“ಚಂದಿರನೇತಕೆ ಓಡುವನಮ್ಮ ಮೋಡಕೆ ಹೆದರಿಹನೆ?” ಶಿಶು ಗೀತೆಯ ಸಾಲುಗಳು ನೆನಪಾದಾಗಲೆಲ್ಲ ನಮ್ಮೊಂದಿಗೆ ಓಡುತ್ತೋಡುತ್ತಲೇ ತಾನು ಮಾತ್ರ ಇದ್ದಂತೆಯೇ ಇರುವ ಚಂದ್ರನ ಬಗ್ಗೆ ಮತ್ಸರ ಹುಟ್ಟುತ್ತದೆ. ಅಳುವ ಮಕ್ಕಳಿಗೆಲ್ಲ ಚಂದಮಾಮನಾಗಿ ಬಂದು ಸಮಾಧಾನ ಮಾಡುವ ಅವನು, ಹದಿಹರಯದವರಲ್ಲಿ ಕುತೂಹಲ ಹುಟ್ಟಿಸುತ್ತ, ಪ್ರೇಮಿಗಳಿಗೆ ಸಂತಸದ ಸಂಭ್ರಮವನ್ನೇ ಹರಿಸುವ ಚಂದ್ರಮ ಮುಪ್ಪಡರಿದವರ ಜೊತೆ ಜೊತೆಗೇ ಹೆಜ್ಜೆ ಹಾಕುತ್ತ ಅವರ ಒಂಟಿತನ ನೀಗಿಸುತ್ತಾನೆ.
ಚಂದ್ರಿಕೆಯ ಬೆಳಕನ್ನೇ ಉಂಡು ಸುಖಿಸುವ ಚಕೋರ ಪಕ್ಷಿಯ ವಿಚಾರವೂ ಎಲ್ಲರಿಗೆ ತಿಳಿದದ್ದೇ ಆಗಿದೆ. ಗಣಪನಿಂದ ಶಪಿತನಾದ ಚಂದ್ರನ ಕತೆಯೂ ನಮಗೆ ಗೊತ್ತು. ಇನ್ನು ಈ ಚಂದ್ರನ ತಿಂಗಳ ಬೆಳಕಿನ ಬಗ್ಗೆ ಗೊತ್ತಿರದವರು ಯಾರಿದ್ದಾರೆ?
ಹಾಲು ಸುರಿದಂತೆ ಬೆಳದಿಂಗಳೆಂದು ಒಬ್ಬರು ಹೇಳಿದರೆ ಹಿಟ್ಟು ಚೆಲ್ಲಿದಂತೆ ಬೆಳದಿಂಗಳೆಂದು ಮತ್ತೊಬ್ಬರ ವಾದ. ಚೆಲ್ಲಲು ಹಾಲು ಸಿಕ್ಕಬಹುದಾದರೂ ಹಾಗೆ ಚೆಲ್ಲಿದ ಹಾಲು ನೆಲದಲ್ಲಿಂಗದೇ ಉಳಿಯಲು ಸಾಧ್ಯವೆ? ಹಿಟ್ಟನ್ನು ಚೆಲ್ಲಿದ್ದಾರೆನ್ನುವವರಿಗೂ ಅಷ್ಟೊಂದು ಹಿಟ್ಟು ಅದೆಲ್ಲಿ ಸಿಕ್ಕುತ್ತದೋ ಗೊತ್ತಿಲ್ಲ.
ಒಟ್ಟಿನಲ್ಲಿ ಉಪಮೆ ಇಲ್ಲದೆ ಗುಣ ವರ್ಣನೆ ಸಾಧ್ಯವಿಲ್ಲದ ಸಂಗತಿ. ಇವನ್ನೆಲ್ಲ ಕವಿತ್ವವೆಂದು ಕರೆದು, ವಿಜ್ಞಾನದ ಮೂಲಕ ಚಂದ್ರನನ್ನು ಕಾಣಹೋದರೂ ಸುತ್ತಿಕೊಳ್ಳುವುದು ಮತ್ತದೇ ಬೆಳದಿಂಗಳು. ಗುರುತ್ವಾಕರ್ಷಣೆಯ ತತ್ವದ ಮೇಲೆ ನಿಂತಿರುವ ನಮ್ಮ ಸೌರ ಮಂಡಲದ ಗ್ರಹಗಳಿಗೆ ಅವುಗಳ ತಾಕತ್ತಿಗೆ ತಕ್ಕಂತೆ ಚಂದ್ರರು ಅವರವರನ್ನು ಸುತ್ತುತ್ತಿದ್ದಾರೆ. ನಮ್ಮ ಭೂಮಿಗೆ ಪಾಪ ಈ ಚಂದ್ರನೊಬ್ಬನೇ ದಿಕ್ಕು. ಆಕಾಶದ ತುಂಬ ಹರಡಿರುವ ಅದೆಷ್ಟೋ ಅಸಂಖ್ಯ ನಕ್ಷತ್ರಗಳು, ತಿಂಗಳ ಬೆಳಕಲ್ಲಿ ಚಂದ್ರನ ಮನೆಯ ಮಿಣುಕು ದೀಪಗಳಂತೆ ಕಾಣುವುದೂ ಸತ್ಯದ ಮಾತೇ!
ಭೂಮಿಯ ಪ್ರದಕ್ಷಿಣೆಯಲ್ಲೇ ಆಯಸ್ಸು ಕಳೆಯುತ್ತಿರುವ ಚಂದ್ರ, ಸೂರ್ಯನ ಬೆಳಕನ್ನೇ ಎರವಲು ಪಡೆದ ಭೂಪ. ನಾವಾಗಲೇ ಅವನ ಮೇಲೂ ಹತ್ತಿಳಿದು ಬಂದು ಕವಿಕಲ್ಪನೆಗಳನೆಲ್ಲ ಸುಳ್ಳು ಮಾಡಿದ್ದೇವೆ. ಆದರೂ ತಿಂಗಳು, ತಿಂಗಳ ಚಂದ್ರನ ವೈಭವದ ಮುಂದೆ ಯಾವ ರಾಜ ಮಹಾರಾಜರ ದರ್ಬಾರು ಕಳೆಗಟ್ಟೀತು?
ಇನ್ನು ಚಂದ್ರನಿಗೂ, ಅಮೃತಕ್ಕೂ ಅವಿನಾವ ಸಂಬಂಧ. ಅವನೊಳಗಿರುವ ಹದಿನಾರು ಕಲೆಗಳಿಂದೊಡಗೂಡಿದ ಅಮೃತವನ್ನು ದೇವ ದೇವತೆಗಳು ಬೇಡಿ ಪಡೆಯುತ್ತಾರಂತೆ. ಹುಣ್ಣಿಮೆಯಂದು ನಳ ನಳಿಸುವ ಚಂದ್ರ ದಾನಾರ್ಥಿಗಳಿಗೆ ಸ್ವಲ್ಪ ಸ್ವಲ್ಪವೇ ಅಮೃತವನ್ನು ಹಂಚುತ್ತ ಕಡೆಗೆ ತಾನೇ ಇಲ್ಲವಾಗುತ್ತಾನೆ. ಅಮಾವಾಸ್ಯೆಯ ಕಾಳಕತ್ತಲೆಯಲ್ಲಿ ಹೊಸ ಜ್ಞಾನ ಸಂಪಾದಿಸಿ, ದಿನದಿಂದ ದಿನಕ್ಕೆ ಮತ್ತೆ ಅಮೃತ ಸಂಚಯನಕ್ಕೆ ತೊಡಗುವ ಚಂದ್ರ ನಮ್ಮ ಬದುಕಿಗೊಂದು ಅರಿವು ಹುಟ್ಟಿಸುತ್ತಾನೆ. ಕಷ್ಟ ಪಟ್ಟು ಪಡೆಯಬೇಕಿರುವ ಜ್ಞ್ನಾನ ಸಂಚಯನ ಆಸಕ್ತರೆಲ್ಲರಿಗೆ ಹಂಚಬೇಕಿರುವ ಔದಾರ್ಯ ಕಲಿಸುತ್ತಿದ್ದಾನೆ. ಅಂದರೆ ಸಂಪೂರ್ಣ ವಿದ್ಯೆ ನಮಗೆ ದಕ್ಕಿತೆಂದ ಕೂಡಲೇ ಅದನ್ನು ಬೇಡುವವರಿಗೆ ಹಂಚುತ್ತ ಪುನಃ ನಾವು ಖಾಲಿಯಾಗಬೇಕು. ಒಳಗೇ ತುಂಬಿಕೊಂಡಿದ್ದ ಅಹಂಕಾರ, ಮತ್ಸರ, ಕೊಬ್ಬುಗಳೆಲ್ಲ ಕರಗಿ ಉರಿವ ಕರ್ಪೂರದ ರೀತಿ ನಮಗೆ ಸಿದ್ಧಿಸಬೇಕು. ಹಾಗೆ ಮೂಡಿದ ಸ್ಥಿತಿಯಿಂದ ಮತ್ತೆ ಜ್ಞಾನ ಸಂಚಯನದ ಹಾದಿ ತುಳಿಯಬೇಕು.
ಇಂದಿನ ದಿನಗಳಲ್ಲಿ ಹೊಳೆಯುವ ನಿಯಾನ್ ಬೆಳಕಿನಲ್ಲಿ, ಝಗಮಗಿಸುವ ಸೋಡಿಯಂ ದೀಪಗಳಡಿಯಲ್ಲಿ ಚಂದ್ರನ ಚಂದ್ರಿಕೆಯ ತಂಪಿರಲಿ, ಅವನ ಇರುವಿಕೆಯೇ ಮರೆತು ಹೋಗುತ್ತಿದೆ. ಅಮಾವಾಸ್ಯೆ, ಹುಣ್ಣಿಮೆಗಳ ವ್ಯತ್ಯಾಸ ತಿಳಿಯದ ಹಾಗೆ ಬೀದಿ ದೀಪಗಳು ಬೆಳಗುತ್ತಲೇ ಇವೆ. ಹೊಳೆ ಹೊಳೆಯುವ ತಾರೆ, ಸುಡು ಸುಡುವ ಸೂರ್ಯನ ಪ್ರಖರತೆ, ಅಮಾವಾಸ್ಯೆಯ ದಟ್ಟ ತಿಮಿರ, ತಂಪೆರಚುವ ಹುಣ್ಣಿಮೆಯ ಹಾಲ್ಬೆಳಕು ಬರಿಯ ಪುಸ್ತಕಗಳಲ್ಲಿ, ಕವಿತೆಗಳ ಸಾಲುಗಳಲ್ಲಷ್ಟೇ ಕಾಣಬೇಕಾದ ಅನಿವಾರ್ಯತೆಯೊದಗಿದೆ. ಇಂಥ ಭವದ ಬದುಕಿನ ನಡುವೆಯೂ ನೈಸರ್ಗಿಕ ಬೆಳಕು-ಕತ್ತಲೆಗಳ ಬಗ್ಗೆ, ಕವಿಕಲ್ಪನೆಯ ಕನಸು- ನಿಜ ವಾಸ್ತವದ ಬಗ್ಗೆ, ಸುಡು ಬಿಸಿಲು- ಜೀವನ ಕ್ರಮದ ಬಗ್ಗೆ, ಕೊಂಚ ಯೋಚಿಸಿದರೆ ಸಾಕು, ನಮ್ಮೊಳಗೂ ಒಬ್ಬ ಚಂದ್ರ ಹುಟ್ಟುತ್ತಾನೆ. ಹೀಗೆ ಹುಟ್ಟುವ ಚಂದ್ರ ತರುವ ಬೆಳ್ಳಂ ಬೆಳಕಿನ ಹುಣ್ಣಿಮೆಯನ್ನು ಅನ್ಯರಿಗೂ ಸ್ಪರ್ಶಿಸುತ್ತ, ಬದುಕುವ ಕನಸೇ ಅಧ್ಭುತ.
ಈ ದಿಕ್ಕಿನಲ್ಲಿ ಆಲೋಚಿಸಲು, ಅಂದರೆ ನಮ್ಮೊಳಗೊಬ್ಬ ಚಂದ್ರನನ್ನು ಸೃಷ್ಟಿಸಿಕೊಳ್ಳಲು, ನಮ್ಮೊಳಗಿಗೆ ಎರವಲು ಬೆಳಕು ತರಲು ನಮಗೆ ನಾವೇ ಕೊಟ್ಟು ಕೊಂಡಿರುವ ಸವಲತ್ತುಗಳನ್ನು ಅಲಕ್ಷಿಸಬೇಕು. ಲೌಕಿಕದ ಸುಖಕ್ಕಿಂತಲೂ ಮಾನಸಿಕ ಸುಖದ ಬಯಕೆ, ಹರಳು ಕಟ್ಟಬೇಕು. ಆಗ ನಮ್ಮೊಳಗೆ ಹುಟ್ಟುವ ಚಂದ್ರ ತನಗೆ ತಾನೇ ಬೆಳದಿಂಗಳನ್ನು ಸೂಸುತ್ತ ಹೋಗುತ್ತಾನೆ.
ಇರಲಿ, ಒಂದು ಋತುವಿಗೆರಡು ಬಾರಿಯಂತೆ ಸಂಪೂರ್ಣ ಭೇಟಿ ಕೊಡುವ ಚಂದ್ರ ಋತು ವಿಲಾಸದ ಅಧ್ಯಯನಕ್ಕೆ ಸಹಕರಿಸುವ ರೀತಿಯೇ ಅನನ್ಯವಾದುದು. ವರ್ಷಾರಂಭದ- ಇಂಗ್ಲಿಷ್ ವರ್ಷವಲ್ಲ, ಯುಗಾದಿಯಿಂದ ಪ್ರಾರಂಭವಾಗುವ ನಮ್ಮ ವರ್ಷ- ವಸಂತದ ನೆಲದಲ್ಲಿ ಚಿಗಿತೆದ್ದ ಹಸಿರು ರಾಶಿಯ ನಡುವೆ ಚಿಗುರು ತಿನ್ನುತ್ತಲೇ ಹಾಡುವ ಕೋಗಿಲೆಗಳ ಪುಳಕದ ಹಗಲಿಗೆ ಸರಿಸಮವಾಗಿ ಜುಗಲಬಂದಿ ನೀಡುವ ರಾತ್ರಿಯನ್ನು ತಯಾರು ಮಾಡುವವನೇ ನಮ್ಮ ಚಂದ್ರ. ಶಾಂತಿರಸ್ತು, ಪುಷ್ಟಿರಸ್ತು, ತುಷ್ಠಿರಸ್ತು, ಎನ್ನುವ ಮೂರು ಮೂಲ ಉದ್ದೇಶದ ಚಂದ್ರ ಹರಿಸುವ ಶಾಂತಿ, ಸಮೃದ್ಧಿ, ಸಂತಸದ ಹೊನಲುಗಳು ಹಗಲ ಬೆಳಕಿನಲ್ಲೇ ಜೂಗರಿಸುತ್ತ ಕಾಲ ಕಳೆಯುವ ಅರಸಿಕರಿಗೆ ಸುಲಭವಾಗಿ ಅರ್ಥವಾಗುವಂಥದಲ್ಲ.
ಜಾತ್ರೆ, ಉತ್ಸವ, ತೇರುಗಳು ಚಂದ್ರನಿಲ್ಲದ ಹೊತ್ತಲ್ಲಿ ನಡೆಯುವದಪರೂಪ. ಅಮಾವಾಸ್ಯೆಯ ಲಕ್ಷ್ಮಿ ಪೂಜೆ, ತೀರ್ಥಹಳ್ಳಿಯ ಎಳ್ಳಮಾವಾಸ್ಯೆ ಜಾತ್ರೆಯಲ್ಲಿ ಮಾತ್ರ ಚಂದ್ರ ಇರುವುದಿಲ್ಲ. ಚಂದ್ರ ದರ್ಶನವೇ ಬೇಡದ ಭಾದ್ರಪದ ಶುಕ್ಲ ಚೌತಿಯ ಸಂಜೆ ಆಕಾಶದ ತುಂಬ ಸರ್ಚ್ ಲೈಟ್ ಹಚ್ಚಿಟ್ಟಂತೆ ಬೆಳಕ ಹರಡಿ ಕತ್ತೆತ್ತಿದವರೆಲ್ಲರ ಕಣ್ಣಿಗೂ ಬೀಳುವ ಚಂದ್ರ, ಯುಗಾದಿ ಚಂದ್ರ ದರ್ಶನದ ದಿನ ಮಾತ್ರ ಹುದುಕಿದರೂ ಸಿಗದೆ, ಕತ್ತು ಸೋತು ಕೆಳಗಿಳಿಸಿದ ಮೇಲೆ, ದೂರದಲ್ಲೆಲ್ಲೋ ಕಂಡು ಮಾಯವಾಗುತ್ತಾನೆ. ಹಾಗೆ ಅವನು ಕೊಟ್ಟ ದರ್ಶನದಲ್ಲೇ ಅವನು ಎಡಕ್ಕಿದ್ದನೋ, ಬಲಕ್ಕಿದ್ದನೋ ಎಂಬುದರ ಮೇಲೆ ಆ ವರ್ಷದ ಮಳೆ ಬೆಳೆಯ ಲೆಕ್ಕಾಚಾರ ಮಾಡುತ್ತಿದ್ದ ನಮ್ಮ ಹಿರಿಯರ ನೆನಪಿಸಿಕೊಳ್ಳುವುದೇ ಮತ್ತೊಂದು ಹುಣ್ಣಿಮೆಯ ಹಾಗೆ.
ಶ್ರಾವಣದ ಹುಣ್ಣಿಮೆಯ ವಿಶೇಷವೆಂದರೆ, ಅದು ತೊಟ್ಟ ಜನಿವಾರವನ್ನು ರಿವೈವ್ ಮಾಡಿಸುವ ಹಬ್ಬ. ಜನಿವಾರದ ಎಳೆಗಿಂತಲೂ ತೆಳ್ಳಗೆ, ಬೆಳ್ಳಗೆ, ಮೆತ್ತಗಿರುವ ಒತ್ತು ಶ್ಯಾವಿಗೆಯ ಹಬ್ಬ. ಆ ಶ್ಯಾವಿಗೆಗೆ ಎಳ್ಳು ಕಾಯಿರಸ ಬೆರಸಿದರೆ ಸಿಹಿ ಶ್ಯಾವಿಗೆ. ಕಡ್ಲೆ ಬೀಜದ ಒಗ್ಗರಣೆ ಕೊಟ್ಟು ಕೊತ್ತಂಬರಿಯಿಂದ ಅಲಂಕರಿಸಿದರೆ ಖಾರದ ಶ್ಯಾವಿಗೆ. ಒತ್ತು ಶ್ಯಾವಿಗೆಯ ಜೊತೆಗೆ ಒಬ್ಬಟ್ಟಿನ ಬೋನಸ್ಸು! ಶ್ರಾವಣದ ಜಡಿಮಳೆಯಲ್ಲಿ ಹೊರಗೆಲ್ಲೂ ಹೋಗಲಾಗದೇ ಕೂತು ಬೇಸರ ಬಂದವರಿಗೆ ಭೋಜನ ಪಂದ್ಯವೇರ್ಪಡಿಸಲು ಸಕಾಲ.
ಇನ್ನು ಪ್ರತಿ ಹುಣ್ಣಿಮೆಯ ಸಂಜೆ ಸತ್ಯನಾರಾಯಣ ಪೂಜೆ ನಡೆಸಿ, ಜನರ ಪಾಪ ಶೇಷಗಳೆಲ್ಲವನ್ನೂ ತೊಳೆಯುತ್ತಿರುವ ನಮ್ಮ ಅದೆಷ್ಟೋ ದೇವಸ್ಥಾನಗಳ ಸಮಿತಿಗಳಿಗಂತೂ, ಹುಣ್ಣಿಮೆಯೆಂದರೆ ಕಲೆಕ್ಷನ್. ಹುಣ್ಣಿಮೆ, ಅಮಾವಾಸ್ಯೆಗಳಲ್ಲಷ್ಟೇ ಚಿತ್ತ ವಿಭ್ರಮೆಗೊಳಗಾಗುವ ಜನರನ್ನು ಆಧುನಿಕ ವಿಜ್ಞಾನ ಅನುಮಾನದಿಂದ ನೋಡಿ, ಮನಶಾಸ್ತ್ರ ತಜ್ನರನ್ನು ಕಾಣುವಂತೆ ಸೂಚಿಸಿದರೂ, ಅದೇಕೆ ಹುಣ್ಣಿಮೆಯ ರಾತ್ರಿಗಳಲ್ಲಷ್ಟೇ ಸಮುದ್ರ ಉಕ್ಕಿ ಸೊಕ್ಕುತ್ತದೆ ಎನ್ನುವುದೂ ಗಮನಿಸಬೇಕಾದ ಸತ್ಯ. ಏಕೆಂದರೆ ಭೂಮ್ಯಾಕಾಶ, ನಕ್ಷತ್ರ, ನೀಹಾರಿಕೆಗಳ ಚಲನೆಯನ್ನೇ ಅಧ್ಯಯನಿಸುವ ಕಸುಬಿನವರಿಗೆ ಅದು ವಿಜ್ಞಾನ. ಅದನ್ನೇ ಅರೆ ಬರೆ ತಿಳಿದು, ಕುಂಡಲಿ ಹಾಕಿ ರವಿ, ಕುಜ, ಚಂದ್ರ ಎಂದು ಬರೆದು ಕವಡೆ ಹಾಕುವವನಿಗೆ ಶಾಸ್ತ್ರ. ನಮ್ಮ ಜನ ವಿಜ್ಞಾನಕ್ಕಿಂತ ಅಜ್ಞಾನವನ್ನೇ ಮೆಚ್ಚುವವರಾದ್ದರಿಂದ, ಭವಿಷ್ಯ ಹೇಳುವವರ ಭವಿಷ್ಯವಂತೂ ಉಜ್ವಲವಾಗಿಯೇ ಇರುತ್ತದೆ. ಅಮಾವಾಸ್ಯೆಯ ರಾತ್ರಿ ಭೂತ ಪ್ರೇತಗಳಿಗೆ ಇರುವಂತೆಯೇ ಹುಣ್ಣಿಮೆಯ ರಾತ್ರಿಗಳನ್ನು ಮೋಹಿನಿಯರಿಗೆ,ಬಾಣಂತಿ ದೆವ್ವಗಳಿಗೆ ಮೀಸಲಿಟ್ಟಿರುವ ನಮ್ಮ ಜನ ತಮಗೆಂದು ಮಾತ್ರ ಯಾವ ದಿನಗಳನ್ನೂ ನಿಗದಿಯಾಗಿಸಿಲ್ಲದಿರುವುದೇ ನಮ್ಮೆಲ್ಲ ಅಜ್ಞಾನದ ಮೂಲ ಸತ್ಯ.
ಚಂದ್ರನ ಅತಿ ಹತ್ತಿರದ ಸ್ನೇಹಿತನೆಂದರೆ ಮನ್ಮಥ. ಚಂದ್ರಿಕೆಯ ಸವಿಯಲ್ಲಿ ಪ್ರೇಮಿ ತೊಯ್ಯುತ್ತಿದ್ದರೆ, ಮನ್ಮಥನ ಬಾಣಗಳು ಇನ್ನೇನು ತಾಗುವವೆಂದೇ ಅರ್ಥ. ಇನ್ನು ಹೇಗೆ ತಾನೆ ಆ ಪ್ರ್ರೇಮಿ ರಾತ್ರಿಯ ಉದ್ದಗಲಗಳನ್ನಳೆಯದೇ ಬಿಡಲು ಸಾಧ್ಯ? ಶುಕ ಧ್ವಜ ಮನ್ಮಥ ತನ್ನ ಇಕ್ಷು ಚಾಪದಿಂದ ಸುಮ ಬಾಣಗಳನ್ನು ಬಿಡದಿರುತ್ತಿದ್ದರೆ, ಈ ಲೋಕದ ಜನರಿಗೆ ಅದು ಹೇಗೆ ತಾನೆ ಪ್ರೀತಿ- ವಿರಹಗಳ ಉತ್ಕಟತೆಯ ಅರಿವು ಬರುತ್ತಿತ್ತು? ಕಾಮನ ಹುಣ್ಣಿಮೆಯ ನೆನಪೇ ಮತ್ತೊಂದು ಹುಣ್ಣಿಮೆಯ ಅನುಭವವನ್ನು ಕೊಡಬಲ್ಲುದೆಂದರೆ, ಕಾಮನ ಹುಣ್ಣಿಮೆಯ ನೆನೆಯದೇ ಮುಂದಡಿಯಿಡುವುದು ಅಪರಾಧವಾದೀತು!
ಕಾಮನ ಹುಣ್ಣಿಮೆಯ ಸಾಂಪ್ರದಾಯಿಕ ಆಚರಣೆಗಿಂತಲೂ, ಹೊಸ ತಲೆಮಾರು ಅದನ್ನಾಚರಿಸುವಾಗ ಬದಲಾಯಿಸುತ್ತ ಬಂದ ರಿವಾಜುಗಳನ್ನು ಅಧ್ಯಯನ ಮಾಡಿದರೆ ಅದೇ ಒಂದು ವಿದ್ವತ್ ಪ್ರಬಂಧವಾಗಿಯೇ ಆಗುತ್ತದೆ. ಸ್ವಭಾವತಃ ಪುಕ್ಕಲು ಹುಡುಗರೂ, ಕಾಮೋತ್ಸವದ ದಿನ ತಮ್ಮ ಮಿತಿ ಮೀರಿ ವರ್ತಿಸುವ ರೀತಿಯೇ ಈ ಹಬ್ಬಕ್ಕಿರುವ ವಿಶೇಷತೆಯನ್ನು ಎತ್ತಿ ತೋರಿಸುತ್ತದೆ. ಒಂದೆರಡು ಸ್ವಾರಸ್ಯದ ಸಂಗತಿಗಳನ್ನಿಲ್ಲಿ ನೆನೆಯದೇ ಹೋದರೆ, ಈ ಬರಹ ಇಂಗಿನೊಗ್ಗರಣೆ ಇಲ್ಲದ ತಿಳಿಸಾರಿನಂತಾಗಿ ಬಿಡಬಹುದೆಂಬ ಭಯದಿಂದ ಆವನ್ನೀಗ ನೆನೆಯುತ್ತಿದ್ದೇನೆ.
