತ್ರೋತ್ತರದಲ್ಲಿ ನಮ್ಮ ಶಾಸನ ಸಭೆಗಳಲ್ಲಿ ನಮ್ಮನ್ನು ಪ್ರತಿನಿಧಿಸಿದ್ದ ಜನನಾಯಕರ ವರ್ತನೆ ಮತ್ತು ಅವರ ನಿಲುವುಗಳನ್ನೀಗ ಪರಿಶೀಲಿಸಬೇಕು. ಪ್ರಜಾಪ್ರಭುತ್ವವನ್ನು ಕುರಿತು ನಾವೆಷ್ಟೇ ಜಂಭ ಕೊಚ್ಚಿಕೊಂಡರೂ ಅದರ ವಿರೋಧಾಭಾಸಗಳನ್ನು ಮತದಾನದ ವ್ಯವಸ್ಥೆಯ ಮೂಲಕವೇ ಅಲ್ಲಗಳೆಯಬಹುದು. ಪ್ರತಿಶತ ಐವತ್ತಕ್ಕಿಂತಲೂ ಕಡಿಮೆ ಪ್ರಮಾಣದ ಮತದಾನ ನಡೆದಾಗಲೂ ಹೆಚ್ಚಿನ ಮತ ಪಡೆದವರು ಗೆಲ್ಲುತ್ತಾರೆನ್ನುವುದೇ ಈ ಆಯ್ಕೆಯ ಪ್ರಕ್ರಿಯೆಯ ಹಿಂದಿನ ಚೋದ್ಯ. ಏನೇ ಇರಲಿ ಸರ್ವ ಸಮ್ಮತ ಎನ್ನುವುದು ಇರದ ಕಾಲದಲ್ಲಿ ಇದು ಸಹಜವೇ. ಹೀಗೆ ಆರಿಸಿ ಹೋದ ಜನಪ್ರತಿನಿಧಿಗಳು ಅಧಿವೇಶನಗಳಲ್ಲಿ ಎಷ್ಟು ದಿನ ಭಾಗವಹಿಸುತ್ತಾರೆ, ಸ್ಥಳೀಯ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುತ್ತಾರೆ ಎನ್ನುವುದು ಮುಖ್ಯ. ಅಲ್ಲದೇ ಅತಿ ಮುಖ್ಯ ವಿಚಾರಗಳ ಚರ್ಚೆಯ ಕಾಲದಲ್ಲಿ ಅವುಗಳನ್ನು ಧ್ವನಿಮತದ ಮೂಲಕ ಅಂಗೀಕರಿಸುವ ಸನ್ನಿವೇಶಗಳಲ್ಲಿ ಅವರ ನಿಲುವೇನು ಎನ್ನುವುದು ಇಲ್ಲಿ ಮುಖ್ಯ. ತಾವು ಪ್ರತಿನಿಧಿಸುತ್ತಿರುವ ಪ್ರದೇಶದ ಸಮಸ್ಯೆಗಳಿಗಿಂತಲೂ ತಾವು ಪ್ರತಿನಿಧಿಸುವ ಪಕ್ಷದ ನಿಲುವನ್ನೇ ಬಲವಾಗಿ ಪ್ರತಿಪಾದಿಸುವ ನಾಯಕರಿಂದ ನಮಗೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಇದು ಈಗಾಗಲೇ ಶೃತವಾಗಿರುವ ಸತ್ಯ ಕೂಡ. ಆದರೆ ಕಳೆದೆರಡು ವಿಧಾನಸಭಾ ಕಾರ್ಯಕಲಾಪಗಳಲ್ಲಿ ಅರಸೀಕೆರೆಯ ಸಮಸ್ಯೆಗಳು ಶಾಸನ ಸಭೆಯಲ್ಲಿ, ಮಾಧ್ಯಮಗಳಲ್ಲಿ ಹೆಚ್ಚು ಹೆಚ್ಚು ಚರ್ಚಿತವಾಗುತ್ತಿರುವುದು ನಮ್ಮ ಭಾಗ್ಯ. ಅಧ್ಯಯನ ಮತ್ತು ಅನುಸಂಧಾನಗಳ ಮೂಲಕ ಸ್ಥಳೀಯ ಸಮಸ್ಯೆಗಳನ್ನು ಅರಿತು ಅವಕ್ಕೆ ತಕ್ಕುನಾದ ಉತ್ತರವನ್ನು ಕಂಡುಕೊಳ್ಳುತ್ತಿರುವ ಶಾಸಕರನ್ನು ಅಭಿನಂದಿಸಲೇಬೇಕು. ಅದಕ್ಕೆ ಪೂರಕವಾಗಿ ನಾವೆಲ್ಲ ಸ್ಪಂದಿಸುವುದು ಮತ್ತು ಪ್ರಾದೇಶಿಕ ಸಮಸ್ಯೆಗಳನ್ನು ಪರಿಹರಿಸುವುದರಲ್ಲಿ ಪಕ್ಷ ರಾಜಕೀಯ ಮಾಡದಿರುವುದೂ ಒಳ್ಳೆಯದೆಂಬುದನ್ನು ನಾವೆಲ್ಲರೂ ಅರಿಯಬೇಕು.
ನಾವೆಲ್ಲ ಸದ್ಯ ಅಬಿವೃದ್ಧಿ ಎನ್ನುವ ಮಾತನ್ನು ಆಗಾಗ ಜಪಿಸುತ್ತಿರುತ್ತೇವೆ. ಅಭಿವೃದ್ಧಿಯೆಂದರೆ ಚತುಷ್ಪಥ ರಸ್ತೆಗಳು, ಅದರ ಮೇಲೆ ಹಾಯುವ ವಿದೇಶೀ ಮೋಟಾರು ಕಾರುಗಳು, ಹೆದ್ದಾರಿಯನ್ನಾಕ್ರಮಿಸಿ ನಿಂತಿರುವ ಗಗನ ಚುಂಬೀ ಕಟ್ಟಡಗಳು, ಊರಿನ ಎಲ್ಲ ಓಣಿಗಳನ್ನೂ ಕಾಂಕ್ರೀಟು ಹಾದಿಗಳನ್ನಾಗಿಸಿ, ಇರುಳ ಕತ್ತಲಲ್ಲಿ ಝಗಮಗಿಸುವ ನಿಯಾನ್ ದೀಪಗಳಲ್ಲಿ ಮೀಯುವುದು. ಇದರಿಂದಾಗಿ ನಮ್ಮ ಅಂತಸ್ತು ಏರಿದೆಯೆಂದು ಅಂದುಕೊಳ್ಳುತ್ತೇವೆ, ನಮ್ಮೂರಿಗೆ ಸೌಂದರ್ಯ ಬಂತೆಂದು ಭ್ರಮಿಸುತ್ತೇವೆ. ಲಾಭವಾಗುವುದು ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಮಾತ್ರ. ನಿಜಕ್ಕೂ ಅಭಿವೃದ್ಧಿಯೆಂದರೆ ಆ ಪ್ರದೇಶದ ಜನರ ತಲಾ ಆದಾಯವನ್ನು ಹೆಚ್ಚಿಸುವ ಪರಿಕ್ರಮ. ಅಂದರೆ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡೇ ಕೈಗಾರಿಕೆಗಳನ್ನು ಸ್ಥಾಪಿಸುವುದು, ಸ್ಥಳೀಯರನ್ನೇ ಉದ್ಯೋಗದಲ್ಲಿ ತೊಡಗಿಸುವುದು, ಕೃಷಿ ಚಟುವಟಿಕೆಗಳಿಗೆ ಪೂರಕವಾದ ಇತರ ಚತುವಟಿಕೆಗಳಾದ ಹೈನುಗಾರಿಕೆ, ಪ್ರಾಣಿಸಾಕಣೆ ಇತ್ಯಾದಿ ಕಸುಬುಗಳನ್ನು ಸಂವರ್ಧಿಸುವಂತೆ ಮಾಡುವುದಾಗಿದೆ. ದುರಂತವೆಂದರೆ ಸದ್ಯದ ವರ್ತಮಾನದಲ್ಲಿ ಮಳೆ ಬೆಳೆಗಳಿಲ್ಲದೇ ರೈತರು ಕಂಗಾಲಾಗಿದ್ದರೆ, ಕಾರ್ಮಿಕರು ಜಾಗತೀಕರಣದ ದಾಳಿಯಿಂದಾಗಿ ಮಂಕಾಗಿದ್ದಾರೆ. ಮಧ್ಯಮ ವರ್ಗದ ಜನ ಕೊಳ್ಳುಬಾಕ ಸಂಸ್ಕೃತಿಯ ಕಾರಣದಿಂದಾಗಿ ಕೆಲಸಕ್ಕೆ ಬಾರದ ವಸ್ತುಗಳನ್ನು ಕೊಳ್ಳುವುದರಲ್ಲಿ ನಿರತರಾಗಿ ನಮ್ಮ ಸಂಸ್ಕೃತಿಯ ಮೇಲಾಗುತ್ತಿರುವ ದಾಳಿಯನ್ನು ಅರಿಯದವರಾಗಿದ್ದಾರೆ. ಕೃಷಿಯನ್ನು ಬಲವಂತವಾಗಿ ನಿಲ್ಲಿಸಿ ಅಳಿದುಳಿದಿರುವ ಭೂಮಿಯನ್ನೂ ಎಸ್ ಇ ಜಡ್ ಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ಇದ್ದ ಚೂರು ಪಾರು ಭೂಮಿಯನ್ನೂ ವಶಪಡಿಸಿಕೊಳ್ಳುವ ಕಾನೂನಿಗೆ ಕರುಣೆ ಎಂಬ ಶಬ್ದದ ಹಂಗೂ ಇದ್ದಂತಿಲ್ಲ. ಭೂಮಿ ಜೊತೆಗಿನ ಸಂಬಂಧ ವಾಣಿಜ್ಯೀಕರಣದ ಮೂಲ ಸ್ರೋತವಾಗಿ ಅದಿರು ಬಗೆದು ಮಾರುವವರ ತೆರೆದ ಮಾರುಕಟ್ಟೆಯಾಗಿರುವ ವರ್ತಮಾನದಲ್ಲಿ ನಮ್ಮದೆಂದು ಹೇಳಿಕೊಳ್ಳಲು ಉಳಿದಿರುವುದೇನೂ ಇಲ್ಲ. ನಮ್ಮ ಅಂಗಾಂಗಗಳನ್ನೆಲ್ಲ ವಿಶ್ವ ಸಂಸ್ಥೆಗೆ ಒತ್ತೆ ಇಟ್ಟಿರುವ ಕರಾಳ ದಿನಗಳಿವು. ಹೊಟ್ಟೆ ಪಾಡಿಗೆ ಮಾಡಲೇ ಬೇಕಿರುವ ಕೂಲಿಯ ಕೆಲಸ ನಮ್ಮೆಲ್ಲರ ಬಲವನ್ನು ನುಂಗಿ ನೊಣೆಯುತ್ತಿದೆ. ನಮ್ಮ ಬುದ್ಧಿ ಮತ್ತು ಇಂದ್ರಿಯಗಳು ಮಾಧ್ಯಮಗಳು ಸೃಷ್ಟಿಸಿರುವ ತಿರುಚಿದ ಸತ್ಯಗಳಲ್ಲಿ, ಜಾಹೀರಾತಿನ ಸುಳ್ಳುಗಳಲ್ಲಿ ಜಡಗೊಂಡಿವೆ. ಇನ್ನು ನಮ್ಮನ್ನಾಳುತ್ತಿರುವವರು ಸುಳ್ಳು ಸುಳ್ಳೇ ಸೃಷ್ಟಿಸಿದ ಅಭಿವೃದ್ಧಿಯ ಪಥದಲ್ಲಿ ನಮ್ಮ ಚಕ್ರವಿಲ್ಲದ ಬಂಡಿ ನಿಂತಲ್ಲೇ ನಿಂತಿದೆ. ನಾವೆಲ್ಲ ಬದುಕಿನ ಹಕ್ಕನ್ನೇ ಕಳೆದುಕೊಂಡವರಂತೆ ಕುಡಿಯುವ ನೀರನ್ನೂ ದುಡ್ಡು ಕೊಟ್ಟು ಕೊಳ್ಳುವ ಅನಿವಾರ್ಯದಲ್ಲಿ ಸಿಲುಕಿದ್ದೇವೆ. ಇಂಥ ಸಂಧಿಗ್ಢದಲ್ಲಿ ಸಾಹಿತ್ಯ ಎನ್ನುವುದು ಹೇಗೆ ತಾನೇ ಸತ್ವ ಭರಿತ ಮಾತುಗಳನ್ನಾಡಲು ಸಾಧ್ಯ? ಈ ಹಿನ್ನೆಲೆಯಲ್ಲೇ ಸಂಸ್ಕಾರವಿಲ್ಲದ ಶ್ರೀಮಂತಿಕೆಯನ್ನು ಸಾಹಿತ್ಯ ಪರಂಪರೆ ನಿರಂತರವಾಗಿ ಧಿಕ್ಕರಿಸುತ್ತಲೇ ಬಂದಿದೆ.
ಈ ಹಿಂದಿನ ನಾಲ್ಕು ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರುಗಳಾಗಿದ್ದ ಕೃ.ನ.ಮೂರ್ತಿ, ಬಿ.ಎನ್.ರಾಮಸ್ವಾಮಿ, ಡಾ. ಡಿ.ಎನ್.ಯೋಗೀಶ್ ಮತ್ತು ಡಾ. ರೇಣುಕಾ ಬಂಗಾರಿ ಅವರ ಸಾಹಿತ್ಯ ಸೇವೆಯನ್ನು ಸ್ಮರಿಸುತ್ತಲೇ ಸದ್ಯೋ ವರ್ತಮಾನದ ಸಾಹಿತ್ಯ ನಿರ್ಮಾರ್ತೃಗಳೆಂದು ಹೆಸರಾಗಿರುವ ಸ. ಉಷಾ ಮತ್ತು ಎಂ.ಆರ್. ಕಮಲ ಅವರನ್ನು ಅಭಿನಂದಿಸುತ್ತೇನೆ. ಡಾ. ಬಿ.ಡಿ.ಕುಮಾರ್, ಡಾ.ಎಚ್.ಅರ್.ಸ್ವಾಮಿ, ಡಾ.ಹರಶಿವಮೂರ್ತಿ, ಕೆ.ಸಿ.ಬಸಪ್ಪ, ಮಮತಾ ಅರಸೀಕೆರೆ, ಕೆ.ರಾಮಕೃಷ್ಣ, ಎನ್.ವಿ.ರಾಮಕೃಷ್ಣಪ್ಪ, ಎಚ್.ಡಿ.ದಿವಾಕರ್, ಪದ್ಮ ಮೂರ್ತಿ, ಪರಮೇಶ್, ಗ್ಯಾರಂಟಿ ರಾಮಣ್ಣ, ವೈಲೆಟ್ ಪಿಂಟೋ, ಡಾ.ವೈ.ಡಿ.ನಂಜುಂಡಪ್ಪ, ಜಾವಗಲ್ ಪ್ರಸನ್ನ, ಸಿ.ಎಂ. ಕಪನೇಗೌಡ, ಚಾಂದ್ ಬಾಷಾ, ಮುದ್ದುಮಲ್ಲೇಶ್,ಮಂಜುನಾಥರಾವ್, ತ್ರಿಮೂರ್ತಿ  ಮುಂತಾದವರನ್ನು ನೆನೆಯದಿದ್ದರೆ ಅರಸೀಕೆರೆಯ ಸಾಹಿತ್ಯ ಇತಿಹಾಸವನ್ನು ಹೇಳಿದಂತಾಗುವುದಿಲ್ಲ. ಅಲ್ಲದೇ ತಾಲ್ಲೂಕು ಸಾಹಿತ್ಯ ಪರಿಷತ್ತನ್ನು ಕಟ್ಟಿಬೆಳೆಸಿದ್ದಕ್ಕಾಗಿ ಎಸ್.ಪರಶಿವಮೂರ್ತಿ, ಜಿ.ಎಸ್.ಶಿವಲಿಂಗಪ್ಪ, ಜಿ.ಎಸ್.ಸಿದ್ದಪ್ಪ, ಎಚ್.ಡಿ.ತಿಮ್ಮಪ್ಪ, ಬಿ.ಎಸ್.ಲಕ್ಷ್ಮಣರಾವ್, ಬೊಮ್ಮಣ್ಣ, ಸಿ.ರಾಮಚಂದ್ರ, ಬಿ.ಎಸ್.ಸೇತೂರಾಂ, ಚಂದ್ರಶೇಖರ ಬಾಬು, ಜಾವಗಲ್ ವಸಂತ ಕುಮಾರ್, ಮೇಲೆಗೌಡ, ಸಿ.ಬಿ.ಕುಮಾರ್ ಮುಂತಾದವರನ್ನು ನೆನೆಯಲೇಬೇಕು.
ಈ ಬೆಳಿಗ್ಗೆಯ ಮೆರವಣಿಗೆಯನ್ನು ಇಲ್ಲಿ ನಡೆಯುವ ಕಾರ್ಯಕಲಾಪಗಳನ್ನೂ ಒಟ್ಟಿನಲ್ಲಿ ಸಮುದಾಯವೊಂದು ಪಡುವ ಸಂಭ್ರಮವನ್ನು ‘ವೇಸ್ಟ್’ಎಂದು ಮೂಗು ಮುರಿಯುವವರೂ ಇದ್ದಾರೆ. ಇಲ್ಲಿನೆಲ್ಲ ಚಟುವಟಿಕೆಗಳನ್ನು ಜಾತಿ ಮಸೂರದಿಂದ ನೋಡಿ ಕಿಚ್ಚು ಹಚ್ಚುವವರೂ ಇದ್ದಾರೆ. ಸತ್ಯವೆಂದರೆ ಇಂಥ ವಿಘ್ನ ಸಂತೋಷಿಗಳನ್ನು ನಮ್ಮ ಸಂಸ್ಕೃತಿ ಕಾಲು ಕಸ ಮಾಡಿದೆ. ಈ ಮೆರವಣಿಗೆ, ಸಂಭ್ರಮ, ಸಡಗರ, ಚಡಪಡಿಕೆಗಳೆಲ್ಲವೂ ಕನ್ನಡ ಸಮುದಾಯವನ್ನು ಜನಮಾನಸದಲ್ಲಿ ಅಚ್ಚಳಿಯದಂತೆ ಕಡೆಯುವ ಮತ್ತು ಕನ್ನಡದ ಅಸ್ಮಿತೆಗೆ ಬಲವನ್ನು, ಶ್ರೇಯಸ್ಸನ್ನೂ ಕೊಟ್ಟಿರುವ ಸತ್ಯವೆಂದು ನಾವೆಲ್ಲರೂ ಅರಿಯಬೇಕು.
ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಲ್ಲದಿದ್ದರೆ ಬದುಕು ನರಕವಾಗುವುದಂತೂ ಸತ್ಯ. ಸಾಹಿತ್ಯವೆಂದರೆ ಖ್ಯಾತ ಬರಹಗಾರರ ಪುಸ್ತಕಗಳನ್ನು ಓದುವುದಷ್ಟೇ ಅಲ್ಲ. ನಮ್ಮ ಮನೆಮನೆಗಳಲ್ಲಿ ಬಾಯಿಂದ ಬಾಯಿಗೆ ಹರಡಿರುವ ಮೌಖಿಕ ಸಾಹಿತ್ಯದ ಸಿರಿ ಮತ್ತು ಜಾನಪದದ ಸೊಗಡು ಪ್ರಕಟಿತ ಸಾಹಿತ್ಯಕ್ಕಿಂತ ಕಮ್ಮಿಯೇನಲ್ಲ. ಅಕ್ಷರಬಾರದವರೂ ಜೈಮಿನಿಯನ್ನು, ಲಕ್ಷ್ಮೀಷನ ಭಾರತವನ್ನು ಹಾಡುತ್ತಿದ್ದವರ ನೆಲವಿದು. ‘ಏಗ್ದಾಗೆಲ್ಲ ಐತೆ’ ಅಂತ ನಂಬಿದ ಸಿದ್ಧ ಪುರುಷರು ಮತ್ತು ಯೋಗಿಗಳೂ ಅವತರಿಸಿದ ಮಣ್ಣು ಇದು. ಇಂಥ ಕಸ್ತೂರಿಯ ಮಣ್ಣು ನೆಲದಲ್ಲಿ ಕನಸನ್ನು ನೇಯುತ್ತಿರುವ ನಾವೇ ಧನ್ಯರು. ಹಿಂದೊಂದು ಕಾಲದಲ್ಲಿ ಕನ್ನಡ ವೃತ್ತಿ ರಂಗಭೂಮಿಯ ಖ್ಯಾತನಾಮರು ಅರಸೀಕೆರೆಯಲ್ಲಿ ಮೊಕ್ಕಾಂ ಹೂಡದೇ ಇರುತ್ತಿರಲಿಲ್ಲವಂತೆ. ಗುಬ್ಬಿ ವೀರಣ್ಣನವರು, ನಟರತ್ನಾಕರ ಮಾಸ್ಟರ್ ಹಿರಣ್ಣಯ್ಯನವರ ತಂದೆ ಹಿರಣ್ಣಯ್ಯನವರು ಈ ಊರಿನ ಅನ್ನದಾನಿಗಳನ್ನು ಉಳಿದೆಲ್ಲ ಊರುಗಳ ಕ್ಯಾಂಪಿನಲ್ಲಿ ಕೊಂಡಾಡುತ್ತಿದ್ದುದ್ದು ನಾಟಕಾಸಕ್ತರಿಗೆಲ್ಲರಿಗೂ ತಿಳಿದ ವಿಷಯ. ಖ್ಯಾತ ನಟ ಬಾಲಕೃಷ್ಣ ಇದೇ ಊರಿನವರು. ವರನಟ ರಾಜಕುಮಾರ್ಗೆ ‘ನಟಸಾರ್ವಭೌಮ’ ನೆಂಬ ಬಿರುದು ಕೊಟ್ಟಿದ್ದು ಅರಸೀಕೆರೆಯ ಕಳ್ಳನ ಕಟ್ಟೆಯ ರಂಗಮಂಟಪದಲ್ಲಿ ಎನ್ನುವುದು ಬಹುತೇಕ ಹಿರಿಯರಿಗಷ್ಟೇ ನೆನಪಿರುವ ವರ್ತಮಾನ. ಇಂಥ ಈ ಊರಲ್ಲಿ ಸದ್ಯ ರಂಗಚಟುವಟಿಕೆಗಳು ಹೇಳಿಕೊಳ್ಳುವ ಪ್ರಮಾಣದಲ್ಲಿ ನಡೆಯದಿದ್ದರೂ ಕೆಆರ್ವಿಪಿಯ ಎಚ್ ಆರ್ ಸ್ವಾಮಿ ಮತ್ತು ಮಮತಾ ಇನ್ನೂ ನಾಟಕಗಳನ್ನು ನಿರ್ಮಿಸುವುದರಲ್ಲಿ ನಿರತರಾಗಿರುವುದು ಸಮಾಧಾನದ ವಿಚಾರ. ಕಳೆದ ನಾಲ್ಕೈದು ವರ್ಷಗಳಿಂದ ಸಾಣೇಹಳ್ಳಿಯ ಶಿವಸಂಚಾರದ ನಾಟಕಗಳನ್ನು ತರಳಬಾಳು ಯುವ ವೇದಿಕೆ ಆಹ್ವಾನಿಸುತ್ತಿದೆಯಾದರೂ ರಾಜ್ಯಾದ್ಯಂತ ಸಂಚರಿಸುವ ನೀನಾಸಂ ಮತ್ತು ರಂಗಾಯಣವನ್ನೂ ನಮ್ಮೂರಿಗೆ ಕರೆ ತರುವ ಪ್ರಯತ್ನ ಮಾಡದಿರುವುದು ಏಕೋ ಅರ್ಥವಾಗದ ವಿಷಯ. ಎಂ ಎಸ್ ಸುಬ್ಬುಲಕ್ಷ್ಮಿ, ಜೇಸುದಾಸ್, ಬಾಲಮುರಳಿ ಕೃಷ್ಣ, ಕುನ್ನೈಕುಡಿ, ಕದ್ರಿ ಗೋಪಾಲನಾಥರಂಥ ಕಲಾವಿದರನ್ನು ಕರೆಸಿ ಸಂಗೀತದ ರಸದೌತಣ ನೀಡುತ್ತಿದ್ದ ಗಣಪತಿ ಸೇವಾಸಮಿತಿ ತನ್ನ ಮರು ಜೀವಂತಿಕೆಯನ್ನು ಕಳೆದ ವರ್ಷದಿಂದ ಪಡೆದದ್ದೂ ಸಂಗೀತಾಸಕ್ತರಿಗೆಲ್ಲ ಖುಷಿಯ ವಿಚಾರ. ಮಹಾತ್ಮ ಪಿಕ್ಚರ್ಸ್ ಸಂಸ್ಥೆಯ ಹುಟ್ಟಿದೂರು ಅರಸೀಕೆರೆ. ಕನ್ನಡ ಚಿತ್ರ ರಂಗದ ಖ್ಯಾತ ಪೋಷಕ ನಟ ಶ್ರೀ ದೊಡ್ಡಣ್ಣ ನಮ್ಮೂರಿನವರೇ ಅನ್ನುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ. ಗುರುಪ್ರಸಾದ್ ನಿರ್ದೆಶನದ ಹೊಸ ಸಿನಿಮಾ ‘ಡೈರೆಕ್ಟರ್ಸ್ ಸ್ಪೆಷಲ್’ ಚಿತ್ರದ ನಾಯಕ ನಟ ಧನಂಜಯ ಕಾಳೇನಹಳ್ಳಿ ಹಟ್ಟಿಯವರು ಅನ್ನುವುದು ಖುಷಿಯ ವಿಷಯ. ಸದ್ಯ ಮುಚ್ಚಿರುವ ವೆಂಕಟೇಶ್ವರ ಚಲನಚಿತ್ರ ಮಂದಿರ ಕಲಾಮಂದಿರವಾಗಿ ಪರಿವರ್ತಿತವಾಗುತ್ತಿರುವುದು ರಂಗಾಸಕ್ತರೆಲ್ಲರಿಗೂ ಹೊಸ ಹುಮ್ಮಸ್ಸನ್ನು ನೀಡಿದೆಯೆಂದರೆ ಅದೇನೂ ಅತಿಶಯೋಕ್ತಿಯಲ್ಲ.
ರಾಜಕೀಯ / ಸಾಮಾಜಿಕ ಆಶೋತ್ತರಗಳು:
1. ಮಳೆಯ ನೀರನ್ನೇ ನಂಬಿರುವ ಬಯಲು ಪ್ರದೇಶದ ಈ ತಾಲ್ಲೂಕಿಗೆ ನೀರಾವರಿ ಎನ್ನುವುದು ಕನಸಿನ ಮಾತು. ಏತ ನೀರಾವರಿಯ ಕನಸನ್ನು ಬಿತ್ತಿರುವ ಶಾಸಕರು ತಮ್ಮೆಲ್ಲ ಪ್ರಯತ್ನಗಳನ್ನು ಕ್ರೋಢೀಕರಿಸಿ ಅದನ್ನು ಆಗುಗೊಳಿಸಲೆಂಬುದು ಎಲ್ಲರ ಆಸೆ.
2. ಅಂತರ್ಜಲದ ಪ್ರಮಾಣ ದಿನದಿಂದ ದಿನಕ್ಕೆ ಕುಸಿಯುತ್ತಿರುವುದೇ ಈ ಹೊತ್ತಿನ ಬಹುತೇಕ ಸಮಸ್ಯೆಗಳ ಮೂಲ. ಮೂರನೇ ಮಹಾಯುದ್ಧವೆಂಬುದೇನಾದರೂ ನಡೆದರೆ ಅದು ನೀರು ಹಂಚಿಕೆಯ ಕಾರಣಕ್ಕಾಗಿ ಆಗುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯ ಬೇಡ. ಕುಡಿಯುವ ನೀರಿಗೇ ತತ್ವಾರವೆದ್ದಿರುವ ಕಾಲದಲ್ಲಿ ಜಲ ಮರು ಪೂರಣವೊಂದೇ ಇರುವ ಏಕೈಕ ದಾರಿ. ರೈತರು ತಮ್ಮ ಹೊಲಗಳಲ್ಲಿ ಇಂಗುಗುಂಡಿಗಳನ್ನು, ಒಡ್ಡುಗಳನ್ನೂ ನಿರ್ಮಿಸುವುದರ ಮೂಲಕ ಅಂತರ್ಜಲದ ಪ್ರಮಾಣವನ್ನು ಕಾಪಾಡಬೇಕು. ಸರ್ಕಾರದ ವಿವಿಧ ಯೋಜನೆಗಳನ್ನು ಕಡೆಯ ಮನುಷ್ಯನವರೆಗೆ ಮುಟ್ಟಿಸುವ ಪ್ರಯತ್ನಕ್ಕೆ ಎಲ್ಲ ನಾಗರೀಕರೂ ಶ್ರಮಿಸಬೇಕು.
3. ಸ್ವಾತಂತ್ರೋತ್ತರದ ಅರವತ್ತು ವರ್ಷಗಳ ಇತಿಹಾಸಕ್ಕೆ ಹೋಲಿಸಿದರೆ ಕಳೆದ ಕೆಲವು ವರ್ಷಗಳಲ್ಲಿ ನಗರದ ಕುಡಿಯುವ ನೀರಿನ ಸಮಸ್ಯೆ ತಕ್ಕಮಟ್ಟಿಗೆ ಸುಧಾರಿಸಿದೆ. ಹೇಮಾವತಿಯನ್ನು ತಿಪಟೂರಿನ ಮೂಲಕ ಪಡೆಯುತ್ತಿದ್ದ ನಮಗೆ ಇದೀಗ ಚನ್ನರಾಯಪಟ್ಟಣದ ಗನ್ನಿಗಡದಿಂದ ನೇರವಾಗಿ ಹರಿಸುವ ಉದ್ದೇಶದಲ್ಲಿರುವ ಶಾಸಕರು ಆಧುನಿಕ ಭಗೀರಥನಂತೆ ಕಾಣುತ್ತಾರೆಂದರೆ ವಿರೋಧಿಗಳೂ ಅಲ್ಲಗಳೆಯಲಾರರು. ಯಗಚಿ ನದಿಯ ನೀರು ತಾಲ್ಲೂಕಿನ ಹಲವು ಹಳ್ಳಿಗಳ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಬಲ್ಲುದು.
4. ತೆಂಗು ಬೆಳೆಗಾರರ ಆತಂಕವಂತೂ ಗಗನ ಮುಟ್ಟಿದೆ. ಮಳೆ ಇಲ್ಲದೇ ಅಂತರ್ಜಲದ ಪ್ರಮಾಣ ಕುಸಿದು ತೆಂಗಿನ ತೋಟಗಳೆಲ್ಲ ಸೊರಗಿ ನಿಂತಿವೆ. ಕಲ್ಪವೃಕ್ಷವೆಂದು ಕರೆಯುವ ತೆಂಗು ನತಮಸ್ತಕವಾಗಿ ನಿಂತಿದೆ. ನೀರಾವರಿ ಕಾಣದ ರೈತ ‘ನೀರಾ’ ಮೂಲಕ ಕಂಡಿದ್ದ ಕನಸುಗಳು ಕಮರಿ ಹೋಗಿವೆ. ಸಕರ್ಾರದ ಮಟ್ಟದಲ್ಲಿ ಅದನ್ನೆಚ್ಚರಿಸುವಂತೆ ದೊಡ್ಡ ಪ್ರಮಾಣದಲ್ಲಿ ಚಳವಳಿಯೊಂದು ನಡೆಯಬೇಕಿದೆ. ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರು ಮತ್ತು ರಕ್ಷಣಾ ವೇದಿಕೆಯ ನಾರಾಯಣ ಗೌಡರು ಹುಟ್ಟಿದೂರಿನ ಋಣ ತೀರಿಸಲಾದರೂ ಪ್ರಸ್ತಾಪಿತ ಚಳವಳಿಯ ನೇತೃತ್ವ ವಹಿಸಬೇಕಾಗಿದೆ. ಅದಕ್ಕಾಗಿ ತೆಂಗನ್ನು ಮುಖ್ಯ ವ್ಯವಸಾಯವನ್ನಾಗಿ ಮಾಡಿಕೊಂಡಿರುವ ಅರಸೀಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ, ಹೊಸದುರ್ಗ ಮತ್ತು ಕಡೂರು ತಾಲ್ಲೂಕುಗಳನ್ನು ಒಗ್ಗೂಡಿಸಿ ಈ ಎಲ್ಲ ಊರುಗಳಿಗೂ ಕೇಂದ್ರ ಸ್ಥಾನದಲ್ಲಿರುವ ಅರಸೀಕೆರೆಯನ್ನೇ ಜಿಲ್ಲಾಕೇಂದ್ರವಾಗುಳ್ಳ ಹೊಸ ಕಲ್ಪತರು ಜಿಲ್ಲೆಯನ್ನು ನಿರ್ಮಾಣಮಾಡಬೇಕಿದೆ.
5. ಜಿಲ್ಲಾ ಕೇಂದ್ರ ಹಾಸನವನ್ನು ಸಂಪರ್ಕಿಸುವ ರಸ್ತೆ ದುರಸ್ತಿಯಾಗದೇ ದಶಕಗಳೇ ಸಂದಿವೆ. ರಸ್ತೆ ನಿರ್ಮಾಣದ ಕೆಲಸದಲ್ಲಿ ರಾಜಕೀಯ ಮಾಡದೇ ಎಲ್ಲ ನಾಯಕರೂ ಸಂಯಮದಿಂದ ವರ್ತಿಸಬೇಕಾಗಿದೆ.
ನನ್ನ ಮಾತು ಮುಗಿಸುವ ಮೊದಲು ಮತ್ತೆ ಪಟ್ಟಿಮಾಡಲೇಬೇಕಿರುವ ಅಂಶಗಳೆಂದರೆ;
ಕನ್ನಡ ಅಂದರೆ ಸಾವಿರ ವರ್ಷಗಳಿಂದ ನಮ್ಮ ಪೂವರ್ಿಕರು ಜತನದಿಂದ ರೂಪಿಸಿ ಶೇಖರಿಸಿಕೊಂಡು ಬಂದಿರುವ ಒಂದು ಸಮುದಾಯದ ವಿವೇಕ. ಆ ವಿವೇಕವು ಕಾವ್ಯವಾಗಿ, ನಾಟಕವಾಗಿ, ಕಾದಂಬರಿಯಾಗಿ, ಕಥೆಗಳಾಗಿ, ಈ ನೆಲದ ಹೋರಾಟಗಳಾಗಿ, ಚಿಂತನೆಗಳಾಗಿ ರೂಪುಗೊಂಡಿದೆ ಮತ್ತು ಅದು ಮುಂದುವರಿಯುತ್ತಲೂ ಇದೆ ಎಂಬುದು ನನ್ನ ನಮ್ರ ತಿಳುವಳಿಕೆ.
ಇಂಥ ಘನವಾದ ವಿವೇಕದಲ್ಲಿ ಸಹಿಷ್ಣುತೆ ಎಂಬುದು ಕೂಡ ಸ್ಥಾಯಿಯಾಗಿ ನಿಂತಿರುವ ಗುಣಲಕ್ಷಣ. ಆ ಅಂಥ ಸಹಿಷ್ಣುತೆಯೇ ಹಲವು ತತ್ವಗಳಿಗೆ ಕಾರಣವಾಗಿ ‘ದಯೆ ಇಲ್ಲದ ಧರ್ಮ ಅದಾವುದಯ್ಯ’ ಎಂದು ಕೇಳುತ್ತಲೇ, ಪರಧರ್ಮ ಸಹಿಷ್ಣುತೆಯನ್ನು ಅಭ್ಯಾಸ ಮಾಡಿಕೊಳ್ಳಿ ಎಂಬ ದೊಡ್ಡ ವಿವೇಕವನ್ನು ಸಮುದಾಯಕ್ಕೆ ಕೊಟ್ಟಿದೆ. ಇಂಥದನ್ನೇ ನಾವು ಕೆಲವರು ಸಾಹಿತ್ಯ, ಕಾವ್ಯ, ರಾಜಕಾರಣ, ರಂಗಭೂಮಿಯ ಮೂಲಕ ಪದೇಪದೇ ನಿರ್ವಚಿಸುತಿದ್ದೇವೆ .
ಹಲವಾರು ಅವಸ್ತಾಂತರಗಳಿಗೆ ಒಳಗಾಗಿಯೂ ವೃದ್ಧಿಸುತ್ತಲೇ ಇರುವ ಈ ಕನ್ನಡವೇ ಕಲಿಸಿದ ವಿವೇಕವು, ಬದುಕಿನ ವಿವೇಕವಾಗಿ ಹಾಗೂ ಬದುಕುವ ವಿವೇಕವಾಗಿ ನಮ್ಮ ಮುಂದಿದೆ. ಇಂಥ ವಿವೇಕವು ಕಾಲಾಂತರದಲ್ಲಿ ಹೊಸ ಅರ್ಥಗಳಿಗೆ, ವ್ಯಾಖ್ಯಾನಗಳಿಗೆ ಕಾರಣವಾಗುವುದು ಸಹಜ ಮತ್ತು ಸತ್ಯದ ವಿಷಯವಾಗಿದೆ.
ಕನ್ನಡ ಅಂದರೆ ದೈಹಿಕ ಶ್ರಮ ಹಾಗೂ ಮಾನಸಿಕ ಶ್ರಮ ಒಟ್ಟುಗೂಡಿದ ಒಂದು ಸಮುದಾಯದ ದೊಡ್ಡ ಜೆಸ್ಚರ್. ಅದು ಸಾಹಿತ್ಯ, ಚಿತ್ರಕಲೆ, ರಂಗಭೂಮಿ, ಸಂಗೀತ, ಹೋರಾಟ, ಸಂಘಟನೆಯ ಕ್ರಿಯೆಗಳ ಮೂಲಕ ಇಲ್ಲಿನ ಜನರನ್ನ, ಸಮಾಜವನ್ನ, ರಾಜಕಾರಣವನ್ನ ರೂಪಿಸಿದೆ.
ಇಂಥ ಸಮಷ್ಠಿ ಕ್ರಿಯೆಗಳಿಗೆ ಅನ್ಯ ಭಾಷೆಯ ಸಂಸ್ಕೃತಿಗಳೂ ಪ್ರಭಾವಬೀರುವ ಕಾರಣದಿಂದಾಗಿ ಸಮುದಾಯದ ಪ್ರಜ್ಞೆಯೂ ಜಾಗೃತಗೊಳ್ಳುತ್ತದೆ ಎಂಬುದು ಕೂಡ ನಾವು ಒಪ್ಪಿಕೊಳ್ಳಲೇಬೇಕಾದ ಅಂಶ.
ಇಂಡಿಯಾ ದೇಶ ಅನ್ನುವ ಈ ವಿಶಾಲ ಭಿತ್ತಿಯಲ್ಲಿ ಕನ್ನಡದ ಜಗತ್ತು ತನ್ನನ್ನು ತಾನು ರೂಪಿಸಿಕೊಂಡಿದೆ ಹಾಗೂ ಪುನರ್ ರೂಪಿಸಿಕೊಳ್ಳುತ್ತಲೂ ಇರುತ್ತದೆ. ಈ ಇಂಥದನ್ನೇ ನಾನು ಸಮುದಾಯದ ವಿರಾಟ್ ಅಭಿವ್ಯಕ್ತಿ ಎಂದು ಕರೆಯುತ್ತೇನೆ. ಈ ಅಭಿವ್ಯಕ್ತಿಯು ಆದಿಕವಿ ಪಂಪನಿಂದ ಹಿಡಿದು, ಈ ಹೊತ್ತಿನಲ್ಲಿ ಬರೆಯುತ್ತಿರುವ ಬರಹಗಾರರ ತನಕ ಒಳವಿವೇಕವಾಗಿ ಮುಂದುವರೆದುಕೊಂಡು ಬಂದಿದೆ.
ನಮ್ಮ ಈ ಸಮಕಾಲೀನ ಕನ್ನಡ ಜಗತ್ತಿನಲ್ಲಿ ಭಾಷೆಯನ್ನು ಒಂದು ಆಯುಧವಾಗಿ, ಅಸ್ತ್ರವಾಗಿ ಬೆಳಸುವ ಅವಾಂತರಕಾರಿ ಚಟುವಟಿಕೆ ಕಂಡುಬರುತ್ತಿರುವುದು ನಮ್ಮ ಕನ್ನಡದ ವಿವೇಕಕ್ಕೆ ದೊಡ್ಡ ಪೆಟ್ಟಾಗಿದೆ ಎಂದು ಭಾವಿಸುತ್ತೇನೆ. ಕನ್ನಡ ಭಾಷೆ ಎಂದರೆ ಹಲವು ಭಾಷೆಗಳಿಂದ ವಿವೇಕವನ್ನು ಕಲಿತು ಈ ನೆಲದ ವಿವೇಕವಾಗಿ ರೂಪಿಸಿಕೊಂಡಿರುವ ಒಂದು ದೊಡ್ಡ ಸಂಚಯಿತ ಕುಶಲತೆ. ಅಂಥ ಕುಶಲತೆ ಹಾಗೂ ಗಟ್ಟಿತನಗಳೇ ನಮ್ಮನ್ನು ಪೊರೆಯುತ್ತಾ ಬಂದಿದೆ ಎಂದೂ ನಾನು ಭಾವಿಸುತ್ತೇನೆ.
ನನ್ನ ಸಮಕಾಲೀನ ಕಾಲದಲ್ಲಿ ಕನ್ನಡದ ಸಮಾಜವಾದೀ ಚಿಂತನೆಯು ರೂಪಿಸಿದ ಮುಖ್ಯ ಹೋರಾಟಗಳಾದ ರೈತ ಹಾಗೂ ದಲಿತ ಚಳುವಳಿಗಳು ಹೊಸ ಜನಾಂಗವು ಸಾಹಿತ್ಯವನ್ನು ನೋಡುವ ಕ್ರಮವೊಂದನ್ನು ರೂಪಿಸಲೆತ್ನಿಸಿದೆ. ಸಾಹಿತ್ಯವನ್ನಷ್ಟೇ ಅಲ್ಲದೆ ಅನ್ಯಕಲೆಗಳನ್ನೂ ಕೂಡ ಪ್ರಭಾವಿಸಿದೆ. ಈ ಚಳುವಳಿಗಳ ಮುಖ್ಯ ಭೂಮಿಕೆ ಗ್ರಾಮ ಅಥವಾ ಗ್ರಾಮಸಮಾಜ. ಅಲ್ಲಿನ ಆಥರ್ಿಕ, ಸಾಂಸ್ಕೃತಿಕ ಹಾಗೂ ರಾಜಕಾರಣದ ಆಯಾಮಗಳನ್ನು ಪರಿಶೀಲಿಸಿಕೊಳ್ಳುವುದು ಜಾಗತೀಕರಣದ ಸಂದರ್ಭದಲ್ಲಿ ತುಂಬಾ ಮುಖ್ಯವಾದುದು ಎಂದು ನಾನು ತಿಳಿದಿದ್ದೇನೆ.
ಇಲ್ಲಿಗೆ ನನ್ನ ಈ ಭಾಷಣವನ್ನು ಮುಗಿಸುತ್ತಿದ್ದೇನೆ. ಸರ್ಕಾರಕ್ಕಾಗಲೀ, ಸಮುದಾಯಕ್ಕಾಗಲೀ ಕರೆಕೊಡುವ ಯಾವ ಆಕರ್ಷಕ ಹೇಳಿಕೆಗಳಾಗಲೀ ಅಧಿಕಾರವಾಗಲೀ ಇರದ ನಾನು ಈ ಅಕ್ಷರ ಜಾತ್ರೆಯ ಉತ್ಸವ ಮೂರ್ತಿ ಮಾತ್ರ. ಮೂಲ ದೇವರು ಸಾಹಿತ್ಯ ಪರಿಷತ್ತೆಂಬ ಕನ್ನಡಿಗರ ಏಕೈಕ ಸಂಸ್ಥೆ. ಅರ್ಚನೆ, ಸಹಸ್ರನಾಮ, ಅವಧಾನಗಳೇನಿದ್ದರೂ ಸಲ್ಲಬೇಕಿರುವುದು ಮೂಲದೇವರಿಗೆ. ಮೆರವಣಿಗೆ, ಉತ್ಸವಕ್ಕಷ್ಟೇ ಉತ್ಸವಮೂರ್ತಿಯ ಅಗತ್ಯ. ಮಾರುಕಟ್ಟೆಯ ಜಾಹೀರಾತು ಹಾಗೂ ಟೆಲಿವಿಷನ್ ಮಾಧ್ಯಮ ಸ್ಟೋರಿಗಳಿಗೆ ಶೃತಿಗೊಂಡಿರುವ ನಮ್ಮ ಮಿದುಳನ್ನು ಸಾಹಿತ್ಯ ಮತ್ತು ಸಂಸ್ಕೃತಿಗಳ ಚಿಂತನೆಗೆ ಒಂದೇ ಒಂದು ಕ್ಷಣ ಒಮ್ಮೆ ಒಪ್ಪಿಸಿ ನೋಡಿ, ನಿಮ್ಮೊಳಗೇ ಎಂಥ ಮಾರ್ಪಾಡಾಗುವುದೆಂದು ಅನುಭವಿಸಿ ಎಂದಷ್ಟೇ ತಮ್ಮಲ್ಲಿ ನಮ್ರವಾಗಿ ವಿನಂತಿಸಿಕೊಳ್ಳುತ್ತೇನೆ.
ಮತ್ತೊಮ್ಮೆ ಎಲ್ಲರಿಗೂ ನಮಸ್ಕಾರ.
(ಚಿತ್ರ ಕೃಪೆ  ಅವಧಿ)

ಗುರುವಾರ, ನವೆಂಬರ್ 29, 2012

ಕನಸು ಕೂರಿಗೆಯ ಕಣ್ಣು

ಕೃತಿಯೆನ್ನುವುದು
ಕಲಾವಿದನ ಮನ-
ಸ್ಸಿನ ಕನ್ನಡಿ,
ಒಳಗೇ ಉಳಿದ ಉಮ್ಮಳಗಳಿಗೊಂದು ರೂಪ
ಕೊಡಲೆಂದೇ ಕವಿ ಬರೆದ ಕವಿತೆಯ ಸಾಲು,
ತನ್ನೊಳಗನ್ನೇ ತೆರೆತೆರೆದು ತೋರಿಸುವ ಗಾಯಕ.
ಶ್ರೋತೃವಿನ ಮನಸ್ಸಿನ ಆಳಕ್ಕೆ ಇಳಿದಂತೆ;
ನೂರೆಂಟು ಬಣ್ಣಗಳ ಲೋಕ ವ್ಯಾಪಾರದ ನಡುವೆ
ಚಿತ್ತಾಪಹಾರೀ ಕಾಣ್ಕೆಗೆ ತುಡಿಯುವುದು
ಇರುವುದು ಸತತ, ಕಂಗೆಟ್ಟ ಮನಸ್ಸು-
ಗಳ ಕಳವಳವಕ್ಕಷ್ಟು ಸಮಾಧಾನ, ಸೋತು
ಕೂತವರಿಗೆ ಕೊಂಚ ಸಾಂತ್ವನದ ಮಾತು.
ಲಲಿತ ಕಲೆಯೆಂದರೆ ಕ್ಷಣ ಭಂಗುರಕ್ಕೊಂದು ಅಲ್ಪ ವಿರಾಮ.
ಕಟ್ಟು ಹಾಕಿ ಬಂಧಿಸಿರುವ ಚಿತ್ರಗಳಲ್ಲಂತೂ
ನಿಷ್ಕರ್ಷಕ್ಕೆ ಸಿಲುಕುವ ಪಲುಕಗಳನ್ನಿತ್ತು
ಸೌಂದರ್ಯೋಪಾಸನೆಯ ಮಾತುಗಳನ್ನಾಡಬಹುದು
ಚಿತ್ತ ಭಿತ್ತಿಯ ಮೇಲೆ ಸಾಲು ಸಾಲು ಅಸ್ಪಷ್ಠ ಚಿತ್ರಗಳ-
ಮೆರವಣಿಗೆ, ಮಾಸಲು ಬಣ್ಣಗಳಭಿಷೇಕ
ಸ್ಪರ್ಶಕ್ಕಷ್ಟೇ ಸಿಲುಕುವ ಸೂಕ್ಷ್ಮಗಳನ್ನೇನು ಮಾಡಬೇಕು?
ಅನುಭೂತಿಯೆಂದರೆ ದೌರ್ಬಲ್ಯವೆನ್ನುವ ವಾದ-
ಕ್ಕೆ ಮನದ ಮೂಲೆ ಮೂಲೆಯ ಪರಿಮಳದ ಗಂಧ
ಮೂಗಿಗಡರುವುದಿಲ್ಲ, ಗಾಳಿತೊನೆದತ್ತಲೇ ಅದರ ನಿತ್ಯ ಪಯಣ.
ಧರೆಗಿಳಿಯುತ್ತಿದ್ದಭಿಸಾರಿಕೆಯ ಸಂಗಕ್ಕೆ ಮಧು-ಚಂದ್ರ
ದ ಬಣ್ಣವೇ ಬದಲಾಗಿರುವ ಸತ್ಯದ ಮುಂದೆ
ಆರು* ಕಟ್ಟುವ ಕನಸು ಮಣ್ಣು ಪಾಲು-
ಅಂತ ಗೊತ್ತಿದ್ದರೂ ಮತ್ತೆ ಮತ್ತೆ ತುಡಿಯುವಾತ್ಮಕ್ಕೆ
ಬಯಲ ಮೋಹವ ಬಿಡದ ಸುರತದಾಸೆ, ಶಾಶ್ವತ-
ದ ಸಾವಿರದ ಕನಸ ಕೂರಿಗೆ*ಯ ಸಣ್ಣ ಕಣ್ಣು!

ಆರು= ಭೂಮಿ ಹದ ಮಾಡುವ ಕ್ರಿಯೆ, ಅರಿಷಡ್ವರ್ಗ
ಕೂರಿಗೆ= ಬೀಜ ಬಿತ್ತುವ ಉಪಕರಣ
(ವಿಜಯ ಕರ್ನಾಟಕ ದೀಪಾವಳಿ ವಿಶೇಷಾಂಕ 2012 ರಲ್ಲಿ ಪ್ರಕಟಿತ ಕವಿತೆ)

ಭಾನುವಾರ, ಅಕ್ಟೋಬರ್ 21, 2012

“ಚಿಲ್ಲರೆ ಅಂಗಡಿಯ ಸಗಟು ಪುರಾಣ!”



ದೇಶೀಯ ಚಿಲ್ಲರೆ ವ್ಯಾಪಾರದಲ್ಲಿ ಹೊರ ದೇಶಗಳು ಬಂಡವಾಳ ಹೂಡುವ ಕುರಿತಂತೆ ಆರ್ಥಿಕ ವಲಯದಲ್ಲಿ ಎದ್ದಿರುವ ಅಲ್ಲೋಲ ಕಲ್ಲೋಲಗಳ ಸಮಗ್ರ ವಿವರ ನಿಮಗೆಲ್ಲರಿಗೂ ಗೊತ್ತಿರುವ ಜ್ವಲಂತ ವಿಷಯ. ಹೇಳೀ ಕೇಳೀ ಹೆಸರಲ್ಲೇ ‘ಚಿಲ್ಲರೆ’ ಇರುವ ವ್ಯಾಪಾರದಲ್ಲಿ ‘ಸಗಟು’ವ್ಯವಹಾರಸ್ಥರಾದ ವಿದೇಶೀ ಬಂಡವಾಳಿಗರಿಗೇನು ಲಾಭ ಇರುತ್ತೆ ಅನ್ನುವ ಉಡಾಫೆ ನನ್ನಲ್ಲಿತ್ತು. ಆದರೆ ಯಾವಾಗ ಮಹಾನಗರಗಳ ದೊಡ್ಡ ದೊಡ್ಡ ಶಾಪಿಂಗ್ ಮಾಲುಗಳನ್ನೂ, ಬಿಗ್ ಬಜಾರುಗಳನ್ನೂ ಗಮನಿಸಿದೆನೋ ಆಗ ಯಾಕೆ ಅವರೆಲ್ಲ ಚಿಲ್ಲರೆ ವ್ಯಾಪಾರದಲ್ಲಿ ಬಂಡವಾಳ ಹಾಕಲು ಸಿದ್ಧರಿದ್ದಾರೆಂದು ತಿಳಿಯಿತು. ನನಗೂ ನಿಮಗೂ ಇದು ಹೊಳೆಯುವುದಕ್ಕೂ ಮೊದಲೇ ಅಮೆರಿಕದವರಿಗೆ, ಮತ್ತು ಆ ದೇಶದ ವಾಲ್ ಮಾರ್ಟ್ ಅನ್ನೋ ಕಂಪನಿಗೆ ಈ ಚಿಲ್ಲರೆ ವ್ಯಾಪಾರದ ಮೂಲಕವೇ ನಮ್ಮ ವ್ಯವಹಾರ ವಹಿವಾಟನೆಲ್ಲ ನಿಯಂತ್ರಿಸಬಹುದೆನ್ನುವ ಸತ್ಯ ಗೊತ್ತಿರುವುದರಿಂದಲೇ ಈ ಸಿಂಗ್,ಚಿದು,ಮುಖರ್ಜಿಗಳನ್ನೆಲ್ಲ ಸರಿಮಾಡಿಕೊಂಡು ಇಲ್ಲಿ ಚಿಲ್ಲರೆ ವ್ಯಾಪಾರ ಶುರು ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ.

ಹೆಚ್ಚು ಕಡಿಮೆ ಒಂದು ಕೋಟಿ ಸಂಖ್ಯೆಯಲ್ಲಿ ನಮ್ಮ ದೇಶದುದ್ದಗಲಕ್ಕೆ ಈ ಚಿಲ್ಲರೆ ಅಂಗಡಿಗಳಿವೆ ಅಂತ ಒಂದು ವರದಿ ಇದೆ. ಅನುಮಾನ ಬಂದರೆ ನಿಮ್ಮ ಮನೆ ಸುತ್ತಮುತ್ತ ಇರೋ ಚಿಲ್ಲರೆ ಅಂಗಡಿಗಳನ್ನು ಮನಸ್ಸಲ್ಲೇ ಲೆಕ್ಕ ಹಾಕಿ. ತರಕಾರಿ ಮಾರೋ ಅಂಗಡಿ, ಅದರ ಪಕ್ಕದಲ್ಲೇ ದಿನಸಿ ಅಂಗಡಿ, ಅದರಾಚೆ ಬಿಸ್ಕತ್ತು, ಚಾಕಲೇಟು, ಸಿಗರೇಟು, ಬೀಡಿ ಮಾರುವ ಅರ್ಥಾತ್ ಪೆಟ್ಟಿ ಅಂಗಡಿ, ಅದರ ಪಕ್ಕಕ್ಕೇ ಬೇಕರಿ, ಅದರಾಚೆ ಪಾನ್ ಶಾಪ್, ಬಸ್ ಸ್ಟಾಂಡ್‌ಸಂಕೀರ್ಣದಲ್ಲಿರುವ ದೊಡ್ಡ ದಿನಸಿ ಅಂಗಡಿ. ಒಂದೇ, ಎರಡೇ ಲೆಕ್ಕಕ್ಕೇ ಸಿಕ್ಕದೇ ಕೋಟಿ ಕೋಟಿ ವ್ಯವಹಾರ ನಡೆಸುವ ಉದ್ದಿಮೆ ಈ ಚಿಕ್ಕ ಪುಟ್ಟ ಅಂಗಡಿಗಳದ್ದು. ಅಂದರೆ ಒಟ್ಟೂ ಅಂಗಡಿಗಳ ಸಂಖ್ಯೆ ಕೋಟಿಯಲ್ಲ ಅದರಾಚೆಯೂ ದಾಟಬಹುದು. ಇದನ್ನೆಲ್ಲ ಕೂತಲ್ಲೇ ಲೆಕ್ಕ ಹಾಕಿದ ವಾಲ್ ಮಾರ್ಟ್ ಒಂದರ್ಥದಲ್ಲಿ ಈ ದೇಶದ ಬೆನ್ನೆಲುಬಾಗಿ  ಆರ್ಥಿಕ ವ್ಯವಹಾರ ನಡೆಸುತ್ತಿರುವ ಚಿಲ್ಲರೆ ವ್ಯಾಪಾರಕ್ಕೇ ಕೊಡಲಿ ಪೆಟ್ಟು ನೀಡಲು ಸಜ್ಜಾಗಿ ನಿಂತಿದ್ದರೆ, ನಮ್ಮ ಹಿತ ಕಾಪಾಡಬೇಕಿದ್ದ ಸರ್ಕಾರವೇ ಅಮೆರಿಕದವರ ಕೊಡಲಿಗೆ ಸಾಣೆ ಹಿಡಿಸಿ ಕೊಡುತ್ತಿದೆ.

