ಒಟ್ಟು ಪುಟವೀಕ್ಷಣೆಗಳು

ಶುಕ್ರವಾರ, ಅಕ್ಟೋಬರ್ 30, 2009

ರಾಜ್ಯೋತ್ಸವ ವಿಶೇಷ

ವಿಜಯನಗರ ಸಾಮ್ರಾಜ್ಯ ೧೫೨೬ಕ್ಕೆ ಪತನಗೊಂಡ ನಂತರ ಕನ್ನಡಿಗರಿಗೆ ಒಂದು ಅಖಂಡ ರಾಜ್ಯ ಇಲ್ಲವಾಯಿತು. ಕಾವೇರಿಯಿಂದ ಕೃಷ್ಣಾನದಿ ಮತ್ತು ಪಶ್ಚಿಮ ಘಟ್ಟದ-ಕರಾವಳಿಯಿಂದ ಆಂಧ್ರದ ತೆಲಂಗಾಣದವರೆಗೂ ಕನ್ನಡಿಗರ ನಾಡು ಅಖಂಡವಾಗಿ ಉಳಿದಿತ್ತು. ಚಾಲುಕ್ಯರು ರಾಷ್ಟ್ರಕೂಟರುಕಟ್ಟಿದ ಕರ್ನಾಟಕ ಸಾಮ್ರಾಜ್ಯ ಕನ್ನಡ ಭಾಷೆ, ಸಾಹಿತ್ಯ, ಕಲೆ, ತತ್ವಜ್ಞಾನ ಜನಪದಗಳ ಸುಂದರ ನೆಲೆಯಾಗಿತ್ತು. ಕನ್ನಡಿಗರಿಗೆ ಹೆಮ್ಮೆ ತರುವ ವಾತಾವರಣ ಇತ್ತು. ಮುಂದೆ ನಾನಾ ಅನ್ಯ ಅರಸರ ಆಳಿಕೆ ಸುರುವಾಗಿ ಕನ್ನಡನಾಡು ಅಖಂಡವಾಗಿ ಬೆಳೆಯುವ ಅವಕಾಶ ಕಳಚಿಕೊಂಡು, ಕೆಲವು ಭಾಗಗಳು ಅನಾಥವಾದುವು;ಹಿಂದುಳಿದುವು;ಸ್ವಂತಿಕೆಯ ಲಕ್ಷಣಗಲು ಮಾಯವಾದುವು.
ಈ ಪರಿಸ್ಥಿತಿ ೧೯೫೬ರವರೆಗೂ ಇತ್ತು. ಅಂದರೆ ಮೈಸೂರು ರಾಜ್ಯ ಎಂದು ಪುನರ್ನಿಮಾಣವಾಗುವವರೆಗೆ ಕನ್ನಡಿಗರು ಚದುರಿಹೋಗಿದ್ದರು. ೧೯೨೦ರಲ್ಲಿ ಭಾರತದಲ್ಲಿ ಸ್ವಾತಂತ್ರ್ಯ ಚಳವಳಿ ವೇಗದಿಂದ ಮುನ್ನಡೆಯತೊಡಗಿತೋ ಆಗ, ಹೊಸ ಶಿಕ್ಷಣದ ಅರಿವಿನಿಂದ ಗತ ವೈಭವದ ನೆನಪಿನಿಂದ ಕನ್ನಡಿಗರು ಎಚ್ಚೆತ್ತರು. ಬೇರೆ ಬೇರೆ ಭಾಗಗಳಲ್ಲಿ ಒಡೆದು ಹೋಗಿದ್ದ ನಾಡನ್ನು ಒಂದುಗೂಡಿಸುವ ಸಂಕಲ್ಪ ಹುಟ್ಟಿತು. ಇದಕ್ಕೆ ನಾಂದಿ ಹಾಡಿದವರು ಆಲೂರು ವೆಂಕಟರಾಯರು. ಏಕೀಕರಣದ ಮಂತ್ರ ಹೇಳಿ, ನಾಡಿಗರನ್ನು ಎಚ್ಚರಿಸಿದ ಆಲೂರರು ‘ಕರ್ನಾಟಕ ಕುಲ ಪುರೋಹಿತ’ರೆನಿಸಿದ್ದಾರೆ.
೧೯೦೭ರಿಂದ ಏಕೀಕರಣ ಚಳವಳಿ ಆರಂಭವಾಯಿತು. ರಾಷ್ಟ್ರೀಯ ಚಳವಳಿ ನಡೆದದ್ದು ಬ್ರಿಟಿಷರ ವಿರುದ್ಧ. ಅದರ ಜತೆಗೇ ನಡೆದ ಏಕೀಕರಣ ಚಳವಳಿ ಯಾರ ವಿರುದ್ಧವೂ ಆಗಿರದೆ ಕನ್ನಡದ ‘ನವೋದಯ’ದಪರವಾಗಿ. ಕನ್ನಡಿಗರಲ್ಲಿ ಸ್ವಂತಿಕೆಯನ್ನು ರೂಢಿಸಿಕೊಳ್ಳುವ ಅಗತ್ಯವಿತ್ತು. ಹಳೆಯದನ್ನು ಹೊಸಬೆಳಕಿನೊಂದಿಗೆ ಮುಂದುವರೆಸಿಕೊಂಡು, ಕನ್ನಡದ ದಾರಿ ನಿರ್ಮಿಸಿಕೊಳ್ಳುವ ಅಗತ್ಯವಿತ್ತು.