ಕಾಮನ ಹುಣ್ಣಿಮೆಯ ಹಿಂದಿನ ರಾತ್ರಿ ಊರ ದೇವರ ಜಗಲಿಯಲ್ಲಿ ಆ ಒಂದು ರಾತ್ರಿಗೆಂದೇ ಪ್ರತಿಷ್ಠಾಪಿತನಾಗುವ ದೇವನೆಂದರೆ ಅದು ನಮ್ಮ ಮನ್ಮಥ ದೇವ. ಬತ್ತದ ಹುಲ್ಲಿನಲ್ಲಿ ತಯಾರಿಸಿದ ಮನುಷ್ಯ ಶರೀರ ಹೋಲುವ ಬೊಂಬೆಗೆ ಚಿಂದಿ ಪ್ಯಾಂಟು, ಶರಟುಗಳನ್ನು ತೊಡಿಸಿ, ಮನುಷ್ಯರಂತೇ ಕೂರಿಸುವ ಕೆಲಸ ಅನುಭವದ ಕೈಗಳಿಂದ ಮಾತ್ರ ಸಾಧ್ಯವಿರುವ ಸಂಗತಿ. ಹಾಗೆ ತಯಾರಾದ ಬೊಂಬೆಗೆ ಆ ರಾತ್ರಿಯ ಮಟ್ಟಿಗೆ ಕಡ ತಂದ ಸೂಟು ತೊಡಿಸಿ, ಅಟ್ಟೆ ಕಿತ್ತ ಬೂಟು ತೊಡಿಸಿ, ಆ ವರ್ಷದ ಹಿಟ್ ಸಿನಿಮಾದ ಹೀರೊ ಧರಿಸಿದ್ದ ಟೋಪಿ ಅಥವ ಹ್ಯಾಟು ತೊಡಿಸಿ, ಎಂ.ಜಿ.ಆರ್ ಕನ್ನಡಕ ತೊಡಿಸುವುದು ಕಿರಿಯರ ಕೆಲಸ.
ನಂತರ ದೇವಸ್ಥಾನದ ಅಟ್ಟದಲ್ಲಿ ಜೋಪಾನವಾಗಿ ತೆಗೆದಿರಿಸಿದ್ದ ಕಾಮ ದೇವನ ಹಸ್ತ, ಪಾದ, ಶಿರದ ಆಕೃತಿಗಳಿಗೆ ತಿಂಗಳ ಮೊದಲೇ ಧೂಳು ಹೊಡೆಸಿ, ಹೊಸ ಬಣ್ಣ ಹೊಡೆಸಿ, ಸಿಂಗರಿಸಿದ್ದ ಭಟ್ಟರು ಈ ಮೊದಲು ಹೇಳಿದ ಹಾಗೆ ತಯಾರಾದ ಬೊಂಬೆಗೆ ತೊಡಿಸಿ, ಪ್ರತಿಷ್ಠಾಪಿಸಿ, ಮಂಗಳಾರತಿ ಎತ್ತಿ ನಮಗವನನ್ನು ಹಸ್ತಾಂತರಿಸಿದರೆಂದರೆ ಮುಂದೆ ನಮ್ಮ ಹಿಗ್ಗು ಭುಗಿಲೆದ್ದು ಕುಣಿಯುತಿತ್ತು. ಅವನ ನಿವೇದನೆಗೆಂದೇ ಹೊಸ ಹೊಸ ಬಯ್ಗಳು ಹುಟ್ಟುತ್ತಿದ್ದವು. ಊರಿನ ಹಾದರದ ಸುದ್ದಿಗಳು ಪ್ರಚುರ ಪಡೆಯುತ್ತಿದ್ದುದೇ ಈ ಶುಭ ಸಂದರ್ಭದಲ್ಲಿ. ಕದ್ದು ಮುಚ್ಚಿ ನಡೆಯುತ್ತಿದ್ದ ಪ್ರಣಯ ಪ್ರಸಂಗಗಳು ಊರ ಹೆಬ್ಬಾಗಿಲಿನ ಮುಂದಿನ ಗೋಡೆಯಲ್ಲಿ ಇದ್ದಲಿನಲ್ಲಿ ರಾರಾಜಿಸಿ, ಬೆಳಗಾಗುವುದರಲ್ಲಿ ಎಲ್ಲರ ನಾಲಿಗೆಗಳಲ್ಲಿ ನಲಿದಾಡಲು ತೊಡಗುತ್ತಿದ್ದವು. ವೈದ್ಯರ ನಾಮಫಲಕ ನಾಪಿತನಂಗಡಿಗೆ ಹೋಗಿ, ನಾಪಿತನ ನಾಮ ಫಲಕ ನ್ಯಾಯವಾದಿಯ ಬಾಗಿಲಿನಲ್ಲಿ ತೂಗಾಡಿ, ಕತ್ತೆಯ ಬಾಲಕ್ಕೆ ಕಟ್ಟಿದ್ದ ಪಟಾಕಿ ಸಿಡಿದು ಉಬ್ಬಸದ ಸುಬ್ಬಣ್ಣಯ್ಯ ನಮಗೆಲ್ಲ ಸಹಸ್ರನಾಮ ಶುರುಮಾಡುತ್ತಿದ್ದರು.
ವರಾಡಕ್ಕೆಂದು ಮನೆಯಂಗಳ ತುಳಿಯುವ ಮೊದಲೇ ಅವರವರ ಯೋಗ್ಯತಾನುಸಾರ ಮನೆಯ ಚಿಕ್ಕ ಮಕ್ಕಳ ಮೂಲಕ ತಮ್ಮ ದೇಣಿಗೆ ಕಳಿಸಿದ ಹಿರಿಯರು ಹೆಣ್ಣು ಮಕ್ಕಳನ್ನು ಮನೆಯಿಂದ ಹೊರಗೆ ಕಾಲಿಡದಂತೆ ಕಾಯುತ್ತಿದ್ದರು.
ಕೆಲವು ರಸಿಕ ಶಿಖಾಮಣಿ ಮುದಿಗೊಡ್ದುಗಳು ತಮಗೆ ಗೊತ್ತಿದ್ದ ಕಾಮನ ಪದಗಳನ್ನು ನಮಗೆ ಕದ್ದು ಬರೆದು ಕೊಟ್ಟು ನಾವದನ್ನು ಹಾಡುವಾಗ ಕೇಳಿ ಖುಶಿಪಡುತ್ತ, ದೇಣಿಗೆಯ ಮೊತ್ತಕ್ಕೆ ತಮ್ಮ ಪಾಲೂ ಸೇರಿಸಿ ಧನ್ಯವಾಗುತ್ತಿದ್ದವು. ನಾವು ವರ್ಷವಿಡೀ ಬಾಯಿ ಮುಚ್ಚಿಕೊಂಡು ಮನದಲ್ಲೇ ಧ್ಯಾನಿಸಿದ ಪ್ರಸಂಗಗಳಿಗೆಲ್ಲ ಜೀವ ಬಂದು, ನಮ್ಮೊಳಗಿದ್ದ ಕವಿ ಮಹಾಶಯ ಹೊರಗೆ ಬರುತ್ತಿದ್ದ. ಅದರಲ್ಲೂ ಆಷು ಕವಿತ್ವವಿದ್ದವರಿಗಂತೂ ಮಿಂಚಲು ಒಳ್ಳೆಯ ಅವಕಾಶ ಅದಾಗಿತ್ತು.ಹೀಗೆ ಪ್ರಸಂಗಗಳೆಲ್ಲ ಜೋಗದ ಜಲಪಾತದಂತೆ ಸುರಿದು ಬೀಳುತ್ತಿರುವಾಗ ಸಂನ್ಯಾಸಿಗಳಿಗೂ ಕೋಗಿಲೆಯ ಸ್ವರ ಕೇಳುತ್ತಿತ್ತು.
ಖರ್ಚಿಗೆ ಕಾಸು ಗಿಟ್ಟಿಸಿದ ನಂತರ ಕಾಮದಹನಕ್ಕೆ ಸೌದೆಯ ಉಸ್ತುವಾರಿ. ತೊಟ್ಟಿಲಿನಿಂದ ಆಕಾಶ ಬುmಯವರೆಗೂ ಮನೆಗಳಿಂದ ಸಂಗ್ರಹಿಸಿದ ಬಿದಿರು ಸಾಮಾನುಗಳ ಜೊತೆಗೆ ಮನೆಗಿಷ್ಟೆಂದು ಎತ್ತಿ ತಂದ ಸೌದೆ, ಮರ, ಮುಟ್ಟು. ಮನೆ ಮುಂದಿನ ಗೇಟಿಗೆಂದು ನಿಲ್ಲಿಸಿದ್ದ ಉಣುಗೋಲಿನಿಂದ ಹಿಡಿದು ಏಣಿ ಕಾಲು, ಚಪ್ಪರದ ಗೂಟ, ಹೂವು ಕೀಳುವ ಕೋಲು ಎಲ್ಲವೂ ಕಾಮನ ಚಪ್ಪರಕ್ಕೆ ಬಂದು ಬೀಳುತ್ತಿದ್ದವು. ಹೀಗೆ ಕದ್ದು ತಂದ ಸಾಮಾನುಗಳನ್ನು ಮನೆಗೊಯ್ಯಲು ಬಂದವರಿಗೆ ಬಯ್ಗಳದ ಸ್ವಾಗತ ಕಾದಿರುತ್ತಿದ್ದುದರಿಂದ ಊರ ಮನೆಗಳ ಹಿರಿಯರು ತಮ್ಮ ತಮ್ಮ ಮನೆಯ ಹಿತ್ತಲಿನಲ್ಲಿ ಬಿಡಾರ ಹೂಡಿಕೊಂಡು ನಾವ್ಯಾರೂ ಅವರ ವಸ್ತುಗಳನ್ನು ಕದಿಯದಂತೆ ತಡೆ ಒಡ್ಡುತ್ತಿದ್ದರು. ಮಧ್ಯರಾತ್ರಿ ಕಳೆದ ನಂತರ ಕಾಮನ ರಥ ಊರ ಸಂಚಾರಕ್ಕೆ ಹೊರಡುತಿತ್ತು.
ಎತ್ತು ಕಟ್ಟಿದ ಕಾಮ ರಥದ ಚಾಲಕ ಅಂದರೆ ಕಾಮ ಸಾರಥಿ ಯಾರಾಗುತ್ತಾರೋ ಅವರಿಗೆ ಆ ವರ್ಷ ಮದುವೆ ಆಗೇ ಆಗುತ್ತದೆಂಬ ನಂಬಿಕೆ ಬಲವಾಗಿ ಇದ್ದುದ್ದರಿಂದ ಮದುವೆಯ ವಯಸ್ಸು ಬಂದು ಇನ್ನೂ ಮದುವೆಗೆ ಮನೆಯಲ್ಲಿ ಯಾವ ಸೂಚನೆಗಳೂ ದೊರೆಯದ ಹುಡುಗರು ನಾ ಮೊದಲು ತಾ ಮೊದಲೆಂದು ಕಾಮ ಸಾರಥಿಯಾಗಲು ಮುಂದೆ ಬರುತ್ತಿದ್ದರಿಂದ ಆಯಾ ಮನೆಯವರು ಆ ವರ್ಷ ಆ ಹುಡುಗನ ಮದುವೆಯ ವಿಷಯ ತೆಗೆಯಲೇ ಬೇಕಾಗುತಿತ್ತು. ಎತ್ತು ಕಟ್ಟಿದ ಬಂಡಿಯನ್ನು ಊರಿನ ಬೀದಿ ಬೀದಿಗಳಲ್ಲಿ ಓಡಿಸಿಕೊಂಡು ಹೋಗುವಾಗ ಆ ಕಾಮ ಸಾರಥಿಗಳ ಮುಖದಲ್ಲಿರುತ್ತಿದ್ದ ಕಾತರ, ಏನನ್ನೋ ಕುರಿತ ಅವರ ಕುತೂಹಲ, ಮುಖದ ಮೇಲೆ ಮೂಡಿದ್ದ ನಾಚಿಕೆ, ಉದ್ವೇಗಗಳನ್ನು ಮೀಟಿ, ಹರೆಯದ ಸಂಗೀತವನ್ನು ಅನ್ಯರೂ ಕೇಳುವಂತೆ ಆಗುತ್ತಿತ್ತು.
ಒಂದು ಗುಂಪು ಹೀಗೆ ಕಾಮನ ಮೆರವಣಿಗೆಯಲ್ಲಿ ಸಾಗಿದ್ದರೆ ಮತ್ತೊಂದು ಗುಂಪು, ಹುಡುಗರನ್ನು, ಅವರ ಚೇಷ್ಟೆಗಳನ್ನು ಸುಮ್ಮ ಸುಮ್ಮನೇ ಗದರಿಸುತ್ತ, ತಮ್ಮ ಹಿರಿತನವನ್ನು ತೋರ್ಪಡಿಸುತ್ತಿದ್ದವರ ವಿರುದ್ಧ ತನ್ನ ಕಾರ್ಯಾಚರಣೆಯ ತಯಾರಿಯಲ್ಲಿರುತ್ತಿತ್ತು. ಆ ಮನೆಯವರೂ ಎಂಥ ಕಿಲಾಡಿಗಳೆಂದರೆ, ಅವರೇ ಸ್ವತಃ ಎದ್ದು ಕೂತು ಅವರ ಹಿತ್ತಲದ ಸಾಮನುಗಳ ನಿಗ ನೋಡುತ್ತಿದ್ದರು. ಆದರೆ ಕಾರ್ಯಾಚರಣೆಯ ಪಟ್ಟಿಯಂತೆ ಅವರ ಮನೆಯ ತೆಂಗಿನ ಮರದ ಎಲ್ಲ ಎಳನೀರು ಕಾಮೋತ್ಸವದ ಹುಡುಗರ ಬಾಯಾರಿಕೆ ತಣಿಸಬೇಕು. ಸರಿ, ಮುಂದಿನ ಉಪಾಯವೆಂದರೆ, ಬಂದ ಗುಂಪು ಎರಡಾಗಿ, ಮೊದಲ ಗುಂಪು ಆ ವ್ಯಕ್ತಿಯ ಜೊತೆ ಕ್ಷೇಮ ಸಮಾಚಾರ, ಲೋಕಾರೂಢಿಯ ಮಾತಿಗೆ ಇಳಿಯಿತು. ಸ್ವಭಾವತಃ ಮನುಷ್ಯರಾದವರೆಲ್ಲರೂ ಖುಷಿ ಕೊಡುವ ಸಂಗತಿಗಳಿಗೆ ಸ್ಪಂದಿಸುವ ರೀತಿಯಲ್ಲಿ ಆ ಹಿರಿಯರೂ ತಮ್ಮ ಕಾಲದ ಶೌರ್ಯ
ಸಾಹಸಗಳ ವರ್ಣನೆಗೆ ತೊಡಗಿದರೆ, ಈ ಹೊತ್ತಿಗಾಗಲೇ ಅವರ ತೆಂಗಿನ ಮರಕ್ಕೆ ಸೇದುವ ಹಗ್ಗದ ಸಮೇತ ಮರ ಹತ್ತುವವರು ಹತ್ತಿಯಾಗಿತ್ತು. ಮರದ ಮೇಲಿದ್ದವರು ಇಡಿ ಎಳನೀರಿನ ಕೊಂಬೆಯನ್ನೇ ಕತ್ತರಿಸಿ ಜೊತೆಗೊಯ್ದಿದ್ದ ಹಗ್ಗದ ಮೂಲಕ ಇಳಿಬಿಟ್ಟರೆ, ಆ ಕೊಂಬೆ ಹಗ್ಗದ ಮೇಲೆ ಜಾರುತ್ತ ಬರುತಿತ್ತು. ಕೆಳಗಿದ್ದವರು ಅದನ್ನು ಜೋಪಾನವಾಗಿ ಹೊತ್ತೊಯ್ಯುತ್ತಿದ್ದರು. ಇತ್ತ ತಮ್ಮ ಸಾಹಸ ವಿವರಣೆಯಲ್ಲಿದ್ದ ಹಿರಿಯರಿಗೂ ಕೆತ್ತಿ ತಂದ ಎಳನೀರಿನ ಉಪಚಾರ ನಡೆದು, ಅವರು ಅದನ್ನು ಕುಡಿದು ರುಚಿ ಕಂಡ ಮೇಲಷ್ಟೇ ನಮ್ಮೊಂದಿಗೆ ಜಗಳಕ್ಕಿಳಿಯುತ್ತಿದ್ದರು. ಸಾಹಸವೊಂದರ ಯಶಸ್ಸಿನಲ್ಲಿ ಬೀಗುತ್ತಿದ್ದ ನಮಗೆ ಅವರ ಬಯ್ಗಳು ಹೂ ಹಾರದ ಹಾಗೆ ಕಾಣುತ್ತಿದ್ದವು.
ಹುಣ್ಣಿಮೆಯ ಬೆಳ್ಳಂಬೆಳಗು ಬಾಯಿ ಬಡಿದು ಕೊಳ್ಳುತ್ತ ಆಕಾಶದೆತ್ತರಕ್ಕೆ ಉರಿ ಚಾಚುವ ಚಿತೆಗೆ ಕಾಮನ ಗೊಂಬೆಯನ್ನೆಸೆದು ಚಳಿಯಿಂದ ನಡುಗುತ್ತಿದ್ದ ಮೈ, ಮುಖಗಳಿಗೆ ಬೆಚ್ಚನೆಯ ಶಾಖವನ್ನು ಕೊಟ್ಟು ಕೊಳ್ಳುತ್ತ ಮುಂದಿನ ಕಾಮದಹನದವರೆಗೂ ವಟಗುಟ್ಟುವ ಬಾಯಿ, ಕದಿಯುವ ಕೈ, ಮತ್ತು ಬಂಡಾಯವೇಳುವ ಮನಸ್ಸಿನ ಹತೋಟಿ ಹೇಗೆ ಸಾಧ್ಯವೆಂದು ತಲೆತುರಿಸಿಕೊಳ್ಳುತ್ತ ಮನೆಗೆ ಹೋದರೆ ಅಮ್ಮ ತಲೆ ತುಂಬ ಹರಳೆಣ್ಣೆ ತಟ್ಟಿ ಅಭ್ಯಂಜನ ಮಾಡಿಸಿ, ಬೆಚ್ಚಗೆ ಹೊದಿಸಿ ಮಲಗಿಸುತ್ತಿದ್ದಳು. ನಿದ್ದೆಯಿಂದೆದ್ದು ಕಣ್ಣು ತೆರೆದರೆ ಹೊಯ್ಕೊಂಡ ಬಾಯಿಗೆ ಹೋಳಿಗೆ ತುಪ್ಪ ಬಡಿಸಿ ಆಗಷ್ಟೆ ಮೂಡುತ್ತಿದ್ದ ನಮ್ಮ ಮೀಸೆ ಮೊನೆಯನ್ನು ಅಪ್ಯಾಯವಾಗಿ ನೋಡುತ್ತ ಸಂಭ್ರಮಿಸುತ್ತಿದ್ದುದನ್ನು ಯಾವ ಶಾಲೆಯ ಯಾವ ಸಿಲೆಬಸ್ಸೂ ಒಳಗೊಳ್ಳುವ ಸಾಧ್ಯತೆ ಇಲ್ಲದಿರುವುದರಿಂದಲೇ ಈ ಕಾಲದ ಹುಡುಗರು ಹುಣ್ಣಿಮೆಯ ಬೆಳಕಿಗಿರುವ ಏನೆಲ್ಲ ಅಂತರಾರ್ಥಗಳನ್ನು ಗ್ರಹಿಸಲು ಸೋಲುತ್ತಿದ್ದಾರೆಯೆ ಎನ್ನುವ ಪ್ರಶ್ನೆ ಮೂಡಿಸಿಕೊಳ್ಳುತ್ತ ಚಂದ್ರಮ ಹರಿಸುವ ಚಂದ್ರಿಕೆಯಲ್ಲಿ ಕರಗುವ ಚಂದ್ರಕಾಂತ ಶಿಲೆಗಳು ನಮ್ಮ ಹೊಸ ಪೀಳಿಗೆಯ ಹುಡುಗರೆದೆಗೂ ಒಂದಿಷ್ಟು ಕನಸುಗಳನ್ನು ಬಿತ್ತಲಿ ಎಂದು ಹಾರೈಸೋಣ, ಅಲ್ಲವೇ?
ಬೆಂಕಿ ಕಡ್ಡಿ- ಬೆಳಕು,ಶಾಖ ಮತ್ತು ಉರಿಯ ಚಿಕ್ಕತುಂಡು.ನಾವೆಲ್ಲರೂ ಈ ಲೌಕಿಕದ ಬೆಂಕಿಯಲ್ಲಿ ಬೇಯುತ್ತಲೇ ಮತ್ತೊಂದು ಬೆಳಕು, ಶಾಖ ಮತ್ತು ಉರಿಯನ್ನು ಸೃಜಿಸುತ್ತಿರುವವರು.ಅದಕ್ಕೆಂದೇ ಈ ಬರಹಗಳ ಶೀರ್ಷಿಕೆ "ಬೆಂಕಿಕಡ್ಡಿ". ಈಗಾಗಲೇ ಪ್ರಕಟಿಸಿರುವ ಸಂಕಲನಗಳಿಂದ ಮತ್ತು ಹೊಸ ಪದ್ಯ ಹಾಗೇ ಆಕಾಶವಾಣಿಯ ಚಿಂತನಕ್ಕೆ ಬರೆದ ಲೇಖನಗಳನ್ನೂ ಸೇರಿಸುವ ಇರಾದೆ ಈ ಬ್ಲಾಗಿಗನಿಗೆ.
ಒಟ್ಟು ಪುಟವೀಕ್ಷಣೆಗಳು
ಬುಧವಾರ, ಮಾರ್ಚ್ 11, 2009
ಸೋಮವಾರ, ಮಾರ್ಚ್ 9, 2009
ಒಗೆತ
ನೀರೊಳಗೆ ಕೈ ಕಾಲು ಬಡಿಯುತ್ತ ಈಜುವ ಹಾಗಲ್ಲ-
ಅಂಗಾಂಗ ಕದಲಿಸದೇ ಹಾಗೇ ತೇಲುವ ಸುಖ
ಹರಿವ ನೀರಿನ ಶಬ್ದ, ಚರ್ಮಕ್ಕೆ ಕಚಗುಳಿಯಿಡುವ ಹರಿವು
ಮೀಯುತ್ತಲೇ ಮಾಯೆಯರಿಯುವ ತಂತ್ರ;
ಸಿದ್ಧಿಸದೇ ಒದ್ದೆ ಮೈಯಲ್ಲಿ ಬಟ್ಟೆ ತೊಳೆಯುವ ಹಾಗಲ್ಲ-
ಪ್ರತಿ ಒಗೆತಕ್ಕೂ ಬಣ್ಣ ಮಾಸಲಾಗುವ ಅರಿವೆ
ಕೊಳೆ ಕಲ್ಲಿಗೂ ಅಂಟಿ ನೀರು ಮಲಿನವಾಗುವ ಸತ್ಯ
ಬಗೆ ಬಗೆಯ ಬಟ್ಟೆಗಳಿಗೂ ಮತ್ತದೇ ಸೋಪ ಬುರುಜು;
ಜಾಲಿಸಿ, ಹಿಂಡಿ, ಬಂಡೆಯ ಮೇಲೆಲ್ಲ ಹರಡಿದಂತಲ್ಲ-
ಸಣ್ಣ ಗಾಳಿಗೇ ಹಾರಿ ಮತ್ತೆ ಕೊಚ್ಚೆಗೆ ಬೀಳುವ ಆಟ
ನೀಗುವುದಕ್ಕೆ ಬಟ್ಟೆಯ ಮೇಲೊಂದು ಪುಟ್ಟ ಕಲ್ಲಿನ ಭಾರ
ಹಿಮ್ಮಡಿ ಉಜ್ಜಿ ತೊಳೆದೇಳುವಷ್ಟರಲ್ಲಿ ಒಣಗಿ ಗಾರಾದ ಬಟ್ಟೆ;
ಕೊಳೆ ತೆಗೆದು ಮಡಿ ಮಾಡಿ ಮಾಟವಾಗಿ ಮಡಿಚಿಟ್ಟಂತಲ್ಲ-
ನದಿಯ ದಡದುದ್ದಕ್ಕೂ ಏಗಿ ಆಟ ಕಟ್ಟುವ ಸದ್ದು
ಹೊಳೆಗೇ ಹುಚ್ಚು ಹಿಡಿಸುವಂತೆ ಜಡಿದು ಸುರಿವ ಮಳೆಯೊಮ್ಮೆ
ತೇವವಷ್ಟನ್ನೂ ತಾನೇ ಕುಡಿದು ಢರ್ರನೆ ತೇಗುವ ಕ್ಷಾಮ ಮತ್ತೊಮ್ಮೆ;
ಮಿಂದು, ಮಡಿಯುಟ್ಟು, ಮಾದರಿಯಾಗುವುದುಂಟಲ್ಲ-
ಅದೆಂದರೆ ಹೊಳೆ ಮಧ್ಯದ ಬಂಡೆ ಸವೆತದ ಹಾಗೆ
ಬಟ್ಟೆ, ಬಟ್ಟೆ ತೊಳೆದವರು, ಈಜಿ ಸುಸ್ತಾಗಿ ವಿಶ್ರಮಿಸಿದವರು
ಬಂಡೆಯ ನುಣುಪಿಗೆ ಕಾರಣ ಧ್ಯಾನಿಸಿದವರು ಯಾರು, ಯಾರು?
ಅಂಗಾಂಗ ಕದಲಿಸದೇ ಹಾಗೇ ತೇಲುವ ಸುಖ
ಹರಿವ ನೀರಿನ ಶಬ್ದ, ಚರ್ಮಕ್ಕೆ ಕಚಗುಳಿಯಿಡುವ ಹರಿವು
ಮೀಯುತ್ತಲೇ ಮಾಯೆಯರಿಯುವ ತಂತ್ರ;
ಸಿದ್ಧಿಸದೇ ಒದ್ದೆ ಮೈಯಲ್ಲಿ ಬಟ್ಟೆ ತೊಳೆಯುವ ಹಾಗಲ್ಲ-
ಪ್ರತಿ ಒಗೆತಕ್ಕೂ ಬಣ್ಣ ಮಾಸಲಾಗುವ ಅರಿವೆ
ಕೊಳೆ ಕಲ್ಲಿಗೂ ಅಂಟಿ ನೀರು ಮಲಿನವಾಗುವ ಸತ್ಯ
ಬಗೆ ಬಗೆಯ ಬಟ್ಟೆಗಳಿಗೂ ಮತ್ತದೇ ಸೋಪ ಬುರುಜು;
ಜಾಲಿಸಿ, ಹಿಂಡಿ, ಬಂಡೆಯ ಮೇಲೆಲ್ಲ ಹರಡಿದಂತಲ್ಲ-
ಸಣ್ಣ ಗಾಳಿಗೇ ಹಾರಿ ಮತ್ತೆ ಕೊಚ್ಚೆಗೆ ಬೀಳುವ ಆಟ
ನೀಗುವುದಕ್ಕೆ ಬಟ್ಟೆಯ ಮೇಲೊಂದು ಪುಟ್ಟ ಕಲ್ಲಿನ ಭಾರ
ಹಿಮ್ಮಡಿ ಉಜ್ಜಿ ತೊಳೆದೇಳುವಷ್ಟರಲ್ಲಿ ಒಣಗಿ ಗಾರಾದ ಬಟ್ಟೆ;
ಕೊಳೆ ತೆಗೆದು ಮಡಿ ಮಾಡಿ ಮಾಟವಾಗಿ ಮಡಿಚಿಟ್ಟಂತಲ್ಲ-
ನದಿಯ ದಡದುದ್ದಕ್ಕೂ ಏಗಿ ಆಟ ಕಟ್ಟುವ ಸದ್ದು
ಹೊಳೆಗೇ ಹುಚ್ಚು ಹಿಡಿಸುವಂತೆ ಜಡಿದು ಸುರಿವ ಮಳೆಯೊಮ್ಮೆ
ತೇವವಷ್ಟನ್ನೂ ತಾನೇ ಕುಡಿದು ಢರ್ರನೆ ತೇಗುವ ಕ್ಷಾಮ ಮತ್ತೊಮ್ಮೆ;
ಮಿಂದು, ಮಡಿಯುಟ್ಟು, ಮಾದರಿಯಾಗುವುದುಂಟಲ್ಲ-
ಅದೆಂದರೆ ಹೊಳೆ ಮಧ್ಯದ ಬಂಡೆ ಸವೆತದ ಹಾಗೆ
ಬಟ್ಟೆ, ಬಟ್ಟೆ ತೊಳೆದವರು, ಈಜಿ ಸುಸ್ತಾಗಿ ವಿಶ್ರಮಿಸಿದವರು
ಬಂಡೆಯ ನುಣುಪಿಗೆ ಕಾರಣ ಧ್ಯಾನಿಸಿದವರು ಯಾರು, ಯಾರು?
ಭಾನುವಾರ, ಫೆಬ್ರವರಿ 8, 2009
ದುರ್ಗದ ಕವಿಗೋಷ್ಠಿ ಕೇಳಿ ಬಂದ ಮೇಲೆ.....
ಸಾಹಿತ್ಯದ ಹೆಸರಲ್ಲಿ ನಡೆಯುತ್ತಿರುವ ಜನಜಾತ್ರೆ ಚಿತ್ರದುರ್ಗದಲ್ಲಿ ಸಂಪನ್ನವಾಗಿದೆ. ಗೋಷ್ಠಿಗಳಲ್ಲಿ ಮಂಡಿಸಿದ ಪ್ರಬಂಧಗಳ ಮೇಲಣ ಚರ್ಚೆಗಳಿಗಿಂತಲೂ ಈ ಸಮ್ಮೇಳನ ವಿವಾದಗಳಿಂದ ಆರಂಭವಾಗಿ ವಿವಾದಗಳಲ್ಲೇ ಅಂತ್ಯ ಕಂಡಿದೆ. ಇಷ್ಟೂ ದಿನ ಮುದ್ರಿತ ವಿಚಾರಗಳನ್ನು ಹಲ್ಲುಬಿದ್ದ ಬಾಯಲ್ಲಿ ಅಸ್ಪಷ್ಟವಾಗಿ ಓದುತ್ತಿದ್ದ ಅಧ್ಯಕ್ಷೀಯ ಭಾಷಣದ ರೀತಿ ಬದಲಾಗಿ ಮಠ ಮಾನ್ಯಗಳನ್ನು., ವ್ಯವಸ್ಥೆಯನ್ನೂ ಛೀಕರಿಸುವ ಮೂಲಕ ಮಿಂಚಬಹುದೆನ್ನುವ ಮತ್ತು ಚಪ್ಪಾಳೆ ಗಿಟ್ಟಿಸಬಹುದೆನ್ನುವ ಅಪ್ಪಟ ಸತ್ಯ ಮತ್ತೆ ವಿಜೃಂಭಿಸಿದೆ. ಉಧ್ಘಾಟನೆಯ ನಂತರ ಮಾತ್ಯಾವುದೇ ಗೋಷ್ಠಿಗಳಲ್ಲೂ ಕಾಣಿಸಿಕೊಳ್ಳದ ಸಮ್ಮೇಳನಾಧ್ಯಕ್ಷರು ಮುಕ್ತ ಸಂವಾದದಲ್ಲಿ ಪಾಲ್ಗೊಂಡು ಮತ್ತೆ ವಿಜೃಂಭಿಸಿದ್ದಾರೆ. ಅಪರೂಪಕ್ಕೆಂಬಂತೆ ಮಾರುದ್ದದ ನಿರ್ಣಯಗಳ ಪಟ್ಟಿ ಬದಲಾಗಿ ಮೂರೇ ಮೂರು ನಿರ್ಣಯಗಳು ಸಮ್ಮೇಳನದ ಅಂಗಳದಿಂದ ಬಿಂಬಿಸಲ್ಪಟ್ಟಿವೆ.
ಅವ್ಯವಸ್ಥೆಯ ಆಗರವೆಂದು ನಮ್ಮ ಮಾಧ್ಯಮಗಳು ಈ ಸಮ್ಮೇಳನಕ್ಕೆ ಹಣಿಪಟ್ಟಿ ಕಟ್ಟಿದ್ದರೂ, ಈ ಹಿಂದಿನ ಸಮ್ಮೇಳನಗಲ್ಲೂ ಒಂದೆರಡು ದಿನಗಳ ಮಟ್ಟಿಗಾದರೂ ಭಾಗವಹಿಸುತ್ತಲೇ ಇರುವ ನನಗೆ ಅದೇನೂ ವಿಶೇಷ ಎನ್ನಿಸಲೇ ಇಲ್ಲ. ಈ ಹಿಂದೆ ತುಮಕೂರಿನ ಸಮ್ಮೇಳನದಲ್ಲಿ ಊಟ ತಿಂಡಿಗಳ ಸರತಿಯಲ್ಲೇ ನಿಂತು ನಿಂತು ಸಮ್ಮೇಳನ ಅವಧಿ ಪೂರೈಸಿದ ಸ್ನೇಹಿತರ ಅನುಭವ ನೆನಪಾಯಿತು. ಶಿವಮೊಗ್ಗದಲ್ಲೂ ಧೂಳಿನ ಜೊತೆಗೇ ವಿವಾದಗಳೂ ಕಣ್ಣಿಗೆ ಬಿದ್ದುದು ಮರೆತು ಹೋಗಿಲ್ಲ. ಕನಕಪುರದಲ್ಲಿ ಸಮ್ಮೇಳನದ ಅಂಗಳದ ತುಂಬ ಭೈರಪ್ಪ ಪರ-ವಿರೋಧದ ಮಾತುಗಳು ಕೈಕೈ ಮಿಲಾಯಿಸುವ ಮಟ್ಟಕ್ಕೆ ಮುಟ್ಟಿದ್ದೂ ನೆನಪ ನೆಲೆಯಿಂದ ದೂರವಾಗಿಲ್ಲ. ಹಾಗೇ ತಾವು ಭಾಗವಹಿಸ ಬೇಕಿರುವ ಗೋಷ್ಠಿಯ ಸಮಯಕ್ಕೆ ಆಗಮಿಸಿ ನಂತರ ಅಂತರ್ಧಾನವಾಗುವ ನಮ್ಮ ಹಿರಿಯ ಬರಹಗಾರ, ಲೇಖಕ, ಚಿಂತಕರ ಆಂತರ್ಯವೂ ಬದಲಾಗಿಲ್ಲ. ಕರೆಯದೇ ಬರಲು ಅವರೇನು ಗತಿಗೆಟ್ಟಿದ್ದಾರಾ ಅಂದರೆ ಪಾಪ ಪ್ರತಿ ಸಮ್ಮೇಳನದಲ್ಲೂ ಒ ಒ ಡಿ ಯ ಆಸೆಯಿಂದ ಬಂದು ಬೀದಿಗಳಲ್ಲೇ ಮಲಗಿ, ಹೊತ್ತು ಹೊತ್ತಿಗೆ ಊಟ ತಿಂಡಿಗಳಿಲ್ಲದೇ ಪರಿತಪಿಸಿಯೂ ಮತ್ತೆ ಮುಂದಿನ ಸಮ್ಮೇಳನ ಯಾವ ಊರಲ್ಲಿ ನಡೆಯುತ್ತೆ, ಅಲ್ಲಾದರೂ ಈ ನಾಯಿ ಪಾಡು ತಪ್ಪಲಿ ಎಂದು ಅಂದುಕೊಳ್ಳುತ್ತಲೇ ಬಸ್ಸು ಹತ್ತುವ ಲಕ್ಷಾಂತರ ಸಾಹಿತ್ಯಾಸಕ್ತ ಬಂಧುಗಳ ಅಲವತ್ತುಗಳನ್ನು ದಾಖಲಿಸಿದವರಾದರೂ ಯಾರು? ಚಿತ್ರದುರ್ಗದಿಂದ ವಾಪಸು ಬಂದು ಎರಡು ದಿನವಾದರೂ ಭವ್ಯ ವೇದಿಕೆ ಮತ್ತು ಪುಸ್ತಕದಂಗಡಿಗಳ ಸಾಲು ಮತ್ತೆ ಮತ್ತೆ ನೆನಪ ಜೇನನ್ನು ಮನಸ್ಸಿಗೆ ಉಣ್ಣಿಸುತ್ತಲೇ ಇವೆ.
ಹಾಗೆ ನೋಡಿದರೆ ನಮ್ಮ ಮಾಧ್ಯಮಗಳು ಬಿಂಬಿಸದಷ್ಟೇನೂ ವ್ಯವಸ್ಥೆ ಕೆಟ್ಟಿರಲಿಲ್ಲ. ಎಲ್ಲ ಸಮ್ಮೇಳನಗಳಲ್ಲೂ ನಡೆಯುವ ಹಾಗೇ ಈ ಸಮ್ಮೇಳನದಲ್ಲೂ ಯಾವ ಗೋಷ್ಠಿಗಳೂ ಸರಿಯಾದ ಸಮಯಕ್ಕೆ ಪ್ರಾರಂಭವಾಗಲಿಲ್ಲ. ಹಾಗಾಗಿ ಹೊತ್ತಿಗೆ ಸರಿಯಾಗಿ ಮುಗಿಯಲಿಲ್ಲ. ಅದರ ಕಾರಣದಿಂದ ಮುಂದಿನ ಗೋಷ್ಠಿಗಳೂ ಮುಂದು ಮುಂದಕ್ಕೆ ಹೋದವು, ಅಷ್ಟೆ! ಎಲ್ಲ ಕಡೆ ನಡೆಯುವ ಹಾಗೇ ಇಲ್ಲೂ ಸಾಹಿತ್ಯಕ್ಕಿಂತಲೂ ಸಾಹಿತ್ಯೇತರ ಸಂಗತಿಗಳಾದ ಕೃಷಿ, ಕೈಗಾರಿಕೆ, ರಾಜಕೀಯ, ಇತ್ಯಾದಿ ವಿಷಯಗಳಲ್ಲಿ ಚರ್ಚೆ-ಗೋಷ್ಠಿಗಳು ಎಡವುತ್ತೆಡುವತ್ತಲೇ ನಡೆದುವು. ಎಲ್ಲೆಲ್ಲಿ ರಾಜಕೀಯದವರನ್ನೂ, ಖಾಕಿಕಾವಿಗಳನ್ನೂ ಮನಬಂದಂತೆ ಹಳಿಯಲಾಯಿತೋ ಅಲ್ಲೆಲ್ಲ ಚಪ್ಪಾಳೆಗಳು ಮುಗಿಲು ಮುಟ್ಟಿದವು. ಆದರೆ ಊಟದ ವ್ಯವಸ್ಥೆಯಲ್ಲಿ, ಅಸ್ತವ್ಯಸ್ಥತೆಯನ್ನು ತಡೆಯುವುದರಲ್ಲಿ, ಇದೇ ಖಾಕಿ ಕಾವಿಗಳು ಹೆಣಗುತ್ತಿದ್ದುದನ್ನು ಅಪ್ಪಿತಪ್ಪಿ ಬಾಯಿ ಮಾತಿಗಾದರೂ ಹೇಳಲೇ ಇಲ್ಲ. ಇನ್ನು ಗೋಷ್ಠಿಗಳೋ ಅವುಗಳ ಸ್ವರೂಪಗಳೋ ಕಳೆದ ಎಪ್ಪತ್ತನಾಲ್ಕು ಸಮ್ಮೇಳನಗಳಲ್ಲಿ ನಡೆದುದರ ಪುನರಾವರ್ತನೆಯೇ! ಗೋಷ್ಠಿಗಳಲ್ಲಿ ಭಾಗವಹಿಸದವರಲ್ಲಿ ಬಹುತೇಕರು ಆಯಾ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿದವರಿದ್ದರೂ ಆಯ್ಕೆಯಲ್ಲಿ ಅನಿವಾರ್ಯ ಒತ್ತಡಗಳು ಇದ್ದೇ ಇರುತ್ತವೆ ಎನುವುದಕ್ಕೆ ಪುರಾವೆಯಾದುವು. ಸ್ವತಃ ಸಮ್ಮೇಳನಾಧ್ಯಕ್ಷರೇ ಅದರಿಂದ ಹೊರಗುಳಿದು ಹೊಸ ಭಾಷ್ಯ ಬರೆದ ವಿಶೇಷಕ್ಕೂ ಈ ಸಮ್ಮೇಳನವೇ ಮುನ್ನುಡಿ ಬರೆದುದೂ ಸ್ವಾರಸ್ಯ ದ ಸಂಗತಿ.
ಹಲವರಂತೆ ನಾನೂ ಸಮ್ಮೇಳನಗಳಲ್ಲಿ ಭಾಗವಹಿಸುವುದು ರಾಜ್ಯಾದ್ಯಂತ ಇರುವ ನನ್ನ ಅನೇಕ ಸ್ನೇಹಿತರೂ ಹಿರಿಯ ಬರಹಗಾರರೂ ಅಲ್ಲಿನ ಪುಸ್ತಕದಂಗಡಿಗಳಲ್ಲಿ ಸಿಕ್ಕೇ ಸಿಕ್ಕುತ್ತಾರೆನ್ನುವ ವಿಶ್ವಾಸದಿಂದ. ಮತ್ತು ಹಾಗೆ ಸಿಕ್ಕವರೊಡನೆ ನನ್ನ ಅನ್ನಿಸಿಕೆಗಳನ್ನೂ ಹಾಗೇ ಅನುಮಾನಗಳನ್ನೂ ಹಂಚಿಕೊಳ್ಳುವ ಮುಕ್ತ ಅವಕಾಶದ ಆಸೆಯಿಂದ. ಜೊತೆಗೇ ನನ್ನ ಸಹಬರಹಗಾರರ ತವಕ ತಲ್ಲಣಗಳನ್ನು ಮತ್ತವರ ಕಷ್ಠ ಸುಖಗಳನ್ನು ಮುಖತಾ ಹಂಚಿಕೊಳ್ಳಬಹುದೆನ್ನುವ ದುರಾಸೆಯಿಂದ!
ಆದರೆ ಈ ಸಮ್ಮೇಳನದಲ್ಲಿ ಹಿರಿಯ ಬರಹಗಾರರಿರಲಿ ಚಿತ್ರದುರ್ಗ ಸೀಮೆಯ ಅನೇಕ ಯುವ ಬರಹಗಾರರಾರೂ ಸಿಕ್ಕಲಿಲ್ಲ. ಸ್ವತಃ ಆ ಜಿಲ್ಲೆಯವರಾಗಿದ್ದೂ ಈಗಾಗಲೇ ತಮ್ಮ ಸಂಕಲನಗಳಿಂದ ಸಂಚಲನಗೊಳಿಸಿದ ಎಚ್.ಆರ್.ರಮೇಶ, ಆನಂದ ಋಗ್ವೇದಿ, ತಾರಿಣಿ, ಪಕ್ಕದ ಜಿಲ್ಲೆಯ ಅರುಣ ಜೋಳದಕೂಡ್ಲಿಗಿ, ಪೀರ ಭಾಷಾ, ಇವರಾರೂ ಕವಿಗೋಷ್ಠಿಯಲ್ಲಿ ಅಹ್ವಾನಿತರಾಗಿರಲೇ ಇಲ್ಲ. ಅಹ್ವಾನಿತ ಕವಿಗಳ ಪಟ್ಟಿ ಸಾಕಷ್ಟು ದೊಡ್ಡದಿದ್ದರೂ ಅಷ್ಟಿಷ್ಟು ಓದಿಕೊಂಡಿರುವ ಮತ್ತು ವರ್ತಮಾನದಲ್ಲಿ ಸಾಹಿತ್ಯ ಕೃಷಿ ಮಾಡುತ್ತಿರುವವರ ಹೆಸರುಗಳನ್ನು ಬಲ್ಲೆನೆಂಬ ನನ್ನ ವಿಶ್ವಾಸವನ್ನು ಆ ಪಟ್ಟಿ ಅಣಕಿಸಿತು. ನಾಲ್ಕೈದು ಹೆಸರುಗಳನ್ನು ಪತ್ರಿಕೆಗಳಲ್ಲಿ ಪ್ರಕಟವಾಗುವ ಕವಿತೆಗಳ ಮೂಲಕ ಗುರುತಿಸಿ ಹೊರತು ಪಡಿಸ ಬಹುದೇ ವಿನಾ ಉಳಿದವರೂ ಕವಿಗಳೆಂದು ಗೊತ್ತ್ತಾಗಿದ್ದೇ ನಿರೂಪಕರು ಅವರ ಕೃತಿಗಳನ್ನು ಹೆಸರಿಸಿದ ನಂತರ.
ಮೊದಲ ಕವಿಗೋಷ್ಠಿಯ ಆಶಯ ಭಾಷಣಮಾಡಿದ ಎಲ್.ಹನುಮಂತಯ್ಯನವರು ತಾವು ನೆಚ್ಚಿದ ಬಂಡಾಯದ ನೆಲೆಯನ್ನು ಮತ್ತೆ ಪ್ರಸ್ತಾಪಿಸುತ್ತಲೇ ಪದ್ಯವೊಂದನ್ನು ಓದಿದ ರೀತಿ ಪುಳಕಗೊಳಿಸಿತು. ಹನುಮಂತಯ್ಯ ಈಗಾಗಲೇ ಇಂಥ ಹತ್ತು ಹಲವು ಗೋಷ್ಠಿಗಳಲ್ಲಿ ಭಾಗವಹಿಸಿ ಇದೇ ಬಗೆಯ ಹತ್ತಿಪ್ಪತ್ತು ಭಾಷಣಗಳನ್ನು ನಮಗೆಲ್ಲ ಉಣಬಡಿಸಿದವರು. ಹಾಗೇ ಅಧ್ಯಕ್ಷತೆ ವಹಿಸಿದ್ದ ಸುಮತೀಂದ್ರ ನಾಡಿಗರಂತೂ ಅವರ ಪದ್ಯಗಳಿಗಿಂತಲೂ ಮಾತಿಗೆ ನಿಂತರೆ ಮುಗಿಸದ ಖ್ಯಾತಿಯವರು. ತಮ್ಮ ಹಳೆಯ ಎರಡು ಪದ್ಯಗಳನ್ನು ಅವರು ಆಕರ್ಷಕವಾಗಿ ಮಂಡಿಸಿದರಾದರೂ ಅವರು ಅಧ್ಯಕ್ಷೀಯ ಭಾಷಣವನ್ನು ಮಾಡಲಿಲ್ಲವೆನ್ನುವುದು ನನ್ನ ತಕರಾರು. ಕವಿಗೋಷ್ಠಿಯ ಅಧ್ಯಕ್ಷರು ಆ ಗೋಷ್ಠಿಯಲ್ಲಿ ಮಂಡಿಸಿದ ಕವಿತೆಗಳನ್ನು ಅವುಗಳ ವಿಷೇಷತೆಯನ್ನೂ ಹಾಗೇ ಕಾವ್ಯ ಹೊರಳಿದ ಹೊಸದಿಕ್ಕನ್ನೂ ಗುರ್ತಿಸಿ ಹೇಳಬೇಕಾದ ಜವಾಬ್ದಾರಿ ಇರುವಂಥವರು. ಅದರೆ ನಮ್ಮ ಮಾಧ್ಯಮಗಳು ಕಾಯುತ್ತಿರುತ್ತವೆ ಮತ್ತು ಗೋಷ್ಠಿಯ ಕಡೆಯವರೆಗೂ ಕೂರುವ ತಾಳ್ಮೆ ಕೆಲವರಿಗಿರುವುದಿಲ್ಲವೆಂಬ ನೆಪಒಡ್ಡಿ ಆಹ್ವಾನಿತ ಕವಿಗಳು ತಮ್ಮ ಪದ್ಯಗಳನ್ನು ಪ್ರಸ್ತುತಿಗೊಳಿಸುವ ಮೊದಲೇ ಅಧ್ಯಕ್ಷೀಯ ಮಾತುಗಳನ್ನು ಮುಗಿಸಿಬಿಡುವುದು ವರ್ತಮಾನದ ಕಾವ್ಯಕೃಷಿಕರಿಗೆ ತೋರಿಸುತ್ತಿರುವ ಅನಾದರವೆಂದೇ ನಾನು ಭಾವಿಸಿದ್ದೇನೆ. ಹಾಗೆಯೇ ಕಾವ್ಯಾಸಕ್ತರಾರಿಗೂ ಗೊತ್ತಿರದ ಮತ್ತು ಕೇವಲ ಪ್ರಾತಿನಿಧ್ಯದ ದೃಷ್ಟಿಯಿಂದಲೇ ತಯಾರಿಸುವ ಈ ಕವಿಪಟ್ಟಿಗೂ ನನ್ನ ಪರಮ ವಿರೋಧವನ್ನು ದಾಖಲಿಸುತ್ತಲೇ ಬಂದಿದ್ದೇನೆ. ಈ ಸಮ್ಮೇಳನದಲ್ಲೂ ನಿಜವಾದ ಕವಿತೆಗಳನ್ನು ಓದಿದವರು ಲಕ್ಷೀಪತಿ ಕೋಲಾರ, ಕಂಜರ್ಪಣೆ, ಬ.ಹ.ರಮಾಕುಮಾರಿ, ಬಿಳಿಗೆರೆ ಮತ್ತು ಹೆಸರು ನೆನಪಲ್ಲಿ ಉಳಿಯದ ಇನ್ನಿಬ್ಬರು ಮಾತ್ರ. ಗೆಳೆಯ ನಿಸಾರ್ ತನ್ನ ಕವಿತೆಯನ್ನು ಆಕರ್ಷಕವಾಗಿ ಮಂಡಿಸಿದನಾದರೂ ಆ ಬಗೆಯ ಕವಿತೆಗಳು ಕೇವಲ ಹೇಳಿಕೆಗಳಾಗುತ್ತವೆ ಮತ್ತು ಯಾರೂ ಬರೆಯಬಹುದಾದ ಸಾಲುಗಳಾಗುತ್ತವೆ ಎನ್ನುವುದನ್ನು ಮರೆಯಬಾರದು. ಕೆಲವು ಕವಿಗೋಷ್ಠಿಗಳಲ್ಲಿ ಖಾಲಿ ಕುರ್ಚಿಗಳಿಗೆ ಪದ್ಯ ಓದುವ ಅನಿವಾರ್ಯತೆಗಾಗಿ ಸಂಕಟ ಪಟ್ಟಿರುವ ನಾನು ದುರ್ಗದ ಕವಿಗೋಷ್ಠಿಯಲ್ಲಿ ಇಡೀ ಸಭಾಂಗಣ ಕಿಕ್ಕಿರಿದು ತುಂಬಿದ್ದ ಅಪ್ರತಿಮ ಕ್ಷಣಗಳಿಗೆ ಸಂತಸ ಪಟ್ಟಿದ್ದೇನೆ. ಹಾಗೆಯೇ ತುಂಬಿದ ಸಭೆಗೆ ಕಿಂಚಿತ್ತೂ ಸಾಥ್ ಕೊಡದ ಕವಿಗಣದ ಉಢಾಫೆಗೆ ಮರುಕ ಪಟ್ಟಿದ್ದೇನೆ.
ಕವಿಗೋಷ್ಠಿ ನಡೆಯುತ್ತಿರುವಾಗಲೇ ಅದಕ್ಕೆ ಜಯಂತ ಕಾಯ್ಕಿಣಿಯ ಸಾರಥ್ಯ ಸಿಕ್ಕು, ಸಂಧ್ಯಾದೇವಿ ಉದ್ಘಾಟಿಸಿ ಕವಿಪಟ್ಟಿಯಲ್ಲಿ ಎಸ್.ಮಂಜುನಾಥ್, ಪ್ರತಿಭಾ ಒಳಗೊಂಡಂತೆ ನಮ್ಮ ತಲೆಮಾರಿನ ಹತ್ತು ಹಲವು ಹೆಸರುಗಳನ್ನು ಕಲ್ಪಿಸಿಕೊಳ್ಳುತ್ತ ಹೋದೆ. ಆ ಕಲ್ಪನೆಯೇ ಒಂದು ಕವಿತೆಯಾಗಿ ಸಂತಸ ಮೈತುಂಬಿಕೊಳ್ಳುತ್ತಿರುವಾಗಲೇ ದುರ್ಗದ ರೈಲ್ವೇ ನಿಲ್ದಾಣವನ್ನು ಹೊತ್ತಿಗೆ ಸರಿಯಾಗಿ ಸೇರದಿದ್ದರೆ ಓಓಡಿ ಸೌಲಭ್ಯವಿಲ್ಲದ ನಾನು ಮಾರನೇ ದಿನಕ್ಕೂ ರಜೆ ಕೊಡಬೇಕಾಗುತ್ತದೆನ್ನುವ ನಿಜವಾಸ್ತವ ನೆನಪಾಗಿ ಸಮ್ಮೇಳನದ ಅಂಗಳದಿಂದ ನಿರ್ಗಮಿಸಿದೆ.
ಊರು ತಲುಪವವರೆಗೂ ಕಂಜರ್ಪಣೆಯವರೊಂದಿಗೆ ಕೆ.ಪಿ.ಸುರೇಶರ ಹೊಸ ಸಂಕಲನದ ಪದ್ಯಗಳನ್ನು , ವಸುದೇಂಧ್ರ ತಮ್ಮ ಅಂಗಡಿಯಲ್ಲಿ ಪುಸ್ತಕ ಮಾರುತ್ತಿದ್ದ ರೀತಿಯನ್ನು ಹಾಗೇ ಸಂಚಯದ ಸ್ಟಾಲಿನಲ್ಲಿ ಕನಸು ಕಂಡಿದ್ದ ಕವಿಗೋಷ್ಠಿ ಖದರು ಕಳೆದುಕೊಂಡುದನ್ನೂ ಮೆಲ್ಲುತ್ತ ಪ್ರಯಾಣಿಸಿದೆ. ಈಗ ನನ್ನೆದುರು ನಮ್ಮ ಪತ್ರಿಕೆಗಳು ಪ್ರಕಟಿಸಿದ ನಾಲ್ಕೂ ದಿನದ ಸಮ್ಮೇಳನದ ವಿವರಗಳನ್ನು ಹರಡಿಕೊಂಡಿದ್ದೇನೆ. ಉಡುಪಿಯಲ್ಲಿ ನಡೆದುದೇ ತುಮಕೂರಲ್ಲಿ ಘಟಿಸಿದುದೇ ಅಥವಾ ಕನಕಪುರದಲ್ಲಿ ಅಪ್ಪಳಿಸಿದ ಅಲೆಗಳೇ ಇಲ್ಲಿಯೂ ಮುಂದುವರೆದಿದೆ, ವರದಿಗಾರರ ಹೆಸರುಗಳೂ ವರದಿಗಾರಿಕೆಯ ರೀತಿಯೂ ಹೆಚ್ಚೇನೂ ಬದಲಾಗಿಲ್ಲ. ಇನ್ನು ಸಾಹಿತ್ಯ ಮಾತ್ರ ಸಮಾಜವನ್ನು ಬದಲಿಸಿಬಿಡುತ್ತದೆಂಬ ಹೇಳಿಕೆ ಎಷ್ಟು ಸರಿ ಎಷ್ಟು ತಪ್ಪು ಎಂಬ ಗೊಂದಲದಲ್ಲಿ ಉಳಿದಿದ್ದೇನೆ.
ಅವ್ಯವಸ್ಥೆಯ ಆಗರವೆಂದು ನಮ್ಮ ಮಾಧ್ಯಮಗಳು ಈ ಸಮ್ಮೇಳನಕ್ಕೆ ಹಣಿಪಟ್ಟಿ ಕಟ್ಟಿದ್ದರೂ, ಈ ಹಿಂದಿನ ಸಮ್ಮೇಳನಗಲ್ಲೂ ಒಂದೆರಡು ದಿನಗಳ ಮಟ್ಟಿಗಾದರೂ ಭಾಗವಹಿಸುತ್ತಲೇ ಇರುವ ನನಗೆ ಅದೇನೂ ವಿಶೇಷ ಎನ್ನಿಸಲೇ ಇಲ್ಲ. ಈ ಹಿಂದೆ ತುಮಕೂರಿನ ಸಮ್ಮೇಳನದಲ್ಲಿ ಊಟ ತಿಂಡಿಗಳ ಸರತಿಯಲ್ಲೇ ನಿಂತು ನಿಂತು ಸಮ್ಮೇಳನ ಅವಧಿ ಪೂರೈಸಿದ ಸ್ನೇಹಿತರ ಅನುಭವ ನೆನಪಾಯಿತು. ಶಿವಮೊಗ್ಗದಲ್ಲೂ ಧೂಳಿನ ಜೊತೆಗೇ ವಿವಾದಗಳೂ ಕಣ್ಣಿಗೆ ಬಿದ್ದುದು ಮರೆತು ಹೋಗಿಲ್ಲ. ಕನಕಪುರದಲ್ಲಿ ಸಮ್ಮೇಳನದ ಅಂಗಳದ ತುಂಬ ಭೈರಪ್ಪ ಪರ-ವಿರೋಧದ ಮಾತುಗಳು ಕೈಕೈ ಮಿಲಾಯಿಸುವ ಮಟ್ಟಕ್ಕೆ ಮುಟ್ಟಿದ್ದೂ ನೆನಪ ನೆಲೆಯಿಂದ ದೂರವಾಗಿಲ್ಲ. ಹಾಗೇ ತಾವು ಭಾಗವಹಿಸ ಬೇಕಿರುವ ಗೋಷ್ಠಿಯ ಸಮಯಕ್ಕೆ ಆಗಮಿಸಿ ನಂತರ ಅಂತರ್ಧಾನವಾಗುವ ನಮ್ಮ ಹಿರಿಯ ಬರಹಗಾರ, ಲೇಖಕ, ಚಿಂತಕರ ಆಂತರ್ಯವೂ ಬದಲಾಗಿಲ್ಲ. ಕರೆಯದೇ ಬರಲು ಅವರೇನು ಗತಿಗೆಟ್ಟಿದ್ದಾರಾ ಅಂದರೆ ಪಾಪ ಪ್ರತಿ ಸಮ್ಮೇಳನದಲ್ಲೂ ಒ ಒ ಡಿ ಯ ಆಸೆಯಿಂದ ಬಂದು ಬೀದಿಗಳಲ್ಲೇ ಮಲಗಿ, ಹೊತ್ತು ಹೊತ್ತಿಗೆ ಊಟ ತಿಂಡಿಗಳಿಲ್ಲದೇ ಪರಿತಪಿಸಿಯೂ ಮತ್ತೆ ಮುಂದಿನ ಸಮ್ಮೇಳನ ಯಾವ ಊರಲ್ಲಿ ನಡೆಯುತ್ತೆ, ಅಲ್ಲಾದರೂ ಈ ನಾಯಿ ಪಾಡು ತಪ್ಪಲಿ ಎಂದು ಅಂದುಕೊಳ್ಳುತ್ತಲೇ ಬಸ್ಸು ಹತ್ತುವ ಲಕ್ಷಾಂತರ ಸಾಹಿತ್ಯಾಸಕ್ತ ಬಂಧುಗಳ ಅಲವತ್ತುಗಳನ್ನು ದಾಖಲಿಸಿದವರಾದರೂ ಯಾರು? ಚಿತ್ರದುರ್ಗದಿಂದ ವಾಪಸು ಬಂದು ಎರಡು ದಿನವಾದರೂ ಭವ್ಯ ವೇದಿಕೆ ಮತ್ತು ಪುಸ್ತಕದಂಗಡಿಗಳ ಸಾಲು ಮತ್ತೆ ಮತ್ತೆ ನೆನಪ ಜೇನನ್ನು ಮನಸ್ಸಿಗೆ ಉಣ್ಣಿಸುತ್ತಲೇ ಇವೆ.
ಹಾಗೆ ನೋಡಿದರೆ ನಮ್ಮ ಮಾಧ್ಯಮಗಳು ಬಿಂಬಿಸದಷ್ಟೇನೂ ವ್ಯವಸ್ಥೆ ಕೆಟ್ಟಿರಲಿಲ್ಲ. ಎಲ್ಲ ಸಮ್ಮೇಳನಗಳಲ್ಲೂ ನಡೆಯುವ ಹಾಗೇ ಈ ಸಮ್ಮೇಳನದಲ್ಲೂ ಯಾವ ಗೋಷ್ಠಿಗಳೂ ಸರಿಯಾದ ಸಮಯಕ್ಕೆ ಪ್ರಾರಂಭವಾಗಲಿಲ್ಲ. ಹಾಗಾಗಿ ಹೊತ್ತಿಗೆ ಸರಿಯಾಗಿ ಮುಗಿಯಲಿಲ್ಲ. ಅದರ ಕಾರಣದಿಂದ ಮುಂದಿನ ಗೋಷ್ಠಿಗಳೂ ಮುಂದು ಮುಂದಕ್ಕೆ ಹೋದವು, ಅಷ್ಟೆ! ಎಲ್ಲ ಕಡೆ ನಡೆಯುವ ಹಾಗೇ ಇಲ್ಲೂ ಸಾಹಿತ್ಯಕ್ಕಿಂತಲೂ ಸಾಹಿತ್ಯೇತರ ಸಂಗತಿಗಳಾದ ಕೃಷಿ, ಕೈಗಾರಿಕೆ, ರಾಜಕೀಯ, ಇತ್ಯಾದಿ ವಿಷಯಗಳಲ್ಲಿ ಚರ್ಚೆ-ಗೋಷ್ಠಿಗಳು ಎಡವುತ್ತೆಡುವತ್ತಲೇ ನಡೆದುವು. ಎಲ್ಲೆಲ್ಲಿ ರಾಜಕೀಯದವರನ್ನೂ, ಖಾಕಿಕಾವಿಗಳನ್ನೂ ಮನಬಂದಂತೆ ಹಳಿಯಲಾಯಿತೋ ಅಲ್ಲೆಲ್ಲ ಚಪ್ಪಾಳೆಗಳು ಮುಗಿಲು ಮುಟ್ಟಿದವು. ಆದರೆ ಊಟದ ವ್ಯವಸ್ಥೆಯಲ್ಲಿ, ಅಸ್ತವ್ಯಸ್ಥತೆಯನ್ನು ತಡೆಯುವುದರಲ್ಲಿ, ಇದೇ ಖಾಕಿ ಕಾವಿಗಳು ಹೆಣಗುತ್ತಿದ್ದುದನ್ನು ಅಪ್ಪಿತಪ್ಪಿ ಬಾಯಿ ಮಾತಿಗಾದರೂ ಹೇಳಲೇ ಇಲ್ಲ. ಇನ್ನು ಗೋಷ್ಠಿಗಳೋ ಅವುಗಳ ಸ್ವರೂಪಗಳೋ ಕಳೆದ ಎಪ್ಪತ್ತನಾಲ್ಕು ಸಮ್ಮೇಳನಗಳಲ್ಲಿ ನಡೆದುದರ ಪುನರಾವರ್ತನೆಯೇ! ಗೋಷ್ಠಿಗಳಲ್ಲಿ ಭಾಗವಹಿಸದವರಲ್ಲಿ ಬಹುತೇಕರು ಆಯಾ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿದವರಿದ್ದರೂ ಆಯ್ಕೆಯಲ್ಲಿ ಅನಿವಾರ್ಯ ಒತ್ತಡಗಳು ಇದ್ದೇ ಇರುತ್ತವೆ ಎನುವುದಕ್ಕೆ ಪುರಾವೆಯಾದುವು. ಸ್ವತಃ ಸಮ್ಮೇಳನಾಧ್ಯಕ್ಷರೇ ಅದರಿಂದ ಹೊರಗುಳಿದು ಹೊಸ ಭಾಷ್ಯ ಬರೆದ ವಿಶೇಷಕ್ಕೂ ಈ ಸಮ್ಮೇಳನವೇ ಮುನ್ನುಡಿ ಬರೆದುದೂ ಸ್ವಾರಸ್ಯ ದ ಸಂಗತಿ.
ಹಲವರಂತೆ ನಾನೂ ಸಮ್ಮೇಳನಗಳಲ್ಲಿ ಭಾಗವಹಿಸುವುದು ರಾಜ್ಯಾದ್ಯಂತ ಇರುವ ನನ್ನ ಅನೇಕ ಸ್ನೇಹಿತರೂ ಹಿರಿಯ ಬರಹಗಾರರೂ ಅಲ್ಲಿನ ಪುಸ್ತಕದಂಗಡಿಗಳಲ್ಲಿ ಸಿಕ್ಕೇ ಸಿಕ್ಕುತ್ತಾರೆನ್ನುವ ವಿಶ್ವಾಸದಿಂದ. ಮತ್ತು ಹಾಗೆ ಸಿಕ್ಕವರೊಡನೆ ನನ್ನ ಅನ್ನಿಸಿಕೆಗಳನ್ನೂ ಹಾಗೇ ಅನುಮಾನಗಳನ್ನೂ ಹಂಚಿಕೊಳ್ಳುವ ಮುಕ್ತ ಅವಕಾಶದ ಆಸೆಯಿಂದ. ಜೊತೆಗೇ ನನ್ನ ಸಹಬರಹಗಾರರ ತವಕ ತಲ್ಲಣಗಳನ್ನು ಮತ್ತವರ ಕಷ್ಠ ಸುಖಗಳನ್ನು ಮುಖತಾ ಹಂಚಿಕೊಳ್ಳಬಹುದೆನ್ನುವ ದುರಾಸೆಯಿಂದ!
ಆದರೆ ಈ ಸಮ್ಮೇಳನದಲ್ಲಿ ಹಿರಿಯ ಬರಹಗಾರರಿರಲಿ ಚಿತ್ರದುರ್ಗ ಸೀಮೆಯ ಅನೇಕ ಯುವ ಬರಹಗಾರರಾರೂ ಸಿಕ್ಕಲಿಲ್ಲ. ಸ್ವತಃ ಆ ಜಿಲ್ಲೆಯವರಾಗಿದ್ದೂ ಈಗಾಗಲೇ ತಮ್ಮ ಸಂಕಲನಗಳಿಂದ ಸಂಚಲನಗೊಳಿಸಿದ ಎಚ್.ಆರ್.ರಮೇಶ, ಆನಂದ ಋಗ್ವೇದಿ, ತಾರಿಣಿ, ಪಕ್ಕದ ಜಿಲ್ಲೆಯ ಅರುಣ ಜೋಳದಕೂಡ್ಲಿಗಿ, ಪೀರ ಭಾಷಾ, ಇವರಾರೂ ಕವಿಗೋಷ್ಠಿಯಲ್ಲಿ ಅಹ್ವಾನಿತರಾಗಿರಲೇ ಇಲ್ಲ. ಅಹ್ವಾನಿತ ಕವಿಗಳ ಪಟ್ಟಿ ಸಾಕಷ್ಟು ದೊಡ್ಡದಿದ್ದರೂ ಅಷ್ಟಿಷ್ಟು ಓದಿಕೊಂಡಿರುವ ಮತ್ತು ವರ್ತಮಾನದಲ್ಲಿ ಸಾಹಿತ್ಯ ಕೃಷಿ ಮಾಡುತ್ತಿರುವವರ ಹೆಸರುಗಳನ್ನು ಬಲ್ಲೆನೆಂಬ ನನ್ನ ವಿಶ್ವಾಸವನ್ನು ಆ ಪಟ್ಟಿ ಅಣಕಿಸಿತು. ನಾಲ್ಕೈದು ಹೆಸರುಗಳನ್ನು ಪತ್ರಿಕೆಗಳಲ್ಲಿ ಪ್ರಕಟವಾಗುವ ಕವಿತೆಗಳ ಮೂಲಕ ಗುರುತಿಸಿ ಹೊರತು ಪಡಿಸ ಬಹುದೇ ವಿನಾ ಉಳಿದವರೂ ಕವಿಗಳೆಂದು ಗೊತ್ತ್ತಾಗಿದ್ದೇ ನಿರೂಪಕರು ಅವರ ಕೃತಿಗಳನ್ನು ಹೆಸರಿಸಿದ ನಂತರ.
ಮೊದಲ ಕವಿಗೋಷ್ಠಿಯ ಆಶಯ ಭಾಷಣಮಾಡಿದ ಎಲ್.ಹನುಮಂತಯ್ಯನವರು ತಾವು ನೆಚ್ಚಿದ ಬಂಡಾಯದ ನೆಲೆಯನ್ನು ಮತ್ತೆ ಪ್ರಸ್ತಾಪಿಸುತ್ತಲೇ ಪದ್ಯವೊಂದನ್ನು ಓದಿದ ರೀತಿ ಪುಳಕಗೊಳಿಸಿತು. ಹನುಮಂತಯ್ಯ ಈಗಾಗಲೇ ಇಂಥ ಹತ್ತು ಹಲವು ಗೋಷ್ಠಿಗಳಲ್ಲಿ ಭಾಗವಹಿಸಿ ಇದೇ ಬಗೆಯ ಹತ್ತಿಪ್ಪತ್ತು ಭಾಷಣಗಳನ್ನು ನಮಗೆಲ್ಲ ಉಣಬಡಿಸಿದವರು. ಹಾಗೇ ಅಧ್ಯಕ್ಷತೆ ವಹಿಸಿದ್ದ ಸುಮತೀಂದ್ರ ನಾಡಿಗರಂತೂ ಅವರ ಪದ್ಯಗಳಿಗಿಂತಲೂ ಮಾತಿಗೆ ನಿಂತರೆ ಮುಗಿಸದ ಖ್ಯಾತಿಯವರು. ತಮ್ಮ ಹಳೆಯ ಎರಡು ಪದ್ಯಗಳನ್ನು ಅವರು ಆಕರ್ಷಕವಾಗಿ ಮಂಡಿಸಿದರಾದರೂ ಅವರು ಅಧ್ಯಕ್ಷೀಯ ಭಾಷಣವನ್ನು ಮಾಡಲಿಲ್ಲವೆನ್ನುವುದು ನನ್ನ ತಕರಾರು. ಕವಿಗೋಷ್ಠಿಯ ಅಧ್ಯಕ್ಷರು ಆ ಗೋಷ್ಠಿಯಲ್ಲಿ ಮಂಡಿಸಿದ ಕವಿತೆಗಳನ್ನು ಅವುಗಳ ವಿಷೇಷತೆಯನ್ನೂ ಹಾಗೇ ಕಾವ್ಯ ಹೊರಳಿದ ಹೊಸದಿಕ್ಕನ್ನೂ ಗುರ್ತಿಸಿ ಹೇಳಬೇಕಾದ ಜವಾಬ್ದಾರಿ ಇರುವಂಥವರು. ಅದರೆ ನಮ್ಮ ಮಾಧ್ಯಮಗಳು ಕಾಯುತ್ತಿರುತ್ತವೆ ಮತ್ತು ಗೋಷ್ಠಿಯ ಕಡೆಯವರೆಗೂ ಕೂರುವ ತಾಳ್ಮೆ ಕೆಲವರಿಗಿರುವುದಿಲ್ಲವೆಂಬ ನೆಪಒಡ್ಡಿ ಆಹ್ವಾನಿತ ಕವಿಗಳು ತಮ್ಮ ಪದ್ಯಗಳನ್ನು ಪ್ರಸ್ತುತಿಗೊಳಿಸುವ ಮೊದಲೇ ಅಧ್ಯಕ್ಷೀಯ ಮಾತುಗಳನ್ನು ಮುಗಿಸಿಬಿಡುವುದು ವರ್ತಮಾನದ ಕಾವ್ಯಕೃಷಿಕರಿಗೆ ತೋರಿಸುತ್ತಿರುವ ಅನಾದರವೆಂದೇ ನಾನು ಭಾವಿಸಿದ್ದೇನೆ. ಹಾಗೆಯೇ ಕಾವ್ಯಾಸಕ್ತರಾರಿಗೂ ಗೊತ್ತಿರದ ಮತ್ತು ಕೇವಲ ಪ್ರಾತಿನಿಧ್ಯದ ದೃಷ್ಟಿಯಿಂದಲೇ ತಯಾರಿಸುವ ಈ ಕವಿಪಟ್ಟಿಗೂ ನನ್ನ ಪರಮ ವಿರೋಧವನ್ನು ದಾಖಲಿಸುತ್ತಲೇ ಬಂದಿದ್ದೇನೆ. ಈ ಸಮ್ಮೇಳನದಲ್ಲೂ ನಿಜವಾದ ಕವಿತೆಗಳನ್ನು ಓದಿದವರು ಲಕ್ಷೀಪತಿ ಕೋಲಾರ, ಕಂಜರ್ಪಣೆ, ಬ.ಹ.ರಮಾಕುಮಾರಿ, ಬಿಳಿಗೆರೆ ಮತ್ತು ಹೆಸರು ನೆನಪಲ್ಲಿ ಉಳಿಯದ ಇನ್ನಿಬ್ಬರು ಮಾತ್ರ. ಗೆಳೆಯ ನಿಸಾರ್ ತನ್ನ ಕವಿತೆಯನ್ನು ಆಕರ್ಷಕವಾಗಿ ಮಂಡಿಸಿದನಾದರೂ ಆ ಬಗೆಯ ಕವಿತೆಗಳು ಕೇವಲ ಹೇಳಿಕೆಗಳಾಗುತ್ತವೆ ಮತ್ತು ಯಾರೂ ಬರೆಯಬಹುದಾದ ಸಾಲುಗಳಾಗುತ್ತವೆ ಎನ್ನುವುದನ್ನು ಮರೆಯಬಾರದು. ಕೆಲವು ಕವಿಗೋಷ್ಠಿಗಳಲ್ಲಿ ಖಾಲಿ ಕುರ್ಚಿಗಳಿಗೆ ಪದ್ಯ ಓದುವ ಅನಿವಾರ್ಯತೆಗಾಗಿ ಸಂಕಟ ಪಟ್ಟಿರುವ ನಾನು ದುರ್ಗದ ಕವಿಗೋಷ್ಠಿಯಲ್ಲಿ ಇಡೀ ಸಭಾಂಗಣ ಕಿಕ್ಕಿರಿದು ತುಂಬಿದ್ದ ಅಪ್ರತಿಮ ಕ್ಷಣಗಳಿಗೆ ಸಂತಸ ಪಟ್ಟಿದ್ದೇನೆ. ಹಾಗೆಯೇ ತುಂಬಿದ ಸಭೆಗೆ ಕಿಂಚಿತ್ತೂ ಸಾಥ್ ಕೊಡದ ಕವಿಗಣದ ಉಢಾಫೆಗೆ ಮರುಕ ಪಟ್ಟಿದ್ದೇನೆ.
ಕವಿಗೋಷ್ಠಿ ನಡೆಯುತ್ತಿರುವಾಗಲೇ ಅದಕ್ಕೆ ಜಯಂತ ಕಾಯ್ಕಿಣಿಯ ಸಾರಥ್ಯ ಸಿಕ್ಕು, ಸಂಧ್ಯಾದೇವಿ ಉದ್ಘಾಟಿಸಿ ಕವಿಪಟ್ಟಿಯಲ್ಲಿ ಎಸ್.ಮಂಜುನಾಥ್, ಪ್ರತಿಭಾ ಒಳಗೊಂಡಂತೆ ನಮ್ಮ ತಲೆಮಾರಿನ ಹತ್ತು ಹಲವು ಹೆಸರುಗಳನ್ನು ಕಲ್ಪಿಸಿಕೊಳ್ಳುತ್ತ ಹೋದೆ. ಆ ಕಲ್ಪನೆಯೇ ಒಂದು ಕವಿತೆಯಾಗಿ ಸಂತಸ ಮೈತುಂಬಿಕೊಳ್ಳುತ್ತಿರುವಾಗಲೇ ದುರ್ಗದ ರೈಲ್ವೇ ನಿಲ್ದಾಣವನ್ನು ಹೊತ್ತಿಗೆ ಸರಿಯಾಗಿ ಸೇರದಿದ್ದರೆ ಓಓಡಿ ಸೌಲಭ್ಯವಿಲ್ಲದ ನಾನು ಮಾರನೇ ದಿನಕ್ಕೂ ರಜೆ ಕೊಡಬೇಕಾಗುತ್ತದೆನ್ನುವ ನಿಜವಾಸ್ತವ ನೆನಪಾಗಿ ಸಮ್ಮೇಳನದ ಅಂಗಳದಿಂದ ನಿರ್ಗಮಿಸಿದೆ.
ಊರು ತಲುಪವವರೆಗೂ ಕಂಜರ್ಪಣೆಯವರೊಂದಿಗೆ ಕೆ.ಪಿ.ಸುರೇಶರ ಹೊಸ ಸಂಕಲನದ ಪದ್ಯಗಳನ್ನು , ವಸುದೇಂಧ್ರ ತಮ್ಮ ಅಂಗಡಿಯಲ್ಲಿ ಪುಸ್ತಕ ಮಾರುತ್ತಿದ್ದ ರೀತಿಯನ್ನು ಹಾಗೇ ಸಂಚಯದ ಸ್ಟಾಲಿನಲ್ಲಿ ಕನಸು ಕಂಡಿದ್ದ ಕವಿಗೋಷ್ಠಿ ಖದರು ಕಳೆದುಕೊಂಡುದನ್ನೂ ಮೆಲ್ಲುತ್ತ ಪ್ರಯಾಣಿಸಿದೆ. ಈಗ ನನ್ನೆದುರು ನಮ್ಮ ಪತ್ರಿಕೆಗಳು ಪ್ರಕಟಿಸಿದ ನಾಲ್ಕೂ ದಿನದ ಸಮ್ಮೇಳನದ ವಿವರಗಳನ್ನು ಹರಡಿಕೊಂಡಿದ್ದೇನೆ. ಉಡುಪಿಯಲ್ಲಿ ನಡೆದುದೇ ತುಮಕೂರಲ್ಲಿ ಘಟಿಸಿದುದೇ ಅಥವಾ ಕನಕಪುರದಲ್ಲಿ ಅಪ್ಪಳಿಸಿದ ಅಲೆಗಳೇ ಇಲ್ಲಿಯೂ ಮುಂದುವರೆದಿದೆ, ವರದಿಗಾರರ ಹೆಸರುಗಳೂ ವರದಿಗಾರಿಕೆಯ ರೀತಿಯೂ ಹೆಚ್ಚೇನೂ ಬದಲಾಗಿಲ್ಲ. ಇನ್ನು ಸಾಹಿತ್ಯ ಮಾತ್ರ ಸಮಾಜವನ್ನು ಬದಲಿಸಿಬಿಡುತ್ತದೆಂಬ ಹೇಳಿಕೆ ಎಷ್ಟು ಸರಿ ಎಷ್ಟು ತಪ್ಪು ಎಂಬ ಗೊಂದಲದಲ್ಲಿ ಉಳಿದಿದ್ದೇನೆ.
ಭಾನುವಾರ, ಜನವರಿ 25, 2009
ತಪಸ್ಸೆಂಬ ತಾಪ
‘ತಪಸ್ಸು’ ಎಂಬ ಪದವನ್ನು ನಿತ್ಯದ ಮಾತುಗಳಲ್ಲಿ ನಾವೆಲ್ಲ ಬಳಸುತ್ತಲೇ ಇರುತ್ತೇವೆ. ತಪಸ್ಸು ಎಂಬ ಪದ ‘ತಪ್’ ಧಾತುವಿನಿಂದ ನಿಷ್ಪನ್ನವಾದ ಪದ. ಅಂದರೆ ಕಷ್ಟ ಪಡು ಎಂದರ್ಥ. ಒಂದು ಉದ್ದೇಶ ಸಾಧನೆಗಾಗಿ ದೈಹಿಕ ಕಾಮನೆಗಳನ್ನು, ಲೌಕಿಕದ ಸುಖಸವಲತ್ತುಗಳನ್ನು ಸ್ವಯಂಪ್ರೇರಣೆಯಿಂದ ಬಿಟ್ಟುಕೊಟ್ಟು ಕಷ್ಟಕ್ಕೆ ಒಡ್ಡಿಕೊಳ್ಳುವುದು ತಪಸ್ಸು. ಹಿಮಾಲಯದ ತಪ್ಪಲಿಗೋ, ಗುಹೆಯ ಏಕಾಂತಕ್ಕೋ ತೆರಳಿದ ಮಾತ್ರಕ್ಕೇ ತಾಪಕ್ಕೆ ಸಿಲುಕಿದವರೆಲ್ಲ ತಪಸ್ವಿಗಳಾಗುವುದಿಲ್ಲ. ಸಂಕಲ್ಪವನ್ನು ಸ್ವಶಕ್ತಿಯ ಮೂಲಕ ಸಿದ್ಧಿಯ ನೆಲೆಗೆ ಒಯ್ಯುವುದು ತಪಸ್ಸಿನ ಉದ್ದೇಶ. ಅದರ ಪರಿಕಲ್ಪನೆ ವೇದೋಪನಿಷತ್ತುಗಳ ಕಾಲದಿಂದಲೂ ಪರಂಪರೆ ನಮಗೆ ಕಲಿಸುತ್ತ ಬಂದಿದೆ. ಮನಸ್ಸು ಮತ್ತು ಇಂದ್ರಿಯಗಳ ಮೇಲಿನ ಅಪಾರ ಹಿಡಿತವೇ ತಪಸ್ಸಿನ ಮೂಲ. ಪಂಚೇದ್ರಿಯಗಳಾದ ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮಗಳು ಲೌಕಿಕದ ವಿವಿಧ ಸಂವೇದನೆಗಳನ್ನು ಮೊಗೆಮೊಗೆದು ಮನಸ್ಸಿನ ಕಣಜದೊಳಗೆ ತುಂಬುತ್ತಲೇ ಇರುತ್ತವೆ. ಹಾಗೆ ಸಿಕ್ಕ ಸಂವೇದನೆಗಳನ್ನು ಅನುಭವಿಸುವಂತೆ ಮನಸ್ಸು ದೇಹವನ್ನು ಪ್ರಚೋದಿಸುತ್ತದೆ. ಪ್ರಲೋಭನೆಗೆ ಒಳಗಾದಾಗ ಸಹಜವಾಗಿ ಚಂಚಲವಾಗುವ ಮನಸ್ಸು ದೇಹದ ಮೇಲಿನ ಹಿಡಿತವನ್ನು ಕಳೆದುಕೊಳ್ಳುತ್ತದೆ. ಆಕರ್ಷಣೆಯ ಸುಳಿಗೆ ಸಿಕ್ಕ ದೇಹ ಉತ್ಕಂಠಿತತೆಯ ಮೋಹದಲ್ಲಿ ಪರಿವೆಯ ಇರವನ್ನೇ ಮರೆಮಾಚುತ್ತದೆ.
ಸಿದ್ಧಿ ಮತ್ತು ಸಾಧನೆಯ ಉದ್ದೇಶವಿದ್ದವರು ಸಹಜವಾಗಿ ಲೌಕಿಕ ಒಡ್ಡುವ ಆಮಿಷಗಳಿಂದ ಹೊರಗಿರಲು ಪ್ರಯತ್ನಿಸುತ್ತಲೇ ಇರುತ್ತಾರೆ. ಒಮ್ಮೆ ಸಿದ್ಧಿ ಕೈ ವಶವಾಯಿತೆಂದರೆ ನಂತರ ಲೌಕಿಕದ ಯಾವ ಆಮಿಷಗಳೂ ಸಿದ್ಧಿಸಿದ ಬಲದ ಮುಂದೆ ಅಗಣ್ಯವಾಗುತ್ತವೆ. ದುರಂತವೆಂದರೆ ಸಾಧನೆಯ ಹೊಸ್ತಿಲು ಮುಟ್ಟಿದೊಡನೆಯೇ ಅದು ತಮ್ಮ ಪಾಲಿಗೆ ಸಿದ್ಧಿಸಿತೆಂದು ಭಾವಿಸುವ ಅಲ್ಪಮತಿಗಳು ಲೌಕಿಕ ಒಡ್ಡುವ ಮಾನ, ಸನ್ಮಾನಗಳ, ಭರದಲ್ಲಿ ಸಿಲುಕಿ ಸ್ವಲ್ಪದರಲ್ಲೇ ಸಿಗಬಹುದಾಗಿದ್ದ ಸಿದ್ಧಿಯಿಂದ ಬಹು ಬೇಗ ಬಲುದೂರಕ್ಕೆ ಕ್ರಮಿಸಿಬಿಡುತ್ತಾರೆ. ಸಿದ್ಧಿ ಎಂಬುದು ಆಗ ಅಂಥವರಿಗೆ ಎಟುಕದ ನಕ್ಷತ್ರವಾಗುತ್ತದೆ. ಸದಾ ಚಂಚಲತೆಗೆ ಸಿಕ್ಕು ಇಂದ್ರಿಯದ ಹತೋಟಿಯನ್ನು ಕಳೆದುಕೊಳ್ಳುವ ಮನಸ್ಸನ್ನು ನಿಗ್ರಹಿಸುವ ಕ್ರಿಯೆ ಅತಿ ಕಷ್ಟಕರವಾದುದು. ಅದು ತಾಪದಾಯ್ಕವಾದುದು. ಸದಾ ಸುಡುತ್ತಲೇ ಇರುವಂಥದು. ಆದುದರಿಂದಲೇ ಅದು ತಪಸ್ಸು.
ನಮ್ಮ ಪ್ರಾಚೀನ ಪರಂಪರೆಯಲ್ಲಂತೂ ತಪಸ್ಸಿನ ಪ್ರಸ್ತಾಪ ಆಗಾಗ ಬರುತ್ತಲೇ ಇರುತ್ತದೆ. ದೇವಗಂಗೆಯನ್ನು ಪಿತೃಮೋಕ್ಷಕ್ಕಾಗಿ ಧರೆಗೆ ತಂದ ಭಗೀರಥನ ಹೆಸರಂತೂ ಸರ್ವದಾ ಪ್ರಸ್ತಾಪ ಯೋಗ್ಯವಾದುದೇ ಆಗಿದೆ. ವಿಶ್ವಾಮಿತ್ರನೆಂಬ ಸಾಮಾನ್ಯ ಬ್ರಹ್ಮರ್ಷಿ ಎಂಬ ಅಸಾಮಾನ್ಯ ಪದವಿ ಪಡೆದುದರ ಹಿಂದೆ ತಪಸ್ಸಿನ ಬಲವಿದೆ. ಗಾಂಧಿ ಬಸವರೂ ತಪಸ್ವಿಗಳಾಗಿದ್ದಕ್ಕೇ ಲೌಕಿಕದ ಆಮಿಷಗಳನ್ನು ಗೆದ್ದು ತಮ್ಮ ಸಾಧನೆಯ ದಾರಿಯನ್ನು ಲೋಕಕ್ಕೆ ತಿಳಿಸಲು ಸಾಧ್ಯವಾದದ್ದು. ಸಂಕಲ್ಪವೆಂಬುದು ಸಿದ್ಧಿಯಾಗಿ ಬದಲಾದಾಗ ತಪಸ್ಸಿನ ಉದ್ದೇಶ ಪರಿಪೂರ್ಣವಾಗುತ್ತದೆ. ‘ತಪೋ ಬ್ರಹ್ಮೇತಿ’ ಎನ್ನುತ್ತದೆ ಉಪನಿಷತ್ತು. ಭಗವದ್ಗೀತೆ ತಪಸ್ಸನ್ನು ಮೂರು ಬಗೆಯಲ್ಲಿ ವಿಭಾಗಿಸಿ ಕಾಯಿಕ, ವಾಚಿಕ ಮತ್ತು ಮಾನಸಿಕ ಎಂದು ಹೆಸರಿಸುತ್ತದೆ. ಶುಚಿತ್ವ, ಸರಳತೆ, ಬ್ರಹ್ಮಚರ್ಯ, ಅಹಿಂಸೆ ಇವ್ಯ್ ಕಾಯಿಕ ತಪಸ್ಸಿನ ಧಾತುಗಳು. ಉದ್ವೇಗಕ್ಕೆ ಅವಕಾಶ ಕೊಡದೇ ಹಿತವೂ, ಪ್ರಿಯವೂ, ಸತ್ಯವೂ ಆದ ಮಾತನಾಡುವುದು ವಾಚಿಕ ತಪಸ್ಸು. ಮನಸ್ಸನ್ನು ಹದಗೊಳಿಸಿಕೊಂಡು ಆಹ್ಲಾದತೆಯನ್ನು ಕಾಪಾಡಿಕೊಳ್ಳುವುದು, ಇಂದ್ರಿಯಗಳನ್ನು ನಿಗ್ರಹಿಸಿಕೊಳ್ಳುತ್ತಲೇ ಭಾವಶುದ್ಧಿಯನ್ನು ಕಾಪಾಡಿಕೊಳ್ಳುವುದು ಮಾನಸಿಕ ತಪಸ್ಸು. ಕಾಯಿಕ ಮತ್ತು ವಾಚಿಕ ತಪಸ್ಸುಗಳನ್ನು ನಮ್ಮದಾಗಿಸಿಕೊಳ್ಳಬಹುದಾದರೂ ಮಾನಸಿಕ ತಪಸ್ಸು ಸುಲಭಕ್ಕೆ ಒಗ್ಗಿ ಬಗ್ಗುವಂಥದಲ್ಲ. ಅದಕ್ಕೆ ಅಚಲ ಸಂಕಲ್ಪ ಮತ್ತು ಸತತ ಸಾಧನೆ ಬೇಕಾಗುತ್ತದೆ. ವಿದ್ಯಾರ್ಥಿಯೊಬ್ಬ ತನ್ನ ಓದಿನಲ್ಲಿ ಹಿರಿದನ್ನು ಸಾಧಿಸಬೇಕಾದರೆ ಅವನಿಗೆ ತಾನು ವಿದ್ಯಾರ್ಥಿ ಎಂಬ ಅರಿವಿನ ಜೊತೆಜೊತೆಗೇ ತಾನು ಸಾಗಬೇಕಾದ ದಾರಿಯ ಸ್ಪಷ್ಟ ಕಲ್ಪನೆ ಇರಬೇಕಾಗುತ್ತದೆ. ಗೊಂದಲಕ್ಕೆ ಬಿದ್ದ ಹಾಗೆಲ್ಲ ಅವನ ಶೈಕ್ಷಣಿಕ ಶ್ರೇಯಾಂಕಗಳು ಕಡಿಮೆಯಾಗುತ್ತ ಹೋಗುತ್ತವೆ. ಈ ಮಾತು ಕಲೆ, ಸಾಹಿತ್ಯ, ವಿಜ್ಞಾನ, ಆಧ್ಯಾತ್ಮ, ಕೃಷಿ, ವಾಣಿಜ್ಯ- ಹೀಗೆ ಬದುಕಿನ ಎಲ್ಲ ಕ್ಷೇತ್ರಗಳಿಗೂ ಅನ್ವಯಿಸುತ್ತದೆ.
ತಪಸ್ಸು ಎಂಬುದು ಜಟಾಜೂಟಗಳನ್ನು ಬಿಟ್ಟುಕೊಂಡು ಮರವೊಂದರ ಕೆಳಗೆ ಕೂತ ಮಾತ್ರಕ್ಕೆ ಎಟುಕುವಂಥದಲ್ಲ. ತೋರುಗಾಣಿಕೆಗೇ ತಪಸ್ಸಿಗೆ ಕೂತವರ ಮಾತು ಬೇರೆ!. ತಪಸ್ಸು ಎಂಬುದು ಸವೆದುಹೋದ ಅರ್ಥಕಳಕೊಂಡ ಪದವಲ್ಲ. ಅದು ಎತ್ತೆತ್ತರದ ಸುಮೇರುಗಳಿಗೆ ಮನುಷ್ಯನ ಮನಸ್ಸನ್ನು ಒಯ್ಯುವ ಮತ್ತು ಅಂಥ ಎತ್ತರದಲ್ಲೂ ವಿನಮ್ರತೆಯನ್ನು ಕಾಪಾಡಿಕೊಳ್ಳುವ ಕಲೆಯನ್ನು ಕಲಿಸುವ ವಿಷಿಷ್ಟ ಬೆರಗು. ನಮ್ಮ ಸಣ್ಣತನಗಳನ್ನು ಕಳೆದು ಹೊಸ ಎತ್ತರಗಳನ್ನು ಕೊಡುವ ಸಾಧನ.
ಸಿದ್ಧಿ ಮತ್ತು ಸಾಧನೆಯ ಉದ್ದೇಶವಿದ್ದವರು ಸಹಜವಾಗಿ ಲೌಕಿಕ ಒಡ್ಡುವ ಆಮಿಷಗಳಿಂದ ಹೊರಗಿರಲು ಪ್ರಯತ್ನಿಸುತ್ತಲೇ ಇರುತ್ತಾರೆ. ಒಮ್ಮೆ ಸಿದ್ಧಿ ಕೈ ವಶವಾಯಿತೆಂದರೆ ನಂತರ ಲೌಕಿಕದ ಯಾವ ಆಮಿಷಗಳೂ ಸಿದ್ಧಿಸಿದ ಬಲದ ಮುಂದೆ ಅಗಣ್ಯವಾಗುತ್ತವೆ. ದುರಂತವೆಂದರೆ ಸಾಧನೆಯ ಹೊಸ್ತಿಲು ಮುಟ್ಟಿದೊಡನೆಯೇ ಅದು ತಮ್ಮ ಪಾಲಿಗೆ ಸಿದ್ಧಿಸಿತೆಂದು ಭಾವಿಸುವ ಅಲ್ಪಮತಿಗಳು ಲೌಕಿಕ ಒಡ್ಡುವ ಮಾನ, ಸನ್ಮಾನಗಳ, ಭರದಲ್ಲಿ ಸಿಲುಕಿ ಸ್ವಲ್ಪದರಲ್ಲೇ ಸಿಗಬಹುದಾಗಿದ್ದ ಸಿದ್ಧಿಯಿಂದ ಬಹು ಬೇಗ ಬಲುದೂರಕ್ಕೆ ಕ್ರಮಿಸಿಬಿಡುತ್ತಾರೆ. ಸಿದ್ಧಿ ಎಂಬುದು ಆಗ ಅಂಥವರಿಗೆ ಎಟುಕದ ನಕ್ಷತ್ರವಾಗುತ್ತದೆ. ಸದಾ ಚಂಚಲತೆಗೆ ಸಿಕ್ಕು ಇಂದ್ರಿಯದ ಹತೋಟಿಯನ್ನು ಕಳೆದುಕೊಳ್ಳುವ ಮನಸ್ಸನ್ನು ನಿಗ್ರಹಿಸುವ ಕ್ರಿಯೆ ಅತಿ ಕಷ್ಟಕರವಾದುದು. ಅದು ತಾಪದಾಯ್ಕವಾದುದು. ಸದಾ ಸುಡುತ್ತಲೇ ಇರುವಂಥದು. ಆದುದರಿಂದಲೇ ಅದು ತಪಸ್ಸು.
ನಮ್ಮ ಪ್ರಾಚೀನ ಪರಂಪರೆಯಲ್ಲಂತೂ ತಪಸ್ಸಿನ ಪ್ರಸ್ತಾಪ ಆಗಾಗ ಬರುತ್ತಲೇ ಇರುತ್ತದೆ. ದೇವಗಂಗೆಯನ್ನು ಪಿತೃಮೋಕ್ಷಕ್ಕಾಗಿ ಧರೆಗೆ ತಂದ ಭಗೀರಥನ ಹೆಸರಂತೂ ಸರ್ವದಾ ಪ್ರಸ್ತಾಪ ಯೋಗ್ಯವಾದುದೇ ಆಗಿದೆ. ವಿಶ್ವಾಮಿತ್ರನೆಂಬ ಸಾಮಾನ್ಯ ಬ್ರಹ್ಮರ್ಷಿ ಎಂಬ ಅಸಾಮಾನ್ಯ ಪದವಿ ಪಡೆದುದರ ಹಿಂದೆ ತಪಸ್ಸಿನ ಬಲವಿದೆ. ಗಾಂಧಿ ಬಸವರೂ ತಪಸ್ವಿಗಳಾಗಿದ್ದಕ್ಕೇ ಲೌಕಿಕದ ಆಮಿಷಗಳನ್ನು ಗೆದ್ದು ತಮ್ಮ ಸಾಧನೆಯ ದಾರಿಯನ್ನು ಲೋಕಕ್ಕೆ ತಿಳಿಸಲು ಸಾಧ್ಯವಾದದ್ದು. ಸಂಕಲ್ಪವೆಂಬುದು ಸಿದ್ಧಿಯಾಗಿ ಬದಲಾದಾಗ ತಪಸ್ಸಿನ ಉದ್ದೇಶ ಪರಿಪೂರ್ಣವಾಗುತ್ತದೆ. ‘ತಪೋ ಬ್ರಹ್ಮೇತಿ’ ಎನ್ನುತ್ತದೆ ಉಪನಿಷತ್ತು. ಭಗವದ್ಗೀತೆ ತಪಸ್ಸನ್ನು ಮೂರು ಬಗೆಯಲ್ಲಿ ವಿಭಾಗಿಸಿ ಕಾಯಿಕ, ವಾಚಿಕ ಮತ್ತು ಮಾನಸಿಕ ಎಂದು ಹೆಸರಿಸುತ್ತದೆ. ಶುಚಿತ್ವ, ಸರಳತೆ, ಬ್ರಹ್ಮಚರ್ಯ, ಅಹಿಂಸೆ ಇವ್ಯ್ ಕಾಯಿಕ ತಪಸ್ಸಿನ ಧಾತುಗಳು. ಉದ್ವೇಗಕ್ಕೆ ಅವಕಾಶ ಕೊಡದೇ ಹಿತವೂ, ಪ್ರಿಯವೂ, ಸತ್ಯವೂ ಆದ ಮಾತನಾಡುವುದು ವಾಚಿಕ ತಪಸ್ಸು. ಮನಸ್ಸನ್ನು ಹದಗೊಳಿಸಿಕೊಂಡು ಆಹ್ಲಾದತೆಯನ್ನು ಕಾಪಾಡಿಕೊಳ್ಳುವುದು, ಇಂದ್ರಿಯಗಳನ್ನು ನಿಗ್ರಹಿಸಿಕೊಳ್ಳುತ್ತಲೇ ಭಾವಶುದ್ಧಿಯನ್ನು ಕಾಪಾಡಿಕೊಳ್ಳುವುದು ಮಾನಸಿಕ ತಪಸ್ಸು. ಕಾಯಿಕ ಮತ್ತು ವಾಚಿಕ ತಪಸ್ಸುಗಳನ್ನು ನಮ್ಮದಾಗಿಸಿಕೊಳ್ಳಬಹುದಾದರೂ ಮಾನಸಿಕ ತಪಸ್ಸು ಸುಲಭಕ್ಕೆ ಒಗ್ಗಿ ಬಗ್ಗುವಂಥದಲ್ಲ. ಅದಕ್ಕೆ ಅಚಲ ಸಂಕಲ್ಪ ಮತ್ತು ಸತತ ಸಾಧನೆ ಬೇಕಾಗುತ್ತದೆ. ವಿದ್ಯಾರ್ಥಿಯೊಬ್ಬ ತನ್ನ ಓದಿನಲ್ಲಿ ಹಿರಿದನ್ನು ಸಾಧಿಸಬೇಕಾದರೆ ಅವನಿಗೆ ತಾನು ವಿದ್ಯಾರ್ಥಿ ಎಂಬ ಅರಿವಿನ ಜೊತೆಜೊತೆಗೇ ತಾನು ಸಾಗಬೇಕಾದ ದಾರಿಯ ಸ್ಪಷ್ಟ ಕಲ್ಪನೆ ಇರಬೇಕಾಗುತ್ತದೆ. ಗೊಂದಲಕ್ಕೆ ಬಿದ್ದ ಹಾಗೆಲ್ಲ ಅವನ ಶೈಕ್ಷಣಿಕ ಶ್ರೇಯಾಂಕಗಳು ಕಡಿಮೆಯಾಗುತ್ತ ಹೋಗುತ್ತವೆ. ಈ ಮಾತು ಕಲೆ, ಸಾಹಿತ್ಯ, ವಿಜ್ಞಾನ, ಆಧ್ಯಾತ್ಮ, ಕೃಷಿ, ವಾಣಿಜ್ಯ- ಹೀಗೆ ಬದುಕಿನ ಎಲ್ಲ ಕ್ಷೇತ್ರಗಳಿಗೂ ಅನ್ವಯಿಸುತ್ತದೆ.
ತಪಸ್ಸು ಎಂಬುದು ಜಟಾಜೂಟಗಳನ್ನು ಬಿಟ್ಟುಕೊಂಡು ಮರವೊಂದರ ಕೆಳಗೆ ಕೂತ ಮಾತ್ರಕ್ಕೆ ಎಟುಕುವಂಥದಲ್ಲ. ತೋರುಗಾಣಿಕೆಗೇ ತಪಸ್ಸಿಗೆ ಕೂತವರ ಮಾತು ಬೇರೆ!. ತಪಸ್ಸು ಎಂಬುದು ಸವೆದುಹೋದ ಅರ್ಥಕಳಕೊಂಡ ಪದವಲ್ಲ. ಅದು ಎತ್ತೆತ್ತರದ ಸುಮೇರುಗಳಿಗೆ ಮನುಷ್ಯನ ಮನಸ್ಸನ್ನು ಒಯ್ಯುವ ಮತ್ತು ಅಂಥ ಎತ್ತರದಲ್ಲೂ ವಿನಮ್ರತೆಯನ್ನು ಕಾಪಾಡಿಕೊಳ್ಳುವ ಕಲೆಯನ್ನು ಕಲಿಸುವ ವಿಷಿಷ್ಟ ಬೆರಗು. ನಮ್ಮ ಸಣ್ಣತನಗಳನ್ನು ಕಳೆದು ಹೊಸ ಎತ್ತರಗಳನ್ನು ಕೊಡುವ ಸಾಧನ.
ಬುಧವಾರ, ಜನವರಿ 21, 2009
ವ್ರುತ್ತದೊಳಗಿನ ಬದುಕು
ಬದುಕು ವಿಸ್ತಾರವಾದುದು. ಅದಕ್ಕೆ ಚೌಕಟ್ಟನ್ನು ಕಟ್ಟಿದಷ್ಟೂ ದೃಷ್ಟಿಗೆ ಮಿತಿ ಬರುತ್ತದೆ. ಮಿತಿಗಳಾಚೆಯೇ ಇರುವ ಬದುಕು ಸುಲಭಕ್ಕೆ ದಕ್ಕುವುದಿಲ್ಲ. ಮಿತಿಯೊಳಗೇ ನಾವು ಬದುಕಿದರೆ, ಚಿಂತಿಸಿದರೆ ನಮ್ಮಾಚೆಗೂ ಇರುವ ಬದುಕ ಮಜಲು ನಮಗೆ ಅರ್ಥವೇ ಆಗುವುದಿಲ್ಲ. ಹೀಗೆಲ್ಲ ಮಾತಿಗೆ ಹೇಳಬಹುದಾದರೂ ಮೂಲತಃ ನಾವೆಲ್ಲ ನಮ್ಮ ನಮ್ಮ ಮಿತಿಯೊಳಗೇ ಬದುಕ ಕಡಲನ್ನು ಈಜುವ ಅಭ್ಯಾಸ ಮಾಡಿಕೊಂಡಿರುತ್ತೇವೆ. ಹಳ್ಳ, ಕೆರೆ, ಬಾವಿಗಳಲ್ಲಿ ಸುಲಭವಾಗಿ ಈಜುವವರು ಸಮುದ್ರಕ್ಕೆ ಹೆದರಬಹುದು. ಆಳ ಅಗಲಗಳ ಪರಿವೆಯಿಲ್ಲದೇ ಸಿಕ್ಕ ಸಿಕ್ಕ ನೀರಿಗೆ ಧುಮುಕುವುದೂ ಅಪಾಯದ ಮಾತೇ. ಹಾಗಾಗಿಯೇ ನಾವೆಲ್ಲ ನಮಗೆ ಗೊತ್ತಿರುವ ದೇಶ ಮತ್ತು ಭಾಷೆಗಳಲ್ಲಿ ಬದುಕಲು ಇಚ್ಛಿಸುತ್ತೇವೆ. ಗೊತ್ತಿದ್ದೂ ನಾಲ್ಕು ಗೋಡೆಗಳ ಬಂಧನದಲ್ಲಿ, ಕಿಟಕಿ, ಬಾಗಿಲು, ಪರದೆಗಳ ಹಂಗಿನಲ್ಲೇ ಇರಲು ಇಚ್ಛಿಸುತ್ತೇವೆ. ನಮಗೆಲ್ಲರಿಗೂ ಪ್ರಿಯವಾದ ಏಕಾಂತದಲ್ಲಿ ಇದ್ದುಬಿಡಲು ಪ್ರಯತ್ನಿಸುತ್ತೇವೆ. ಜೊತೆ ಜೊತೆಗೇ ನಾವೇ ಸೃಷ್ಟಿಸಿಕೊಂಡ ಈ ಮಿತಿಯನ್ನು ಮೀರುವ ಮತ್ತು ಹೊರಗಿರುವ ವಿಸ್ತಾರ ಬಯಲನ್ನು ಅದು ಕೊಡುವ ಸ್ವಾತಂತ್ರ್ಯದ ಬಗೆಯನ್ನೂ ಯೋಚಿಸುತ್ತಲೇ ಇರುತ್ತೇವೆ. ಬಯಲಲ್ಲಿ ಬೀಳಬಹುದಾದ ಮಂಜು ಮತ್ತು ಗಾಳಿಯ ಕಲ್ಪನೆ ತಿಳಿಯಿತೋ ಪುನಃ ನಮ್ಮ ನಾಲ್ಕು ಗೋಡೆಗಳ ಬೆಚ್ಚನೆಯ ಮನೆಯತ್ತ ನಡೆಯುತ್ತೇವೆ.
ಬಯಲು ವಿಸ್ತಾರದೊಟ್ಟಿಗೇ ಸ್ವಾತಂತ್ರ್ಯವನ್ನು ಕೊಡಬಹುದಾದರೂ ಅದು ಭಯದ ಮೂಲ. ಅಭದ್ರತೆಯ ಸೇತು. ಏಕೆಂದರೆ ಬಯಲ ಅನಂತತೆಯನ್ನು ಗ್ರಹಿಸುವ ಚಿತ್ತಬಲ ಸುಲಭಕ್ಕೆ ಒಲಿಯುವಂಥದಲ್ಲ. ಸಾಮಾಜಿಕ ಜೀವಿಯಾಗಿ ಒಂದು ಮನೆ, ಮನೆತನ ಮತ್ತು ನಡವಳಿಕೆಗಳಿಗೆ ಮಿತಿಗೊಳಿಸಿಕೊಂಡ ನಮ್ಮ ಚಟುವಟಿಕೆಗಳು ಬಯಲ ಅನುಭವ ಜನ್ಯ ಸತ್ಯಗಳನ್ನು ಅರ್ಥಮಾಡಿಕೊಳ್ಳುವುದನ್ನು ನಿಷೇದಿಸುತ್ತವೆ. ಅಂಥ ಸ್ವಾತಂತ್ರ್ಯವನ್ನು ಇಟ್ಟುಕೊಂಡಿರುವ ಮರ, ಗಿಡ, ಬಳ್ಳಿಗಳು, ಕ್ರಿಮಿ, ಕೀಟ, ಪ್ರಾಣಿಗಳು ಕತ್ತಲೆ, ಬೆಳಕು, ಗಾಳಿ ಸದ್ದುಗಳು ನಮ್ಮನ್ನು ಅಧೀರರನಾಗಿಸುತ್ತವೆ. ಹಾಗಾಗಿಯೇ ಮಿತಿಯ ಅರಿವಿರುವ ಮನುಷ್ಯ ತನ್ನಾಚೆಯ ಜಗತ್ತನ್ನು ಅರಿಯುವುದನ್ನು ಬೇಕೆಂತಲೇ ಮರೆಯುತ್ತಾನೆ. ತನಗೆ ಸಿಕ್ಕಿರುವುದರಲ್ಲೇ ಮೈ ಮರೆಯುತ್ತಾನೆ.
ನಾವೆಲ್ಲ ನಾವು ಬದುಕುತ್ತಿರುವ ಬಗೆಯನ್ನೆ ಅನನ್ಯವನ್ನು ಭಾವಿಸಿದ್ದೇವೆ. ನಾವು ಉಪಜೀವನಕ್ಕೆ ನೆಚ್ಚಿರುವ ಕಸುಬನ್ನೇ ಅಂತಿಮವೆಂದು ಭಾವಿಸಿದ್ದೇವೆ. ನಮ್ಮ ಅನುಭವವನ್ನೇ ಪರಮಸತ್ಯವೆಂದು ನಂಬಿಬಿಟ್ಟಿದ್ದೇವೆ. ನಮ್ಮಾಚೆಗೂ ಒಂದು ಜಗತ್ತಿದೆ. ಅಲ್ಲಿಯೂ ನಮ್ಮಂತೆಯೇ ಯೋಚಿಸುವ, ನಮ್ಮದೇ ತಹತಹಕಿಯ ಜೀವಿಗಳಿದ್ದಾರೆಂದು ಮರೆತುಬಿಟ್ಟಿದ್ದೇವೆ. ಸಮೂಹದ ಸಾಧ್ಯತೆಗಳನ್ನು ನಿರಾಕರಿಸಿದಷ್ಟೂ ನಮ್ಮ ಮಿತಿಯ ವ್ಯಾಸ ಕುಗ್ಗುತ್ತ ಬರುತ್ತದೆ. ದುರಂತವೆಂದರೆ ನಾವೆಲ್ಲ ನಮ್ಮ ಜೀವನವೆ ಭದ್ರವೆಂದು ಅನ್ಯರಿಗೂ ಇರುವ ಇದೇ ಬಗೆಯ ಕಾಳಜಿಯನ್ನು ಮೋಹವೆಮು ಬಗೆಯುತ್ತೇವೆ. ಹಾಗೆಯೇ ನಮ್ಮದು ಮಾತ್ರ ಸಮಸ್ಯೆ. ಉಳಿದವರೆಲ್ಲ ಪಾರಾಗಿದ್ದಾರೆಂದೂ ಭ್ರಮಿಸಿರುತ್ತೇವೆ.
ನಮ್ಮ ಸಮಾಜವನ್ನು ಸಾವಧಾನವಾಗಿ, ಸೂಕ್ಷ್ಮವಾಗಿ ಗಮನಿಸಿದರೆ ಇಂತಹ ನೂರಾರು ವೃತ್ತಗಳು ನಮ್ಮೆಲ್ಲರನ್ನೂ ಸುತ್ತುವರಿದಿರುವ ಸತ್ಯ ಗೋಚರಿಸುತ್ತದೆ. ಒಂದೊಂದಕ್ಕೂ ತನ್ನದೇ ಆದ ವ್ಯಾಸ, ತ್ರಿಜ್ಯ ಮತ್ತು ಕ್ಷೇತ್ರಫಲಗಳಿದ್ದು ಅಂತಹ ಹಲವು ವೃತ್ತಗಳು ನಮ್ಮೆಲ್ಲರ ಬದುಕನ್ನೂ ಆವರಿಸಿರುತ್ತವೆ. ಒಂದೊಂದೂ ಮತ್ತೊಂದಕ್ಕೆ ಸೇರದ ಬೆರೆಯಲಿಚ್ಛಿಸದ ವೃತ್ತಗಳು. ತನ್ನನ್ನು ಸುತ್ತುವರೆದಿರುವ ವೃತ್ತದಾಚೆಗೆಂದೂ ನೋಡದ, ಮತ್ತೊಂದು ವೃತ್ತದಲ್ಲಿರುವವರ ಪರಿಸ್ಥಿತಿಯರಿಯದ ನಮ್ಮ ಈ ಮಿತಿಗಳೇ ಸಾಮಾಜಿಕ ವೈರುಧ್ಯಗಳನ್ನು ಬಿತ್ತುತ್ತಿರುವ ಮತ್ತು ಇರುವವರ ಹಾಗೂ ಇಲ್ಲದಿರುವವರ ನಡುವಣ ಅಂತರವನ್ನು ಹೆಚ್ಚಿಸುತ್ತಲೇ ಇರುವ ಕಾರಣಗಳೆಂದು ನಾವಾರೂ ಅರಿಯದಿರುವುದೇ ನಮ್ಮ ನಡುವಣ ಹಲವು ಸಮ್ಸ್ಯೆಗಳ ಮೂಲ ಕಾರಣವಾಗಿದೆ. ನೂರಾರು ವೃತ್ತಗಳು! ಆ ವೃತ್ತಗಳಳೊಗೆ ಮತ್ತೆ ನೂರು ಸೀಳುಗಳು. ಗುಂಪು, ಗುಂಪಾಗಿ, ಮತ್ತೆ ಮತ್ತೆ ವಿಭಜನೆಯಾಗುತ್ತಾ, ಸೀಳಿಕೊಳ್ಳುತ್ತಾ, ಒಂದಕ್ಕೊಂದು ದೂರವಾಗಿ ನಮ್ಮ ಚಿಪ್ಪಿನೊಳಗೆ ನಾವೇ ಬಂಧಿಯಾಗುತ್ತಾ ಅಪರಿಚಿತವಾಗುತ್ತಾ ಹೋಗುವ ಕವಲು ದಾರಿಗಳು.
ಆದರೆ ಒಂದು ನಾಗರೀಕ ಸಮಾಜ ಸುಸಂಸ್ಕೃತವಾಗಬೇಕೆಂದರೆ, ಇಡಿಯಾಗಿ ತನ್ನ ಸ್ವರೂಪ ಪ್ರದರ್ಶಿಸಬೇಕೆಂದರೆ ಈ ವೃತ್ತಗಳನ್ನು ನಿವಾರಿಸಬೇಕು. ವೃತ್ತಗಳ ವ್ಯಾಸವನ್ನು ಹಿರಿದುಮಾಡುತ್ತ ಸಮಷ್ಟಿಯಲ್ಲಿ ಎಲ್ಲರನ್ನೂ, ಎಲ್ಲವನ್ನೂ ಒಳಗೊಳಿಸಬೇಕು. ಏಕನಾದದ ಸಮೂಹ ಗೀತೆಗೆ ಎಲ್ಲರನ್ನೂ ಅನುಗೊಳಿಸಬೇಕು. ದೂರದೃಷ್ಟಿಯುಳ್ಳ ಸಮೂಹ ನಾಯಕತ್ವ ಪ್ರಭುತ್ವವನ್ನು ಪ್ರಶ್ನಿಸುವ ಎದೆಗಾರಿಕೆ ತೋರಬೇಕು. ಆಗ ಅಂಥ ಸಂದರ್ಭ ಬಯಲ ಸ್ವಾತಂತ್ರವನ್ನು ಅನುಭವಿಸುವ ರೀತಿಗೆ ನಮ್ಮನ್ನು ಸಜ್ಜುಗೊಳಿಸುತ್ತದೆ.
ಬಯಲು ವಿಸ್ತಾರದೊಟ್ಟಿಗೇ ಸ್ವಾತಂತ್ರ್ಯವನ್ನು ಕೊಡಬಹುದಾದರೂ ಅದು ಭಯದ ಮೂಲ. ಅಭದ್ರತೆಯ ಸೇತು. ಏಕೆಂದರೆ ಬಯಲ ಅನಂತತೆಯನ್ನು ಗ್ರಹಿಸುವ ಚಿತ್ತಬಲ ಸುಲಭಕ್ಕೆ ಒಲಿಯುವಂಥದಲ್ಲ. ಸಾಮಾಜಿಕ ಜೀವಿಯಾಗಿ ಒಂದು ಮನೆ, ಮನೆತನ ಮತ್ತು ನಡವಳಿಕೆಗಳಿಗೆ ಮಿತಿಗೊಳಿಸಿಕೊಂಡ ನಮ್ಮ ಚಟುವಟಿಕೆಗಳು ಬಯಲ ಅನುಭವ ಜನ್ಯ ಸತ್ಯಗಳನ್ನು ಅರ್ಥಮಾಡಿಕೊಳ್ಳುವುದನ್ನು ನಿಷೇದಿಸುತ್ತವೆ. ಅಂಥ ಸ್ವಾತಂತ್ರ್ಯವನ್ನು ಇಟ್ಟುಕೊಂಡಿರುವ ಮರ, ಗಿಡ, ಬಳ್ಳಿಗಳು, ಕ್ರಿಮಿ, ಕೀಟ, ಪ್ರಾಣಿಗಳು ಕತ್ತಲೆ, ಬೆಳಕು, ಗಾಳಿ ಸದ್ದುಗಳು ನಮ್ಮನ್ನು ಅಧೀರರನಾಗಿಸುತ್ತವೆ. ಹಾಗಾಗಿಯೇ ಮಿತಿಯ ಅರಿವಿರುವ ಮನುಷ್ಯ ತನ್ನಾಚೆಯ ಜಗತ್ತನ್ನು ಅರಿಯುವುದನ್ನು ಬೇಕೆಂತಲೇ ಮರೆಯುತ್ತಾನೆ. ತನಗೆ ಸಿಕ್ಕಿರುವುದರಲ್ಲೇ ಮೈ ಮರೆಯುತ್ತಾನೆ.
ನಾವೆಲ್ಲ ನಾವು ಬದುಕುತ್ತಿರುವ ಬಗೆಯನ್ನೆ ಅನನ್ಯವನ್ನು ಭಾವಿಸಿದ್ದೇವೆ. ನಾವು ಉಪಜೀವನಕ್ಕೆ ನೆಚ್ಚಿರುವ ಕಸುಬನ್ನೇ ಅಂತಿಮವೆಂದು ಭಾವಿಸಿದ್ದೇವೆ. ನಮ್ಮ ಅನುಭವವನ್ನೇ ಪರಮಸತ್ಯವೆಂದು ನಂಬಿಬಿಟ್ಟಿದ್ದೇವೆ. ನಮ್ಮಾಚೆಗೂ ಒಂದು ಜಗತ್ತಿದೆ. ಅಲ್ಲಿಯೂ ನಮ್ಮಂತೆಯೇ ಯೋಚಿಸುವ, ನಮ್ಮದೇ ತಹತಹಕಿಯ ಜೀವಿಗಳಿದ್ದಾರೆಂದು ಮರೆತುಬಿಟ್ಟಿದ್ದೇವೆ. ಸಮೂಹದ ಸಾಧ್ಯತೆಗಳನ್ನು ನಿರಾಕರಿಸಿದಷ್ಟೂ ನಮ್ಮ ಮಿತಿಯ ವ್ಯಾಸ ಕುಗ್ಗುತ್ತ ಬರುತ್ತದೆ. ದುರಂತವೆಂದರೆ ನಾವೆಲ್ಲ ನಮ್ಮ ಜೀವನವೆ ಭದ್ರವೆಂದು ಅನ್ಯರಿಗೂ ಇರುವ ಇದೇ ಬಗೆಯ ಕಾಳಜಿಯನ್ನು ಮೋಹವೆಮು ಬಗೆಯುತ್ತೇವೆ. ಹಾಗೆಯೇ ನಮ್ಮದು ಮಾತ್ರ ಸಮಸ್ಯೆ. ಉಳಿದವರೆಲ್ಲ ಪಾರಾಗಿದ್ದಾರೆಂದೂ ಭ್ರಮಿಸಿರುತ್ತೇವೆ.
ನಮ್ಮ ಸಮಾಜವನ್ನು ಸಾವಧಾನವಾಗಿ, ಸೂಕ್ಷ್ಮವಾಗಿ ಗಮನಿಸಿದರೆ ಇಂತಹ ನೂರಾರು ವೃತ್ತಗಳು ನಮ್ಮೆಲ್ಲರನ್ನೂ ಸುತ್ತುವರಿದಿರುವ ಸತ್ಯ ಗೋಚರಿಸುತ್ತದೆ. ಒಂದೊಂದಕ್ಕೂ ತನ್ನದೇ ಆದ ವ್ಯಾಸ, ತ್ರಿಜ್ಯ ಮತ್ತು ಕ್ಷೇತ್ರಫಲಗಳಿದ್ದು ಅಂತಹ ಹಲವು ವೃತ್ತಗಳು ನಮ್ಮೆಲ್ಲರ ಬದುಕನ್ನೂ ಆವರಿಸಿರುತ್ತವೆ. ಒಂದೊಂದೂ ಮತ್ತೊಂದಕ್ಕೆ ಸೇರದ ಬೆರೆಯಲಿಚ್ಛಿಸದ ವೃತ್ತಗಳು. ತನ್ನನ್ನು ಸುತ್ತುವರೆದಿರುವ ವೃತ್ತದಾಚೆಗೆಂದೂ ನೋಡದ, ಮತ್ತೊಂದು ವೃತ್ತದಲ್ಲಿರುವವರ ಪರಿಸ್ಥಿತಿಯರಿಯದ ನಮ್ಮ ಈ ಮಿತಿಗಳೇ ಸಾಮಾಜಿಕ ವೈರುಧ್ಯಗಳನ್ನು ಬಿತ್ತುತ್ತಿರುವ ಮತ್ತು ಇರುವವರ ಹಾಗೂ ಇಲ್ಲದಿರುವವರ ನಡುವಣ ಅಂತರವನ್ನು ಹೆಚ್ಚಿಸುತ್ತಲೇ ಇರುವ ಕಾರಣಗಳೆಂದು ನಾವಾರೂ ಅರಿಯದಿರುವುದೇ ನಮ್ಮ ನಡುವಣ ಹಲವು ಸಮ್ಸ್ಯೆಗಳ ಮೂಲ ಕಾರಣವಾಗಿದೆ. ನೂರಾರು ವೃತ್ತಗಳು! ಆ ವೃತ್ತಗಳಳೊಗೆ ಮತ್ತೆ ನೂರು ಸೀಳುಗಳು. ಗುಂಪು, ಗುಂಪಾಗಿ, ಮತ್ತೆ ಮತ್ತೆ ವಿಭಜನೆಯಾಗುತ್ತಾ, ಸೀಳಿಕೊಳ್ಳುತ್ತಾ, ಒಂದಕ್ಕೊಂದು ದೂರವಾಗಿ ನಮ್ಮ ಚಿಪ್ಪಿನೊಳಗೆ ನಾವೇ ಬಂಧಿಯಾಗುತ್ತಾ ಅಪರಿಚಿತವಾಗುತ್ತಾ ಹೋಗುವ ಕವಲು ದಾರಿಗಳು.
ಆದರೆ ಒಂದು ನಾಗರೀಕ ಸಮಾಜ ಸುಸಂಸ್ಕೃತವಾಗಬೇಕೆಂದರೆ, ಇಡಿಯಾಗಿ ತನ್ನ ಸ್ವರೂಪ ಪ್ರದರ್ಶಿಸಬೇಕೆಂದರೆ ಈ ವೃತ್ತಗಳನ್ನು ನಿವಾರಿಸಬೇಕು. ವೃತ್ತಗಳ ವ್ಯಾಸವನ್ನು ಹಿರಿದುಮಾಡುತ್ತ ಸಮಷ್ಟಿಯಲ್ಲಿ ಎಲ್ಲರನ್ನೂ, ಎಲ್ಲವನ್ನೂ ಒಳಗೊಳಿಸಬೇಕು. ಏಕನಾದದ ಸಮೂಹ ಗೀತೆಗೆ ಎಲ್ಲರನ್ನೂ ಅನುಗೊಳಿಸಬೇಕು. ದೂರದೃಷ್ಟಿಯುಳ್ಳ ಸಮೂಹ ನಾಯಕತ್ವ ಪ್ರಭುತ್ವವನ್ನು ಪ್ರಶ್ನಿಸುವ ಎದೆಗಾರಿಕೆ ತೋರಬೇಕು. ಆಗ ಅಂಥ ಸಂದರ್ಭ ಬಯಲ ಸ್ವಾತಂತ್ರವನ್ನು ಅನುಭವಿಸುವ ರೀತಿಗೆ ನಮ್ಮನ್ನು ಸಜ್ಜುಗೊಳಿಸುತ್ತದೆ.
ಗುರುವಾರ, ಜನವರಿ 8, 2009
ಬೆಂಕಿ ಕಡ್ಡಿಗಳು
ಬೆಂಕಿ ಕಡ್ಡಿಗಳು,
ನಾನು, ನೀನು, ಅವನು, ಅವಳು
ಹೌದು, ನಾವೆಲ್ಲರೂ ಬೆಂಕಿಯ ತುಂಡುಗಳು:
ನಮ್ಮ ತಲೆಯ ಮೇಲಷ್ಟು ಮದ್ದು ಮೆತ್ತಿ,
ಒಬ್ಬರ ಮೇಲೊಬ್ಬರನ್ನು ತುರುಕಿ,
ಪುಟ್ಟ ಪೆಟ್ಟಿಗೆಯೊಳಗಿಟ್ಟು ಭದ್ರ ಮಾಡಿದ್ದಾರೆ:
ಬೇಕಿನಿಸಿದಾಗೆಲ್ಲ ನಮ್ಮಲ್ಲೊಬ್ಬರನ್ನೆಳೆದು
ಚರಕ್ಕನೆ ಗೀರಿ ಬೆಂಕಿ ಹೊತ್ತಿಸುತ್ತಾರೆ,
ಚಳಿಯ ಮೈಯನ್ನು ಕಾಯಿಸಿ ಕೊಳ್ಳುತ್ತಾರೆ.
ಬೆಂಕಿ ಹೊತ್ತಿಸಿದ ಸಂಭ್ರಮದಲ್ಲಿ
ಸುಟ್ಟು ಭಸ್ಮವಾಗುವ ನಮಗೇ
ನಮ್ಮ ಶಕ್ತಿ ಗೊತ್ತಿಲ್ಲ; ಹಾಗಾಗಿ
ಜೊತೆಜೊತೆಯಾಗಿದ್ದರೂ ಅತಂತ್ರ ಸ್ಥಿತಿ ಹೋಗಲ್ಲ
ಈ ಪುಟ್ಟ ಪೆಟ್ಟಿಗೆಯ ವಾಸವೂ ತಪ್ಪೋಲ್ಲ!
ನಾನು, ನೀನು, ಅವನು, ಅವಳು
ಹೌದು, ನಾವೆಲ್ಲರೂ ಬೆಂಕಿಯ ತುಂಡುಗಳು:
ನಮ್ಮ ತಲೆಯ ಮೇಲಷ್ಟು ಮದ್ದು ಮೆತ್ತಿ,
ಒಬ್ಬರ ಮೇಲೊಬ್ಬರನ್ನು ತುರುಕಿ,
ಪುಟ್ಟ ಪೆಟ್ಟಿಗೆಯೊಳಗಿಟ್ಟು ಭದ್ರ ಮಾಡಿದ್ದಾರೆ:
ಬೇಕಿನಿಸಿದಾಗೆಲ್ಲ ನಮ್ಮಲ್ಲೊಬ್ಬರನ್ನೆಳೆದು
ಚರಕ್ಕನೆ ಗೀರಿ ಬೆಂಕಿ ಹೊತ್ತಿಸುತ್ತಾರೆ,
ಚಳಿಯ ಮೈಯನ್ನು ಕಾಯಿಸಿ ಕೊಳ್ಳುತ್ತಾರೆ.
ಬೆಂಕಿ ಹೊತ್ತಿಸಿದ ಸಂಭ್ರಮದಲ್ಲಿ
ಸುಟ್ಟು ಭಸ್ಮವಾಗುವ ನಮಗೇ
ನಮ್ಮ ಶಕ್ತಿ ಗೊತ್ತಿಲ್ಲ; ಹಾಗಾಗಿ
ಜೊತೆಜೊತೆಯಾಗಿದ್ದರೂ ಅತಂತ್ರ ಸ್ಥಿತಿ ಹೋಗಲ್ಲ
ಈ ಪುಟ್ಟ ಪೆಟ್ಟಿಗೆಯ ವಾಸವೂ ತಪ್ಪೋಲ್ಲ!
ಗುರುವಾರ, ಜನವರಿ 1, 2009
ವಿಮಾ ರಂಗದ ಮೇಲೆ ಉದಾರೀಕರಣದ ಕರಿ ನೆರಳು
ವಿಮಾರಂಗದ ಮೇಲೆ ಉದಾರೀಕರಣದ ಕರಿನೆರಳು
ಸದ್ಯೋವರ್ತಮಾನದ ಜಾಗತಿಕ ಹಣಕಾಸು ಪರಿಸ್ಥಿತಿ ತಿಳಿದವರಿಗೆ ಈಗಿನ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ವಿವರಿಸಬೇಕಿಲ್ಲ. ಈಗಾಗಲೇ ನಮ್ಮ ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಹಲವು ‘ದೈತ್ಯ’ ಕಂಪನಿಗಳು ಮತ್ತವುಗಳ ಒಡೆತನದಲ್ಲಿದ್ದ ಬ್ಯಾಂಕು, ವಿಮೆ, ಇತರೆ ಹಣಕಾಸು ವ್ಯವಹಾರಗಳೆಲ್ಲ ಕುಸಿದುಬಿದ್ದು ಆ ಕಂಪನಿಗಳು ದಿವಾಳಿಯಾಗಿರುವ , ಆಗುತ್ತಿರುವ ಸಂದರ್ಭ ಇದು. ಅಮೇರಿಕಾದಲ್ಲಾದ ತಲ್ಲಣಗಳು ಹೀಗೆ ಇಡೀ ವಿಶ್ವವನ್ನೇ ಅಲ್ಲಾಡಿಸಬಹುದೆಂದು ಜಾಗತೀಕರಣ ಪ್ರಕ್ರಿಯೆ ಶುರುವಾಗುವ ಮುನ್ನ ಊಹಿಸಲು ಸಾಧ್ಯವೂ ಇರಲಿಲ್ಲ. ಆದರೆ ಈಗ ಜಾಗತೀಕರಣದ ಬಲೆ ಬೀಸಿ ಎಲ್ಲ ಸಾರ್ವಭೌಮ ದೇಶಗಳನ್ನೂ ತನ್ನ ಹಿಡಿತದಲ್ಲಿಟ್ಟುಕೊಂಡಿರುವ ಅಮೆರಿಕಕ್ಕೆ ನೆಗಡಿಯಾದರೆ ಈ ದೇಶಗಳ ಮೂಗಿನಲ್ಲಿ ನೀರು ಸೋರತೊಡಗುತ್ತದೆ. ಅದು ಕೆಮ್ಮಿದರೆ ಈ ದೇಶಗಳು ಆಸ್ಪತ್ರೆ ಸೇರುತ್ತವೆ.
ಅಮೇರಿಕದ ಆರ್ಥಿಕತೆ ಅಪಾಯದ ಅಂಚು ತಲುಪಿದೆ ಎಂದು ಹೇಳಲು ನಾವೇನು ಆರ್ಥಿಕ ತಜ್ಞರಾಗಿರಬೇಕಿಲ್ಲ. ಜಾಗತೀಕರಣ ಮತ್ತು ಉದಾರೀಕರಣದ ಹುಚ್ಚು ಹತ್ತಿಸಿ ಎಲ್ಲ ಅರ್ಥವ್ಯವಸ್ಥೆಯನ್ನೂ ಖಾಸಗಿಯವರಿಗೆ ಒಪ್ಪಿಸಿದ ಪರಿಣಾಮ ಇದು. ಜಗತ್ತಿನ ಎಲ್ಲ ದೇಶಗಳೂ ಪರಸ್ಪರ ವ್ಯಾವಹಾರಿಕವಾಗಿ ಬೆಸೆದುಕೊಂಡಿರುವ ಕಾರಣ ಅಮೆರಿಕದ ಬಿಕ್ಕಟ್ಟು ಎಲ್ಲ ದೇಶಗಳ ಅರ್ಥ ವ್ಯವಸ್ಥೆಯ ಮೇಲೂ ತನ್ನ ಪರಿಣಾಮ ತೋರುತ್ತ ಸಾಗಿದೆ. ಬ್ರಜಿಲ್ ಮತ್ತು ಇಂಡೋನೇಷಿಯಾದ ಪರಿಸ್ಥಿತಿಯಂತೂ ಶೋಚನೀಯವಾಗಿದೆ. ನಮ್ಮ ದೇಶದ ಮೇಲೆ ಈ ಕಂಪನದ ಪರಿಣಾಮ ತೀವ್ರವಾಗಿಲ್ಲವಾದರೂ ಅಲ್ಪ ಸ್ವಲ್ಪ ನಷ್ಟ ಉಂಟುಮಾಡಿದೆ. ಅಮೆರಿಕ ಮತ್ತು ಸಾಫ್ಟ್ವೇರನ್ನು ನಂಬಿದ್ದ ಬಹುತೇಕ ಖಾಸಗಿ ಸಂಸ್ಥೆಗಳು ತಮ್ಮ ನೌಕರರ ಸಂಖ್ಯೆ ತಗ್ಗಿಸುತ್ತಲೋ, ಅಥವಾ ಅವರ ಸಂಬಳ ಕಡಿತಗೊಳಿಸಿಯೋ ಸುದ್ದಿ ಮಾಡುತ್ತಲೇ ಇವೆ. ಮಾಧ್ಯಮ ಕ್ಷೇತ್ರದ ಮೇಲೂ ಇದರ ಕರಿನೆರಳು ಬಿದ್ದ ಕಾರಣ ನಿಯತಕಾಲಿಕೆಗಳ ಅವಧಿ ಬದಲಾಗತೊಡಗಿದೆ. ಕನ್ನಡದಲ್ಲೂ ಪ್ರಕಟವಾಗುವ ‘ದಿ ಸಂಡೆ ಇಂಡಿಯನ್’ ಪತ್ರಿಕೆಯ ಸ್ಥಳೀಯ ಸಾಪ್ತಾಹಿಕ ಆವೃತ್ತಿಗಳು ಪಾಕ್ಷಿಕ ಪತ್ರಿಕೆಗಳಾಗಿ ಬದಲಾಗಿವೆ.
ಪುಣ್ಯದ ಮಾತೆಂದರೆ ನಮ್ಮ ದೇಶದ ಸಾರ್ವಜನಿಕ ವಲಯದ ಬ್ಯಾಂಕು ಮತ್ತು ವಿಮಾ ವಲಯ ‘ಜಾಗತಿಕ ಕುಸಿತ’ವೆಂದು ಬಿಂಬಿಸಲಾಗಿರುವ ಅಮೆರಿಕಾ ಪ್ರಣೀತ ಅರ್ಥ ವ್ಯವಸ್ಥೆಯ ನರಳಾಟವನ್ನು ಮೆಟ್ಟಿ ನಿಂತಿವೆ. ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾ ದೊಡ್ಡ ಮಟ್ಟದಲ್ಲಿ ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುತ್ತಿರುವುದರ ಜೊತೆಜೊತೆಗೇ ಇನ್ನಿತರ ರಾಷ್ಠ್ರೀಕೃತ ಬ್ಯಾಂಕುಗಳೂ ವಿವಿಧ ಹುದ್ದೆಗಳಿಗೆ ನೇಮಕಾತಿಯ ವಿವರಗಳನ್ನು ಪ್ರಕಟಿಸುತ್ತಲೇ ಇವೆ. ಈ ದೇಶದ ಅತಿದೊಡ್ಡ ವಿಮಾ ಸಂಸ್ಥೆಯಾದ ಎಲ್ಲೈಸಿ ಬರುವ ವರ್ಷದಲ್ಲಿ ಹತ್ತು ಸಾವಿರ ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿದೆಯೆಂದು ಅದರ ಅಧ್ಯಕ್ಷರು ಪ್ರಕಟಿಸಿದ್ದಾರೆ. ಈ ಸಂಸ್ಥೆಗಳು ಗಟ್ಟಿಯಾಗಿ ನಿಲ್ಲಲು ಅವೆಲ್ಲ ಸಾರ್ವಜನಿಕ ವಲಯದಲ್ಲಿರುವುದು ಮತ್ತು ಜನರಿಗೆ ಉತ್ತರ ದಾಯಿತ್ವವನ್ನು ಹೊಂದಿರುವುದೂ ಕಾರಣ.
ಅಮೆರಿಕಕ್ಕೇನಾಗಿತ್ತು? ಹಣಕಾಸು ಬಂಡವಾಳದ ತೀರದ ದಾಹ ಹಾಗೂ ಅನಿರ್ಭಂಧಿತ ಮುಕ್ತ ಮಾರುಕಟ್ಟೆಯು ಅಲ್ಲಿನ ಪ್ರಭುತ್ವದ ನಿಯಂತ್ರಣ ಪರಿಧಿಯಿಂದ ದೂರ ಉಳಿದದ್ದೇ ಎಂದು ಈಗಾಗಲೇ ವಿಶ್ಲೇಷಿಸಲಾಗಿದೆ. ಅಲ್ಲಿ ಗೃಹಸಾಲ ನೀಡುತ್ತಿದ್ದ ಖಾಸಗೀ ಸಂಸ್ಥೆಗಳು ತಮಗೆ ಅಡವಿಡಲಾಗುವ ಸ್ಥಿರಾಸ್ತಿಯ ಮೌಲ್ಯವನ್ನು ಊಹಾತ್ಮಕವಾಗಿ ಹೆಚ್ಚಿಸಿ ಅರ್ಜಿದಾರನ ಸಾಲ ವಾಪಸಾತಿಯ ಅರ್ಹತೆಗಳನ್ನು ಲೆಕ್ಕಿಸದೇ ಸಾಲ ನೀಡಿದವು. ಸರ್ಕಾರದ ನಿಯಂತ್ರಣ ಪರಿಧಿಯನ್ನು- ಅವು ಬರಿಯ ಕಾಗದದ ಹುಲಿಗಳು-ಬೇಕೆಂತಲೇ ಕಣ್ತಪ್ಪಿಸಿ ಹೂಡಿಕೆದಾರರನ್ನು ಪುಸಲಾಯಿಸಿ ಸಾರ್ವಜನಿಕ ಬಂಡವಾಳ ಸಂಗ್ರಹಿಸಲಾಯಿತು. ಯಾವಾಗ ಸ್ತಿರಾಸ್ಥಿಯ ಮಾರುಕಟ್ಟೆ ಮೌಲ್ಯ ಸರಿಯಾಗಿ ಅಳೆಯಲಾಯಿತೋ ಆವಾಗ ಹೀಗೆ ಊಹಾತ್ಮಕವಾಗಿ ಆಕಾಶದೆತ್ತರಕ್ಕೆ ಜಿಗಿದಿದ್ದ ಈ ಖಾಸಗೀ ಹಣಕಾಸು ಸಂಸ್ಥೆಗಳ ಶೇರು ಬೆಲೆ ನೆಲ್ಲ ಕಚ್ಚ ತೊಡಗಿದವು. ಮೊದಲೇ ಹೀಗಾಗಬಹುದೆಂದು ಅರಿತಿದ್ದ ದೈತ್ಯರು ವಹಿವಾಟಿನಿಂದ ದೂರ ಉಳಿಯತೊಡಗಿದ ಕಾರಣ ಪರಿಸ್ಥಿತಿ ಮತ್ತಷ್ಟು ಹದ ಕೆಟ್ಟಿತು. ಪರಿಣಾಮ ಈ ಖಾಸಗಿಯವರ ಹುಚ್ಚಾಟಗಳ ಮೇಲೆ ಬಂಡವಾಳ ಹೂಡಿದ್ದವರೆಲ್ಲ ಪಾತಾಳಕ್ಕೆ ಬಿದ್ದರು. ಲಾಭಕ್ಕಿಂತಲೂ ಬರಿಯ ಕೈ ಬದಲಾವಣೆಯನ್ನೇ ನಂಬಿಕೊಂಡಿದ್ದ ಅದೆಷ್ಟೋ ಚಿಕ್ಕ ಪುಟ್ಟ ಕಂಪನಿಗಳು ಬಾಗಿಲು ಹಾಕಿಕೊಂಡವು. ಅವು ಜಾಗತಿಕ ಮಾರುಕಟ್ಟೆಯ ಹಲವು ಸ್ತರಗಳಲ್ಲಿ ಹೂಡಿದ್ದ ಅಥವ ಈಗಾಗಲೇ ಅಲ್ಪಸ್ವಲ್ಪ ಮುಂಗಡ ಕೊಟ್ಟು ಕಾದಿರಿಸಿದ್ದ ವ್ಯವಹಾರಗಳನ್ನೆಲ್ಲ ಅರ್ಧಕ್ಕೇ ಬಿಟ್ಟವು. ಪರಿಣಾಮ ಅಮೆರಿಕವನ್ನೇ ನಂಬಿಕೊಂಡಿರುವ ಸಾಫ್ಟ್ವೇರ್ ಪ್ರಪಂಚ ಅಲ್ಲಾಡತೊಡಗಿತು.
ಒಂದು ಅಂದಾಜಿನಂತೆ ಒಂದು ಟ್ರಿಲಿಯನ್ ಅಮೆರಿಕನ್ ಡಾಲರ್ ಹಣ ಈ ಜಾಗತಿಕ ಕುಸಿತದಿಂದಾಗಿ ಕೊಚ್ಚಿಹೋಗಿದೆ. ಬೇರ್ಸ್ಟರ್ನ್, ಎಐಜಿ, ಅವಿವಾ, ಫೋರ್ಟಿಸ್ ಇನ್ನೂ ಮುಂತಾದ ಹೂಡಿಕೆ, ಬ್ಯಾಂಕಿಂಗ್ ಮತ್ತು ವಿಮಾ ವ್ಯವಹಾರದ ಕಂಪೆನಿಗಳು ಮತ್ತೆ ತಲೆ ಎತ್ತಲಾರದ ದುರವಸ್ಥೆ ತಲುಪಿದವು. ಅಮೆರಿಕದ ಸರ್ಕಾರ ನಷ್ಟ ಪೀಡಿತ ಹಣಕಾಸು ಸಂಸ್ಥೆಗಳಿಗೆ, ಬ್ಯಾಂಕ್ ಮತ್ತು ವಿಮಾ ಕಂಪನಿಗಳಿಗೆ ೭೦೦ ಬಿಲಿಯನ್ ಡಾಲರ್ ನೆರವು ಘೋಷಿಸಿ ಅವುಗಳ ನೆರವಿಗೆ ನಿಂತಿದೆ. ಎಐಜಿ ಕಂಪನಿಯ ೭೯.೯% ಶೇರುಗಳನ್ನು ಸರ್ಕಾರವೇ ಖರೀದಿಸಿ ಅದಕ್ಕೆ ೮೫ ಬಿಲಿಯನ್ ಡಾಲರ್ ನೆರವು ಕೊಟ್ಟಿದೆ. ಬ್ಯಾಂಕ್ ಆಫ್ ಅಮೆರಿಕ ಮೆರಿಲ್ ಲಿಂಚ್ ಕಂಪನಿಯನ್ನು ವಶಪಡಿಸಿಕೊಂಡಿದೆ. ಬ್ರಿಟನ್ ಸರ್ಕಾರವಂತೂ ಖಾಸಗೀ ಬ್ಯಾಂಕುಗಳನ್ನೆಲ್ಲ ತನ್ನ ಸುಪರ್ದಿಗೆ ತೆಗೆದುಕೊಂಡು ಪುನಃ ರಾಷ್ಠ್ರೀಕರಣದ ಕೆಲಸಕ್ಕೆ ಕೈ ಹಾಕಿದೆ.
ಪರಿಸ್ಥಿತಿ ಹೀಗಿರುವಾಗ ಲಜ್ಜರಹಿತವಾದ ಮತ್ತು ಅಮೆರಿಕದ ಅಣತಿಗೆ ತಕ್ಕಂತೆ ಕುಣಿಯುತ್ತಿರುವ ಮನಮೋಹನ್ ಸಿಂಗ್ ಪ್ರಣೀತ ಉದಾರವಾದೀ ಸರ್ಕಾರ ಲೋಕಸಭೆ ಮತ್ತು ರಾಜ್ಯಸಭೆಗಳ ಕಲಾಪದಲ್ಲಿ ವಿಮಾ ಮಸೂದೆಗೆ ತಿದ್ದುಪಡಿ ತರುವ ಅಧಿಸೂಚನೆ ಮಂಡಿಸಿದೆ. ಹೊಸ ವಿಧೇಯಕದ ಪ್ರಕಾರ ವಿಮಾ ವಲಯದಲ್ಲಿ ಖಾಸಗೀ ಬಂಡವಾಳ ಹೂಡಿಕೆ ೪೯% ಕ್ಕೆ ಏರುತ್ತದೆ. ಮತ್ತು ಸಾರ್ವಜನಿಕ ರಂಗದ ವಿಮಾ ಸಂಸ್ಥೆ ಎಲ್ಲೈಸಿಯ ಬಂಡವಾಳವನ್ನು ಈಗಿರುವ ೫ ಕೋಟಿಗಳಿಂದ ೧೦೦ ಕೋಟಿಗಳಿಗೆ ಹೆಚ್ಚಿಸಿ ಸಾರ್ವಜನಿಕವಾಗಿ ಅದನ್ನು ಸಂಗ್ರಹಿಸಲಾಗುತ್ತದೆ. ಅಂದರೆ ಅದನ್ನು ಖಾಸಗಿಯವರಿಗೆ ಹಂತಹಂತವಾಗಿ ಬಿಟ್ಟುಕೊಡಲಾಗುತ್ತದೆ. ಮೇಲ್ನೋಟಕ್ಕೆ ಇದೊಂದು ಉದಾರವಾದೀ ಸರ್ಕಾರದ ಧೃಢ ಹೆಜ್ಜೆಯಂತೆ ಮತ್ತು ಬಂಡವಾಳವನ್ನು ಆಕರ್ಷಿಸುವ ಯೋಜನೆಯಂತೆ ಕಂಡರೂ ಇದೂ ಅಮೆರಿಕದ ಕನಸನ್ನು ನನಸಾಗಿಸುವ ದುರುದ್ದೇಶ ಹೊಂದಿರುವ ಮತ್ತು ಈ ದೇಶದ ಅಸಂಖ್ಯಾತ ಜನರು ಸಾರ್ವಜನಿಕ ಸಂಸ್ಥೆಗಳ ಮೇಲೆ ಇಟ್ಟಿರುವ ಅಚಲ ವಿಶ್ವಾಸವನ್ನೇ ಪ್ರಶ್ನಿಸುತ್ತಿರುವ ವಿಧೇಯಕವಾಗಿದೆ. ಸರ್ಕಾರದ ಪಂಚವಾರ್ಷಿಕ ಯೋಜನೆಗಳೂ ಸೇರಿದಂತೆ ದೇಶದ ಬಹುತೇಕ ನೀರಾವರಿ, ಸಾರಿಗೆ ಮತ್ತು ವಿದ್ಯುತ್ ಯೋಜನೆಗಳಿಗೆ ಹಣಕಾಸು ನೆರವು ನೀಡುತ್ತಿದ್ದ ಬೃಹತ್ ಉದ್ಯಮವೊಂದು ಖಾಸಗಿಯವರ ಪಾಲಾದರೆ ದೇಶದ ಆರ್ಥಿಕತೆಯ ಮೇಲಾಗುವ ಪರಿಣಾಮಗಳು ಒಂದೆರಡಲ್ಲ. ಮುಖ್ಯವಾಗಿ ಜಾಗತಿಕ ವಿಮಾವಲಯದಲ್ಲಿ ತಾವೇ ದೈತ್ಯರೆಂದು ಬಿಂಬಿಸಿಕೊಳ್ಳುವ ಎಐಜಿ, ಪ್ಯುಡೆನ್ಶಿಯಲ್, ಅವಿವಾ ಈಗಾಗಲೇ ನಷ್ಟದ ಭರದಿಂದ ಕುಸಿದು ಕೂತಿದ್ದರೂ ಈ ನೆಲದಲ್ಲಿ ಈಗಾಗಲೇ ಕಾಲಿಟ್ಟಿರುವುದರಿಂದ ಸಾರ್ವಜನಿಕ ಸಂಸ್ಥೆಯೊಂದು ಇಷ್ಟು ದಿನಗಳ ಕಾಲ ಸಂಗ್ರಹಿಸಿರುವ ದೊಡ್ಡ ಮೊತ್ತದ ‘ಲೈಫ್ ಫಂಡ್’ ಮತ್ತು ವಿಶ್ವಾಸದ ಜಾಲವನ್ನು ಬೇಧಿಸಿ ಲಾಭಬಡುಕತನದ ಪೈಪೋಟಿಯ ಮೂಲಕ ಹುಚ್ಚು ಹಿಡಿಸುತ್ತವೆ. ಲಾಭದ ಆಸೆಗೆ ಬಿದ್ದ ಗ್ರಾಹಕರು ಅರಿವು ಪಡೆಯುವುದರೊಳಗಾಗಿ ತಮ್ಮ ಕಷ್ಟಾರ್ಜಿತವನ್ನೆಲ್ಲ ಕಳೆದುಕೊಂಡಿರುತ್ತಾರೆ. ಶೇರು ಮಾರುಕಟ್ಟೆಯೆಂಬ ಮಾಯಾಮೋಹಿನಿಯ ಪಾಶದ ಜೂಜಿಗೆ ಬಿದ್ದ ಸಾಮಾನ್ಯ ಹೂಡಿಕೆದಾರ ತನ್ನದೆಲ್ಲವನ್ನೂ ಕಳೆದುಕೊಳ್ಳುತ್ತಾನೆ.
ಖಾಸಗೀ ಕಂಪನಿಗಳ ಕೆಲ ಸ್ವಾರಸ್ಯಗಳು:
1.AIG (ಟಾಟಾ ಕಂಪನಿಯ ಸಹಯೋಗಿ) ದಿವಾಳಿ ಘೋಷಿಸಲು ಕೆಲವೇ ಗಂಟೆಗಳ ಮೊದಲು ಅಮೆರಿಕದ ಸರ್ಕಾರ ಕೊಡಮಾಡಿದ ೮೫ ಬಿಲಿಯನ್ ಡಾಲರ್ ಮೂಲಕ ಕೃತಕ ಉಸಿರಾಟ ಪಡೆಯಿತು.
೨. ಪ್ಯುಡೆನ್ಶಿಯಲ್ ದಾವೆ ಕೊಡಲಾಗದೇ ತನ್ನನ್ನು ತಾನು ದಿವಾಳಿ ಎಂದು ಘೋಷಿಸಿಕೊಂಡಿದ್ದ ಇತಿಹಾಸ ಹೊಂದಿದೆ.
೩. ಫೋರ್ಟಿಸ್ ತನ್ನೆಲ್ಲ ಹಕ್ಕುಗಳನ್ನು ಯೂರೋಪಿನ ಮೂರು ದೇಶಗಳಿಗೆ ಮಾರಿಕೊಂಡಿದೆ.
೪. ING ಮತ್ತು aegon ಕಂಪೆನಿಗಳಿಗೆ ಡಚ್ ಸರ್ಕಾರ ಹಣಕಾಸು ಸಹಾಯ ವಿಸ್ತರಿಸಿ ಬೆಂಬಲಿಸಿದೆ.
೫. ಅಮೆರಿಕ, ಯೂರೋಪ್, ಜಪಾನ್ ದೇಶಗಳಲ್ಲಿ ವಿಮಾ ವಹಿವಾಟು ಋಣಾತ್ಮಕವಾಗುತ್ತಿದೆ.
ಜಾಗತಿಕ ಸ್ಥಿತಿ ಹೀಗಿರುವಾಗ ಮುಕ್ತ ಮಾರುಕಟ್ಟೆಯ ಉದಾರೀಕರಣ ನೀತಿ ವಿಫಲವಾಗಿರುವ ಉದಾಹರಣೆ ಕಣ್ಣೆದುರೇ ಇರುವಾಗ ಅಲ್ಲದೇ ಅಮೆರಿಕಾ, ಯೂರೋಪ್, ಡಚ್ ಸರ್ಕಾರಗಳು ತಮ್ಮ ದೇಶದ ಕಂಪನಿಗಳು ದಿವಾಳಿಯಾಗುವುದನ್ನು ತಪ್ಪಿಸಲು ಅವನ್ನೆಲ್ಲ ಕೊಂಡು ಕೊಂಡು ರಾಷ್ಟ್ರೀಕರಣ ಮಾಡುತ್ತಿರುವ ವರ್ತಮಾನದಲ್ಲಿ ನಮ್ಮ ದೇಶದ ನೇತಾರರು ನಮ್ಮ ಸಾರ್ವಜನಿಕ ವಲಯವನ್ನು ಖಾಸಗಿಗೊಳಿಸುವ ವಿಧೇಯಕವನ್ನು ಮಡಿಸುತ್ತಿದ್ದಾರೆ. ಆ ಮೂಲಕ ಅಮೆರಿಕದ ದುರುದ್ದೇಶಗಳನ್ನು ಈ ದೇಶದ ಸಾಮಾನ್ಯ ಜನತೆಯ ಮೇಲೆ ಹೇರುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಜಾಗತಿಕ ಬಿಕ್ಕಟ್ಟಿನ ಪರಿಣಾಮ ನಮ್ಮ ಅರ್ಥ ವ್ಯವಸ್ಥೆಯ ಮೇಲಾಗದಂತೆ ನಮ್ಮ ಸಾರ್ವಜನಿಕ ರಂಗವನ್ನು ಬಲಪಡಿಸಬೇಕಿತ್ತು. ಅದು ಬಿಟ್ಟು ನಷ್ಟದಲ್ಲಿರುವ ವಿದೇಶೀ ಕಂಪನಿಗಳಿಗೆ ನಡೆಮುಡಿ ಹಾಸುತ್ತಿರುವ ಕಾರಣವಾದರೂ ಏನು? ಜಾಗತಿಕ ಹಣಕಾಸು ಬಂಡವಾಳ ಅಂದರೆ ಅಮೆರಿಕದ ಪ್ರಾಬಲ್ಯ ಮತ್ತು ಇಷ್ಟಾರ್ಥವನ್ನು ಪೂರೈಸಲು ದೇಶದ ಆರ್ಥಿಕ ಹಿತಾಸಕ್ತಿಯನ್ನು ಬಲಿಕೊಡಲು ಈ ಸರ್ಕಾರ ಹೊರಟಿದೆ.
ಇನ್ನು ಕೆಲವೇ ದಿನಗಳ ತನ್ನ ಆಯುಷ್ಯ ಹೊಂದಿರುವ ಈ ಸರ್ಕಾರ ಜನ ವಿರೋಧಿ ಮತ್ತು ದೇಶದ ಆರ್ಥಿಕ ಭದ್ರತೆಗೆ ವಿರುದ್ಧವಾದ ಈ ಸನ್ನದನ್ನು ಪ್ರಕಟಿಸುವ ಉದ್ದೇಶವಾದರೂ ಏನು? ನಮ್ಮ ಎಷ್ಟು ಜನ ಲೋಕಸಭಾಸದಸ್ಯರಿಗೆ/ ರಾಜ್ಯ ಸಭಾ ಸದಸ್ಯರಿಗೆ ಭವಿಷ್ಯದ ಚಿಂತೆ ಇದೆ? ಎಷ್ಟು ಜನರಿಗೆ ಸಮಸ್ಯೆಯ ಅರಿವಿದೆ? ಅದನ್ನು ನಾವು ಅವರಿಗೆ ತಿಳಿಸಿ ಹೇಳಬೇಕಿದೆ. ಸಮೂಹ ಮಾಧ್ಯಮಗಳ ಮೂಲಕ ಜನಸಾಮಾನ್ಯರಿಗೆ ಪರಿಸ್ಥಿತಿಯನ್ನು ವಿವರಿಸುವ ಕೆಲಸ ಈಗ ಜರೂರಾಗಿ ಆಗಬೇಕಿದೆ. ಮತ್ತು ನಮ್ಮ ಮುದ್ರಣ ಮಾಧ್ಯಮವೂ ಸಮಸ್ಯೆಯನ್ನು ಕೂಲಂಕುಷವಾಗಿ ಅವಲೋಕಿಸುವ ಮತ್ತು ವಿಶ್ಲೇಷಿಸುವುದೂ ಅತ್ಯಗತ್ಯ ಮಾಡಲೇ ಬೇಕಾದ ಕೆಲಸವಾಗಿದೆ.
ಸದ್ಯೋವರ್ತಮಾನದ ಜಾಗತಿಕ ಹಣಕಾಸು ಪರಿಸ್ಥಿತಿ ತಿಳಿದವರಿಗೆ ಈಗಿನ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ವಿವರಿಸಬೇಕಿಲ್ಲ. ಈಗಾಗಲೇ ನಮ್ಮ ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಹಲವು ‘ದೈತ್ಯ’ ಕಂಪನಿಗಳು ಮತ್ತವುಗಳ ಒಡೆತನದಲ್ಲಿದ್ದ ಬ್ಯಾಂಕು, ವಿಮೆ, ಇತರೆ ಹಣಕಾಸು ವ್ಯವಹಾರಗಳೆಲ್ಲ ಕುಸಿದುಬಿದ್ದು ಆ ಕಂಪನಿಗಳು ದಿವಾಳಿಯಾಗಿರುವ , ಆಗುತ್ತಿರುವ ಸಂದರ್ಭ ಇದು. ಅಮೇರಿಕಾದಲ್ಲಾದ ತಲ್ಲಣಗಳು ಹೀಗೆ ಇಡೀ ವಿಶ್ವವನ್ನೇ ಅಲ್ಲಾಡಿಸಬಹುದೆಂದು ಜಾಗತೀಕರಣ ಪ್ರಕ್ರಿಯೆ ಶುರುವಾಗುವ ಮುನ್ನ ಊಹಿಸಲು ಸಾಧ್ಯವೂ ಇರಲಿಲ್ಲ. ಆದರೆ ಈಗ ಜಾಗತೀಕರಣದ ಬಲೆ ಬೀಸಿ ಎಲ್ಲ ಸಾರ್ವಭೌಮ ದೇಶಗಳನ್ನೂ ತನ್ನ ಹಿಡಿತದಲ್ಲಿಟ್ಟುಕೊಂಡಿರುವ ಅಮೆರಿಕಕ್ಕೆ ನೆಗಡಿಯಾದರೆ ಈ ದೇಶಗಳ ಮೂಗಿನಲ್ಲಿ ನೀರು ಸೋರತೊಡಗುತ್ತದೆ. ಅದು ಕೆಮ್ಮಿದರೆ ಈ ದೇಶಗಳು ಆಸ್ಪತ್ರೆ ಸೇರುತ್ತವೆ.
ಅಮೇರಿಕದ ಆರ್ಥಿಕತೆ ಅಪಾಯದ ಅಂಚು ತಲುಪಿದೆ ಎಂದು ಹೇಳಲು ನಾವೇನು ಆರ್ಥಿಕ ತಜ್ಞರಾಗಿರಬೇಕಿಲ್ಲ. ಜಾಗತೀಕರಣ ಮತ್ತು ಉದಾರೀಕರಣದ ಹುಚ್ಚು ಹತ್ತಿಸಿ ಎಲ್ಲ ಅರ್ಥವ್ಯವಸ್ಥೆಯನ್ನೂ ಖಾಸಗಿಯವರಿಗೆ ಒಪ್ಪಿಸಿದ ಪರಿಣಾಮ ಇದು. ಜಗತ್ತಿನ ಎಲ್ಲ ದೇಶಗಳೂ ಪರಸ್ಪರ ವ್ಯಾವಹಾರಿಕವಾಗಿ ಬೆಸೆದುಕೊಂಡಿರುವ ಕಾರಣ ಅಮೆರಿಕದ ಬಿಕ್ಕಟ್ಟು ಎಲ್ಲ ದೇಶಗಳ ಅರ್ಥ ವ್ಯವಸ್ಥೆಯ ಮೇಲೂ ತನ್ನ ಪರಿಣಾಮ ತೋರುತ್ತ ಸಾಗಿದೆ. ಬ್ರಜಿಲ್ ಮತ್ತು ಇಂಡೋನೇಷಿಯಾದ ಪರಿಸ್ಥಿತಿಯಂತೂ ಶೋಚನೀಯವಾಗಿದೆ. ನಮ್ಮ ದೇಶದ ಮೇಲೆ ಈ ಕಂಪನದ ಪರಿಣಾಮ ತೀವ್ರವಾಗಿಲ್ಲವಾದರೂ ಅಲ್ಪ ಸ್ವಲ್ಪ ನಷ್ಟ ಉಂಟುಮಾಡಿದೆ. ಅಮೆರಿಕ ಮತ್ತು ಸಾಫ್ಟ್ವೇರನ್ನು ನಂಬಿದ್ದ ಬಹುತೇಕ ಖಾಸಗಿ ಸಂಸ್ಥೆಗಳು ತಮ್ಮ ನೌಕರರ ಸಂಖ್ಯೆ ತಗ್ಗಿಸುತ್ತಲೋ, ಅಥವಾ ಅವರ ಸಂಬಳ ಕಡಿತಗೊಳಿಸಿಯೋ ಸುದ್ದಿ ಮಾಡುತ್ತಲೇ ಇವೆ. ಮಾಧ್ಯಮ ಕ್ಷೇತ್ರದ ಮೇಲೂ ಇದರ ಕರಿನೆರಳು ಬಿದ್ದ ಕಾರಣ ನಿಯತಕಾಲಿಕೆಗಳ ಅವಧಿ ಬದಲಾಗತೊಡಗಿದೆ. ಕನ್ನಡದಲ್ಲೂ ಪ್ರಕಟವಾಗುವ ‘ದಿ ಸಂಡೆ ಇಂಡಿಯನ್’ ಪತ್ರಿಕೆಯ ಸ್ಥಳೀಯ ಸಾಪ್ತಾಹಿಕ ಆವೃತ್ತಿಗಳು ಪಾಕ್ಷಿಕ ಪತ್ರಿಕೆಗಳಾಗಿ ಬದಲಾಗಿವೆ.
ಪುಣ್ಯದ ಮಾತೆಂದರೆ ನಮ್ಮ ದೇಶದ ಸಾರ್ವಜನಿಕ ವಲಯದ ಬ್ಯಾಂಕು ಮತ್ತು ವಿಮಾ ವಲಯ ‘ಜಾಗತಿಕ ಕುಸಿತ’ವೆಂದು ಬಿಂಬಿಸಲಾಗಿರುವ ಅಮೆರಿಕಾ ಪ್ರಣೀತ ಅರ್ಥ ವ್ಯವಸ್ಥೆಯ ನರಳಾಟವನ್ನು ಮೆಟ್ಟಿ ನಿಂತಿವೆ. ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾ ದೊಡ್ಡ ಮಟ್ಟದಲ್ಲಿ ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುತ್ತಿರುವುದರ ಜೊತೆಜೊತೆಗೇ ಇನ್ನಿತರ ರಾಷ್ಠ್ರೀಕೃತ ಬ್ಯಾಂಕುಗಳೂ ವಿವಿಧ ಹುದ್ದೆಗಳಿಗೆ ನೇಮಕಾತಿಯ ವಿವರಗಳನ್ನು ಪ್ರಕಟಿಸುತ್ತಲೇ ಇವೆ. ಈ ದೇಶದ ಅತಿದೊಡ್ಡ ವಿಮಾ ಸಂಸ್ಥೆಯಾದ ಎಲ್ಲೈಸಿ ಬರುವ ವರ್ಷದಲ್ಲಿ ಹತ್ತು ಸಾವಿರ ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿದೆಯೆಂದು ಅದರ ಅಧ್ಯಕ್ಷರು ಪ್ರಕಟಿಸಿದ್ದಾರೆ. ಈ ಸಂಸ್ಥೆಗಳು ಗಟ್ಟಿಯಾಗಿ ನಿಲ್ಲಲು ಅವೆಲ್ಲ ಸಾರ್ವಜನಿಕ ವಲಯದಲ್ಲಿರುವುದು ಮತ್ತು ಜನರಿಗೆ ಉತ್ತರ ದಾಯಿತ್ವವನ್ನು ಹೊಂದಿರುವುದೂ ಕಾರಣ.
ಅಮೆರಿಕಕ್ಕೇನಾಗಿತ್ತು? ಹಣಕಾಸು ಬಂಡವಾಳದ ತೀರದ ದಾಹ ಹಾಗೂ ಅನಿರ್ಭಂಧಿತ ಮುಕ್ತ ಮಾರುಕಟ್ಟೆಯು ಅಲ್ಲಿನ ಪ್ರಭುತ್ವದ ನಿಯಂತ್ರಣ ಪರಿಧಿಯಿಂದ ದೂರ ಉಳಿದದ್ದೇ ಎಂದು ಈಗಾಗಲೇ ವಿಶ್ಲೇಷಿಸಲಾಗಿದೆ. ಅಲ್ಲಿ ಗೃಹಸಾಲ ನೀಡುತ್ತಿದ್ದ ಖಾಸಗೀ ಸಂಸ್ಥೆಗಳು ತಮಗೆ ಅಡವಿಡಲಾಗುವ ಸ್ಥಿರಾಸ್ತಿಯ ಮೌಲ್ಯವನ್ನು ಊಹಾತ್ಮಕವಾಗಿ ಹೆಚ್ಚಿಸಿ ಅರ್ಜಿದಾರನ ಸಾಲ ವಾಪಸಾತಿಯ ಅರ್ಹತೆಗಳನ್ನು ಲೆಕ್ಕಿಸದೇ ಸಾಲ ನೀಡಿದವು. ಸರ್ಕಾರದ ನಿಯಂತ್ರಣ ಪರಿಧಿಯನ್ನು- ಅವು ಬರಿಯ ಕಾಗದದ ಹುಲಿಗಳು-ಬೇಕೆಂತಲೇ ಕಣ್ತಪ್ಪಿಸಿ ಹೂಡಿಕೆದಾರರನ್ನು ಪುಸಲಾಯಿಸಿ ಸಾರ್ವಜನಿಕ ಬಂಡವಾಳ ಸಂಗ್ರಹಿಸಲಾಯಿತು. ಯಾವಾಗ ಸ್ತಿರಾಸ್ಥಿಯ ಮಾರುಕಟ್ಟೆ ಮೌಲ್ಯ ಸರಿಯಾಗಿ ಅಳೆಯಲಾಯಿತೋ ಆವಾಗ ಹೀಗೆ ಊಹಾತ್ಮಕವಾಗಿ ಆಕಾಶದೆತ್ತರಕ್ಕೆ ಜಿಗಿದಿದ್ದ ಈ ಖಾಸಗೀ ಹಣಕಾಸು ಸಂಸ್ಥೆಗಳ ಶೇರು ಬೆಲೆ ನೆಲ್ಲ ಕಚ್ಚ ತೊಡಗಿದವು. ಮೊದಲೇ ಹೀಗಾಗಬಹುದೆಂದು ಅರಿತಿದ್ದ ದೈತ್ಯರು ವಹಿವಾಟಿನಿಂದ ದೂರ ಉಳಿಯತೊಡಗಿದ ಕಾರಣ ಪರಿಸ್ಥಿತಿ ಮತ್ತಷ್ಟು ಹದ ಕೆಟ್ಟಿತು. ಪರಿಣಾಮ ಈ ಖಾಸಗಿಯವರ ಹುಚ್ಚಾಟಗಳ ಮೇಲೆ ಬಂಡವಾಳ ಹೂಡಿದ್ದವರೆಲ್ಲ ಪಾತಾಳಕ್ಕೆ ಬಿದ್ದರು. ಲಾಭಕ್ಕಿಂತಲೂ ಬರಿಯ ಕೈ ಬದಲಾವಣೆಯನ್ನೇ ನಂಬಿಕೊಂಡಿದ್ದ ಅದೆಷ್ಟೋ ಚಿಕ್ಕ ಪುಟ್ಟ ಕಂಪನಿಗಳು ಬಾಗಿಲು ಹಾಕಿಕೊಂಡವು. ಅವು ಜಾಗತಿಕ ಮಾರುಕಟ್ಟೆಯ ಹಲವು ಸ್ತರಗಳಲ್ಲಿ ಹೂಡಿದ್ದ ಅಥವ ಈಗಾಗಲೇ ಅಲ್ಪಸ್ವಲ್ಪ ಮುಂಗಡ ಕೊಟ್ಟು ಕಾದಿರಿಸಿದ್ದ ವ್ಯವಹಾರಗಳನ್ನೆಲ್ಲ ಅರ್ಧಕ್ಕೇ ಬಿಟ್ಟವು. ಪರಿಣಾಮ ಅಮೆರಿಕವನ್ನೇ ನಂಬಿಕೊಂಡಿರುವ ಸಾಫ್ಟ್ವೇರ್ ಪ್ರಪಂಚ ಅಲ್ಲಾಡತೊಡಗಿತು.
ಒಂದು ಅಂದಾಜಿನಂತೆ ಒಂದು ಟ್ರಿಲಿಯನ್ ಅಮೆರಿಕನ್ ಡಾಲರ್ ಹಣ ಈ ಜಾಗತಿಕ ಕುಸಿತದಿಂದಾಗಿ ಕೊಚ್ಚಿಹೋಗಿದೆ. ಬೇರ್ಸ್ಟರ್ನ್, ಎಐಜಿ, ಅವಿವಾ, ಫೋರ್ಟಿಸ್ ಇನ್ನೂ ಮುಂತಾದ ಹೂಡಿಕೆ, ಬ್ಯಾಂಕಿಂಗ್ ಮತ್ತು ವಿಮಾ ವ್ಯವಹಾರದ ಕಂಪೆನಿಗಳು ಮತ್ತೆ ತಲೆ ಎತ್ತಲಾರದ ದುರವಸ್ಥೆ ತಲುಪಿದವು. ಅಮೆರಿಕದ ಸರ್ಕಾರ ನಷ್ಟ ಪೀಡಿತ ಹಣಕಾಸು ಸಂಸ್ಥೆಗಳಿಗೆ, ಬ್ಯಾಂಕ್ ಮತ್ತು ವಿಮಾ ಕಂಪನಿಗಳಿಗೆ ೭೦೦ ಬಿಲಿಯನ್ ಡಾಲರ್ ನೆರವು ಘೋಷಿಸಿ ಅವುಗಳ ನೆರವಿಗೆ ನಿಂತಿದೆ. ಎಐಜಿ ಕಂಪನಿಯ ೭೯.೯% ಶೇರುಗಳನ್ನು ಸರ್ಕಾರವೇ ಖರೀದಿಸಿ ಅದಕ್ಕೆ ೮೫ ಬಿಲಿಯನ್ ಡಾಲರ್ ನೆರವು ಕೊಟ್ಟಿದೆ. ಬ್ಯಾಂಕ್ ಆಫ್ ಅಮೆರಿಕ ಮೆರಿಲ್ ಲಿಂಚ್ ಕಂಪನಿಯನ್ನು ವಶಪಡಿಸಿಕೊಂಡಿದೆ. ಬ್ರಿಟನ್ ಸರ್ಕಾರವಂತೂ ಖಾಸಗೀ ಬ್ಯಾಂಕುಗಳನ್ನೆಲ್ಲ ತನ್ನ ಸುಪರ್ದಿಗೆ ತೆಗೆದುಕೊಂಡು ಪುನಃ ರಾಷ್ಠ್ರೀಕರಣದ ಕೆಲಸಕ್ಕೆ ಕೈ ಹಾಕಿದೆ.
ಪರಿಸ್ಥಿತಿ ಹೀಗಿರುವಾಗ ಲಜ್ಜರಹಿತವಾದ ಮತ್ತು ಅಮೆರಿಕದ ಅಣತಿಗೆ ತಕ್ಕಂತೆ ಕುಣಿಯುತ್ತಿರುವ ಮನಮೋಹನ್ ಸಿಂಗ್ ಪ್ರಣೀತ ಉದಾರವಾದೀ ಸರ್ಕಾರ ಲೋಕಸಭೆ ಮತ್ತು ರಾಜ್ಯಸಭೆಗಳ ಕಲಾಪದಲ್ಲಿ ವಿಮಾ ಮಸೂದೆಗೆ ತಿದ್ದುಪಡಿ ತರುವ ಅಧಿಸೂಚನೆ ಮಂಡಿಸಿದೆ. ಹೊಸ ವಿಧೇಯಕದ ಪ್ರಕಾರ ವಿಮಾ ವಲಯದಲ್ಲಿ ಖಾಸಗೀ ಬಂಡವಾಳ ಹೂಡಿಕೆ ೪೯% ಕ್ಕೆ ಏರುತ್ತದೆ. ಮತ್ತು ಸಾರ್ವಜನಿಕ ರಂಗದ ವಿಮಾ ಸಂಸ್ಥೆ ಎಲ್ಲೈಸಿಯ ಬಂಡವಾಳವನ್ನು ಈಗಿರುವ ೫ ಕೋಟಿಗಳಿಂದ ೧೦೦ ಕೋಟಿಗಳಿಗೆ ಹೆಚ್ಚಿಸಿ ಸಾರ್ವಜನಿಕವಾಗಿ ಅದನ್ನು ಸಂಗ್ರಹಿಸಲಾಗುತ್ತದೆ. ಅಂದರೆ ಅದನ್ನು ಖಾಸಗಿಯವರಿಗೆ ಹಂತಹಂತವಾಗಿ ಬಿಟ್ಟುಕೊಡಲಾಗುತ್ತದೆ. ಮೇಲ್ನೋಟಕ್ಕೆ ಇದೊಂದು ಉದಾರವಾದೀ ಸರ್ಕಾರದ ಧೃಢ ಹೆಜ್ಜೆಯಂತೆ ಮತ್ತು ಬಂಡವಾಳವನ್ನು ಆಕರ್ಷಿಸುವ ಯೋಜನೆಯಂತೆ ಕಂಡರೂ ಇದೂ ಅಮೆರಿಕದ ಕನಸನ್ನು ನನಸಾಗಿಸುವ ದುರುದ್ದೇಶ ಹೊಂದಿರುವ ಮತ್ತು ಈ ದೇಶದ ಅಸಂಖ್ಯಾತ ಜನರು ಸಾರ್ವಜನಿಕ ಸಂಸ್ಥೆಗಳ ಮೇಲೆ ಇಟ್ಟಿರುವ ಅಚಲ ವಿಶ್ವಾಸವನ್ನೇ ಪ್ರಶ್ನಿಸುತ್ತಿರುವ ವಿಧೇಯಕವಾಗಿದೆ. ಸರ್ಕಾರದ ಪಂಚವಾರ್ಷಿಕ ಯೋಜನೆಗಳೂ ಸೇರಿದಂತೆ ದೇಶದ ಬಹುತೇಕ ನೀರಾವರಿ, ಸಾರಿಗೆ ಮತ್ತು ವಿದ್ಯುತ್ ಯೋಜನೆಗಳಿಗೆ ಹಣಕಾಸು ನೆರವು ನೀಡುತ್ತಿದ್ದ ಬೃಹತ್ ಉದ್ಯಮವೊಂದು ಖಾಸಗಿಯವರ ಪಾಲಾದರೆ ದೇಶದ ಆರ್ಥಿಕತೆಯ ಮೇಲಾಗುವ ಪರಿಣಾಮಗಳು ಒಂದೆರಡಲ್ಲ. ಮುಖ್ಯವಾಗಿ ಜಾಗತಿಕ ವಿಮಾವಲಯದಲ್ಲಿ ತಾವೇ ದೈತ್ಯರೆಂದು ಬಿಂಬಿಸಿಕೊಳ್ಳುವ ಎಐಜಿ, ಪ್ಯುಡೆನ್ಶಿಯಲ್, ಅವಿವಾ ಈಗಾಗಲೇ ನಷ್ಟದ ಭರದಿಂದ ಕುಸಿದು ಕೂತಿದ್ದರೂ ಈ ನೆಲದಲ್ಲಿ ಈಗಾಗಲೇ ಕಾಲಿಟ್ಟಿರುವುದರಿಂದ ಸಾರ್ವಜನಿಕ ಸಂಸ್ಥೆಯೊಂದು ಇಷ್ಟು ದಿನಗಳ ಕಾಲ ಸಂಗ್ರಹಿಸಿರುವ ದೊಡ್ಡ ಮೊತ್ತದ ‘ಲೈಫ್ ಫಂಡ್’ ಮತ್ತು ವಿಶ್ವಾಸದ ಜಾಲವನ್ನು ಬೇಧಿಸಿ ಲಾಭಬಡುಕತನದ ಪೈಪೋಟಿಯ ಮೂಲಕ ಹುಚ್ಚು ಹಿಡಿಸುತ್ತವೆ. ಲಾಭದ ಆಸೆಗೆ ಬಿದ್ದ ಗ್ರಾಹಕರು ಅರಿವು ಪಡೆಯುವುದರೊಳಗಾಗಿ ತಮ್ಮ ಕಷ್ಟಾರ್ಜಿತವನ್ನೆಲ್ಲ ಕಳೆದುಕೊಂಡಿರುತ್ತಾರೆ. ಶೇರು ಮಾರುಕಟ್ಟೆಯೆಂಬ ಮಾಯಾಮೋಹಿನಿಯ ಪಾಶದ ಜೂಜಿಗೆ ಬಿದ್ದ ಸಾಮಾನ್ಯ ಹೂಡಿಕೆದಾರ ತನ್ನದೆಲ್ಲವನ್ನೂ ಕಳೆದುಕೊಳ್ಳುತ್ತಾನೆ.
ಖಾಸಗೀ ಕಂಪನಿಗಳ ಕೆಲ ಸ್ವಾರಸ್ಯಗಳು:
1.AIG (ಟಾಟಾ ಕಂಪನಿಯ ಸಹಯೋಗಿ) ದಿವಾಳಿ ಘೋಷಿಸಲು ಕೆಲವೇ ಗಂಟೆಗಳ ಮೊದಲು ಅಮೆರಿಕದ ಸರ್ಕಾರ ಕೊಡಮಾಡಿದ ೮೫ ಬಿಲಿಯನ್ ಡಾಲರ್ ಮೂಲಕ ಕೃತಕ ಉಸಿರಾಟ ಪಡೆಯಿತು.
೨. ಪ್ಯುಡೆನ್ಶಿಯಲ್ ದಾವೆ ಕೊಡಲಾಗದೇ ತನ್ನನ್ನು ತಾನು ದಿವಾಳಿ ಎಂದು ಘೋಷಿಸಿಕೊಂಡಿದ್ದ ಇತಿಹಾಸ ಹೊಂದಿದೆ.
೩. ಫೋರ್ಟಿಸ್ ತನ್ನೆಲ್ಲ ಹಕ್ಕುಗಳನ್ನು ಯೂರೋಪಿನ ಮೂರು ದೇಶಗಳಿಗೆ ಮಾರಿಕೊಂಡಿದೆ.
೪. ING ಮತ್ತು aegon ಕಂಪೆನಿಗಳಿಗೆ ಡಚ್ ಸರ್ಕಾರ ಹಣಕಾಸು ಸಹಾಯ ವಿಸ್ತರಿಸಿ ಬೆಂಬಲಿಸಿದೆ.
೫. ಅಮೆರಿಕ, ಯೂರೋಪ್, ಜಪಾನ್ ದೇಶಗಳಲ್ಲಿ ವಿಮಾ ವಹಿವಾಟು ಋಣಾತ್ಮಕವಾಗುತ್ತಿದೆ.
ಜಾಗತಿಕ ಸ್ಥಿತಿ ಹೀಗಿರುವಾಗ ಮುಕ್ತ ಮಾರುಕಟ್ಟೆಯ ಉದಾರೀಕರಣ ನೀತಿ ವಿಫಲವಾಗಿರುವ ಉದಾಹರಣೆ ಕಣ್ಣೆದುರೇ ಇರುವಾಗ ಅಲ್ಲದೇ ಅಮೆರಿಕಾ, ಯೂರೋಪ್, ಡಚ್ ಸರ್ಕಾರಗಳು ತಮ್ಮ ದೇಶದ ಕಂಪನಿಗಳು ದಿವಾಳಿಯಾಗುವುದನ್ನು ತಪ್ಪಿಸಲು ಅವನ್ನೆಲ್ಲ ಕೊಂಡು ಕೊಂಡು ರಾಷ್ಟ್ರೀಕರಣ ಮಾಡುತ್ತಿರುವ ವರ್ತಮಾನದಲ್ಲಿ ನಮ್ಮ ದೇಶದ ನೇತಾರರು ನಮ್ಮ ಸಾರ್ವಜನಿಕ ವಲಯವನ್ನು ಖಾಸಗಿಗೊಳಿಸುವ ವಿಧೇಯಕವನ್ನು ಮಡಿಸುತ್ತಿದ್ದಾರೆ. ಆ ಮೂಲಕ ಅಮೆರಿಕದ ದುರುದ್ದೇಶಗಳನ್ನು ಈ ದೇಶದ ಸಾಮಾನ್ಯ ಜನತೆಯ ಮೇಲೆ ಹೇರುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಜಾಗತಿಕ ಬಿಕ್ಕಟ್ಟಿನ ಪರಿಣಾಮ ನಮ್ಮ ಅರ್ಥ ವ್ಯವಸ್ಥೆಯ ಮೇಲಾಗದಂತೆ ನಮ್ಮ ಸಾರ್ವಜನಿಕ ರಂಗವನ್ನು ಬಲಪಡಿಸಬೇಕಿತ್ತು. ಅದು ಬಿಟ್ಟು ನಷ್ಟದಲ್ಲಿರುವ ವಿದೇಶೀ ಕಂಪನಿಗಳಿಗೆ ನಡೆಮುಡಿ ಹಾಸುತ್ತಿರುವ ಕಾರಣವಾದರೂ ಏನು? ಜಾಗತಿಕ ಹಣಕಾಸು ಬಂಡವಾಳ ಅಂದರೆ ಅಮೆರಿಕದ ಪ್ರಾಬಲ್ಯ ಮತ್ತು ಇಷ್ಟಾರ್ಥವನ್ನು ಪೂರೈಸಲು ದೇಶದ ಆರ್ಥಿಕ ಹಿತಾಸಕ್ತಿಯನ್ನು ಬಲಿಕೊಡಲು ಈ ಸರ್ಕಾರ ಹೊರಟಿದೆ.
ಇನ್ನು ಕೆಲವೇ ದಿನಗಳ ತನ್ನ ಆಯುಷ್ಯ ಹೊಂದಿರುವ ಈ ಸರ್ಕಾರ ಜನ ವಿರೋಧಿ ಮತ್ತು ದೇಶದ ಆರ್ಥಿಕ ಭದ್ರತೆಗೆ ವಿರುದ್ಧವಾದ ಈ ಸನ್ನದನ್ನು ಪ್ರಕಟಿಸುವ ಉದ್ದೇಶವಾದರೂ ಏನು? ನಮ್ಮ ಎಷ್ಟು ಜನ ಲೋಕಸಭಾಸದಸ್ಯರಿಗೆ/ ರಾಜ್ಯ ಸಭಾ ಸದಸ್ಯರಿಗೆ ಭವಿಷ್ಯದ ಚಿಂತೆ ಇದೆ? ಎಷ್ಟು ಜನರಿಗೆ ಸಮಸ್ಯೆಯ ಅರಿವಿದೆ? ಅದನ್ನು ನಾವು ಅವರಿಗೆ ತಿಳಿಸಿ ಹೇಳಬೇಕಿದೆ. ಸಮೂಹ ಮಾಧ್ಯಮಗಳ ಮೂಲಕ ಜನಸಾಮಾನ್ಯರಿಗೆ ಪರಿಸ್ಥಿತಿಯನ್ನು ವಿವರಿಸುವ ಕೆಲಸ ಈಗ ಜರೂರಾಗಿ ಆಗಬೇಕಿದೆ. ಮತ್ತು ನಮ್ಮ ಮುದ್ರಣ ಮಾಧ್ಯಮವೂ ಸಮಸ್ಯೆಯನ್ನು ಕೂಲಂಕುಷವಾಗಿ ಅವಲೋಕಿಸುವ ಮತ್ತು ವಿಶ್ಲೇಷಿಸುವುದೂ ಅತ್ಯಗತ್ಯ ಮಾಡಲೇ ಬೇಕಾದ ಕೆಲಸವಾಗಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)