ಬೆಂಗಳೂರಿನಂಥ ಪಟ್ಟಣದಲ್ಲಿ ಆರ್ಥಿಕವಾಗಿ ಸಧೃಢವಾಗಿರುವವರಿಗೆ ಈ ಶಾಪಿಂಗ್ ಮಾಲುಗಳೂ, ಅವರ ವಿಶಿಷ್ಠತೆಗಳೂ, ಅವರು ಕೊಡ ಮಾಡುವ ಡಿಸ್ಕೌಂಟ್ ಇತ್ಯಾದಿಗಳೆಲ್ಲ ಆಕರ್ಷಿಸಬಹುದು. ಆದರೆ ನಾವು ಹೇಳಿದ ಸಾಮಾನನ್ನೆಲ್ಲ ಜತನವಾಗಿ ಪ್ಯಾಕ್ ಮಾಡಿ ಪಟ್ಟಿ ಬರೆದು ಲೆಕ್ಕದ ಪುಸ್ತಕದಲ್ಲಿ ಗುರುತು ಹಾಕಿ ತಿಂಗಳಿಗೊಮ್ಮೆ ನಾವು ಕೊಟ್ಟಷ್ಟನ್ನು ಜಮಾ ತೆಗೆದುಕೊಳ್ಳುವ ನಮ್ಮೂರಿನ ಶೆಟ್ಟರ ಅಂಗಡಿಗೆ ಯಾವ ಮಾಲ್ ಅಥವ ಸೂಪರ್ ಸ್ಟೋರ್ಸ್ ಸಮನಾಗಲು ಸಾಧ್ಯವೇ ಇಲ್ಲ. ನಮ್ಮ ಮನೆಯ ಸುಖ ದುಃಖಗಳು, ಸಾವು ನೋವುಗಳು, ಸಂಬಂಧ ಆಚರಣೆಗಳು ನಮ್ಮೂರಿನ ಚಿಲ್ಲರೆ ಅಂಗಡಿಯ ಶೆಟ್ಟರಿಗೆ ಗೊತ್ತಿರುತ್ತಿದ್ದರಿಂದ ಅವರೆಂದೂ ವ್ಯಾಪಾರವನ್ನು ವ್ಯವಹಾರವನ್ನಾಗಿ ಪರಿಗಣಿಸಲೇ ಇಲ್ಲ.  ನೀವು ಆಫೀಸಿಗೆ ಹೋಗುವ ಹಾಗೆ ನಾನು ಅಂಗಡಿಯಲ್ಲಿ ಕೂರುತ್ತೇನೆ ಅನ್ನುವ ತರ್ಕ ಅವರದ್ದಾಗಿತ್ತು. ಅಕ್ಕಿಯಲ್ಲಿ ಹುಳು ಬಂದಿದ್ದರೆ, ಕಡಲೆ ಹಿಟ್ಟು ಕಹಿಯಾಗಿದ್ದರೆ, ದುಸರಾ ಮಾತಿಲ್ಲದೆ ಬೇರೆ ಪದಾರ್ಥ ಕೊಟ್ಟೋ ಅಥವ ವಾಪಾಸು ಪಡೆದುಕೊಂಡೋ ಸಂಬಂಧ ಕಾಪಾಡಿಕೊಳ್ಳುತ್ತಿದ್ದರು. ಈ ಸೂಪರ್ ಮಾರ್ಕೆಟ್ಟಿನವರು ಕೊಟ್ಟ ಸಾಮಾನು ಬದಲಿಸಲೋ ವಾಪಾಸು ಮಾಡಲೋ ಪ್ರಯತ್ನಿಸಿ ನೋಡಿ, ಆಗಷ್ಟೇ ನಿಮಗೆ ನಿಮ್ಮೂರಿನ ಚಿಲ್ಲರೆ ಅಂಗಡಿಯ ಮಹತ್ವ ಗೊತ್ತಾಗುತ್ತದೆ.

ಹಾಗೆ ನೋಡಿದರೆ ಸಣ್ಣಪುಟ್ಟ ಊರುಗಳ ಆರ್ಥಿಕ ಸಮೀಕ್ಷೆ ನಡೆಸಬೇಕಿದ್ದರೆ ಆಯಾ ಊರಿನ ಚಿಲ್ಲರೆ ಅಂಗಡಿಗಳ ವ್ಯಾಪಾರ ಸಾಮರ್ಥ್ಯ ಅಳೆದರೆ ಸಾಕು, ಆರ್ಥಿಕ ಸಮೀಕ್ಷೆಯನ್ನು ಸಲೀಸಾಗಿ ಮುಗಿಸಿಬಿಡಬಹುದು. ಜೊತೆಗೆ ಬೇಕಿರುವುದಕ್ಕಿಂತ ಬೇಡದ ಸಾಮಾನನ್ನೇ ಸ್ಕೀಂ ಹೆಸರಲ್ಲಿ ಮಾರುವ ಸೂಪರ್ ಸ್ಟೋರ್ಸ್‌ಗಳಿಗಿಂತಲೂ ಇವು ಭಿನ್ನ. ಆಯಾ ಊರಿನ ಅಗತ್ಯಕ್ಕನುಗುಣವಾಗಿ, ಆಯಾ ಪ್ರಾದೇಶಿಕ ಸಂಸ್ಕೃತಿಗೆ ಅನುಗುಣವಾಗಿ ಚಿಲ್ಲರೆ ಅಂಗಡಿಗಳ ಮೆನು ಇರುತ್ತದೆ. ದಿನಸಿ ಪದಾರ್ಥಗಳ ಜೊತೆ ಜೊತೆಗೇ ತಲೆನೋವಿನ ಮಾತ್ರೆ, ನಿಂಬೆಹಣ್ಣು, ನಿಂಬುಪ್ಪು, ಚಳ್ಳೆಹುರಿ, ಲಾಟೀನು ಬತ್ತಿ, ಶೇವಿಂಗ್ ಸೋಪು, ಬ್ಲೇಡು ಇತ್ಯಾದಿ ವಸ್ತುಗಳನ್ನೆಲ್ಲ ಈ ಅಂಗಡಿಗಳು ಬೇಕಾದ ಕೂಡಲೇ ಅಗತ್ಯವಿದ್ದವರಿಗೆ ಪೂರೈಸುತ್ತವೆ. ನಗದಿಗಿಂತಲೂ ಉದ್ದರಿಯ ವ್ಯಾಪಾರವೇ ಬಹುತೇಕ ಜಾಸ್ತಿ. ಕೊಬ್ಬರಿ ಸುಲಿಸಿದಾಗ, ಮಗ ಮನಿಯಾರ್ಡರು ಕಳಿಸಿದಾಗ, ವರ್ಷದ ಬೆಳೆ ಬಂದಾಗಷ್ಟೇ ಹಳೆ ಸಾಲ ಚುಕ್ತಾ. ಮತ್ತೆ ಹೊಸ ಸಾಲ. ಒಂದರ್ಥದಲ್ಲಿ ಓವರ್ ಡ್ರಾಫ್ಟ್.

ಈ ಎಲ್ಲ ವಿವರ ಅಂದರೆ ಪುಟ್ಟ ಪೆಟ್ಟಿಗೆ ಅಂಗಡಿಯಲ್ಲಿ ಚಿಲ್ಲರೆಯಾಗಿ ವ್ಯಾಪಾರವಾಗುವ ಒಟ್ಟೂ ವ್ಯವಹಾರದ ಅಂದಾಜು ಅಮೆರಿಕದವರು ಲೆಕ್ಕ ಹಾಕಿ, ಈ ಕ್ಷೇತ್ರವನ್ನೇ ವಶಪಡಿಸಿಕೊಳ್ಳಲು ಹೊರಟಿರುವುದು. ಹಾಗಾದಾಗ ಏನಾಗಬಹುದೆಂದು ಊಹಿಸಿದರೆ ಭಯವಾಗುತ್ತದೆ. ಏಕೆಂದರೆ ಕಷ್ಟ ಕಾರ್ಪಣ್ಯಗಳ ಸಂದರ್ಭಗಳಲ್ಲಿ ದಿನಸಿಯ ಜೊತೆ ನಗದನ್ನೂ ಸಾಲವಾಗಿ ಕೊಡುವ ನಮ್ಮ ಪೆಟ್ಟಿಗೆ ಅಂಗಡಿಗಳವರ ಉದಾರತೆ ಈ ಅಮೆರಿಕದ ವಾಲ್ ಮಾರ್ಟಿಗೆಲ್ಲಿಂದ ಬರಬೇಕು? ಅಲ್ಲದೇ ನಮ್ಮ ಹಬ್ಬ ಹರಿದಿನಕ್ಕೆ, ತಿಥಿ, ವಾರ ನಕ್ಷತ್ರಗಳ ವಿಶೇಷತೆಯ ಆಚರಣೆಗೆ ಬೇಕಾದ ಸಾಮಾನು- ಸರಂಜಾಮುಗಳ ವಿವರ ಅದಕ್ಕೆಲ್ಲಿ ದಕ್ಕಬೇಕು? ಒಂದು ವೇಳೆ ದೇಶೀ ಅಗತ್ಯಗಳನ್ನು ಅರ್ಥಮಾಡಿಕೊಂಡು ಆ ಸೌಲಭ್ಯಗಳನ್ನೆಲ್ಲ ಒದಗಿಸಿದರೂ, ಮೂಲತಃ ಲಾಭದ ಉದ್ದೇಶವನ್ನೇ ಇಟ್ಟುಕೊಂಡಿರುವ ಅಂಥ ಕಂಪನಿಗಳು ವರ್ಷದುದ್ದಕ್ಕೂ ಅವನ್ನೆಲ್ಲ ಮಾರುತ್ತ ಕೂತರೆ, ಅಂಥ ವಿಶಿಷ್ಠ ಆಚರಣೆಗಳ ಅರ್ಥವಾದರೂ ಹ್ಯಾಗೆ ಉಳಿಯಕ್ಕೆ ಸಾಧ್ಯ? ಅದೆಲ್ಲ ಇರಲಿ, ಓದು ತಲೆಗೆ ಹತ್ತದೆ, ಸೊಂಟ ಬಗ್ಗಿಸಿ ಹೊಲ ಗದ್ದೆಗಳಲ್ಲಿ ಗೇಯದ ಶೋಕೀಲಾಲರಿಗೆಲ್ಲ ಸಂತ್ರಸ್ತ ಸಲಹಾ ಕೇಂದ್ರಗಳಾಗಿದ್ದ ಈ ಚಿಲ್ಲರೆ ಅಂಗಡಿಗಳ ವ್ಯವಹಾರ ವಿದೇಶಿಯರ ಪಾಲಾದರೆ ನಮ್ಮ ಹುಡುಗರ ಪಾಡೇನು?

ನಮ್ಮೂರಿನ ಹೈಕಳಿಗೆ ಸರ್ಕಾರೀ ಕಛೇರಿಗಳ ಗುಮಾಸ್ತಿಕೆ, ಬೇಸಾಯ, ಕೂಲಿ, ಚಿಕ್ಕಪುಟ್ಟ ಕಂಟ್ರಾಕ್ಟು ಬಿಟ್ಟರೆ ಉಳಿದಂತೆ ಕೈ ಹಿಡಿಯುತ್ತಿದ್ದ ಉದ್ಯೋಗವೆಂದರೆ ಚಿಲ್ಲರೆ ಅಂಗಡಿ ನಡೆಸುವುದು. ಓದು ತಲೆಗೆ ಹತ್ತದೇ ಅಥವ ವ್ಯವಹಾರವೇ ಸಲೀಸು ಅಂದುಕೊಂಡು ಬಡ್ಡಿಗೆ ದುಡ್ಡು ಕೊಡುವವರಿಗೆ ಕೂತುಕೊಳ್ಳಲೊಂದು ಜಾಗ ಮತ್ತು ಮಾಡಲೊಂದು ಉದ್ಯೋಗವೆಂಬಂತೆ ಈ ಚಿಲ್ಲರೆ ಅಂಗಡಿಗಳು. ಮತ್ತೂ ಕೆಲವೊಮ್ಮೆ ಪಿಯುಸಿಯಲ್ಲೇ ಪ್ರೇಮ ಪ್ರಕರಣ ನಡೆಸಿ, ಮದುವೆಯೂ ಆದ ಸಾಹಸಿಗಳಿಗೆ ಕೈ ಹಿಡಿದು ಬದುಕು ರೂಪಿಸುತ್ತಿದ್ದವು ಈ ಚಿಲ್ಲರೆ ಅಂಗಡಿಗಳೇ! ಹೆಚ್ಚು ಬಂಡವಾಳ ಬೇಡದ ಆದರೆ ಜನರೊಂದಿಗಿನ ಒಡನಾಟವೇ ಮುಖ್ಯವಾದ ಈ ಉದ್ಯೋಗ ಎಲ್ಲರಿಗೆ ಒಲಿಯುವುದೂ ಕಡಿಮೆ. ಇವತ್ತಿದ್ದ ಅಂಗಡಿ ನಾಳೆ ಮಾಯವಾಗುವುದೂ ಈ ಕಾರಣಕ್ಕೇ. ದೊಡ್ಡ ದೊಡ್ಡ ಮಂಡಿ ವರ್ತಕರಿಂದ ಸಾಮಾನು ಸರಂಜಾಮುಗಳನ್ನು ವಾರದ ಲೆಕ್ಕದಲ್ಲಿ ಸಾಲವಾಗಿ ಪಡೆದು ಸ್ಥಾಪಿತವಾಗುವ ಪೆಟ್ಟಿಗೆ ಅಂಗಡಿಗಳು ಮುದೊಂದು ದಿನ ಧೀರುಭಾಯಿ ಅಂಬಾನಿಯಂಥವರ ಇತಿಹಾಸ ಬರೆದಿರುವುದೂ ಸುಳ್ಳಲ್ಲ.

ಚಿಲ್ಲರೆ ದಿನಸಿ ಅಂಗಡಿ ಪ್ರಾರಂಭಿಸುವುದು ಅಂದರೆ ಮಳಿಗೆಯೊಂದನ್ನು ಬಾಡಿಗೆ ಪಡೆಯುವುದು, ಅದಕ್ಕೆ ಶೆಲ್ಪುಗಳನ್ನು ಮಾಡಿಸುವುದು, ಸಕ್ಕರೆ, ಅಕ್ಕಿ, ಗೋಧಿಹಿಟ್ಟಿನಿಂದ ಹಿಡಿದು, ಶ್ಯಾಂಪು, ಸೋಪು, ಪೇಶ್ಟು, ಗುಟ್ಕಾ, ನವರತ್ನ ಎಣ್ಣೆಯವರೆಗೆ ಎಲ್ಲ ಪ್ಲಾಸ್ಟಿಕ್ ಸರಗಳನ್ನೂ ಬಂದವರ ಕಣ್ಣಿಗೆ ಕಾಣುವಂತೆ ನೇತು ಹಾಕುವುದು, ಕ್ಯಾಷ್ ಟೇಬಲ್ಲಿನ ಮೇಲೆ ಮನೆದೇವರ ಫೋಟೋ ಹಾಕಿಸಿ, ಆ ಟೇಬಲ್ಲಿಗೊಂದು ಗಟ್ಟಿ ಬೀಗ ಹಾಕುವುದು ಇತ್ಯಾದಿ ಇತ್ಯಾದಿ ಸೇರಿವೆ. ಆದರೆ ಪೆಟ್ಟಿಗೆ ಅಂಗಡಿ ತೆರೆಯುವುದು ದಿನಸಿ ಅಂಗಡಿ ತೆರೆದಷ್ಟು ಸುಲಭದ ಕೆಲಸವಲ್ಲ. ಏಕೆಂದರೆ ದಿನಸಿ ಅಂಗಡಿ ನಡೆಸುವುದು ಮಳಿಗೆಯಲ್ಲಾದ್ದರಿಂದ ಮಳಿಗೆಯ ಮಾಲಿಕರಿಗೆ ಮುಂಗಡ ಕೊಟ್ಟು, ಕರಾರು ಮಾಡಿಕೊಂಡರೆ ಉಳಿದದ್ದು ಸುಲಭ. ಆದರೆ ಪುಟ್ಟ ಪೆಟ್ಟಿಗೆ ಅಂಗಡಿ ತೆರೆಯುವುದು ಬಲು ಕಷ್ಟದ ಕೆಲಸ. ಪೆಟ್ಟಿಗೆ ತಯಾರಿಸುವ ಬಡಗಿಗಳೂ ದುರ್ಲಭದ ಈ ಕಾಲದಲ್ಲಿ ಪೆಟ್ಟಿಗೆಗೆ ಬೇಕಾದ ಮರಮುಟ್ಟು ಹೊಂದಿಸುವುದೂ ಹಾಗೆ ಜೋಡಿಸಿದ ಪೆಟ್ಟಿಗೆಗೊಂದು ಅನುಕೂಲಕರ ಜಾಗ ಮಾಡಿಕೊಂಡು ಅದನ್ನು ಸ್ಥಾಪಿಸುವುದೂ ಕಷ್ಟ, ಕಷ್ಟ. ಮಳಿಗೆಯಂತೆ ಖಾಸಗಿಯವರ  ಸ್ವತ್ತಿನಲ್ಲಿಲ್ಲದ ಜಾಗದಲ್ಲಿ ಆದರೆ ಸಾರ್ವಜನಿಕರು ಸುಳಿದಾಡುವ ಸ್ಥಳದಲ್ಲಿ ಪೆಟ್ಟಿಗೆ ಅಂಗಡಿಗೆ ಜಾಗ ಹುಡುಕುವುದೇ ಮೊದಲ ಸi ಸ್ಯೆ. ಬಸ್ ಸ್ಟಾಂಡ್, ದೇವಸ್ಥಾನ, ಆಸ್ಪತ್ರೆ, ಶಾಲೆ ಇವು ಪೆಟ್ಟಿಗೆ ಅಂಗಡಿ ಇಡಲು ಸೂಕ್ತ ಸ್ಥಳಗಳು. ಆದರೆ ಈಗಾಗಲೇ ಅಲ್ಲಿ ಅನುಸ್ಥಾಪಿತಗೊಂಡಿರುವ  ಹಳೆಯ ಅಂಗಡಿಗಳವರು ತಮ್ಮ ವ್ಯಾಪಾರ ಕುಸಿಯಬಹುದೆನ್ನುವ ಕಾರಣದಿಂದ ಹೊಸ ಅಂಗಡಿಯವರಿಗೆ ಜಾಗ ಹೊಂದಿಸಿಕೊಡಲು ತಕರಾರು ಎತ್ತಬಹುದು. ಗ್ರಾಮ ಪಂಚಾಯತು, ಪಟ್ಟಣ ಪಂಚಾಯತಿನವರು ಲೈಸೆನ್ಸ್ ಇಲ್ಲ ಅಂತ ಮುಚ್ಚಿಸಬಹುದು. ಅಂಗಡಿಯಾತನ ಅದೃಷ್ಟವೇ ಕೈ ಕೊಟ್ಟು ವ್ಯಾಪಾರ ಸಾಗದೇ ಅಂಗಡಿ ಮುಚ್ಚಬೇಕಾಗಿ ಬರಬಹುದು. ಹಾಗಾಗಿ ಹೊಸ ಪೆಟ್ಟಿಗೆಗಿಂತ ಸಿಕ್ಕಬಹುದಾದ ಹಳೆಯ ಪೆಟ್ಟಿಗೆಗಳ ಕಡೆಯೇ ಗಮನ ಕೊಡಬೇಕಾಗಿ ಬರುತ್ತದೆ. ಆದರೆ ಹಳೆಯ ಪೆಟ್ಟಿಗೆಯನ್ನು ಹೊಸ ರೀತಿಗೆ ಮಾರ್ಪಡಿಸುವುದೂ ಬಡಗಿಯ ಕುಶಲತೆಯ ಮೇಲೆ ನಿಂತಿರುತ್ತದೆ. ಆರಾಮಾಗಿ ಹೊತ್ತು ಸಾಗಿಸಬಹುದಾದ ಪೆಟ್ಟಿಗೆ ಅಂಗಡಿಯಲ್ಲಿ ಇಡಬಹುದಾದ ವಸ್ತುಗಳ ಪಟ್ಟಿಯೇನೂ ಪುಟ್ಟದ್ದಲ್ಲ. ಬರಿ ಬೀಡಿ ಸಿಗರೇಟುಗಳ ವ್ಯಾಪಾರ ಅಷ್ಟೇನೂ ಸುಖಕರವಾದದ್ದೂ ಅಲ್ಲ. ಬೀಡಿ ಸಿಗರೇಟಿನ ಜೊತೆಗೆ ಕಾಫಿ, ಟೀಗಳನ್ನು ಮಾಡಿ ಮಾರಬಹುದು. ಫ್ಲಾಸ್ಕಿನಲ್ಲಿಟ್ಟುಕೊಂಡ ಕಾಫಿ, ಟೀಗಳನ್ನು ಬೀದಿ ಬೀದಿ ಸುತ್ತಿ ಮಾರಿಯೇ ಜೀವನ ನಡೆಸುತ್ತಿರುವವರಿಲ್ಲವೇನು?

ಆದರೆ ಬರೀ ಸಿಗರೇಟು, ಬೀಡಿ, ಟೀ, ಕಾಫಿಗಳನ್ನು ಮಾರುವ ಅಂಗಡಿಯೆಂದರೆ ಯಾಕೋ ಸಮಾಧಾನವಾಗದ ವಿಷಯ. ಧೂಮಪಾನಿಗಳ ಹೊಗೆಯ ಕಾರಣದಿಂದಾಗಿ ಇತರರು ಅತ್ತ ಸುಳಿಯದೇ ಇರಬಹುದು. ಹಾಗಾದಾಗ ಅಂಗಡಿ ಇರುವ ಪ್ರದೇಶಕ್ಕೆ ಅನುಗುಣವಾಗಿ ಅಲ್ಲಿನ ಜನಗಳ ಅಭೀಪ್ಸೆಯಂತೆ ಅಂಗಡಿಯ ಸಾಮಾನಿನ ಪಟ್ಟಿ ಇರಬೇಕಾಗುತ್ತದೆ. ದೇವಸ್ಥಾನದ ಹತ್ತಿರದ ಅಂಗಡಿಯಲ್ಲಿ ಪೂಜೆಗೆ ಬೇಕಾದ ಹಣ್ಣು, ಕಾಯಿ, ಕರ್ಪೂರ, ಊದುಬತ್ತಿಗಳ ಜೊತೆಗೆ ಮಕ್ಕಳು ಇಷ್ಟಪಡುವ ಬಲೂನು, ಪೆಪ್ಪರಮೆಂಟು, ಚಾಕಲೇಟುಗಳು ಅದರ ಜೊತೆಗೇ ವಿಳ್ಳೇದೆಲೆ, ಅಡಕೆ , ಸುಣ್ಣಗಳನ್ನೂ ಇಡಬೇಕಾಗುತ್ತದೆ. ಆಸ್ಪತ್ರೆ ಹತ್ತಿರ ತೆರೆಯುವ ಪೆಟ್ಟಿಗೆ ಅಂಗಡಿಯಲ್ಲಿ ಬ್ರೆಡ್ಡು, ಬಾಳೆಹಣ್ಣು, ಎಳನೀರು ಮುಖ್ಯವಾಗಿ ಇರಲೇಬೇಕು. ಇನ್ನು ಶಾಲೆಯ ಹತ್ತಿರದ ಪೆಟ್ಟಿಗೆ ಅಂಗಡಿಯಲ್ಲಿ ಚುರಮುರಿ, ಖಾರಾಸೇವೆ, ಬಬಲ್ ಗಮ್ಮು, ಸಕ್ಕರೆ ಮಿಠಾಯಿ, ಬಾಲ್ ಪೆನ್ನಿನ ರಿಫಿಲ್, ಬಿಳಿಹಾಳೆ, ಎಕ್ಸರ್‌ಸೈಜ್ ಪುಸ್ತಕ, ಸ್ಕೇಲು, ಖಾಯಂ ಆಗಿ ಇರಲೇಬೇಕಾದ ವಸ್ತುಗಳು. ನಮ್ಮ ಕಾಲದಲ್ಲಿ ಸ್ಲೇಟು ಬಳಪಗಳಿಲ್ಲದಿದ್ದ ಶಾಲೆಯ ಹತ್ತಿರದ ಅಂಗಡಿಗಳು ಯಾವ ಲೆಕ್ಕಕ್ಕೂ ಇರುತ್ತಿರಲಿಲ್ಲ. ಇನ್ನು ಬಸ್ ಸ್ಟಾಂಡ್ ಹತ್ತಿರದ ಅಂಗಡಿಗಳಲ್ಲಿ ಬಾಳೆಹಣ್ಣು, ಎಲೆಯಡಿಕೆ, ತಟ್ಟೆ ಇಡ್ಳಿ, ಬೀಡಿ, ಸಿಗರೇಟು, ನಶ್ಯಾ ಪುಡಿ, ಮಾಮೂಲು ಮೆನು. ಸಂಜೆಯಾದರೆ ಭರ್ರೋ ಎನ್ನುವ ಪಂಪ್ ಸ್ಟೌವಿನಲ್ಲಿ ಬಿಸಿ ಬಿಸಿ ಮೆಣಸಿನ ಕಾಯಿ ಬೋಂಡ ಕರಿಯುವುದಾದರೆ ಇನ್ನೂ ಒಳ್ಳೆಯದು. ಜೊತೆಗೆ ಬಸ್ ಸ್ಟಾಂಡಿನ ಪೆಟ್ಟಿಗೆ ಅಂಗಡಿಗಳವರಿಗೆ ಉಳಿದ ಅಂಗಡಿಯವರಿಗಿಂತ ತಾಳ್ಮೆ ಮತ್ತು ಸಹನೆ ಇರಲೇಬೇಕು. ಏಕೆಂದರೆ ಬಸ್ಸಿಗೆ ಕಾಯುತ್ತ ನಿಂತವರ ತಲಾತಟ್ಟೆ ಮಾತುಗಳು, ಬಂದ ಬಾರದ ಬಸ್ಸುಗಳ ಬಗ್ಗೆ ಎನ್‌ಕ್ವಯರಿಗಳೂ ಸರ್ವೇ ಸಾಮಾನ್ಯ ಸಂಗತಿಗಳು. ಜೊತೆಗೆ ಬಸ್ಸಿಳಿದ ಕೂಡಲೇ ಅಂಗಡಿಯ ಪೆಟ್ಟಿಗೆಯ ಹಿಂದೋಡಿ ಮೂತ್ರ ಮಡುವವರನ್ನೂ ಗದರಿಸಿ ಓಡಿಸಬೇಕಾದ ಗತ್ತು, ಘನಸ್ತಿಕೆಯೂ ಇರಬೇಕಾಗುತ್ತದೆ. ಬಂದು ಹೋಗುವ ಬಸ್ಸುಗಳ ಜೊತೆಗೇ ಯಾವ ಯಾವ ಊರಿಗೆ  ಎಷ್ಟು ದೂರ, ಅಲ್ಲಿಂದ ಮತ್ತೆ ವಾಪಾಸು ಎಷ್ಟು ಹೊತ್ತಿಗೆ ಈ ಕಡೆಗೆ ಬಸ್ಸು ಇದೆ ಇತ್ಯಾದಿ ಲೋಕ ಜ್ಞಾನದ  ವಿಚಾರಗಳು ಇವರಿಗೆ ಗೊತ್ತಿರಲೇಬೇಕು. ಇಲ್ಲವಾದಲ್ಲಿ ಯಾರೂ ಆ ಅಂಗಡಿಯತ್ತ ಹೆಜ್ಜೆ ಹಾಕುವುದೇ ಅನುಮಾನ!

ಈಗ ನೆನಪಿಸಿಕೊಂಡು ಸರಿಯಾಗಿ ಹೇಳಿ, ನಿಮಗೆ ಬೇಕಾದ ಸಾಮಾನನ್ನೆಲ್ಲ ನೀವೇ ತಳ್ಳುಗಾಡಿಗೆ ಹಾಕಿಕೊಂಡು, ಉದ್ದೋಉದ್ದದ ಕ್ಯಾಷ್ ಕೌಂಟರಿನ ಮುಂದೆ ನಿಂತು ಕಾರ‍್ಡ್ ಸ್ವೈಪ್ ಮಾಡಿ ಪ್ಯಾಕ್ ಆದ ಪ್ಲಾಸ್ಟಿಕ್ ಚೀಲಕ್ಕೂ ಎಕ್ಟ್ರಾ ದುಡ್ಡು ಕಕ್ಕಿ ವ್ಯಾಪಾರ  ನಡೆಸುವ ಸೂಪರ್ ಮಾರ್ಕೆಟ್ಟಿನ ಮಾಲೀಕನ ಮುಸುಡಿಯನ್ನಾದರೂ ನೀವು ಯಾವತ್ತಾದರೂ ನೋಡಿದ್ದೀರ? ಇವತ್ತು ಕ್ಯಾಷಿನಲ್ಲಿ ಕೂತವರು ನಾಳೆ ಬಂದಾಗ ಕಾಣುವುದೇ ದುಸ್ತರವಾಗಿರುವ ಈ ವಾಣಿಜ್ಯ ಸಂಕೀರ್ಣಗಳಲ್ಲಿ ವ್ಯಾಪಾರದ ತಹತಹಿಕೆ ಕಾಣುವುದೇ ವಿನಾ ಮನುಷ್ಯ ಸಹಜ ಸಂಬಂಧಗಳೆಂದೂ ಚಿಗುರಿರುವ ಉದಾಹರಣೆಗಳಿಲ್ಲವೇ ಇಲ್ಲ. ಆದರೂ ದೊಡ್ದ ದೊಡ್ಡ ಮಾಲುಗಳ ಜನದಟ್ಟಣೆಯ ನಡುವೆಯೂ ಯುವ ಪ್ರೇಮಿಗಳ ಓಡಾಟ ಮಾತ್ರ ನಿಜಕ್ಕೂ ಚೇತೋಹಾರಿ. ಪೋಲೀಸರ ಕಾಟವಿಲ್ಲದೆ, ಪೋಲಿಗಳ ಕಿಚಾಯಿಸುವಿಕೆಯಿಲ್ಲದೇ ಮಾಲುಗಳ ವೈಭವೋಪೇತ ಹೋಟೆಲ್ಲುಗಳಲ್ಲಿ ಗಂಟೆಗಟ್ಟಲೇ ಕೂತು ಅರ್ಧರ್ಧ ಕಾಫಿ ಕುಡಿಯುವ ಪ್ರೇಮಿಗಳ ಹುಚ್ಚು ಧೈರ್ಯವನ್ನೂ ಪ್ರಶಂಸಿಸಲೇ ಬೇಕು. ಈ ಪ್ರೇಮಿಗಳು ಹೀಗೆ ಬರಿದೇ ಓಡಾಡುವುದನ್ನು ತಪ್ಪಿಸಲು ಸಿಸಿ ಟಿವಿಗಳನ್ನಿಟ್ಟು ಅವರ ಹಿಂದೆ ಖಾಸಗೀ ಸೆಕ್ಯೂರಿಟಿಯೆಂಬ ಹುಂಬ ದಾಂಡಿಗರನ್ನು ಬಿಟ್ಟು ಗದರಿಸುವ ಮಾಲುಗಳೂ ಇವೆಯೆಂದು ಕೇಳಿಬಲ್ಲೆ! ವ್ಯಾಪಾರ ಮಾಡದೇ ಅಲ್ಲಿನ ಹವಾನಿಯಂತ್ರಕಗಳ ತಂಪೆ ರಿಗೆ ಮನಸೋತ ಮನುಷ್ಯ ಸಹಜ ದೌರ್ಬಲ್ಯಗಳು ನನ್ನಂಥ ಮಧ್ಯಮವರ್ಗದವರಲ್ಲಿ ತೀರ ಸಾಮಾನ್ಯ !

ಜಾಗತೀಕರಣದ ಈ ನವಪಲ್ಲಟದ ಕಾಲದಲ್ಲಿ ಎಂಥೆಂಥ ಕೈಗಾರಿಕೆಗಳು, ಉದ್ದಿಮೆಗಳು ನೆಲಕಚ್ಚಿ ನಿರ್ನಾಮವಾಗಿರುವಾಗಲೂ ದಿನದಿಂದ ದಿನಕ್ಕೆ ಚಿಲ್ಲರೆ ಅಂಗಡಿಗಳ ಸಂಖ್ಯೆ ಸಣ್ಣ ಪುಟ್ಟ ಊರುಗಳಲ್ಲಿ ಮಾತ್ರ ಹೆಚ್ಚುತ್ತಲೇ ಇರುವುದನ್ನು ವಿಶ್ಲೇಷಿಸಲು ಎಂಬಿಯೆದಂಥ ಪದವಿಯ ಅವಶ್ಯಕತೆಯೇನೂ ಬೇಕಿಲ್ಲ. ದಿನಕ್ಕೊಂದು ಹೊಸ ಬಡಾವಣೆ ತಲೆ ಎತ್ತುವ ನಗರಗಳಲ್ಲಂತೂ ಇವುಗಳ ಅಗತ್ಯ ತುಂಬ ಹೆಚ್ಚು. ಈ ಚಿಲ್ಲರೆ ಅಂಗಡಿಗಳವರು ಒಂದರ್ಥದಲ್ಲಿ ಹೊಸ ಬಡಾವಣೆಗಳ ಗೈಡ್‌ಗಳಾಗಿಯೂ ಕೆಲಸ ಮಾಡುತ್ತಿರುತ್ತಾರೆ. ಯಾವ ಬೀದಿಯ ಯಾವ ಗುರುತಿನ ಹತ್ತಿರ ಯಾರ ಮನೆ ಇದೆಯೆಂಬ ಸೂಕ್ಷ್ಮ ವಿಷಯ ಈ ಅಂಗಡಿಗಳವರಿಗೆ ಗೊತ್ತಿರುತ್ತದೆ. ಅಲ್ಲದೇ ಯಾವ ಹೊಸಬರು ಆ ಏರಿಯಾಕ್ಕೆ ಯಾವ ಯಾವ ಕಾರಣಕ್ಕೆ ಆಗಾಗ ಬಂದು ಹೋಗುತ್ತಾರೆ, ಹಾಗೆ ಬಂದವರು ಏನೇನು ಮಾಡುತ್ತಾರೆ ಅನ್ನುವುದೆಲ್ಲ ಅವರಿಗೆ ಕರತಲಾಮಲಕ. ನೀವು ಎಷ್ಟು ದುಡ್ಡು ಇಟ್ಟುಕೊಂಡಿರಿ, ಯಾವುದೇ ಬ್ಯಾಂಕಿನ ಕಾರ್ಡು ಇಟ್ಟುಕೊಂಡಿರಿ, ಒಂದು ಸೂಪರ್ ಮಾರ್ಕೆಟ್ಟಿಗೆ ಹೋಗಿ ಒಂದೇ ಒಂದು ಸಿಗರೇಟು ಕೊಳ್ಳಿ ನೋಡೋಣ. ನೀವು ಕೊಳ್ಳಲು ತಯಾರಿದ್ದರೂ ಅವನು ಕೊಡಬೇಕಲ್ಲ! ಅದೇ ದಿನಕ್ಕೊಂದು ಸಾರಿ ಒಂದೇ ಒಂದು ಸಿಗರೇಟು ಕೊಳ್ಳಲು ನಿಮ್ಮ ಮನೆಯ ಹತ್ತಿರವೇ ಇರುವ ಚಿಲ್ಲರೆ ಅಂಗಡಿಗೆ ಒಂದೆರಡು ದಿನ ಹೋಗಿ ನೋಡಿ. ಮೂರನೇ ದಿನ ಹೋಗದೇ ಬಿಟ್ಟಿರೋ ದಾರಿಯಲ್ಲೆಲ್ಲಾದರೂ ಆ ಅಂಗಡಿಯವನು ಸಿಕ್ಕರೆ ನಿಮ್ಮ ಕುಶಲ ವಿಚಾರಿಸದೇ ಬಿಡುವುದಿಲ್ಲ. ಕೆಲಸಕ್ಕೆ ಬಾರದ ಕೆಲಸಗಳಲ್ಲಿ ಮುಳುಗಿ ಹೋಗಿ ಜೀವನ ಸ್ವಾರಸ್ಯ ಕಳೆದುಕೊಂಡವರೆಲ್ಲ ದಿನಕ್ಕೊಂದು ಬಾರಿಯಾದರೂ ಪುಟ್ಟ ಅಂಗಡಿಗಳ ಬಳಿ ನಿಂತು ಅಲ್ಲಿ ನಡೆಯುವ ಮಾತು ಕತೆಗಳಲ್ಲಿ ಭಾಗಿಯಾದರೆ ಜೀವನ ಸ್ವಾರಸ್ಯ ತನಗೆ ತಾನೇ ಪುಟಿಯುತ್ತೆ, ಪುಟವಿಟ್ಟ ಚೆಂಡಿನಂತೆ. ಎಂತೆಂಥ ಮಾತು ಅಂತೀರಿ? ಶ್ಯಾನುಭೋಗರ ಮನೆ ಎಮ್ಮೆ ಕಳೆದು ಹೋಗಿದ್ದರಿಂದ ಹಿಡಿದು ಶ್ಯಾಂಭಟ್ಟರ ಮಗ ಸಾಬರ ಹುಡುಗಿಗೆ ಲೈನು ಹೊಡೆಯುವವರೆಗೆ! ಗ್ರಾಮ ಪಂಚಾಯತು ಸೆಕ್ರೆಟರಿ ಲಂಚ ಕೇಳಿದ ವಿಷಯದಿಂದ ಹಿಡಿದು ತ್ರೀಜಿ ಸ್ಕ್ಯಾಮಿನ ಸುದ್ದಿಯವರೆಗೆ!

ಒಂದು ವೇಳೆ ಈ ಚಿಲ್ಲರೆ ಅಂಗಡಿಗಳೇ ಇರದಿರುತ್ತಿದ್ದರೆ ಮತ್ತೆಷ್ಟು ನಿರುದ್ಯೋಗ ಸಮಸ್ಯೆ ಕಾಡುತ್ತಿತ್ತು, ಅಲ್ಲವೇ? ಹತ್ತಿರ ಹತ್ತಿರ ಕೋಟಿ ಸಂಖ್ಯೆಯ ಅಂಗಡಿಗಳಿವೆಯೆಂದರೆ ಅಷ್ಟೇ ಸಂಖ್ಯೆಯ ಜನ ಈ ಉದ್ಯೋಗದಲ್ಲಿದ್ದಾರೆ. ಅವರನ್ನಾಶ್ರಯಿಸಿರುವವರ ಸಂಖ್ಯೆಯೇನು ಕಡಿಮೆಯೇ? ಈ ಅಂಗಡಿಗಳಲ್ಲಷ್ಟೇ ಮಾರಾಟವಾಗಬಹುದಾದ ನಿಪ್ಪಟ್ಟು, ಕೋಡುಬಳೆ, ಖಾರಾಸೇವೆ, ಕಂಬರಗಟ್ಟು, ಕಡ್ಲೆ ಮಿಠಾಯಿ ಇತ್ಯಾದಿ ಇತ್ಯಾದಿ ವಸ್ತುಗಳನ್ನು ತಯಾರಿಸುವವರ ಸಂಸಾರಗಳಿಗೂ ಈ ಇದೇ ಚಿಲ್ಲರೆ ಅಂಗಡಿಗಳು ಆಶ್ರಯ ತಾಣವಾಗಿಲ್ಲವೇ? ಇಂಥ ಸೂಕ್ಷ್ಮ ತಿಳಿಯದ ನಮ್ಮನ್ನಾಳುವ ದೊರೆಗಳು ಈ ಚಿಲ್ಲರೆ ಮಾರಾಟ ಕ್ಷೇತ್ರಕ್ಕೆ ಬಿಳಿತೊಗಲಿನವರನ್ನು ಮತ್ತವರ ಬಂದವಾಳವನ್ನೂ ಬಯಸುತ್ತಾರೆಂದರೆ ನಮ್ಮ ಆರ್ಥಿಕತೆಗೆ ವಂಚನೆ ಮಾಡಿದಂತಲ್ಲವೇ? ದೇಶದ ಆರ್ಥಿಕ ಸ್ಥಿತಿಯನ್ನು ಕಾಪಾಡಹೊರಟರುವವರಿಗೆ  ತಳಮಟ್ಟದ ತಿಳುವಳಿಕೆ ಇಲ್ಲದೇ ಹೋದರೆ ಹೀಗೇ ಆಗುವುದು.

ಯಾರು ಏನು ಮಾಡಲಿ, ಬಿಡಲಿ, ಈ ಅಂಗಡಿಗಳವರ ಪರ ವಕಾಲತ್ತು ವಹಿಸಲಿ, ಬಿಡಲಿ, ಚುನಾವಣೆಗಳ ಕಾಲದಲ್ಲಿ ಮಾತ್ರ ಬಹುತೇಕ ಚಿಲ್ಲರೆ ಅಂಗಡಿಗಳು ಯಾವುದೋ ಒಂದು ಪಕ್ಷದ ಪರವಾಗಿ ನಿಲ್ಲದೇ ಪಕ್ಷಾತೀತವಾಗಿ ವರ್ತಿಸುವುದನ್ನು ಇವುಗಳನ್ನು ಬಲ್ಲ ಎಲ್ಲರೂ ಬಲ್ಲರು. ಎಲ್ಲ ಬಗೆಯ ಜನರ ಎಲ್ಲ ಅಭಿಪ್ರಾಯಗಳಿಗೂ ಈ ಅಂಗಡಿಗಳು ತೆರೆದ ಕಿವಿಗಳು. ಯಾವ ವಿಧಾನ ಸಭೆ, ಲೋಕಸಭೆಯ ಅಧಿವೇಶನದಲ್ಲೂ ಚರ್ಚೆಯಾಗದ ಹಲವು ವಿಚಾರಗಳು ಈ ಅಂಗಡಿಗಳ ಮುಂಗಟ್ಟುಗಳಲ್ಲಿ ನಡೆಯುತ್ತವೆ. ಗಿಜುಗುಡುವ ಜನಗಳ ಮಧ್ಯದಲ್ಲೂ ತನ್ನ ಪಾಡಿಗೆ ತಾನು ವ್ಯಾಪಾರ ಮಾಡಿಕೊಳ್ಳುತ್ತ, ಜನಗಳ ಅಗತ್ಯಕ್ಕೆ ಸ್ಪಂದಿಸುವ ಈ ಅಂಗಡಿ ಮಾಲೀಕರಿಗೆ ಈ ಪ್ರಬಂಧದ ಮೂಲಕ ಹೆಚ್ಚೆಂದರೆ ನನ್ನ ಕೃತಜ್ಞತೆಗಳನ್ನು ತಿಳಿಸಬಹುದಷ್ಟೇ! ಮತ್ತು ಆ ಮೂಲಕ ತಳಮಟ್ಟದ ಆರ್ಥಿಕ ಬೆಳವಣಿಗೆಗೆ ಕಾರಣವಾಗಿರುವ ಚಿಲ್ಲರೆ ವ್ಯಾಪಾರದಲ್ಲಿ ಖಾಸಗೀ ಬಂಡವಾಳದ ಹೂಡಿಕೆಯನ್ನೂ ವಿರೋಧಿಸಬಹುದು. ಯಾವ ವಿಧೇಯಕ ತಂದರೂ, ಜಾಹೀರಾತಿಗೆ ಕೋಟಿಗಟ್ಟಲೆ ಖರ್ಚುಮಾಡಿದರೂ, ಚಿಲ್ಲರೆ ಅಂಗಡಿಗಳ ಗತ್ತು ಮತ್ತು ಅಗತ್ಯಗಳನ್ನು ಯಾವ ಸೂಪರ್ ಮಾರ್ಕೆಟ್ಟೂ ಸರಿಗಟ್ಟಲಾರದೆಂಬ ಭರತ ವಾಕ್ಯ ನಾನಾಡಬಹುದಾದರೂ ಏಕೋ ಇತ್ತೀಚೆಗೆ ನಮ್ಮನ್ನಾಳುವ ದೊರೆಗಳ ತಿಕ್ಕಲುತನ ಮತ್ತು ಪ್ರಾಯಶಃ ಅವರು ಮಾಡಿಕೊಂಡಿರಬಹುದಾದ ಒಳಒಪ್ಪಂದಗಳ ಸುಳಿ ಮುಗ್ಧ ಪೆಟ್ಟಿ ಅಂಗಡಿಗಳ ಒಡೆಯರ ಜೀವನವನ್ನೆಂದಿಗೂ ಕೊನೆಗೊಳಿಸದಿರಲಿ ಎನ್ನುವ ಆಶಯದೊಡನೆ ಈ ಪ್ರಬಂಧಕ್ಕೆ ಮಂಗಳವಾಕ್ಯ ಹಾಡುತ್ತೇನೆ. ಶುಭಮಸ್ತು!
                                                                           

ಸೋಮವಾರ, ಸೆಪ್ಟೆಂಬರ್ 17, 2012

ಪಕ್ಕದ ಮನೆಯಲ್ಲಿ. . . . . . .

ಬಿಳೀ ಗೋಡೆಯ ಮೇಲೆ
ಈಗಷ್ಟೇ ಬಿಡಿಸಿರುವ ನವ್ಯ ಚಿತ್ರ
ಕಲಾವಿದ ಸಹಿ ಹಾಕುವುದನ್ನು ಮರೆತಿದ್ದಾನೆ,.

ಅಂಗಳದ ತುಳಸಿ ಕಟ್ಟೆಯ ಸುತ್ತ
ಪುಟ್ಟ ಕೃಷ್ಣನ ಹೆಜ್ಜೆ ಗುರುತು
ಬೃಂದಾವನ ಕಟ್ಟಿದ ಪೋರ ಮೃತ್ತಿಕೆಯಲ್ಲಾಡಿ ಬಳಲಿರಬೇಕು,..

ತಾತನ ಬೆನ್ನ ಮೇಲೆ ಅಂಬಾರಿ ಉತ್ಸವ
ಅಜ್ಜಿಯಂತೂ ಕತೆಗಳ ಅಕ್ಷಯ ಪಾತ್ರೆ
ಬರುವ ಹಾಗಿಲ್ಲ ಗುರುತಿನವರು ಯಾರೂ ಬರಿಗೈಯಲ್ಲಿ. . .

ತಡವಾಗಿ ಬಂದರೆ ಅಪ್ಪ
ಷೋಕಾಸು ನೋಟೀಸಿಗುತ್ತರಿಸಬೇಕು
ತಪ್ಪೊಪ್ಪಿಗೆಯೊಂದೇ ಕ್ಷಮೆಗೆ ದಾರಿ,..

ಬಿಸಿ ಮಮ್ಮು ಉಣಿಸಲಿಕೆ ಅಮ್ಮ
ಪಾಪ ಚಂದ್ರನನ್ನೇ ಧರೆಗೆ ಕರೆದು ತರುತ್ತಾಳೆ
ಯಕ್ಷಿಣಿಯರದೇ ನಿತ್ಯ ಲಾಲಿ ಹಾಡು,.

ಪಕ್ಕದ ಮನೆಯಲ್ಲಿ ಪುಟ್ಟ ಪೋರನೇ ರಾಜ
ಉಳಿದವರೆಲ್ಲ ಅವನಿಗೆ ಶರಣು ಹೋದ ಸಾಮಂತರು!

ವಿಘ್ನವಿನಾಶಕ ವಿನಾಯಕ

ಆಷಾಡದ ಗಾಳಿಮಳೆಗಳು ಶ್ರಾವಣದ ಕುಂಭದ್ರೋಣ ಕಡಿಮೆಯಾಗಿ ಭಾದ್ರಪದ ಕಾಲಿಟ್ಟಿದೆ. ಚರಾಚರ ಪ್ರಕೃತಿಯಲ್ಲಿ ಮೇಳೈಸಿದ್ದ ಜಡತನ ಹಿಂದೆ ಸರಿದು ಜೀವನೋತ್ಸಾಹ ಪುಟಿದೇಳುವ ಕಾಲವಿದು ಎಂದು ಆಯುರ್ವೇದ ಹೇಳುತ್ತದೆ. ಮಳೆ ಕಡಿಮೆಯಾದ ಕಾರಣ ರೈತಾಪಿ ಜನರೂ ಬರುವ ದಿನಗಳ ನಿರೀಕ್ಷೆಯಲ್ಲಿ ಇರುತ್ತಾರೆ. ಭಾದ್ರಪದ ಶುಕ್ಲದ ಚೌತಿ ವಿನಾಯಕನ ಹಬ್ಬ. ಗೌರಿ ಮತ್ತು ಗಣೇಶರ ಹಬ್ಬ ಜನಸಮುದಾಯದಲ್ಲಿ ಹರ್ಷ-ಸಂಭ್ರಮಗಳನ್ನು ಅರಳಿಸುತ್ತದೆ.

ಭಾರತೀಯ ದೇವತೆಗಳಲ್ಲಿ ಅತ್ಯಂತ ಲೋಕ ಖ್ಯಾತನಾದವನು ಗಣೇಶನೇ. ಅವನು ಕೇವಲ ವಿಘ್ನ ನಾಶಕನಷ್ಟೇ ಅಲ್ಲ, ಸಿದ್ಧಿ ಪ್ರದಾಯಕನೆಂದೂ ಪೂಜಿಸಲ್ಪಡುತ್ತಾನೆ. ಎಲ್ಲ ಕೆಲಸಗಳ ಆರಂಭದಲ್ಲೂ ಗಣೇಶನನ್ನು ಪ್ರಾರ್ಥಿಸುವುದು ಪಾರಂಪರಿಕವಾಗಿ ನಡೆದು ಬಂದ ಆಚರಣೆ. ಹೀಗೆ ಅಗ್ರಪೂಜೆಗೂ ಮೊದಲ ನಮಸ್ಕಾರದ ಮನ್ನಣೆಗೂ ಪಾತ್ರನಾಗುವ ವಿನಾಯಕ ಭಕ್ತರ ಸಂಕಲ್ಪ ಶಕ್ತಿಗೆ ಬಲದುಂಬಿ ಕಾರ್ಯಸಿದ್ಧಿಯಾಗುವಂತೆ ಹರಸುತ್ತಾನೆಂಬ ನಂಬಿಕೆ ಇದೆ. ಮಹರ್ಷಿ ವೇದವ್ಯಾಸರು ರಚಿಸಿದ ಮಹಾಭಾರತ ಕೃತಿಗೆ ಗಣಪತಿಯೇ ಲಿಪಿಕಾರನೆಂಬ ಹೇಳಿಕೆಯೂ ಪ್ರಸಿದ್ಧವಾದುದೇ ಆಗಿದೆ. ನಮ್ಮ ಪ್ರಾಚೀನ ಕಾವ್ಯಗಳ ಆರಂಭವಂತೂ ಗಣಪತಿಯನ್ನು ನಮಿಸದೇ ಮುಂದೆ ಹೋಗುವುದೇ ಇಲ್ಲ. ಕವಿ, ಕಲಾವಿದ, ಪಂಡಿತ, ಪಾಮರರೆಲ್ಲರಿಗೂ ಗಣೇಶ ಪರಮಪ್ರಿಯ ದೇವರು.

ಮುಂಜಾನೆ ಮೂಡಣದ ಅಂಚಿನಲ್ಲಿ ನಿಧಾನವಾಗಿ ಸಣ್ಣವನಾಗಿ ಕಾಣಿಸಿಕೊಂಡು ನಂತರ ಭೂಮ್ಯಾಕಾಶಗಳನ್ನೆಲ್ಲ ಆವರಿಸಿಕೊಳ್ಳುವ ಸೂರ್ಯನಂತೆ ಸಿದ್ಧಿಪ್ರದ ವಿನಾಯಕನು ಭೂಮ್ಯಾಕಾಶಗಳನ್ನೆಲ್ಲ ವ್ಯಾಪಿಸಿರುವನೆಂದು ಲಕ್ಷೀಶ ಕವಿ ತನ್ನ ಜೈಮಿನಿ ಭಾರತದಲ್ಲಿ ವರ್ಣಿಸಿದ್ದಾನೆ. ಭಾವಜಗತ್ತನ್ನೂ, ಬೌಧ್ಧಿಕ ಜಗತ್ತನ್ನೂ, ವಿಜ್ಞಾನ ಜಗತ್ತನ್ನೂ ಸರಿಸಮನಾಗಿ ವ್ಯಾಪಿಸಿರುವ ಗಣೇಶನನ್ನು ಕುರಿತ ದಂತ ಕತೆಗಳೂ ಲೆಕ್ಕಕ್ಕೇ ಸಿಕ್ಕದಷ್ಟು ಹೇರಳವಾಗಿವೆ. ಶಿವ ಪುರಾಣದಲ್ಲಿ ವರ್ಣಿತನಾಗಿರುವಂತೆ -ಮತ್ತ ಮಾತಂಗ ವದನೋ, ಗಂಗೋಮಾ ಶಂಕರಾತ್ಮಜಃ, ಆಕಾಶದೇಹೋ, ದಿಗ್ಬಾಹುಃ, ಸೋಮಃ ಸೂರ್ಯಾಗ್ನಿಲೋಚನಃ- ಮದಿಸಿರುವ ಆನೆಯ ವದನವಿರುವ ವಿನಾಯಕ ಗಂಗೆ,ಉಮೆ ಮತ್ತು ಶಂಕರರ ಮುದ್ದಿನ ಮಗ. ಆಕಾಶವೇ ಅವನ ಶರೀರವಾದರೆ, ದಿಕ್ಕುಗಳವನ ತೋಳುಗಳು. ಸೂರ್ಯ ಚಂದ್ರರೇ ಅವನ ಕಣ್ಣುಗಳು.- ಈ ವಿಭೂತಿ ರೂಪವನ್ನು ಕಲ್ಪಿಸಿಕೊಂಡ ಮನಸ್ಸಿನ ಹಿಂದೆ ಇರುವ ಭೂಮ ಕಲ್ಪನೆ ಅದ್ಭುತವಾದುದು.
ಪೌರಾಣಿಕ ಮತ್ತು ಜಾನಪದ ಕಥೆಗಳಂತೂ ಗಣೇಶನ ಹುಟ್ಟು ಅವನ ಲೀಲೆ ಮತ್ತು ಮಹಿಮೆಗಳನ್ನು ಹಾಡಿಹೊಗಳಿವೆ. ಆ ಕಥೆಗಳ ಹಿಂದಿರುವ ರೋಚಕ ಕಲ್ಪನೆಯಂತೂ ರಮ್ಯಲೋಕವನ್ನು ಕೇಳುಗನಲ್ಲಿ ಮೂಡಿಸುತ್ತವೆ. ಈ ಕಲ್ಪಿತ ಆವರಣಗಳಿಂದ ಅವನನ್ನು ಬೇರ್ಪಡಿಸಿ ಸಾಕ್ಷಾತ್ ಪರಬ್ರಹ್ಮ ಸ್ವರೂಪನೆಂಬ ಎತ್ತರದ ನೆಲೆಯಲ್ಲಿ ಪರಿಭಾವಿಸಿದ ದಾರ್ಶನಿಕ ಚಿಂತನೆಯೂ ನಮಗೆ ಗೊತ್ತಿದೆ. ಇಡೀ ಬ್ರಹ್ಮಾಂಡದ ಆದಿ, ಮಧ್ಯ, ಅಂತ್ಯಗಳಲ್ಲಷ್ಟೇ ಅಲ್ಲದೆ ಸೃಷ್ಟಿಯ ಎಲ್ಲ ವ್ಯಾಪಾರಗಳಲ್ಲೂ ಗಣಪತಿಯ ಪಾರಮ್ಯವನ್ನೇ ಕಂಡ ಚಿಂತನೆಯೂ ನಮ್ಮ ಪ್ರಾಚೀನ ಚಿಂತನಗಳಲ್ಲಿವೆ.

ಅಥರ್ವಶೀರ್ಷದಲ್ಲಿ ಅವನನ್ನು ಹೀಗೆ ವರ್ಣಿಸಲಾಗಿದೆ. - ಸರ್ವಂ ಜಗದಿದಂ ತ್ವತ್ತಸ್ತಿಷ್ಟತಿ, ಸರ್ವಂ ಜಗದಿದಂ ತ್ವಯಿಲಯಮೇಷ್ಯತಿ. ಸರ್ವಂ ಜಗದಿದಂ ತ್ವಯಿಪ್ರತ್ಯೇತಿ, ತ್ವಂ ಭೂಮಿರಾಪೋನಲೋನಿಲೋ ನಭಃ -ಈ ಜಗತ್ತು ನಿನ್ನ ಕಾರಣದಿಂದಲೇ ಉಂಟಾಗಿದೆ. ನಿನ್ನಾಧಾರದ ಮೇಲೇ ನಿಂತಿದೆ. ಕಡೆಗೂ ನಿನ್ನಲ್ಲಿಯೇ ಲೀನವಾಗುವುದು ಈ ಜಗತ್ತು. ಭೂಮಿ, ನೀರು, ಗಾಳಿ, ಬೆಂಕಿ, ಆಕಾಶ ಪಂಚಭೂತಗಳಲ್ಲೂ ನೀನೇ ತುಂಬಿದ್ದೀ-

ಇಂಥ ಉನ್ನತ ನೆಲೆಯಲ್ಲಿ ನಮ್ಮ ಹಿರಿಯರು ಕಂಡಿದ್ದ ಗಣೇಶ ಇವತ್ತು ಬೀದಿಬೀದಿಗಳ ಪೆಂಡಾಲುಗಳಲ್ಲಿ, ಶಾಲೆ ಕಾಲೇಜುಗಳ ಅಂಗಳದಲ್ಲಿ ಅಷ್ಟೇ ಏಕೆ ಸಂತೆ ಮಾಳಗಳ ಜನಸಾಗರದ ಮಧ್ಯದಲ್ಲೂ ವಿಜೃಂಭಿಸುತ್ತಿದ್ದಾನೆ. ಭಕ್ತಿಗೋ ಭಾವಕ್ಕೋ ಅಥವ ವಸೂಲಿ ದಂಧೆಯ ವ್ಯಾಪರಕ್ಕೋ ಪಕ್ಕಾಗುತ್ತಿದ್ದಾನೆ. ಸಿನಿಮಾ ಸಂಗೀತಗಳ ಭರಾಟೆಯಲ್ಲಿ, ಡಿಸ್ಕೋ ಹಾಡುಗಳ ದರಬಾರಿನಲ್ಲಿ ಕೂಡ ಗಣೇಶನ ಮೂರ್ತಿ ಇರುವುದು ಪರಿಸ್ಥಿತಿಯ ವ್ಯಂಗ್ಯವಾಗಿದೆ.

ಉನ್ನತ ನೆಲೆಯಲ್ಲಿ ವಿದ್ಯಾಧಿದೇವತೆಯೆಂದೂ ಪರಿಗಣಿಸಿರುವ ಗಣೇಶ ನಮ್ಮೆಲ್ಲರಲ್ಲೂ ನಾಳಿನ ಒಳ್ಳೆಯದಕ್ಕಾಗಿ ಇಂದು ನಾವು ಕೈಗೆತ್ತಿಕೊಳ್ಳಬೇಕಾದ ಕೆಲಸಕಾರ್ಯಗಳನ್ನು ನಿರ್ವಿಘ್ನವಾಗಿ ನಡೆಸಿಕೊಡಲಿ ಎಂಬುದು ಗಣೇಶ ಚೌತಿಯ ಪ್ರಾರ್ಥನೆಯಾಗಿದೆ. ಇನ್ನು ಗಣೇಶನ ತಾಯಿ ಗೌರಿಯಂತೂ ಸಾಕ್ಷಾತ್ ಪರಶಿವನ ಮಡದಿಯಾಗಿಯೂ ಲೌಕಿಕದ ಎಲ್ಲ ಹೆಣ್ಣುಮಕ್ಕಳ ಹಾಗೆ ಕಷ್ಟ-ಸುಖಗಳನ್ನು ಕಂಡವಳು. ದಾಕ್ಷಾಯಣಿಯಾಗಿ ಅವತರಿಸಿ ಶಿವನನ್ನೇ ವರಿಸಿದ ಛಲವಂತೆ ಅವಳು. ಹೀಗೆ ಗೌರಿ-ಗಣೇಶರ ಹಬ್ಬ ತಾಯಿ-ಮಗುವಿನ ಬಾಂಧವ್ಯದ ಸಂಕೇತವಾಗಿ ನಮಗೆಲ್ಲ ಪಾಠ ಹೇಳುತ್ತಲೇ ಇರುವುದನ್ನೂ ನಾವು ಗಮನಿಸಲೇಬೇಕು.
                                                                                

ಭಾನುವಾರ, ಸೆಪ್ಟೆಂಬರ್ 2, 2012

ಮೇಸ್ಟ್ರುಗಳಿಗೊಂದು ನಮನ



‘ಗುರುವಿನ ಗುಲಾಮನಾಗುವವರೆಗೆ ದೊರೆಯದಣ್ಣ ಮುಕುತಿ’- ದಾಸರು ಬರೆದುದನ್ನು ಹಾಡಾಗಿಸಿ  ಬಿತ್ತರಿಸುವ   ಆಕಾಶವಾಣಿಯ ಗೀತಾರಾಧನವನ್ನು ಕೇಳಿದಾಗ ಸೆಪ್ಟೆಂಬರ್ ಐದರ ಶಿಕ್ಷಕರ ದಿನಾಚರಣೆಯ ನೆನಪು ಬರುವುದು! ಗುರುವಿನ ‘ಗುಲಾಮ’ನಾಗಬೇಕೆನ್ನುವುದನ್ನು ತನಗೆ ತೋರಿದ ಹಾಗೆ ಅರ್ಥೈಸಿಕೊಂಡು ಅದನ್ನು ಶೋಷಣೆಯ ಮತ್ತೊಂದು ಮುಖವೆಂದು ವಾದಿಸಿದ ಗೆಳೆಯನ ನೆನಪೂ ಜೊತೆ ಜೊತೆಗೇ ನುಗ್ಗಿಬಂತು. ಮೊನ್ನೆ ಮೊನ್ನೆ ಶಿಕ್ಷೆಯ ಹೆಸರಲ್ಲಿ ಶಾಲೆಯೊಂದು ಮಕ್ಕಳನ್ನು ಹಿಂಸಿಸಿದ ವರದಿ ಪತ್ರಿಕೆಗಳಲ್ಲಿ ಓದಿದ್ದು ಇನ್ನೂ ಹಸಿ ಹಸಿಯಾಗಿ ನೆನಪಿನಲ್ಲಿರುವಾಗಲೇ ಶಿಕ್ಷಕನೊಬ್ಬ ತನ್ನ ಕಾಮಾತುರತೆಗೆ ತನ್ನ ಶಿಷ್ಯೆಯೊಬ್ಬಳನ್ನು ಬಳಸಿಕೊಂಡ ಸುದ್ದಿಯೂ ಸ್ಮರಣೆಗೆ ಬಂತು.

ಆದರೆ ಗುರುವೆನ್ನುವ ಶಬ್ದಾರ್ಥದ ಪರಿಚಯ ನಮಗಾದಲ್ಲಿ ದಾಸವಾಣಿಯ ಸರಿಯಾದ ಅರ್ಥ ಹೊಳೆಯಲು ಸಾಧ್ಯ. ಸಾಮಾನ್ಯಾರ್ಥದಲ್ಲಿ ಗುರುವೆಂದರೆ ಶಿಕ್ಷಕ. ಕಲಿಯುವವರಿಗೆ ವಿದ್ಯೆಯನ್ನು ಕಲಿಸಿಕೊಡುವವನು. ಮಠ, ಮಾನ್ಯಗಳ ನೇಮ ನಿಷ್ಠೆಗೆ ತಮ್ಮನ್ನು ಒಪ್ಪಿಸಿಕೊಂಡವರಿಗೆ ಗುರುವೆನ್ನುವುದು ಆರಾಧ್ಯ ದೈವದ ಲೌಕಿಕ ಮುಖ. ಕಾವಿ ತೊಟ್ಟು, ಸಂಸಾರ ತ್ಯಜಿಸಿ, ಆಶೀರ್ವಚನಕ್ಕೆ ಕುಳಿತ ಮಠದಯ್ಯ! ಪುಂಡರಿಗೆ, ಲೋಕದ ಸಾಮಾನ್ಯ  ನಿಯಮ ಮೀರಿ ನಡೆಯುವ ಗುಂಪಿಗೆ ನಾಯಕನಾದವನನ್ನೂ ಗುರುವೆಂದು ಸಂಭೋದಿಸುವುದನ್ನೂ ಕಾಣುತ್ತೇವೆ. ಇನ್ನು ಛಂಧಶ್ಶಾಸ್ತ್ರದ ಗಣಪ್ರಸ್ತಾರದ ಪ್ರಕಾರ ಗುರುವೆಂದರೆ ದೀರ್ಘವಾದುದು, ಒತ್ತಕ್ಷರವಿರುವುದು ಅಥವ ಮಹಾ ಪ್ರಾಣವಾಗಿರುವುದು.

ಮೇಲ್ನೋಟಕ್ಕೆ ಕಾಣುವ ಗುರುವಿನ ಹೊರಾರ್ಥಗಳನ್ನೆಲ್ಲ ಒಂದೆಡೆ ಸೇರಿಸಿದಾಗ ಒಂದು ಗಮನೀಯ ಅಂಶ ಹೊಳೆಯುತ್ತದೆ. ಅದು ಗುರುವೆಂದರೆ ಹಿರಿತನವನ್ನು ತನ್ನೊಟ್ಟಿಗೆ ಹೊತ್ತೊಯ್ಯುತ್ತಿರುವುದು. ಆಕರ್ಷಣೆಯ ಒಂದಂಶವನ್ನು  ತನ್ನೊಂದಿಗೆ ಬೆಸೆಸಿಕೊಂಡಿರುವುದು. ಅಥವ ಗುರು ಹೆಸರಿನ ಗ್ರಹದ ಹಾಗೆ ಗಾತ್ರ ಮತ್ತು ಭಾರದಲ್ಲಿ ದೊಡ್ಡದಾಗಿರುವುದು.

ಈ ಎಲ್ಲ ಅರ್ಥಗಳನ್ನು ನಿಘಂಟಿನಲ್ಲಿ ಕಾಣಬಹುದಾದರೂ ಗುರುವೆಂಬ ಅರಿವಿಗೆ ಇರುವ ವಿಶಾಲಾರ್ಥವನ್ನು ನಾವು ಗಮನಿಸಬೇಕು. ಬರಿ ಮರಳ ಮೇಲೆ ಅಕ್ಷರ ತಿದ್ದಿಸಿದ ಓಚಯ್ಯನವರಿಂದ ಹಿಡಿದು ಆಧುನಿಕ ವಿಜ್ಞಾನವನ್ನು ಬೋಧಿಸುತ್ತಿರುವ ವಿಶ್ವ ವಿದ್ಯಾಲಯದ ಪ್ರೊಫೆಸರವರೆಗೂ ಈ ಗುರುವಿನ ಅಂಶ ಚದುರಿರುವುದನ್ನು ಯಾರುತಾನೆ ಅಲ್ಲಗಳೆಯಲು ಸಾಧ್ಯ? ಪ್ರಾಥಮಿಕ ಶಾಲೆಗಳಲ್ಲಿ ಕಲಿತ ಸರಳ ಕೂಡು ಕಳೆಯುವ ಲೆಕ್ಕ ದಕ್ಕದೇ ಆಧುನಿಕ ಬೀಜ ಶಾಸ್ತ್ರದ ಬೃಹನ್ನಿಯಮಗಳು ತಲೆಗೆ ಹೋಗಿಸಿಕೊಂಡವರುಂಟೇ? ಅ, ಆ, ಇ, ಈ ತಿದ್ದಿ ತೀಡಿ ಕಲಿತ ಬಾಲ ಬುದ್ಧಿಗೆ ಮಾತ್ರ ಪಂಪ, ರನ್ನ, ಕುಮಾರವ್ಯಾಸರನ್ನೂ ಅರೆದು ಕುಡಿಯುವ ಛಲ ಹುಟ್ಟಲು ಸಾಧ್ಯ.

ಹಾಗಾಗಿ ಪುನಃ ಪುನಃ ನಮಗೆ ಈಗಲಾದರೂ ಮನವರಿಕೆಯಾಗಬೇಕಿರುವುದೆಂದರೆ ಪ್ರಾಥಮಿಕ ಹಂತದಲ್ಲಿ ಕಲಿಕೆಗೆ ಗಮನ ನೀಡದ ಯಾರೂ ಉನ್ನತ ಶಿಕ್ಷಣದತ್ತ ತಾವೇ ತಾವಾಗಿ ಹೋಗಿರುವುದಿಲ್ಲ. ಆದರೆ ಸಮಾಜೋರಾಜಕೀಯ ಸ್ಥಿತ್ಯಂತರಗಳು ಕಲಿಸುವ ಗುರುವಿಗಿಂತಲೂ ಕಲಿಯುವ ವಿದ್ಯೆಯನ್ನು ದೊಡ್ಡದು ಮಾಡಿವೆ. ‘ವರ್ಣ ಮಾತ್ರಂ ಕಲಿಸಿದಾತಂ ಗುರು’ವೆನ್ನುವ ಮಾತು ಮೂಲೆಗೆ ಬಿದ್ದಿದೆ. ಗುರುಮುಖೇನ ಪ್ರಸಾದವಾಗಬೇಕಿರುವ ಸಂಗೀತದಂಥ ಸಾಂಸ್ಕೃತಿಕ ವಿದ್ಯೆಯೂ ಸಂತೆಗೆ ಮೂರು ಮೊಳ ನೇಯುವ ಜಾಯಮಾನಕ್ಕೆ ಒಗ್ಗಿಹೋಗಿರುವ ದುರಂತ ಕಣ್ಣಮುಂದೆಯೇ ಇದೆ.
‘ಆಚಾರ್ಯ ದೇವೋಭವ’ ಎಂದು ನಂಬಿದ್ದ ಆರ್ಷೇಯ ಪರಂಪರೆಗೆ ದ್ರೋಣಾಚಾರ್ಯರು ಹೇಗೋ ಹಾಗೇ ಇಚ್ಛಾಮರಣಿ ಭೀಷ್ಮರೂ ಕುರುಕುಲದ ಗುರುಗಳಾಗಿದ್ದವರು. ಕೃಷ್ಣ ದ್ವೈಪಾಯನರಂತೂ ರಾಜಗುರುಗಳಾಗಿ ಮೆರೆದವರು. ವಿಶಾಮಿತ್ರ, ಪರಶುರಾಮ, ವಸಿಷ್ಠ, ಸಾಂದೀಪನಿಯಂಥ ಹಲವು ಗುರುಗಳು ತಿದ್ದಿ ತೀಡಿ ನಿರ್ಮಿಸಿದ ಶಿಷ್ಯವೃಂದ ಈ ನಾಡು ಮರೆಯದೇ ಇರುವಂಥದು.ಒಬ್ಬ ಸಾಮಾನ್ಯ ಶಿಕ್ಷಕ ಪಾಠ ಹೇಳುತ್ತಾನೆ. ಒಳ್ಳೆಯ ಶಿಕ್ಷಕನಾದವನು ಅದನ್ನು ವಿವರಿಸಿ ತಿಳಿಸುತ್ತಾನೆ. ಉತ್ತಮ ಶಿಕ್ಷಕನಾದವನು ಪ್ರಾತ್ಯಕ್ಷಿಕೆಯ ಮೂಲಕ ಮನದಟ್ಟು ಮಾಡಿಸಿದರೆ, ಅತ್ಯುತ್ತಮ ಶಿಕ್ಷಕನಾದವನು ತಾನೂ ಕಲಿಕೆಯೊಂದಿಗೆ ಕಲಿಯುತ್ತ, ಕಲಿಯುತ್ತಿರುವವರನ್ನೂ ಉದ್ದೀಪಿಸುತ್ತಲೇ ಇರುತ್ತಾನೆ.

ನಾವೆಲ್ಲ ಬೆಳೆದು ದೊಡ್ಡವರಾಗಿ ನಮ್ಮ ಕಾಲಿನ ಮೇಲೆ ನಾವು ನಿಂತಿರುವ ಈ ಸನ್ನಿವೇಶದಲ್ಲಿ ನಮಗೆ ನಮ್ಮ ಸಾಧನೆಯೇ ಮುಖ್ಯವಾಗಿ ಕಾಣುತ್ತದೆ. ಆದರೆ ನಮ್ಮ ಈ ಸಾಧನೆಯ ಹಿಂದೆ ನಮ್ಮ ಹೆತ್ತವರ ಅಲ್ಪ ಸ್ವಲ್ಪ ಪಾಲಿನ ಜೊತೆಗೇ ನಮ್ಮ ಎಳವೆಯಲ್ಲಿ ವರ್ಣಮಾಲೆ ಕಲಿಸಿ, ಮಗ್ಗಿ ಹೇಳಿಸಿ, ಕುತೂಹಲದ ಪ್ರಶ್ನೆಗಳಿಗೆ ಸಮಾಧಾನದ ಉತ್ತರದ ಜೊತೆಗೇ ವಾರ್ಷಿಕೋತ್ಸವದ ನಾಟಕಕ್ಕೆ ನಮ್ಮ ಮುಖಕ್ಕೆ ಬಣ್ಣ ಹಚ್ಚಿದ ಮೇಸ್ಟ್ರುಗಳನ್ನು ಮರೆತೇ ಬಿಟ್ಟಿರುತ್ತೇವೆ. ಪ್ರದರ್ಶನದ  ವಿಗ್ರಹಗಳಂತೆ ಈಗ ನಳನಳಿಸುತ್ತಿರುವ ನಮಗೆ, ಮೊದಲ ಚಾಣದ ಪೆಟ್ಟು ಕೊಟ್ಟ ಆ ಪುಣ್ಯಾತ್ಮರುಗಳು ಬದುಕಿದ್ದಾರೋ ಇಲ್ಲವೋ ಅವರ ಸುದ್ದಿ ನಮಗೆ ಗೊತ್ತಾಗುವುದೇ ಇಲ್ಲ.

ಕಲಿಯುವ ವಿದ್ಯೆಗೂ, ಬದುಕಿಗೆ ಆಧಾರವಾಗುವ ನೌಕರಿಗೂ ಅರ್ಥಾರ್ಥ ಸಂಬಂಧಗಳೇ ಇರದ ಇವತ್ತಿನ ಸ್ಥಿತಿಯಲ್ಲಿ ನಿನ್ನೆ ಮೊನ್ನೆಗಳ ಗಾಯಗಳೆ ಮಾಯದಿರುವಾಗ ಬಾಲ್ಯದ ಆರಾಮಕ್ಕೆ ಹೊರಳುವ ವಿರಾಮ ನಮಗಿದೆಯೇ ಎನ್ನುವುದೂ ಇಲ್ಲಿ ಮುಖ್ಯ.  ಹಾಗೊಂದು ವೇಳೆ ಅದು ಸಾಧ್ಯವಾದರೆ ನಮ್ಮ ನೆನಪಿನ ಕೊಂಡಿ ಕಚ್ಚಿಕೊಳ್ಳುವುದು ಕೇವಲ ಪ್ರಾಥಮಿಕ ಶಾಲೆಯ ಕಲಿಕೆಯವರೆಗೆ ಮಾತ್ರ. ಪ್ರೌಢ ಶಾಲೆ, ಕಾಲೇಜುಗಳಲ್ಲಿ ನಾವು ನಡೆಸಿದ್ದ ಪುಂಡಾಟಿಕೆಯೋ, ಅಂದಾದುಂದಿಯೋ ನೆನಪಿಗೆ ದಕ್ಕುವುದೇ ವಿನಾ ಪಾಠ ಹೇಳಿದ್ದ ಕೆಲವರಷ್ಟೇ ಸ್ಮೃತಿಗೆ ಬರುತ್ತಾರೆ. ಆದರೆ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಕಲಿಸಿದ್ದ ಶಾಸ್ತ್ರಿ, ಮಗ್ಗಿ ಕಲಿಸಿದ ಮಂಜಪ್ಪ, ಹಿಂದಿಯ ಹೈ, ನೈ ಗೊತ್ತಿರದಿದ್ದರೂ ಕತೆಯ ಮೂಲಕವೇ ರಮ್ಯ ಲೋಕಕ್ಕೆ ನಮ್ಮನ್ನೊಯ್ಯುತ್ತಿದ್ದ ಲಕ್ಷ್ಮಮ್ಮ ಟೀಚರ್, ನೆನೆಸಿಕೊಂಡಾಗಲೆಲ್ಲ ಮನಸಿನಾಳಕ್ಕೆ ಬರುತ್ತಾರೆ. ಲಂಕೇಶರನ್ನು, ಅನಂತಮೂರ್ತಿಗಳನ್ನು ‘ಮೇಸ್ಟ್ರು’ ಎಂದೇ ಕರೆದು ಖುಷಿಗೊಳ್ಳುವ ನಮಗೆ ಅವರನ್ನು ಅನ್ಯರಂತೆ ಭಾವಿಸಲು ಬೇಸರ!

ನಮ್ಮ ಅರಿವಿಗೆ ಬಾರದೇ ನಾವು ನಮಗೆ ಕಲಿಸಿದವರನ್ನು ನಕಲು ಮಾಡಿರುತ್ತೇವೆ. ಏಕೆಂದರೆ ಒಬ್ಬ ಉತ್ತಮ ಶಿಕ್ಷಕನಾದವನು ತನ್ನ ಶಿಷ್ಯರನ್ನೂ ತನ್ನ ಪ್ರತಿರೂಪದಂತೆಯೇ ಎರಕ ಹೊಯ್ದಿರುತ್ತಾನೆ. ಬಾಲ್ಯದಲ್ಲಿ ಕಲಿತ ಪಾಠಗಳು ಬದುಕಿನ ತುಂಬ ಉಳಿಯುತ್ತವೆ. ನಮಗೆ ಪಾಠ ಹೇಳಿದ್ದ ಅವರನ್ನು ಮತ್ತು ಅವರಂಥವರನ್ನು ಗೌರವಿಸಲು, ನಮ್ಮ ಶುಭಾಶಯಗಳನ್ನು ಅವರಿಗೆ ತಲುಪಿಸಲು ಸರಿಯಾದ ದಿನವೆಂದರೆ ಸೆಪ್ಟೆಂಬರ್ ಐದನೇ ತಾರೀಖಿನ ಶಿಕ್ಷಕರ ದಿನ. ೧೯೬೨ರಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ಈ ದೇಶದ ಮೊದಲ ಪ್ರಜೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕಾಲಕ್ಕೆ ಅವರ ಶಿಷ್ಯರು, ಅಭಿಮಾನಿಗಳು ಅವರ ಹುಟ್ಟುಹಬ್ಬವನ್ನಾಚರಿಸಲು ಒತ್ತಾಯಿಸಿದಾಗ ಅವರು ಅದನ್ನು ‘ಶಿಕ್ಷಕರ ದಿನ’ವೆಂದು ಆಚರಿಸಿದರೆ ಮಾತ್ರ ತಮ್ಮ ಒಪ್ಪಿಗೆ ನೀಡುವುದಾಗಿ ಹೇಳಿದರಂತೆ. ಸ್ವತಃ ತತ್ವ ಶಾಸ್ತ್ರ ಅಧ್ಯಾಪಕರಾಗಿ, ದೆಹಲಿ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಕೆಲಸ ಮಾಡಿದ್ದ ಅವರು ಶಿಕ್ಷಕ ವೃತ್ತಿಗೆ ತಂದು ಕೊಟ್ಟ ದೊಡ್ಡ ಗೌರವ, ಘನತೆಗಳನ್ನು ಈ ಕಾಲದ ಶಿಕ್ಷಕರು ಉಳಿಸಿಕೊಂಡಿದ್ದಾರೆಯೇ ಎನ್ನುವುದೂ ಇಲ್ಲಿ ಬಹು ಮುಖ್ಯ ಪ್ರಶ್ನೆ.