ಕನ್ನಡದ ದಾರಿ ಎಂದರೆ, ನಮ್ಮತನವನ್ನು ಉಳಿಸಿಕೊಂಡು ಬೆಳೆಸಿಕೊಂಡು ಜ್ಞಾನ-ವಿಜ್ಞಾನದ ಸಹಕಾರದಿಂದ ಹೊಸತನವನ್ನು ಸಾಧಿಸುವುದು. ಕನ್ನಡಗಳು ಕರ್ನಾಟಕದಲ್ಲಿವೆ. ಅವುಗಳ ನಡುವೆ ಇರುವ ವ್ಯತ್ಯಾಸಗಳು ಉಚ್ಚಾರಣಾಕ್ರಮದ್ದು. ಆದರೆ ಶಿಷ್ಟ ಕನ್ನಡ ಎಂಬುದು ಒಂದಿದೆ. ಅದರಲ್ಲಿ ಈ ನಾಡಿನ ಭಾವೈಕ್ಯದ ಬೀಜಗಳಿವೆ. ಭಾವೈಕ್ಯವೇ ಸಹಕಾರದ ಮೂಲ. ಕನ್ನಡ ಜ್ಞಾನದಿಂದ ರಾಜ್ಯವನ್ನು ಕಟ್ಟಿದಾಗ ಪರಂಪರೆಯ ಸೊಗಸು ಬರುತ್ತದೆ. ಭಾವ ಪರಂಪರೆಗೆ ಕಾರಣವಾದ ಹಳೆಯ ಅಂಶಗಳೆಂದರೆ ಸಾಹಿತ್ಯದಲ್ಲಿ ದಾಖಲಾಗಿರುವ ಕನ್ನಡಿಗರ ಚರಿತ್ರೆ. ಕವಿರಾಜ ಮಾರ್ಗಕಾರನು ೧,೧೫೦ ವರ್ಷಗಳ ಹಿಂದೆ ಇದನ್ನೇ ಹೇಳಿದ್ದ: ನಾಡವರ್ಗಗಳು ವಿವಿಧ. ಬಣ್ಣಗಳು ಹಲವು. ಆದರೆ ವಿವೇಕ ಒಂದೇ. ರಾಜಕೀಯ ದೌರ್ಬಲ್ಯಗಳಿಂದಾಗಿ ವಿವೇಕ ಮರೆತಿತ್ತು. ಕನ್ನಡದ ವಿವೇಕ ಸಾಹಿತ್ಯದಲ್ಲಿ, ಸಂಗೀತದಲ್ಲಿ ರಕ್ತಗತವಾಗಿದೆ. ಅದನ್ನು ಎಲ್ಲರೂ ಸಾಮೂಹಿಕವಾಗಿ ಗಮನಕ್ಕೆ ತಂದುಕೊಂಡು, ಭಾಷಿಕ ಏಕಾತ್ಮ ಭಾವ ಅನುಭವಿಸಬೇಕು. ಆದರೆ ಪರಕೀಯ ಆಡಲಿತದಲ್ಲಿ ಅದು ಸಾಧ್ಯವಾಗಲಿಲ್ಲ. ೩೦ ವರ್ಷಗಳ ಚಳುವಳಿಯ ನಂತರ ಗಾಂಧೀಜಿಯ ಭಾಷಾವಾರು ಪ್ರಾಂತ ರಚನೆ ತತ್ವದ ಮೇರೆಗೆ ಕನ್ನಡಿಗರಿಗೆ ಅಖಂಡ-ಸಂಯುಕ್ತ ರಾಜ್ಯ ಆಡಲಿತಕ್ಕೆ ಸಿಕ್ಕಿತು-ಅದೇ ರಾಜ್ಯೋದಯ.
ಕನ್ನಡದ ಶಕ್ತಿಯುಕ್ತಿಗೆ ಐತಿಹಾಸಿಕ ಪರಂಪರೆ ಇದೆ. ಅದನ್ನು ಮರೆಯದಂತೆ, ಹೊರಗಿನ ಕೆಟ್ಟ ಪ್ರಭಾವಗಳಿಗೆ ಸಿಗದಂತೆ ಕನ್ನಡವನ್ನು ಮಾತಿನಲ್ಲಿ, ಆಡಳಿತದಲ್ಲಿ, ಬರಹದಲ್ಲಿ ಬಳಸಿ ಉಳಿಸಿಕೊಳ್ಳಬೇಕಾಗಿದೆ. ‘ಕನ್ನಡ’ ಭಾರತದಲ್ಲಿ ಶಾಸ್ತ್ರೀಯ ಸ್ಥಾನ ಪಡೆದ ಮೂರನೇಯ ಭಾಷೆ. ಇದರ ಹೆಮ್ಮೆ, ಅಭಿಮಾನ ಸಾಮೂಹಿಕವಾಗಿ ಇದ್ದಾಗ-ಕನ್ನಡ-ಕನ್ನಡಿಗ-ಕರ್ನಾಟಕ-ಮೂರಕ್ಕೂ ನೆಲೆ,ಬೆಲೆ.
-ಸರ್ವಜಿತ, ಹುಬ್ಬಳ್ಳಿ

ಕಾಮೆಂಟ್‌ಗಳಿಲ್ಲ: