ಬೆಂಕಿ ಕಡ್ಡಿ- ಬೆಳಕು,ಶಾಖ ಮತ್ತು ಉರಿಯ ಚಿಕ್ಕತುಂಡು.ನಾವೆಲ್ಲರೂ ಈ ಲೌಕಿಕದ ಬೆಂಕಿಯಲ್ಲಿ ಬೇಯುತ್ತಲೇ ಮತ್ತೊಂದು ಬೆಳಕು, ಶಾಖ ಮತ್ತು ಉರಿಯನ್ನು ಸೃಜಿಸುತ್ತಿರುವವರು.ಅದಕ್ಕೆಂದೇ ಈ ಬರಹಗಳ ಶೀರ್ಷಿಕೆ "ಬೆಂಕಿಕಡ್ಡಿ". ಈಗಾಗಲೇ ಪ್ರಕಟಿಸಿರುವ ಸಂಕಲನಗಳಿಂದ ಮತ್ತು ಹೊಸ ಪದ್ಯ ಹಾಗೇ ಆಕಾಶವಾಣಿಯ ಚಿಂತನಕ್ಕೆ ಬರೆದ ಲೇಖನಗಳನ್ನೂ ಸೇರಿಸುವ ಇರಾದೆ ಈ ಬ್ಲಾಗಿಗನಿಗೆ.
ಒಟ್ಟು ಪುಟವೀಕ್ಷಣೆಗಳು
ಸೋಮವಾರ, ಜುಲೈ 30, 2012
ತೆಂಗಿನ ಗೆರಟೆಯ ಪಿಟೀಲು
ನನ್ನ ಬದುಕಿನಿಂದ ಅಂತರ್ಧಾನನಾಗಿ ಇಪ್ಪತ್ತು ವರ್ಷಗಳ ನಂತರ ಅರಸೀಕೆರೆಯ ಸಂತೆಯಲ್ಲಿ ಮತ್ತೆ ಪ್ರತ್ಯಕ್ಷನಾಗಿ ದರ್ಶನ ನೀಡಿದ ಬಾಲ್ಯದ ಗೆಳೆಯ ಅಲ್ಲಲ್ಲ ಸಖನಾಗಿದ್ದ ಚಂದ್ರನನ್ನು ಕುರಿತೇ ಹೇಳ ಹೊರಟಿದ್ದೇನೆ. ಅವನ ಪೂರ್ಣ ಹೆಸರು ಚಂದ್ರಶೇಖರ ಶಾಸ್ತ್ರಿ. ಓದು ತಲೆಗೆ ಹತ್ತದೇ, ಹಾಗೇ ಆರಂಭದ ಕೆಲಸಗಳನ್ನೂ ಒಪ್ಪವಾಗಿ ಮಾಡದೇ ಬರಿಯ ಹಡಬೆ ತಿರುಗಾಟದಲ್ಲೇ ಯೌವನವನ್ನು ಕಳೆದುಕೊಂಡರೂ ನನ್ನಂಥ ಹತ್ತು ಹಲವರ ಯೌವನ ಕಾಲದ ಗುರುವಾಗಿ, ಆಪ್ತನಾಗಿ, ಸಖನಾಗಿ ಒದಗಿದ ಚಂದ್ರನದು ಹಾಗೆಲ್ಲ ಯಾರೂ ಮರೆಯಲು ಸಾಧ್ಯವಿಲ್ಲದ ವ್ಯಕ್ತಿತ್ವ. ಹಣೆಯಗಲಕ್ಕೂ ವಿಭೂತಿ ಬಳಿದುಕೊಂಡು, ಚಪ್ಪಲಿಯಿಲ್ಲದ ಕಾಲುಗಳನ್ನು ಅಡ್ಡಡ್ಡ ಎಳೆದುಹಾಕುತ್ತ, ಕೀಚುಗಟ್ಟಿದ ಹಲ್ಲುಗಳನ್ನು ಊರಗಲಕ್ಕೆ ಅರಳಿಸುತ್ತ ನನ್ನತ್ತ ನೋಡಿ ಸಂಭ್ರಮ ಪಡುತ್ತ - ಸಂತೆಯ ಜನನಿಬಿಡತೆಯಲ್ಲೂ ಕಿಂಚಿತ್ತೂ ಗಲಿಬಿಲಿಗೊಳ್ಳದೇ ಸಾಬರ ಈರುಳ್ಳಿ ರಾಶಿಗೆ ಬಾಯಿ ಹಾಕಿ, ಅವರಿಂದ ಮರ್ದನಕ್ಕೊಳಗಾಗಿ ದಾರಿಗೆ ನುಗ್ಗಿದ ಬೀಡಾಡಿ ದನಕ್ಕೆ ಢೀ ಕೊಟ್ಟು, ಅದರ ಮೊಂಡು ಕೊಂಬಿನಿಂದ ತನ್ನ ತಿಕಕ್ಕೆ ಹಾಯಿಸಿಕೊಂಡೂ, ಏನೂ ಆಗದವನಂತೆ, ಪಂಚೆ ಮೇಲೆತ್ತಿ ಕಟ್ಟಿಕೊಂಡು - ಅಶೋಕ ವನದಲ್ಲಿ ಸೀತಾಮಾತೆಯೆದುರು ನಿಂತ ಆಂಜನೇಯನಂತೆ ನಿಂತ ಚಂದ್ರನನ್ನು ಕಂಡ ನಾನು ಅವನೇ ಹೌದೋ ಅಲ್ಲವೋ ಎಂದು ಸಂಶಯ ಪಡುತ್ತಿರುವಾಗಲೇ, ಅವನೇ “ಓಹೋ, ಮ್ಯಾನೇಜರು ಸಾಹೇಬರ ಸವಾರಿ ಹುಟ್ಟಿದ ಊರಿನತ್ತ ಚಿತ್ತೈಸಿದೆ. ಕಾರಣ ತಿಳಿಯಲಿಲ್ಲ. ಈ ಪರಿಚಾರಕನ ಗುರುತು ಹತ್ತಿತೋ?” ಅಂತ ನಾಟಕೀಯವಾಗಿ ಕೇಳಿದ. ನೆತ್ತಿಯ ಕೂದಲಷ್ಟೂ ಉದುರಿ ಬೋಳಾದ, ಹೋತದ ಗಡ್ಡದ ನನ್ನನ್ನು ಅವನು ಗುರುತಿಸಿ ಮಾತನಾಡಿಸಿದ್ದು ಬಿಸಿಲದಾರಿಯಲ್ಲಿ ಕಂಡ ಮರದ ನೆರಳಿನಂತೆ ನನಗೆ ತೋರಿತು.
“ಗುರುತು ಹತ್ತದೇ ಉಂಟೇ? ಗುರುಗಳಲ್ಲದೇ ಬೇರಾರನ್ನು ತಾನೇ ಶಿಷ್ಯ ಅನುಸರಿಸಲು ಸಾಧ್ಯ?” ಅಂತ ನಾನೂ ಉತ್ತರಿಸಿದೆ. ದೇಶಾವರಿ ನಗೆ ಹೊಮ್ಮಿಸಿ, ನಶ್ಯವನ್ನೇರಿಸಿಕೊಂಡವನೇ “ನಡಿ ಮಾರಾಯ. ಮನೆಗೆ ಹೋಗೋಣ” ಅಂತ ವರಾತ ತೆಗೆದ. ಅವನ ಹೆಗಲ ಮೇಲಿದ್ದ ಕೈಚೀಲ ಗಮನಿಸಿದೆ. ಸಂತೆಯ ತುಂಬ ಓಡಾಡಿ ಚೀಲದ ಕಂಠದ ತನಕ ತುಂಬಿಸಿದ್ದ ಹೀರೆ, ಬೆಂಡೆ, ಹಾಗಲ, ಸೌತೆ, ಬಾಳೆಕಾಯಿಗಳು ಕಂಡವು. ಎಡಗೈಯಲ್ಲಿ ಬಾಳೆ ಎಲೆಯ ಕಟ್ಟಿನೊಟ್ಟಿಗೇ ಒಣದೊನ್ನೆಯ ಕಟ್ಟನ್ನೂ ಹಿಡಿದಿದ್ದ. ಇಂಗ್ಳಿಷ್ ತರಕಾರಿಗಳೊಂದನ್ನೂ ಕೊಳ್ಳದೇ ಜೊತೆಗೆ ಬಾಳೆಲೆ, ದೊನ್ನೆ ಹಿಡಿದಿದ್ದಾನೆಂದರೆ ನಾಳೆಯೋ ನಾಳಿದ್ದೋ ಅವನ ಮನೆಯಲ್ಲಿ ಯಾರದೋ ಶ್ರಾದ್ಧವಿರಬೇಕೆಂದು ಊಹಿಸಿದೆ. ಬಾಯಿ ಬಿಟ್ಟು ಕೇಳುವುದು ಹೇಗೆಂದು ನಾನು ತಿಣುಕುತ್ತಿರುವಾಗ, ಅವನೇ “ಇದೆಲ್ಲ ನನ್ನ ಹೊಸ ಉದ್ಯೋಗದ ಬಂಡವಾಳ ಮಾರಾಯ. ಟೆನೆನ್ಸಿಯಲ್ಲಿ ಜಮೀನು ಕಳಕೊಂಡು ಬರ್ಬಾದಾಗಿದ್ದ ನಮ್ಮ ಅಪ್ಪ, ಮನೆಯ ಹಿತ್ತಿಲಿಗೇ ಅಂಟಿದಂತಿದ್ದ ಅರ್ಧ ಎಕರೆ ತೆಂಗಿನ ತೋಟದ ಉತ್ಪನ್ನದ ಜೊತೆಗೆ ಅಪರದ ಮಂತ್ರ ಹೇಳಿಕೊಂಡು ಹೇಗೋ ಜೀವನ ಸಾಗಿಸಿದ್ದು ನಿಂಗೂ ಗೊತ್ತು. ನಾನು ಮನೆವಾರ್ತೆ ವಹಿಸಿಕೊಂಡ ಕಾಲಕ್ಕೆ ಇದ್ದ ಇಪ್ಪತ್ತು ತೆಂಗಿನ ಮರದ ಪೈಕಿ ಹದಿನೈದಕ್ಕೆ ನುಸಿ ರೋಗ ತಾಗಿ ತೋಟ ನಾಶವಾಗಿ ಹೋಯ್ತು. ಊರ ಮುಂದಿನ ಆಂಜನೇಯನ ಪೂಜೆ ವಂಶಪಾರಂಪರ್ಯವಾಗಿ ನಮಗುಳಿದದ್ದು ನಿನಗೆ ಗೊತ್ತಲ್ಲ? ಇದ್ದ ಬದ್ದವರೆಲ್ಲ ಹಳ್ಳಿ ಬಿಟ್ಟು ನಗರ ಸೇರುತ್ತಿರುವಾಗ ನಮ್ಮ ಹನುಮಪ್ಪನಿಗೆ ಉಳಿದಿರೋದು ಹಗ್ಗ ಮಾತ್ರ, ನನಗೆಲ್ಲಿಂದ ಶ್ಯಾವಿಗೆ ಹುಟ್ಟಬೇಕು? ಅದಕ್ಕೇ ಈಗ ಮನೆಯಲ್ಲೇ ಪಿತ್ರಾರ್ಜಿತದ ಅಪರ ಮಂತ್ರವನ್ನೇ ಹೇಳಿಕೊಂಡು ಅವರಿವರ ತಿಥಿಗಿಥಿ ಮಾಡಿಸುವ ಕೆಲಸ ಶುರುವಿಟ್ಟುಕೊಂಡಿದ್ದೇನೆ. ಮಾಡುವವರಿಗೆ ಕರ್ತವ್ಯ ತೀರಿದ ಸಮಾಧಾನ. ನನಗೆ ಹೊತ್ತಿನ ಊಟಕ್ಕೆ ದಾರಿ” ಉಸಿರು ನಿಲ್ಲಿಸದೇ ಅವನು ಪ್ರವರ ಬಿಡಿಸಿಟ್ಟ. “ನಡಿ, ನಡಿ, ಅಪರೂಪಕ್ಕೆ ಸಿಕ್ಕಿದ್ದೀಯ. ಅಯೋಧ್ಯೆ ಹೋಟೆಲ್ಲಿನಲ್ಲಿ ಮಸಾಲೆ ದೋಸೆ ತಿನ್ನಿಸುವೆಯಂತೆ” ಅವಸರಿಸಿದ.
ಸಾಯಿನಾಥ ರಸ್ತೆಯುದ್ದಕ್ಕೂ ಹರಡಿದ ದೋಸೆಯ ಘಮಕ್ಕೆ ಬೆರಗಾಗುತ್ತ ಹೋಟೆಲ್ಲಿನೊಳಕ್ಕೆ ಕಾಲಿಟ್ಟೆ. “ಓ, ಅಪರೂಪಕ್ಕೆ ಕಂಡಂತಾಯ್ತು. ನಾಳೆ ನಿಮ್ಮ ತಂದೆಯವರ ಶ್ರಾದ್ಧ ಅಂತ ನಿಮ್ಮ ತಮ್ಮ ಶ್ರೀಕಂಠ ಬೆಳಗ್ಗೆಯೇ ಬಾಳೆಲೆ ಕೊಂಡುಹೋದರಲ್ಲ. ಅಂತೂ ಚಂದ್ರಣ್ಣನವರಿಗೆ ಈವತ್ತು ನಿಮ್ಮಿಂದ ದೋಸೆಯ ಸೇವೆ” ಹೋಟೆಲ್ ಓನರ್ ಶ್ರೀಧರ ನಗುತ್ತ ಮಾತನಾಡಿಸಿದಾಗ ಚಂದ್ರನಿಗೆ ನಾನು ಊರಿಗೆ ಬಂದ ಕಾರಣ ಹೊಳೆಯಿತು. “ಆಗೀಗ ಊರಿಗೆ ಬರುತ್ತಿರುತ್ತೇನೆ. ಆದ್ರೆ ಪೇಟೆ ಗೀಟೆ ತಿರುಗುವಷ್ಟು ಪುರುಸೊತ್ತಿರುಲ್ಲ ಎಲ್ಲ ಸೌಖ್ಯವಾ?” ಸಂಕ್ಷಿಪ್ತವಾಗಿ ಉತ್ತರಿಸಿದೆ. “ಏನು ಸೌಖ್ಯವೋ, ಏನೋ? ತೆಂಗಿಗೆ ಬೆಲೆ ಇಲ್ಲ. ಮೇಲಾಗಿ ನುಸಿ ರೋಗ ಬೇರೆ. ಅಪ್ಪನ ಕಾಲದ ವ್ಯಾಪಾರ ಅಂತ ನಡೆಸಿಕೊಂಡುಹೋಗುತ್ತಿದ್ದೇನೆ. ಇಲ್ಲೆಲ್ಲ ಬರೀ ಉದ್ದರಿಯ ವ್ಯಾಪಾರ. ಹಿಡಿಯುವಂತಿಲ್ಲ, ಬಿಡುವಂತಿಲ್ಲ. ನಾನೂ ನಿಮ್ಮಂತೆಯೇ ಓದಿ ಕೆಲಸ ಗಿಲಸಕ್ಕೆ ಸೇರಿದ್ದರೆ ಈ ಎಂಜಲು ಎತ್ತುವ ಪಡಿಪಾಟಲು ಇರುತ್ತಿರಲಿಲ್ಲ.” ಗಿಜಿಗುಡುತ್ತಿದ್ದ ಹೋಟೆಲ್ಲಿನಲ್ಲಿ ಜನ ಕುರ್ಚಿ ಸಿಕ್ಕದೇ ಕಾಯುತ್ತಿರುವಾಗಲೂ ಶ್ರೀಧರ ಹೇಳುತ್ತಿರುವುದು ಸುಳ್ಳೋ ನಿಜವೋ ಗೊತ್ತಾಗದೇ ಚಂದ್ರ ಅದಾಗಲೇ ರಿಸರ್ವ್ ಮಾಡಿಕೊಂಡಿದ್ದ ಟೇಬಲ್ಲಿನ ಮುಂದೆ ಕೂತೆ. ಆರ್ಡರು ತೆಗೆದುಕೊಳ್ಳಲು ಬಂದ ಮಾಣಿ ಚಂದ್ರನ ಮುಖ ನೋಡುತ್ತಲೇ “ಸ್ಪೆಷಲ್ ಮಸಾಲೆ” ಅಂತ ಕೂಗಿದ. ಚಂದ್ರ ನನ್ನತ್ತ ಬೆರಳು ತೋರಿಸಿದ ಕೂಡಲೇ “ಸ್ಪೆಷಲ್ ಮಸಾಲೆ ಎರಡು” ಅಂತ ಮತ್ತೊಮ್ಮೆ ಕೂಗಿದ. ಈರುಳ್ಳಿ ಆಲೂಗಡ್ಡೆ ಪಲ್ಯದ ಘಮದ ಜೊತೆ ಬೆಣ್ಣೆಯಿಂದ ಅಲಂಕೃತವಾಗಿ ಗಟ್ಟಿ ಚಟ್ಣಿಯೊಂದಿಗೆ ಬಂದ ದೋಸೆಯ ತಟ್ಟೆ ತಕ್ಷಣ ಮುಂದೆಳೆದುಕೊಂಡ ಚಂದ್ರ ನಾನು ಜೊತೆಗಿರುವುದನ್ನೂ ಮರೆತವನಂತೆ ದೋಸೆಯ ಆಸ್ವಾದದಲ್ಲಿ ಮುಳುಗಿ ಹೋದ. ತಿಂಡಿ ಮುಗಿಸಿ ಕಾಫಿ ಕುಡಿದು ಬಿಲ್ ಕೊಡಲು ಹೋದರೆ “ಎಲ್ಲಾದರೂ ಉಂಟೆ? ನೀವು ಆವತ್ತು ಬ್ಯಾಂಕಿನಿಂದ ಸಾಲ ಕೊಡಿಸದೇ ಹೋಗಿದ್ದಿದ್ದರೆ ನಮ್ಮಪ್ಪ ನೇಣುಗಟ್ಟಿಕೊಳ್ಳುತ್ತಿದ್ದರು. ಅವರು ಬದುಕಿರುವವರೆಗೂ ನಿಮ್ಮನ್ನು ನೆನೆಯುತ್ತಲೇ ಇದ್ದರು. ನೀವು ನೀರೆರದ ಸಸಿ ಈಗ ಇಷ್ಟು ದೊಡ್ಡದಾಗಿ ಬೆಳೆದು ತಾಲ್ಲೂಕಿಗೇ ಹೆಸರುವಾಸಿಯಾಗಿದೆ” ಶ್ರೀಧರ ಬಿಲ್ ತೆಗೆದುಕೊಳ್ಳದೇ ಕೃತಜ್ಞತೆಯ ಮಾತಾಡಿದ. ‘ನಾಳೆಯ ತಿಂಡಿಗೆ ಯಾರನ್ನು ಹಿಡಿಯುತ್ತಾರೋ ಶಾಸ್ತ್ರಿಗಳು.. .. .. ನನ್ನ ಐದು ಲಕ್ಷದ ಓಡಿ ಅರ್ಜಿ ನಿಮ್ಮ ಬ್ಯಾಂಕಿನ ಹೆಡ್ಡಾಫೀಸಿನಲ್ಲಿದೆಯಂತೆ. ಒಂಚೂರು ಹೇಳುತ್ತೀರಾ’ ಶ್ರೀಧರನ ಮಾತು ಮುಗಿದು ನಾನು ಮುಜುಗರದಿಂದ ಹೊರಕ್ಕೆ ಬರುವಷ್ಟರಲ್ಲಿ ಎದಿರು ಸಿಕ್ಕವರೊಂದಿಗೆ ಲೋಕಾಭಿರಾಮದ ಮಾತಲ್ಲಿ ಚಂದ್ರ ಮುಳುಗಿ ಹೋಗಿದ್ದ. ಯಾರು ಏನು ಹೇಳಿದರೂ ತನಗೆ ಹೊಳೆದದ್ದನ್ನೇ ಮಾಡುತ್ತ ಅದನ್ನೇ ಸಾಧಿಸುತ್ತ ಬಂದಿರುವ ಚಂದ್ರ ಹಾಗೆಲ್ಲ ಮುಜುಗರಕ್ಕೆ ಈಡಾಗುವವನಲ್ಲವೇ ಅಲ್ಲ ಅಂತ ಮತ್ತೆ ಶೃತವಾಯಿತು.
ರಥಬೀದಿಯಲ್ಲಿ ನಡೆಯ ತೊಡಗಿದೆವು. ದಾರಿಯಲ್ಲಿ ಸಿಕ್ಕವರೊಂದಿಗೆ ಅದೂ ಇದೂ ಮಾತಾಡುತ್ತ, ಹಾಗೆ ಸಿಕ್ಕವರಿಗೆ ನನ್ನ ಪ್ರವರ ಬಿಚ್ಚಿಡುತ್ತ ಅವನು ಎಂದಿನಂತೆ ಕಾಲುಗಳನ್ನು ಎಳೆದು ಹಾಕುತ್ತ ನಡೆಯತೊಡಗಿದ. ಬಾಯಿ ಜ್ವರ ಬಂದ ಜಾನುವಾರಿಗೆ ಏನು ಔಷಧ ಕೊಡಬೇಕು, ಗಬ್ಬ ಹಿಡಿಯದ ಎಮ್ಮೆಗೆ ಸರ್ಕಾರೀ ಪಶು ಆಸ್ಪತ್ರೆಯಲ್ಲಿ ಏಕೆ ಕೃತಕ ಗರ್ಭ ಧಾರಣೆ ಮಾಡಿಸಬೇಕು, ಲಂಚ ತಿನ್ನುವ ತಾಲ್ಲೂಕಾಫೀಸು ಕ್ಲಾರ್ಕಿಗೆ ಹೇಗೆ ಲೋಕಾಯುಕ್ತಕ್ಕೆ ಸಿಕ್ಕಿಸಬೇಕು ಎಂಬೆಲ್ಲ ವಿವರಣೆಗಳನ್ನು ಅವನು ಭೆಟ್ಟಿಯಾದ ಜನರಿಗೆ ಉಚಿತವಾಗಿ ತಿಳಿಸಿಹೇಳುತ್ತ ನಶ್ಯ ಏರಿಸುತ್ತ ಸಾಗುತ್ತಿರುವ ಈ ವಿಶ್ವಾಮಿತ್ರ ಮಹರ್ಷಿಯ ಜೊತೆಗೆ ನಾನು. ಇಪ್ಪತ್ತು ವರ್ಷಗಳಿಂದ ಇದ್ದ ಹಾಗೇ ಇರುವ ಕೊಂಚವೂ ಬದಲಾಗದಿರುವ ಬೀದಿಯಲ್ಲಿ ಯಾವತ್ತಿಗೂ ಬದಲಾಗದ ಅವನ ಮೆರವಣಿಗೆಗೆ ನಾನು ಗರುಡ ದೀಪವಾಗಿ ಹೆಜ್ಜೆ ಹಾಕಿದೆ. ಮೊದಲಿಂದಲೂ ಅವನು ಹೀಗೇ ಬಡಾಯಿಯವನು. ದೇಶದಲ್ಲಿ ಎಮರ್ಜೆನ್ಸಿ ಜಾರಿಯಾಗಿದ್ದಾಗ, ಅಂದರೆ ನಾವಾಗ ಹೈಸ್ಕೂಲು ಓದುತ್ತಿದ್ದಾಗ, ಈ ಮಹರಾಯ ಬೆಳ್ಳಂಬೆಳಗ್ಗೆ ಪ್ರಭಾತ್ ಶಾಖೆಗೆ ಹೋಗಿ ದೇಶಭಕ್ತಿಯ ಬಗ್ಗೆ ಅವರ್ಯಾರೋ ಹೇಳಿಕೊಟ್ಟದ್ದನ್ನೆಲ್ಲ ನಮಗೆಲ್ಲ ಕರ್ಣಾಕರ್ಣಿಕೆ ಮಾಡಿ ಪೋಲೀಸರ ವಿರುದ್ಧ, ಸರ್ಕಾರದ ವಿರುದ್ಧ ಮಾತಾನಾಡುತ್ತ ನಮಗೆಲ್ಲ ಏನೋ ಕಿಚ್ಚು ಹಚ್ಚಿ ಬಿಡುತ್ತಿದ್ದ. ಕ್ಲಾಸಿಗೆ ಚಕ್ಕರು ಹಾಕಿ ಕೆರೆಯಲ್ಲಿ ಈಜುವುದನ್ನೂ, ಅಂಗಡಿ ಸಾಮಾನು ತರಲು ಕೊಟ್ಟ ದುಡ್ಡಿಗೆ ಸುಳ್ಳು ಲೆಕ್ಕ ಒಪ್ಪಿಸಿ ಮಾರ್ನಿಂಗ್ ಶೋನಲ್ಲಿ ಮಲೆಯಾಳೀ ಸಿನಿಮಾ ನೋಡುವುದನ್ನೂ, ಕದ್ದು ಮುಚ್ಚಿ ಬೀಡಿ ಸೇದುವುದನ್ನೂ ಕಲಿಸಿಬಿಟ್ಟ. ಅಪ್ಪ ಅಮ್ಮ ಹೇಳಿದ್ದು ಕೇಳದೇ ನಮಗಿಷ್ಟ ಬಂದದ್ದನ್ನು ಮಾಡುವಂತೆ ತಾಕೀತು ಮಾಡುತ್ತಿದ್ದ. ಸರ್ಕಾರ ಸದಾ ಗುಮಾನಿ ಪಡುತ್ತಿದ್ದ ತಾಲ್ಲೂಕಿನ ಅದೆಷ್ಟೋ ಸಮಾಜವಾದಿ ನಾಯಕರುಗಳಿಗೆ ಕದ್ದು ಮುಚ್ಚಿ ಸರ್ಕಾರದ ವಿರುದ್ಧದ ಸಾಹಿತ್ಯವನ್ನು ತಲುಪಿಸಲು ನಮ್ಮನ್ನೂ ಬಳಸಿಕೊಳ್ಳುತ್ತಿದ್ದ. ನಮ್ಮ ಕಲ್ಯಾಣ ಗುಣಗಳನ್ನೆಲ್ಲ ಸರ್ಕಾರೀ ನೌಕರಿಯಲ್ಲಿದ್ದ ಅಪ್ಪ ಸರಿಯಾಗಿ ಅರ್ಥ ಮಾಡಿಕೊಂಡು ಇವನ ಸಹವಾಸದಲ್ಲಿ ನಾನು ಕೆಡಬಹುದೆಂದು ಹೆದರಿ ಪಿಯುಸಿಗೆ ನನ್ನನ್ನು ಶಿವಮೊಗ್ಗೆಗೆ ಕಳಿಸಿಬಿಟ್ಟರು, ಅಲ್ಲಿಂದಾಚೆಗೆ ನಾನು ಊರಿಗೆ ಬರುವುದೇ ಅಪರೂಪವಾಗಿ ಬಿಟ್ಟಿತು. ಪಿಯುಸಿ ಮುಗಿದ ಮೇಲೆ ಪದವಿ, ಆಮೇಲೆ ಎಂಕಾಂ, ಬ್ಯಾಂಕ್ ನೌಕರಿ, ಪ್ರಮೋಶನ್ನು, ಊರಿಂದೂರಿಗೆ ವರ್ಗ ಇವುಗಳ ನಡುವೆ ಅಪರೂಪಕ್ಕೆ ಊರಿಗೆ ಬಂದರೂ ಚಂದ್ರ್ರನೊಂದಿಗಾಗಲೀ ಅವನ ಗುಂಪಿನೊಂದಿಗಾಗಲೀ ಹೆಚ್ಚು ಬೆರತದ್ದು ಇಲ್ಲವೇ ಇಲ್ಲ. ಯೋಗಕ್ಷೇಮ ಬಿಟ್ಟು ಹೆಚ್ಚು ಮಾತಾಡಲು ಪುರುಸೊತ್ತಾದರೂ ಎಲ್ಲಿರುತ್ತಿತ್ತು? ಇತ್ತ ಊರಲ್ಲೇ ಉಳಿದ ಚಂದ್ರ ಎಸೆಲ್ಸಿಯನ್ನು ದಾಟಲಾರದೇ ಊರ ಆಂಜನೇಯನ ಪೂಜಾರಿಯಾದ. ಸಣ್ಣಂದಿನಲ್ಲೇ ತಾಯಿ ಕಳಕೊಂಡಿದ್ದ ಅವನು, ಪೂಜೆ, ಪುನಸ್ಕಾರ, ಮಡಿ, ಮೈಲಿಗೆಗಳ ಕಾರಣ ಇಪ್ಪತ್ತೆರಡೆಕ್ಕೆಲ್ಲ ಮದುವೆಯಾಗಿ ಸಂಸಾರದ ಕಡಲಲ್ಲಿ ಈಜತೊಡಗಿದ.
ಎದುರು ಸಿಕ್ಕವರೊಬ್ಬರು “ಶಾಸ್ತ್ರಿಗಳೇ, ನಿಮ್ಮ ಮನೆ ಮುಂದೆ ಬರುವಾಗ ನಿಮ್ಮ ಹೆಂಡತಿ ನನ್ನನ್ನು ನಿಲ್ಲಿಸಿ ನಿಮಗೂ ನನಗೂ ಒಟ್ಟಿಗೇ ಮಂಗಳಾರತಿ ಎತ್ತಿದರು. ನಿಮ್ಮ ಮಾತು ಕೇಳಿಕೊಂಡು ಜಮೀನು ಮಾರಿ ಸಿನಿಮಾ ಟಾಕೀಸು ನಡೆಸಿ ಕೈ ಸುಟ್ಟುಕೊಂಡಿದ್ದೂ ಅಲ್ಲದೇ ಈಗ ಮಂಡಿಯಲ್ಲಿ ಕೂರಲೂ ಮನಸ್ಸು ಕೇಳುತ್ತಿಲ್ಲ. ಬೆಳಿಗ್ಗೆಯೇ ಮನೆ ಬಿಟ್ಟವರು ಇನ್ನೂ ಬಂದಿಲ್ಲ. ಹೊಸ ಸಿನಿಮಾ ತರುಕ್ಕೆ ಬೆಂಗಳೂರಿಗೆ ಕಳಿಸಿದ್ರಾ ಅಂತ ನಿಮ್ಮಾಕೆ ಹಂಗಿಸಿದರು, ಮಹರಾಯರೇ. ಯಾರೋ ಇವತ್ತು ತಿಥಿ ಮಾಡಲಿಕ್ಕೆ ಬಂದವರು ಕಾಯುತ್ತಿದ್ದಂತಿತ್ತು” ಅಂತ ಹೇಳಿ ಮುಂದೆ ಸಾಗಿದರು. ತಾನೇನನ್ನೂ ಕೇಳಿಸಿಕೊಂಡೇ ಇಲ್ಲವೆಂಬಂತೆ ಈ ಮಹರಾಯ ‘ಅಲ್ಲಿ ಮರದಡಿಯಲ್ಲಿ ನಲ್ಗಾವ್ಯವೊಂದಿರಲು...’ ಅಂತ ಹಾಡಿಕೊಳ್ಳುತ್ತ ನಡೆಯುತ್ತಿದ್ದ. “ಎಷ್ಟು ಮಕ್ಕಳೋ ನಿನಗೆ” ಕೇಳಿದೆ. “ಎರಡೇ ಎರಡು. ಎರಡೂ ಹೆಣ್ಣೇ. ಇನ್ನೂ ಮದುವೆ ಮಾಡಿಲ್ಲ. ದಿನಕಳೆದು ಸಂಜೆಯಾದರೆ ನಾಳೆಗೇನು ಎನ್ನುವ ಪರಿಸ್ಥಿತಿಯ ನಾನು ಈ ಧಾರಣೆಯ ಕಾಲದಲ್ಲಿ ಅವರಿಗೆ ಮದುವೆ ಮಾಡಿದ ಹಾಗೇ .. ..” ಮುಂದುವರೆಸಿದ. “ನೀನೇ ವಾಸಿ. ಬೇರೆ ಜಾತಿಯಾದರೂ ಇಷ್ಟ ಪಟ್ಟವಳನ್ನೇ ಮದುವೆಯಾದೆ. ಇರುವ ಒಬ್ಬಳೇ ಮಗಳಿಗೂ ಓದುತ್ತಿರುವಾಗಲೇ ಕೆಲಸ ಬೇರೆ ಸಿಕ್ಕಿದೆಯಂತೆ, ಅದೂ ವರ್ಷಕ್ಕೆ ಆರು ಲಕ್ಷಸಂಬಳವಂತೆ, ನಿನ್ನ ತಮ್ಮ ಶ್ರೀಕಂಠನೇ ಹೇಳಿದ” ಅಂದ. ಇವನಿಂದ ಏನನ್ನೂ ಮುಚ್ಚಿಡುವ ಹಾಗಿಲ್ಲ ಅಂದುಕೊಂಡೆ.
ನನ್ನನ್ನು ಮುಂದು ಬಿಟ್ಟುಕೊಂಡು ಚಂದ್ರ ಗೇಟು ತೆರೆದ. “ಏ ಸೀತಾಲಕ್ಷ್ಮಿ, ಬಾ ಇಲ್ಲಿ, ಯಾರು ಬಂದಿದ್ದಾರೇಂತ ನೋಡು ಬಾ. ನನ್ನ ಗೆಳೆಯರನ್ನೆಲ್ಲ ಕೆಲಸಕ್ಕೆ ಬಾರದವರೂಂತ ಛೇಡಿಸುತ್ತೀಯಲ್ಲ, ನೋಡು ಬ್ಯಾಂಕು ಮ್ಯಾನೇಜರು ಬಂದಿದ್ದಾರೆ, ಅವರೂ ನನ್ನ ಸ್ನೇಹಿತರೆ” ಅಂತ ಕೂಗಿದ. ಶ್ರಾದ್ಧದಡಿಗೆಯ ಕೆಲಸಕ್ಕಾಗಿ ಮಡಿ ಸೀರೆಯುಟ್ಟಿದ್ದ ಆಕೆ ಬೆಂಕಿಯುರಿಯಂತೆ ಹೊರಬಂದವರು ನನ್ನನ್ನು ನೋಡಿದೊಡನೆಯೇ ಎಣ್ಣೆ ತೀರಿ ಫಕ್ಕನೆ ನಂದಿ ಹೋದ ದೀಪದಂತೆ ಒದ್ದೆ ಕೈಯನ್ನು ಸೆರಗಿಗೆ ಒರೆಸಿಕೊಳ್ಳುತ್ತ ನಗು ಮುಖ ತೋರಿ “ನಾಳೆ ನಿಮ್ಮನೆಗೆ ಅಡಿಗೆ ಕೆಲಸಕ್ಕೆ ಹೋಗಬೇಕು. ನಿಮ್ಮ ತಾಯಿ ನನ್ನನ್ನಲ್ಲದೆ ಬೇರಾರಿಗೂ ಶ್ರಾದ್ಧದಡಿಗೆಗೆ ಕರೆಯುವುದಿ. ಬಾಯಾರಿಕೆಗೆ ಪಾನಕ ಆಗಬಹುದಾ?” ಅಂತ ಕೇಳಿ, ಚಂದ್ರ ಹೊತ್ತುತಂದು ಜಗಲಿಯಲ್ಲಿಟ್ಟಿದ್ದ ತರಕಾರಿ ಚೀಲವನ್ನೆತ್ತಿಕೊಂಡು ಒಳಹೋದರು. ಜಗಲಿಯಲ್ಲಿ ಕೂತು ಇವನ ಬರವಿಗೇ ಕಾಯುತ್ತಿದ್ದ ಪೂರ್ವಪಂಕ್ತಿಯ ಬ್ರಾಹ್ಮಣರು ಸ್ನಾನದ ಪಂಚೆ ಝಾಡಿಸಿ ತಾವು ಬಹಳ ಹೊತ್ತಿನಿಂದ ಕಾಯುತ್ತಿರುವುದನ್ನು ಸಂಕೇತಿಸಿದರು. “ಸ್ನಾನಕ್ಕೇಳಿ” ಅಂತ ಅವರಿಗೆ ಸೂಚಿಸಿದ ಚಂದ್ರ ‘ಕರ್ತ್ರುಗಳು ಸಿದ್ಧವಾ’ ಅಂತ ಕೇಳಿದ. ನಾನು ಈವತ್ತು ಇಲ್ಲಿಗೆ ಬರಬಾರದಿತ್ತು ಅಂದುಕೊಂಡೇ ಜಗಲಿಯಲ್ಲಿ ಕೂತು ಶೂ ಕಳಚುತ್ತಿರುವಾಗ ಲಕ್ಷಣವಾದ ಹುಡುಗಿಯೊಬ್ಬಳು ಉದ್ದನೆಯ ಸ್ಟೀಲ್ ಲೋಟದಲ್ಲಿ ಬೇಲದ ಹಣ್ಣಿನ ಪಾನಕವನ್ನು ತಂದು ನನ್ನ ಮುಂದಿಟ್ಟಳು. “ನಿಮ್ಮ ಬ್ಯಾಂಕಿನ ಕ್ಲೆರಿಕಲ್ ಪರೀಕ್ಷೆ ಪಾಸು ಮಾಡಿದ್ದೇನೆ. ಮುಂದಿನ ಸೋಮವಾರ ಇಂಟರ್ವ್ಯೂ” ಅವಳು ಮಾತು ಮುಗಿಸುವುದರಲ್ಲಿ ನಾನು ಹೇಳಿದೆ “ಸೆಲೆಕ್ಷನ್ ಕಮಿಟಿಯ ಶ್ರೀನಿವಾಸ ಕಾಮತರಿಗೆ ಹೇಳುತ್ತೇನೆ. ನಿನ್ನ ಹೆಸರು ರೋಲ್ ನಂಬರು ಬರೆದುಕೊಡು” “ ಇಲ್ಲ ನಂಗೆ ಬ್ಯಾಂಕು ಸೇರಲು ಇಷ್ಟವಿಲ್ಲ. ಅಪ್ಪ ನಿಮ್ಮ ಸ್ನೇಹಿತರು. ನಿಮ್ಮಿಂದ ನನಗೆ ಬುದ್ಧಿ ಹೇಳಿಸುತ್ತಾರೆ ಅಂತ ನಾನೇ ಆ ವಿಷಯ ತೆಗೆದೆ. ನಂಗೆ ಬೆಂಗಳೂರಿನ ಕಾಲ್ಸೆಂಟರಿನಲ್ಲಿ ಕೆಲಸ ಸಿಕ್ಕಿದೆ. ತಿಂಗಳಿಗೆ ಹದಿನೈದು ಸಾವಿರ ಸಂಬಳ. ನಿಮ್ಮ ಬ್ಯಾಂಕು ಸೇರಿದರೆ ಯಾವ ಹಳ್ಳಿಗೆ ಹಾಕ್ತಾರೋ ಅಲ್ಲಿಗೆ ಹೋಗಿ ಬರೋದು, ಬಸ್ಸಿನ ತಾಪತ್ರಯ, ಜೊತೆಗೆ ಮೊಬೈಲ್ ನೆಟ್ವರ್ಕ್ ಇಲ್ಲದ ಗಲೀಜು ಹಳ್ಳಿಗಳು ನನಗಾಗಲ್ಲ. . . .” ಅವಳು ಇನ್ನೂ ಏನೇನು ಹೇಳುತ್ತಿದ್ದಳೋ ಮಡಿಪಂಚೆಯುಟ್ಟು ಹಿಂದಿನಿಂದ ಬಂದ ಚಂದ್ರ “ ನನ್ನ ಮಗಳು ಅನಸೂಯ ಕಣಯ್ಯ. ಡಿಗ್ರಿ ಮುಗಿಸಿದ್ದಾಳೆ. ಬೆಂಗಳೂರು ಅಂತ ಕುಣಿತಾಳೆ. ಕಣ್ಣ ಮುಂದೇ ಇರಲಿ ಅಂತ ಅವರಮ್ಮನ ಆಸೆ.. .. ..” “ ರೀ, ಕಾಲು ತೊಳೆಯೋಕ್ಕೆ ಮಣೆ ಹಾಕಿ. ಅಗ್ರ, ತೇದ ಗಂಧ, ತುಳಸಿ, ಸಗಣಿ ಎಲ್ಲವನ್ನೂ ಹಜಾರದಲ್ಲೇ ಮೊರದಲ್ಲಿ ಇಟ್ಟಿದ್ದೇನೆ..” ಸೀತಾಲಕ್ಷ್ಮಿ ಕೂಗಿ ಹೇಳಿದರು. ಅವಸರದಲ್ಲಿ ಚಂದ್ರ ಒಳಕ್ಕೋಡಿದ. “ಪ್ರಾಚೀನಾವೀತಿ. ..ಜನಿವಾರ ಎಡಕ್ಕೆ ಹಾಕ್ಕೊಳ್ಳಿ.. ಪಿತೃಸ್ಥಾನದಲ್ಲಿರೋರಿಗೆ ಎಳ್ಳಿನಿಂದ ಪೂಜೆ ಮಾಡಿ. ..ಕೆಳಗಿಂದ ಮೇಲಕ್ಕೆ .. .. ಸವ್ಯ.. ಜನಿವಾರ ಸರಿಯಾಗಿ ಹಾಕೊಳ್ಳಿ. ..ವಿಶ್ವೇದೇವರನ್ನು ಅಕ್ಷತೇಲಿ ಅಂದ್ರೆ ನೆನೆಸಿದ ಅಕ್ಕೀಲಿ ಪೂಜೆ ಮಾಡಿ. ಮೇಲಿಂದ ಕೆಳಕ್ಕೆ. . . .” ಚಂದ್ರ ಮಂತ್ರ ಹೇಳುತ್ತಲೇ ಕೈ ಕರಣಗಳನ್ನೂ ಬಿಡಿ ಬಿಡಿಯಾಗಿ ಹೇಳಿಕೊಡುತ್ತಿರುವುದು ಸ್ಪಷ್ಟವಾಗಿ ಕೇಳಿಸಿತು. ನಾಳೆ ನಾನೂ ಇದನ್ನೆಲ್ಲ ಮಾಡಬೇಕು. ಜನಿವಾರ ಮೈ ಮೇಲೆ ಇದೆಯೋ ಇಲ್ಲವೋ? ಬಗಲಿಗೆ ಕೈ ಹಾಕಿ ಖಚಿತಪಡಿಸಿಕೊಂಡೆ. ಜಗಲಿಯ ಮಂದಾಸನದಲ್ಲಿ ಕೂತಿದ್ದ ಹಾಗೇ ಜೊಂಪು ಎಳೆಯಿತು. ಗೋಡೆಗೊರಗಿದೆ.
“ಎಲೆ ಹಾಕಿದೆ. ಏಳಪ್ಪ, ಊಟ ಮಾಡೂವಿಯಂತೆ..” ಚಂದ್ರ ನನ್ನನ್ನು ಕೂಗಿ ಎಬ್ಬಿಸಿ ಶ್ರಾದ್ಧದೂಟ ಬಡಿಸಿದ್ದ ಎಲೆಯ ಮುಂದೆ ಕುಳ್ಳಿರಿಸಿದ. ಸುತ್ತುಗಟ್ಟಿ ಪರಿಷೇಚನೆ ಮಾಡಿ ವ್ಯಾನಾಯ ಸ್ವಾಹಾ, ಉದಾನಾಯ ಸ್ವಾಹಾ... ಹೇಳಿ ತುತ್ತು ಬಾಯಿಗಿಡುವ ಹೊತ್ತಲ್ಲಿ ಮೊಬೈಲ್ ರಿಂಗಣಿಸಿತು. ತಮ್ಮ ಶ್ರೀಕಂಠನ ಕಾಲು. “ಅಮ್ಮ ಕಾಯುತ್ತಿದ್ದಾಳೆ. ಮಡೀಲಿ ಅಡಿಗೆ ಮಾಡಿಸಿ ನಿನಗೋಸ್ಕರ ಕಾಯುತ್ತಿದ್ದೇವೆ. ಹೊರಗಡೆ ಎಲ್ಲೂ ಇವತ್ತೊಂದಿನವಾದ್ರೂ ತಿನ್ನಬೇಡ ಅಂತ ಹೇಳು ಅಂತ ಅಮ್ಮ ಹೇಳಿದ್ಲು. ಮಕ್ಕಳೂ ಸ್ಕೂಲಿಂದ ಬರೋ ಹೊತ್ತಾಯ್ತು. ತಕ್ಷಣ ಬಾ. ಇಲ್ಲಾಂದ್ರೆ ಎಲ್ಲಿದ್ದಿ ಹೇಳು. ನಾನೇ ಗಾಡೀಲಿ ಬಂದು ಕರಕೊಂಡು ಬರ್ತೀನಿ.” ಪೇಚಾಟಕ್ಕಿಟ್ಟುಕೊಂಡಿತು. ಏಳುವ ಹಾಗೂ ಇಲ್ಲ. ಕೂರುವ ಹಾಗೂ ಇಲ್ಲ. ಪರಿಸ್ಥಿತಿ ಬಿಗಡಾಯಿಸಿತೆಂದುಕೊಂಡೆ. ಎಲ್ಲಿಗೋ ಹೊರಟವನು ಈ ಕರಡಿಯ ಕೈಯಲ್ಲಿ ಸಿಕ್ಕಿಹಾಕಿಕೊಂಡೆನಲ್ಲ ಎಂದು ಕೊಂಡೆ. “ಮನೆಯಿಂದಲೋ ಫೋನು? ಇವತ್ತು ನೀನು ಈಗ ಊಟ ಮಾಡುತ್ತಿರುವುದು ನಿನ್ನ ಜ್ಞಾತಿಗಳ ಪ್ರಸಾದವನ್ನೇ. ನಿನ್ನ ಅಜ್ಜನ ಅಣ್ಣನ ಮೊಮ್ಮಗನ ಅಂದರೆ ನಿನ್ನಣ್ಣನ ಶ್ರಾದ್ಧ ಪ್ರಸಾದ. ನಿಮ್ಮ ಅಮ್ಮನಿಗೆ ಹೇಳು. ನi ಮನೇಲಿ ಉಂಡರೆ ಅವರಿಗೆ ಬೇಜಾರಾಗುಲ್ಲ” ಚಂದ್ರ ತಕ್ಷಣದ ಉಪಾಯ ಹೇಳಿದ. ಊಟ ಮುಗಿಸಿ ತಾಂಬೂಲ ಮೆಲ್ಲುತ್ತಿರುವಾಗ ಸೀತಾಲಕ್ಷ್ಮಿಯವರು ನನ್ನ ಮನೆ, ಮಕ್ಕಳು, ಉದ್ಯೋಗಗಳ ಪಂಚನಾಮೆ ಮುಗಿಸಿ, ತಮ್ಮ ಮಗಳ ಆಸೆಯನ್ನೇ ನಾನೂ ಬೆಂಬಲಿಸಬೇಕೆಂದು ಆರ್ತವಾಗಿ ಬೇಡಿದರು. ಸಣ್ಣ ಊರುಗಳ ದೊಡ್ಡ ರಾಜಕೀಯ ತಮಗೆ ಇನ್ನು ಬೇಡವೆಂದೂ ಅಂಬಲಿಯೋ ಗಂಜಿಯೋ ದೇವರು ನೀಡಿದಷ್ಟರಲ್ಲೇ ತೃಪ್ತರಾಗಿರುವುದಾಗಿಯೂ ಸೇರಿಸಿದರು. ಹೋಗಿ ಬರುತ್ತೇನೆ ಎಂದೆದ್ದವನು ಚಂದ್ರನಿಗೂ ಹೇಳೋಣವೆಂದರೆ ಅವನಲ್ಲಿ ಕಾಣಲಿಲ್ಲ. ಅಂಗಳಕ್ಕಿಳಿದು ಶೂ ಹಾಕಿಕೊಳ್ಳುವಾಗ ಬಟ್ಟೆಯೊಗೆಯುವ ಕಲ್ಲಿನ ಮೇಲೆ ಕೂತು ತೆಂಗಿನ ಗೆರಟೆ ಹೆರೆಯುತ್ತ ಕೂತಿದ್ದ ಅವನು ಕಾಣಿಸಿದ. ಅದೆಷ್ಟು ತತ್ಪರನಾಗಿ ಅವನು ಗೆರಟೆ ಹೆರೆಯುತ್ತಿದ್ದನೆಂದರೆ ಹಿಂದಿನಿಂದ ನಾನು ಹೋಗಿ ಅವನ ಭುಜ ಅಲುಗಿಸುವವರೆಗೂ ಅವನಿಗೆ ಗಮನವೇ ಇರಲಿಲ್ಲ. ಬಲಿತ ಕಾಯಿಯ ಅರ್ಧಹೋಳು ಗೆರಟೆಯನ್ನು ನುಣ್ಣಗೆ ಹೆರೆಯುತ್ತಿದ್ದಾನೆಂದರೆ ಜಿಲೇಬಿ ಬಟ್ಟಲು ತಯಾರಿಸುತ್ತಿದ್ದಾನೆಂದು ಅರ್ಥೈಸಿಕೊಂಡೆ. ಯಾರ ಮನೆಯ ಯಾವ ಫಂಕ್ಷನ್ನಿಗೆ ಈ ತಯಾರಿಯೆಂದೂ ಕೇಳಿದೆ. ಪೆಚ್ಚಾಗಿ ನಕ್ಕ ಅವನು “ಜಿಲೇಬಿಗಲ್ಲವೋ ಮಾರಾಯಾ. ಬೆಳಗ್ಗೆ ಸಂತೆಯಲ್ಲಿ ಮಾರುತ್ತಿದ್ದ ಗೆರಟೆಯ ಪಿಟೀಲು ನೋಡಲಿಲ್ವಾ ನೀನು? ಅದನ್ನು ಕಂಡಾಗಿನಿಂದ ಅಂಥದೊಂದನ್ನು ಮಾಡಿ ನುಡಿಸುವಾಸೆಯಾಗಿದೆ... ಅದು ಕುನ್ನೈಕುಡಿಯ ಪಿಟೀಲೇ ಆಗಲಿ, ಮೈಸೂರು ನಾಗರಾಜನ ಪಿಟೀಲೇ ಆಗಲಿ, ಅಥ್ವಾ ಈ ಗೆರಟೆಯ ಪಿಟೀಲೇ ಆಗಲಿ, ನಾದ ಹುಟ್ಟೋದು ಅದಕ್ಕೆ ಬಿಗಿದ ತಂತಿಯಿಂದ ತಾನೇ? ನಮ್ಮ ಅನಸೂಯಂಗೆ ಸಂಗೀತ ಅಂದ್ರೆ ಶಾನೇ ಇಷ್ಟ. ಅವಳಿಗೆ ಪಿಟೀಲು ನುಡಿಸೋದು ಚೂರುಪಾರು ಗೊತ್ತು. ಅದಕ್ಕೇ ಈ ತಯಾರಿ” ಎಂದವನೇ ಮತ್ತೆ ತನ್ನ ಕಾಯಕದಲ್ಲಿ ತಲ್ಲೀನನಾದ. ಅವನಾಗಲೇ ಆ ಪಿಟೀಲಿಗೆ ಜೋಡಿಸಲು ಮರದ ಹಿಡಿಯನ್ನೂ, ಗೆರಟೆಯ ಬಾಯಿಗೆ ಅಂಟಿಸಲು ದಪ್ಪನೆಯ ಚರ್ಮದಂಥ ಪೇಪರನ್ನೂ, ತಂತಿಯ ಸಿಂಬೆಯನ್ನೂ ಅಣಿಯಾಗಿಟ್ಟುಕೊಂಡು ಕೂತಿದ್ದ. ಅದು ಹೇಗೋ ನಾನು ಚಂದ್ರನ ಮನೆಯಲ್ಲಿರುವುದನ್ನು ಪತ್ತೆಮಾಡಿದ್ದ ಶ್ರೀಕಂಠ ಬೈಕಿನಲ್ಲಿ ಬಂದು ಹಾರ್ನು ಮಾಡತೊಡಗಿದ. ಬೈಕಿನ ಹಿಂಬದಿ ಸೀಟಿನಲ್ಲಿ ಕೂರುವಾಗ ಮಂಡಿವರ್ತಕನೂ, ಪುರಸಭೆಯ ಉಪಾಧ್ಯಕ್ಷನೂ ಆಗಿರುವ ಅವನು ವರ್ಷಕ್ಕೊಮ್ಮೆ ಬಂದರೂ ಮನೆಯಲ್ಲಿ ನಿಲ್ಲದ ನನ್ನನ್ನು ಕಣ್ಣಲ್ಲೇ ಸುಡುವಂತೆ ನೋಡಿದ. ಹೊರಡುವಾಗ ಚಂದ್ರನಿಗೆ ನಾಳೆ ಬೆಳಿಗ್ಗೆ ಮಡಿಯಲ್ಲಿ ಬಂದು ಜ್ಞಾಪಿಸುವುದಾಗಿಯೂ, ಅಪ್ಪನ ಶ್ರಾದ್ಧದ ಪೂರ್ವಪಂಕ್ತಿಗೆ ಅವನು ಕೂರಬೇಕಿರುವುದರಿಂದ ಹೊರಗೆಲ್ಲೂ ತಿಂಡಿಗಿಂಡಿ ತಿನ್ನಬಾರದೆಂತಲೂ, ಬೇಕಿದ್ದರೆ ಆಚೆ ನಾಳಿದ್ದು ಅವನೇ ಅಯೋಧ್ಯೆ ಹೋಟೆಲ್ಲಿನಲ್ಲಿ ಮಸಾಲೆ ದೋಸೆ ಕೊಡಿಸುವುದಾಗಿಯೂ ಕೂಗಿ ಹೇಳಿ, ಸೀತಾಲಕ್ಷ್ಮಿಗೂ ಬೆಳಗ್ಗೆಯೇ ಮಡಿಯುಟ್ಟು ಬರಬೇಕೆಂದೂ, ಅವನ ಹೆಂಡತಿಗಿನ್ನೂ ಅಳತೆ ಅಂದಾಜುಗಳು ದಕ್ಕಿಲ್ಲವೆಂದೂ, ಸೀತಾಲಕ್ಷ್ಮಿ ಬಾರದಿದ್ದರೆ ಅಮ್ಮ ಗಾಬರಿಪಡುವುದಾಗಿಯೂ ಹೇಳಿದ.
ಮನೆ ಸೇರಿ ಬೆಳಿಗ್ಗೆಯಿಂದ ನಡೆದುದೆಲ್ಲವನ್ನೂ ಅಮ್ಮನಿಗೆ ಸಂಕ್ಷೇಪದಲ್ಲಿ ಹೇಳಿ ನನ್ನ ಊಟವಾಗಿರುವುದನ್ನೂ ಚಂದ್ರನ ಮನೆಯಲ್ಲಿ ನಡೆದ ತಿಥಿಯ ವಿಚಾರವನ್ನೂ ಹೇಳಿದೆ. “ಬಿಡು, ಜ್ಞಾತಿಗಳ ಪ್ರಸಾದ. ನಾಳೆ ನಿಮ್ಮಪ್ಪನದೇ ತಿಥಿ ಇರುವಾಗ ಸ್ವಲ್ಪವಾದರೂ ನೇಮ. ನಿಷ್ಠೆ ಇಟ್ಟುಕೋಬೇಕು ತಾನೆ?” ಅಂತ ಹೇಳಿ ನನ್ನ ಮುಜುಗರಕ್ಕೆ ಚುಕ್ಕಿ ಇಟ್ಟಳು. ಶ್ರೀಕಂಠನ ಹೆಂಡತಿ ಕಾಫಿ ಕೊಡುವಾಗ “ಅಕ್ಕನಂತೂ ಅತ್ತೆ ಇರುವವರೆಗೂ ಈ ಮನೆಗೆ ಬರುವ ಹಾಗಿಲ್ಲ. ಅತ್ತೆ ಮುಂದಿನ ತಿಂಗಳು ಕಾಶೀ ಯಾತ್ರೆಗೆ ಹೊರಟಿದ್ದಾರೆ. ಅಕ್ಕನನ್ನೂ, ಮಗಳನ್ನೂ ಕಳಿಸಿಕೊಡಿ” ಅಂತ ಗುಟ್ಟಾಗಿ ಹೇಳಿದಳು. ಆಗಲಿ ಅನ್ನುವಂತೆ ಕತ್ತು ಹಾಕಿದೆ.
ಮಾರನೇ ದಿನ ಅಪ್ಪನ ತಿಥಿ ಸಾಂಗವಾಗಿ ನಡೆದು ದಾಯಾದಿಗಳೆಲ್ಲ ಪ್ರಸಾದ ಸ್ವೀಕರಿಸಿ ಹೋದ ನಂತರ ಸಂಜೆ ಕಾಫಿ ಕುಡಿಯುವಾಗ ಅಮ್ಮ ತಾನು ಕಾಶಿಗೆ ಹೊರಟ ವಿಚಾರ ಹೇಳಿದಳು. ಅದೂ ಇದೂ ಮಾತಿನ ನಡುವೆ ಅವರಿವರ ಮನೆ ಹೆಣ್ಣುಮಕ್ಕಳ ಮದುವೆ, ಖಾಯಿಲೆ, ಕಸಾಲೆ, ಊರ ರಾಜಕೀಯದ ಸುದ್ದಿ ಹಾದು ಹೋಗುತ್ತಿರುವಾಗ ಇದ್ದೂರಲ್ಲೇ ಉಳಿದ ಕಾರಣ ಬೇಕೋ ಬೇಡವೋ ರಾಜಕೀಯ ಮಾಡೋದು ಅನಿವಾರ್ಯ ಅಂತ ಶ್ರೀಕಂಠ ದನಿ ಸೇರಿಸಿದ. ಚಂದ್ರಶೇಖರ ಶಾಸ್ತ್ರಿಯ ದೊಡ್ಡ ಮಗಳು ಬೆಂಗಳೂರಿನ ಜೆವೆಲ್ರಿಯಲ್ಲಿ ಕೆಲಸಕ್ಕಿರೋ ಪುಟ್ಟಾಚಾರಿಯ ಮಗನ ಜೊತೆ ಶೀಘ್ರದಲ್ಲೇ ಓಡಿಹೋಗುತ್ತಾಳೆಂದು ಭವಿಷ್ಯ ಹೇಳಿದ. “ಗಂಡು ಹುಡುಕಿ ಮದುವೆ ಮಾಡುವ ತಾಕತ್ತಿಲ್ಲದ ನಿನ್ನ ಗೆಳೆಯ ಮಗಳು ಓಡಿ ಹೋಗಲಿ ಅಂತ ಕಾಯುತ್ತಿದ್ದಾನೆ” ಅಂತಂದು ಹಲ್ಲು ಕಚ್ಚಿಕೊಂಡ.
ರಾತ್ರಿ ಊರಿಗೆ ಹೊರಟಾಗ ಅಮ್ಮ ಜತನದಿಂದ ಕಟ್ಟಿಕೊಂಡ ಅಪ್ಪನ ಪ್ರಸಾದವನ್ನು ಬ್ಯಾಗಲ್ಲಿಟ್ಟುಕೊಂಡು ಹೋಗಿ ಬರುವುದಾಗಿ ಹೇಳಿದೆ. ಅಮ್ಮ “ಶ್ರೀಕಂಠನ ಮಗ ಹೈಸ್ಕೂಲು ಮುಗಿಸಿದ ಮೇಲೆ ನಿನ್ನ ಮನೆಯಲ್ಲೇ ಇದ್ದು ಓದಲಿ. ಈ ಊರು ಕೆಟ್ಟು ಹೋಗಿದೆ. ಮಗಳಿಗೆ ಯಾವಾಗ ಮದುವೆ ಮಾಡ್ತೀಯ? ಅವಳೂ ಯಾರನ್ನಾದರೂ ನೋಡಿಕಂಡಿದಾಳಾ?” ಅಂತ ಕೇಳಿ ಶ್ರೀಕಂಠನಿಂದ ಬೈಸಿಕೊಂಡಳು. ಶ್ರೀಕಂಠ ಬೈಕಿನಲ್ಲಿ ರೈಲ್ವೇ ಸ್ಟೇಷನ್ನಿಗೆ ಬಿಟ್ಟು ಹೋದ. ರಾತ್ರಿ ರೈಲಿಗೆ ಮೊದಲೇ ಟಿಕೇಟು ಮಾಡಿಸಿದ್ದ ನನಗೆ ರೈಲು ಒಂದು ಗಂಟೆ ತಡವಾಗಿ ಬರುತ್ತದೆ ಎನ್ನುವ ವಿಚಾರಣೆಯವರ ಸೂಚನೆ ಕೇಳಿಸಿತು. ನಿಲ್ದಾಣದ ಕಲ್ಲುಬೆಂಚಿನ ಮೇಲೆ ಕೂತಿದ್ದ ಅನಸೂಯ ಮೊಬೈಲಿನ ಮೆಸೇಜಿನಲ್ಲಿ ತಲ್ಲೀನಳಾಗಿದ್ದನ್ನು ಗಮನಿಸಿದೆ. ಅವಳ ಪಕ್ಕದಲ್ಲಿದ್ದ ತೆರೆದ ಬಾಯಿಯ ಬ್ಯಾಗಿನಲ್ಲಿ ತೆಂಗಿನ ಗೆರಟೆಯಿಂದ ತಯಾರಿಸಿದ ಪಿಟೀಲು ನಗುತ್ತ ಕೂತಿತ್ತು. ಹೌದಲ್ಲವಾ, ನಾದ ಹುಟ್ಟೋದು ಎಳೆದು ಕಟ್ಟಿದ ತಂತಿಯಿಂದಲೇ ಹೊರತು ಸುತ್ತಿಟ್ಟ ಸಿಂಬೆಯಿಂದ ಅಲ್ಲವಲ್ಲ ಎಂದುಕೊಂಡು ಜೇಬಲ್ಲಿಟ್ಟಿದ್ದ ಸಿಗರೇಟೆಳೆದು ಬೆಂಕಿಕೊಟ್ಟೆ.
(ಸ್ಪೂರ್ಥಿ -ಡಾ.ಯು.ಆರ್.ಅನಂತಮೂರ್ತಿಯವರ ’ಸೂರ್ಯನ ಕುದುರೆ’)
-----------------------------------------------------------------------------
ninnavastege
ಉದ್ದೀಪನದ ಮದ್ದು ಮೆದ್ದಿದ್ದೀಯೇನೆ, ಹುಡುಗಿ
ಮೂರ್ತದಿಂದಮೂರ್ತಕ್ಕೆ ನಿನ್ನ ನೆಗೆತ?
ಅವಯವದ ಆಕಾರಕ್ಕೆ ಆಸಕ್ತ ಲೌಕಿಕದಲ್ಲಿ
ತುಂಡಿನುಡುಗೆಯ ನೀನು ನಭದ ನಕ್ಷತ್ರ-
ವಲ್ಲವೆಂದು ಪ್ರಮಾಣಿಸುವುದು ಕಡು ಕಷ್ಟ.
ರಸ, ರೂಪ, ಗಂಧ ದಂದುಗದ ವ್ಯಾಪಾರವಿಲ್ಲಿ
ವಜ್ರ ಹೊಳೆಯುವ ಹಾಗೇ ಗಾಜೂ ಲಕಲಕಿಸುವ ದಿಲ್ಲಿ
ಕಾಣುವರು ಕಣ್ಣಿದ್ದವರು ಸತ್ಯ ದರ್ಶನದಲ್ಲಿ-
ಕಂಡದ್ದೆಲ್ಲ ಲಯವಾಗಿ ಹೋಗುವುದು, ದಿಟ.
ಸ್ಮರಣೆಯಿದ್ದರೆ ತಾನೆ ಭವದ ನಂಟಿನ ನಂಜು
ಸಿಂಹಾಸನಗಳಲುಗಿ ಒರೆಯ ಕತ್ತಿಗೆ ರಕ್ತದ ಕಲೆ-
ಯಂಟುವುದು ಕ್ರಾಂತಿಯ ಹೆಸರಲ್ಲಿ ಮತ್ತೆ ಮೆರೆದಾಟ
ಹೂಡಿದವಿವೇಕಿಗಳ ನಡುವೆಯೇ ಬುದ್ಧನೆದ್ದದ್ದು?
ಭವದನುಭವದ ಸುಡುಸುಡುವ ಮಾತಿಗೆ ನಲುಗಿ
ಅಕ್ಕ ಬಟ್ಟೆ ಬಿಚ್ಚೆಸೆದು, ಮೊಲೆಹಿಡಿಯುವೆವೆಂಬ
ತ್ರಿಮೂರ್ತಿಗಳಿಗನಸೂಯೆ ತಾಯಾಗಿ ಹಾಲೂಡಿಸಿದ್ದು
ರೇಣುಕೆಯ ತಲೆಯುರುಳಿಸಿ, ರಾಮ ವರವ ಬೇಡಿದ್ದು?
ಕಂಚುಕದ ಕಟ್ಟ ಸಡಿಲಿಸುವ ಮೊದಲು ಕೊಂಚ ಕಣ್ಣು ಬಿಡು
ನಾಕೇ ನಾಕು ತಂತಿಯ ನಾದ ತುಂಬಿ ನಿಂತಿದೆದೆಯಲ್ಲಿ
ಸೃಷ್ಟಿ ಪೂರ್ವದ ಪ್ರಳಯ ಕಾಲ ಬುಡದಲ್ಲಿ
ಹೆಪ್ಪುಗಟ್ಟಿದೆ ಕಪ್ಪು ಕಗ್ಗತ್ತಲಿನ ರಾತ್ರಿಯಲ್ಲಿ.
ರವಿಯಿರದಾಕಾಶ, ಶಶಿ ಕಂತುತ್ತಲೇ ಇದ್ದಾನೆ ಪಕ್ಷಕ್ಕೊಮ್ಮೆ
ಚಕೋರದಾರಾಮಕ್ಕಂತೂ ನಿಗದಿ ಬಿಡುವು
ಮತ್ಸ್ಯಕನ್ಯೆಯೇ ನೀನು? ಪಾದವಿಲ್ಲದೇ ನಿಲ್ಲಲಾಗದು ಕಾಣು;
ದಶಾವತಾರ ಮುಗಿವವರೆಗೂ ವಿಕಾಸದುಮ್ಮಳದ ಕನಸು.
ವ್ಯಕ್ತಮಧ್ಯದಸ್ತಿತ್ವಕ್ಕೆ ಅದ್ವೈತ ಎಂದಿಗೂ ಹಿಂಗದ ಹಸಿವು.
ಸೋಮವಾರ, ಜೂನ್ 27, 2011
ಅಂತರಂಗದ ಅಭ್ಯಾಸಕ್ಕೊಂದು ಪುಟ್ಟ ಟಿಪ್ಪಣಿ - ರಾಧಿಕಾ ನಡಹಳ್ಳಿ-ತುಂಬಿಕೊಳ್ಳುವ ತವಕ
ಅಂತರಂಗದ ಅಭ್ಯಾಸಕ್ಕೊಂದು ಪುಟ್ಟ ಟಿಪ್ಪಣಿ.
ಸಮಕಾಲೀನ ಕನ್ನಡ ಕಾವ್ಯ ಕ್ರಿಯೆಯು ಇಷ್ಟೂ ದಿನ ಹರಿದು ಬಂದ ಕಾವ್ಯ ಪರಂಪರೆಯನ್ನೇ ಹೊರಳು ಹಾದಿಗೆ ತಂದು ನಿಲ್ಲಿಸಿರುವ ಸಂದರ್ಭವಿದು. ಕಾವ್ಯ ಕ್ರಿಯೆಗೆ ಪರಂಪರೆಯ ಅರಿವು ಮತ್ತು ಅನುಭವಗಳ ಪಾರಮ್ಯ ಬೇಕೆನ್ನುವ ಮೂಲ ಮಂತ್ರವನ್ನೇ ಧಿಕ್ಕರಿಸಿ ನುಡಿದುದೆಲ್ಲವನ್ನೂ ಕಾವ್ಯ ಸಂಭವವೆಂದು ತಮಗೊಲಿದ ಮಿತಿಯ ಐಕಾನುಗಳಲ್ಲಿ ಪರ್ಯಾಲೋಚಿಸುತ್ತಿರುವ ಆಧುನಿಕ ಕವಿತೆಗಳ ವಿಪುಲ ಸಾಮ್ರಾಜ್ಯ ಮುದ್ರಣಮಾಧ್ಯಮವನ್ನು ಮೀರಿ ನಿಂತು, ಅಂತರ್ಜಾಲದ ಸಾಮಾಜಿಕ ತಾಣಗಳಲ್ಲಿ, ವೆಬ್ ಪುಟಗಳಲ್ಲಿ, ಹಾಗೇ ಅನ್ನಿಸಿದ್ದೆಲ್ಲವನ್ನೂ ಬರೆದು ಬರೆದ ತಕ್ಷಣವೇ ಪ್ರಕಟಿಸಿಯೂ ಬಿಡುವ ಅವಕಾಶವಿರುವ ಬ್ಲಾಗುಗಳಲ್ಲಿ ತನ್ನ ವಿಸ್ತರತೆಯನ್ನು ಮೆರೆಯುತ್ತಿದೆ.
ಕಾವ್ಯದ ವಿಪುಲ ಬೆಳೆಯಿರುವ ಹಸಿರುಕ್ರಾಂತಿಯಂತೇ ತೋರುವ ಕಾವ್ಯಕ್ರಾಂತಿಯ ಈ ದಿನಗಳಲ್ಲಿ ಯುವ ಬರಹಗಾರರ ಮೊದಲ ಪುಸ್ತಕಕ್ಕೆ ಪ್ರೋತ್ಸಾಹ ಧನ ನೀಡಿ ಪುಸ್ತಕ ಪ್ರಕಟಿಸುವುದಕ್ಕೆ ನೆರವಾಗುತ್ತಿರುವ ಪುಸ್ತಕ ಪ್ರಾಧಿಕಾರದ ಯೋಜನೆಯಡಿ ರಾಧಿಕಾ ಅವರ ಈ ಸಂಕಲನ ‘ತುಂಬಿಕೊಳ್ಳುವ ತವಕ’ ಪ್ರಕಟವಾಗುತ್ತಿದೆ. ರೂಪಕಗಳಿಗೂ ಪದ್ಯದ ಶೀರ್ಷಿಕೆಗಳಿಗೂ ಬರ ಬಂದಿರುವ ಕಾಲದಲ್ಲಿ ಚಿಂತನೆಗೆ ಹಚ್ಚಬಲ್ಲ ತಲೆಬರಹ ನೀಡಿರುವ ಕವಿಗೆ ಅಭಿನಂದನೆ.
ಹೊಸ ಕವಿಯ ಮೊದಲ ಸಂಕಲನದ ಸಮಸ್ಯೆಗಳು ಸಂಕೀರ್ಣವಾಗಿರುತ್ತವೆ. ಎಷ್ಟು ಕವಿತೆಗಳನ್ನು ಸೇರಿಸಬೇಕೆನ್ನುವುದರಿಂದ ಹಿಡಿದು ಅವುಗಳ ಅನುಕ್ರಮಣಿಕೆಯ ಕ್ರಮ, ಪ್ರಕಾಶಕರ ಜೊತೆ ಮಾಡಿಕೊಳ್ಳಲೇ ಬೇಕಾದ ಒಡಂಬಡಿಕೆಗಳು, ಪ್ರಕಟಣೆಯ ಹಿಂದಿನ ಹಲವು ಹಂತಗಳನ್ನು ಸುಸೂತ್ರವಾಗಿ ನಿವಾರಿಸಿಕೊಳ್ಳುವ ಜಾಣತನ-ಇತ್ಯಾದಿ, ಇತ್ಯಾದಿ. ಅದೃಷ್ಟಕ್ಕೆ ಈ ಕವಿಯ ಪ್ರಸ್ತುತ ಸಂಕಲನದಲ್ಲಿ ಕಡಿಮೆ ಸಂಖ್ಯೆಯಲ್ಲಿ ಕವಿತೆಗಳಿರುವುದು, ‘ಸಂಚಯ’ ಇದನ್ನು ಪ್ರಕಟಿಸುತ್ತಿರುವುದು ಕವಿಯ ಕಾವ್ಯ ಪ್ರವೇಶದ ಹಾದಿಯನ್ನು ಸುಗಮಗೊಳಿಸಿವೆ. ಪುಸ್ತಕ ಪ್ರಕಟನೆಯ ಹಿಂದಿನ ಕರಾಳ ಹಸ್ತಗಳ ಹಿಡಿತದಿಂದಲೂ ಅವರು ಪಾರಾಗಿದ್ದಾರೆ.
ಒಬ್ಬ ಕವಿ ತನ್ನ ಕಾವ್ಯ ಸೃಷ್ಟಿಗೆ ತನ್ನದೇ ಆದ ಮನೋಧರ್ಮವೊಂದನ್ನು ಸ್ಥಾಪಿಸಿಕೊಂಡಿರುತ್ತಾನೆ ಮತ್ತು ಸ್ಥಾಪಿಸಿಕೊಂಡಿರಲೇ ಬೇಕು. ಬದುಕಿನಲ್ಲಿ ನಿತ್ಯ ಕಾಡುತ್ತಲೇ ಇರುವ ಮೂಲಭೂತ ಸಮಸ್ಯೆಗಳಿಗೆ ಅವನು ನೀಡುವ ಪ್ರತಿಕ್ರಿಯೆ ಮತ್ತು ಅಂಥ ಸಮಸ್ಯೆಗಳು ಆ ಕವಿಯ ಭಾವಕೋಶದ ಮೇಲೆ ಕೆತ್ತಿದ ಸಾಮಾಜಿಕ ಮತ್ತು ಭಾವನಾತ್ಮಕ ಸ್ಥಿತ್ಯಂತರಗಳು ಅವನ ಕಾವ್ಯ ಕ್ರಿಯೆಗೆ ಪುಷ್ಟಿ ನೀಡುತ್ತವೆ. ವರ್ತಮಾನದ ಸಂಗತಿಗಳಿಗೆ ತಟ್ಟನೆ ನೀಡಿ ಬಿಡುವ ಪ್ರತಿಕ್ರಿಯೆಗಳು ಬರಿಯ ಹೇಳಿಕೆಗಳಾಗೇ ಉಳಿದುಬಿಡುತ್ತವೆ. ಹಾಗಾದಾಗ ಅಪ್ಪಟ ಕಾವ್ಯ ಹುಟ್ಟಲಾರದು. ಹೀಗೆ ಲೋಕದ ಸಂಗತಿಗಳಿಗೆ ಭಾವನಾತ್ಮಕ ಪ್ರತಿಕ್ರಿಯೆ ನೀಡುವಲ್ಲಿ ಇರುವ ಅತಿ ಸೂಕ್ಷ್ಮ ಸಂಗತಿಯೇ ಕಾವ್ಯವಾಗಿ ಅರಳುತ್ತದೆ. ಭಾಷೆಯನ್ನು ದುಡಿಸಿಕೊಳ್ಳುವ ಹಲವು ಸಾಧ್ಯತೆಗಳ ಅರಿವಿನ ಜೊತೆಗೇ ಖಾಸಗಿ ಅನುಭವವನ್ನು ಪರಂಪರೆಯ ತಟ್ಟೆಯಲ್ಲಿಟ್ಟು ತೂಗಿ ನೋಡುವ ವ್ಯವಧಾನವೂ ಕವಿಗೆ ಇರಬೇಕಾಗುತ್ತದೆ. ನಮ್ಮ ಅನೇಕ ಯುವ ಕವಿಗಳಿಗೆ ಈ ತಾಳ್ಮೆ ಮತ್ತು ಸಂಯಮಗಳು ಇಲ್ಲದಿರುವುದರಿಂದಲೇ ಅವರಿಗೆ ಆ ಕ್ಷಣದಲ್ಲಿ ಅನ್ನಿಸಿದ್ದನ್ನೂ ಓದುಗರೂ ಕಾವ್ಯವೆಂದು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಒದಗಿ ಬಿಟ್ಟಿದೆ. ಪ್ರಸ್ತುತ ಸಂಕಲನದಲ್ಲಿ ‘ನಾನು’ ಅನ್ನುವ ಆತ್ಮ ಪ್ರತ್ಯಯದಲ್ಲೇ ಬದುಕಿನ ವಿವಿಧ ಮಗ್ಗುಲಗಳನ್ನು ವಿಶಿಷ್ಟವಾಗಿ ಮತ್ತು ಪ್ರತಿರಮ್ಯತೆಯ ಸ್ಥಾಯಿಯಲ್ಲೇ ಹಿಡಿದಿರುವ ರಾಧಿಕಾ ನಡಹಳ್ಳಿಯವರ ಈ ಸಂಕಲನ ಆಧುನಿಕ ಬಿಕ್ಕಟ್ಟುಗಳಿಂದ ಪಾರಾಗಿದೆಯೆಂದು ಧೈರ್ಯವಾಗಿ ಹೇಳಬಹುದು.
ಚಳಿಗಾಲ ಕವಿತೆ
ಕೆಂಡದ ನೆನಪ ಅಗ್ಗಿಷ್ಟಿಕೆಯ ಮುಂದೆ
ಬಿಸಿ ನೆನಪ ಹೊದ್ದು ಕೈ ಉಜ್ಜುತ್ತ ಕೂತಿದೆ
ಅಗ್ಗಿಷ್ಟಿಕೆಯ ಕೆಂಡದ ಬಿಸಿಯ ತನ್ನೊಳಗೂ
ಆವಾಹಿಸಿಕೊಳ್ಳಲು ಸಜ್ಜಾಗಿದೆ (ಸಂಕೇತ)
‘ಕವಿತೆ’ ಎಂದರೆ ಯಾವುದೆನ್ನುವ ನಿತ್ಯನೂತನ ಪ್ರಶ್ನೆ ಇವರ ಈ ಸಂಕಲನ್ದುದ್ದಕ್ಕೂ ಚಾಚಿಕೊಂಡಿದೆ. ವ್ಯಾಖ್ಯಾನ ಕವಿಯ ಕೆಲಸವಲ್ಲ. ಅದು ಓದುಗನ ಹಕ್ಕು. ಬರಿಯ ಹೇಳಿಕೆಗಳಾಗದ ಇಂಥ ಸಾಲುಗಳು ಅರ್ಥದ ಸಮುದ್ರದಲ್ಲಿ ಎದ್ದೆದ್ದು ಹಾರುವ ಅಲೆಗಳಂತೆ ಮೊದಲ ಓದಿನಲ್ಲೇ ವಿಸ್ಮಯಗೊಳಿಸುತ್ತವೆ, ತನ್ಮಯಗೊಳಿಸುತ್ತವೆ.
ಮೌನದುರಿಯ ಮಾತಿನಲಾರಿಸಬಹುದೇ
ಮಾತಿನುರಿಯ ಮೌನದಲಿ ಮರೆಸಬಹುದೇ
ಮಾತ ಮರೆಸಲು ಮೌನದ ಮೊರೆಯೇ
ಮೌನ ಮುಗಿಸಲು ಮಾತಿನ ಹೊಳೆಯೇ (ವ್ಯತ್ಯಾಸ)
ಶಬ್ದ ಮತ್ತು ಅದರೊಳಗಿನ ಲಯದ ಹದವರಿತ ಮನಸ್ಸು, ಆಶಯ ಮತ್ತು ಆಕೃತಿಗಳ ಅನನ್ಯ ಸಂಯೋಜನೆಯನ್ನು ನಿರ್ಮಿಸಬಲ್ಲುದು. ಹೀಗಾದಾಗಲೇ ಲಯ ವಿನ್ಯಾಸ ತನಗೆ ತಾನೇ ಏರ್ಪಡುತ್ತದೆ. ಈ ಕಾರಣಕ್ಕೆ ಇಲ್ಲಿನ ಬಹುತೇಕ ಪದ್ಯಗಳು ನಮ್ಮೊಳಗನ್ನು ಬೆಳಗುತ್ತವೆ.
ಇರುಳು ಅರ್ಧ ಕಳೆದಿದೆ
ಕೆಲ ತಾಸಿಗೆ ಹೊಸ ಬೆಳಕಿದೆ
ಎದೆಯೊಳಗಿನ್ನೂ ಕತ್ತಲಿದೆ
ನೀ ಬಂದ ಮೇಲಷ್ಟೇ ಬೆಳಗಲಿದೆ (ಪ್ರಥಮ)
ಎನ್ನುವುದು ಮೊದಲ ಓದಿಗೆ ಬರಿಯ ಅಂತ್ಯ ಪ್ರಾಸದ ಸರ್ಕಸ್ಸಿನಂತೆ ಕಂಡರೂ ಮರು ಓದಿಗೆ ಕವಿಯು ‘ಪ್ರಥಮ’ ಅನ್ನುವುದನ್ನು ಸಂಖ್ಯಾಸೂಚಕವಾಗಿ ಬಳಸಿದ್ದಾರೋ, ಪುರುಷ ವಾಚಕವಾಗಿ ಬಳಸಿದ್ದಾರೋ, ಅಥವ ಶ್ರೇಣೀಕರಣದ ವ್ಯಂಗ್ಯವಾಗಿ ಬಳಸಿದ್ದಾರೋ ಎನ್ನುವ ಕುತೂಹಲ ಹುಟ್ಟುತ್ತದೆ. ಪ್ರಯೋಗಗಳೇ ಕಡಿಮೆಯಾಗುತ್ತಿರುವ ಕಾಲದಲ್ಲಿ ಇದೂ ಉಚಿತವೇ!
ಅವನುಸಿರು ಒಮ್ಮೆಯೂ
ಸುಳಿಯದ ಗಾಳಿಯಲ್ಲೂ
ಅದೇನೋ ಗಂಧ ತೇಲಿದಂತಾಗಿ
ಹೃದಯ ಬಡಿತ ಏರಿ
ಕೊಂಚ ಬೆವರಿದಳು (ತಿಳಿ)
ಹರೆಯದ ಪುಳಕಗಳನ್ನು ಸಮರ್ಥವಾಗಿ ತೆರೆದಿಡುವ ಈ ಸಾಲುಗಳು ಹೃದಯ ಬಡಿತ ಏರಿ/ ಕೊಂಚ ಬೆವರಿದಳು ಅನ್ನುವುದು ಆಧುನಿಕ ಮನೋಭಾವದವರಿಗೆ ವಿಶಿಷ್ಠವೆನ್ನಿಸದಿದ್ದರೂ _ ಏಕೆಂದರೆ ಆಧುನಿಕ ಬದುಕು ಬಗೆಯುತ್ತಿರುವ ಜೀವನ ಕ್ರಮದಲ್ಲಿ ಅಮೂರ್ತ ಭಾವನೆಗಳಿಗಿಂತಲೂ ಮೂರ್ತ ಅನುಭವದ್ದೇ ಮೇಲುಗೈಯ್ಯಾಗಿರುವ ಕಾರಣ- ಒಳ್ಳೆಯ ಸಾಲುಗಳಾಗಿ ಕಾಣುತ್ತವೆ. ಆದರೂ ಪದ್ಯ ಮುಂದುವರೆಸಿದ ಕವಿ
ಬಣ್ಣ ತಿಳಿಯದ ಕಣ್ಣ ಕುರಿತು
ಕನಸ ಕಟ್ಟದಿದ್ದರೂ
ಇಂದಿನ ಮನಸ ಖುಷಿಯ
ನೆನಪಿಗೊಂದು ಕಾವ್ಯ ಬರೆದಿಟ್ಟಳು (ತಿಳಿ)
ಅನ್ನುವುದು ವ್ಯರ್ಥ ಮುಂದುವರೆಸಿದ ಸಾಲುಗಳಾಗಿ ತೋರುತ್ತವೆ. ಅಮೂರ್ತವಾಗಿ ಹೊಳೆದುದನ್ನು ಮೂರ್ತವಾಗಿ ತೋರಿಸಲೇಬೇಕೆನ್ನುವ ಹಟ ಕಾವ್ಯವಾಗುವುದಿಲ್ಲ ಎನ್ನುವ ಅರಿವು ಕವಿಗೆ ಹುಟ್ಟಬೇಕು.
ಅರರೇ ಇಲ್ಲೇ ಬಾಗಿಲಲ್ಲೇ ನಿಲ್ಲಿಸಿ ಏನಿದು ಯೋಚನೆ
ಹೋಗು ಒಳಗೆ- ಇದೋ ಬಂದೆ
ಇಟ್ತ ಚುಕ್ಕೆಯ ಎಳೆ ಸೇರಿಸಿ
ಅಮ್ಮಾ ನೋಡಲ್ಲಿ ಯಾರು ಬಂದರು?! (ಎಳೆ)
ಎಲ್ಲೆಲ್ಲೋ ಬಿಡಿಸಿಟ್ಟಿರುವ ಚುಕ್ಕೆಗಳನ್ನು ಸೇರಿಸಿ ರಂಗವಲ್ಲಿ ಅರಳಿಸುವ ಹಾಗೇ ಬದುಕಿನ ಚುಕ್ಕೆಗಳಾಗಿರುವ ನಮ್ಮೊಳಗನ್ನೂ ಸಂಬಂಧದ ಎಳೆ ಸೇರಿಸಿ ಜೋಡಿಸಬೇಕಿದೆ. ಇಂಥ ಹಂಬಲ ಈ ಕವಿಗಿದೆ. ಸಂಬಂಧಗಳನ್ನೇ ನಿರಾಕರಿಸುವ ‘ಸ್ಟೇ ಟುಗೆದರ್’ ಕಾಲದಲ್ಲಿ ಇದೂ ಅಪರೂಪವೇ.
ತಲ್ಲಣಗೊಳಿಸಿದ ಅನುಭವ
ಒಳಗಿದ್ದರೆ ಕ್ಷಣ ಕ್ಷಣ
ಅಣು ಅಣು ತಲ್ಲಣ
ಹೊರಬಂದ ಕ್ಷಣ ನಿರಾಳ
ಮರುಕ್ಷಣ ಅನುಮಾನ
ಪ್ರಶ್ನೆಗಳ ಆಕ್ರಮಣ (ಬರೆ)
ಕಬ್ಬಿಣದ ಸಲಾಕೆಯನ್ನು ನಿಗಿ ನಿಗಿ ಬೆಂಕಿಯಲ್ಲಿ ಕಾಯಿಸಿ ಮೈ ಸುಡುವ ‘ಬರೆ’ಯ ಹಾಗೇ ಬರೆಯುವುದು ಕೂಡ ಮನಸ್ಸನ್ನು ಸುಟ್ಟು ಸುಟ್ಟು ಶೋಧಿಸಬೇಕಾದದ್ದು. ಬರೆ ಎನ್ನುವ ಪದವೇ ಅನುಭವದ ಅರ್ಥಕೋಶದಿಂದ ಕಾಣೆಯಾಗುತ್ತಿರುವ ದಿನಗಳಲ್ಲಿ ಆ ಶಬ್ದವನ್ನೇ ಶಬ್ದ ಗಾರುಡಿಯನ್ನಾಗಿಸಿಕೊಂಡಿರುವ ಕ್ರಮ ಅವರ ತಕ್ಕಮಟ್ಟಿನ ಸಾಧನೆಯ ಕುರುಹಾಗಿ ಕಾಣುತ್ತದೆ.
ಹಗಲೆಲ್ಲ ಕವಿತೆ ಧ್ಯಾನ
ಇರುಳು ಅದರದೇ ಸನ್ನಿಧಾನ (ಪಾಠ)
ಕವಿತೆಯನ್ನು ಮತ್ತು ಕವಿತೆ ಹುಟ್ಟುವ ರೀತಿಯನ್ನೂ ಈ ಕವಿ ತಮ್ಮ ಹಲವು ರಚನೆಗಳಲ್ಲಿ ಚಿಂತಿಸಿದ್ದಾರೆ. ಚಿಂತನೆಯ ಲವಲೇಷವೂ ಇರದ ದುರ್ಭರ ದಿನಗಳಲ್ಲಿ ಈಕೆಯ ಕಾವ್ಯ ಕನ್ನಿಕೆ ನಡೆಯುತ್ತಿರುವುದೂ ಸೋಜಿಗವೆನ್ನಿಸುತ್ತದೆ.
ನಿನ್ನ ಕೊರಳ ಮೌನದ ನಕಲಿ
ಆಭರಣ ಕಳಚಿ ನಿಲ್ಲು
ಇಲ್ಲಿ ಸಂಭ್ರಮದಿಂದ ಕಾದಿದೆ
ಅಸಲಿ ಮಾತಿನ ಮುತ್ತಿನ ಹಾರ (ಹಾರದ ನಿರೀಕ್ಷೆ)
ಅನ್ನುವಲ್ಲಿ ಕೂಡ ‘ಹಾರದ ನಿರೀಕ್ಷೆ’ ಎನ್ನುವುದು ಕೊರಳಿಗೆ ಹಾಕುವ ಹಾರವೋ ಅಥವ ಹಾಗೇ ಹಗುರಕ್ಕೆ ಹಾರದೇ ಭದ್ರವಾಗಿ ನಿಲ್ಲುವ ನಿರೀಕ್ಷೆಯೇ ಎನ್ನುವ ಪರಿ ಕೂಡ ಓದುಗನ ವಿಸ್ತರಣೆಗೆ ಬಿಟ್ಟ ವಿಚಾರ.
ಇಷ್ಟೆಲ್ಲ ಹೇಳಿದ ಮಾತ್ರಕ್ಕೆ ಈ ಸಂಕಲನದ ಉಳಿದ ಪದ್ಯಗಳಿಗೂ ಈ ಮಾತು ಅನ್ವಯಿಸುತ್ತದೆ ಎನ್ನುವಂತಿಲ್ಲ. ಏಕೆಂದರೆ ಬರಿಯ ನಿರೀಕ್ಷೆಗಳು, ಕನಸುಗಳು, ಹೇಳಿಕೆಗಳನ್ನು ಕೂಡ ಪದ್ಯವಾಗಿಸುವ ಧಾರಾಳ ವಾಚಾಳಿತನ ಉಳಿದ ಹಲವು ಪದ್ಯಗಲಲ್ಲಿ ಕಾಣುತ್ತದೆ. ಒಂದು ಸಂಕಲನವೆಂದರೆ ಗಟ್ಟಿ ಮತ್ತು ಜೊಳ್ಳು ಕಾಳುಗಳ ಮಿಶ್ರಣ. ಗಟ್ಟಿಕಾಳುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಜೊಳ್ಳು ಕಾಳುಗಳು ಕಡಿಮೆ ಇದ್ದರೆ ಓದುಗ ಬದುಕುತ್ತಾನೆ. ಇಲ್ಲಿ ಜೊಳ್ಳು ಕಾಳುಗಳು ವಿಪರೀತಾವಾಗದೇ ಇರುವುದು ಸಮಾಧಾನದ ಅಂಶ.
ಸ್ವಮಗ್ನ ಸ್ಥಿತಿಗಳಲ್ಲಿ ಅನ್ನಿಸಿದ್ದನ್ನು ಕಾವ್ಯವೆನ್ನುವ ಆಧುನಿಕ ಕಾಲದಲ್ಲಿ ಹೃದಯೊಳಕ್ಕೂ ಇಳಿಯುವ ಸಾರ್ಥಕ ಸಾಲುಗಳನ್ನು ನೀಡಿರುವ ಕವಿಗೆ ಅಭಿನಂದನೆ ಸಲ್ಲಿಸುತ್ತಲೇ ಅವರು ಕನ್ನಡ ಕಾವ್ಯ ಪರಂಪರೆಯೊಂದಿಗೆ ತಮ್ಮ ಪುಟ್ಟ ಹೆಜ್ಜೆಗಳನ್ನೂ ಸೇರಿಸಬೇಕೆನ್ನುವ ತವಕವಿರುವುದನ್ನು ಗುರುತಿಸಿದ್ದೇನೆ. ಅದಕ್ಕೆ ತಯಾರಿಯಾಗಿ ಈಗಾಗಲೇ ತನಗೆ ದಕ್ಕಿರುವ ಸಂಗತಿಗಳಾಚೆಗಿನ ದಕ್ಕದ ಸಂಗತಿಗಳಿಗೂ ಕವಿ ಕಣ್ಣು ಕೈ ಕಿವಿಗಳನ್ನು ಚಾಚಬೇಕಿದೆ. ದೀರ್ಘ ಪರಂಪರೆಯ ಸವಿಸ್ತಾರ ಆಲಾಪಗಳನ್ನು ಅಭ್ಯಸಿಸುತ್ತಲೇ ಕಾಲಕ್ಕೆ ತಕ್ಕುದಾದ ಹ್ರಸ್ವ ಸ್ವರ ಪ್ರಸ್ತಾರವನ್ನೂ ಈಕೆ ದಕ್ಕಿಸಿಕೊಳ್ಳಲಿ ಎನ್ನುವ ಆಶಯದ ಜೊತೆಗೇ ನೀವೂ ಪದ್ಯಗಳನ್ನು ನಿಮ್ಮದಾಗಿಸಿಕೊಳ್ಳಿ ಎಂದು ಬಿನ್ನವಿಸಿಕೊಳ್ಳುತ್ತಾ ಸ್ನೇಹದ ಹೆಸರಲ್ಲಿ ಇಂಥ ಅಪ್ಪಟ ಜವಾಬ್ದಾರಿ ನೀಡಿದ ಪ್ರಕಾಶಕ ಮಿತ್ರ ಶ್ರೀ ಡಿ.ವಿ.ಪ್ರಹ್ಲಾದರನ್ನೂ ನೆನೆಯುತ್ತೇನೆ. ನಮಸ್ಕಾರ.
ಸಮಕಾಲೀನ ಕನ್ನಡ ಕಾವ್ಯ ಕ್ರಿಯೆಯು ಇಷ್ಟೂ ದಿನ ಹರಿದು ಬಂದ ಕಾವ್ಯ ಪರಂಪರೆಯನ್ನೇ ಹೊರಳು ಹಾದಿಗೆ ತಂದು ನಿಲ್ಲಿಸಿರುವ ಸಂದರ್ಭವಿದು. ಕಾವ್ಯ ಕ್ರಿಯೆಗೆ ಪರಂಪರೆಯ ಅರಿವು ಮತ್ತು ಅನುಭವಗಳ ಪಾರಮ್ಯ ಬೇಕೆನ್ನುವ ಮೂಲ ಮಂತ್ರವನ್ನೇ ಧಿಕ್ಕರಿಸಿ ನುಡಿದುದೆಲ್ಲವನ್ನೂ ಕಾವ್ಯ ಸಂಭವವೆಂದು ತಮಗೊಲಿದ ಮಿತಿಯ ಐಕಾನುಗಳಲ್ಲಿ ಪರ್ಯಾಲೋಚಿಸುತ್ತಿರುವ ಆಧುನಿಕ ಕವಿತೆಗಳ ವಿಪುಲ ಸಾಮ್ರಾಜ್ಯ ಮುದ್ರಣಮಾಧ್ಯಮವನ್ನು ಮೀರಿ ನಿಂತು, ಅಂತರ್ಜಾಲದ ಸಾಮಾಜಿಕ ತಾಣಗಳಲ್ಲಿ, ವೆಬ್ ಪುಟಗಳಲ್ಲಿ, ಹಾಗೇ ಅನ್ನಿಸಿದ್ದೆಲ್ಲವನ್ನೂ ಬರೆದು ಬರೆದ ತಕ್ಷಣವೇ ಪ್ರಕಟಿಸಿಯೂ ಬಿಡುವ ಅವಕಾಶವಿರುವ ಬ್ಲಾಗುಗಳಲ್ಲಿ ತನ್ನ ವಿಸ್ತರತೆಯನ್ನು ಮೆರೆಯುತ್ತಿದೆ.
ಕಾವ್ಯದ ವಿಪುಲ ಬೆಳೆಯಿರುವ ಹಸಿರುಕ್ರಾಂತಿಯಂತೇ ತೋರುವ ಕಾವ್ಯಕ್ರಾಂತಿಯ ಈ ದಿನಗಳಲ್ಲಿ ಯುವ ಬರಹಗಾರರ ಮೊದಲ ಪುಸ್ತಕಕ್ಕೆ ಪ್ರೋತ್ಸಾಹ ಧನ ನೀಡಿ ಪುಸ್ತಕ ಪ್ರಕಟಿಸುವುದಕ್ಕೆ ನೆರವಾಗುತ್ತಿರುವ ಪುಸ್ತಕ ಪ್ರಾಧಿಕಾರದ ಯೋಜನೆಯಡಿ ರಾಧಿಕಾ ಅವರ ಈ ಸಂಕಲನ ‘ತುಂಬಿಕೊಳ್ಳುವ ತವಕ’ ಪ್ರಕಟವಾಗುತ್ತಿದೆ. ರೂಪಕಗಳಿಗೂ ಪದ್ಯದ ಶೀರ್ಷಿಕೆಗಳಿಗೂ ಬರ ಬಂದಿರುವ ಕಾಲದಲ್ಲಿ ಚಿಂತನೆಗೆ ಹಚ್ಚಬಲ್ಲ ತಲೆಬರಹ ನೀಡಿರುವ ಕವಿಗೆ ಅಭಿನಂದನೆ.
ಹೊಸ ಕವಿಯ ಮೊದಲ ಸಂಕಲನದ ಸಮಸ್ಯೆಗಳು ಸಂಕೀರ್ಣವಾಗಿರುತ್ತವೆ. ಎಷ್ಟು ಕವಿತೆಗಳನ್ನು ಸೇರಿಸಬೇಕೆನ್ನುವುದರಿಂದ ಹಿಡಿದು ಅವುಗಳ ಅನುಕ್ರಮಣಿಕೆಯ ಕ್ರಮ, ಪ್ರಕಾಶಕರ ಜೊತೆ ಮಾಡಿಕೊಳ್ಳಲೇ ಬೇಕಾದ ಒಡಂಬಡಿಕೆಗಳು, ಪ್ರಕಟಣೆಯ ಹಿಂದಿನ ಹಲವು ಹಂತಗಳನ್ನು ಸುಸೂತ್ರವಾಗಿ ನಿವಾರಿಸಿಕೊಳ್ಳುವ ಜಾಣತನ-ಇತ್ಯಾದಿ, ಇತ್ಯಾದಿ. ಅದೃಷ್ಟಕ್ಕೆ ಈ ಕವಿಯ ಪ್ರಸ್ತುತ ಸಂಕಲನದಲ್ಲಿ ಕಡಿಮೆ ಸಂಖ್ಯೆಯಲ್ಲಿ ಕವಿತೆಗಳಿರುವುದು, ‘ಸಂಚಯ’ ಇದನ್ನು ಪ್ರಕಟಿಸುತ್ತಿರುವುದು ಕವಿಯ ಕಾವ್ಯ ಪ್ರವೇಶದ ಹಾದಿಯನ್ನು ಸುಗಮಗೊಳಿಸಿವೆ. ಪುಸ್ತಕ ಪ್ರಕಟನೆಯ ಹಿಂದಿನ ಕರಾಳ ಹಸ್ತಗಳ ಹಿಡಿತದಿಂದಲೂ ಅವರು ಪಾರಾಗಿದ್ದಾರೆ.
ಒಬ್ಬ ಕವಿ ತನ್ನ ಕಾವ್ಯ ಸೃಷ್ಟಿಗೆ ತನ್ನದೇ ಆದ ಮನೋಧರ್ಮವೊಂದನ್ನು ಸ್ಥಾಪಿಸಿಕೊಂಡಿರುತ್ತಾನೆ ಮತ್ತು ಸ್ಥಾಪಿಸಿಕೊಂಡಿರಲೇ ಬೇಕು. ಬದುಕಿನಲ್ಲಿ ನಿತ್ಯ ಕಾಡುತ್ತಲೇ ಇರುವ ಮೂಲಭೂತ ಸಮಸ್ಯೆಗಳಿಗೆ ಅವನು ನೀಡುವ ಪ್ರತಿಕ್ರಿಯೆ ಮತ್ತು ಅಂಥ ಸಮಸ್ಯೆಗಳು ಆ ಕವಿಯ ಭಾವಕೋಶದ ಮೇಲೆ ಕೆತ್ತಿದ ಸಾಮಾಜಿಕ ಮತ್ತು ಭಾವನಾತ್ಮಕ ಸ್ಥಿತ್ಯಂತರಗಳು ಅವನ ಕಾವ್ಯ ಕ್ರಿಯೆಗೆ ಪುಷ್ಟಿ ನೀಡುತ್ತವೆ. ವರ್ತಮಾನದ ಸಂಗತಿಗಳಿಗೆ ತಟ್ಟನೆ ನೀಡಿ ಬಿಡುವ ಪ್ರತಿಕ್ರಿಯೆಗಳು ಬರಿಯ ಹೇಳಿಕೆಗಳಾಗೇ ಉಳಿದುಬಿಡುತ್ತವೆ. ಹಾಗಾದಾಗ ಅಪ್ಪಟ ಕಾವ್ಯ ಹುಟ್ಟಲಾರದು. ಹೀಗೆ ಲೋಕದ ಸಂಗತಿಗಳಿಗೆ ಭಾವನಾತ್ಮಕ ಪ್ರತಿಕ್ರಿಯೆ ನೀಡುವಲ್ಲಿ ಇರುವ ಅತಿ ಸೂಕ್ಷ್ಮ ಸಂಗತಿಯೇ ಕಾವ್ಯವಾಗಿ ಅರಳುತ್ತದೆ. ಭಾಷೆಯನ್ನು ದುಡಿಸಿಕೊಳ್ಳುವ ಹಲವು ಸಾಧ್ಯತೆಗಳ ಅರಿವಿನ ಜೊತೆಗೇ ಖಾಸಗಿ ಅನುಭವವನ್ನು ಪರಂಪರೆಯ ತಟ್ಟೆಯಲ್ಲಿಟ್ಟು ತೂಗಿ ನೋಡುವ ವ್ಯವಧಾನವೂ ಕವಿಗೆ ಇರಬೇಕಾಗುತ್ತದೆ. ನಮ್ಮ ಅನೇಕ ಯುವ ಕವಿಗಳಿಗೆ ಈ ತಾಳ್ಮೆ ಮತ್ತು ಸಂಯಮಗಳು ಇಲ್ಲದಿರುವುದರಿಂದಲೇ ಅವರಿಗೆ ಆ ಕ್ಷಣದಲ್ಲಿ ಅನ್ನಿಸಿದ್ದನ್ನೂ ಓದುಗರೂ ಕಾವ್ಯವೆಂದು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಒದಗಿ ಬಿಟ್ಟಿದೆ. ಪ್ರಸ್ತುತ ಸಂಕಲನದಲ್ಲಿ ‘ನಾನು’ ಅನ್ನುವ ಆತ್ಮ ಪ್ರತ್ಯಯದಲ್ಲೇ ಬದುಕಿನ ವಿವಿಧ ಮಗ್ಗುಲಗಳನ್ನು ವಿಶಿಷ್ಟವಾಗಿ ಮತ್ತು ಪ್ರತಿರಮ್ಯತೆಯ ಸ್ಥಾಯಿಯಲ್ಲೇ ಹಿಡಿದಿರುವ ರಾಧಿಕಾ ನಡಹಳ್ಳಿಯವರ ಈ ಸಂಕಲನ ಆಧುನಿಕ ಬಿಕ್ಕಟ್ಟುಗಳಿಂದ ಪಾರಾಗಿದೆಯೆಂದು ಧೈರ್ಯವಾಗಿ ಹೇಳಬಹುದು.
ಚಳಿಗಾಲ ಕವಿತೆ
ಕೆಂಡದ ನೆನಪ ಅಗ್ಗಿಷ್ಟಿಕೆಯ ಮುಂದೆ
ಬಿಸಿ ನೆನಪ ಹೊದ್ದು ಕೈ ಉಜ್ಜುತ್ತ ಕೂತಿದೆ
ಅಗ್ಗಿಷ್ಟಿಕೆಯ ಕೆಂಡದ ಬಿಸಿಯ ತನ್ನೊಳಗೂ
ಆವಾಹಿಸಿಕೊಳ್ಳಲು ಸಜ್ಜಾಗಿದೆ (ಸಂಕೇತ)
‘ಕವಿತೆ’ ಎಂದರೆ ಯಾವುದೆನ್ನುವ ನಿತ್ಯನೂತನ ಪ್ರಶ್ನೆ ಇವರ ಈ ಸಂಕಲನ್ದುದ್ದಕ್ಕೂ ಚಾಚಿಕೊಂಡಿದೆ. ವ್ಯಾಖ್ಯಾನ ಕವಿಯ ಕೆಲಸವಲ್ಲ. ಅದು ಓದುಗನ ಹಕ್ಕು. ಬರಿಯ ಹೇಳಿಕೆಗಳಾಗದ ಇಂಥ ಸಾಲುಗಳು ಅರ್ಥದ ಸಮುದ್ರದಲ್ಲಿ ಎದ್ದೆದ್ದು ಹಾರುವ ಅಲೆಗಳಂತೆ ಮೊದಲ ಓದಿನಲ್ಲೇ ವಿಸ್ಮಯಗೊಳಿಸುತ್ತವೆ, ತನ್ಮಯಗೊಳಿಸುತ್ತವೆ.
ಮೌನದುರಿಯ ಮಾತಿನಲಾರಿಸಬಹುದೇ
ಮಾತಿನುರಿಯ ಮೌನದಲಿ ಮರೆಸಬಹುದೇ
ಮಾತ ಮರೆಸಲು ಮೌನದ ಮೊರೆಯೇ
ಮೌನ ಮುಗಿಸಲು ಮಾತಿನ ಹೊಳೆಯೇ (ವ್ಯತ್ಯಾಸ)
ಶಬ್ದ ಮತ್ತು ಅದರೊಳಗಿನ ಲಯದ ಹದವರಿತ ಮನಸ್ಸು, ಆಶಯ ಮತ್ತು ಆಕೃತಿಗಳ ಅನನ್ಯ ಸಂಯೋಜನೆಯನ್ನು ನಿರ್ಮಿಸಬಲ್ಲುದು. ಹೀಗಾದಾಗಲೇ ಲಯ ವಿನ್ಯಾಸ ತನಗೆ ತಾನೇ ಏರ್ಪಡುತ್ತದೆ. ಈ ಕಾರಣಕ್ಕೆ ಇಲ್ಲಿನ ಬಹುತೇಕ ಪದ್ಯಗಳು ನಮ್ಮೊಳಗನ್ನು ಬೆಳಗುತ್ತವೆ.
ಇರುಳು ಅರ್ಧ ಕಳೆದಿದೆ
ಕೆಲ ತಾಸಿಗೆ ಹೊಸ ಬೆಳಕಿದೆ
ಎದೆಯೊಳಗಿನ್ನೂ ಕತ್ತಲಿದೆ
ನೀ ಬಂದ ಮೇಲಷ್ಟೇ ಬೆಳಗಲಿದೆ (ಪ್ರಥಮ)
ಎನ್ನುವುದು ಮೊದಲ ಓದಿಗೆ ಬರಿಯ ಅಂತ್ಯ ಪ್ರಾಸದ ಸರ್ಕಸ್ಸಿನಂತೆ ಕಂಡರೂ ಮರು ಓದಿಗೆ ಕವಿಯು ‘ಪ್ರಥಮ’ ಅನ್ನುವುದನ್ನು ಸಂಖ್ಯಾಸೂಚಕವಾಗಿ ಬಳಸಿದ್ದಾರೋ, ಪುರುಷ ವಾಚಕವಾಗಿ ಬಳಸಿದ್ದಾರೋ, ಅಥವ ಶ್ರೇಣೀಕರಣದ ವ್ಯಂಗ್ಯವಾಗಿ ಬಳಸಿದ್ದಾರೋ ಎನ್ನುವ ಕುತೂಹಲ ಹುಟ್ಟುತ್ತದೆ. ಪ್ರಯೋಗಗಳೇ ಕಡಿಮೆಯಾಗುತ್ತಿರುವ ಕಾಲದಲ್ಲಿ ಇದೂ ಉಚಿತವೇ!
ಅವನುಸಿರು ಒಮ್ಮೆಯೂ
ಸುಳಿಯದ ಗಾಳಿಯಲ್ಲೂ
ಅದೇನೋ ಗಂಧ ತೇಲಿದಂತಾಗಿ
ಹೃದಯ ಬಡಿತ ಏರಿ
ಕೊಂಚ ಬೆವರಿದಳು (ತಿಳಿ)
ಹರೆಯದ ಪುಳಕಗಳನ್ನು ಸಮರ್ಥವಾಗಿ ತೆರೆದಿಡುವ ಈ ಸಾಲುಗಳು ಹೃದಯ ಬಡಿತ ಏರಿ/ ಕೊಂಚ ಬೆವರಿದಳು ಅನ್ನುವುದು ಆಧುನಿಕ ಮನೋಭಾವದವರಿಗೆ ವಿಶಿಷ್ಠವೆನ್ನಿಸದಿದ್ದರೂ _ ಏಕೆಂದರೆ ಆಧುನಿಕ ಬದುಕು ಬಗೆಯುತ್ತಿರುವ ಜೀವನ ಕ್ರಮದಲ್ಲಿ ಅಮೂರ್ತ ಭಾವನೆಗಳಿಗಿಂತಲೂ ಮೂರ್ತ ಅನುಭವದ್ದೇ ಮೇಲುಗೈಯ್ಯಾಗಿರುವ ಕಾರಣ- ಒಳ್ಳೆಯ ಸಾಲುಗಳಾಗಿ ಕಾಣುತ್ತವೆ. ಆದರೂ ಪದ್ಯ ಮುಂದುವರೆಸಿದ ಕವಿ
ಬಣ್ಣ ತಿಳಿಯದ ಕಣ್ಣ ಕುರಿತು
ಕನಸ ಕಟ್ಟದಿದ್ದರೂ
ಇಂದಿನ ಮನಸ ಖುಷಿಯ
ನೆನಪಿಗೊಂದು ಕಾವ್ಯ ಬರೆದಿಟ್ಟಳು (ತಿಳಿ)
ಅನ್ನುವುದು ವ್ಯರ್ಥ ಮುಂದುವರೆಸಿದ ಸಾಲುಗಳಾಗಿ ತೋರುತ್ತವೆ. ಅಮೂರ್ತವಾಗಿ ಹೊಳೆದುದನ್ನು ಮೂರ್ತವಾಗಿ ತೋರಿಸಲೇಬೇಕೆನ್ನುವ ಹಟ ಕಾವ್ಯವಾಗುವುದಿಲ್ಲ ಎನ್ನುವ ಅರಿವು ಕವಿಗೆ ಹುಟ್ಟಬೇಕು.
ಅರರೇ ಇಲ್ಲೇ ಬಾಗಿಲಲ್ಲೇ ನಿಲ್ಲಿಸಿ ಏನಿದು ಯೋಚನೆ
ಹೋಗು ಒಳಗೆ- ಇದೋ ಬಂದೆ
ಇಟ್ತ ಚುಕ್ಕೆಯ ಎಳೆ ಸೇರಿಸಿ
ಅಮ್ಮಾ ನೋಡಲ್ಲಿ ಯಾರು ಬಂದರು?! (ಎಳೆ)
ಎಲ್ಲೆಲ್ಲೋ ಬಿಡಿಸಿಟ್ಟಿರುವ ಚುಕ್ಕೆಗಳನ್ನು ಸೇರಿಸಿ ರಂಗವಲ್ಲಿ ಅರಳಿಸುವ ಹಾಗೇ ಬದುಕಿನ ಚುಕ್ಕೆಗಳಾಗಿರುವ ನಮ್ಮೊಳಗನ್ನೂ ಸಂಬಂಧದ ಎಳೆ ಸೇರಿಸಿ ಜೋಡಿಸಬೇಕಿದೆ. ಇಂಥ ಹಂಬಲ ಈ ಕವಿಗಿದೆ. ಸಂಬಂಧಗಳನ್ನೇ ನಿರಾಕರಿಸುವ ‘ಸ್ಟೇ ಟುಗೆದರ್’ ಕಾಲದಲ್ಲಿ ಇದೂ ಅಪರೂಪವೇ.
ತಲ್ಲಣಗೊಳಿಸಿದ ಅನುಭವ
ಒಳಗಿದ್ದರೆ ಕ್ಷಣ ಕ್ಷಣ
ಅಣು ಅಣು ತಲ್ಲಣ
ಹೊರಬಂದ ಕ್ಷಣ ನಿರಾಳ
ಮರುಕ್ಷಣ ಅನುಮಾನ
ಪ್ರಶ್ನೆಗಳ ಆಕ್ರಮಣ (ಬರೆ)
ಕಬ್ಬಿಣದ ಸಲಾಕೆಯನ್ನು ನಿಗಿ ನಿಗಿ ಬೆಂಕಿಯಲ್ಲಿ ಕಾಯಿಸಿ ಮೈ ಸುಡುವ ‘ಬರೆ’ಯ ಹಾಗೇ ಬರೆಯುವುದು ಕೂಡ ಮನಸ್ಸನ್ನು ಸುಟ್ಟು ಸುಟ್ಟು ಶೋಧಿಸಬೇಕಾದದ್ದು. ಬರೆ ಎನ್ನುವ ಪದವೇ ಅನುಭವದ ಅರ್ಥಕೋಶದಿಂದ ಕಾಣೆಯಾಗುತ್ತಿರುವ ದಿನಗಳಲ್ಲಿ ಆ ಶಬ್ದವನ್ನೇ ಶಬ್ದ ಗಾರುಡಿಯನ್ನಾಗಿಸಿಕೊಂಡಿರುವ ಕ್ರಮ ಅವರ ತಕ್ಕಮಟ್ಟಿನ ಸಾಧನೆಯ ಕುರುಹಾಗಿ ಕಾಣುತ್ತದೆ.
ಹಗಲೆಲ್ಲ ಕವಿತೆ ಧ್ಯಾನ
ಇರುಳು ಅದರದೇ ಸನ್ನಿಧಾನ (ಪಾಠ)
ಕವಿತೆಯನ್ನು ಮತ್ತು ಕವಿತೆ ಹುಟ್ಟುವ ರೀತಿಯನ್ನೂ ಈ ಕವಿ ತಮ್ಮ ಹಲವು ರಚನೆಗಳಲ್ಲಿ ಚಿಂತಿಸಿದ್ದಾರೆ. ಚಿಂತನೆಯ ಲವಲೇಷವೂ ಇರದ ದುರ್ಭರ ದಿನಗಳಲ್ಲಿ ಈಕೆಯ ಕಾವ್ಯ ಕನ್ನಿಕೆ ನಡೆಯುತ್ತಿರುವುದೂ ಸೋಜಿಗವೆನ್ನಿಸುತ್ತದೆ.
ನಿನ್ನ ಕೊರಳ ಮೌನದ ನಕಲಿ
ಆಭರಣ ಕಳಚಿ ನಿಲ್ಲು
ಇಲ್ಲಿ ಸಂಭ್ರಮದಿಂದ ಕಾದಿದೆ
ಅಸಲಿ ಮಾತಿನ ಮುತ್ತಿನ ಹಾರ (ಹಾರದ ನಿರೀಕ್ಷೆ)
ಅನ್ನುವಲ್ಲಿ ಕೂಡ ‘ಹಾರದ ನಿರೀಕ್ಷೆ’ ಎನ್ನುವುದು ಕೊರಳಿಗೆ ಹಾಕುವ ಹಾರವೋ ಅಥವ ಹಾಗೇ ಹಗುರಕ್ಕೆ ಹಾರದೇ ಭದ್ರವಾಗಿ ನಿಲ್ಲುವ ನಿರೀಕ್ಷೆಯೇ ಎನ್ನುವ ಪರಿ ಕೂಡ ಓದುಗನ ವಿಸ್ತರಣೆಗೆ ಬಿಟ್ಟ ವಿಚಾರ.
ಇಷ್ಟೆಲ್ಲ ಹೇಳಿದ ಮಾತ್ರಕ್ಕೆ ಈ ಸಂಕಲನದ ಉಳಿದ ಪದ್ಯಗಳಿಗೂ ಈ ಮಾತು ಅನ್ವಯಿಸುತ್ತದೆ ಎನ್ನುವಂತಿಲ್ಲ. ಏಕೆಂದರೆ ಬರಿಯ ನಿರೀಕ್ಷೆಗಳು, ಕನಸುಗಳು, ಹೇಳಿಕೆಗಳನ್ನು ಕೂಡ ಪದ್ಯವಾಗಿಸುವ ಧಾರಾಳ ವಾಚಾಳಿತನ ಉಳಿದ ಹಲವು ಪದ್ಯಗಲಲ್ಲಿ ಕಾಣುತ್ತದೆ. ಒಂದು ಸಂಕಲನವೆಂದರೆ ಗಟ್ಟಿ ಮತ್ತು ಜೊಳ್ಳು ಕಾಳುಗಳ ಮಿಶ್ರಣ. ಗಟ್ಟಿಕಾಳುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಜೊಳ್ಳು ಕಾಳುಗಳು ಕಡಿಮೆ ಇದ್ದರೆ ಓದುಗ ಬದುಕುತ್ತಾನೆ. ಇಲ್ಲಿ ಜೊಳ್ಳು ಕಾಳುಗಳು ವಿಪರೀತಾವಾಗದೇ ಇರುವುದು ಸಮಾಧಾನದ ಅಂಶ.
ಸ್ವಮಗ್ನ ಸ್ಥಿತಿಗಳಲ್ಲಿ ಅನ್ನಿಸಿದ್ದನ್ನು ಕಾವ್ಯವೆನ್ನುವ ಆಧುನಿಕ ಕಾಲದಲ್ಲಿ ಹೃದಯೊಳಕ್ಕೂ ಇಳಿಯುವ ಸಾರ್ಥಕ ಸಾಲುಗಳನ್ನು ನೀಡಿರುವ ಕವಿಗೆ ಅಭಿನಂದನೆ ಸಲ್ಲಿಸುತ್ತಲೇ ಅವರು ಕನ್ನಡ ಕಾವ್ಯ ಪರಂಪರೆಯೊಂದಿಗೆ ತಮ್ಮ ಪುಟ್ಟ ಹೆಜ್ಜೆಗಳನ್ನೂ ಸೇರಿಸಬೇಕೆನ್ನುವ ತವಕವಿರುವುದನ್ನು ಗುರುತಿಸಿದ್ದೇನೆ. ಅದಕ್ಕೆ ತಯಾರಿಯಾಗಿ ಈಗಾಗಲೇ ತನಗೆ ದಕ್ಕಿರುವ ಸಂಗತಿಗಳಾಚೆಗಿನ ದಕ್ಕದ ಸಂಗತಿಗಳಿಗೂ ಕವಿ ಕಣ್ಣು ಕೈ ಕಿವಿಗಳನ್ನು ಚಾಚಬೇಕಿದೆ. ದೀರ್ಘ ಪರಂಪರೆಯ ಸವಿಸ್ತಾರ ಆಲಾಪಗಳನ್ನು ಅಭ್ಯಸಿಸುತ್ತಲೇ ಕಾಲಕ್ಕೆ ತಕ್ಕುದಾದ ಹ್ರಸ್ವ ಸ್ವರ ಪ್ರಸ್ತಾರವನ್ನೂ ಈಕೆ ದಕ್ಕಿಸಿಕೊಳ್ಳಲಿ ಎನ್ನುವ ಆಶಯದ ಜೊತೆಗೇ ನೀವೂ ಪದ್ಯಗಳನ್ನು ನಿಮ್ಮದಾಗಿಸಿಕೊಳ್ಳಿ ಎಂದು ಬಿನ್ನವಿಸಿಕೊಳ್ಳುತ್ತಾ ಸ್ನೇಹದ ಹೆಸರಲ್ಲಿ ಇಂಥ ಅಪ್ಪಟ ಜವಾಬ್ದಾರಿ ನೀಡಿದ ಪ್ರಕಾಶಕ ಮಿತ್ರ ಶ್ರೀ ಡಿ.ವಿ.ಪ್ರಹ್ಲಾದರನ್ನೂ ನೆನೆಯುತ್ತೇನೆ. ನಮಸ್ಕಾರ.
ಭಾನುವಾರ, ಜೂನ್ 26, 2011
ಬೆಂಗಳೂರು ಪದ್ಯಗಳು
೧
ಬೆಂಗಳೂರೆಂಬ ಅಪ್ಪಟ ಸುಂದರಿಗೆ
ಅದೆಷ್ಟೆಷ್ಟೋ ಮಿಂಡರು: ಕಣ್ಣು ಹೊಡೆದು
ಬಳಿಗೆ ಕರೆಯುವವರ ಹಾಗೇ ಗೌರವವಾಗಿ
ಕಾಣುವವರೂ ಕೂಡ ಬೆಚ್ಚಿಬೀಳುತ್ತಾರೆ-
ಅವಳ ಉದ್ದೋಉದ್ದದ ಯೋನಿಗೆ
ಬೊಗಸೆ ತುಂಬಿಯೂ ಉಳಿದು ಚೆಲ್ಲುವ ಮೊಲೆಗೆ
ಯಾವತ್ತಿಗೂ ಯಾರೂ ಚಿತ್ತು ಮಾಡಲಾಗದ ಅವಳ ಧಗೆಗೆ!
೨
ಬೆಂಗಳೂರೆಂಬ ಮಾಯದೇವತೆಗೆ
ವರ ಕೊಡಲು ಅದೆಷ್ಟೆಷ್ಟೋ ಹಸ್ತಗಳು: ಸಲಹಲು
ಥೇಟು ಅಮ್ಮನದೇ ಕೈಗಳು, ಜಾಡಿಸಿ ಒದೆಯಲು
ಸಶಕ್ತ ಕಾಲುಗಳು, ಕರೆದು ಕೂರಿಸಿ ಹಸಿದ ಹೊಟ್ಟೆಗೆ
ಹಿಟ್ಟು ಹಾಕುವ ಬೀದಿ ಬದಿಯ ಅಂಗಡಿಗಳು
ಮೆಜೆಸ್ಟಿಕ್ಕಿನ ಸ್ಲಮ್ಮಿನಲ್ಲಿ ಆಡುವ ಬಡಕಲು ದೇಹಗಳು
ಮತ್ತು ಆ ದೇಹಗಳನ್ನು ಸಾಕಲು ಒದಗುವ ದೇಹ ವ್ಯಾಪಾರಗಳು!
೩
ಬೆಂಗಳೂರೆಂಬ ಮಾಯಾಮೋಹಿನಿಗೆ
ಐಟಿ ಬೀಟಿಗಳೆಂಬ ಅವಳಿ ಮಕ್ಕಳುಗಳು
ಕಷ್ಟ ಸುಖ ಅರಿಯದ ಅರಿವಳಿಕೆ ಕುಡಿದ ಜೀವ ಕುಡಿಗಳು
ವೀಕೆಂಡಿನಲ್ಲಷ್ಟೇ ಸೂರ್ಯನ ಮುಖ ನೋಡುವ ದಂದುಗಗಳು
ಪ್ಲಾಸ್ಟಿಕ್ಕ್ ಕಾರ್ಡಿಗೆ ಮನುಷ್ಯರಿಗಿಂತಲೂ ಮಿಗಿಲಾದ ಬೆಲೆಗಳು
ಗಾಡಿಗೆ, ಮನೆಗೆ, ಮಜಾ, ಮೋಜವಾನಿಗೂ ಸಿಕ್ಕುವ ಸಾಲಗಳು
ಪಡೆದು ತೀರಿಸಲಾಗದೇ ರೈಲಿನಡಿಗೆ ಬೀಳುವ ದೇಹಗಳು!
೪
ಟ್ರಾಫಿಕ್ ಜಾಮಿನಲ್ಲಿ ಪೇಪರ್ ಮಾರುವ ಮಾನವಂತರು
ಕಾರಿಗಡ್ದಡ್ಡ ನುಗ್ಗಿ ಕಾಸಿಗೆ ಕೈ ಚಾಚುವ ಖೋಜಾಗಳು
ಸುಳ್ಳು ಸುಳ್ಳೇ ಭರ್ತಿಯಾಗುವ ಸರ್ಕಾರೀ ಆಸ್ಪತ್ರೆಗಳ ಬೆಡ್ಡುಗಳು
ಪೀಕ್ ಅವರಿನಲ್ಲಿ ಸರ್ರನೆ ಸರಿದು ಹೋಗುವ ಗೂಟದ ಕಾರುಗಳು
ಈ ಮೂಲೆಯಿಂದ ಆ ಮೂಲೆಗೆ ಸಾಗುವ ಬಿಗ್ ಸರ್ಕಲ್ ಬಸ್ಸುಗಳು
ಸಾಯಿಬಾಬಾನ ದರ್ಶನಕ್ಕೆ ನಿಂತಷ್ಟೇ ನಿಷ್ಠೆಯಲ್ಲಿ ಗೋಭಿ ಮಂಚೂರಿಗೆ
ಇನಾಕ್ಸ್ ಥಿಯೇಟರಿಗೆ, ಶವದ ದರ್ಶನಕ್ಕೆ ಕಾದಿರುವ ಕಡು ಮೋಹಿಗಳು!
೫
ಬೆಂಗಳೂರೆಂಬ ನಿಜಗಳು, ನಿಜದ ತಲೆಗೆ ಮೊಟಕುವ ಸುಳ್ಳುಗಳು
ಸುಳ್ಳು ಸುಳ್ಳೇ ಬ್ರೇಕಿಂಗ್ ಸುದ್ದಿಯ ಸದ್ದು ಹೊರಡಿಸುವ ಚ್ಯಾನಲ್ಲುಗಳು
ದುಃಖ ಮಡುಗಟ್ಟಿರುವಾಗಲೂ ಸಿನಿಮಾದ ಹಾಡು ಒದರುತ್ತಲೇ ಇರುವ ಎಫೆಮ್ಮುಗಳು
ಶ್ರೀ ಸಾಮಾನ್ಯನ ಸಂಸಾರ ಸರಿಗಮದ ತರಾನಗಳು
ಇಲ್ಲಿರಲೂ ಆಗದೇ ಓಡಿ ಹೋಗಲೂ ಆಗದ ಅಸಂಖ್ಯಾತ ಕನಸುಗಳು
ರಂಗಶಂಕರ, ಕಲಾಕ್ಷೇತ್ರ, ಎಡಿಯೆಗಳಲ್ಲಷ್ಟೇ ಇಣುಕುವ ಮೌಲ್ಯಗಳು.
ಬಿಟ್ಟೆನೆಂದರೂ ಬಿಡದ ಮಾಯಿಯ ಮುಖದ ಸುಕ್ಕುಗಳು!
(ಇವತ್ತಿನ ವಿಜಯಕರ್ನಾಟಕದಲ್ಲಿ ಪ್ರಕಟಿತ)
ಬೆಂಗಳೂರೆಂಬ ಅಪ್ಪಟ ಸುಂದರಿಗೆ
ಅದೆಷ್ಟೆಷ್ಟೋ ಮಿಂಡರು: ಕಣ್ಣು ಹೊಡೆದು
ಬಳಿಗೆ ಕರೆಯುವವರ ಹಾಗೇ ಗೌರವವಾಗಿ
ಕಾಣುವವರೂ ಕೂಡ ಬೆಚ್ಚಿಬೀಳುತ್ತಾರೆ-
ಅವಳ ಉದ್ದೋಉದ್ದದ ಯೋನಿಗೆ
ಬೊಗಸೆ ತುಂಬಿಯೂ ಉಳಿದು ಚೆಲ್ಲುವ ಮೊಲೆಗೆ
ಯಾವತ್ತಿಗೂ ಯಾರೂ ಚಿತ್ತು ಮಾಡಲಾಗದ ಅವಳ ಧಗೆಗೆ!
೨
ಬೆಂಗಳೂರೆಂಬ ಮಾಯದೇವತೆಗೆ
ವರ ಕೊಡಲು ಅದೆಷ್ಟೆಷ್ಟೋ ಹಸ್ತಗಳು: ಸಲಹಲು
ಥೇಟು ಅಮ್ಮನದೇ ಕೈಗಳು, ಜಾಡಿಸಿ ಒದೆಯಲು
ಸಶಕ್ತ ಕಾಲುಗಳು, ಕರೆದು ಕೂರಿಸಿ ಹಸಿದ ಹೊಟ್ಟೆಗೆ
ಹಿಟ್ಟು ಹಾಕುವ ಬೀದಿ ಬದಿಯ ಅಂಗಡಿಗಳು
ಮೆಜೆಸ್ಟಿಕ್ಕಿನ ಸ್ಲಮ್ಮಿನಲ್ಲಿ ಆಡುವ ಬಡಕಲು ದೇಹಗಳು
ಮತ್ತು ಆ ದೇಹಗಳನ್ನು ಸಾಕಲು ಒದಗುವ ದೇಹ ವ್ಯಾಪಾರಗಳು!
೩
ಬೆಂಗಳೂರೆಂಬ ಮಾಯಾಮೋಹಿನಿಗೆ
ಐಟಿ ಬೀಟಿಗಳೆಂಬ ಅವಳಿ ಮಕ್ಕಳುಗಳು
ಕಷ್ಟ ಸುಖ ಅರಿಯದ ಅರಿವಳಿಕೆ ಕುಡಿದ ಜೀವ ಕುಡಿಗಳು
ವೀಕೆಂಡಿನಲ್ಲಷ್ಟೇ ಸೂರ್ಯನ ಮುಖ ನೋಡುವ ದಂದುಗಗಳು
ಪ್ಲಾಸ್ಟಿಕ್ಕ್ ಕಾರ್ಡಿಗೆ ಮನುಷ್ಯರಿಗಿಂತಲೂ ಮಿಗಿಲಾದ ಬೆಲೆಗಳು
ಗಾಡಿಗೆ, ಮನೆಗೆ, ಮಜಾ, ಮೋಜವಾನಿಗೂ ಸಿಕ್ಕುವ ಸಾಲಗಳು
ಪಡೆದು ತೀರಿಸಲಾಗದೇ ರೈಲಿನಡಿಗೆ ಬೀಳುವ ದೇಹಗಳು!
೪
ಟ್ರಾಫಿಕ್ ಜಾಮಿನಲ್ಲಿ ಪೇಪರ್ ಮಾರುವ ಮಾನವಂತರು
ಕಾರಿಗಡ್ದಡ್ಡ ನುಗ್ಗಿ ಕಾಸಿಗೆ ಕೈ ಚಾಚುವ ಖೋಜಾಗಳು
ಸುಳ್ಳು ಸುಳ್ಳೇ ಭರ್ತಿಯಾಗುವ ಸರ್ಕಾರೀ ಆಸ್ಪತ್ರೆಗಳ ಬೆಡ್ಡುಗಳು
ಪೀಕ್ ಅವರಿನಲ್ಲಿ ಸರ್ರನೆ ಸರಿದು ಹೋಗುವ ಗೂಟದ ಕಾರುಗಳು
ಈ ಮೂಲೆಯಿಂದ ಆ ಮೂಲೆಗೆ ಸಾಗುವ ಬಿಗ್ ಸರ್ಕಲ್ ಬಸ್ಸುಗಳು
ಸಾಯಿಬಾಬಾನ ದರ್ಶನಕ್ಕೆ ನಿಂತಷ್ಟೇ ನಿಷ್ಠೆಯಲ್ಲಿ ಗೋಭಿ ಮಂಚೂರಿಗೆ
ಇನಾಕ್ಸ್ ಥಿಯೇಟರಿಗೆ, ಶವದ ದರ್ಶನಕ್ಕೆ ಕಾದಿರುವ ಕಡು ಮೋಹಿಗಳು!
೫
ಬೆಂಗಳೂರೆಂಬ ನಿಜಗಳು, ನಿಜದ ತಲೆಗೆ ಮೊಟಕುವ ಸುಳ್ಳುಗಳು
ಸುಳ್ಳು ಸುಳ್ಳೇ ಬ್ರೇಕಿಂಗ್ ಸುದ್ದಿಯ ಸದ್ದು ಹೊರಡಿಸುವ ಚ್ಯಾನಲ್ಲುಗಳು
ದುಃಖ ಮಡುಗಟ್ಟಿರುವಾಗಲೂ ಸಿನಿಮಾದ ಹಾಡು ಒದರುತ್ತಲೇ ಇರುವ ಎಫೆಮ್ಮುಗಳು
ಶ್ರೀ ಸಾಮಾನ್ಯನ ಸಂಸಾರ ಸರಿಗಮದ ತರಾನಗಳು
ಇಲ್ಲಿರಲೂ ಆಗದೇ ಓಡಿ ಹೋಗಲೂ ಆಗದ ಅಸಂಖ್ಯಾತ ಕನಸುಗಳು
ರಂಗಶಂಕರ, ಕಲಾಕ್ಷೇತ್ರ, ಎಡಿಯೆಗಳಲ್ಲಷ್ಟೇ ಇಣುಕುವ ಮೌಲ್ಯಗಳು.
ಬಿಟ್ಟೆನೆಂದರೂ ಬಿಡದ ಮಾಯಿಯ ಮುಖದ ಸುಕ್ಕುಗಳು!
(ಇವತ್ತಿನ ವಿಜಯಕರ್ನಾಟಕದಲ್ಲಿ ಪ್ರಕಟಿತ)
ಪ್ರಾರ್ಥನೆ
ಪ್ರಾರ್ಥನೆ
ಪ್ರಭೂ,
ಸುಳ್ಳಿನ ಪುಗ್ಗೆಯನ್ನೂದಿ
ಭ್ರಮೆಯ ಮತ್ತಿನಲ್ಲಿ ಮೈ ಮರೆತಿದ್ದೇನೆ
ನಿಜದ ಸೂಜಿ ಮೊನೆ ತಾಗಿಸಬೇಡ
ವಾಸ್ತವಕ್ಕಿಲ್ಲಿ ಕಿಮ್ಮತ್ತೇ ಇಲ್ಲ.
ಪ್ರಭೂ,
ಕೃತಕ ಹೂವಿನ ಹಾರತೊಡಿಸಿ
ಸನ್ಮಾನ ಸಂಭ್ರಮದ ಮಾತೆತ್ತಿದ್ದೇನೆ
ತಾಜಾ ಕುಸುಮದ ಉಸಿರಟ್ಟಬೇಡ
ಸಹಜಕ್ಕಿಲ್ಲಿ ಅವಕಾಶವಿಲ್ಲ.
ಪ್ರಭೂ,
ನಿಸ್ತೇಜದ ಮುಖಕ್ಕಷ್ಟು ರಂಗು ಬಳಿದು
ಮುಖವಾಡದೊಳಡಗಿಸಿಟ್ಟಿದ್ದೇನೆ
ನಿಜದ ಮಾತೆತ್ತಿ ತತ್ತಿಗೆ ಕಾವಿಡಬೇಡ
ಸಂತತಿಯ ಸಲಹುವುದಕ್ಕೆ ಸಮಯವಿಲ್ಲಿಲ್ಲ.
ಪ್ರಭೂ,
ಮೇಲ್ನೋಟದ ತಿಳುವಳಿಕೆಯನ್ನೇ
ಜ್ಞಾನವೆಂದು ಬಿಂಬಿಸಿದ್ದೇನೆ
ಪರಂಪರಾಗತ ಪರಾಮರ್ಶೆಗೊಡ್ಡಬೇಡ
ಪೂರ್ಣಾವದಿಯ ಪಿಂಚಣಿಗಿನ್ನು ಕೆಲವೇ ನಿಮಿಷ!
(ಇವತ್ತಿನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿತ)
ಪ್ರಭೂ,
ಸುಳ್ಳಿನ ಪುಗ್ಗೆಯನ್ನೂದಿ
ಭ್ರಮೆಯ ಮತ್ತಿನಲ್ಲಿ ಮೈ ಮರೆತಿದ್ದೇನೆ
ನಿಜದ ಸೂಜಿ ಮೊನೆ ತಾಗಿಸಬೇಡ
ವಾಸ್ತವಕ್ಕಿಲ್ಲಿ ಕಿಮ್ಮತ್ತೇ ಇಲ್ಲ.
ಪ್ರಭೂ,
ಕೃತಕ ಹೂವಿನ ಹಾರತೊಡಿಸಿ
ಸನ್ಮಾನ ಸಂಭ್ರಮದ ಮಾತೆತ್ತಿದ್ದೇನೆ
ತಾಜಾ ಕುಸುಮದ ಉಸಿರಟ್ಟಬೇಡ
ಸಹಜಕ್ಕಿಲ್ಲಿ ಅವಕಾಶವಿಲ್ಲ.
ಪ್ರಭೂ,
ನಿಸ್ತೇಜದ ಮುಖಕ್ಕಷ್ಟು ರಂಗು ಬಳಿದು
ಮುಖವಾಡದೊಳಡಗಿಸಿಟ್ಟಿದ್ದೇನೆ
ನಿಜದ ಮಾತೆತ್ತಿ ತತ್ತಿಗೆ ಕಾವಿಡಬೇಡ
ಸಂತತಿಯ ಸಲಹುವುದಕ್ಕೆ ಸಮಯವಿಲ್ಲಿಲ್ಲ.
ಪ್ರಭೂ,
ಮೇಲ್ನೋಟದ ತಿಳುವಳಿಕೆಯನ್ನೇ
ಜ್ಞಾನವೆಂದು ಬಿಂಬಿಸಿದ್ದೇನೆ
ಪರಂಪರಾಗತ ಪರಾಮರ್ಶೆಗೊಡ್ಡಬೇಡ
ಪೂರ್ಣಾವದಿಯ ಪಿಂಚಣಿಗಿನ್ನು ಕೆಲವೇ ನಿಮಿಷ!
(ಇವತ್ತಿನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿತ)
ಶನಿವಾರ, ಜೂನ್ 18, 2011
ಕೆರೆ ಕೊಟ್ಟ ಕರೆ......
ಕೆರೆ ಕೊಟ್ಟ ಕರೆ.. ..
ನನ್ನ ಹುಟ್ಟೂರು ತರೀಕೆರೆ. ಬದುಕಿನ ಬಹುಭಾಗ ಕಳೆದದ್ದು ಅಂದರೆ ಹೆಂಡತಿ, ಮಕ್ಕಳು ಮನೆ ಕಟ್ಟಿಸಿದ್ದು ಅರಸೀಕೆರೆ. ಈಗ ಕಾರ್ಯಾರ್ಥ ಇರುವುದು ಬೆಂಗಳೂರಿನ ಕೆರೆಯೊಂದನ್ನು ಅಚ್ಚುಕಟ್ಟು ಮಾಡಿ ನಿರ್ಮಿಸಲಾದ ಬಡಾವಣೆ ಚನ್ನಮ್ಮನ ಕೆರೆ. ನಿನ್ನ ಪ್ರವರ ಯಾರು ಕೇಳಿದ್ದು ಅಂತ ಗೊಣಗಿದಿರಾ? ಸ್ವಲ್ಪ ಇರಿ. ಕೆರೆ ಅನ್ನುವ ಅಂತ್ಯಪ್ರಾಸ ಇರುವ ಊರುಗಳು ಕೆರೆಯ ಹಂಗೇ ಇಲ್ಲದೆ ಹೇಗೆ ಈಗ ಬದುಕು ಕಳೆದುಕೊಳ್ಳುತ್ತಿವೆ ಅಂತ ಕೊಂಚ ಆಲೋಚಿಸುವುದು ಈ ಬರಹದ ಉದ್ದೇಶ.
ಹಾಗೆ ನೋಡಿದರೆ ಎಲ್ಲ ಊರುಗಳಿಗೂ ಒಂದಲ್ಲ ಒಂದು ಕೆರೆಯ ಸಂಬಂಧ ಇರಲಿಕ್ಕೇ ಬೇಕು. ಕೃಷಿಗೆ, ನಿತ್ಯದ ಉಪಯೋಗಕ್ಕೆ, ಊರಿಗೊಂದು ನೀರಿನ ಮೂಲ ನೆಲೆ ಬೇಕೇ ಬೇಕು. ಬಯಲು ಸೀಮೆಯ ತರೀಕೆರೆ, ತುರುವೇಕೆರೆ, ನೊಣವಿನಕೆರೆ ಮುಂತಾದ ಸ್ಥಳ ನಾಮಗಳು ಆಯಾ ಊರುಗಳಲ್ಲಿರುವ ಕೆರೆಗಳಿಂದ ಬಂದದ್ದಾದರೆ, ತುಮಕೂರು ಪ್ರಾಂತ್ಯದ ಅಮ್ಮಸಂದ್ರ, ಬಾಣಸಂದ್ರ, ತಿಪ್ಪಸಂದ್ರ ಮುಂತಾದವು ಕೆರೆಗಿಂತಲೂ ದೊಡ್ಡದಾದ ನೀರಿನ ತಾಣ ಸಮುದ್ರ ಅನ್ನುವ ಅರ್ಥ ಸೂಸುವ ಸಂದ್ರಗಳ ಮೂಲಕ ಬಂದದ್ದು. ಎಮ್ಮೆಗಳು ಆರಾಮಾಗಿ ವಿಶ್ರಮಿಸಬಹುದಾದ ಜಾಗಕ್ಕೂ ಸಂದ್ರ ಅಂತ ಕರೆದಿರುವುದು ಆ ಜನ ಸಮುದ್ರವನ್ನು ಕಾಣದೇ ಇದ್ದುದ್ದಕ್ಕೇ ಇರಬಹುದೇನೋ? ಇನ್ನು ಹುಬ್ಬಳ್ಳಿಯ ಕಡೆ ಹೊಂಡ ಎನ್ನುವ ಅಂತ್ಯಪ್ರಾಸದ ಹಲವು ಹೆಸರುಗಳು ಸಿಕ್ಕುವಂತೆಯೇ ದಕ್ಷಿಣಕನ್ನಡದ ಬಹುತೇಕ ನೀರ ಝರಿಗಳಿಗೆ ತೀರ್ಥ ಅಂತ ಕರೆಯುವುದೂ ವಾಡಿಕೆ. ಈಗ ಹೆಸರಿಗಷ್ಟೇ ಕೆರೆ ಅಂತ ಅಂತ್ಯವಾಗುವ ಊರುಗಳಲ್ಲಿರಲಿ, ಬಹುತೇಕ ಎಲ್ಲ ಊರುಗಳಲ್ಲೂ ನಜೀರ್ ಸಾಬರ ದಯದಿಂದ ಹೆಜ್ಜೆಗೊಂದು ಕೊಳವೆ ಬಾವಿ ಬಂದ ಕಾರಣ ಆ ಊರುಗಳ ಕೆರೆಗಳೆಲ್ಲ ಸ್ಟೇಡಿಯಂಗಳಾಗಿ ಅಥವ ಹೊಸಬಡಾವಣೆಗಳಾಗಿ ಬದಲಾಗಿವೆ. ಕೆರೆ ಅನ್ನುವ ಪದಕ್ಕಿರುವ ನಿಘಂಟಿನರ್ಥಕ್ಕಿಂತಲೂ ಕೆರೆಗೆ ಹಾರವಾದ ಭಾಗೀರಥಿಯ ಕತೆಗೊತ್ತಿರುವವರಿಗೆ ಈ ಕೆರೆಗಳ ಜೊತೆಗಿರುವ ಭಾವನಾತ್ಮಕ ಸಂಬಂಧಗಳನ್ನು ಅರಿಯುವುದು ಸುಲಭ ಸಾಧ್ಯ.
ಕುಕ್ಕರಹಳ್ಳಿಯ ಕೆರೆ ಮೈಸೂರಿನವರಿಗಷ್ಟೇ ಅಲ್ಲದೇ ಕುವೆಂಪು ಮೂಲಕ ಕನ್ನಡ ಬಲ್ಲ ಎಲ್ಲರಿಗೂ ಗೊತ್ತಾದ ಹಾಗೇ, ತರೀಕೆರೆ ಏರಿ ಮೇಲೆ ಮೂರು ಕರಿಕುರಿಮರಿ ಮೇಯ್ತಿತ್ತೂ ಅನ್ನುವ ನಾಲಿಗೆ ಹೊರಳಿಸುವ ಪದಗಳ ಮೂಲಕ ಗೊತ್ತಿದ್ದ ತರೀಕೆರೆ ಈಗ ವಿಮರ್ಶಕ ರಹಮತ್ ಹೆಸರಿಗೆ ಅಂಟಿಸಿಕೊಂಡ ಕಾರಣಕ್ಕೂ ಖ್ಯಾತಿಗೆ ಬಂದಿದೆ. ಕಳ್ಳರಸೀಕೆರೆ ಅಂತಲೇ ಖ್ಯಾತವಾದ ಅರಸೀಕೆರೆಯಲ್ಲೇ ನಟ ರಾಜಕುಮಾರ್ಗೆ ನಟಸಾರ್ವಭೌಮ ಅನ್ನುವ ಬಿರುದು ಬಂದದ್ದು ಅಂತ ಎಷ್ಟೋ ಜನರಿಗೆ ಗೊತ್ತೇ ಇಲ್ಲ! ಊರಿಗೆ ಬಂದವಳು ಕೆರೆಯ ನೀರಿಗೆ ಬಾರಳೇ ಅನ್ನುವ ಹಾಗೇ ಆ ಕೆರೇಲಿ ಹುಟ್ಟಿದಾಕೇನು, ಗೇಕೇನು, ಗೆಡ್ಡೇನು, ಗೆಣಸೇನು? ಅನ್ನುವ ಎಲ್ಲರ ಮಾನವನ್ನೂ ಕಳೆದು ಬಿಸಾಕುವ ಗಾದೆ ಮಾತೂ ಅಷ್ಟೇ ಪ್ರಖ್ಯಾತವಾದದ್ದು. ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೋ ಅನ್ನುವ ದಾಸರ ಮಾತಿನ ಅಂತರಾರ್ಥ ಹಾಗೆಲ್ಲ ಲೌಕಿಕದ ಕೆಸರಲ್ಲಿ ಬಿದ್ದಿರುವ ನನ್ನಂಥ ಸಾಮಾನ್ಯರಿಗೆ ಅರ್ಥವಾಗದ್ದು.
ತಮ್ಮ ಹೆಸರಿನ ಪಕ್ಕದಲ್ಲೇ ಕೆರೆ ಅನ್ನುವ ಅಭಿದಾನವಿದ್ದೂ ಕೃಷಿಗಿರಲಿ ನಿತ್ಯೋಪಯೋಗದ ನೀರಿಗೂ ತತ್ವಾರವಿರುವ ಹಲವು ಹತ್ತು ಊರುಗಳ ಪಟ್ಟಿ ಕ್ಷಣಾರ್ಧದಲ್ಲಿ ಸಿದ್ಧಪಡಿಸಿಕೊಡಬಹುದು. ಅಂಥ ಊರಿನ ಕೆರೆಗಳ ಪಕ್ಕದ ಜಮೀನು ತೋಟಗಳವರು ತಮ್ಮ ಜಾಗವನ್ನು ಒತ್ತರಿಸಿ ಒತ್ತರಿಸಿ ಕೆರೆಯ ಮೂಲ ಆಕಾರಕ್ಕೆ ಕುಂದು ತಂದಿರುವ ಘಟನೆಗಳು ಕೆರೆಯಿರುವ ಎಲ್ಲ ಊರುಗಳ ಮಾಮೂಲಿ ಕರ್ಮಕಾಂಡ. ಮೊದಲೆಲ್ಲ ಕೆರೆ ಎಂದರೆ ಕುಡಿಯುವ ನೀರಿನ ಆಕರ. ಸಂಜೆ ಸೂರ್ಯ ಕಂತುವ ಮೊದಲು ಹಾಗೇ ಬೆಳಗು ಹರಿದು ಸೂರ್ಯ ನೆತ್ತಿ ಮೇಲೆ ಏರುವ ಮೊದಲೂ ಸೊಂಟದಲ್ಲೊಂದು ತಲೆಯ ಮೇಲೊಂದು ಬಿಂದಿಗೆಯಿಟ್ಟುಕೊಂಡ ಚೆಲುವೆಯರು ನೀರಿಗೆ ಕೆರೆಯ ದಾರಿ ಹಿಡಿದು ಬರುತ್ತಿದ್ದರೆಂದರೆ ಆ ಹೆಂಗೆಳೆಯರ ಗುಂಪು ಕಲರವ ಮಾಡುತ್ತ ಕಾಲು ಕಾಲಿಗೆ ತೊಡರುವ ತಮ್ಮ ಕಂದಮ್ಮಗಳನ್ನು ನಿವಾರಿಸಿಕೊಳ್ಳುತ್ತ ಆ ದಾರಿಯುದ್ದಕ್ಕೂ ಜಗಲಿಗಳ ಮೇಲೆ ಸೊಪ್ಪು ಶೋಧಿಸುತ್ತಲೋ, ಹೂವು ಕಟ್ಟುತ್ತಲೋ ಕುಳಿತಿರುತ್ತಿದ್ದ ಅಜ್ಜಮ್ಮಗಳನ್ನು ಮಾತನಾಡಿಸುತ್ತ ಕಷ್ಟ-ಸುಖ ಹೇಳಿಕೊಳ್ಳುತ್ತ ಹೋಗುತ್ತಿದ್ದರೆಂದರೆ ಆ ಮೋಜನ್ನು ಈಗ ವರ್ಣಿಸಲೂ ಅಸಾಧ್ಯವಾಗಿದೆ. ದನಕರುಗಳನ್ನು ಮೇಯಿಸಲು ಕೆರೆಯ ಏರಿಯ ಮೇಲೇ ಅಟ್ಟಿಕೊಂಡು ಹೋದ ದನಗಾಹಿಗಳ ಹಿಂದೆಯೇ ಕತ್ತೆಗಳ ಬೆನ್ನ ಮೇಲೆ ಬಟ್ಟೆಗಳ ಹೊರೆ ಹೊರಿಸಿಕೊಂಡು ಅಗಸರ ಕ್ಯಾರವಾನು ಬರುತ್ತಿತ್ತು. ಕೆರೆಯ ಮುಂದಣ ಪಾವಟಿಕೆಗಳ ಬಳಿ ಕುಡಿಯುವ ನೀರಿನ ಘಟ್ಟಗಳಿದ್ದರೆ ಜಾತಿಗೊಂದೊಂದರಂತೆ ಇರುತ್ತಿದ್ದ ಸ್ನಾನಘಟ್ಟಗಳಲ್ಲಿ ಆಯಾ ಕುಲಕಸುಬು ಬಿಡುವು ಕೊಟ್ಟ ವಾರದ ದಿನಗಳಲ್ಲಿ ಆಯಾ ಜಾತಿಯವರು ಮಡಿಯಾಗುತ್ತಿದ್ದರು. ಕೋಡಿ ಹತ್ತಿರವಿದ್ದ ದೋಭಿಘಾಟಿನಲ್ಲಿ ಊರವರೆಲ್ಲರ ಬಟ್ಟೆಗಳೂ ಮಡಿಯಾಗಿ ಕೋಡಿ ಕಲ್ಲುಗಳಲ್ಲಿ ಒಗೆದು ಒಣಹಾಕಿದ ಬಟ್ಟೆಗಳು ಸೂರ್ಯನ ಪ್ರಖರತೆಯನ್ನೇ ತಗ್ಗಿಸಿಬಿಡುತ್ತಿದ್ದವು. ಬಟ್ಟೆಯೊಗೆದು ಹಿಂಡಿ ಕಲ್ಲಿನ ಮೇಲೆ ಒಣಹಾಕಿ ಅವು ಗಾಳಿಗೆ ಹಾರದಂತೆ ಅವುಗಳ ಮೇಲೊಂದು ಪುಟ್ಟಕಲ್ಲಿನ ಭಾರವನ್ನು ಇರಿಸಿ ಪಾದಗಳನ್ನು ತರಚು ಕಲ್ಲುಗಳ ಮೇಲೆ ಉಜ್ಜುತ್ತಿದ್ದಾಗ ಪಾದದ ಸೀಳಿದ ಸಂದುಗಳಲ್ಲಿದ್ದ ಕೊಳೆ ತಿನ್ನಲು ಪಾದ ಚುಂಬಿಸುತ್ತಿದ್ದ ಮೀನಿನ ನೆನಪು ಬಲು ಮೋಜು. ಬಟ್ಟೆಯೊಗೆದು ಮೆತ್ತಗಾಗಿದ್ದ ಬೆಳೆದ ಉಗುರುಗಳನ್ನು ಕತ್ತರಿಸಿಹಾಕುವುದೂ ಎಷ್ಟು ಸುಲಭದ ಕೆಲಸವಾಗಿತ್ತು. ನೈಲ್ ಕಟ್ಟರಿನಲ್ಲಿ ಗಂಟೆಗಟ್ಟಲೇ ಒದ್ದಾಡಿದರೂ ಸ್ವಚ್ಛವಾಗದ ಟ್ರಿಂ ಆಗದ ಬೆರಳ ಉಗುರುಗಳು ಕ್ಷಣಾರ್ಧದಲ್ಲಿ ಸುಲಭವಾಗಿ ಸಾಪುಗೊಳ್ಳುತ್ತಿದ್ದುದ್ದರ ಮಜವೇ ಬೇರೆ.
ಊರಿನವರೆಲ್ಲರ ನೀರಿನ ಅಗತ್ಯತೆಯನ್ನೂ ಊರಿನಲ್ಲಿದ್ದ ಒಂದು ಕೆರೆಯೇ ಪೂರೈಸುತ್ತಿದ್ದದ್ದು ಈಗಲೂ ಆಶ್ಚರ್ಯದ ಮಾತೇ. ಜನ ಜಾನುವಾರುಗಳಿಗಾಗಿ ಮಿಕ್ಕುವಂತೆ ಆ ಕೆರೆಯನ್ನು ಪರಿಪೋಷಿಸುತ್ತಿದ್ದ ರೀತಿಯೂ ಸ್ತುತ್ಯಾರ್ಹವೇ. ತಳವಾರ ನೀರುಕಂಟಿ ಭದ್ರಯ್ಯ ಯಾವ ಜಲತಜ್ಞ ಇಂಜಿನಿಯರಿಗಿಂತಲೂ ಮಿಗಿಲಾಗಿ ಕೆರೆಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದನೆಂದರೆ ಸ್ವತಃ ಪಟೇಲರು, ಶ್ಯಾನುಭೋಗರು ಅಥವ ಒಮ್ಮೊಮ್ಮೆ ಅಮಲ್ದಾರರು ಉಸ್ತುವಾರಿಯ ಬಗ್ಗೆ ನಿಗಾ ವಹಿಸುವುದು ಹೆಚ್ಚುಕಡಿಮೆ ಮಾಡಿದರೂ ಅವನು ತಡೆದುಕೊಳ್ಳುತ್ತಿರಲಿಲ್ಲ. ಕೆರೆಯ ತೂಬೆತ್ತಿ ನೀರು ಬಿಡುವುದಕ್ಕೂ ಅವನ ಪಂಚಾಂಗವೇ ಬೇರೆಯದಿತ್ತು. ಯಾರ ಜಮೀನಲ್ಲಿ ಯಾವ ಯಾವ ಬೆಳೆ ಬೆಳೆದಿದ್ದಾರೆ, ಅದಕ್ಕೆ ಅಗತ್ಯವಿರುವ ನೀರೆಷ್ಟು ಎನ್ನುವುದರ ಸಂಪೂರ್ಣ ವಿವರ ಅವನಲ್ಲಿರುತ್ತಿತ್ತು. ಕೆರೆಯ ಸ್ವಚ್ಛತೆಗೆ ಕೊಂಚ ಭಂಗ ತಂದವರಿಗೂ ಅವನ ದಂಡದ ಭರಾಟೆ ಗೊತ್ತಿರುತ್ತಿತ್ತು. ಬೇಸಿಗೆಯ ಕಡೆಯಲ್ಲೊಮ್ಮೆ ಕೆರೆಯ ಹೂಳೆತ್ತಿ ಶುದ್ಧ ಮಾಡುವುದಕ್ಕೆ ಗಾಡಿಗಿಷ್ಟೆಂದು ಸುಂಕ ವಸೂಲಿಮಾಡಿ, ಆಬಾದು ಮಾಡುವವರಿಗೆ, ತೆಂಗಿನ ಸಸಿ ಹಾಕಿಸುವ ಉದ್ದೇಶವುಳ್ಳವರಿಗೆ ತಳವಾರರ ಮಾರ್ಗದರ್ಶನ ಇದ್ದೇ ಇರುತ್ತಿತ್ತು. ಜೊತೆಗೇ ಕೆರೆಗೆ ನೀರಿನ ಹರಿವು ಎಲ್ಲೆಲ್ಲಿಂದ ಬರಬೇಕೋ ಆಯಾ ಮಾರ್ಗಗಳನ್ನು ಸಾಪುಗೊಳಿಸಿ ಮಳೆಗಾಲಕ್ಕೆ ಪೂರ್ವದಲ್ಲೇ ಒಂದು ವಿಚಕ್ಷಣೆ ಕೂಡ ನಡೆದಿರುತ್ತಿತ್ತು. ಒಮ್ಮೊಮ್ಮೆ ಬಟಾಬೇಸಿಗೆಯಲ್ಲಿ ಕೆರೆಯನೀರೊಣಗಿ ಪರಿಸ್ಥಿತಿ ವಿಪರೀತಕ್ಕಿಟ್ಟುಕೊಂಡಾಗಲೂ ನೀರುಕಂಟಿಯ ಲೆಕ್ಕಾಚಾರವೇ ಬೇರೆಯಾಗಿರುತ್ತಿತ್ತು. ಪಂಚಾಯತಿನವರ ತಾಲ್ಲೂಕು ಅಮಲ್ದಾರರ ಸಹಾಯ ಪಡೆದು ಕುಡಿಯುವ ನೀರಿನ ಘಟ್ಟವಿದ್ದಲ್ಲಿ ತೋಡುಗುಂಡಿ ತೆಗೆದು ಒಸರುವ ನೀರಒರತೆಯನ್ನು ಇನಿತೂ ಹಾಳಾಗದಂತೆ ಕಾಪಾಡಿ ಜನಜಾನುವಾರುಗಳನ್ನು ಜಲಕ್ಷಾಮದಿಂದ ಪೊರೆಯುತ್ತಿದ್ದ ಆ ದಿನಗಳಲ್ಲಿನ ಸ್ವಾರ್ಥ ರಹಿತ ಜನಸೇವೆಯ ಕಿಲುಬೂ ಈ ಹೊತ್ತಿನ ನಮ್ಮ ಅಧಿಕಾರಷಾಹಿಗಳಿಗಿಲ್ಲದಿರುವುದು ನಮ್ಮ ದೌರ್ಭಾಗ್ಯ.
ಯಾವಾಗ ಕೊಳಾಯಿಗಳಲ್ಲಿ ನೀರು ಮನೆಯ ಅಂಗಳಕ್ಕೆ ಬರತೊಡಗಿತೋ ಆವತ್ತಿನ ದಿನದಿಂದಲೇ ಕೆರೆಗಳಿಗೆ ಶಾಪ ಹಿಡಿಯಿತೆನ್ನಬೇಕು. ಸ್ವಲ್ಪವೂ ಶ್ರಮ ಪಡದೇ ಕುಡಿದ ನೀರು ಅಲ್ಲಾಡದ ಹಾಗೆ ಅನುಕೂಲಗಳು ಸಿಕ್ಕುವಂತಾದರೆ ಮನುಷ್ಯ ಹೆಚ್ಚು ಹೆಚ್ಚು ಸ್ವಾರ್ಥಿಯಾಗುತ್ತಾನೆ ಅನ್ನುವುದು ಸತ್ಯ. ಯಾವಾಗ ಕೆರೆಯ ದಾರಿ ಜನ ಮರೆತರೋ ಪೋಲಿಪಟಾಲಮ್ಮುಗಳಿಗೆ, ದನಗಾಹಿಗಳಿಗೆ, ಬಹಿರ್ದೆಸೆಗೆಂದು ಕೋಡಿಯ ತುದಿಯವರೆಗೂ ಓಡಬೇಕಲ್ಲ ಎಂದು ಪರಿತಪಿಸುತ್ತಿದ್ದ ಶುದ್ಧ ಸೋಂಬೇರಿಗಳಿಗೆ ಈಗ ಸುಲಭವಾಯ್ತು. ಸುಂಕ ಕಟ್ಟದೇ ಬೇಕಾಬಿಟ್ಟಿ ಕೆರೆಯ ಮಣ್ಣನ್ನೆತ್ತಿಕೊಂಡು ಹೋಗುವವರಿಗೆ ಕಾಲ ನಡೆಸಿತು. ಕೆರೆಯ ಗೋಡು ಹೇಗೆಂದರೆ ಹಾಗೇ ತೋಡಿದ ಕಾರಣ ಸೊಳ್ಳೆಗಳಿಗೂ, ಹಂದಿಗಳಿಗೂ ಸಾಮ್ರಾಜ್ಯವನ್ನೇರ್ಪಡಿಸಿಕೊಳ್ಳಲು ತಾಂಬೂಲ ಕೊಟ್ಟಂತಾಯಿತು. ಕೆರೆಯ ಅಂಗಳದಲ್ಲಿ ಮಾತ್ರ ರಾರಾಜಿಸುತ್ತಿದ್ದ ಆಪಿನ ಜೊತೆಗೇ ಇತರ ಮುಳ್ಳುಕಂಟಿಗಳೂ, ಪೊದೆಗಳೂ ಬೆಳೆದ ಕಾರಣ ಕೆರೆಯ ಅಂಗಳವೇ ಸಾರ್ವಜನಿಕ ಶೌಚಾಲಯವಾಗಿ ಪರಿವರ್ತನೆಗೊಂಡು ಕೆರೆಯ ಏರಿಯ ಮೇಲಿನ ಸೊಗಾಸಾದ ಸಂಜೆಯ ಸುತ್ತಾಟ ಮರಣಾಂತಿಕ ಶಿಕ್ಷೆಯಾಗಿ ಬದಲಾಯಿತು, ಒತ್ತುವರಿ ಮಾಡುವವರಿಗೆ ಸಿಕ್ಕ ನಿಧಿಯೂ ಆಯಿತು. ಕಾಲ ಕಳೆದಂತೆ ನೀರಿನ ಒರತೆಗಳು ಅಕ್ಕಪಕ್ಕದ ಸ್ಥಳಗಳಲ್ಲಿ ತೋಡಿದ ಕೊಳವೆಬಾವಿಗಳಿಂದಾಗಿ ಮಾಯವಾಗಿ ಕೆರೆಯ ಅಂಗಳವೆಂಬುದು ಶೋಭೆಕಳೆದುಕೊಂಡು ಗಲೀಜಿನ ಗ್ಯಾರೇಜಾಯಿತು, ಮುನಿಸಿಪಾಲಿಟಿಯವರು ಕಸತಂದು ಹೊತ್ತು ಹಾಕುವ ತೊಟ್ಟಿಯಾಗಿಯೂ ಬದಲಾಯಿತು. ಕೋಡಿ ಹರಿಯುತ್ತಿದ್ದ ಅಕ್ಕಪಕ್ಕದ ಜಾಗ ವಸತಿಹೀನರ ಆಕ್ರಮಣಕ್ಕೆ ತುತ್ತಾಗಿ ಅಕ್ರಮ ಸಕ್ರಮದ ಅರ್ಜಿಗೆ ವಸ್ತುವಾಗಿ ಬದಲಾಯಿತು. ತಳವಾರ ತೋಟಿಗಳು ಕಾಲವಾಗಿ ಅವರ ಮಕ್ಕಳು ಅವರಿವರ ಬಾಯಿಂದ ಅವರ ಹಿರೀಕರ ಬದುಕನ್ನು ತಿಳಿಯುವ ಮಟ್ಟಿಗೆ ಕಾಲ ಓಡುತ್ತೋಡುತ್ತ ಇವತ್ತಿನ ಮಟ್ಟಿಗೆ ಬಂದು ನಿಂತಿದೆ.
ಈಗ ಯಾವುದೇ ಊರಿಗೆ ಹೋಗಿ ನೋಡಿ. ವರ್ಷದ ಒಂದಲ್ಲ ಒಂದು ಕಾಲದಲ್ಲಿ ಕುಡಿಯುವ ನೀರಿಗೆ ತತ್ವಾರವಿದ್ದೇ ಇರುತ್ತದೆ. ಮಳೆಗಾಲ ಚೆನ್ನಾಗಿ ನಡೆಸಿದರೂ ಬಿದ್ದ ನೀರು ಅಂತರ್ಜಲವಾಗಿ ಬದಲಾಗದೇ ಹರಿದು ಹೋಗಿ ಕೆರೆಕಟ್ಟೆಗಳು ಪೋಷಿಸುವವರಿಲ್ಲದೇ ಒಣಗಿಹೋಗಿ ಎಲ್ಲ ಊರುಗಳವರೂ ಭೂಮಿಯ ಆಳದಾಳದಿಂದ ನೀರನ್ನೆತ್ತುವ ಕೊಳವೆಬಾವಿಗೆ ಶರಣು ಹೋಗಿದ್ದಾರೆ. ಸಹಜವಾಗಿ ನೈಸರ್ಗಿಕವಾಗಿ ಸಿಕ್ಕ ನೀರನ್ನು ಸರಿಯಾಗಿ ಹಿಡಿದಿಟ್ಟುಕೊಳ್ಳದ ಕಾರಣ ಕೊಳವೆಬಾವಿಗಳಿಂದ ಹೊರಬರುವ ಸಲ್ಫೇಟ್ ನೀರನ್ನೋ ಅಥವ ಇತರ ವಿಷಕಾರೀ ವಸ್ತುಗಳಿಂದ ಒಡಗೂಡಿದ ನೀರನ್ನೇ ಜನ ಜಾನುವರು ಉಪಯೋಗಿಸಲೇ ಬೇಕಾದ ಅನಿವಾರ್ಯತೆಯೊದಗಿದೆ. ನಮ್ಮನ್ನು ಪೊರೆಯಬೇಕಾದ ಸರ್ಕಾರಗಳೇ ನೆಲದ ಅದಿರನ್ನು ಕದ್ದು ತೆಗೆದು ಮಾರಾಟವಾಡುವವರ ಅಡುಂಬೊಲವಾಗಿರುವಾಗ ಕೆರೆಯ ನೀರಿಗೆ ಯಾವ ದೊಣ್ಣೆನಾಯಕನ ಅಪ್ಪಣೆ ಯಾರಿಗೆ ಬೇಕಾಗಿದೆ?
ಇದೇನು ಕೆರೆಗಳ ಬಗ್ಗೆ ಹೇಳುತ್ತ ಇದ್ದವನು ಗಲೀಜು ರಾಜಕೀಯಕ್ಕೆ ವಿಷಯಾಂತರ ಮಾಡಿದೆ ಅಂತ ಗೊಣಗಿದಿರಾ? ಇವತ್ತು ರಾಜಕೀಯ ಇಲ್ಲದ ಒಂದೇ ಒಂದು ಸಣ್ಣ ಕ್ಷೇತ್ರ ತೋರಿಸಿ. ನಾವೆಲ್ಲರೂ ರಾಜಕೀಯ ಮಾಡಲೇಬೇಕು. ಅಂದರೆ ರಾಜನಿರಲಿ ಬಿಡಲಿ ನಮ್ಮ ಸವಲತ್ತುಗಳನ್ನು ಆಪೋಷನ ತೆಗೆದುಕೊಳ್ಳುವ ಯಾರದೇ ವಿರುದ್ಧವೂ ನಮ್ಮ ಬಂಡುತನ ತೋರಲೇಬೇಕು. ಯಾವ ಕೆರೆ ಅಭಿವೃದ್ಧಿಯ ಹೆಸರಲ್ಲಿ ಎಷ್ಟು ಕೋಟಿಗಳ ಸ್ವಾಹ ಆಗಿದೆ ಅಂತ ಬೇಕಾದರೆ ಆರ್.ಟಿ.ಐನಲ್ಲಿ ಅರ್ಜಿ ಸಲ್ಲಿಸಿ ಬರೇ ಹತ್ತು ರೂಪಾಯಿಯಲ್ಲಿ ಸಮಗ್ರ ವಿವರ ಪಡೀಬಹುದು. ವಿಷಯ ಯಾಕೆ ಎತ್ತಿದೆ ಅಂದರೆ ಇತ್ತೀಚೆಗೆ ಹಿಂದೆಲ್ಲ ತಳವಾರ ತೋಟಿಗಳು ಮಾಡುತ್ತ ಇದ್ದ ಕೆಲಸವನ್ನು ಅಂದರೆ ಕೆರೆ ಬಾವಿ ತೋಡುಗಳನ್ನು ನಿರ್ವಹಿಸಲು ಸರ್ಕಾರದ ಒಂದು ಇಲಾಖೆಯೇ ಇದೆಯಂತೆ. ಕೆರೆ ತೊರೆಗಳ ಹೂಳೆತ್ತಿಸಿ ಅಲ್ಲಿ ಮೀನುಗಾರಿಕೆಯನ್ನು ಅಭಿವೃದ್ಧಿಪಡಿಸಿ, ಅವರಿವರು ಒತ್ತರಿಸದಂತೆ ತಡೆಯಲು, ಶುದ್ಧ ನೀರನ್ನು ಜನ ಜಾನುವಾರಿಗೆ ನೀಡುವ ಸಲುವಾಗಿ ಆ ಇಲಾಖೆಗೆ ವರ್ಷೇ ವರ್ಷೇ ಬಜೆಟ್ಟಿನಲ್ಲಿ ಕೋಟಿಗಳ ಮೊತ್ತ ನಿಗದಿಮಾಡಲಾಗಿರುತ್ತದೆ. ಆದರೆ ಎಲ್ಲ ಊರುಗಳ ಕೆರೆಗಳ ಏರಿಯ ಕಲ್ಲುಗಳು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿವೆ, ನಗರೀಕರಣದ ಕಾರಣ ಗಮನಿಸುವವರಿಲ್ಲದೇ ಗಲೀಜು ಗುಂಡಿಗಳಾಗುತ್ತಿವೆ.
ಹೊತ್ತುಗೊತ್ತಿಲ್ಲದೇ ಬರುವ ನಲ್ಲಿ ನೀರಿಗೆ ತೆರಿಗೆ ಕಟ್ಟಿಯೂ ಶಬರಿಯೋಪಾದಿಯಲ್ಲಿ ಅದರ ಬರವಿಗೆ ಕಾಯುತ್ತಿರುವ ಜನಸಮುದಾಯದ ಸಾಮಾನ್ಯ ಸದಸ್ಯನಾದ ನನಗೂ ಈ ಸಾರಿಗೆ ಬಸ್ಸುಗಳ ಸಂಚಾರ, ನಗರ ಜೀವನದ ತಲ್ಲಣ-ತವಕಗಳು, ಏರುತ್ತಿರುವ ನಿತ್ಯಬಳಕೆಯ ವಸ್ತುಗಳ ಬೆಲೆ ಕನಿಷ್ಠ ಇಷ್ಟು ಹೊತ್ತಾದರೂ ಅವೆಲ್ಲ ತರಲೆ, ತಾಪತ್ರಯಗಳನ್ನು ಮರೆಸಿ, ಮಾಯವಾದ ಮದಗದಂಥ ಹಲವು ಕೆರೆಗಳ ಕುರಿತು ಆಲೋಚಿಸುವಂತೆ ಮಾಡಿತು. ಜಲದ ಕಣ್ಣುಗಳನ್ನು ತೆರಸುವ ಆ ಮೂಲಕ ಶುದ್ಧವಾದುದನ್ನು ಪಡೆಯುವ ಅವಕಾಶ ಆಧುನಿಕ ಮನೋಭೂಮಿಕೆಯಲ್ಲಿರುವ ನಮ್ಮಿಂದ ಸಾಧ್ಯವಿಲ್ಲದಿರುವುದೇ ಈ ಹೊತ್ತಿನ ನಮ್ಮ ಸಮಸ್ಯೆಗಳಿಗೆ ಮೂಲ. ಬಳಸುವ ನೀರಿನ ಮೂಲ ಯಾವುದು ಎಂದು ತಿಳಿಯುವ ಗೋಜಿಗೂ ಹೋಗದೇ ನಲ್ಲಿಯಲ್ಲಿ ಸುರಿಯುವ ನೀರನ್ನು ದಂಢಿಯಾಗಿ ಬಳಸುತ್ತಿರುವ ನಮ್ಮ ಕುರುಡು ಆ ನೀರು ನಿಲ್ಲುವವರೆಗೂ ಅನ್ಯರಿಗಿರಲಿ ನಮಗೇ ಗೊತ್ತಾಗುವುದಿಲ್ಲ ಅನ್ನುವುದು ಸದ್ಯದ ಸತ್ಯ. ಕೆರೆಯ ಶುದ್ಧಿಗೆ ಮೊದಲು ನಮ್ಮೊಳಗಿನ ಕರೆಗೆ ಓಗೊಡೋಣ, ನಂತರ ಕೆರೆ ಕಟ್ಟೆಗಳಿಗೆ ನೀರು ಹಾಯಿಸುವ ಮಾತನಾಡೋಣ. ಏನಂತೀರಿ?
ನನ್ನ ಹುಟ್ಟೂರು ತರೀಕೆರೆ. ಬದುಕಿನ ಬಹುಭಾಗ ಕಳೆದದ್ದು ಅಂದರೆ ಹೆಂಡತಿ, ಮಕ್ಕಳು ಮನೆ ಕಟ್ಟಿಸಿದ್ದು ಅರಸೀಕೆರೆ. ಈಗ ಕಾರ್ಯಾರ್ಥ ಇರುವುದು ಬೆಂಗಳೂರಿನ ಕೆರೆಯೊಂದನ್ನು ಅಚ್ಚುಕಟ್ಟು ಮಾಡಿ ನಿರ್ಮಿಸಲಾದ ಬಡಾವಣೆ ಚನ್ನಮ್ಮನ ಕೆರೆ. ನಿನ್ನ ಪ್ರವರ ಯಾರು ಕೇಳಿದ್ದು ಅಂತ ಗೊಣಗಿದಿರಾ? ಸ್ವಲ್ಪ ಇರಿ. ಕೆರೆ ಅನ್ನುವ ಅಂತ್ಯಪ್ರಾಸ ಇರುವ ಊರುಗಳು ಕೆರೆಯ ಹಂಗೇ ಇಲ್ಲದೆ ಹೇಗೆ ಈಗ ಬದುಕು ಕಳೆದುಕೊಳ್ಳುತ್ತಿವೆ ಅಂತ ಕೊಂಚ ಆಲೋಚಿಸುವುದು ಈ ಬರಹದ ಉದ್ದೇಶ.
ಹಾಗೆ ನೋಡಿದರೆ ಎಲ್ಲ ಊರುಗಳಿಗೂ ಒಂದಲ್ಲ ಒಂದು ಕೆರೆಯ ಸಂಬಂಧ ಇರಲಿಕ್ಕೇ ಬೇಕು. ಕೃಷಿಗೆ, ನಿತ್ಯದ ಉಪಯೋಗಕ್ಕೆ, ಊರಿಗೊಂದು ನೀರಿನ ಮೂಲ ನೆಲೆ ಬೇಕೇ ಬೇಕು. ಬಯಲು ಸೀಮೆಯ ತರೀಕೆರೆ, ತುರುವೇಕೆರೆ, ನೊಣವಿನಕೆರೆ ಮುಂತಾದ ಸ್ಥಳ ನಾಮಗಳು ಆಯಾ ಊರುಗಳಲ್ಲಿರುವ ಕೆರೆಗಳಿಂದ ಬಂದದ್ದಾದರೆ, ತುಮಕೂರು ಪ್ರಾಂತ್ಯದ ಅಮ್ಮಸಂದ್ರ, ಬಾಣಸಂದ್ರ, ತಿಪ್ಪಸಂದ್ರ ಮುಂತಾದವು ಕೆರೆಗಿಂತಲೂ ದೊಡ್ಡದಾದ ನೀರಿನ ತಾಣ ಸಮುದ್ರ ಅನ್ನುವ ಅರ್ಥ ಸೂಸುವ ಸಂದ್ರಗಳ ಮೂಲಕ ಬಂದದ್ದು. ಎಮ್ಮೆಗಳು ಆರಾಮಾಗಿ ವಿಶ್ರಮಿಸಬಹುದಾದ ಜಾಗಕ್ಕೂ ಸಂದ್ರ ಅಂತ ಕರೆದಿರುವುದು ಆ ಜನ ಸಮುದ್ರವನ್ನು ಕಾಣದೇ ಇದ್ದುದ್ದಕ್ಕೇ ಇರಬಹುದೇನೋ? ಇನ್ನು ಹುಬ್ಬಳ್ಳಿಯ ಕಡೆ ಹೊಂಡ ಎನ್ನುವ ಅಂತ್ಯಪ್ರಾಸದ ಹಲವು ಹೆಸರುಗಳು ಸಿಕ್ಕುವಂತೆಯೇ ದಕ್ಷಿಣಕನ್ನಡದ ಬಹುತೇಕ ನೀರ ಝರಿಗಳಿಗೆ ತೀರ್ಥ ಅಂತ ಕರೆಯುವುದೂ ವಾಡಿಕೆ. ಈಗ ಹೆಸರಿಗಷ್ಟೇ ಕೆರೆ ಅಂತ ಅಂತ್ಯವಾಗುವ ಊರುಗಳಲ್ಲಿರಲಿ, ಬಹುತೇಕ ಎಲ್ಲ ಊರುಗಳಲ್ಲೂ ನಜೀರ್ ಸಾಬರ ದಯದಿಂದ ಹೆಜ್ಜೆಗೊಂದು ಕೊಳವೆ ಬಾವಿ ಬಂದ ಕಾರಣ ಆ ಊರುಗಳ ಕೆರೆಗಳೆಲ್ಲ ಸ್ಟೇಡಿಯಂಗಳಾಗಿ ಅಥವ ಹೊಸಬಡಾವಣೆಗಳಾಗಿ ಬದಲಾಗಿವೆ. ಕೆರೆ ಅನ್ನುವ ಪದಕ್ಕಿರುವ ನಿಘಂಟಿನರ್ಥಕ್ಕಿಂತಲೂ ಕೆರೆಗೆ ಹಾರವಾದ ಭಾಗೀರಥಿಯ ಕತೆಗೊತ್ತಿರುವವರಿಗೆ ಈ ಕೆರೆಗಳ ಜೊತೆಗಿರುವ ಭಾವನಾತ್ಮಕ ಸಂಬಂಧಗಳನ್ನು ಅರಿಯುವುದು ಸುಲಭ ಸಾಧ್ಯ.
ಕುಕ್ಕರಹಳ್ಳಿಯ ಕೆರೆ ಮೈಸೂರಿನವರಿಗಷ್ಟೇ ಅಲ್ಲದೇ ಕುವೆಂಪು ಮೂಲಕ ಕನ್ನಡ ಬಲ್ಲ ಎಲ್ಲರಿಗೂ ಗೊತ್ತಾದ ಹಾಗೇ, ತರೀಕೆರೆ ಏರಿ ಮೇಲೆ ಮೂರು ಕರಿಕುರಿಮರಿ ಮೇಯ್ತಿತ್ತೂ ಅನ್ನುವ ನಾಲಿಗೆ ಹೊರಳಿಸುವ ಪದಗಳ ಮೂಲಕ ಗೊತ್ತಿದ್ದ ತರೀಕೆರೆ ಈಗ ವಿಮರ್ಶಕ ರಹಮತ್ ಹೆಸರಿಗೆ ಅಂಟಿಸಿಕೊಂಡ ಕಾರಣಕ್ಕೂ ಖ್ಯಾತಿಗೆ ಬಂದಿದೆ. ಕಳ್ಳರಸೀಕೆರೆ ಅಂತಲೇ ಖ್ಯಾತವಾದ ಅರಸೀಕೆರೆಯಲ್ಲೇ ನಟ ರಾಜಕುಮಾರ್ಗೆ ನಟಸಾರ್ವಭೌಮ ಅನ್ನುವ ಬಿರುದು ಬಂದದ್ದು ಅಂತ ಎಷ್ಟೋ ಜನರಿಗೆ ಗೊತ್ತೇ ಇಲ್ಲ! ಊರಿಗೆ ಬಂದವಳು ಕೆರೆಯ ನೀರಿಗೆ ಬಾರಳೇ ಅನ್ನುವ ಹಾಗೇ ಆ ಕೆರೇಲಿ ಹುಟ್ಟಿದಾಕೇನು, ಗೇಕೇನು, ಗೆಡ್ಡೇನು, ಗೆಣಸೇನು? ಅನ್ನುವ ಎಲ್ಲರ ಮಾನವನ್ನೂ ಕಳೆದು ಬಿಸಾಕುವ ಗಾದೆ ಮಾತೂ ಅಷ್ಟೇ ಪ್ರಖ್ಯಾತವಾದದ್ದು. ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೋ ಅನ್ನುವ ದಾಸರ ಮಾತಿನ ಅಂತರಾರ್ಥ ಹಾಗೆಲ್ಲ ಲೌಕಿಕದ ಕೆಸರಲ್ಲಿ ಬಿದ್ದಿರುವ ನನ್ನಂಥ ಸಾಮಾನ್ಯರಿಗೆ ಅರ್ಥವಾಗದ್ದು.
ತಮ್ಮ ಹೆಸರಿನ ಪಕ್ಕದಲ್ಲೇ ಕೆರೆ ಅನ್ನುವ ಅಭಿದಾನವಿದ್ದೂ ಕೃಷಿಗಿರಲಿ ನಿತ್ಯೋಪಯೋಗದ ನೀರಿಗೂ ತತ್ವಾರವಿರುವ ಹಲವು ಹತ್ತು ಊರುಗಳ ಪಟ್ಟಿ ಕ್ಷಣಾರ್ಧದಲ್ಲಿ ಸಿದ್ಧಪಡಿಸಿಕೊಡಬಹುದು. ಅಂಥ ಊರಿನ ಕೆರೆಗಳ ಪಕ್ಕದ ಜಮೀನು ತೋಟಗಳವರು ತಮ್ಮ ಜಾಗವನ್ನು ಒತ್ತರಿಸಿ ಒತ್ತರಿಸಿ ಕೆರೆಯ ಮೂಲ ಆಕಾರಕ್ಕೆ ಕುಂದು ತಂದಿರುವ ಘಟನೆಗಳು ಕೆರೆಯಿರುವ ಎಲ್ಲ ಊರುಗಳ ಮಾಮೂಲಿ ಕರ್ಮಕಾಂಡ. ಮೊದಲೆಲ್ಲ ಕೆರೆ ಎಂದರೆ ಕುಡಿಯುವ ನೀರಿನ ಆಕರ. ಸಂಜೆ ಸೂರ್ಯ ಕಂತುವ ಮೊದಲು ಹಾಗೇ ಬೆಳಗು ಹರಿದು ಸೂರ್ಯ ನೆತ್ತಿ ಮೇಲೆ ಏರುವ ಮೊದಲೂ ಸೊಂಟದಲ್ಲೊಂದು ತಲೆಯ ಮೇಲೊಂದು ಬಿಂದಿಗೆಯಿಟ್ಟುಕೊಂಡ ಚೆಲುವೆಯರು ನೀರಿಗೆ ಕೆರೆಯ ದಾರಿ ಹಿಡಿದು ಬರುತ್ತಿದ್ದರೆಂದರೆ ಆ ಹೆಂಗೆಳೆಯರ ಗುಂಪು ಕಲರವ ಮಾಡುತ್ತ ಕಾಲು ಕಾಲಿಗೆ ತೊಡರುವ ತಮ್ಮ ಕಂದಮ್ಮಗಳನ್ನು ನಿವಾರಿಸಿಕೊಳ್ಳುತ್ತ ಆ ದಾರಿಯುದ್ದಕ್ಕೂ ಜಗಲಿಗಳ ಮೇಲೆ ಸೊಪ್ಪು ಶೋಧಿಸುತ್ತಲೋ, ಹೂವು ಕಟ್ಟುತ್ತಲೋ ಕುಳಿತಿರುತ್ತಿದ್ದ ಅಜ್ಜಮ್ಮಗಳನ್ನು ಮಾತನಾಡಿಸುತ್ತ ಕಷ್ಟ-ಸುಖ ಹೇಳಿಕೊಳ್ಳುತ್ತ ಹೋಗುತ್ತಿದ್ದರೆಂದರೆ ಆ ಮೋಜನ್ನು ಈಗ ವರ್ಣಿಸಲೂ ಅಸಾಧ್ಯವಾಗಿದೆ. ದನಕರುಗಳನ್ನು ಮೇಯಿಸಲು ಕೆರೆಯ ಏರಿಯ ಮೇಲೇ ಅಟ್ಟಿಕೊಂಡು ಹೋದ ದನಗಾಹಿಗಳ ಹಿಂದೆಯೇ ಕತ್ತೆಗಳ ಬೆನ್ನ ಮೇಲೆ ಬಟ್ಟೆಗಳ ಹೊರೆ ಹೊರಿಸಿಕೊಂಡು ಅಗಸರ ಕ್ಯಾರವಾನು ಬರುತ್ತಿತ್ತು. ಕೆರೆಯ ಮುಂದಣ ಪಾವಟಿಕೆಗಳ ಬಳಿ ಕುಡಿಯುವ ನೀರಿನ ಘಟ್ಟಗಳಿದ್ದರೆ ಜಾತಿಗೊಂದೊಂದರಂತೆ ಇರುತ್ತಿದ್ದ ಸ್ನಾನಘಟ್ಟಗಳಲ್ಲಿ ಆಯಾ ಕುಲಕಸುಬು ಬಿಡುವು ಕೊಟ್ಟ ವಾರದ ದಿನಗಳಲ್ಲಿ ಆಯಾ ಜಾತಿಯವರು ಮಡಿಯಾಗುತ್ತಿದ್ದರು. ಕೋಡಿ ಹತ್ತಿರವಿದ್ದ ದೋಭಿಘಾಟಿನಲ್ಲಿ ಊರವರೆಲ್ಲರ ಬಟ್ಟೆಗಳೂ ಮಡಿಯಾಗಿ ಕೋಡಿ ಕಲ್ಲುಗಳಲ್ಲಿ ಒಗೆದು ಒಣಹಾಕಿದ ಬಟ್ಟೆಗಳು ಸೂರ್ಯನ ಪ್ರಖರತೆಯನ್ನೇ ತಗ್ಗಿಸಿಬಿಡುತ್ತಿದ್ದವು. ಬಟ್ಟೆಯೊಗೆದು ಹಿಂಡಿ ಕಲ್ಲಿನ ಮೇಲೆ ಒಣಹಾಕಿ ಅವು ಗಾಳಿಗೆ ಹಾರದಂತೆ ಅವುಗಳ ಮೇಲೊಂದು ಪುಟ್ಟಕಲ್ಲಿನ ಭಾರವನ್ನು ಇರಿಸಿ ಪಾದಗಳನ್ನು ತರಚು ಕಲ್ಲುಗಳ ಮೇಲೆ ಉಜ್ಜುತ್ತಿದ್ದಾಗ ಪಾದದ ಸೀಳಿದ ಸಂದುಗಳಲ್ಲಿದ್ದ ಕೊಳೆ ತಿನ್ನಲು ಪಾದ ಚುಂಬಿಸುತ್ತಿದ್ದ ಮೀನಿನ ನೆನಪು ಬಲು ಮೋಜು. ಬಟ್ಟೆಯೊಗೆದು ಮೆತ್ತಗಾಗಿದ್ದ ಬೆಳೆದ ಉಗುರುಗಳನ್ನು ಕತ್ತರಿಸಿಹಾಕುವುದೂ ಎಷ್ಟು ಸುಲಭದ ಕೆಲಸವಾಗಿತ್ತು. ನೈಲ್ ಕಟ್ಟರಿನಲ್ಲಿ ಗಂಟೆಗಟ್ಟಲೇ ಒದ್ದಾಡಿದರೂ ಸ್ವಚ್ಛವಾಗದ ಟ್ರಿಂ ಆಗದ ಬೆರಳ ಉಗುರುಗಳು ಕ್ಷಣಾರ್ಧದಲ್ಲಿ ಸುಲಭವಾಗಿ ಸಾಪುಗೊಳ್ಳುತ್ತಿದ್ದುದ್ದರ ಮಜವೇ ಬೇರೆ.
ಊರಿನವರೆಲ್ಲರ ನೀರಿನ ಅಗತ್ಯತೆಯನ್ನೂ ಊರಿನಲ್ಲಿದ್ದ ಒಂದು ಕೆರೆಯೇ ಪೂರೈಸುತ್ತಿದ್ದದ್ದು ಈಗಲೂ ಆಶ್ಚರ್ಯದ ಮಾತೇ. ಜನ ಜಾನುವಾರುಗಳಿಗಾಗಿ ಮಿಕ್ಕುವಂತೆ ಆ ಕೆರೆಯನ್ನು ಪರಿಪೋಷಿಸುತ್ತಿದ್ದ ರೀತಿಯೂ ಸ್ತುತ್ಯಾರ್ಹವೇ. ತಳವಾರ ನೀರುಕಂಟಿ ಭದ್ರಯ್ಯ ಯಾವ ಜಲತಜ್ಞ ಇಂಜಿನಿಯರಿಗಿಂತಲೂ ಮಿಗಿಲಾಗಿ ಕೆರೆಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದನೆಂದರೆ ಸ್ವತಃ ಪಟೇಲರು, ಶ್ಯಾನುಭೋಗರು ಅಥವ ಒಮ್ಮೊಮ್ಮೆ ಅಮಲ್ದಾರರು ಉಸ್ತುವಾರಿಯ ಬಗ್ಗೆ ನಿಗಾ ವಹಿಸುವುದು ಹೆಚ್ಚುಕಡಿಮೆ ಮಾಡಿದರೂ ಅವನು ತಡೆದುಕೊಳ್ಳುತ್ತಿರಲಿಲ್ಲ. ಕೆರೆಯ ತೂಬೆತ್ತಿ ನೀರು ಬಿಡುವುದಕ್ಕೂ ಅವನ ಪಂಚಾಂಗವೇ ಬೇರೆಯದಿತ್ತು. ಯಾರ ಜಮೀನಲ್ಲಿ ಯಾವ ಯಾವ ಬೆಳೆ ಬೆಳೆದಿದ್ದಾರೆ, ಅದಕ್ಕೆ ಅಗತ್ಯವಿರುವ ನೀರೆಷ್ಟು ಎನ್ನುವುದರ ಸಂಪೂರ್ಣ ವಿವರ ಅವನಲ್ಲಿರುತ್ತಿತ್ತು. ಕೆರೆಯ ಸ್ವಚ್ಛತೆಗೆ ಕೊಂಚ ಭಂಗ ತಂದವರಿಗೂ ಅವನ ದಂಡದ ಭರಾಟೆ ಗೊತ್ತಿರುತ್ತಿತ್ತು. ಬೇಸಿಗೆಯ ಕಡೆಯಲ್ಲೊಮ್ಮೆ ಕೆರೆಯ ಹೂಳೆತ್ತಿ ಶುದ್ಧ ಮಾಡುವುದಕ್ಕೆ ಗಾಡಿಗಿಷ್ಟೆಂದು ಸುಂಕ ವಸೂಲಿಮಾಡಿ, ಆಬಾದು ಮಾಡುವವರಿಗೆ, ತೆಂಗಿನ ಸಸಿ ಹಾಕಿಸುವ ಉದ್ದೇಶವುಳ್ಳವರಿಗೆ ತಳವಾರರ ಮಾರ್ಗದರ್ಶನ ಇದ್ದೇ ಇರುತ್ತಿತ್ತು. ಜೊತೆಗೇ ಕೆರೆಗೆ ನೀರಿನ ಹರಿವು ಎಲ್ಲೆಲ್ಲಿಂದ ಬರಬೇಕೋ ಆಯಾ ಮಾರ್ಗಗಳನ್ನು ಸಾಪುಗೊಳಿಸಿ ಮಳೆಗಾಲಕ್ಕೆ ಪೂರ್ವದಲ್ಲೇ ಒಂದು ವಿಚಕ್ಷಣೆ ಕೂಡ ನಡೆದಿರುತ್ತಿತ್ತು. ಒಮ್ಮೊಮ್ಮೆ ಬಟಾಬೇಸಿಗೆಯಲ್ಲಿ ಕೆರೆಯನೀರೊಣಗಿ ಪರಿಸ್ಥಿತಿ ವಿಪರೀತಕ್ಕಿಟ್ಟುಕೊಂಡಾಗಲೂ ನೀರುಕಂಟಿಯ ಲೆಕ್ಕಾಚಾರವೇ ಬೇರೆಯಾಗಿರುತ್ತಿತ್ತು. ಪಂಚಾಯತಿನವರ ತಾಲ್ಲೂಕು ಅಮಲ್ದಾರರ ಸಹಾಯ ಪಡೆದು ಕುಡಿಯುವ ನೀರಿನ ಘಟ್ಟವಿದ್ದಲ್ಲಿ ತೋಡುಗುಂಡಿ ತೆಗೆದು ಒಸರುವ ನೀರಒರತೆಯನ್ನು ಇನಿತೂ ಹಾಳಾಗದಂತೆ ಕಾಪಾಡಿ ಜನಜಾನುವಾರುಗಳನ್ನು ಜಲಕ್ಷಾಮದಿಂದ ಪೊರೆಯುತ್ತಿದ್ದ ಆ ದಿನಗಳಲ್ಲಿನ ಸ್ವಾರ್ಥ ರಹಿತ ಜನಸೇವೆಯ ಕಿಲುಬೂ ಈ ಹೊತ್ತಿನ ನಮ್ಮ ಅಧಿಕಾರಷಾಹಿಗಳಿಗಿಲ್ಲದಿರುವುದು ನಮ್ಮ ದೌರ್ಭಾಗ್ಯ.
ಯಾವಾಗ ಕೊಳಾಯಿಗಳಲ್ಲಿ ನೀರು ಮನೆಯ ಅಂಗಳಕ್ಕೆ ಬರತೊಡಗಿತೋ ಆವತ್ತಿನ ದಿನದಿಂದಲೇ ಕೆರೆಗಳಿಗೆ ಶಾಪ ಹಿಡಿಯಿತೆನ್ನಬೇಕು. ಸ್ವಲ್ಪವೂ ಶ್ರಮ ಪಡದೇ ಕುಡಿದ ನೀರು ಅಲ್ಲಾಡದ ಹಾಗೆ ಅನುಕೂಲಗಳು ಸಿಕ್ಕುವಂತಾದರೆ ಮನುಷ್ಯ ಹೆಚ್ಚು ಹೆಚ್ಚು ಸ್ವಾರ್ಥಿಯಾಗುತ್ತಾನೆ ಅನ್ನುವುದು ಸತ್ಯ. ಯಾವಾಗ ಕೆರೆಯ ದಾರಿ ಜನ ಮರೆತರೋ ಪೋಲಿಪಟಾಲಮ್ಮುಗಳಿಗೆ, ದನಗಾಹಿಗಳಿಗೆ, ಬಹಿರ್ದೆಸೆಗೆಂದು ಕೋಡಿಯ ತುದಿಯವರೆಗೂ ಓಡಬೇಕಲ್ಲ ಎಂದು ಪರಿತಪಿಸುತ್ತಿದ್ದ ಶುದ್ಧ ಸೋಂಬೇರಿಗಳಿಗೆ ಈಗ ಸುಲಭವಾಯ್ತು. ಸುಂಕ ಕಟ್ಟದೇ ಬೇಕಾಬಿಟ್ಟಿ ಕೆರೆಯ ಮಣ್ಣನ್ನೆತ್ತಿಕೊಂಡು ಹೋಗುವವರಿಗೆ ಕಾಲ ನಡೆಸಿತು. ಕೆರೆಯ ಗೋಡು ಹೇಗೆಂದರೆ ಹಾಗೇ ತೋಡಿದ ಕಾರಣ ಸೊಳ್ಳೆಗಳಿಗೂ, ಹಂದಿಗಳಿಗೂ ಸಾಮ್ರಾಜ್ಯವನ್ನೇರ್ಪಡಿಸಿಕೊಳ್ಳಲು ತಾಂಬೂಲ ಕೊಟ್ಟಂತಾಯಿತು. ಕೆರೆಯ ಅಂಗಳದಲ್ಲಿ ಮಾತ್ರ ರಾರಾಜಿಸುತ್ತಿದ್ದ ಆಪಿನ ಜೊತೆಗೇ ಇತರ ಮುಳ್ಳುಕಂಟಿಗಳೂ, ಪೊದೆಗಳೂ ಬೆಳೆದ ಕಾರಣ ಕೆರೆಯ ಅಂಗಳವೇ ಸಾರ್ವಜನಿಕ ಶೌಚಾಲಯವಾಗಿ ಪರಿವರ್ತನೆಗೊಂಡು ಕೆರೆಯ ಏರಿಯ ಮೇಲಿನ ಸೊಗಾಸಾದ ಸಂಜೆಯ ಸುತ್ತಾಟ ಮರಣಾಂತಿಕ ಶಿಕ್ಷೆಯಾಗಿ ಬದಲಾಯಿತು, ಒತ್ತುವರಿ ಮಾಡುವವರಿಗೆ ಸಿಕ್ಕ ನಿಧಿಯೂ ಆಯಿತು. ಕಾಲ ಕಳೆದಂತೆ ನೀರಿನ ಒರತೆಗಳು ಅಕ್ಕಪಕ್ಕದ ಸ್ಥಳಗಳಲ್ಲಿ ತೋಡಿದ ಕೊಳವೆಬಾವಿಗಳಿಂದಾಗಿ ಮಾಯವಾಗಿ ಕೆರೆಯ ಅಂಗಳವೆಂಬುದು ಶೋಭೆಕಳೆದುಕೊಂಡು ಗಲೀಜಿನ ಗ್ಯಾರೇಜಾಯಿತು, ಮುನಿಸಿಪಾಲಿಟಿಯವರು ಕಸತಂದು ಹೊತ್ತು ಹಾಕುವ ತೊಟ್ಟಿಯಾಗಿಯೂ ಬದಲಾಯಿತು. ಕೋಡಿ ಹರಿಯುತ್ತಿದ್ದ ಅಕ್ಕಪಕ್ಕದ ಜಾಗ ವಸತಿಹೀನರ ಆಕ್ರಮಣಕ್ಕೆ ತುತ್ತಾಗಿ ಅಕ್ರಮ ಸಕ್ರಮದ ಅರ್ಜಿಗೆ ವಸ್ತುವಾಗಿ ಬದಲಾಯಿತು. ತಳವಾರ ತೋಟಿಗಳು ಕಾಲವಾಗಿ ಅವರ ಮಕ್ಕಳು ಅವರಿವರ ಬಾಯಿಂದ ಅವರ ಹಿರೀಕರ ಬದುಕನ್ನು ತಿಳಿಯುವ ಮಟ್ಟಿಗೆ ಕಾಲ ಓಡುತ್ತೋಡುತ್ತ ಇವತ್ತಿನ ಮಟ್ಟಿಗೆ ಬಂದು ನಿಂತಿದೆ.
ಈಗ ಯಾವುದೇ ಊರಿಗೆ ಹೋಗಿ ನೋಡಿ. ವರ್ಷದ ಒಂದಲ್ಲ ಒಂದು ಕಾಲದಲ್ಲಿ ಕುಡಿಯುವ ನೀರಿಗೆ ತತ್ವಾರವಿದ್ದೇ ಇರುತ್ತದೆ. ಮಳೆಗಾಲ ಚೆನ್ನಾಗಿ ನಡೆಸಿದರೂ ಬಿದ್ದ ನೀರು ಅಂತರ್ಜಲವಾಗಿ ಬದಲಾಗದೇ ಹರಿದು ಹೋಗಿ ಕೆರೆಕಟ್ಟೆಗಳು ಪೋಷಿಸುವವರಿಲ್ಲದೇ ಒಣಗಿಹೋಗಿ ಎಲ್ಲ ಊರುಗಳವರೂ ಭೂಮಿಯ ಆಳದಾಳದಿಂದ ನೀರನ್ನೆತ್ತುವ ಕೊಳವೆಬಾವಿಗೆ ಶರಣು ಹೋಗಿದ್ದಾರೆ. ಸಹಜವಾಗಿ ನೈಸರ್ಗಿಕವಾಗಿ ಸಿಕ್ಕ ನೀರನ್ನು ಸರಿಯಾಗಿ ಹಿಡಿದಿಟ್ಟುಕೊಳ್ಳದ ಕಾರಣ ಕೊಳವೆಬಾವಿಗಳಿಂದ ಹೊರಬರುವ ಸಲ್ಫೇಟ್ ನೀರನ್ನೋ ಅಥವ ಇತರ ವಿಷಕಾರೀ ವಸ್ತುಗಳಿಂದ ಒಡಗೂಡಿದ ನೀರನ್ನೇ ಜನ ಜಾನುವರು ಉಪಯೋಗಿಸಲೇ ಬೇಕಾದ ಅನಿವಾರ್ಯತೆಯೊದಗಿದೆ. ನಮ್ಮನ್ನು ಪೊರೆಯಬೇಕಾದ ಸರ್ಕಾರಗಳೇ ನೆಲದ ಅದಿರನ್ನು ಕದ್ದು ತೆಗೆದು ಮಾರಾಟವಾಡುವವರ ಅಡುಂಬೊಲವಾಗಿರುವಾಗ ಕೆರೆಯ ನೀರಿಗೆ ಯಾವ ದೊಣ್ಣೆನಾಯಕನ ಅಪ್ಪಣೆ ಯಾರಿಗೆ ಬೇಕಾಗಿದೆ?
ಇದೇನು ಕೆರೆಗಳ ಬಗ್ಗೆ ಹೇಳುತ್ತ ಇದ್ದವನು ಗಲೀಜು ರಾಜಕೀಯಕ್ಕೆ ವಿಷಯಾಂತರ ಮಾಡಿದೆ ಅಂತ ಗೊಣಗಿದಿರಾ? ಇವತ್ತು ರಾಜಕೀಯ ಇಲ್ಲದ ಒಂದೇ ಒಂದು ಸಣ್ಣ ಕ್ಷೇತ್ರ ತೋರಿಸಿ. ನಾವೆಲ್ಲರೂ ರಾಜಕೀಯ ಮಾಡಲೇಬೇಕು. ಅಂದರೆ ರಾಜನಿರಲಿ ಬಿಡಲಿ ನಮ್ಮ ಸವಲತ್ತುಗಳನ್ನು ಆಪೋಷನ ತೆಗೆದುಕೊಳ್ಳುವ ಯಾರದೇ ವಿರುದ್ಧವೂ ನಮ್ಮ ಬಂಡುತನ ತೋರಲೇಬೇಕು. ಯಾವ ಕೆರೆ ಅಭಿವೃದ್ಧಿಯ ಹೆಸರಲ್ಲಿ ಎಷ್ಟು ಕೋಟಿಗಳ ಸ್ವಾಹ ಆಗಿದೆ ಅಂತ ಬೇಕಾದರೆ ಆರ್.ಟಿ.ಐನಲ್ಲಿ ಅರ್ಜಿ ಸಲ್ಲಿಸಿ ಬರೇ ಹತ್ತು ರೂಪಾಯಿಯಲ್ಲಿ ಸಮಗ್ರ ವಿವರ ಪಡೀಬಹುದು. ವಿಷಯ ಯಾಕೆ ಎತ್ತಿದೆ ಅಂದರೆ ಇತ್ತೀಚೆಗೆ ಹಿಂದೆಲ್ಲ ತಳವಾರ ತೋಟಿಗಳು ಮಾಡುತ್ತ ಇದ್ದ ಕೆಲಸವನ್ನು ಅಂದರೆ ಕೆರೆ ಬಾವಿ ತೋಡುಗಳನ್ನು ನಿರ್ವಹಿಸಲು ಸರ್ಕಾರದ ಒಂದು ಇಲಾಖೆಯೇ ಇದೆಯಂತೆ. ಕೆರೆ ತೊರೆಗಳ ಹೂಳೆತ್ತಿಸಿ ಅಲ್ಲಿ ಮೀನುಗಾರಿಕೆಯನ್ನು ಅಭಿವೃದ್ಧಿಪಡಿಸಿ, ಅವರಿವರು ಒತ್ತರಿಸದಂತೆ ತಡೆಯಲು, ಶುದ್ಧ ನೀರನ್ನು ಜನ ಜಾನುವಾರಿಗೆ ನೀಡುವ ಸಲುವಾಗಿ ಆ ಇಲಾಖೆಗೆ ವರ್ಷೇ ವರ್ಷೇ ಬಜೆಟ್ಟಿನಲ್ಲಿ ಕೋಟಿಗಳ ಮೊತ್ತ ನಿಗದಿಮಾಡಲಾಗಿರುತ್ತದೆ. ಆದರೆ ಎಲ್ಲ ಊರುಗಳ ಕೆರೆಗಳ ಏರಿಯ ಕಲ್ಲುಗಳು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿವೆ, ನಗರೀಕರಣದ ಕಾರಣ ಗಮನಿಸುವವರಿಲ್ಲದೇ ಗಲೀಜು ಗುಂಡಿಗಳಾಗುತ್ತಿವೆ.
ಹೊತ್ತುಗೊತ್ತಿಲ್ಲದೇ ಬರುವ ನಲ್ಲಿ ನೀರಿಗೆ ತೆರಿಗೆ ಕಟ್ಟಿಯೂ ಶಬರಿಯೋಪಾದಿಯಲ್ಲಿ ಅದರ ಬರವಿಗೆ ಕಾಯುತ್ತಿರುವ ಜನಸಮುದಾಯದ ಸಾಮಾನ್ಯ ಸದಸ್ಯನಾದ ನನಗೂ ಈ ಸಾರಿಗೆ ಬಸ್ಸುಗಳ ಸಂಚಾರ, ನಗರ ಜೀವನದ ತಲ್ಲಣ-ತವಕಗಳು, ಏರುತ್ತಿರುವ ನಿತ್ಯಬಳಕೆಯ ವಸ್ತುಗಳ ಬೆಲೆ ಕನಿಷ್ಠ ಇಷ್ಟು ಹೊತ್ತಾದರೂ ಅವೆಲ್ಲ ತರಲೆ, ತಾಪತ್ರಯಗಳನ್ನು ಮರೆಸಿ, ಮಾಯವಾದ ಮದಗದಂಥ ಹಲವು ಕೆರೆಗಳ ಕುರಿತು ಆಲೋಚಿಸುವಂತೆ ಮಾಡಿತು. ಜಲದ ಕಣ್ಣುಗಳನ್ನು ತೆರಸುವ ಆ ಮೂಲಕ ಶುದ್ಧವಾದುದನ್ನು ಪಡೆಯುವ ಅವಕಾಶ ಆಧುನಿಕ ಮನೋಭೂಮಿಕೆಯಲ್ಲಿರುವ ನಮ್ಮಿಂದ ಸಾಧ್ಯವಿಲ್ಲದಿರುವುದೇ ಈ ಹೊತ್ತಿನ ನಮ್ಮ ಸಮಸ್ಯೆಗಳಿಗೆ ಮೂಲ. ಬಳಸುವ ನೀರಿನ ಮೂಲ ಯಾವುದು ಎಂದು ತಿಳಿಯುವ ಗೋಜಿಗೂ ಹೋಗದೇ ನಲ್ಲಿಯಲ್ಲಿ ಸುರಿಯುವ ನೀರನ್ನು ದಂಢಿಯಾಗಿ ಬಳಸುತ್ತಿರುವ ನಮ್ಮ ಕುರುಡು ಆ ನೀರು ನಿಲ್ಲುವವರೆಗೂ ಅನ್ಯರಿಗಿರಲಿ ನಮಗೇ ಗೊತ್ತಾಗುವುದಿಲ್ಲ ಅನ್ನುವುದು ಸದ್ಯದ ಸತ್ಯ. ಕೆರೆಯ ಶುದ್ಧಿಗೆ ಮೊದಲು ನಮ್ಮೊಳಗಿನ ಕರೆಗೆ ಓಗೊಡೋಣ, ನಂತರ ಕೆರೆ ಕಟ್ಟೆಗಳಿಗೆ ನೀರು ಹಾಯಿಸುವ ಮಾತನಾಡೋಣ. ಏನಂತೀರಿ?
ಭಾನುವಾರ, ನವೆಂಬರ್ 14, 2010
ಮಕ್ಕಳ ದಿನಕ್ಕೆ ಹೀಗೊಂದು ಆಲೋಚನೆ.. .. .. .. ..
ಮಕ್ಕಳ ದಿನಕ್ಕೆ ಹೀಗೊಂದು ಆಲೋಚನೆ.. .. .. .. ..
ನವಂಬರ್ ೧೪ರ ಈ ದಿನ ಮಕ್ಕಳ ದಿನಾಚರಣೆ. ಮಹಿಳೆಯರಿಗೆ, ಹೆತ್ತವರಿಗೆ, ಪ್ರೀತಿಯಲ್ಲಿ ಬಿದ್ದವರಿಗೆ, ಪರಿಸರಕ್ಕೆ, ಪಾಠ ಹೇಳುವ ಮಾಸ್ತರರಿಗೆ ಹೀಗೆ ಎಲ್ಲರಿಗೂ ದಿನಾಚರಣೆಗಳನ್ನು ಆಚರಿಸುವ ನಾವು ನಿಜದ ಅರ್ಥದಲ್ಲಿ ಈ ದಿನಾಚರಣೆಗಳಿಗಿರುವ ಮಹತ್ವವನ್ನು ಮರೆತುಬಿಟ್ಟಿದ್ದೇವೆ. ಮಾಧ್ಯಮಗಳಲ್ಲಿ ಬರುವ ವರದಿಗಳು, ಸಂಘ ಸಂಸ್ಥೆಗಳು ನಡೆಸುವ ಸನ್ಮಾನ, ಗೌರವರ್ಪಣೆಗಳಲ್ಲೇ ಬಹುತೇಕ ದಿನಾಚರಣೆಗಳು ಕಳೆದುಹೋಗಿಬಿಡುತ್ತಿವೆ. ಶಾಲಾ ಕಾಲೇಜುಗಳಂತೂ ಭಾಷಣ ಸ್ಪರ್ಧೆಯನ್ನೋ, ಲೇಖನಸ್ಪರ್ಧೆಯನ್ನೋ ನಡೆಸಿ ತಮ್ಮ ಜವಾಬ್ದಾರಿಯನ್ನು ಮುಗಿಸಿಕೊಳ್ಳುತ್ತಿವೆ. ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳಂತೂ ಸಿನಿಮಾ ಹಾಡುಗಳ ಸಿಡಿಗಳಿಗೆ ಕೈಕಾಲಾಡಿಸುವ ವ್ಯರ್ಥ ಉಪಕ್ರಮಗಳಾಗೇ ನಿಲ್ಲುತ್ತಿವೆ.
ಉದಾಹರಣೆಗೆ ಮಕ್ಕಳದಿನಾಚರಣೆಯನ್ನು ನಾವು ನಡೆಸುತ್ತಿರುವ ಕ್ರಮವನ್ನೇ ನೋಡಿ. ಪಂಡಿತ ನೆಹರೂ ತಮ್ಮ ಜನ್ಮದಿನಾಚರಣೆಯನ್ನು ಮಕ್ಕಳ ದಿನವನ್ನಾಗಿ ಆಚರಿಸಲು ಹೇಳಿದ್ದನ್ನೇ ಮತ್ತೆ ಮತ್ತೆ ನೆನೆಯುತ್ತ, ಅವರು ಅಂದೆಂದೋ ಧರಿಸಿದ್ದ ದಿರಿಸನ್ನೋ, ಅವರು ಬರಹಗಾರರಾಗಿದ್ದನ್ನೋ ಅಥವಾ ಅವರು ಜಾರಿಗೆ ತಂದ ಪಂಚಶೀಲ ತತ್ವವನ್ನೋ ಪುನಃ ಪುನಃ ಹೇಳಿ ಅವರು ಕೋಟಿನ ಗುಂಡಿಗೆ ಸಿಕ್ಕಿಸಿಕೊಳ್ಳುತ್ತಿದ್ದ ಗುಲಾಬಿಯನ್ನು ನಾಚಿಸುತ್ತೇವೆ. ನೆಹರೂ ಯಾವಕಾರಣಕ್ಕೆ ಮಕ್ಕಳಿಗೆ ಇಷ್ಟು ಮಹತ್ವ ನೀಡಿದರು? ಅವರೇಕೆ ಎಲ್ಲ ಮಕ್ಕಳಿಗೂ ‘ಚಾಚಾ’ಆಗಿರಲು ಬಯಸಿದ್ದರು ಎಂದು ಬಹುತೇಕರು ಆಲೋಚಿಸುವುದೇ ಇಲ್ಲ.
‘ಪ್ರತಿಯೊಂದು ಮಗುವೂ ಮನುಷ್ಯನೊಬ್ಬನ ತಂದೆ’ ಎನ್ನುವ ಆಂಗ್ಲ ಗಾದೆಯೊಂದಿದೆ. ಬಾಲ್ಯದಲ್ಲಿ ಕಲಿತ ಬುದ್ಧಿ-ಮನಸ್ಸುಗಳೇ ಮುಂದಿನ ದಿನಮಾನಗಳನ್ನು ರೂಪಿಸುವುದರಿಂದ ಎಲ್ಲರ ಬಾಲ್ಯವೂ ಪರಿಶುದ್ಧವಾಗಿರುತ್ತದೆ ಎನ್ನುವ ಮಾತೂ ಇದೆ. ಹಸಿವು, ನೀರಡಿಕೆ, ನಿದ್ದೆಗಳು ಮಾತ್ರ ಮಕ್ಕಳು ದೊಡ್ಡವರನ್ನು ಕಾಡುವಂತೆ ಮಾಡುತ್ತವೆ. ಉಳಿದಂತೆ ಮಕ್ಕಳ ಮನಸ್ಸು ಎಷ್ಟು ನಿರ್ಮಲವಾಗಿರುತ್ತದೆ ಅಂದರೆ ಅದಕ್ಕೆಂದೇ ನಮ್ಮ ಹಿರಿಯರು ಮಕ್ಕಳನ್ನೂ ದೇವರ ಸ್ವರೂಪ ಅಂತ ಕರೆದದ್ದು. ಕೂಡು ಕುಟುಂಬ ವ್ಯವಸ್ಥೆ ಇದ್ದಷ್ಟೂ ದಿನ ಮಕ್ಕಳು ಪಂಕ್ತಿಭೇದವಿಲ್ಲದೇ, ತರತಮಗಳ ಸೋಕಿಲ್ಲದೇ ಉಂಡು ಆಡಿ ನಲಿಯುತ್ತಿದ್ದವು. ಅಜ್ಜನೋ, ಅಜ್ಜಿಯೋ. ದೊಡ್ಡಮ್ಮ, ದೊಡ್ಡಪ್ಪನೋ ನೀತಿ ಕತೆಗಳನ್ನು ಹೇಳುವ ಮೂಲಕ ಒಳಿತು ಕೆಡುಕಗಳ ವ್ಯತ್ಯಾಸವನ್ನು ಮನದಟ್ಟು ಮಾಡಿ ಮಗುವಿನ ಮನಸ್ಸಿನಲ್ಲಿ ನೈತಿಕತೆಯ ಬೀಜನೆಟ್ಟು ಬೆಳಸಿರುತ್ತಿದ್ದರು. ಅವರು ಕಲಿಸುವ ಬಾಯಿಪಾಠ, ಮಗ್ಗಿ, ಶ್ಲೋಕ, ಅಮರಗಳಿಗೆ ಕಾದು ಉಳಿದ ಮಕ್ಕಳೊಂದಿಗೆ ಬೆರೆತು ಆಡಿ ನಲಿದು ಬಾಲ್ಯವೆಂಬ ಬೆಲ್ಲದ ರುಚಿ ನಿರಂತರ ಉಳಿಯುವಂತೆ ಅದನ್ನು ಸವಿಯುತ್ತಿದ್ದವು. ನಮ್ಮ ಜನಪದರು ಸೃಷ್ಟಿಸಿರುವ ಕತೆ ಹಾಡುಗಳಲ್ಲಂತೂ ಮಕ್ಕಳಿಗೆ ಇಷ್ಟವಾಗುವ ಗಿಡ,ಮರ,ಪಶು, ಪಕ್ಷಿಗಳೂ ಮಾತನಾಡಿ ಬದುಕಿನ ಸೂಕ್ಷ್ಮಗಳನ್ನು ಮಗುವಿನ ಮನಸ್ಸಿನೊಳಗಿಳಿಸಿ ಆ ಮಗು ತನ್ನ ಭಾವೀ ಜೀವನ ರೂಪಿಸಿಕೊಳ್ಳುವ ನಿಜದ ಯತ್ನವಾಗಿ ಇರುತ್ತಿತ್ತು. ಊರೊಳಗಿನ ಉತ್ಸವ, ಜಾತ್ರೆ, ಹಬ್ಬಗಳಲ್ಲಿ ಮನೆಯವರೆಲ್ಲ ಭಾಗವಹಿಸುವ ಮೂಲಕ ಮನುಷ್ಯ ಸಂಬಂಧಗಳ ಅನಾವರಣವನ್ನು ತಮಗೆ ಗೊತ್ತಿಲ್ಲದೇ ಮಕ್ಕಳು ಅರಿಯುತ್ತಿದ್ದವು. ಶಾಲೆ ಮುಗಿದ ಮೇಲೆ ದೊಡ್ಡಬಯಲಲ್ಲಿ ಚಿನ್ನಿದಾಂಡು, ಕಬಡ್ಡಿಗಳನ್ನಾಡಿ ಊರ ಹೊರಗಿನ ತೋಪಿನಲ್ಲಿ ಮರಕೋತಿ ಆಟವಾಡಿ, ರಜಾ ದಿನಗಳಲ್ಲಿ ಹಳ್ಳದಲ್ಲಿ ಈಜಿ ದೈಹಿಕ ಸಾಮರ್ಥ್ಯದ ಜೊತೆಜೊತೆಗೇ ತಾರ್ಕಿಕ ಪ್ರಜ್ಞೆಯನ್ನೂ ಹಿಂದಿನ ಕಾಲದ ಮಕ್ಕಳು ಪಡೆಯುತ್ತಿದ್ದರು.
ಮನೆತುಂಬ ಮಕ್ಕಳಿರುವ ಕಾಲ ಈಗ ಬದಲಾಗಿದೆ. ವಿಘಟಿತ ಕುಟುಂಬ ವ್ಯವಸ್ಥೆ ಎಲ್ಲ ಮನೆ ಊರುಗಳಲ್ಲೂ ವಿಸ್ತರಿಸಿ ನಗರೀಕರಣದ ನೆರಳು ಮನೆಗೊಂದೇ ಮಗುವೆಂಬ ಸೂತ್ರವನ್ನು ಪಠಿಸಿ,ಹೆತ್ತವರ ಹಣೆಯಲ್ಲಿ ಮಗುವಿನ ಭವಿಷ್ಯದ ಚಿಂತೆಯ ಗೆರೆಯನ್ನು ಢಾಳಾಗಿಸಿದೆ. ಬಾಲ್ಯದ ಆಟೋಟಗಳಿಗಿಂತಲೂ ಅರಿವಿರದ ಭಾಷೆಯ ರೈಮುಗಳನ್ನು ಮನಸ್ಸಿಗೊಗ್ಗದ ಶೈಲಿಯಲ್ಲಿ ಹಾಡಿಸುತ್ತ, ಕೃತಕತೆಯನ್ನೆ ಸಹಜವೆಂದುಕೊಳ್ಳುವ ಹಾಗೆ ಬೆಳಸುತ್ತ ನೈಸರ್ಗಿಕವಾಗಿ ಬಿಡುಗಡೆಯಾಗಬೇಕಿರುವ ಮುಗ್ಧತೆಯ ಆವರಣಕ್ಕೆ ಕೌಶಲ್ಯದ ಹೆಸರಿನ ಮೇಲಾಟಗಳು ದಾಳಿ ಇಟ್ಟಿವೆ. ಸಹಜವಾದ ಬೇಕು ಬೇಡಗಳಿಗಿಂತಲೂ ಒತ್ತಾಯದ ಹೇರಿಕೆಗಳು ಮಕ್ಕಳ ಮುಗ್ಧತೆಯನ್ನೇ ಆಪೋಷನ ತೆಗೆದುಕೊಂಡಿವೆ. ‘ಇಂದಿನ ಮಕ್ಕಳೇ ನಾಳಿನ ಪ್ರಜೆಗಳು’ ಎಂದು ಹೇಳುತ್ತಲೇ ಆ ಮಕ್ಕಳನ್ನು ಇರುಳು ಕಂಡ ಬಾವಿಗೆ ಹಗಲಲ್ಲಿ ನೂಕುವ ಕಾಯಕ ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ವ್ಯವಸ್ಥಿತವಾಗಿ ನಡೆಯುತ್ತಿದೆ, ಅಷ್ಟೆ.
ಮಕ್ಕಳ ಶಿಕ್ಷಣ, ಅವರ ಹಕ್ಕುಗಳ ಕುರಿತಂತೆ ಇರುವ ನಮ್ಮ ಕಾನೂನುಗಳು, ಕಡ್ಡಾಯ ಶಿಕ್ಷಣದ ಮಹತ್ವ ಇತ್ಯಾದಿ ಬಹುಚರ್ಚಿತ ವಿಷಯಗಳನ್ನು ಬಿಟ್ಟು ಮೇಲ್ನೋಟಕ್ಕೆ ಸಿಗಬಹುದಾದ ಮಕ್ಕಳ ಸಾಹಿತ್ಯ ಮತ್ತು ಮಕ್ಕಳ ಸಿನಿಮಾಗಳನ್ನು ಕುರಿತು ಯೋಚಿಸಹೋದರೆ ಅಲ್ಲೂ ಇದೇ ಕತೆಯೇ! ಕನ್ನಡದಲ್ಲಿ ಮಕ್ಕಳ ಸಾಹಿತ್ಯ ಸಾಕಷ್ಟು ವಿಪುಲವಾಗಿಯೇ ಇದೆ. ಅನ್ಯದೇಶಗಳಿಂದ ಬಂದು ನಮ್ಮ ಮಕ್ಕಳ ಮನಸ್ಸಲ್ಲಿ ಕೂತುಬಿಟ್ಟಿರುವ ಡಾನ್ ಕ್ವಿಕ್ಸೋಟ, ಅಲೀಸ್ ಇನ್ ವಂಡರ್ ಲ್ಯಾಂಡ್, ಸಿಂಡ್ರೆಲ, ಡಿಸ್ನಿ ವರ್ಲ್ಡ್ನ ಟಾಮ್ ಅಂಡ್ ಜೆರ್ರಿ ಮತ್ತಿತರ ಕತೆಗಳು, ಕಾರ್ಟೂನ್ ನೆಟ್ವರ್ಕಿನ ಬಹುತೇಕ ತರ್ಕಾತೀತ ಸಶೇಷ ಧಾರಾವಾಹಿಗಳಿಗಿಂತಲೂ ಸಶಕ್ತವಾದ ಅವಕ್ಕಿಂತಲೂ ಕುತೂಹಲ ಮತ್ತು ನೈತಿಕತೆಯನ್ನು ಇನ್ನಷ್ಟು ವಿವರವಾಗಿ ಬಗೆಯಬಲ್ಲ ಸಾಹಿತ್ಯ ಕೃತಿಗಳು ನಮ್ಮಲ್ಲೇ ಇವೆ. ಆದರೆ ಅವನ್ನು ನಮ್ಮ ಭಾಷೆಗಿರುವ ಮಾರುಕಟ್ಟೆಯ ಮಿತಿಯಲ್ಲಿ ಪುನರ್ ನಿರ್ಮಿಸುವುದು ಸಾಧ್ಯವಿಲ್ಲವಾಗಿದೆ. ಪಂಚತಂತ್ರದ ಕತೆಗಳು, ರಾಮಾಯಣ ಮಹಾಭಾರತದ ಕತೆಗಳನ್ನು ಈಗಾಗಲೇ ವಿದೇಶೀ ಸಂಸ್ಥೆಗಳು ಪುನಃ ರೂಪಿಸುತ್ತಿರುವುದನ್ನೂ ಮರೆಯಬಾರದು. ಆದರೆ ಇದು ಹೇಳುವಷ್ಟು ಅಥವ ಬರೆಯುವಷ್ಟು ಸುಲಭದ್ದಲ್ಲ. ಏಕೆಂದರೆ ಮಕ್ಕಳ ಬಹುಮುಖ ಬೆಳವಣಿಗೆಗೆ ಅಂದರೆ ಅವರ ಮಾನಸಿಕ, ಬೌದ್ಧಿಕ, ಸಾಮಾಜಿಕ ಹಾಗೂ ಭಾಷಾ ಬೆಳವಣಿಗೆಯ ಸಹಕಾರಿಯಾಗಿಯೂ ಇವನ್ನೆಲ್ಲ ನಾವು ಉಪಯೋಗಿಸಿಕೊಳ್ಳಬೇಕು ಎಂಬ ವಾದ ಈ ಹಂತದಲ್ಲೇ ಹುಟ್ಟುತ್ತದೆ. ಮಕ್ಕಳ ಸಹಜ ಕುತೂಹಲವನ್ನು ತಣಿಸುವವೆನ್ನುವ ಏಕೈಕ ಕಾರಣ ಇಲ್ಲಿ ಸಾಕಾಗುವುದಿಲ್ಲ. ಇಂಥ ವಿಷಯಗಳಲ್ಲಿ ಸಂಶೋಧನೆ ಮತ್ತು ಪ್ರಯೋಗಗಳನ್ನು ನಡೆಸದ ಹೊರತೂ ಇವನ್ನೆಲ್ಲ ಬರಿಯ ಚರ್ಚೆಯ ವಸ್ತುವನ್ನಾಗಿಯಷ್ಟೇ ನಾವು ಪರಿಗಣಿಸಬೇಕು.
ಮಕ್ಕಳ ಮನಸ್ಸಿಗೆ ಮುದ ನೀಡುವ ಸಾಹಿತ್ಯ ಹೇಗಿರಬೇಕು? ಅವರು ಯಾವ ರೀತಿಯ ಸಾಹಿತ್ಯ ಇಷ್ಟಪಡುತ್ತಾರೆ? ಅವರ ಬುದ್ಧಿ ಭಾವನೆಗಳ ಬೆಳವಣಿಗೆಗೆ ಇಂಬು ನೀಡಬಲ್ಲ ವಿಷಯ ವಿವೇಚನೆ ನಮ್ಮ ಸಾಹಿತಿಗಳಿಗಿದೆಯೇ? ಸಾಹಿತ್ಯದ ಯಾವ ಪ್ರಕಾರ ಮಕ್ಕಳಿಗೆ ಖುಷಿ ಕೊಡುತ್ತದೆ? ಇತ್ಯಾದಿ ಪ್ರಶ್ನೆಗಳಿಗೆ ಸಮಂಜಸ ಉತ್ತರಗಳು ನಮಗಿನ್ನೂ ದೊರೆತಿಲ್ಲ. ಈ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನವನ್ನೂ ನಾವು ಮಾಡಿಲ್ಲ. ಮುಂದುವರೆದ ದೇಶಗಳಲ್ಲಿ ಜಾರಿಯಲ್ಲಿರುವ ಮಕ್ಕಳ ಕಾನೂನುಗಳನ್ನು, ಅವರ ಹಕ್ಕುಗಳನ್ನೂ ಕೇಳಿ ತಿಳಿದು ಭಯಗೊಂಡಿರುವ ನಾವು ಈ ದೇಶದಲ್ಲಿ ಅಂಥದೊಂದು ಪ್ರಯತ್ನಕ್ಕೆ ಕೈಹಾಕುವ ಎದೆಗಾರಿಕೆ ಇಟ್ಟುಕೊಂಡಿದ್ದೇವೆಯೇ ಎನ್ನುವುದೂ ಇಲ್ಲಿ ಮುಖ್ಯ. ನಮ್ಮಲ್ಲಿ ವಿಪುಲವಾಗಿ ಲಭ್ಯವಿರುವ ನೀತಿ ಬೋಧಕ ಕೃತಿಗಳು ಇಂದಿನ ಮಕ್ಕಳಲ್ಲಿ ನೈತಿಕತೆಯನ್ನು ಉಳಿಸಿ ಬೆಳಸಬಲ್ಲವೇ ಎನ್ನುವುದೂ ಮುಖ್ಯಪ್ರಶ್ನೆ. ವೈಜ್ಞಾನಿಕವಾಗಿ ತುಂಬ ಮುಂದುವರೆದ ಕಾಲದಲ್ಲಿ ಪಾರ್ವತಿಯ ಮೈಯ ಬೆವರಿನಿಂದ ಗಣೇಶ ಹುಟ್ಟಿದ ಅಂತ ಹೇಳಹೋದರೆ ಅವಳೇನು ನಿತ್ಯವೂ ಸ್ನಾನ ಮಾಡುತ್ತಿರಲಿಲ್ಲವಾ ಅನ್ನುವ ಪ್ರಶ್ನೆ ಚಿಣ್ಣರಿಂದ ಹುಟ್ಟುತ್ತದೆ. ರಾಮ ಸೀತೆಯರು ಕಾಡಿಗೆ ಹೋದರು ಅಂದರೆ ಪಿಕ್ನಿಕ್ಗೆ ಹೋದರಾ ಅಂತ ಕೇಳುವ ಮಕ್ಕಳೂ ಇದ್ದಾರೆ. ಬಾಣ ಬಿರುಸುಗಳು, ಗದೆ, ತೋಮರಗಳು, ಗಜಾಶ್ವಗಳು ಅಣುಬಾಂಬಿನ ಕಾಲದಲ್ಲಿ ಓಬಿರಾಯನ ಕಾಲದ ವ್ಯರ್ಥ ಪರಿಕರಗಳಾಗಿ ಕಾಣುತ್ತವೆ. ಇದರ ಜೊತೆಜೊತೆಗೇ ಮಕ್ಕಳ ಸಾಹಸದ ಧಾರಾವಾಹಿಗಳನ್ನು ನೋಡಿ ಅದನ್ನು ಅನುಸರಿಸಲು ಹೋಗಿ ಅಪಾಯ ಎದುರಿಸಿದ ಮಕ್ಕಳೂ ಕಡಿಮೆ ಏನಿಲ್ಲ. ಅಲ್ಲದೇ ಈ ಕಾಲದ ಮಕ್ಕಳು ಓದುವುದಕ್ಕಿಂತಲೂ ನೋಡುವುದನ್ನೇ, ಅನುಸರಿಸುವುದನ್ನೇ ಹೆಚ್ಚು ಇಷ್ಟಪಡುವವರು. ಏಕೆಂದರೆ ಇಂದಿನ ಬಹುತೇಕ ಮಕ್ಕಳು ಕಲಿಯುತ್ತಿರುವುದು ಇಂಗ್ಲಿಷಿನಲ್ಲಿ. ಅವರ ಓದುವ ಸಾಮರ್ಥ್ಯವೇನಾದರೂ ಇದ್ದರೆ ಅದು ಅವರು ಕಲಿಯುತ್ತಿರುವ ಇಂಗ್ಲಿಷಿನಲ್ಲಿ ಮಾತ್ರ. ಮೂರನೆಯ ಭಾಷೆಯನ್ನಾಗಿ ಅವರು ಮಾತೃ ಭಾಷೆ ಕಲಿಯುವುದರಿಂದ ಜೊತೆಗೆ ಇಂಗ್ಲಿಷಿನಲ್ಲಿ ಮಾತನಾಡುವುದು ಬಹುತೇಕ ಶಾಲೆಗಳಲ್ಲಿ ಕಡ್ಡಾಯವೂ ಆಗಿರುವುದರಿಂದ ಈ ಮಕ್ಕಳು ಕನ್ನಡದ ಪತ್ರಿಕೆಗಳಲ್ಲಿ ಪ್ರಕಟವಾಗುವ ಸಾಹಿತ್ಯವನ್ನು ಓದುತ್ತಾರೆನ್ನುವುದು ಬರಿಯ ಊಹೆಯ ಮಾತು.
ಸಂಶೋಧನಾ ಮಾಹಿತಿಯಿಲ್ಲದೇ ಮಕ್ಕಳ ಮನಸ್ಸನ್ನು ಉದ್ದೀಪಿಸಿ ಅವರಿಗೆ ಅಗತ್ಯವಿರುವ ಕಸುವನ್ನು ಕೊಡುತ್ತೇವೆನ್ನುವುದು ಉಢಾಫೆಯೇ ಆಗುತ್ತದೆ. ವಿವಿಧ ಪೇಯಗಳ ಜಾಹೀರಾತುಗಳಲ್ಲಿ ನಟಿಸುವ ಅಮ್ಮಂದಿರಿಗೆ ಮಾತ್ರ ಮಕ್ಕಳ ಅಗತ್ಯ ಗೊತ್ತಿರುವುದು ಈ ಕಾರಣಕ್ಕೇ! ಸೈದ್ಧಾಂತಿಕ ಅಡಿಪಾಯಗಳ ಮನಶಾಸ್ತ್ರೀಯ ಅಧ್ಯಯನ ಮಾತ್ರ ಇಂಥ ಸಮಸ್ಯೆಗಳನ್ನು ನೀಗಬಲ್ಲುದು. ನಾವೀಗ ಬದುಕುತ್ತಿರುವ ಸಮಾಜ, ಸನ್ನಿವೇಶ, ಆರ್ಥಿಕ ಸವಲತ್ತು, ವಿದ್ಯಾಭ್ಯಾಸದ ಮಟ್ಟ, ಅಂಧಶ್ರದ್ಧೆಗಳು, ಜಾತಿಯ ವಿಷಬೀಜಗಳು, ಲಿಂಗ ಭೇದಗಳು, ಮಕ್ಕಳ ಮನಸ್ಸಿಗೆ ನಿಲುಕದ ಹಾಗೆ ಬೆಳಸುತ್ತೇವೆನ್ನುವುದು ಮತ್ತೆ ಉಢಾಫೆಯೇ. ಇನ್ನು ಮಕ್ಕಳ ಆರೋಗ್ಯ ಮತ್ತು ದೈಹಿಕ ಬೆಳವಣಿಗೆಗಳ ಬಗ್ಗೆ ಸಾಕಷ್ಟು ಮಾಹಿತಿ ನಮಗಿದೆ ಎನ್ನುವುದು ಸಮಾಧಾನದ ವಿಚಾರ. ಪೋಲಿಯೋದಂಥ ಪಿಡುಗು, ಸಿಡುಬಿನಂಥ ಮಹಾಮಾರಿಗಳನ್ನು ನಾವು ಎದುರಿಸಿ ಗೆದ್ದಿದ್ದೇವೆ.
ಆದರೆ ಮಕ್ಕಳ ಸಾಹಿತ್ಯವೆನ್ನುವುದು ದೊಡ್ದವರು ಮಕ್ಕಳಿಗೆಂದು ಬರೆದ ಸರಕಾಗೇ ಉಳಿಯುತ್ತಿದೆ. ಮಕ್ಕಳ ಮನಸ್ಸಿಗೆ ಇದು ಖುಷಿಕೊಡುತ್ತದೆ ಎನ್ನುವ ಊಹಾಪೋಹಗಳಲ್ಲೇ ದೊಡ್ಡವರು ಬರೆದೂ ಬರೆದೂ ಪ್ರಕಟಿಸುತ್ತಿದ್ದೇವೆ. ಪ್ರಾಥಮಿಕ ಶಾಲೆಯ ಪಾಠವೊಂದರಲ್ಲಿ ‘ಅವಳು ಕಮಲ ಇವನು ಬಸವ’ ಎಂದು ಲಿಂಗ ತಾರತಮ್ಯವನ್ನು ಮೆರೆಸುವ ನಾವು ‘ಕಮಲಳ ಲಂಗ ಝಳ ಝಳ’ ಎಂದು ಹೇಳಿ ಅವಳನ್ನು ಲಂಗಕ್ಕೇ ಮಿತಿಗೊಳಿಸುತ್ತೇವೆ. ಇನ್ನು ಮಕ್ಕಳಿಗೆಂದೇ ತಯಾರಾಗುವ ಚಲನಚಿತ್ರಗಳು ಮಕ್ಕಳಿಗೇನು ಬೇಕೋ ಅದನ್ನು ಬಿಟ್ಟು ಉಳಿದೆಲ್ಲ ಮಾರುಕಟ್ಟೆಯ ಮಸಾಲೆಗಳನ್ನು ಇಟ್ಟುಕೊಂಡಿರುತ್ತದೆ. ಕೋತಿ, ಹಾವು, ದೈವ ಮಹಿಮೆ ಇಲ್ಲದೇ ನಮ್ಮ ಮಕ್ಕಳ ಚಿತ್ರಗಳು ನಿರ್ಮಾಣವಾಗುವುದಿಲ್ಲ.ಮಕ್ಕಳ ಅಲೋಚನೆಗಳಿಗೆ ಗಗನದಗಲದ ವಿಶ್ವಾಸವನ್ನು ತುಂಬಿ ಅವರ ಮಾನಸಿಕ, ಬೌದ್ಧಿಕ ವಿಸ್ತರಣಕ್ಕೆ ಸಹಕರಿಸಿದ ಚಿತ್ರಗಳು ಬಂದಿರುವುದು ತೀರ ಅಪರೂಪಕ್ಕೆ. ವೈಜ್ಞಾನಿಕವಾಗಿ ತುಂಬ ಮುಂದುವರೆದಿರುವ ಈ ಕಾಲದಲ್ಲಿ ಮೌಢ್ಯ ಮತ್ತು ಅತಿಮಾನುಷ ಶಕ್ತಿಗಳನ್ನು ಕೊಂಡಾಡುವ ಮಕ್ಕಳ ಚಿತ್ರಗಳನ್ನು ಮೊದಲು ನಿಷೇದಿಸಬೇಕಿದೆ. ಬರಿಯ ಮನರಂಜನೆಯೊಂದೇ ಮಕ್ಕಳ ಚಿತ್ರಗಳ ಮುಖ್ಯ ಉದ್ದೇಶವಾಗಬಾರದು. ಮಕ್ಕಳ ಚಿತ್ರಗಳಲ್ಲೂ ನಾಯಕ-ನಾಯಕಿ ಡ್ಯುಯೆಟ್ ಹಾಡುವುದು, ಅವರ ಪ್ರೀತಿಗಾಗಿ ಮಕ್ಕಳು ಸೇತುವೆಯಾಗುವುದು ಮೊದಲು ನಿಲ್ಲಬೇಕು.
ಈಗಲೂ ಪ್ರಸ್ತುತವಾಗುವ ಪಂಜೆಯವರ ಹಲವು ಕವಿತೆಗಳನ್ನು ನಮ್ಮ ಮಕ್ಕಳು ಕಲಿತಿಲ್ಲ ಎನ್ನುವುದರ ಅರಿವು ನಮಗಿಲ್ಲದಿರುವುದೂ ನೆನಪಾಗಬೇಕಿದೆ. ಪ್ರಾಥಮಿಕ ಶಿಕ್ಷಣದ ಪಠ್ಯಕ್ರಮ ನಿರೂಪಿಸುವ ಜವಾಬ್ದಾರಿ ಹೊತ್ತ ಹಲವರು ಶಿಕ್ಷಣ ಕ್ಷೇತ್ರಕ್ಕಿಂತಲೂ ರಾಜಕೀಯ ವರಸೆಗಳನ್ನು ಅರಿತವರಾಗಿರುತ್ತಾರೆ ಎನುವುದನ್ನು ಬಿಡಿಸಿ ಹೇಳಬೇಕಿಲ್ಲ. ಕಾರಂತರು ಪ್ರಾಯೋಗಿಕವಾಗಿ ನಡೆಸಿದ್ದ ಬಾಲವನ, ಕೇಂದ್ರ ಸರ್ಕಾರ ರೂಪಿಸಿರುವ ಜವಾಹರ ನೆಹರು ವಿದ್ಯಾಲಯ, ಸರ್ಕಾರೀ ಶಾಲೆಗಳಲ್ಲಿ ಇರುವ ಪಠ್ಯಕ್ರಮ, ಅಲ್ಲಿ ವಿತರಿಸಲಾಗುತ್ತಿರುವ ಪಠ್ಯ ಪರಿಕರಗಳು,ಸಮವಸ್ತ್ರ ಸಂಹಿತೆ, ನಮ್ಮ ಮುಂದೇ ಇರುವ ಅವಕಾಶಗಳಾಗಿವೆ. ಖಾಸಗಿ ಶಾಲೆಗಳು ಬೋಧನೆಗೆ ಬಳಸುತ್ತಿರುವ ಅಪಾಯಕಾರೀ ಕ್ರಮಗಳನ್ನು, ಮಕ್ಕಳ ಮನಸ್ಸಿನ ಮೇಲೆ ಹೆಚ್ಚುತ್ತಿರುವ ಒತ್ತಡಗಳನ್ನೂ ಗಮನಿಸಬೇಕು. ಧಾರ್ಮಿಕ ಸಂಸ್ಥೆಗಳು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾರ್ಥನೆಯ ಹೆಸರಲ್ಲಿ ಎಳೆಯ ಮನಸ್ಸುಗಳ ಮೇಲೆ ಹೇರಲಾಗುತ್ತಿರುವ ಒತ್ತಡಗಳನ್ನು ನಾವು ಅರಿಯಬೇಕಿದೆ.
ಪ್ರಾಥಮಿಕ ಶಿಕ್ಷಣವನ್ನು ಎಲ್ಲ ಶಾಲೆಗಳಲ್ಲೂ ಏಕ ಸೂತ್ರದಡಿಯಲ್ಲಿ ಕೊಡದಿದ್ದರೆ ನಾವೇ ನಮ್ಮ ಮಕ್ಕಳಿಗೆ ಪ್ರಾಥಮಿಕ ಹಂತದಿಂದಲೇ ಸಾಮಾಜಿಕ ವೈರುಧ್ಯವನ್ನು ಕಲಿಸಿಕೊಟ್ಟಂತಾಗುತ್ತದೆ. ಮತ್ತು ಮೆಕಾಲೆಯಿಂದ ಬಳುವಳಿಯಾಗಿ ಬಂದಿರುವ ಗುಮಾಸ್ತೆಗಳನ್ನು ಸೃಷ್ಟಿಸುತ್ತಿರುವ ಶಿಕ್ಷಣ ಕ್ರಮ ಮುಂದುವರಿಕೆಯಾಗಿಯೇ ಉಳಿಯುತ್ತದೆ. ಇದಕ್ಕಿರುವ ಏಕೈಕ ಉಪಾಯವೆಂದರೆ ಪ್ರಾಥಮಿಕ ಶಿಕ್ಷಣವನ್ನು ಮಾತೃ ಭಾಷೆಯಲ್ಲಿ ಕಡ್ಡಾಯ ಮಾಡುವುದು. ಮತ್ತು ಪ್ರಾಥಮಿಕ ಶಿಕ್ಷಣವನ್ನು ಖಾಸಗೀ ಕಬಂಧ ಬಾಹುಗಳಿಂದ ತಪ್ಪಿಸಿ, ಸಾರ್ವಜನಿಕಗೊಳಿಸಿ ಕಡ್ಡಾಯವಾಗಿಸಿ ಅದನ್ನು ಸರ್ಕಾರವೇ ನಿರ್ವಹಿಸುವುದು. ಮಕ್ಕಳಿಗೇನು ಬೇಕೆಂಬುದನ್ನು ಕಪೋಲಕಲ್ಪಿತ ಸಂಗತಿಯನ್ನಾಗಿಸದೇ ವಿಧಿವತ್ತಾದ ಸಂಶೋಧನೆಯಿಂದ ತಿಳಿದುಕೊಳ್ಳಬೇಕಿದೆ. ಆಗ ಮಾತ್ರ ಮಕ್ಕಳ ದಿನಾಚರಣೆಗೆ ಒಂದು ಅರ್ಥ ಬಂದೀತು. ಇಲ್ಲದೇ ಹೋದರೆ ಅದೂ ಸರ್ಕಾರ ನಡೆಸುವ ಇತರ ಉತ್ಸವಗಳ ಹಾಗೇ ನಮ್ಮ ರಾಷ್ಟ್ರೀಯ ಹಬ್ಬಗಳ ಹಾಗೇ ತೋರುಗಾಣಿಕೆಯ ಸಂಕೇತವಾದೀತು, ಅಷ್ಟೆ.
ನವಂಬರ್ ೧೪ರ ಈ ದಿನ ಮಕ್ಕಳ ದಿನಾಚರಣೆ. ಮಹಿಳೆಯರಿಗೆ, ಹೆತ್ತವರಿಗೆ, ಪ್ರೀತಿಯಲ್ಲಿ ಬಿದ್ದವರಿಗೆ, ಪರಿಸರಕ್ಕೆ, ಪಾಠ ಹೇಳುವ ಮಾಸ್ತರರಿಗೆ ಹೀಗೆ ಎಲ್ಲರಿಗೂ ದಿನಾಚರಣೆಗಳನ್ನು ಆಚರಿಸುವ ನಾವು ನಿಜದ ಅರ್ಥದಲ್ಲಿ ಈ ದಿನಾಚರಣೆಗಳಿಗಿರುವ ಮಹತ್ವವನ್ನು ಮರೆತುಬಿಟ್ಟಿದ್ದೇವೆ. ಮಾಧ್ಯಮಗಳಲ್ಲಿ ಬರುವ ವರದಿಗಳು, ಸಂಘ ಸಂಸ್ಥೆಗಳು ನಡೆಸುವ ಸನ್ಮಾನ, ಗೌರವರ್ಪಣೆಗಳಲ್ಲೇ ಬಹುತೇಕ ದಿನಾಚರಣೆಗಳು ಕಳೆದುಹೋಗಿಬಿಡುತ್ತಿವೆ. ಶಾಲಾ ಕಾಲೇಜುಗಳಂತೂ ಭಾಷಣ ಸ್ಪರ್ಧೆಯನ್ನೋ, ಲೇಖನಸ್ಪರ್ಧೆಯನ್ನೋ ನಡೆಸಿ ತಮ್ಮ ಜವಾಬ್ದಾರಿಯನ್ನು ಮುಗಿಸಿಕೊಳ್ಳುತ್ತಿವೆ. ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳಂತೂ ಸಿನಿಮಾ ಹಾಡುಗಳ ಸಿಡಿಗಳಿಗೆ ಕೈಕಾಲಾಡಿಸುವ ವ್ಯರ್ಥ ಉಪಕ್ರಮಗಳಾಗೇ ನಿಲ್ಲುತ್ತಿವೆ.
ಉದಾಹರಣೆಗೆ ಮಕ್ಕಳದಿನಾಚರಣೆಯನ್ನು ನಾವು ನಡೆಸುತ್ತಿರುವ ಕ್ರಮವನ್ನೇ ನೋಡಿ. ಪಂಡಿತ ನೆಹರೂ ತಮ್ಮ ಜನ್ಮದಿನಾಚರಣೆಯನ್ನು ಮಕ್ಕಳ ದಿನವನ್ನಾಗಿ ಆಚರಿಸಲು ಹೇಳಿದ್ದನ್ನೇ ಮತ್ತೆ ಮತ್ತೆ ನೆನೆಯುತ್ತ, ಅವರು ಅಂದೆಂದೋ ಧರಿಸಿದ್ದ ದಿರಿಸನ್ನೋ, ಅವರು ಬರಹಗಾರರಾಗಿದ್ದನ್ನೋ ಅಥವಾ ಅವರು ಜಾರಿಗೆ ತಂದ ಪಂಚಶೀಲ ತತ್ವವನ್ನೋ ಪುನಃ ಪುನಃ ಹೇಳಿ ಅವರು ಕೋಟಿನ ಗುಂಡಿಗೆ ಸಿಕ್ಕಿಸಿಕೊಳ್ಳುತ್ತಿದ್ದ ಗುಲಾಬಿಯನ್ನು ನಾಚಿಸುತ್ತೇವೆ. ನೆಹರೂ ಯಾವಕಾರಣಕ್ಕೆ ಮಕ್ಕಳಿಗೆ ಇಷ್ಟು ಮಹತ್ವ ನೀಡಿದರು? ಅವರೇಕೆ ಎಲ್ಲ ಮಕ್ಕಳಿಗೂ ‘ಚಾಚಾ’ಆಗಿರಲು ಬಯಸಿದ್ದರು ಎಂದು ಬಹುತೇಕರು ಆಲೋಚಿಸುವುದೇ ಇಲ್ಲ.
‘ಪ್ರತಿಯೊಂದು ಮಗುವೂ ಮನುಷ್ಯನೊಬ್ಬನ ತಂದೆ’ ಎನ್ನುವ ಆಂಗ್ಲ ಗಾದೆಯೊಂದಿದೆ. ಬಾಲ್ಯದಲ್ಲಿ ಕಲಿತ ಬುದ್ಧಿ-ಮನಸ್ಸುಗಳೇ ಮುಂದಿನ ದಿನಮಾನಗಳನ್ನು ರೂಪಿಸುವುದರಿಂದ ಎಲ್ಲರ ಬಾಲ್ಯವೂ ಪರಿಶುದ್ಧವಾಗಿರುತ್ತದೆ ಎನ್ನುವ ಮಾತೂ ಇದೆ. ಹಸಿವು, ನೀರಡಿಕೆ, ನಿದ್ದೆಗಳು ಮಾತ್ರ ಮಕ್ಕಳು ದೊಡ್ಡವರನ್ನು ಕಾಡುವಂತೆ ಮಾಡುತ್ತವೆ. ಉಳಿದಂತೆ ಮಕ್ಕಳ ಮನಸ್ಸು ಎಷ್ಟು ನಿರ್ಮಲವಾಗಿರುತ್ತದೆ ಅಂದರೆ ಅದಕ್ಕೆಂದೇ ನಮ್ಮ ಹಿರಿಯರು ಮಕ್ಕಳನ್ನೂ ದೇವರ ಸ್ವರೂಪ ಅಂತ ಕರೆದದ್ದು. ಕೂಡು ಕುಟುಂಬ ವ್ಯವಸ್ಥೆ ಇದ್ದಷ್ಟೂ ದಿನ ಮಕ್ಕಳು ಪಂಕ್ತಿಭೇದವಿಲ್ಲದೇ, ತರತಮಗಳ ಸೋಕಿಲ್ಲದೇ ಉಂಡು ಆಡಿ ನಲಿಯುತ್ತಿದ್ದವು. ಅಜ್ಜನೋ, ಅಜ್ಜಿಯೋ. ದೊಡ್ಡಮ್ಮ, ದೊಡ್ಡಪ್ಪನೋ ನೀತಿ ಕತೆಗಳನ್ನು ಹೇಳುವ ಮೂಲಕ ಒಳಿತು ಕೆಡುಕಗಳ ವ್ಯತ್ಯಾಸವನ್ನು ಮನದಟ್ಟು ಮಾಡಿ ಮಗುವಿನ ಮನಸ್ಸಿನಲ್ಲಿ ನೈತಿಕತೆಯ ಬೀಜನೆಟ್ಟು ಬೆಳಸಿರುತ್ತಿದ್ದರು. ಅವರು ಕಲಿಸುವ ಬಾಯಿಪಾಠ, ಮಗ್ಗಿ, ಶ್ಲೋಕ, ಅಮರಗಳಿಗೆ ಕಾದು ಉಳಿದ ಮಕ್ಕಳೊಂದಿಗೆ ಬೆರೆತು ಆಡಿ ನಲಿದು ಬಾಲ್ಯವೆಂಬ ಬೆಲ್ಲದ ರುಚಿ ನಿರಂತರ ಉಳಿಯುವಂತೆ ಅದನ್ನು ಸವಿಯುತ್ತಿದ್ದವು. ನಮ್ಮ ಜನಪದರು ಸೃಷ್ಟಿಸಿರುವ ಕತೆ ಹಾಡುಗಳಲ್ಲಂತೂ ಮಕ್ಕಳಿಗೆ ಇಷ್ಟವಾಗುವ ಗಿಡ,ಮರ,ಪಶು, ಪಕ್ಷಿಗಳೂ ಮಾತನಾಡಿ ಬದುಕಿನ ಸೂಕ್ಷ್ಮಗಳನ್ನು ಮಗುವಿನ ಮನಸ್ಸಿನೊಳಗಿಳಿಸಿ ಆ ಮಗು ತನ್ನ ಭಾವೀ ಜೀವನ ರೂಪಿಸಿಕೊಳ್ಳುವ ನಿಜದ ಯತ್ನವಾಗಿ ಇರುತ್ತಿತ್ತು. ಊರೊಳಗಿನ ಉತ್ಸವ, ಜಾತ್ರೆ, ಹಬ್ಬಗಳಲ್ಲಿ ಮನೆಯವರೆಲ್ಲ ಭಾಗವಹಿಸುವ ಮೂಲಕ ಮನುಷ್ಯ ಸಂಬಂಧಗಳ ಅನಾವರಣವನ್ನು ತಮಗೆ ಗೊತ್ತಿಲ್ಲದೇ ಮಕ್ಕಳು ಅರಿಯುತ್ತಿದ್ದವು. ಶಾಲೆ ಮುಗಿದ ಮೇಲೆ ದೊಡ್ಡಬಯಲಲ್ಲಿ ಚಿನ್ನಿದಾಂಡು, ಕಬಡ್ಡಿಗಳನ್ನಾಡಿ ಊರ ಹೊರಗಿನ ತೋಪಿನಲ್ಲಿ ಮರಕೋತಿ ಆಟವಾಡಿ, ರಜಾ ದಿನಗಳಲ್ಲಿ ಹಳ್ಳದಲ್ಲಿ ಈಜಿ ದೈಹಿಕ ಸಾಮರ್ಥ್ಯದ ಜೊತೆಜೊತೆಗೇ ತಾರ್ಕಿಕ ಪ್ರಜ್ಞೆಯನ್ನೂ ಹಿಂದಿನ ಕಾಲದ ಮಕ್ಕಳು ಪಡೆಯುತ್ತಿದ್ದರು.
ಮನೆತುಂಬ ಮಕ್ಕಳಿರುವ ಕಾಲ ಈಗ ಬದಲಾಗಿದೆ. ವಿಘಟಿತ ಕುಟುಂಬ ವ್ಯವಸ್ಥೆ ಎಲ್ಲ ಮನೆ ಊರುಗಳಲ್ಲೂ ವಿಸ್ತರಿಸಿ ನಗರೀಕರಣದ ನೆರಳು ಮನೆಗೊಂದೇ ಮಗುವೆಂಬ ಸೂತ್ರವನ್ನು ಪಠಿಸಿ,ಹೆತ್ತವರ ಹಣೆಯಲ್ಲಿ ಮಗುವಿನ ಭವಿಷ್ಯದ ಚಿಂತೆಯ ಗೆರೆಯನ್ನು ಢಾಳಾಗಿಸಿದೆ. ಬಾಲ್ಯದ ಆಟೋಟಗಳಿಗಿಂತಲೂ ಅರಿವಿರದ ಭಾಷೆಯ ರೈಮುಗಳನ್ನು ಮನಸ್ಸಿಗೊಗ್ಗದ ಶೈಲಿಯಲ್ಲಿ ಹಾಡಿಸುತ್ತ, ಕೃತಕತೆಯನ್ನೆ ಸಹಜವೆಂದುಕೊಳ್ಳುವ ಹಾಗೆ ಬೆಳಸುತ್ತ ನೈಸರ್ಗಿಕವಾಗಿ ಬಿಡುಗಡೆಯಾಗಬೇಕಿರುವ ಮುಗ್ಧತೆಯ ಆವರಣಕ್ಕೆ ಕೌಶಲ್ಯದ ಹೆಸರಿನ ಮೇಲಾಟಗಳು ದಾಳಿ ಇಟ್ಟಿವೆ. ಸಹಜವಾದ ಬೇಕು ಬೇಡಗಳಿಗಿಂತಲೂ ಒತ್ತಾಯದ ಹೇರಿಕೆಗಳು ಮಕ್ಕಳ ಮುಗ್ಧತೆಯನ್ನೇ ಆಪೋಷನ ತೆಗೆದುಕೊಂಡಿವೆ. ‘ಇಂದಿನ ಮಕ್ಕಳೇ ನಾಳಿನ ಪ್ರಜೆಗಳು’ ಎಂದು ಹೇಳುತ್ತಲೇ ಆ ಮಕ್ಕಳನ್ನು ಇರುಳು ಕಂಡ ಬಾವಿಗೆ ಹಗಲಲ್ಲಿ ನೂಕುವ ಕಾಯಕ ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ವ್ಯವಸ್ಥಿತವಾಗಿ ನಡೆಯುತ್ತಿದೆ, ಅಷ್ಟೆ.
ಮಕ್ಕಳ ಶಿಕ್ಷಣ, ಅವರ ಹಕ್ಕುಗಳ ಕುರಿತಂತೆ ಇರುವ ನಮ್ಮ ಕಾನೂನುಗಳು, ಕಡ್ಡಾಯ ಶಿಕ್ಷಣದ ಮಹತ್ವ ಇತ್ಯಾದಿ ಬಹುಚರ್ಚಿತ ವಿಷಯಗಳನ್ನು ಬಿಟ್ಟು ಮೇಲ್ನೋಟಕ್ಕೆ ಸಿಗಬಹುದಾದ ಮಕ್ಕಳ ಸಾಹಿತ್ಯ ಮತ್ತು ಮಕ್ಕಳ ಸಿನಿಮಾಗಳನ್ನು ಕುರಿತು ಯೋಚಿಸಹೋದರೆ ಅಲ್ಲೂ ಇದೇ ಕತೆಯೇ! ಕನ್ನಡದಲ್ಲಿ ಮಕ್ಕಳ ಸಾಹಿತ್ಯ ಸಾಕಷ್ಟು ವಿಪುಲವಾಗಿಯೇ ಇದೆ. ಅನ್ಯದೇಶಗಳಿಂದ ಬಂದು ನಮ್ಮ ಮಕ್ಕಳ ಮನಸ್ಸಲ್ಲಿ ಕೂತುಬಿಟ್ಟಿರುವ ಡಾನ್ ಕ್ವಿಕ್ಸೋಟ, ಅಲೀಸ್ ಇನ್ ವಂಡರ್ ಲ್ಯಾಂಡ್, ಸಿಂಡ್ರೆಲ, ಡಿಸ್ನಿ ವರ್ಲ್ಡ್ನ ಟಾಮ್ ಅಂಡ್ ಜೆರ್ರಿ ಮತ್ತಿತರ ಕತೆಗಳು, ಕಾರ್ಟೂನ್ ನೆಟ್ವರ್ಕಿನ ಬಹುತೇಕ ತರ್ಕಾತೀತ ಸಶೇಷ ಧಾರಾವಾಹಿಗಳಿಗಿಂತಲೂ ಸಶಕ್ತವಾದ ಅವಕ್ಕಿಂತಲೂ ಕುತೂಹಲ ಮತ್ತು ನೈತಿಕತೆಯನ್ನು ಇನ್ನಷ್ಟು ವಿವರವಾಗಿ ಬಗೆಯಬಲ್ಲ ಸಾಹಿತ್ಯ ಕೃತಿಗಳು ನಮ್ಮಲ್ಲೇ ಇವೆ. ಆದರೆ ಅವನ್ನು ನಮ್ಮ ಭಾಷೆಗಿರುವ ಮಾರುಕಟ್ಟೆಯ ಮಿತಿಯಲ್ಲಿ ಪುನರ್ ನಿರ್ಮಿಸುವುದು ಸಾಧ್ಯವಿಲ್ಲವಾಗಿದೆ. ಪಂಚತಂತ್ರದ ಕತೆಗಳು, ರಾಮಾಯಣ ಮಹಾಭಾರತದ ಕತೆಗಳನ್ನು ಈಗಾಗಲೇ ವಿದೇಶೀ ಸಂಸ್ಥೆಗಳು ಪುನಃ ರೂಪಿಸುತ್ತಿರುವುದನ್ನೂ ಮರೆಯಬಾರದು. ಆದರೆ ಇದು ಹೇಳುವಷ್ಟು ಅಥವ ಬರೆಯುವಷ್ಟು ಸುಲಭದ್ದಲ್ಲ. ಏಕೆಂದರೆ ಮಕ್ಕಳ ಬಹುಮುಖ ಬೆಳವಣಿಗೆಗೆ ಅಂದರೆ ಅವರ ಮಾನಸಿಕ, ಬೌದ್ಧಿಕ, ಸಾಮಾಜಿಕ ಹಾಗೂ ಭಾಷಾ ಬೆಳವಣಿಗೆಯ ಸಹಕಾರಿಯಾಗಿಯೂ ಇವನ್ನೆಲ್ಲ ನಾವು ಉಪಯೋಗಿಸಿಕೊಳ್ಳಬೇಕು ಎಂಬ ವಾದ ಈ ಹಂತದಲ್ಲೇ ಹುಟ್ಟುತ್ತದೆ. ಮಕ್ಕಳ ಸಹಜ ಕುತೂಹಲವನ್ನು ತಣಿಸುವವೆನ್ನುವ ಏಕೈಕ ಕಾರಣ ಇಲ್ಲಿ ಸಾಕಾಗುವುದಿಲ್ಲ. ಇಂಥ ವಿಷಯಗಳಲ್ಲಿ ಸಂಶೋಧನೆ ಮತ್ತು ಪ್ರಯೋಗಗಳನ್ನು ನಡೆಸದ ಹೊರತೂ ಇವನ್ನೆಲ್ಲ ಬರಿಯ ಚರ್ಚೆಯ ವಸ್ತುವನ್ನಾಗಿಯಷ್ಟೇ ನಾವು ಪರಿಗಣಿಸಬೇಕು.
ಮಕ್ಕಳ ಮನಸ್ಸಿಗೆ ಮುದ ನೀಡುವ ಸಾಹಿತ್ಯ ಹೇಗಿರಬೇಕು? ಅವರು ಯಾವ ರೀತಿಯ ಸಾಹಿತ್ಯ ಇಷ್ಟಪಡುತ್ತಾರೆ? ಅವರ ಬುದ್ಧಿ ಭಾವನೆಗಳ ಬೆಳವಣಿಗೆಗೆ ಇಂಬು ನೀಡಬಲ್ಲ ವಿಷಯ ವಿವೇಚನೆ ನಮ್ಮ ಸಾಹಿತಿಗಳಿಗಿದೆಯೇ? ಸಾಹಿತ್ಯದ ಯಾವ ಪ್ರಕಾರ ಮಕ್ಕಳಿಗೆ ಖುಷಿ ಕೊಡುತ್ತದೆ? ಇತ್ಯಾದಿ ಪ್ರಶ್ನೆಗಳಿಗೆ ಸಮಂಜಸ ಉತ್ತರಗಳು ನಮಗಿನ್ನೂ ದೊರೆತಿಲ್ಲ. ಈ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನವನ್ನೂ ನಾವು ಮಾಡಿಲ್ಲ. ಮುಂದುವರೆದ ದೇಶಗಳಲ್ಲಿ ಜಾರಿಯಲ್ಲಿರುವ ಮಕ್ಕಳ ಕಾನೂನುಗಳನ್ನು, ಅವರ ಹಕ್ಕುಗಳನ್ನೂ ಕೇಳಿ ತಿಳಿದು ಭಯಗೊಂಡಿರುವ ನಾವು ಈ ದೇಶದಲ್ಲಿ ಅಂಥದೊಂದು ಪ್ರಯತ್ನಕ್ಕೆ ಕೈಹಾಕುವ ಎದೆಗಾರಿಕೆ ಇಟ್ಟುಕೊಂಡಿದ್ದೇವೆಯೇ ಎನ್ನುವುದೂ ಇಲ್ಲಿ ಮುಖ್ಯ. ನಮ್ಮಲ್ಲಿ ವಿಪುಲವಾಗಿ ಲಭ್ಯವಿರುವ ನೀತಿ ಬೋಧಕ ಕೃತಿಗಳು ಇಂದಿನ ಮಕ್ಕಳಲ್ಲಿ ನೈತಿಕತೆಯನ್ನು ಉಳಿಸಿ ಬೆಳಸಬಲ್ಲವೇ ಎನ್ನುವುದೂ ಮುಖ್ಯಪ್ರಶ್ನೆ. ವೈಜ್ಞಾನಿಕವಾಗಿ ತುಂಬ ಮುಂದುವರೆದ ಕಾಲದಲ್ಲಿ ಪಾರ್ವತಿಯ ಮೈಯ ಬೆವರಿನಿಂದ ಗಣೇಶ ಹುಟ್ಟಿದ ಅಂತ ಹೇಳಹೋದರೆ ಅವಳೇನು ನಿತ್ಯವೂ ಸ್ನಾನ ಮಾಡುತ್ತಿರಲಿಲ್ಲವಾ ಅನ್ನುವ ಪ್ರಶ್ನೆ ಚಿಣ್ಣರಿಂದ ಹುಟ್ಟುತ್ತದೆ. ರಾಮ ಸೀತೆಯರು ಕಾಡಿಗೆ ಹೋದರು ಅಂದರೆ ಪಿಕ್ನಿಕ್ಗೆ ಹೋದರಾ ಅಂತ ಕೇಳುವ ಮಕ್ಕಳೂ ಇದ್ದಾರೆ. ಬಾಣ ಬಿರುಸುಗಳು, ಗದೆ, ತೋಮರಗಳು, ಗಜಾಶ್ವಗಳು ಅಣುಬಾಂಬಿನ ಕಾಲದಲ್ಲಿ ಓಬಿರಾಯನ ಕಾಲದ ವ್ಯರ್ಥ ಪರಿಕರಗಳಾಗಿ ಕಾಣುತ್ತವೆ. ಇದರ ಜೊತೆಜೊತೆಗೇ ಮಕ್ಕಳ ಸಾಹಸದ ಧಾರಾವಾಹಿಗಳನ್ನು ನೋಡಿ ಅದನ್ನು ಅನುಸರಿಸಲು ಹೋಗಿ ಅಪಾಯ ಎದುರಿಸಿದ ಮಕ್ಕಳೂ ಕಡಿಮೆ ಏನಿಲ್ಲ. ಅಲ್ಲದೇ ಈ ಕಾಲದ ಮಕ್ಕಳು ಓದುವುದಕ್ಕಿಂತಲೂ ನೋಡುವುದನ್ನೇ, ಅನುಸರಿಸುವುದನ್ನೇ ಹೆಚ್ಚು ಇಷ್ಟಪಡುವವರು. ಏಕೆಂದರೆ ಇಂದಿನ ಬಹುತೇಕ ಮಕ್ಕಳು ಕಲಿಯುತ್ತಿರುವುದು ಇಂಗ್ಲಿಷಿನಲ್ಲಿ. ಅವರ ಓದುವ ಸಾಮರ್ಥ್ಯವೇನಾದರೂ ಇದ್ದರೆ ಅದು ಅವರು ಕಲಿಯುತ್ತಿರುವ ಇಂಗ್ಲಿಷಿನಲ್ಲಿ ಮಾತ್ರ. ಮೂರನೆಯ ಭಾಷೆಯನ್ನಾಗಿ ಅವರು ಮಾತೃ ಭಾಷೆ ಕಲಿಯುವುದರಿಂದ ಜೊತೆಗೆ ಇಂಗ್ಲಿಷಿನಲ್ಲಿ ಮಾತನಾಡುವುದು ಬಹುತೇಕ ಶಾಲೆಗಳಲ್ಲಿ ಕಡ್ಡಾಯವೂ ಆಗಿರುವುದರಿಂದ ಈ ಮಕ್ಕಳು ಕನ್ನಡದ ಪತ್ರಿಕೆಗಳಲ್ಲಿ ಪ್ರಕಟವಾಗುವ ಸಾಹಿತ್ಯವನ್ನು ಓದುತ್ತಾರೆನ್ನುವುದು ಬರಿಯ ಊಹೆಯ ಮಾತು.
ಸಂಶೋಧನಾ ಮಾಹಿತಿಯಿಲ್ಲದೇ ಮಕ್ಕಳ ಮನಸ್ಸನ್ನು ಉದ್ದೀಪಿಸಿ ಅವರಿಗೆ ಅಗತ್ಯವಿರುವ ಕಸುವನ್ನು ಕೊಡುತ್ತೇವೆನ್ನುವುದು ಉಢಾಫೆಯೇ ಆಗುತ್ತದೆ. ವಿವಿಧ ಪೇಯಗಳ ಜಾಹೀರಾತುಗಳಲ್ಲಿ ನಟಿಸುವ ಅಮ್ಮಂದಿರಿಗೆ ಮಾತ್ರ ಮಕ್ಕಳ ಅಗತ್ಯ ಗೊತ್ತಿರುವುದು ಈ ಕಾರಣಕ್ಕೇ! ಸೈದ್ಧಾಂತಿಕ ಅಡಿಪಾಯಗಳ ಮನಶಾಸ್ತ್ರೀಯ ಅಧ್ಯಯನ ಮಾತ್ರ ಇಂಥ ಸಮಸ್ಯೆಗಳನ್ನು ನೀಗಬಲ್ಲುದು. ನಾವೀಗ ಬದುಕುತ್ತಿರುವ ಸಮಾಜ, ಸನ್ನಿವೇಶ, ಆರ್ಥಿಕ ಸವಲತ್ತು, ವಿದ್ಯಾಭ್ಯಾಸದ ಮಟ್ಟ, ಅಂಧಶ್ರದ್ಧೆಗಳು, ಜಾತಿಯ ವಿಷಬೀಜಗಳು, ಲಿಂಗ ಭೇದಗಳು, ಮಕ್ಕಳ ಮನಸ್ಸಿಗೆ ನಿಲುಕದ ಹಾಗೆ ಬೆಳಸುತ್ತೇವೆನ್ನುವುದು ಮತ್ತೆ ಉಢಾಫೆಯೇ. ಇನ್ನು ಮಕ್ಕಳ ಆರೋಗ್ಯ ಮತ್ತು ದೈಹಿಕ ಬೆಳವಣಿಗೆಗಳ ಬಗ್ಗೆ ಸಾಕಷ್ಟು ಮಾಹಿತಿ ನಮಗಿದೆ ಎನ್ನುವುದು ಸಮಾಧಾನದ ವಿಚಾರ. ಪೋಲಿಯೋದಂಥ ಪಿಡುಗು, ಸಿಡುಬಿನಂಥ ಮಹಾಮಾರಿಗಳನ್ನು ನಾವು ಎದುರಿಸಿ ಗೆದ್ದಿದ್ದೇವೆ.
ಆದರೆ ಮಕ್ಕಳ ಸಾಹಿತ್ಯವೆನ್ನುವುದು ದೊಡ್ದವರು ಮಕ್ಕಳಿಗೆಂದು ಬರೆದ ಸರಕಾಗೇ ಉಳಿಯುತ್ತಿದೆ. ಮಕ್ಕಳ ಮನಸ್ಸಿಗೆ ಇದು ಖುಷಿಕೊಡುತ್ತದೆ ಎನ್ನುವ ಊಹಾಪೋಹಗಳಲ್ಲೇ ದೊಡ್ಡವರು ಬರೆದೂ ಬರೆದೂ ಪ್ರಕಟಿಸುತ್ತಿದ್ದೇವೆ. ಪ್ರಾಥಮಿಕ ಶಾಲೆಯ ಪಾಠವೊಂದರಲ್ಲಿ ‘ಅವಳು ಕಮಲ ಇವನು ಬಸವ’ ಎಂದು ಲಿಂಗ ತಾರತಮ್ಯವನ್ನು ಮೆರೆಸುವ ನಾವು ‘ಕಮಲಳ ಲಂಗ ಝಳ ಝಳ’ ಎಂದು ಹೇಳಿ ಅವಳನ್ನು ಲಂಗಕ್ಕೇ ಮಿತಿಗೊಳಿಸುತ್ತೇವೆ. ಇನ್ನು ಮಕ್ಕಳಿಗೆಂದೇ ತಯಾರಾಗುವ ಚಲನಚಿತ್ರಗಳು ಮಕ್ಕಳಿಗೇನು ಬೇಕೋ ಅದನ್ನು ಬಿಟ್ಟು ಉಳಿದೆಲ್ಲ ಮಾರುಕಟ್ಟೆಯ ಮಸಾಲೆಗಳನ್ನು ಇಟ್ಟುಕೊಂಡಿರುತ್ತದೆ. ಕೋತಿ, ಹಾವು, ದೈವ ಮಹಿಮೆ ಇಲ್ಲದೇ ನಮ್ಮ ಮಕ್ಕಳ ಚಿತ್ರಗಳು ನಿರ್ಮಾಣವಾಗುವುದಿಲ್ಲ.ಮಕ್ಕಳ ಅಲೋಚನೆಗಳಿಗೆ ಗಗನದಗಲದ ವಿಶ್ವಾಸವನ್ನು ತುಂಬಿ ಅವರ ಮಾನಸಿಕ, ಬೌದ್ಧಿಕ ವಿಸ್ತರಣಕ್ಕೆ ಸಹಕರಿಸಿದ ಚಿತ್ರಗಳು ಬಂದಿರುವುದು ತೀರ ಅಪರೂಪಕ್ಕೆ. ವೈಜ್ಞಾನಿಕವಾಗಿ ತುಂಬ ಮುಂದುವರೆದಿರುವ ಈ ಕಾಲದಲ್ಲಿ ಮೌಢ್ಯ ಮತ್ತು ಅತಿಮಾನುಷ ಶಕ್ತಿಗಳನ್ನು ಕೊಂಡಾಡುವ ಮಕ್ಕಳ ಚಿತ್ರಗಳನ್ನು ಮೊದಲು ನಿಷೇದಿಸಬೇಕಿದೆ. ಬರಿಯ ಮನರಂಜನೆಯೊಂದೇ ಮಕ್ಕಳ ಚಿತ್ರಗಳ ಮುಖ್ಯ ಉದ್ದೇಶವಾಗಬಾರದು. ಮಕ್ಕಳ ಚಿತ್ರಗಳಲ್ಲೂ ನಾಯಕ-ನಾಯಕಿ ಡ್ಯುಯೆಟ್ ಹಾಡುವುದು, ಅವರ ಪ್ರೀತಿಗಾಗಿ ಮಕ್ಕಳು ಸೇತುವೆಯಾಗುವುದು ಮೊದಲು ನಿಲ್ಲಬೇಕು.
ಈಗಲೂ ಪ್ರಸ್ತುತವಾಗುವ ಪಂಜೆಯವರ ಹಲವು ಕವಿತೆಗಳನ್ನು ನಮ್ಮ ಮಕ್ಕಳು ಕಲಿತಿಲ್ಲ ಎನ್ನುವುದರ ಅರಿವು ನಮಗಿಲ್ಲದಿರುವುದೂ ನೆನಪಾಗಬೇಕಿದೆ. ಪ್ರಾಥಮಿಕ ಶಿಕ್ಷಣದ ಪಠ್ಯಕ್ರಮ ನಿರೂಪಿಸುವ ಜವಾಬ್ದಾರಿ ಹೊತ್ತ ಹಲವರು ಶಿಕ್ಷಣ ಕ್ಷೇತ್ರಕ್ಕಿಂತಲೂ ರಾಜಕೀಯ ವರಸೆಗಳನ್ನು ಅರಿತವರಾಗಿರುತ್ತಾರೆ ಎನುವುದನ್ನು ಬಿಡಿಸಿ ಹೇಳಬೇಕಿಲ್ಲ. ಕಾರಂತರು ಪ್ರಾಯೋಗಿಕವಾಗಿ ನಡೆಸಿದ್ದ ಬಾಲವನ, ಕೇಂದ್ರ ಸರ್ಕಾರ ರೂಪಿಸಿರುವ ಜವಾಹರ ನೆಹರು ವಿದ್ಯಾಲಯ, ಸರ್ಕಾರೀ ಶಾಲೆಗಳಲ್ಲಿ ಇರುವ ಪಠ್ಯಕ್ರಮ, ಅಲ್ಲಿ ವಿತರಿಸಲಾಗುತ್ತಿರುವ ಪಠ್ಯ ಪರಿಕರಗಳು,ಸಮವಸ್ತ್ರ ಸಂಹಿತೆ, ನಮ್ಮ ಮುಂದೇ ಇರುವ ಅವಕಾಶಗಳಾಗಿವೆ. ಖಾಸಗಿ ಶಾಲೆಗಳು ಬೋಧನೆಗೆ ಬಳಸುತ್ತಿರುವ ಅಪಾಯಕಾರೀ ಕ್ರಮಗಳನ್ನು, ಮಕ್ಕಳ ಮನಸ್ಸಿನ ಮೇಲೆ ಹೆಚ್ಚುತ್ತಿರುವ ಒತ್ತಡಗಳನ್ನೂ ಗಮನಿಸಬೇಕು. ಧಾರ್ಮಿಕ ಸಂಸ್ಥೆಗಳು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾರ್ಥನೆಯ ಹೆಸರಲ್ಲಿ ಎಳೆಯ ಮನಸ್ಸುಗಳ ಮೇಲೆ ಹೇರಲಾಗುತ್ತಿರುವ ಒತ್ತಡಗಳನ್ನು ನಾವು ಅರಿಯಬೇಕಿದೆ.
ಪ್ರಾಥಮಿಕ ಶಿಕ್ಷಣವನ್ನು ಎಲ್ಲ ಶಾಲೆಗಳಲ್ಲೂ ಏಕ ಸೂತ್ರದಡಿಯಲ್ಲಿ ಕೊಡದಿದ್ದರೆ ನಾವೇ ನಮ್ಮ ಮಕ್ಕಳಿಗೆ ಪ್ರಾಥಮಿಕ ಹಂತದಿಂದಲೇ ಸಾಮಾಜಿಕ ವೈರುಧ್ಯವನ್ನು ಕಲಿಸಿಕೊಟ್ಟಂತಾಗುತ್ತದೆ. ಮತ್ತು ಮೆಕಾಲೆಯಿಂದ ಬಳುವಳಿಯಾಗಿ ಬಂದಿರುವ ಗುಮಾಸ್ತೆಗಳನ್ನು ಸೃಷ್ಟಿಸುತ್ತಿರುವ ಶಿಕ್ಷಣ ಕ್ರಮ ಮುಂದುವರಿಕೆಯಾಗಿಯೇ ಉಳಿಯುತ್ತದೆ. ಇದಕ್ಕಿರುವ ಏಕೈಕ ಉಪಾಯವೆಂದರೆ ಪ್ರಾಥಮಿಕ ಶಿಕ್ಷಣವನ್ನು ಮಾತೃ ಭಾಷೆಯಲ್ಲಿ ಕಡ್ಡಾಯ ಮಾಡುವುದು. ಮತ್ತು ಪ್ರಾಥಮಿಕ ಶಿಕ್ಷಣವನ್ನು ಖಾಸಗೀ ಕಬಂಧ ಬಾಹುಗಳಿಂದ ತಪ್ಪಿಸಿ, ಸಾರ್ವಜನಿಕಗೊಳಿಸಿ ಕಡ್ಡಾಯವಾಗಿಸಿ ಅದನ್ನು ಸರ್ಕಾರವೇ ನಿರ್ವಹಿಸುವುದು. ಮಕ್ಕಳಿಗೇನು ಬೇಕೆಂಬುದನ್ನು ಕಪೋಲಕಲ್ಪಿತ ಸಂಗತಿಯನ್ನಾಗಿಸದೇ ವಿಧಿವತ್ತಾದ ಸಂಶೋಧನೆಯಿಂದ ತಿಳಿದುಕೊಳ್ಳಬೇಕಿದೆ. ಆಗ ಮಾತ್ರ ಮಕ್ಕಳ ದಿನಾಚರಣೆಗೆ ಒಂದು ಅರ್ಥ ಬಂದೀತು. ಇಲ್ಲದೇ ಹೋದರೆ ಅದೂ ಸರ್ಕಾರ ನಡೆಸುವ ಇತರ ಉತ್ಸವಗಳ ಹಾಗೇ ನಮ್ಮ ರಾಷ್ಟ್ರೀಯ ಹಬ್ಬಗಳ ಹಾಗೇ ತೋರುಗಾಣಿಕೆಯ ಸಂಕೇತವಾದೀತು, ಅಷ್ಟೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)