ಸಾಕ್ರೆಟಿಸ್ ಕೂಡ ಗುರುವಾಗಿದ್ದವನೇ. ಅವನು ಸ್ವತಃ ತನ್ನನ್ನೇ ಕಲಿಕೆಗೆ ತೊಡಗಿಸಿಕೊಂಡವನೆಂದು ಭಾವಿಸಿದ್ದನೇ ಹೊರತು ಪಾಠ ಹೇಳುವ ಕಸುಬು ತನ್ನದಲ್ಲವೆಂದೇ ಪರಿಭಾವಿಸಿದ್ದ. ಅವನು ಜಾಣ್ಮೆ ಮತ್ತು ಒಳ್ಳೆಯತನಗಳು ಪ್ರೀತಿ ಮತ್ತು ಸ್ನೇಹದಿಂದ ಹುಟ್ಟುವುವೆಂಬ ಪರಮ ಸತ್ಯದ ಪ್ರತಿಪಾದಕನೂ ಆಗಿದ್ದ. ಶಿಷ್ಯನ ಕಲಿಕೆಗೆ ತಾನೊಂದು ತೃಣ ಮೂಲವೆಂದೇ ನಂಬಿದ್ದ ಸಾಕ್ರೆಟೀಸ್, ಕಲಿಯುವವನಿಗೆ/ಕಲಿಸುವವನಿಗೆ  ಬೇಕಿರುವ ತಾಳ್ಮೆ ಮತ್ತು ಶ್ರಮಗಳನ್ನು ಎಂದೂ ದುರುಪಯೋಗ ಮಾಡಿಕೊಳ್ಳಲೇ ಇಲ್ಲವಂತೆ.

ಕಲಿಕೆಯ ಕಾಲದ ಸರಿಸುಮಾರು ೨೫,೦೦೦ ಗಂಟೆಗಳನ್ನು ವಿದ್ಯಾರ್ಥಿಯೊಬ್ಬನು ವ್ಯಯಿಸಬೇಕಾಗುತ್ತದೆ. ಶಿಕ್ಷಕರೇ ಇಲ್ಲದ ಶಾಲೆಗಳು, ಸೂರೇ ಇಲ್ಲದ ಶಾಲೆಗಳು, ಹೊಸತೇನನ್ನೂ ಕಲಿಸದೇ ತಮ್ಮ ಸರ್ವಿಸ್ ಮುಗಿಸುವ ಶಿಕ್ಷಕರೂ ತುಂಬಿರುವ ಈ ದಿನಮಾನಗಳ ಶೈಕ್ಷಣಿಕ ಜಗತ್ತು ತಾನು ಕೊಡಬೇಕಾದ ಸವಲತ್ತು ಮತ್ತು ನಿರ್ವಹಿಸಬೇಕಾದ ಜವಾಬ್ದಾರಿಗಳನ್ನು ಸ್ವತಃ ಆಲೋಚಿಸಿದೆಯೇ ಎಂದರೆ ಅದು ನಿರಾಶೆಗೊಳಿಸುವ ಸ್ಥಿತಿಯಲ್ಲಿದೆ.

ವಿಶ್ವ ವಿದ್ಯಾಲಯಗಳ/ಕಾಲೇಜು ಅಧ್ಯಾಪಕರಿಗೆ ಯು.ಜಿ.ಸಿ ವೇತನ ನೀಡುವ ಸರಕಾರ ಅವರನ್ನೆಂದಿಗೂ ಇತರ ಕೆಲಸಗಳಿಗೆ ಬಳಸಿಕೊಳ್ಳುವುದಿಲ್ಲ. ಜೊತೆಗೆ ವಾರಕ್ಕೆ ಹೆಚ್ಚೆಂದರೆ ಐದಾರು ಗಂಟೆಗಳ ಪಾಠ ಹೇಳಬೇಕಿರುವ ಅವರಲ್ಲಿ ಹೆಚ್ಚಿನವರು ತಮ್ಮ ವೃತ್ತಿಯನ್ನೆಂದೂ ಗೌರವದ ಹುದ್ದೆಯೆಂದು ಭಾವಿಸಿರುವುದೇ ಇಲ್ಲ. ಹುಡುಗರಿಗೆ ಬೇಕೋ ಬೇಡವೋ ಸಿಲೆಬಸ್ ಮುಗಿಸಿ ಕೈ ತೊಳೆದುಕೊಳ್ಳುವ ಇವರಿಗೆ ಕಾಲೇಜಿನ ಫಲಿತಾಂಶಕ್ಕಿಂತಲೂ ತಮ್ಮ ಇಂಕ್ರಿಮೆಂಟು, ಡಿ.ಎ ಹೆಚ್ಚಳಗಳಲ್ಲೇ ಪರಮ ಆಸಕ್ತಿ. ಅನೇಕ ವಿಶ್ವವಿದ್ಯಾಲಯಗಳು ವ್ಯವಸ್ಥೆಯ ವಿರುದ್ಧ ಯುವಜನರನ್ನು ಸಂಘಟಿಸುವ ಕೇಂದ್ರಗಳಾಗಿವೆಯೆಂಬ ಕೂಗೂ ಇತ್ತೀಚೆಗೆ ಮಾರ್ದನಿಗೊಳ್ಳುತ್ತಿದೆ.

ಪಿ.ಯು.ಕಾಲೇಜುಗಳ ಉಪನ್ಯಾಸಕರಿಗೆ ಇಬ್ಬಂದಿಯಲ್ಲಿ ತೊಡಗಿಕೊಂಡ ವಯಸ್ಸಿನ ಹುಡುಗರೊಂದಿಗೆ  ಒಡನಾಟ.
ಹದಿ ಹರೆಯದ, ಎಳಸಿನ್ನೂ ಮಾಗಿರದ ಹುಡುಗರಿಗೆ ತಮ್ಮ ಭಾವಿ ಜೀವನದ ಕನಸುಗಳು ಚಿಗುರೊಡೆಯುವ ಕಾಲ. ಈಗಿನ ವ್ಯವಸ್ಥೆಯಲ್ಲಂತೂ ಪಿ.ಯು ವಿದ್ಯಾಭ್ಯಾಸ ಉನ್ನತ ಶಿಕ್ಷಣದ ಹೆಬ್ಬಾಗಿಲಾಗಿರುವುದರಿಂದ ವಿಜ್ಞಾನ ವಿಭಾಗದ ಹುಡುಗರಿಗಂತೂ ಇದು ಅಗ್ನಿಪರೀಕ್ಷೆಯ ಕಾಲ. ಸಿ.ಇ.ಟಿಯ ಕೋಚಿಂಗ್ ಕ್ಲಾಸುಗಳಿಂದ ಲಕ್ಷಗಟ್ಟಲೆ ಬಾಚುತ್ತಿರುವ ಮೇಸ್ಟ್ರುಗಳಿಗಂತೂ ಸುಗ್ಗಿಯ ಹಬ್ಬ. ಇನ್ನು ಕಲೆ ಅಥವ ವಾಣಿಜ್ಯ ವಿಭಾಗದ ಹೆಚ್ಚಿನ ವಿದ್ಯಾರ್ಥಿಗಳಿಗೆ ಕಾಲೇಜೆನ್ನುವುದು ಮೋಜಿನ ಕೂಟ. ಅವರನ್ನು ಕಾಯುವುದೇ ಉಪನ್ಯಾಸಕರ ಕಾಯಕ.

ಪ್ರೌಢ ಶಿಕ್ಷಣದ ಹೊತ್ತಿಗಾಗಲೇ ಜೊಳ್ಳುಕಾಳುಗಳೆಲ್ಲ ತೂರಿ ಹೋಗಿ ಗಟ್ಟಿ ಕಾಳುಗಳಷ್ಟೇ ಉಳಿದಿರುವುದರಿಂದ ಈ ಹಂತದ ಶಿಕ್ಷಕರು ತಮ್ಮ ವೃತ್ತಿಯಲ್ಲಿ ಹೆಚ್ಚು ಶ್ರಮ ವಹಿಸದೇ ಆದರೆ ಎಸ್.ಎಸ್.ಎಲ್.ಸಿ ಎಂಬ ಗುಮ್ಮನನ್ನು ಎದುರಿಸುವ ಧೈರ್ಯವನ್ನು ಹುಡುಗರಿಗೆ ತುಂಬಬೇಕಿರುತ್ತದೆ. ಈ ಹಂತದ ವಿದ್ಯಾಭ್ಯಾಸದಲ್ಲಿ ವಿದ್ಯಾರ್ಥಿಯ ಪೋಷಕರ ಪಾಲೂ ಮುಖ್ಯವಾಗಿರುವುದರಿಂದ ಮತ್ತು ಮುಂದಿನ ವಿದ್ಯಾಭ್ಯಾಸದ ಅಂದಾಜು ಈಗಲೇ ದಕ್ಕುವುದರಿಂದ ವಿದ್ಯಾರ್ಥಿಗಳನ್ನು ತಯಾರು ಮಾಡುವ ಕಠಿಣ ಕೆಲಸ ಸರಿಸಮನಾಗಿ ಹಂಚಿಹೋಗಿರುತ್ತದೆ.

ಆದರೆ ಪ್ರಾಥಮಿಕ ವಿದ್ಯಾಭ್ಯಾಸದ ಕಾಲವೆಂದರೆ ಅದು   ಸಸಿಯೊಂದು ನೆಟ್ಟ ಸ್ಥಳದಲ್ಲಿ ಗಟ್ಟಿಯಾಗಿ ನಿಂತು ಗಿಡವಾಗಬೇಕಾದ, ರೂಪಾಂತರಕ್ಕೆ ಕಾತರಿಸುವ ರಸನಿಮಿಷವಾಗಿದೆ. ಹಾಗಾಗಿ ಈ ಹಂತದ ವಿದ್ಯಾಭ್ಯಾಸದಲ್ಲಿ ವಿದ್ಯಾರ್ಥಿಗಿಂತಲೂ ಅವನನ್ನು ತಯಾರು ಮಾಡುವ ಶಿಕ್ಷಕನ ಜವಾಬ್ದಾರಿ ಮುಖ್ಯವಾಗಿರುತ್ತದೆ. ಸುತ್ತಲಿನ ಕಳೆಕಿತ್ತು ಆ ಗಿಡದ ಪರಿಪೋಷಣೆಯ ಕರ್ತವ್ಯ ನಿಭಾಯಿಸುವ ಛಲ ತೋರಿಸಬೇಕಾಗುತ್ತದೆ. ಕಾಲಕಾಲಕ್ಕೆ ಬೇಕಾದ ಗೊಬ್ಬರ, ನೀರು, ನಿಯಂತ್ರಣ ಹಾಗೂ ಅನ್ಯ ಸಂಕರಣಗಳಿಂದಲೂ ಸಸಿಯನ್ನು ಕಾಪಾಡುವ ನೈತಿಕತೆಯನ್ನು ಬಿತ್ತಬೇಕಿರುವ ಕಾಲ ಇದಾಗಿರುತ್ತದೆ.

ದುರಂತವೆಂದರೆ ನಮ್ಮ ಬಹಳಷ್ಟು ಪ್ರಾಥಮಿಕ ಶಾಲೆಗಳಲ್ಲಿ ಮೂಲ ಸೌಲಭ್ಯಗಳ  ಕೊರತೆಯಿದೆಯೆಂದು  ಸರ್ಕಾರವೇ ಒಪ್ಪಿಕೊಂಡಿದೆ. ‘ಸರ್ವ ಶಿಕ್ಷಣ ಅಭಿಯಾನ’, ‘ಮರಳಿ ಬಾ ಶಾಲೆಗೆ’, ಇತ್ಯಾದಿ ಯೋಜನೆಗಳ ಅನುಷ್ಠಾನಕ್ಕಾಗಿ ಕೋಟಿಗಟ್ಟಲೆ ವ್ಯಯಿಸುವ ಸರ್ಕಾರ, ಇಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು ಹುರುಪುಗೊಳಿಸುವ  ಕೆಲಸವನ್ನಾಗಲೀ, ಕಾಲ ಕಾಲಕ್ಕೆ ಬೇಕಾಗುವ ತರಬೇತಿಯನ್ನಾಗಲೀ ವ್ಯವಸ್ಥಿತವಾಗಿ ನೀಡುತ್ತಿಲ್ಲ. ಶಿಕ್ಷಕರ ಸಹಕಾರವಿಲ್ಲದೇ ಒಂದೇ ಒಂದು ಚುನಾವಣೆಯನ್ನು ನಡೆಸುವ ಸ್ಥಿತಿಯಲ್ಲಿ ಸರ್ಕಾರವಿಲ್ಲ. ಜನ ಗಣತಿ, ದನ ಗಣತಿಗಳೆಂದು ವರ್ಷವಿಡೀ ಅಂಕಿ ಸಂಖ್ಯೆಗಳ ಮಾಯಾಲೋಕದಲ್ಲೇ ಅವರನ್ನು ಇರಿಸುವ ನಮ್ಮ ವ್ಯವಸ್ಥೆ ಇತ್ತೀಚಿನ ‘ಅಕ್ಷರ ದಾಸೋಹ’ದ ಸಮರ್ಪಕ ಅನುಷ್ಠಾನಕ್ಕೂ ಇವರನ್ನೇ ಬಳಸಿಕೊಳ್ಳುತ್ತಿದೆ. ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲೆಲ್ಲೂ ಜವಾನರ ಹುದ್ದೆಯೇ ಇಲ್ಲದಿರುವುದರಿಂದ ಶಾಲೆಯ ಕಸ ಗುಡಿಸುವ ಕೆಲಸವನ್ನು ನಮ್ಮ ಚಿಣ್ಣರ ಪುಟ್ಟ ಕೈಗಳೇ ಮಾಡುತ್ತಿವೆಯೆನ್ನುವುದೂ ನಮ್ಮಲ್ಲಿ ಬಹಳ ಜನಕ್ಕೆ ಗೊತ್ತಿಲ್ಲ.     

ಸರ್ಕಾರಿ ಶಾಲೆಗಳ ಸ್ಥಿತಿ ಹೀಗಿದ್ದರೆ ಖಾಸಗಿ ಶಾಲೆಗಳ ಸ್ಥಿತಿ ಇದಕ್ಕಿಂತ ಇನ್ನೂ ಶೋಚನೀಯವಾಗಿದೆ. ಬಹಳಷ್ಟು ಖಾಸಗೀ ಪ್ರಾಥಮಿಕ ಶಾಲೆಗಳು ಸರ್ಕಾರದ ಅನುದಾನವಿಲ್ಲದೇ ನಡೆಯುತ್ತಿರುವುದರಿಂದ ಇಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಸರಿಯಾದ ಸಂಬಳ ಸಿಕ್ಕುವುದೇ ಇಲ್ಲ. ಹಾಗಾಗಿ ಕನಿಷ್ಠ ವಿದ್ಯಾರ್ಹತೆಯೂ ಇಲ್ಲದ ಮಂದಿ ಶಿಕ್ಷಕರಾಗಿ ಕೆಲಸಮಾಡುವುದರಿಂದ ನಮ್ಮ ಪುಟ್ಟ ಮಕ್ಕಳ ಭವಿಷ್ಯ ಅದೆಷ್ಟು ಉಜ್ವಲವಾಗಿ ಬೆಳಯಬಲ್ಲುದೆಂಬುದು ನಮ್ಮ ಲೋಕ ಜ್ಞಾನಕ್ಕೆ ಬಿಟ್ಟ ಸಂಗತಿಯಾಗಿದೆ. ಜೊತೆಗೇ ಮಧ್ಯಮ ವರ್ಗದವರೆಲ್ಲರೂ ಖಾಸಗಿ ಶಾಲೆಗಳಿಗೇ ತಮ್ಮ ಮಕ್ಕಳನ್ನು ಸೇರಿಸುವುದರಿಂದಾಗಿ ಸರ್ಕಾರೀ ಶಾಲೆಗಳಲ್ಲಿ ಉಳಿಯುವ ಮಕ್ಕಳೆಂದರೆ ಒಂದೋ ಪೋಷಕರ ಗಮನದಲ್ಲಿಲ್ಲದ ಪೋಲಿಗಳು ಅಥವ ಬಡತನ ರೇಖೆಗಿಂತಲೂ ಕಡಿಮೆ ಇರುವ ಮತ್ತು ಹೆಚ್ಚಿನ ವೇಳೆ ಮಧ್ಯಾಹ್ನದ ಬಿಸಿ ಊಟದ ಆಸೆಗೆ ಶಾಲೆಗೆ ಬರುವ ಮಕ್ಕಳು.

ಇಂಥ ಮಕ್ಕಳ ಜೊತೆ ಬಡಿದಾಡಿ ಪಾಠ ಪ್ರವಚನ ಹೇಳಬೇಕಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಪರಿಶ್ರಮಕ್ಕೆ  ತಕ್ಕ ಪ್ರತಿಫಲ ಅವರಿಗಿದೆಯೇ? ಮೊನ್ನೆ ಮೊನ್ನೆ ನಡೆದ ಶಿಕ್ಷಕಿ ಪ್ರೇಮಳ ದುರಂತ ಮರಣದ ನೆನಪೂ ಸಾರ್ವಜನಿಕ ನೆನಪಿನಿಂದ ಮರೆಯಾಗಿ ಹೋಗಿದೆ. ಶಾಲಾ ಉಸ್ತುವಾರಿ ಸಮಿತಿಗಳಂತೂ ರಾಜಕೀಯದ ಕೂಪಗಳಾಗಿರುವುದರಿಂದ ಘನತೆಯಿಂದ ಬದುಕಬೇಕೆನ್ನುವ ಶಿಕ್ಷಕನನ್ನು ಆ ಕನಸಿನಿಂದಲೂ ದೂರ ದೂಡುತ್ತಿವೆ.

ಪ್ರಾಥಮಿಕ ಶಾಲೆಯ ಶಿಕ್ಷಕರಷ್ಟು ರಾಜಕೀಯ ಮಾಡುವ ಎದೆಗಾರಿಕೆ ಉಳಿದ ಸರ್ಕಾರಿ ನೌಕರರಿಗಿಲ್ಲವೆಂಬುದೂ ಅಷ್ಟೇ ಸತ್ಯದ ವಿಚಾರ. ನಮ್ಮ ಬಹುತೇಕ ರಾಜಕೀಯ ನಾಯಕರ ಬೇರುಗಳಿರುವುದೇ ಈ ಶಿಕ್ಷಕರೆಂಬ ಹಣೆಪಟ್ಟಿಯಲ್ಲಿರುವ ಹಳ್ಳಿಗಾಡಿನ ಜನರನ್ನು ಮರುಳುಗೊಳಿಸುವ ಊಸರವಳ್ಳಿಗಳಲ್ಲಿ. ಪಾಠ ಮಾಡುವುದಿರಲಿ ಶಾಲೆಯ ಹೊಸ್ತಿಲನ್ನೇ ತುಳಿಯದೇ ತಿಂಗಳು ತಿಂಗಳು ಸಂಬಳ ಎಣಿಸಿಕೊಳ್ಳುವವರೂ ಸಾಕಷ್ಟು ಮಂದಿ ಇದ್ದಾರೆ.

‘ಶಿಕ್ಷಕರ ದಿನಾಚರಣೆ’ಯ ಈ ಮಹತ್ವದ ದಿನದಲ್ಲಾದರೂ ಅವರ ವೃತ್ತಿಗಿರುವ ಘನತೆ ಗಾಂಭೀರ್ಯಗಳನ್ನು ಅವರು ಉಳಿಸಿಕೊಳ್ಳುವ ಸಂಕಲ್ಪ ಮಾಡಲಿ. ಹಾಗೇ ಸಮಾಜವನ್ನು ತಿದ್ದಿ ತೀಡಿ ಬೆಳಸುತ್ತಿರುವ ಆ ಇಡೀ ಶಿಕ್ಷಕ ಸಮುದಾಯವನ್ನು ಆದರಿಸಿ, ಗೌರವಿಸುವ ಸಂಕಲ್ಪ ಎಲ್ಲೆಡೆಯಿಂದಲೂ ಮೂಡಿ ಬರಲಿ.